Showing posts with label ಪೋದೆಯ ತಾಯಿ ನೀನೀಗ ದಿವ್ಯ ಮಾಧವನಾ ಪುರ ಸೇರಲು ಬೇಗ gopalakrishna vittala. Show all posts
Showing posts with label ಪೋದೆಯ ತಾಯಿ ನೀನೀಗ ದಿವ್ಯ ಮಾಧವನಾ ಪುರ ಸೇರಲು ಬೇಗ gopalakrishna vittala. Show all posts

Monday 2 August 2021

ಪೋದೆಯ ತಾಯಿ ನೀನೀಗ ದಿವ್ಯ ಮಾಧವನಾ ಪುರ ಸೇರಲು ಬೇಗ ankita gopalakrishna vittala

 ಸೀತಾಪತಿವಿಠಲ ದಾಸಳ ನಿರ್ಯಾಣ ಪದ


ಪೋದೆಯ ತಾಯಿ ನೀನೀಗ ದಿವ್ಯ

ಮಾಧವನಾ ಪುರ ಸೇರಲು ಬೇಗ ಪ.


ಪುಟ್ಟಿದಾರಭ್ಯದಿ ನಿಷ್ಟೆನೇಮದೊಳಿದ್ದು

ಕಷ್ಟಪರಂಪರೆ ಸಹಿಸುತ ಜಗದಿ

ಹರಿಯ ಕರುಣದಿ ಗುರುಕೃಪೆ ಪಡೆದಿ 1

ಹಿರಿಯೂರೆನ್ನುವ ಪುರ ವರ ವೇದಾವತಿ ತೀರ

ಪರಮ ಸಾತ್ವಿಕರಲ್ಲಿ ಜನುಮ ತಳೆದಿ

ತುಳಸಿಯ ವರದಿ ಮುದ್ದಿನಿಂ ಬೆಳೆದಿ 2

ಶಿಷ್ಟ ಸಂಪ್ರದಾಯ ಕಟ್ಟಿನೊಳಗೆ ನಿನ

ಗಷ್ಟಮ ವರುಷದಿ ಮದುವೆಯ ಮಾಡಿ

ಹರುಷವಗೂಡಿ ಹರಿಯ ಕೊಂಡಾಡಿ3

ಪತಿ ಕೃಷ್ಣರಾಯರು ಸತಿ ರುಕ್ಮಿಣೀಬಾಯಿ

ಹೆಸರಿನಿಂ ಬಾಳ್ವೆಯ ಬಹು ಅಲ್ಪಕಾಲ

ಕೊಟ್ಟನೆ ಸಿರಿಲೋಲ ಮುಸುಕಿತು ಮಾಯಜಾಲ 4

ಸಂಸಾರ ಕೈಕೊಂಡು ವಂಶಕೊಬ್ಬನ ಪಡೆದು

ಕಂಸಾರಿ ಕರುಣದಿ ಇರುತಿರೆ ನೀನು

ಪತಿವಿಯೋಗವನು ವಿಧಿ ತಂದೊಡ್ಡಿದನು 5

ಎರಡು ವರ್ಷದ ಮಗುವ ಕರದಲ್ಲಿ ಕೈಕೊಂಡು

ಪರಿಪರಿ ಕಷ್ಟದಿ ಶಿಶುವ ಬೆಳೆಸಿದೆ

ವಿದ್ಯೆ ಕಲಿಸಿದೆ ಪುತ್ರಗ್ಹರಸಿದೆ 6

ಒಬ್ಬ ಆ ಮಗನರ್ಥಿ ಸಂಸಾರವನೆ ಕಂಡು

ಉಬ್ಬಿ ಹರುಷಾದಲ್ಲಿ ಇರುತಿರೆ ನೀನು

ಮೊಮ್ಮಕ್ಕಳನು ಪಡೆದೆ ನಾಲ್ವರನು 7

ಪಟುತರ ಪ್ರಾಣೇಶ ಘಟಿಕಾಚಲಾವಾಸ

ಘಟಿಸುತ ಸ್ವಪ್ನದಿ ಸೇವೆಗೈಯ್ಯೆಂದು

ಅಭಯವನಂದು ಕೊಡಲು ದಯಸಿಂಧು 8

ಮರುದಿನ ಮನೆಯಲ್ಲೆ ಭರದಿ ಸೇವೆಯ ಕೊಂಡು

ಹರಿವಾಯುಗಳನಿಟ್ಟು ಸುತ್ತುವರಿಯುತ್ತ

ಎಡವಿ ಬೀಳುತ್ತ ಪ್ರದಕ್ಷಿಣೆ ಬರುತಾ 9

ಒಲಿದು ಆ ಭಕ್ತಿಗೆ ವರನೇತ್ರವಿತ್ತನು

ನಳಿನನಾಭನ ಭಕ್ತ ಘಟಿಕಾಚಲನಿಲಯ

ಭಾರತಿಪ್ರೀಯ ದಿವಿಜರ ಒಡೆಯ 10

ಭಕ್ತಿ ವಿರಕ್ತಿ e್ಞÁನವು ಚಿತ್ತದಿ ಮೂಡಿ

ಸೋತ್ತಮರಾದ ಶ್ರೀ ವಿಬುಧರ ದಯದಿ

ಮೋಕ್ಷಸಾಧನದಿ ದಿನಗಳ ಕಳೆದಿ 11

ಶ್ರವಣ ಕೀರ್ತನ ಸ್ಮರಣೆ ಮನನಾದಿಗಳನೆಲ್ಲ

ತವಕದಿ ಕೈಕೊಂಡು ಮೋದದಿ ಮೆರೆದಿ

ಕಷ್ಟವ ಮೆರೆದಿ ಹರಿಗುರು ದಯದಿ 12

ಪ್ರಥಮ ಯಾಮದಲೆದ್ದು ಜಿತಮನದಿಂದ ಶ್ರೀ

ಪತಿಯ ಸ್ತೋತ್ರಗಳನ್ನು ವದನದಿ ಸತತ

ಪಾಡಿ ಪೊಗಳುತ್ತ ರಾತ್ರಿ ಪರಿಯಂತ 13

ಉಚ್ಛಸ್ವರದಿ ನೀನು ಪಾಡಿದ್ಹಾಡುಗಳಿಂದು

ಅಚ್ಚಳಿಯದೆ ನಮ್ಮ ಸ್ಮರಣೆಯೊಳ್ನಿಂತು

ಹರುಷವನಾಂತು ಮರೆಯುವುದೆಂತು 14

ವೃದ್ಧಾಪ್ಯ ತಲೆದೋರೆ ಇದ್ದೊಬ್ಬ ಪುತ್ರನು

ಪದ್ಮನಾಭನ ಪುರ ಸೇರಿ ನಿನ್ನಗಲಿ

ದುಃಖದಿ ಬಳಲಿ ತೊಳಲಿದೆ ಬಳಲಿ 15

ಪೌತ್ರರಿಬ್ಬರು ನಿನ್ನ ಹೆತ್ತಮ್ಮನಂದದಿ

ಚಿತ್ತದಿ ತಿಳಿದಿನ್ನು ಸಲಹುತ್ತಿರಲು

ಹರಿದಯ ಬರಲು ದುಃಖ ಮರೆಯಲು 16

ಕಲ್ಯಾಣನಗರದಿ ಕಿರಿಯ ಮೊಮ್ಮಗನಿರೆ

ಆಹ್ಲಾದದಿಂದ ನೀನವನಲ್ಲಿ ಇರಲು

ಸದ್ಗುರು ಬರಲು e್ಞÁನವೆರೆಯಲು 17

ಹರಿದಾಸಕೂಟದ ವರ ಅಂಕಿತವ ಕೊಂಡು

ಗುರುಕರುಣವ ಪೊಂದಿ ನೀ ನಮಗೆಲ್ಲ

ಸನ್ಮಾರ್ಗಕ್ಕೆಲ್ಲ ಮೊದಲಾದೆಯಲ್ಲ 18

ಶ್ರೀ ತಂದೆ ಮುದ್ದುಮೋಹನದಾಸರ ದಯದಿ

ಸೀತಾಪತಿವಿಠ್ಠಲನ್ನ ಒಲಿಸಿದೆ

ಧ್ಯಾನದೋಳ್ತಂದೆ ಆನಂದಪಡೆದೆ 19

ಕಂಚಿ ಕಾಳಹಸ್ತಿ ಶ್ರೀ ರಂಗಯಾತ್ರೆಯ

ಸಂಚಿಂತನೇಯಿಂದ ಗೈದೆಯೆ ನೀನು

ಗಳಿಸಿದೆ ಇನ್ನು ಭಕುತಿಯ ಪೊನ್ನು 20

ಉಡುಪಿ ಮಂತ್ರಾಲಯ ಸೇತು ರಾಮೇಶ್ವರ

ಕಡು ಭಕ್ತಿಯಲಿ ತಿರುಪತಿ ಕ್ಷೇತ್ರ ಚರಿಸಿ

ಕಷ್ಟವ ಸಹಿಸಿ ಶ್ರೀ ಹರಿಗೆ ಅರ್ಪಿಸಿ 21

ಕಡುಕೃಪೆಯಿಂದಂದು ಕಣ್ಣನ್ನೆ ಕೊಟ್ಟಂತ

ಮೃಡಪಿತ ಘಟಿಕಾಚಲೇಶನ್ನ ಕೂಡಿ

ಕಣ್ತುಂಬ ನೋಡಿ ತನುವನೀಡಾಡಿ22

ಅಂತರಂಗದ ಬಿಂಬ ಸರ್ವಾಂತರ್ಯಾಮಿ ಎಂ

ತೆಂಬಂಥ ಚಿಂತನೆ ಸಂತತಗೈದೆ

ಅಭಿಮಾನ ತೊರೆದೆ ದ್ವಂದ್ವ ಸಹಿಸಿದೆ 23

ವ್ರತನೇಮ ಜಪತಪ ಸತತದಿಗೈಯ್ಯುತ್ತ

ಕ್ಷಿತಿವಾರ್ತೆಗೆಳಸಾದೆ ಮನವನ್ನೆ ಸೆಳೆದು

ಹರಿಪಾದಕ್ಕೆರದು ಹಿತವನ್ನೆ ಮರೆದು 24

ಭಾಗವತಾದಿ ಸಚ್ಛಾಶ್ತ್ರ ಶ್ರವಣಗೈದು

ಜಾಗ್ರತಳಾದಿ ಭೂಸುರರ ಸೇವೆಯಲಿ

ಸೂಕ್ಷ್ಮಧರ್ಮದಲಿ ಪುಣ್ಯಗಳಿಸುತಲಿ 25

ಸತತಬಿಂಬಕ್ರಿಯ ವ್ರತವಂದೆ ಕೈಕೊಂಡು

ಜತನದಿ ಮರೆಯದೆ ಪ್ರತಿಕಾರ್ಯದಲ್ಲಿ

ಅರ್ಪಿಸಿ ಹರಿಯಲ್ಲಿ ಇದ್ದೆ ಮೋದದಲಿ 26

ಮುಖ್ಯಪ್ರಾಣನ ದಯ ಮುಖ್ಯಮಾಡುತ ಇನ್ನು

ಅಕ್ಕರೆ ಭಕ್ತಿಯ ತೋರಿದೆ ನೀನು

ಬೆನ್ನು ಬಿಡದವನು ನಿನ್ನ ಸಲಹಿದನು 27

ಭಾರತಿಪತಿ ಮುಖ್ಯಪ್ರಾಣಾಂತರ್ಗತನೆಂಬ

ವಾರುತಿ ಇಲ್ಲದ ವಚನವೆ ಇಲ್ಲಾ

ನಿನ್ನ ಈ ಸೊಲ್ಲ ಮರೆಯಲೊಶವಲ್ಲ 28

ಶ್ರೀ ರಾಮಚಂದ್ರನ ಆರಾಧನೆಯಗೈದು

ಸಾರತತ್ವವ ತಿಳಿದು ಸಾಧಿಸಿ ಪಥವ

ಸಹಸ್ರಾರು ಜಪವ ಗೈದೆ ತಪವ 29

ನೀ ಹಾಡಿದ ಸ್ತೋತ್ರ ನಿನ್ನ ಸನ್ಮಾರ್ಗವ

ನನ್ನೆಯಿಂದಲಿ ಎರೆದೆ ಹೆಣ್ಣು ಮಕ್ಕಳಿಗೆ

ಸ್ಮರಿಸುವರೀಗೆ ಸತ್ಕೀರ್ತಿಯದಾಗೆ 30

ಹರಿ ಗುರು ವರತತ್ವ ದಿವಿಜರಭಿಮಾನಿಗಳ

ನಿರುತದಿ ಚಿಂತಿಸಿ ಸಾಧನಗೈದೆ

ಕಾಲವ ಕಳೆದೆ ಹರಿಪಾದಕ್ಕೆರೆದೆÀ 31

ಬಿಂಬಾನು ಸಂಧಾನ ಚತುರಳಾಗಿ ನೀನು

ಸಂಭ್ರಮದಿಂದ ಶ್ರೀ ಮಧ್ವಶಾಸ್ತ್ರದಲಿ

ಮನಸ ನೀಡುತಲಿ ಸುಖ ಸುರಿಯಲಿ 32

ಒದ್ದು ತಾಪತ್ರಯ ಸದ್ಗುರು ಕೃಪೆ ಪೊಂದಿ

ಗೆದ್ದೆ ನೀ ಸುಲಭದಿ ಭವದ ಬಂಧನವ ಪಡೆದೆ

ಹರಿ ದಯವ ಕೊಟ್ಟಿತೆ ಮುದವ 33

ಪೇಳಲೋಶವೆ ಹೇ ದಯಾಳು ನಿನ್ನಯ ಗುಣ

ಬಾಳಿದೆ ಧರೆಯೊಳು ತೊಂಬತ್ತೈದೊರುಷ

ವೃದ್ಧಾಪ್ಯದೋಷ ನಿನಗಿಲ್ಲ ಲೇಶ 34

ಇಂದ್ರಿಯಂಗಳು ಎಲ್ಲ ಒಂದು ಕುಗ್ಗದೆ ಒಬ್ಬ

ರಿಂದಲು ಸೇವೆಯ ಕೊಳದೆ ಲವಲವಿಕೆ

ಯಿಂದಿರುವ ಬಯಕೆ ಸಲಿಸೀತೆ ಮನಕೆ 35

ಕಿರಿಯ ಮೊಮ್ಮೊಗ ರಮಾಕಾಂತನಲ್ಲಿರುತಿರೆ

ಕರೆಹೇಳಿ ಕಳುಹಿದ ಹರಿ ತನ್ನ ಪುರಕೆ

ಕ್ಲಿಪ್ತಕಾಲಕ್ಕೆ ಆಗೆ ಮನವರಿಕೆ 36

ತೊರೆದೈದು ದಿನ ಅನ್ನ ಹರಿಧ್ಯಾನಂಗತಳಾಗಿ

ವರ ಗಂಗೆ ವದನದಿ ಪ್ರಾಶನಗೈದು

ಅಭಿಮಾನ ತೊರೆದು ಭ್ರಾಂತಿಯ ಮೆರೆದು 37

ವರಹಜೆ ತುಂಗ ತೀರದಿ ಪ್ರಾಣನಾಥನ

ಚರಣಮೂಲದಿ ಶಿವಮೊಗ್ಗ ಕ್ಷೇತ್ರದಲಿ

ಹರಿಸ್ಮರಣೆಯಲಿ ಪ್ರಾಣ ಸಲಿಸುತಲಿ 38

ಸ್ವಭಾನುವತ್ಸರ ಭಾದ್ರಪದ ಬಹುಳ

ಇದ್ದ ದಶಮಿ ದಿನ ಗುರುವಾರದಲ್ಲಿ

ಮಧ್ಯರಾತ್ರಿಯಲಿ ತನು ತೊರೆದಿಲ್ಲಿ 39

ಕೇಶವದೂತರು ಮೀಸಲಿಂದಲಿ ನಿನ್ನ

ಘಾಸಿಗೊಳಿಸದೆ ಕರೆದೊಯ್ದರೇನಮ್ಮ

ಪೇಳೆ ಎನ್ನಮ್ಮ ಎಲ್ಲಿ ಪೋದ್ಯಮ್ಮ 40

ಹೆತ್ತಮ್ಮಗಿಂತಲೂ ಹೆಚ್ಚಾಗಿ ನಮ್ಮನ್ನು

ಅರ್ಥಿಯಿಂ ಬೆಳೆಸಿದೆ ಅಭಿಮಾನದಿಂದ

ಅನುರಾಗದಿಂದ ಬಹುಮಾನದಿಂದ 41

ಮೊಮಕ್ಕಳೆಂದರೆ ಬಹು ಪ್ರೀತಿ ನಿನಗಲ್ಲೆ

ಒಮ್ಮೆ ನಾಲ್ವರು ಬಂದು ಇರುವೆವು ನಾವು

ಆಲ್ಪರಿಯುವೆವು ಅಗಲಿ ಸೈರಿಸೆವು 42

ಅರ್ಥಿಲಿ ರಮಾಕಾಂತ ವಿಠಲಾಂಕಿತ ಕೃಷ್ಣ

ಮೂರ್ತಿಯು ಪುತ್ರಗಿಂತಧಿಕದಿ ನಿನ್ನ

ಅಂತ್ಯಕ್ರಿಯವನ್ನ ಮಾಡಿದ ಧನ್ಯ 43

ಶ್ರದ್ಧೆಯಿಂದಗ್ರಜನಿಂದ ಕೂಡುತ ನಿನ್ನ

ಶುದ್ಧಭಾವದಿಗೈದ ಅಂತ್ಯಸೇವೆಯನು

ಸ್ವೀಕರಿಸಿ ನೀನು ಹರಸಿ ಹಿತವನ್ನು 44

ತಿಳಿದು ತಿಳಿಯದೆ ನಾನು ಗೈದಪರಾಧವ

ನಲವಿಂದ ಕ್ಷಮಿಸಿ ನಮ್ಮನು ಮನ್ನಿಸಿದೆ

ಸಹನವ ತಳದೆ ಬಹು ಪ್ರೀತಿಗೈದೆ 45

ಎಲ್ಲ ಪರಿಯಲಿ ನಮ್ಮ ಕ್ಷಮಿಸಿ ಕಾಪಾಡಮ್ಮ

ಬಲ್ಲಿದಳು ನೀನು ಆಶೀರ್ವದಿಸುವುದು

ಸುಖವ ತೋರುವುದು ಕೃಪೆಯ ಮಾಡುವುದು 46

ಅಂಜನೆಕಂದ ನಿನ್ನವನೆಂಬ ಅಭಿಮಾನ

ರಂಜಿಸೆ ಸಹಜದಿ ನಿನ್ನೊಳು ಮಾತೆ

ಜಗದಿ ವಿಖ್ಯಾತೆ ಹರಿಗತಿಪ್ರೀತೆ 47

ಪತಿಗುರು ಪವನ ಹೃದ್ಗತಮೂರ್ತಿ ಚಿಂತನ

ರತಳೆ ನಿನ್ನಯ ಚರಿತೆ ಪೇಳ್ದೆ ತಿಳಿದನಿತು

ತಪ್ಪನು ಮರೆತು ಲಾಲಿಸು ಮಾತು 48

ಗೋಪಾಲಕೃಷ್ಣವಿಠಲನ ಸದ್ಭಕ್ತಳೆ

ಶ್ರೀ ಪಾದಕ್ಕೆರಗಿ ನಾ ಜಯವ ಪಾಡುವೆನು

ಧನ್ಯಳೇ ನೀನು ಮಾನ್ಯಳೆ ನೀನು 49

****