Showing posts with label ಕರುಣಿಸುವದು ನೀನು venugopala vittala ankita suladi ಪ್ರಾರ್ಥನಾ ಸುಳಾದಿ KARUNISUVADU NEENU PRARTHANA SULADI. Show all posts
Showing posts with label ಕರುಣಿಸುವದು ನೀನು venugopala vittala ankita suladi ಪ್ರಾರ್ಥನಾ ಸುಳಾದಿ KARUNISUVADU NEENU PRARTHANA SULADI. Show all posts

Tuesday 22 December 2020

ಕರುಣಿಸುವದು ನೀನು venugopala vittala ankita suladi ಪ್ರಾರ್ಥನಾ ಸುಳಾದಿ KARUNISUVADU NEENU PRARTHANA SULADI


Audio by Vidwan Sumukh Moudgalya

ಶ್ರೀ ವೇಣುಗೋಪಾಲದಾಸಾರ್ಯ ವಿರಚಿತ  ಪ್ರಾರ್ಥನಾ ಸುಳಾದಿ 

(ಭಕ್ತ ರಕ್ಷಕನಾದ ಹರಿಯೇ ಸದಾ ನಿನ್ನ ಪರವಾಗಿ ಸಕಲೇಂದ್ರಿಯ ವ್ಯಾಪಾರ ಮಾಡಿ ರಕ್ಷಿಸು ಎಂದು ದಾಸರು ಪ್ರಾರ್ಥನೆ ಮಾಡಿದ್ದಾರೆ)


 ರಾಗ : ಪೂರ್ವಿಕಲ್ಯಾಣಿ 


 ಧ್ರುವತಾಳ 


ಕರುಣಿಸುವದು ನೀನು ಶರಣರ ಪರಿಪಾಲಾ

ಪರಣ ಶಯನ ಜಗದಾವರಣ ವ್ಯಾಪುತ ದೇವಾ

ತರುಣಿ ಲಕುಮಿ ಸಹಿತಾ ಭರಣ ಸಕಲವಿಟ್ಟು

ನಿರ್ವಾಣದಲ್ಲಿ ಪೂಜೆ ನಿರುತ ಕೈಕೊಂಬ ಚಲುವ

ಸ್ಮರಣೆ ಮಾಡಲು ವೇಗ ವರಣ ವರಣದ ವಸನ

ತರುಣಿ ದ್ರೌಪದಿಗಿತ್ತು ತುತಿಸಿಕೊಂಡೆ ಅಯ್ಯಾ

ಮರಣ ಭಯಕೆ ನಿನ್ನ ಮನದಿಂದ ಕೊಂಡಾಡಲು

ಗರುಡನ್ನೇರದೆ ಬಂದು ಕರಿಯನ್ನುದ್ಧರಿಸಿದೆ

ತರುಣಾವಸ್ತಿಯಲಿ ಧ್ರುವನು ನೆನಿಯೆ ಗಲ್ಲಕೆ ಕಂಬು-

ಸ್ಫುರಣ ಬುದ್ಧಿಗೋಸುಗ ವತ್ತಿ ಪೊಗಳಿಸಿಕೊಂಡೆ

ವರಣಿಸಬಲ್ಲರಾರು ಸಿರಿ ಅರಸನೆ ನಿನ್ನ

ಹರಣದೊಳಗೆ ಒಲಿದು ಪೊಳೆಯೊ ನಿನ್ನಿಂದ ನೀನೆ

ಧರುಣಿಯೊಳಗೆ ನಿನಗೆ ಸರಿಯು ಮತ್ತುಂಟೆ ದೇವಾ

ಹರುಣಾಕ್ಷಿಯರ ನಾಳೆ ಬ್ರಹ್ಮಚಾರಿ ಎಂದೆನಿಪೆ

ವರುಣ ಲೋಕಕೆ ಪೋಗಿ ತಂದೆಯ ಬಿಡಿಸಿ ತಂದೆ

ಅರುಣೋದಯದಲ್ಲಿ ಪಾರಣೆ ಮಾಡಿಸಿ ಕಾಯದೆ

ಪೂರಣ ಆನಂದನಾಗಿ ಪೊರದೆ ಭಕ್ತರ-

ಚರಣೆ ಮಾಡಲು ಎನಗೆ ಸ್ಥಿರವಾದ ಮತಿಯನೀಯೊ

ವರುಣ ಶಬ್ದ ವಾಚ್ಯನೆ ವೇಣುಗೋಪಾಲರೇಯಾ 

ಸರಿ ಬಂದ ಪರಿಯ ಮಾಡಿ ಭವ ದಾಟಿಸೋ ಎನ್ನ ll1ll


 ಮಟ್ಟತಾಳ 


ಸಕಲ ದೇವೋತ್ತಮನೆ ಸಕಲರ ಕಾಮಾನೆ

ಸಕಲ ಜಗದಿ ಭರಿತ ಸಕಲ ಗುಣಪೂರ್ಣ

ಸಕಲರಿಗೆ ಸೌಖ್ಯ ಖತಿಗಳ ಕೊಡುವ

ಪತಿದೈವನು ನೀನು ಸಕಲ ಕಾಲಗಳಲ್ಲಿ

ಸಕಲ ಬ್ರಹ್ಮಾದಿಗಳು ಸಾಕಲ್ಯದಿ ನಿನ್ನ

ಕೃತಿಗಳು ಬಲ್ಲರೆ ಅದ್ಭುತ ಚರಿತಾ

ಸಕಲ ಭಕ್ತರಂತೆ ಬೇಡೆನೊ ನಾ ನಿನ್ನ

ಪ್ರಕಟವಾಗಿ ವೇಣುಗೋಪಾಲರೇಯಾ 

ಸಕಲವು ಚಿತ ದುರಿತ ನಿಕರವ ಪರಿಹರಿಸಿ

ಹಕಲಗೊಳಿಸದೆನ್ನ ಸಕಲ ಭಕುತನೆನಿಸೊ ll2ll


 ರೂಪಕತಾಳ 


ನಿರುತ ಸಜ್ಜನ ಸೇವೆ ಭರಿತವಾಗಲಿ ದೇಹ

ತ್ವರಿತ ಬೀಳುವ ವಿಷಯ ಮರಿಸಿ ಬಿಡುವದು ಹರಿಯೆ

ಶರಧಿ ತೆರೆಯಂದದಿ ಬರುವ ಕ್ಲೇಶಕೆ ಜ-

ರ್ಝರಿತವಾಗಿ ಎನ್ನ ತನುವು ನಡಗುತಿದೆ

ನರಹರಿ ನರಕಾರಿ ಪುರಹರಾದಿ ಪಾಲಾ

ಮುರಹರ ಮುಕ್ಕುಂದ ತರಿವದು ದುರ್ವಿಷಯ

ಹಿರಿದಾಗಿ ಅಜಮಿಳನು ಕರದ ಮಾತುರದಿಂದು-

ದ್ಧರಿಸಿದೆ ವೇಗದಿ ಪರಮ ಕರುಣಿಯೋ ನೀನು

ಹರಲಾಪೆ ಜಗದೊಳು ಇರುವೆ ವ್ಯಾಪುತನಾಗಿ

ಅರವಿಂದಾಲಯಳಾದ ಲಕುಮಿ ಸಹಿತ

ಸರುವರ ಸರಿ ನಾನು ಅಲ್ಲವೊ ಅವರ ದಾ-

ಸರ ದಾಸ ಅವರ ಪಾದದ ಸೇವಿಯಲ್ಲಿರಿಸೊ

ಸರಿಯಲೀಸದೆ ಮನವ ಸರಳು ಮಾಡೆಲೊ ದೇವ

ದೊರೆಯಲ್ಲವೆ ನೀನು ಪರಮ ಮುಖ್ಯದಿಂದ

ಶರಣರಾದಿಗಳ ಪಾಲಾ ವೇಣುಗೋಪಾಲ ನೀ

ಮರಿಯದೆನ್ನನು ಭಕ್ತ ಪುರದೊಳಿಟ್ಟು ಪೊರೆಯೊ ll3ll


 ಝಂಪಿತಾಳ 


ಸತತ ಸಂಸಾರದೊಳಗಾಸಕ್ತನಾಗಿದ್ದು

ಪಥಿಸಿ ಧರೆಯನು ಗುರಿ ನಿನ್ನ ಮಾಡಿ

ಇತರ ಶಬ್ದಗಳಲ್ಲಿ ರತನಾಗಿದ್ದರೆ ಸರಿ

ಪ್ರತಿನಾಮ ನಿನ್ನವೊ ಎನ್ನುತಾ

ಮತಿಹೀನರಲ್ಲಿ ಅಮಿತವಾದ ಮಾತು ಅನು -

ಮತವಾದವರ ಪ್ರೀತಿ ಬಡಿಸಿ

ವ್ರತ ಭ್ರಷ್ಟನಿವನೆಂದು ತೋರಿ ದುರುಳರಿಗೊಂದು

ಪ್ರತಿವಾಕ್ಯ ನುಡಿಯದಲೆ ಸುಮ್ಮನಿದ್ದು

ತುತಿಯ ಬೈಗಳು ಎರಡು ಸಮವೆಂದರಿಯಲವಗೆ

ಶೃತುವ್ಯಾಕೊ ಮಾಡೆಲೊ ಮತ್ತೆ ಅವನು

ರತಿಪತಿಯ ಜನಕ ಸಿರಿ ವೇಣುಗೋಪಾಲನೆ 

 ಋತು ಮಾಡು ಎನ್ನ ಮನದಲ್ಲಿ ವಿಶ್ರುತವಿದು ll4ll


 ತ್ರಿವಿಡಿತಾಳ 


ಇನಿತು ಮಾಡಿಸೆ ನಿನ್ನ ಘನತೆ ಅತಿಶಯವಯ್ಯಾ

ದಿನಮಣಿ ತೇಜ ಯಜನಾದಿಗಳು ದೂರಾ

ದಿನ ದಿನದಲಿ ಎನ್ನ ತನುವೆಂಬ ಮಂದಿರದಿ

ಮಿನಗುವದು ಬಂದು ಕನಿಕರದಿಂದಲಿ

ವನಜನಾಭನೆ ನೀನು ನೆನೆಸಲು ಸಲುಹಿದೆ

ಕನಕನ್ನ ಕುವರನ್ನ ಕರುಣದಿಂದ

ಹನುಮ ವಂದಿತ ಚರಣ ವೇಣುಗೋಪಾಲ ಪಾ-

ವನ ಮಾಡು ಎನ್ನ ಇನ್ನವರ ಸೇವಕನೆಂದು ll5ll


 ಅಟ್ಟತಾಳ 


ನಿನ್ನವರೊಳು ಇಡು ಬನ್ನ ಬಡಲಾರೆನೊ

ಇನ್ನು ವಿಷಯ ಬಾಧೆಯನ್ನು ಬಿಡಿಸಿ ದೇವ

ಕುನ್ನಿಯಂದದಿ ದುರುಳರನ್ನು ಆಶ್ರೈಸಲು

ಅನ್ನವ ಕೊಡುವರೇನೊ ನಿನ್ನ ಹೊರತು ಬೇರೆ

ಧನ್ಯವಾದ ಬುಧರನ್ನು ಪೊಂದಿಸಿ ವೇಗ

ಘನ್ನ ಭವರೋಗವನ್ನು ಮಾಣಿಸಿ ಕಾಯೊ

ಹೆಣ್ಣು ಹೊನ್ನು ಮಣ್ಣಾಶೆಯಂಬೊದು ಎನ್ನ

ಸುಣ್ಣದ ಕಲ್ಲಿನಂತೆ ಸುಡುವುದೊ ಪ್ರತಿದಿನ

ಚನ್ನ ಮೂರುತಿ ಸಿರಿ ವೇಣುಗೋಪಾಲನೆ 

ಎನ್ನ ದೇಹದಿ ಸೇವೆಯನ್ನು ಕೈಕೊಳ್ಳೊ ಧೊರೆಯೆ ll6ll


 ಏಕತಾಳ 


ಶಿರ ನಿನ್ನ ಚರಣಕ್ಕೆ ಎರಗುವಂತೆ ಮಾಡೊ

ಕರ ನಿನ್ನ ಪೂಜೆ ವಿಸ್ತರವಾಗಿ ಮಾಡಲಿನ್ನು

ಚರಿಸಲು ಪಾದಗಳು ಪುಣ್ಯದೇಶಗಳಲಿ

ಹರಿ ನಿನ್ನ ನಾಮ ಉಚ್ಚರಿಸಲಿ ಆನನವು

ವರನಾಶಿಕ ಕರ್ನಾ ಸಿರಿ ಅರಸನೆ ನಿನ್ನ

-ವರ ಕಥೆ ನಿರ್ಮಾಲ್ಯಗಳು ಸವಿಯಲನುದಿನ

ಪರಮ ಪುರುಷ ಮಿಕ್ಕ ಇರುವ ಇಂದ್ರಿಯಗಳೆಲ್ಲ

ಸರಿಯದೆ ನಿನ್ನ ಸೇವೆಯನು ಪೊಂದಿದರಲಯ್ಯಾ

ಸರಸಿಜ ದಳ ನಯನ ವೇಣುಗೋಪಾಲರೇಯಾ 

ಇರಳು ಹಗಲು ನಿನ್ನುಚ್ಚರಿಸುವಂತೆ ಮಾಡೊ ll7ll

 

 ಜತೆ 


ಭಕ್ತವತ್ಸಲ ವೇಣುಗೋಪಾಲ ನಿನಗೆ

ಯುಕ್ತವಾದದು ಮಾಡೊ ಹಸ್ತ ಮುಗುದೆ ನಾನು ll8ll

*******