Showing posts with label ಕಂದನ್ಯಾಕೆ ಮಲಗನೆ ಕೇಳೆಲೆ ಸಖಿ purandara vittala. Show all posts
Showing posts with label ಕಂದನ್ಯಾಕೆ ಮಲಗನೆ ಕೇಳೆಲೆ ಸಖಿ purandara vittala. Show all posts

Sunday, 23 May 2021

ಕಂದನ್ಯಾಕೆ ಮಲಗನೆ ಕೇಳೆಲೆ ಸಖಿ purandara vittala


ಕಂದನ್ಯಾಕೆ ಮಲಗನೆ - ಕೇಳೆಲೆ ಸಖಿ ।

ಕಾಯಜಜನಕಗೇನಾಯಿತು ಇವಗೆ ಯಾವಳ ದೃಷ್ಟಿ ತಾಗಿತೇ॥...


ಕಂದನ್ಯಾಕೆ ಕಣ್ಣಮುಚ್ಚನೆ 

ಇಂದು ನೀರದಡದಲ್ಲಿರುವನೆ ಏ-

-ನೆಂದರು ಮುಖವೆತ್ತಿ ನೋಡನೆ- ಗೋ-

-ವಿಂದ ಬಾ ಯೆಂದರೆ ಬಾಯ ತೆರವನೆ ॥ 


ತನಯನಾಗಿ ಧರೆ ಆಳಿದನೆ ತನ್ನ 

ಜನನಿಯ ಕಂಡರೆ ಸೇರನೆ 

ಮುನಿಗಳಂತೆ ಮೌನ ಪಿಡಿದನೆ 

ಘನಗೋವು ಕಾಯ್ವಾಗ ಘಾಳಿ ಸೋಕಿತೇನೇ?


ಸುಮ್ಮನ್ಯಾತಕೆ ವ್ರತ ಕೆಡಿಸಿದನೆ 

ಹಮ್ಮಿನಿಂದಲಿ ಖಡ್ಗ ಪಿಡಿದನೆ 

ಜನ್ಮಜನ್ಮಗಳಲ್ಲಿ ಬಿಡದಲಿರುವ ನೀ ಬಾರೋ 

ಬೊಮ್ಮ ಶ್ರೀಪುರಂದರವಿಠಲಾ

***



ಸಂಕ್ಷಿಪ್ತ -

ಯಶೋದಾದೇವಿಯರು ಕೃಷ್ಣನಿಗೆ ದೃಷ್ಟಿ ತಾಕಿದೆಯೇನೋ ಎಂದು ತಿಳಿದು ಬಾಧೆಪಡುವ ಸಂದರ್ಭವನ್ನು ವಿವರಿಸುತ್ತ,  ದಶಾವತಾರದ ಚಿಂತನೆಯನ್ನು ಮಾಡಿದ ಶ್ರೀಮತ್ಪುರಂದರದಾಸಾರ್ಯರ ಅದ್ಭುತವಾದ ಪದವಿದು...

ಕಣ್ಣಮುಚ್ಚನೆ - ಮತ್ಸ್ಯಾವತಾರ

ನೀರದಡದಲ್ಲಿರುವನೆ - ಕೂರ್ಮ

ಮುಖವೆತ್ತಿನೋಡನೆ - ವರಾಹ

ಬಾಯಿತೆರೆದನೆ -ನಾರಸಿಂಹ


ಧರೆ ಆಳಿದನೆ - ತ್ರಿವಿಕ್ರಮನಾದ ಶ್ರೀ ವಾಮನ

ಜನನಿಯ ಕಂಡರೆ ಸೇರನೆ - ಪರಶುರಾಮ

ಮುನಿಗಳಂತೆ ಮೌನ ಪಿಡಿದನೆ - ನಾರುಮಡಿಯನ್ನುಟ್ಟ ಶ್ರೀರಾಮಚಂದ್ರ

ಗೋವುಕಾಯ್ದ - ಶ್ರೀಕೃಷ್ಣಪರಮಾತ್ಮ


ವ್ರತ ಕೆಡಿಸಿದನೆ - ಬುದ್ಧ

ಖಡ್ಗಪಿಡಿದನೆ - ಕಲ್ಕಿ


ಹೀಗೆ ಪರಮಾತ್ಮನನ್ನು ಜಗದೊಡೆಯ ಎಂದು ತಿಳಿದ ಯಶೋದಾದೇವಿಯರು ಕಂದನನ್ನಾಗಿ ಮುದ್ದುಮಾಡಿ ದೃಷ್ಟಿತಾಗಿತೋ ಏನೋ ಎಂದು ಬಾಧೆಪಡುವಂತಿದ್ದು, ಹತ್ತವತಾರದ ಪರಮಾತ್ಮನಿಗೆ ಯಾವ ದೃಷ್ಟಿಯೂ ತಾಗುವುದಿಲ್ಲ, ಜನ್ಮಜನ್ಮಗಳಲ್ಲಿ ಬಿಡದಲಿರುವ ನೀ ಬಾರೋ ಬೊಮ್ಮ - ಎಲ್ಲರ ಬಿಂಬನಾಗಿದ್ದ ಪರಬೊಮ್ಮನಾದ ಶ್ರೀಪುರಂದರವಿಠಲಾಭಿನ್ನ ಶ್ರೀಹರಿಯೇ ಬಿಂಬನಾಗಿ ಹೃದಯಮಂಟಪಕ್ಕೆ ಬಾರೋ ಎಂಬುದನ್ನು ತಿಳಿಸುತ್ತಾರೆ..


ಇಂತಹ ಅಪುರೂಪ ಕೃತಿಗಳನ್ನು ನೋಡಿದಾಗ , ಓದಿದಾಗ, ಹಾಡಿದಾಗ ಮನಸ್ಸು ಕುಣಿಯುತ್ತದಲ್ಲವೆ? ಪರಮಾತ್ಮನ ಎಲ್ಲ ಅವತಾರಗಳೂ ಸಹ ಕಣ್ಮುಂದೆ ಬಂದು ನಿಲ್ಲುತ್ತವೆ ಎಂಬುದರಲ್ಲಿ ಸಂಶಯವೂ ಇಲ್ಲ. 


          ಇಂತಹ ಅದ್ಭುತವಾದ ಸುಖವನ್ನು ಮನಸ್ಸಿಗೆ ನೀಡಿದ ಶ್ರೀಮತ್ಪುರಂದರದಾಸಾರ್ಯರಲ್ಲಿ , ಅವರ ಅಂತರ್ಗತನಾದ ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀ ಭೈಷ್ಮೀಸತ್ಯಾಸಮೇತ ಶ್ರೀಕೃಷ್ಣಪರಮಾತ್ಮನಲ್ಲಿ ಶರಣಾಗುತ್ತಾ....

-smt. padma sirish

ಜೈ ವಿಜಯರಾಯ

ನಾದನೀರಾಜನದಿಂ ದಾಸಸುರಭಿ 🙏🏽

***