Showing posts with label ಧನ್ಯರಾದರು ಗುರುಗಳನು ಪೂಜಿಸುತ gopalakrishna vittala tandemuddumohana dasa stutih. Show all posts
Showing posts with label ಧನ್ಯರಾದರು ಗುರುಗಳನು ಪೂಜಿಸುತ gopalakrishna vittala tandemuddumohana dasa stutih. Show all posts

Monday 2 August 2021

ಧನ್ಯರಾದರು ಗುರುಗಳನು ಪೂಜಿಸುತ ankita gopalakrishna vittala tandemuddumohana dasa stutih

ಧನ್ಯರಾದರು ಗುರುಗಳನು ಪೂಜಿಸುತ

ಇನ್ನಿವರ ಪಾತಕವು ತೊಲಗಿತು ಜಗದಿ ಪ.


ತಂದೆ ಮುದ್ದುಮೋಹನದಾಸ ರಾಯರನು

ಚಂದದಿಂ ಸತಿಸಹಿತ ಕರೆತಂದು ಮನೆಗೆ

ಮಂದರೋದ್ಧರನ ಪದಸೇವೆ ಇದು ಎಂದರಿತು

ಮಂದಹಾಸದಲಿ ನಸುನಗುತ ಸದ್ಭಕ್ತರು 1

ಮಂಗಳೋದಕದಿಂದ ಮಜ್ಜನವಗೈಸುತಲಿ

ಅಂಗಗಳನೊರೆಸುತಲಿ ನಾಮಗಳನ್ಹಚ್ಚಿ

ರಂಗನಾಥನಿಗರ್ಪಿಸುತ ಪುಷ್ಪಹಾರವನ್ಹಾಕಿ

ಶೃಂಗಾರವನೆಗೈದು ಶ್ರೀ ಗುರುಗಳನ್ನು 2

ಪಚ್ಚೆಕರ್ಪೂರ ಕೇಸರಿಯಿಂದ ಕೂಡಿದ

ಅಚ್ಚ ಗಂಧವನ್ಹಚ್ಚಿ ಅಕ್ಷತೆಯನಿಟ್ಟು

ಮಚ್ಛರೂಪಿಯ ನೆನೆದು ಪಾದಕಮಲವ ತೊಳೆದು

ನಿಚ್ಚಳದ ಭಕ್ತಿಯಲಿ ನಿಜ ಭಕ್ತರೆಲ್ಲ 3

ಸತಿಸಹಿತ ಕುಳ್ಳಿರಿಸಿ ಗುರುಗಳನು ಪೀಠದಲ್ಲಿ

ಅತಿಶಯದಿ ಕುಡಿಬಾಳೆ ಎಲೆಗಳನೆ ಹಾಕಿ

ಮತಿಯಿಂದ ರಂಗೋಲೆಗಳನ್ಹಾಕಿ ಲವಣ ಸ-

ಹಿತದಿಂದ ಘೃತದ ಪರಿಯಂತ ಬಡಿಸುತಲಿ 4

ಅನ್ನಾದಿ ಸಕಲ ಷಡ್ರಸಗಳನೆ ಬಡಿಸುತ್ತ

ಘನ್ನ ಮಹಿಮರಿಗೆ ಭಕ್ಷಾದಿಗಳ ಬಡಿಸಿ

ಸನ್ನುತಿಸುತಲಿ ತೀರ್ಥ ಆಪೋಷನವನ್ಹಾಕಿ

ಪನ್ನಗಶಯನನಿಗೆ ಅರ್ಪಿಸುತ ಮುದದಿ 5

ಘೃತಶರ್ಕರಾದಿಗಳನಡಿಗಡಿಗೆ ಬಡಿಸುತಲಿ

ನುತಿಸಿ ಗಾನಗಳಿಂದ ಗುರುಮಹಿಮೆಯ

ಅತಿಶಯದಿ ದಧಿ ಕ್ಷೀರದನ್ನಗಳನುಣಿಸುತಲಿ

ಘೃತ ಕ್ಷೀರದಿಂದ ಕೈ ತೊಳೆದು ಸಂಭ್ರಮದಿ 6

ಯಾಲಕ್ಕಿ ಕರ್ಪೂರ ಮಿಳಿತ ವೀಳೆಯವನಿತ್ತು

ವೇಳೆವೇಳೆಗೆ ತಪ್ಪು ಕ್ಷಮೆಯ ಬೇಡುತಲಿ

ವ್ಯಾಳಶಯನಗರ್ಪಿಸುತ ಉಡಿಗೆ ತೊಡಿಗೆಗಳನಿತ್ತು

ಮಾಲೆಹಾಕುತ ಆರತಿಯನೆತ್ತಿ ಮುದದಿ 7

ಹರಿಪ್ರೀತನಾಗುವನು ಗುರು ಹೃದಯದಲಿ ನಿಂತು

ಪರಿಹಾರವಾಗುವುದು ಕರ್ಮ ತೊಡಕುಗಳು

ಸರಸಿಜಾಕ್ಷನು ತಾನು ಹರುಷಪಡುವನು ದಯದಿ

ಕರಕರೆಯ ಸಂಸಾರ ಕಡಿದು ಗತಿ ಈವ 8

ಗುರುದ್ವಾರ ಒಲಿಯುವನು ಹರಿಯು ಮೋಕ್ಷಾರ್ಥಿಗಳ

ಅರಘಳಿಗೆಯಗಲದಲೆ ಕಾಯುವನು ಸತತ

ಗುರು ಅಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ

ತ್ವರಿತದಿಂ ಹೃದಯದಲಿ ತೋರ್ವನು ತನ್ನ9

****