Showing posts with label ಜಯ ಜಯ ಸಿರಿ ಪಾಂಡುರಂಗ ಭಕುತರ raghupati vittala suladi JAYA JAYA SIRI PANDURANGA BHAKUTARA SULADI. Show all posts
Showing posts with label ಜಯ ಜಯ ಸಿರಿ ಪಾಂಡುರಂಗ ಭಕುತರ raghupati vittala suladi JAYA JAYA SIRI PANDURANGA BHAKUTARA SULADI. Show all posts

Saturday, 6 February 2021

ಜಯ ಜಯ ಸಿರಿ ಪಾಂಡುರಂಗ ಭಕುತರ ankita raghupati vittala suladi JAYA JAYA SIRI PANDURANGA BHAKUTARA SULADI

 Audio by Smt.Sindhu S Kulkarni


ಶ್ರೀ ಪಾಂಡುರಂಗ ವಿಠಲನ ಸುಳಾದಿ

ರಚನೆ: ಶ್ರೀ ರಘುಪತಿ ವಿಠಲರು


ರಾಗ: ಭೈರವಿ ತಾಳ: ಧ್ರುವ ತಾಳ


॥ ಧ್ರುವ ತಾಳ ॥

ಜಯ ಜಯ ಸಿರಿ ಪಾಂಡುರಂಗ ಭಕುತರ ಭಯಗಜಕೆ ಸಿಂಗ ।

ಜಯ ಜಯ ಸಿರಿ ಪಾಂಡುರಂಗ ಭಕುತರ ಮನದೊಳಗೆ ಸಿಂಗ ।

ಜಯ ಜಯ ಸಿರಿ ಪಾಂಡುರಂಗ ನಮಿಪರಿಗೆ ನೀನತಿ ಕೃಪಾಂಗ ।

ಜಯ ಜಯ ಸಿರಿ ಪಾಂಡುರಂಗ ಮೋಹನ ಲೀಲಾವತಾರ ।

ಜಯ ಜಯ ಸಿರಿ ಪಾಂಡುರಂಗ ರಘುಪತಿ ವಿಠಲ ಉದಾರಾ ॥ ೧ ॥


॥ ಮಟ್ಟ ತಾಳ ॥

ನಿನ್ನ ಕರುಣದಳತೆ ಬಲ್ಲವರಾರಯ್ಯಾ ।

ನಿನ್ನ ನಂಬಿದವರು ದೋಷಿಗಳಾರಯ್ಯಾ ।

ನಿನ್ನ ಮಹಾಮಹಿಮೆ ಬೊಮ್ಮಾದಿಗಳೆಲ್ಲ ।

ನಿನ್ನರಿತು ಅರಿಯದಂತೆ ಕೊಂಡಾಡುತಲಿಹರು ।

ನಿನ್ನ ಪಾಡಲು ಎನ್ನಿಂದಲಿ ವಶವೆ ।

ಘನ್ನ ಕರುಣಿ ರಘುಪತಿ ವಿಠಲ ಕರುಣಿ ॥ ೨ ॥


॥ ರೂಪಕ ತಾಳ ॥

ಸಕಲ ಜನರೆಲ್ಲಾ ಬಡುವರು ನಾವೆನುತ ।

ಉಕುತಿಯಿಂದಲಿ ಪೇಳಿ ಮರುಗುವರೋ ।

ಲಕುಮಿ ವಲ್ಲಭ ಕೇಳೋ ನಾನೆ ಸಿರವಂತನೆಂದು ।

ಕಕುಲಾತಿಯನು ಬಿಟ್ಟು ಪೇಳಿಕೊಂಬೆ ।

ಸಕಲಾದಲ್ಲಿ ಔದಾರ್ಯಗಳಾಗಿಹ ಸುಮುಖಂ ತರೋಬ್ಬರ ಕಾಣೆನಯ್ಯಾ ।

ಭಕುತರಿಚ್ಛೆಗಾರ ಭಕುತರಿಗೆ ಸುಖವಿವ ಸುಖಪೂರ್ಣ ನೀನೆಂಬೊ ಸ್ವತಂತ್ರನೋ ।

ಸಕಲ ಮಾತೇನೊ ಅನುಭವ ಬಂದದಕೆ ಮತ್ತೆ ।

ಯುಕುತಿ ಪೇಳುವದೇನೊ ಪಂಢರಿರಾಯಾ ।

ಆಕಳಂಕ ಗುಣ ಪೂರ್ಣ ರಘುಪತಿ ವಿಠಲ ನಿನ್ನ ।

ಕಿಂಕರರ ಕಿಂಕರ ನಾನು ದಯಾದೃಷ್ಟಿಯಲಿ ನೋಡೋ ॥ ೩ ॥


॥ ಝಂಪೆ ತಾಳ ॥

ನೀ ನೊಲಿದದ್ದಕ್ಕೆ ಇಹ ಸಂಪತ್ತು ಕೊಟ್ಟದ್ದು ।

ಜ್ಞಾನವೇನೊ ಭಕುತಿ ವೈರಾಗ್ಯವೋ ।

ನಾನೊಲ್ಲೆ ನಾನೊಲ್ಲೆ ಪುಂಡರೀಕವರದ ।

ನೀನೊಲಿದು ನಿನ್ನಲ್ಲಿ ಭಕುತಿ ನೀಯೋ ।

ಏನು ಇಹ ಸಂಪತ್ತು ಕೊಡಲು ಪೂರ್ವದ ಪುಣ್ಯ ।

ಹಾನಿಸರಿ ಪರಲೋಕ ಮಾನವೇನೋ ।

ಕ್ಷೋಣೀಧರ ರಘುಪತಿ ವಿಠಲ ಪಾವನಮೂರ್ತಿ ।

ಏನು ಮೊರೆ ಇಟ್ಟರು ನೀನು ಕೇಳೋ ॥ ೪ ॥


॥ ತ್ರಿವಿಡಿ ತಾಳ ॥

ಎಲ್ಲ ಜೀವರೊಳಗೆ ಬಲ್ಲಿದಂತರ್ಯಾಮಿ ।

ಎಲ್ಲಿ ನಿನಗೆ ಸರಿಯಿಲ್ಲವೆಂದು ।

ಎಲ್ಲಿ ಹೋಗಲು ಹಣೆಯಲ್ಲಿದ್ದ ಭೋಗವು ।

ಪೊಳ್ಳೆಂದರು ಬಿಡದೊಲ್ಲದೆ ಉಣಿಸುವೆ ।

ಸಲ್ಲದೆಂದು ಬಲು ಹೊಲ್ಲತನವು ಮಾಡಿ ।

ಒಳ್ಳೆ ಜನರಿಂದೆನ್ನ ಸೊಲ್ಲು ಗುಕ್ಕಿಸುವೆಲ್ಲಾ ।

ಫುಲ್ಲನೇತ್ರ ರಘುಪತಿ ವಿಠಲ ನೀನೇ ।

ನಲ್ಲದೆನಗಾರು ಇಲ್ಲ ದಾತರೆ ಇಲ್ಲ ॥ ೫ ॥


॥ ಅಟ್ಟ ತಾಳ ॥

ನೀ ಕೊಟ್ಟ ಸಂಪತ್ತು ಉಂಡು ಬೇಕಿಲ್ಲವೆಂದು ।

ಅನೇಕ ಯುಕುತಿಯಿಂದ ವ್ಯಾಕುಲನಾದರು ಬಿಡದು ಬಿಡದು ಬಿಡದು ।

ಏಕವೃತಿಯಲ್ಲಿ ನರಹರಿ ತೀರ್ಥರು ನೀ ।

ರಾಕರಿಸಲು ಭೋಗಾ ಎಂತು ಬಿಟ್ಟಿತೋ ಸ್ವಾಮಿ ।

ಸಾಕಾರ ಗುಣ ಪೂರ್ಣ ರಘುಪತಿ ವಿಠಲ ನೀ ।

ರಾಕರಿಸದೆ ಎನ್ನ ಮನಸೋ ಜೋಕೆ ಮಾಡೋ ॥ ೬ ॥


॥ ಆದಿ ತಾಳ ॥

ನೀ ಕೊಟ್ಟ ಪದವಿಯಿಂದ ಉದ್ಧರಿಸೊ ನರಕ ಸೇರಿಸೊ ।

ಲೋಕಮೋಹಕನಾದ ರಘುಪತಿ ವಿಠಲ ಎನ್ನ ಪರಾಕು ನಿನಗೆ ಮುಟ್ಟದಂತಾಯಿತೆ ಸ್ವಾಮಿ ॥ ೭ ॥


॥ ಜತೆ ॥

ಮನಸಿಗೆ ಮೈಲಿಗೆ ಹತ್ತದಂತೆ ಮಾಡೋ ।

ಮನಸಿಜ ಪಿತ ರಘುಪತಿ ವಿಠಲ ಪಾಂಡುರಂಗಾ ॥ ೮ ॥

***