Showing posts with label ಜಾತಿಕಾರನು ಒಂದು ಜೋಳಿಗೆ vijaya vittala ankita suladi ಸಾಧನ ಸುಳಾದಿ JAATIKAARANAU ONDU JOLIGE SADHANA SULADI. Show all posts
Showing posts with label ಜಾತಿಕಾರನು ಒಂದು ಜೋಳಿಗೆ vijaya vittala ankita suladi ಸಾಧನ ಸುಳಾದಿ JAATIKAARANAU ONDU JOLIGE SADHANA SULADI. Show all posts

Monday 1 November 2021

ಜಾತಿಕಾರನು ಒಂದು ಜೋಳಿಗೆ vijaya vittala ankita suladi ಸಾಧನ ಸುಳಾದಿ JAATIKAARANAU ONDU JOLIGE SADHANA SULADI

Audio by Mrs. Nandini Sripad

 ಶ್ರೀವಿಜಯದಾಸಾರ್ಯ ವಿರಚಿತ 


ಸಾಧನ ಸುಳಾದಿ 


(ಡಂಭಾಚಾರದಿಂದ ವೃಥಾ ಜನರನ್ನು ಮೊಸಗೊಳಿಸದೆ, ದುರಾಚಾರ ದೂರಗೈದು,

ಡಾಂಭಿಕ ತೊರೆದು, ಅತಿ ಭಕುತಿಯಿಂದ ಶ್ರೀಹರಿಯನ್ನು ಗುಪ್ತದಲ್ಲಿ ಭಜಿಸುವದು.) 


ರಾಗ ದರ್ಬಾರಿಕಾನಡ 


ಧ್ರುವತಾಳ 


ಜಾತಿಕಾರನು ಒಂದು ಜೋಳಿಗೆ ಮಾಡಿಕೊಂಡು

ಯಾತರ್ಯಾತರ ಮರದ ಬೇರರದು ಚೂರ್ಣ -

ವ ತುಂಬಿಕೊಂಡು ನಡುಬೀದಿಯೊಳಗೆ ಬಂದು

ತಾ ಥೂ ಎಂತೆಂಬ ಗಾರುಡ ಮಂತ್ರವ

ಮಾತುಗಾರಿಕೆಯಿಂದ ಕಣ್ಣು ಮಸಕನೆ ತೋರಿ

ಬಾತಿ ಬಸಿದು ಪೊಟ್ಟಿಯ ಪೊರೆವ

ಜಾತಿಕಾರನಂತೆ ನಾನೊಬ್ಬ ವೇಷ ಧರಿಸೀ

ನೂತನ ಮಾಯದ ಬೆಡಗಿನಿಂದ

ಭೂತ ಸೋಂಕಿದ ಮಾನವನಂತೆ ಹಲವು ನೀ -

ಕೇತನಗಳನು ತಿರುಗಿ ತಿರುಗೀ

ಆತುಮಾರ್ಥವಾಗಿ ಅಂಗಡಿ ವಿರಚಿಸಿ

ನೋತ ಪುಣ್ಯಗಳೆಲ್ಲ ಬರಿದು ಗೈದು

ಭೂತ ಮಹೇಶ್ವರ ವಿಜಯವಿಠ್ಠಲ ನಿನ್ನ

ಪ್ರೀತಿಯ ಬಡಿಸದೆ ಪಾಪಾತುರ ನಾನಾದೆ ॥ 1 ॥ 


ಮಟ್ಟತಾಳ 


ಸೂಳೆ ಶೃಂಗಾರವನ್ನು ಮೇಲು ಮಾಡಿಕೊಂಡು

ವೇಳ್ಯ ವೇಳಿಗೆ ತನ್ನ ಕಾಲವ ಕಳೆವಂತೆ

ಆಳುಡಂಬಕನಾಗಿ ತೋಳು ಹಸ್ತವ ತಿರುಹಿ

ಕೇಳಿಕೆಯನು ಹೇಳಿ ಸಾಲುದಿನವ ಕಳೆದೆ

ಲೋಲ ಮಹಕೃತುವೆ ವಿಜಯವಿಟ್ಠಲ ಕರು -

ಣಾಳು ಹೀನನಾಗಿ ಬಾಳಿದೆನೊ ಬಂದೂ ॥ 2 ॥ 


ತ್ರಿವಿಡಿತಾಳ 


ಅನ್ನದಾನೀ ಎಂಬೊ ಪೆಸರು ಒಂದಲ್ಲದವನ

ಮನೆಯಲ್ಲಿ ಗಂಗಾಮೃತವೇ ವರ್ಜ -

ವನ್ನು ಮಾಡಿಕೊಂಡು ಕೀರ್ತಿಯ ಪಡೆದಂತೆ

ಎನ್ನ ಭಾಗವತತನ ಇಂತಿಪ್ಪದಯ್ಯಾ

ಅನ್ಯರ ಕಣ್ಣಿಗೆ ಬಲುರಮ್ಯವಾಗಿ ಪಾ -

ವನ್ನನೆಸಿಕೊಂಡೆ ಬಹಿರದಲ್ಲಿ

ಬಣ್ಣವಲ್ಲದೆ ಲೇಶ ಅಂತರ ಶುಚಿ ಇಲ್ಲಾ

ಬಿನ್ನಣದಲಿ ಹಗಲಿರುಳು ಪರರ

ಬಣ್ಣಿಸಿ ಹರಿದಾಸನೆಂದೆನಿಸಿದೆನೊ

ಎನ್ನ ನೋಡು ಬೃಹತ್ತ ವಿಜಯವಿಟ್ಠಲರೇಯ

ನಿನ್ನಂಘ್ರಿ ಭಕ್ತಿ ಮಾರ್ಗವನ್ನು ಕಾಣೆನೊ ಜೀಯಾ ॥ 3 ॥ 


ಅಟ್ಟತಾಳ 


ಭಕುತಿಯ ತೋರುವೆ ಭಕುತಿಗೋಸುಗ ಪೋಗಿ

ಕಕುಲಾತಿ ತೊರಿಯದೆ ಸಕಲ ಸೊಗಸಿನಿಂದ

ಹಕಲ ಮನಸಿನಲ್ಲಿ ಬಕನು ಕುಳಿತು ತನ್ನ

ಭಕುತಿಗೆ ಒಂದು ಕುಯುಕುತಿಯ ನಡಿಸಿ ಉ -

ದಕ ತೀರವಿದ್ದಂತೆ ಭಕುತಿಯ ತೋರುವೆನು

ಸಕಲ ಜನರ ಮುಂದೆ ಭಕುತಿಯ ತೋರುವೆನು

ಸಕಲೇಶ ಕ್ಷೇತ್ರಜ್ಞ ಶ್ರೀವಿಜಯವಿಟ್ಠಲರೇಯ

ಅಕಳಂಕನಾಗದೆ ಅಕಟ ಕುಮತಿಯಾದೆ ॥ 4 ॥ 


ಆದಿತಾಳ 


ಚೋರನು ಸುಗುಣನಾಗಿ ಊರ ಒಳಗೆ ತಿರುಗಿ ಪರರಾ -

ಪಾರ ವಸ್ತು ಅಪಹರಿಸಿ ತೋರುವ ಸಜ್ಜನನಾಗಿ

ಊರು ಕೇರಿಯೊಳಗೆ ನಾನು ಸಾರಹೃದಯನೆನಿಸಿ ವಿ -

ಕಾರತನವನು ಎಲ್ಲ ಬೀರಿ ಭಾಗ್ಯವಂತರಲ್ಲಿ

ಸೂರಿಗೊಂಬೆ ಹೊನ್ನು ಹಣವ ಮಾರಿಗೆ ನಿನ್ನ ಮಹಿಮೆ

ಮಾರಿ ಧನ್ಯನಾಗಿ ಉದರ ಪೂರವಾಗಿ ಪೊರೆದೆ ರಂಗ

ಶ್ರೀರಮಣ ಮಹಕ್ಷಯ ವಿಜಯವಿಟ್ಠಲ ನಿನ್ನ

ಆರಾಧನೆ ಬಿಟ್ಟು ವೃಥಾ ಭಾರವಾದೆ ಧರಣಿಯಲ್ಲೀ ॥ 5 ॥ 


ಜತೆ 


ಗುಪ್ತದರ್ಚನೆ ಕೊಡೊ ಗುಣಗಣ ನಿಲಯಾನೆ

ಸಪ್ತವಾಹನ ನಮ್ಮ ವಿಜಯವಿಟ್ಠಲ ನಿರುತಾ ॥

****