Audio by Smt.Sindhu S Kulkarni
ಶ್ರೀ ಪಾಂಡುರಂಗ ವಿಠಲನ ಸುಳಾದಿ
ರಚನೆ: ಶ್ರೀ ರಘುಪತಿ ವಿಠಲರು
ರಾಗ: ಭೈರವಿ ತಾಳ: ಧ್ರುವ ತಾಳ
॥ ಧ್ರುವ ತಾಳ ॥
ಜಯ ಜಯ ಸಿರಿ ಪಾಂಡುರಂಗ ಭಕುತರ ಭಯಗಜಕೆ ಸಿಂಗ ।
ಜಯ ಜಯ ಸಿರಿ ಪಾಂಡುರಂಗ ಭಕುತರ ಮನದೊಳಗೆ ಸಿಂಗ ।
ಜಯ ಜಯ ಸಿರಿ ಪಾಂಡುರಂಗ ನಮಿಪರಿಗೆ ನೀನತಿ ಕೃಪಾಂಗ ।
ಜಯ ಜಯ ಸಿರಿ ಪಾಂಡುರಂಗ ಮೋಹನ ಲೀಲಾವತಾರ ।
ಜಯ ಜಯ ಸಿರಿ ಪಾಂಡುರಂಗ ರಘುಪತಿ ವಿಠಲ ಉದಾರಾ ॥ ೧ ॥
॥ ಮಟ್ಟ ತಾಳ ॥
ನಿನ್ನ ಕರುಣದಳತೆ ಬಲ್ಲವರಾರಯ್ಯಾ ।
ನಿನ್ನ ನಂಬಿದವರು ದೋಷಿಗಳಾರಯ್ಯಾ ।
ನಿನ್ನ ಮಹಾಮಹಿಮೆ ಬೊಮ್ಮಾದಿಗಳೆಲ್ಲ ।
ನಿನ್ನರಿತು ಅರಿಯದಂತೆ ಕೊಂಡಾಡುತಲಿಹರು ।
ನಿನ್ನ ಪಾಡಲು ಎನ್ನಿಂದಲಿ ವಶವೆ ।
ಘನ್ನ ಕರುಣಿ ರಘುಪತಿ ವಿಠಲ ಕರುಣಿ ॥ ೨ ॥
॥ ರೂಪಕ ತಾಳ ॥
ಸಕಲ ಜನರೆಲ್ಲಾ ಬಡುವರು ನಾವೆನುತ ।
ಉಕುತಿಯಿಂದಲಿ ಪೇಳಿ ಮರುಗುವರೋ ।
ಲಕುಮಿ ವಲ್ಲಭ ಕೇಳೋ ನಾನೆ ಸಿರವಂತನೆಂದು ।
ಕಕುಲಾತಿಯನು ಬಿಟ್ಟು ಪೇಳಿಕೊಂಬೆ ।
ಸಕಲಾದಲ್ಲಿ ಔದಾರ್ಯಗಳಾಗಿಹ ಸುಮುಖಂ ತರೋಬ್ಬರ ಕಾಣೆನಯ್ಯಾ ।
ಭಕುತರಿಚ್ಛೆಗಾರ ಭಕುತರಿಗೆ ಸುಖವಿವ ಸುಖಪೂರ್ಣ ನೀನೆಂಬೊ ಸ್ವತಂತ್ರನೋ ।
ಸಕಲ ಮಾತೇನೊ ಅನುಭವ ಬಂದದಕೆ ಮತ್ತೆ ।
ಯುಕುತಿ ಪೇಳುವದೇನೊ ಪಂಢರಿರಾಯಾ ।
ಆಕಳಂಕ ಗುಣ ಪೂರ್ಣ ರಘುಪತಿ ವಿಠಲ ನಿನ್ನ ।
ಕಿಂಕರರ ಕಿಂಕರ ನಾನು ದಯಾದೃಷ್ಟಿಯಲಿ ನೋಡೋ ॥ ೩ ॥
॥ ಝಂಪೆ ತಾಳ ॥
ನೀ ನೊಲಿದದ್ದಕ್ಕೆ ಇಹ ಸಂಪತ್ತು ಕೊಟ್ಟದ್ದು ।
ಜ್ಞಾನವೇನೊ ಭಕುತಿ ವೈರಾಗ್ಯವೋ ।
ನಾನೊಲ್ಲೆ ನಾನೊಲ್ಲೆ ಪುಂಡರೀಕವರದ ।
ನೀನೊಲಿದು ನಿನ್ನಲ್ಲಿ ಭಕುತಿ ನೀಯೋ ।
ಏನು ಇಹ ಸಂಪತ್ತು ಕೊಡಲು ಪೂರ್ವದ ಪುಣ್ಯ ।
ಹಾನಿಸರಿ ಪರಲೋಕ ಮಾನವೇನೋ ।
ಕ್ಷೋಣೀಧರ ರಘುಪತಿ ವಿಠಲ ಪಾವನಮೂರ್ತಿ ।
ಏನು ಮೊರೆ ಇಟ್ಟರು ನೀನು ಕೇಳೋ ॥ ೪ ॥
॥ ತ್ರಿವಿಡಿ ತಾಳ ॥
ಎಲ್ಲ ಜೀವರೊಳಗೆ ಬಲ್ಲಿದಂತರ್ಯಾಮಿ ।
ಎಲ್ಲಿ ನಿನಗೆ ಸರಿಯಿಲ್ಲವೆಂದು ।
ಎಲ್ಲಿ ಹೋಗಲು ಹಣೆಯಲ್ಲಿದ್ದ ಭೋಗವು ।
ಪೊಳ್ಳೆಂದರು ಬಿಡದೊಲ್ಲದೆ ಉಣಿಸುವೆ ।
ಸಲ್ಲದೆಂದು ಬಲು ಹೊಲ್ಲತನವು ಮಾಡಿ ।
ಒಳ್ಳೆ ಜನರಿಂದೆನ್ನ ಸೊಲ್ಲು ಗುಕ್ಕಿಸುವೆಲ್ಲಾ ।
ಫುಲ್ಲನೇತ್ರ ರಘುಪತಿ ವಿಠಲ ನೀನೇ ।
ನಲ್ಲದೆನಗಾರು ಇಲ್ಲ ದಾತರೆ ಇಲ್ಲ ॥ ೫ ॥
॥ ಅಟ್ಟ ತಾಳ ॥
ನೀ ಕೊಟ್ಟ ಸಂಪತ್ತು ಉಂಡು ಬೇಕಿಲ್ಲವೆಂದು ।
ಅನೇಕ ಯುಕುತಿಯಿಂದ ವ್ಯಾಕುಲನಾದರು ಬಿಡದು ಬಿಡದು ಬಿಡದು ।
ಏಕವೃತಿಯಲ್ಲಿ ನರಹರಿ ತೀರ್ಥರು ನೀ ।
ರಾಕರಿಸಲು ಭೋಗಾ ಎಂತು ಬಿಟ್ಟಿತೋ ಸ್ವಾಮಿ ।
ಸಾಕಾರ ಗುಣ ಪೂರ್ಣ ರಘುಪತಿ ವಿಠಲ ನೀ ।
ರಾಕರಿಸದೆ ಎನ್ನ ಮನಸೋ ಜೋಕೆ ಮಾಡೋ ॥ ೬ ॥
॥ ಆದಿ ತಾಳ ॥
ನೀ ಕೊಟ್ಟ ಪದವಿಯಿಂದ ಉದ್ಧರಿಸೊ ನರಕ ಸೇರಿಸೊ ।
ಲೋಕಮೋಹಕನಾದ ರಘುಪತಿ ವಿಠಲ ಎನ್ನ ಪರಾಕು ನಿನಗೆ ಮುಟ್ಟದಂತಾಯಿತೆ ಸ್ವಾಮಿ ॥ ೭ ॥
॥ ಜತೆ ॥
ಮನಸಿಗೆ ಮೈಲಿಗೆ ಹತ್ತದಂತೆ ಮಾಡೋ ।
ಮನಸಿಜ ಪಿತ ರಘುಪತಿ ವಿಠಲ ಪಾಂಡುರಂಗಾ ॥ ೮ ॥
***