Showing posts with label ಬೂದಿ ಮುಚ್ಚಿದ ಕೆಂಡದಂತಿಪ್ಪರು vijaya vittala. Show all posts
Showing posts with label ಬೂದಿ ಮುಚ್ಚಿದ ಕೆಂಡದಂತಿಪ್ಪರು vijaya vittala. Show all posts

Thursday 17 October 2019

ಬೂದಿ ಮುಚ್ಚಿದ ಕೆಂಡದಂತಿಪ್ಪರು ankita vijaya vittala


ಬೂದಿ ಮುಚ್ಚಿದ ಕೆಂಡದಂತಿಪ್ಪರು
ಈ ಧರೆಯ ಮೇಲೆ ಶ್ರೀಹರಿಯ ಭಕ್ತ ಜನರು||ಪಲ್ಲ||

ಅಂಗನೋಡಲು ಅಷ್ಟ ವಕ್ರವಾಗಿಪ್ಪರು
ಕಂಗಳಿಂದಲಿ ನೋಡೆ ಘೋರತರರು
ಮಂಗಳಾಂಗನ ಅಂತರಂಗದಲಿ ಭಜಿಸುತ್ತ
ಹಿಂಗದೆ ಸಂತಜನ ಸಂಗದೊಳಿಹರೊ||೧||

ನಾಡಜನರುಗಳಂತೆ ನಡೆಯರು ನುಡಿಯರು
ಚಾಡಿ ಕ್ಷುದ್ರವ ಕೇಳಿ  ಒಡಲ ತುಂಬಿಸಿಕೊಳರು
ಕೂಡರೊ ಕುಟಿಲ ಜನಸಂಘದಲ್ಲಿ
ರೂಢಿಯೊಳಗೊಂದೊಂದೆ ಗೂಢವಾಗಿಹರು||೨||

ಡಂಭಕತನದಿಂದ ಗೊಂಬೆ ನೆರಹಿಕೊಂಡು
ಡೊಂಬ ಕುಣಿದಂತೆಕುಣಿದಾಡರು
ಹಂಬಲಂಗಳ ಬಿಟ್ಟು ಹರುಷವುಳ್ಳವರಾಗಿ
 ಬಿಂಬಮೂರುತಿಯನ್ನೆ ಕೊಂಡಾಡುತಿಹರು||೩||

ಶತ್ರು ಮಿತ್ರರುಗಳ ಸಮವಾಗಿ ಎಣಿಸುವರು
ಪುತ್ರ ಮಿತ್ರ ಭ್ರಾತೃಗಳ ನೆಚ್ಚರೊ
ಯಾತ್ರೆ ತೀರ್ಥಂಗಳಿಗೆ ಹೋಗುತ್ತ ಶ್ರೀ ಹರಿಯ
ಸ್ತೋತ್ರಗಳ ಮಾಡಿ ಸಾಧನೆ ಮಾಡಿಕೊಂಬರೊ||೪||

ಕಷ್ಟ ಸೌಖ್ಯಂಗಳನೆ ಕಲಿವರಗರ್ಪಿಪರು
ಇಟ್ಟು ತೊಟ್ಟಿದ್ದು ಹರಿಕೊಟ್ಟನೆಂಬುವರು
ಸೃಷ್ಟೀಶ ಸಿರಿ ವಿಜಯ ವಿಠಲನ ಪದ ಪದ್ಮ
ಮುಟ್ಟಿ ಭಜಿಸಿ ಮುಕ್ತಿ ಸಾಮ್ರಾಜ್ಯ ಪಡೆಯುವರು||೫||
********