Showing posts with label ಶ್ರೀರಾಘವೇಂದ್ರಾ ನಮೋ ಶ್ರೀ ರಾಘವೇಂದ್ರ ಮಧ್ವಾ tandevenkatesha vittala. Show all posts
Showing posts with label ಶ್ರೀರಾಘವೇಂದ್ರಾ ನಮೋ ಶ್ರೀ ರಾಘವೇಂದ್ರ ಮಧ್ವಾ tandevenkatesha vittala. Show all posts

Monday 6 September 2021

ಶ್ರೀರಾಘವೇಂದ್ರಾ ನಮೋ ಶ್ರೀ ರಾಘವೇಂದ್ರ ಮಧ್ವಾ ankita tandevenkatesha vittala

 ankita ತಂದೆವೆಂಕಟೇಶವಿಠಲ

ರಾಗ: ಉದಯ ತಾಳ: ವಾರ್ಧಿಕ ಷಟ್ಪದಿ


ಶ್ರೀ ರಾಘವೇಂದ್ರಾ ನಮೋ


ಶ್ರೀ ರಾಘವೇಂದ್ರ ಮಧ್ವಾಗಮಾಂಬುಧಿಚಂದ್ರ

ಶ್ರೀ ರಾಘವೇಂದ್ರ ಹೃದ್ರೋಗಹರಭಿಷಗೇಂದ್ರ

ಶ್ರೀ ರಾಘವೇಂದ್ರ ಮಂತ್ರಾಗರಾದ್ಭುತಚರಿತ ಯೋಗೀಂದ್ರ ಕುಮುದಚಂದ್ರ ಅ.ಪ


ಆದಿಯಲಿ ಪ್ರಹ್ಲಾದನಾದಶಾಶ್ಯಾವರಜ

ಯೋಧ ಪ್ರತೀಪಭವ ಭೂದೇವ ವ್ಯಾಸಮುನಿ-

ಯಾದಿ ವಿವಿಧತ್ವದಲಿ ಶ್ರೀಧವಾರ್ಚನೆಗೈದು ಮೋದಾಭಿವೃದ್ಧಿಗಾಗಿ

ವೇದವಿದ್ಯಾವಿಭವನಾದ ಬ್ರಹ್ಮೋಪಾಸ-

ನಾದಿ ಸತ್ಕರ್ಮ ಪರವಾದಿನಿಗ್ರಹ ಪೂರ್ಣ-

ಬೋಧಸಮಯ ಸಮಗ್ರ ಸಾಧಿಸಿದ ಸದ್ವೈಷ್ಣವೋದರದಿ ಜನಿಸ ಬಯಸಿ 1

ಕುಂಭಕೋಣದಿ ಶ್ರೋತ್ರಿಯಾಂಬರದಿನೇಶನಹ

ತಿಂಭಟ್ಟನಾತನ ನಿತಂಬಿನಿಯ ಗರ್ಭಾಮೃ-

ತಾಂಬುನಿಧಿಯಲ್ಲಿ ಶಶಿಬಿಂಬದಂತಖಿಳಗುಣಸಂಭಾವಿತನು ವೇಂಕಟ-

ನೆಂಬ ನಾಮದಿ ಜನಿಸಿ ಶಂಭುವೊಲು ವೇದಾಂತ

ಗುಂಭಪ್ರಕರಣಗಳ ಗಂಭೀರಭಾವವನು

ತುಂಬುಸಭೆ ವಿದುಷನಿಕರುಂಬ ಸಲೆಮೆಚ್ಚುವವೊಲಿಂಬಾಗಿ ಅಭ್ಯಸಿಸಿದ 2

ಗುರುಸುಧೀಂದ್ರರ ಪರಮಕರುಣಾಕಟಾಕ್ಷಕ್ಕೆ

ಸರುವವಿಧದಲಿ ಪಾತ್ರತರನಾಗಿ ಮತರಾಜ್ಯ

ಸರಸತೀಪೀಠವಾರುಧಿರ ಫಾಲ್ಗುಣ ಶುದ್ಧವೆರಡನೇದಿನವೇರಿದ

ಮರುತಸಮಯಸುಸಾರವರವಿಹಾಯಸದಲ್ಲಿ

ಸ್ಫುರದಚೌಷಷ್ಠಿಕಲೆಪರಿಪೂರ್ಣಚಂದ್ರಮನ 

ಪರಮಸುಕೃತೋದಯವು ಅರರೆ ನೋಳ್ಪರ ಪುಣ್ಯ ಕರತಲಾಮಲಕಪರವು 3

ಆಸೇತುನೀಹಾರ ವಾಸ ಸ್ಥಳಾಂತವಿಹ

ವಾಸುಕೀಶಯನಮಹಿಮಾಶ್ರಯಸ್ಥಾನವೆಂ-

ಬಾ ಸಮಸ್ತಕ್ಷೇತ್ರವಾಸಿಯಾಗ್ಯೆದುರಾಂತ ಸಾಸಿರಾಧಿಕಾವೈದಿಕ

ಆಸುರೀಪ್ರಕ್ರಿಯೋಪಾಸಕರ ನಿಗ್ರಹಿಸಿ

ಶ್ವಾಸಪತಿಸನ್ಮತೋಪಾಸನೆಯ ಕರುಣಿಸಿ ಪ್ರ-

ಕಾಶಿಸಿದ ಪರಿಮಳಾಚಾರ್ಯ ಮುಕ್ತಾವಳೀ ಭಟ್ಟ ಭಾಷಾರ್ಯನೆನಿಸಿ 4

ಹುಡುಗನಿಗೆ ಅಸುವಿತ್ತು ಹಡೆವಳಿಗೆ ಜಲವಿತ್ತು

ಹಿಡಿಮಾತ್ರಮಣ್ಣಿನಲಿ ಬಡವನಿಗೆ ನಿಧಿ ತೋರಿ

ಕಡು ಗರ್ವಿಯವಘಡಿಸಿ ಕೆಡಕಿನರಪನನೊಲಿಸಿ ಪೊಡವಿಪನ ಮಾನ ಉಳಿಸಿ

ತೊಡವು ಸುಡದಲೆ ತೆಗಿಸಿ ಕೊಡುವುದನು ಸ್ವೀಕರಿಸಿ

ಅಡಿಭಜಿಪರಘ ಹರಿಸಿ ನುಡಿಸತ್ಯವನು ಮೆರೆಸಿ

ದೃಢಭಕ್ತಿಯನು ಬಲಿಸಿ ಕಡುಜ್ಞಾನನಿಧಿಯೆನಿಸಿ ಪೊಡವಿಯಲಿ ರಾಜಿಸಿದನು 5

ಹಿಂದೆ ಕೃತೆಯಲಿ ಕ್ರತುವನೊಂದಿ ಮಾಡಿದ ಕೋಲ-

ನಂದನೆಯ ತೀರದಿಹ ಸುಂದರಮಂತ್ರಾಲಯದಿ

ಸಂದ ಸುವಿರೋಧಿಪರಶ್ರಾವಣ ದ್ವಿತೀಯ ಭೃಗುಜಾಖ್ಯ ಶುಭ ವಾರದಿ

ತಂದೆ ಗುರು ಏನು ಗತಿ ಎಂದೆನುತ ದೈನ್ಯದಲಿ

ಹೊಂದಿ ಸ್ತುತಿಸುವ ಧರಣಿಬೃಂದಾರಕರ ನೃಪರ

ಸಂದೋಹಕಭಯ ನಲವಿಂದೋರಿ ಸಶರೀರ ಬೃಂದಾವನಸ್ಥನಾದ 6

ಶತಸಪ್ತವರ್ಷವಾಹುತರಾಗಿ ಇಪ್ಪರಿ-

ಲ್ಲತಿಶಯಗಳಾಗುವುವು ಗತಿದೋರಿ ಸರ್ವರಿಗೆ

ಪ್ರತಿಥನಾಗುವ ಸತ್ಯವತಿಪುತ್ರ ನರಸಿಂಹ ಕ್ಷಿತಿಜೆಧವ ಶ್ರೀಕೃಷ್ಣರು

ಪ್ರತಿಯಿಲ್ಲದಂತೆ ಸನ್ಹಿತರಾಗಿ ಬಂದವರ

ಮತಿಘರುಷವಿತ್ತಿವರ ವಿತತಯಶ ಮಾಡುವರು

ಚ್ಯುತಿಯಿಲ್ಲ ಪುರುಷಾರ್ಥಪ್ರತತಿಗಾಕರ ಸ್ವರ್ಗಕತಿಶಯವು ಮಂತ್ರಾಲಯ 7

ಸಾಧಕರ ಹೆಧ್ಯೇಯ ಸಾಧುಸಂಕುಲಗೇಯ

ಬೋಧಕರಿಗಮರಗುರು ಪಾದಶ್ರಿತಕಲ್ಪತರು

ವಾದಿಗಳ ಹೃಚ್ಛೂಲ ವೇದಾಂತಕುಲಕಪಿಲ ಮಾಧವಾರಾಧನಪ್ರಶೀಲ

ಖೇದ ಕಲ್ಮಶರಹಿತನಾದ ವಿದ್ಯಾಭರಿತ

ಬಾದರಾಯಣ ಪೂರ್ಣಬೋಧಮತ ವಿಸ್ತರಣ

ಭೋ ದಯಾಂಬುಧೆ ಸಾಧ್ಯಮಾದಪುದೆ 

ಬಣ್ಣಿಸಲಗಾಧವೈಸಲೆ ಮಹಿಮೆಯು 8

ಅರುಣೋದಯದಲೆದ್ದು ಕರಣಶುದ್ಧಿಗಳಿಂದ

ಸ್ಮರಣ ಕೀರ್ತನಪುರಶ್ಚರಣ ಮಾಡಿದರಾಗೆ

ಕರುಣಾಳು ತಂದೆವೆಂಕಟೇಶವಿಠಲ ಸ್ವಾಮಿ ಭರಣಮಾಡುವ ಸೌಖ್ಯದಿ

ಮರಣಭಯ ತಪ್ಪುವುದು ಕರುಣಾಳು ಪ್ರತ್ಯಕ್ಷ

ಕರಣಗೋಚರನಾಗಿ ಸ್ಫುರಣ ಮಾಡುವಜ್ಞಾನ

ತರಣವಾಗುವುದು ವೈತರಣಿವಾಹಿನಿಯಿಂದ ನೆರೆನಂಬಿದವನೆ ಮುಕ್ತ 9

***


ಭಿಷಗೇಂದ್ರ=ಶ್ರೇಷ್ಠ ವೈದ್ಯ; ದಶಾಶ್ಯಾವರಜ=

ರಾವಣನ ತಮ್ಮ ವಿಭೀಷಣ; ಸಮಯ=ಮತ; 

ಶ್ರೋತ್ರಿಯಾಂಬರ=ವೇದಾಧ್ಯಯನ ಮಾಡಿದವರೆಂಬ 

ಆಕಾಶದಲ್ಲಿ; ಶಂಭುವೊಲು=ರುದ್ರನಂತೆ; ಗುಂಭ=ರಹಸ್ಯ; 

ರುಧಿರ=ಅರವತ್ತು ಸಂವತ್ಸರಗಳಲ್ಲೊಂದು; ಚೌಷಷ್ಠಿ 

ಕಲೆ=64 ಕಲೆಗಳು; ಕರತಲಾಮಲಕಪರವು=ಅಂಗೈ 

ನೆಲ್ಲಿಕಾಯಂತೆ; ಎದುರಾಂತ=ಎದುರಾದ; 

ಸಾಸಿರಾಧಿಕಾವೈದಿಕ=ಸಾಸಿರಕ್ಕೂ ಮೀರಿದ ಅವೈದಿಕ; 

ಶ್ವಾಸಪತಿ=ಪ್ರಾಣದೇವರು, ವಾಯುದೇವರು; 

ತೊಡವು=ಆಭರಣ; ಸತ್ಯವತಿಪುತ್ರ=ವೇದವ್ಯಾಸರು; 

ಕ್ಷಿತಿಜೆಧವ=ಭೂಮಿಪುತ್ರಿಯಾದ ಸೀತೆಯ ಪತಿ-ಶ್ರೀರಾಮ; 

ಪ್ರತತಿಗಾಕರ=ಪುರುಷಾರ್ಥ ಸಾಧನೆಗೆ ಸೂಕ್ತವಾದ ಸ್ಥಳ; 

ಹೃಚ್ಛೂಲ=ಹೃದಯಕ್ಕೆ ಶೂಲ; ಪ್ರಶೀಲ=ಉತ್ಕøಷ್ಟ ಶೀಲ; 

ಸಾಧ್ಯಮಾದಪುದೆ=ಸಾಧ್ಯವಾಗುವುದೆ (ಬಣ್ಣಿಸಲು); 

ಭರಣ=ರಕ್ಷಣೆ; ಸ್ಫುರಣ=ಹೊಳಪು; 

ತರಣವಾಗುವುದು=ಪಾರಾಗುವುದು;