Showing posts with label ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲ purandara vittala ಮುಂಡಿಗೆ MAADU SIKKADALLA MAADINA GOODU SIKKADALLA mundige. Show all posts
Showing posts with label ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲ purandara vittala ಮುಂಡಿಗೆ MAADU SIKKADALLA MAADINA GOODU SIKKADALLA mundige. Show all posts

Tuesday 5 October 2021

ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲ purandara vittala ಮುಂಡಿಗೆ MAADU SIKKADALLA MAADINA GOODU SIKKADALLA mundige



ಮಾಡು ಸಿಕ್ಕದಲ್ಲಾ , ಮಾಡಿನ ಗೂಡು ಸಿಕ್ಕದಲ್ಲ |
ಜೋಡಿ ಹೆಂಡ್ರಂಜಿ ಓಡಿಹೋಗುವಾಗ
ಗೋಡೆ ಬಿದ್ದು ಬಯಲಾಯಿತಲ್ಲ ||

ಎಚ್ಚರಗೊಳಲಿಲ್ಲಾ , ಮನವೇ
ಹುಚ್ಚನಾದೆನಲ್ಲಾ |
ಅಚ್ಚಿನೊಳಗೆ ಮೆಚ್ಚು
ಮೆಚ್ಚಿನೊಳಗೆ ಅಚ್ಚು
ಕಿಚ್ಚೆದ್ದುಹೋಯಿತಲ್ಲಾ ||

ಮುಪ್ಪು ಬಂದಿತಲ್ಲಾ , ಪಾಯಸ
ತಪ್ಪದೆ ಉಣಲಿಲ್ಲಾ |
ತುಪ್ಪದ ಬಿಂದಿಗೆ
ತಿಪ್ಪೆಯ ಮೇಲೆ
ಧೊಪ್ಪಗೆ ಬಿತ್ತಲ್ಲಾ ||

ಯೋಗವು ಬಂತಲ್ಲಾ , ಬದುಕು ವಿ-
ಭಾಗವಾಯಿತಲ್ಲಾ |
ಭೋಗಿಶಯನ ಶ್ರೀ
ಪುರಂದರವಿಠಲನ
ಆಗ ನೆನೆಯಲಿಲ್ಲಾ |
***

ರಾಗ ಪಂತುವರಾಳಿ ಏಕತಾಳ (raga, taala may differ in audio)

pallavi

mADu sikkadallA mADina gUDu sikkadallA jODu heNDiranji Odi hOguvAga gODe biddu bayalAyidallA

caraNam 1

eccara goLalill manavE huccanAdenallA accinoLage meccu meccinoLage accu kicciddu hOyitallA

caraNam 2

muppu bandidallA pAyasa tappade uNalillA tuppada bindige tippe mEle doppane bittallA

caraNam 3

yOgavu bandallA baduku vibhAgavAyitallA bhOgishayna shrI purandara viTTalana Aga neneyalillA
***

ಪುರಂದರದಾಸರ ಮುಂಡಿಗೆ

ಮುಂಡಿಗೆ – ಮಾಡು ಸಿಕ್ಕದಲ್ಲ

ಮಾಡು ಸಿಕ್ಕದಲ್ಲ, ಮಾಡಿನಗೂಡು ಸಿಕ್ಕದಲ್ಲ
ಜೋಡು ಹೆಂಡಿರಿಗಂಜಿ ಓಡಿಹೋಗುವಾಗ
ಗೋಡೆ ಬಿದ್ದು ಬಯಲಾಯಿತಲ್ಲ | ಪ |

ಎಚ್ಚರಗೊಳಲಿಲ್ಲ ಮನವೆ, ಹುಚ್ಚನಾದೆನಲ್ಲ
ಅಚ್ಚಿನೊಳಗೆ ಮೆಚ್ಚು ಮೆಚ್ಚಿನೊಳಗೆ ಅಚ್ಚು
ಕಿಚ್ಚೆದ್ದು ಹೋಯಿತಲ್ಲ | ೧ |

ಮುಪ್ಪು ಬಂದಿತಲ್ಲ ಪಾಯಸ ತಪ್ಪದೆ ಉಣಲಿಲ್ಲ |
ತುಪ್ಪದ ಬಿಂದಿಗೆ ತಿಪ್ಪೆ ಮೇಲೆ ದೊಪ್ಪನೆ ಬಿತ್ತಲ್ಲ |೨ |

ಯೋಗವು ಬಂದಿತಲ್ಲ, ಬದುಕು ವಿಘಾಗವಾಯಿತಲ್ಲ |
ಭೋಗಿಶಯನ ಶ್ರೀ ಪುರಂದರವಿಠಲನ ಆಗ ನೆನೆಯಲಿಲ್ಲ | ೩ |
***


ಮಾಡು ಸಿಕ್ಕದಲ್ಲ –   ಮಾಡು ಎಂದರೆ ಭಕ್ತಿ.  ಮಾಡಿನ ಗೂಡಿ ಎಂದರೆ ವೈಕುಂಠ. ಅಥವಾ ಮಾಡು ಎಂದರೆ ಅಟ್ಟ. ನಮಗೆ ಮೇಲಿರುವ ಅಟ್ಟವೆಂದರೆ ವೈಕುಂಠ.   ಆ ವೈಕುಂಠ ಹೊಂದಲು ಮಾಡಿದ ಗೂಡು ಎಂದರೆ ಸತ್ಕರ್ಮಾನುಷ್ಠಾನಕ್ಕೆ ಅನುಕೂಲಕರವಾದ ಭಾರತದ ಭೂಭಾಗ.    ಅಲ್ಲಿರುವ ತೀರ್ಥಕ್ಷೇತ್ರಗಳು, ಸಜ್ಜನ ಸಹವಾಸ, ಇವುಗಳೇ ಮಾಡಿನ ಗೂಡು.

ಜೋಡಿಹೆಂಡರಂಜಿ –   ಜೋಡಿಹೆಂಡಿರು – ಬುದ್ಧಿ ಮತ್ತು ಬುದ್ಧಿ ತತ್ವ. ಉಮಾದೇವಿಯ ವಶವಾಗಿರುವ ಬುದ್ಧಿತತ್ವ ಹಗೂ ಗರುಡದೇವರ ವಶದಲ್ಲಿರುವ ಚಿತ್ತವೆಂದು ಕರೆಸಿಕೊಳ್ಳುವ ಬುದ್ಧಿ.  ಇವರಿಬ್ಬರೂ ಜೋಡಿ ಹೆಂಡರಿದ್ದಂತೆ.  ಈ ಬುದ್ಧಿ ಮತ್ತು ಚಿತ್ತ ಇವೆರದೂ ಓಡಿ ಹೋದರೆ ಇಂದ್ರ ಕಾಮರ ವಶವಾದ ಬಾಹ್ಯ ಮನಸ್ಸಿನ ಸ್ಥಿತಿ ಗೋಡೆಯೇ ಬಿದ್ದ ಮನೆಯಂತಿರುವುದು.  ಅರ್ಥಾತ್ – ದುಷ್ಟರ ಹಾವಳಿಗೆ ಒಳಗಾಗುವುದು.  ಅಥವಾ ಮಾಡು ಸಿಕ್ಕಲು ಮುಖ್ಯವಾದದ್ದು ಹರಿಸ್ಮರಣೆ ಮತ್ತು ತತ್ವಜ್ಞಾನ.  ಇವೆರಡೂ ಇಲ್ಲದಿದ್ದರೆ ಮಾಡು ಸಿಗದು.  ಇವೆರಡಕ್ಕೂ ಪ್ರತಿಬಂಧಕಗಳು ಹರಿಯ ವಿಸ್ಮರಣೆ ಮತ್ತು ಅನ್ಯಥಾ ಜ್ಞಾನ.  ಇವೆರಡೂ ಇರುವವರೆಗೂ ಈ ದೇಹವೆಂಬ ಗೋಡೆ ಸ್ಥಿರವೆಂದೇ ಭಾವನೆ.  ಇವರಿಬ್ಬಊ ಶಾಸ್ತ್ರ ಶ್ರವಣದಿಂದ ನಮ್ಮನ್ನು ಬಿಟ್ಟು ಹೋಗುವಾಗ, ನಮ್ಮ ದೇಹವೆಂಬ ಗೋಡೆಯೇ ಬಿದ್ದಿರುತ್ತದೆ.

ಎಚ್ಚರಗೊಳಲಿಲ್ಲ ಮನವೆ – ಭಗವಂತನ ಬಗ್ಯೆ ಎಚ್ಚರಗೊಳ್ಳದೆ ಸಾಂಸಾರಿಕ ಸುಖದಲ್ಲೇ ಕಾಲ ದೂಡುತ್ತೇವೆ.

ಮುಪು ಬಂದಿತಲ್ಲ ಪಾಯಸ ತಪ್ಪದೆ ಉಣಲಿಲ್ಲ –  ಹರಿನಾಮ ಸ್ಮರಣೆಯೇ ಪಾಯಸ.  ನಮಗೆ ಮುಪ್ಪು ಬಂದರೂ ಹರಿನಾಮ ಸ್ಮರಣೆಯೇ ಇಲ್ಲದೆ ಕಾಲ ಕಳೆಯುತ್ತೀವಿ.  ಸಾಧನ ಮಾಡಿದರೆ ಮಾತ್ರ ಮಾಡು ಸಿಗುತ್ತದೆ.

ತುಪ್ಪದೆ ಬಿಂದಿಗೆ – ತುಪ್ಪದ ಬಿಂದಿಗೆ ಎಂದರೆ ಸಾಧನ ಶರೀರ.    ಶಾಸ್ತ್ರಜನ್ಯವಾದ ತತ್ವ ನಿಶ್ಚಯ ಮತ್ತು ಸದುಪದೇಶ ಹೊಂದದೆ ಶರೀರವು ಭೂಮಿಗೆ ಭಾರವಾಗಿ ಬಿದ್ದಿತು.  ತತ್ವಜ್ಞಾನದ ದುರುಪಯೋಗವಾದಾಗ, ತುಪ್ಪದ ಬಿಂದಿಗೆ ತಿಪ್ಪೆಗೆ ಬಿದ್ದ ಹಾಗೆ.  ತಿಪ್ಪೆಗೆ ಬಿದ್ದ ತುಪ್ಪ ಎತ್ತಿಕೊಂಡರೆ ದುರ್ನಾಥ ತಪ್ಪಿದ್ದಲ್ಲ.

ಯೋಗವು ಬಂದಿತಲ್ಲ – ಸಾಧನ ಶರೀರವಿದು.  ಆದರೆ ಬದುಕು ಮಾತ್ರ ಪುಣ್ಯಪಾಪಗಳಿಗಾಗಿಯೇ ವಿಭಾಗವಾಯಿತು.  ಆ ಪುಣ್ಯ-ಪಾಪಗಳ ನಡುವು ಭೋಗಶಯನ ಶ್ರೀ ಪುರಂದರವಿಠಲನ್ನ ಮರೆತೇ ಜೀವನ ಹಾಳಾಯಿತು.
{Source : Sri Chaturvedi Vedavyasachar}
***

ಮಾಡು ಸಿಕ್ಕದಲ್ಲ

ಮಾಡು ಸಿಕ್ಕದಲ್ಲ ಮಾಡಿನ ಗೂಡು ಸಿಕ್ಕದಲ್ಲ ಜೋಡು ಹೆಂಡರಿಗಂಜಿ ಓಡಿ ಹೋಗುವಾಗ ಗೋಡೆ ಬಿದ್ದು ಬಯಲಾಯಿತಲ್ಲ

ಎಚ್ಚರಗೊಳ್ಳಲಿಲ್ಲ ಮನವೇ ಹುಚ್ಚನಾದೆನಲ್ಲ

ಅಚ್ಚಿನೊಳಗೆ ಮೆಚ್ಚು ಮೆಚ್ಚಿನೊಳಗೆ ಅಚ್ಚು ಕಿಚ್ಚೆದ್ದು ಹೋಯಿತಲ್ಲ

ಮುಪ್ಪು ಬಂದಿತಲ್ಲ ಪಾಯಸ ತಪ್ಪದೆ ಉಣಲಿಲ್ಲ

ತುಪ್ಪದ ಬಿಂದಿಗೆ ತಿಪ್ಪೆ ಮೇಲೆ ದೊಪ್ಪನೆ ಬಿತ್ತಲ್ಲ

ಯೋಗ ಬಂದಿತಲ್ಲ ಬದುಕುವಿಭಾಗವಾಯಿತಲ್ಲ

ಭೋಗಿಶಯನ ಶ್ರೀ ಪುರಂದರ ವಿಠಲನ ಆಗ ನೆನೆಯಲಿಲ್ಲ

ಈ ಮೇಲಿನ ಮುಂಡಿಗೆಯಲ್ಲಿ

ಮಾಡು ಸಿಕ್ಕದಲ್ಲ ಎಂದರೆ ಭಕ್ತಿಯು ಈ ಸಂಸಾರದಲ್ಲಿ ಸಾಧ್ಯವಾಗುತ್ತಿಲ್ಲ. ಆದ್ದರಿಂದಲೇ ವೈಕುಂಠವು ಸಿಕ್ಕುತ್ತಿಲ್ಲ. ಬುದ್ಧಿ ಮತ್ತು ಮನಸ್ಸು ಎಂಬ ಜೋಡು ಹೆಂಡರಿಗೆ ಅಂಜಿ ಓಡಿ ಹೋಗುವಾಗ ಮನಸ್ಥಿತಿಯೆ ಬಿದ್ದು ಹೋಯಿತು.

ಬದುಕು ಇದ್ದಷ್ಟು ಕಾಲ ಭಗವಂತನ ಬಗ್ಗೆ ಎಚ್ಚರಗೊಳ್ಳಲಿಲ್ಲ... ಬೆಲ್ಲದ ಅಚ್ಚಿನಂತೆ ಎರಕಹೊಯ್ದ ಈ ಸಾಂಸಾರಿಕ ಸುಖದಲ್ಲಿ ಮುಳುಗಿ ಕಡೆಗೆ ದೊರೆತ ಅಲ್ಪಸುಖವು ಕೂಡ ಭಯಂಕರವಾದ ದುಃಖದ ಅಗ್ನಿಯಲ್ಲಿ ಕರಗಿ ಹೋಯಿತು.

ಹರಿನಾಮ ಸ್ಮರಣೆ ಎಂಬ ಪಾಯಸವನ್ನು ಉಣದೇ ಮುಪ್ಪು ಆವರಿಸಿತು... ಅಂದರೆ ದೇವರ ಆಧ್ಯಾತ್ಮದ ಕಡೆಗಿನ ನಮ್ಮ ನಡೆ ಸಾಧನ ಇಲ್ಲದೆ ಶೂನ್ಯವಾಯಿತು. ತುಪ್ಪದ ಬಿಂದಿಗೆಯಂತಹ ನಮ್ಮ ಶರೀರ ಬಿದ್ದು ಹೋಯಿತು ಎಂದರೆ ಸಾವು ಸಂಭವಿಸಿತು ಎಂದರ್ಥ.ತುಪ್ಪದ ಬಿಂದಿಗೆ ತಿಪ್ಪೆಗೆ ಬಿದ್ದಂತೆ ಅಂದರೆ ತಿಪ್ಪೆಗೆ ಬಿದ್ದ ತುಪ್ಪವನ್ನು ಎತ್ತಿಕೊಳ್ಳಲು ಆಗದಲ್ಲ.

ಈ ಸಾಧನದ ಶರೀರ ಪುಣ್ಯ ಪಾಪಗಳಿಂದಲೇ ವಿಭಾಗವಾಗಿ ಪುರಂದರ ವಿಠಲನನ್ನು ನೆನೆಯದೇ ಹೋಯಿತಲ್ಲ ಎಂದು ಪುರಂದರದಾಸರು ಈ ಮುಂಡಿಗೆಯಲ್ಲಿ ಹೇಳಿದ್ದಾರೆ.
- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

***

ಮಾಡು ಸಿಕ್ಕದಲ್ಲಾ – ಮಾಡಿನ,

ಗೂಡು ಸಿಕ್ಕದಲ್ಲಾ

ಜೋಡು ಹೆಂಡಿರಂಜಿ ಓಡಿಹೋಗುವಾಗ

ಗೋಡೆ ಬಿದ್ದುಬಯಲಾಯಿತಲ್ಲಾ


ಪುರಂದರ ದಾಸರು

ದಾಸರುಗಳು, ಅನುಭಾವಿಗಳೆಲ್ಲಾ ಮನುಷ್ಯ ಜನ್ಮದ ಶ್ರೇಷ್ಠತೆಯನ್ನು ನರದೇಹದ ನಶ್ವರತೆಯನ್ನು ಕುರಿತಾಗಿ ಎಚ್ಚರಿಸುವವರೆ. ಅತಿ ದುರ್ಲಭವಾದ ಮಾನವ ಜನ್ಮ ದೊರೆತಮೇಲೆ ಲೋಲುಪತೆಯಿಂದ, ದುಶ್ಚಟ ದುರ್ಗುಣಗಳನ್ನು ತುಂಬಿಕೊಂಡು, ಸಾಧನೆಗೆ ಒದಗುವ ಈ ಶ್ರೇಷ್ಠ ಜನ್ಮವನ್ನು ಹಾಳು ಮಾಡಿಕೊಳ್ಳದೆ ಸತ್ಕರ್ಮ, ಸಚ್ಚಾರಿತ್ರ, ಸದುಪಾಸನೆಗಳ ಮಾರ್ಗ ಹಿಡಿದು ಅಕ್ಷಯವಾದ ಕೈವಲ್ಯವನ್ನು ಪಡೆಯುವುದೇ ಪರಮವಾದ ಮತ್ತು ಏಕಮೇವ ಗುರಿಯಾಗಬೇಕು ಎಂದು ಸಾರಿ ಸಾರಿ ಹೇಳುತ್ತಾರೆ. ಅಜ್ಞಾನವಶರಾಗಿ ಅಡ್ಡಹಾದಿ ಹಿಡಿದು ಈ ಅಮೂಲ್ಯ ಜೀವನವನ್ನು ಹಾಳುಮಾಡಿಕೊಂಡು ಕಡೆಯಲ್ಲಿ ಪರಿತಪಿಸುವುದರಿಂದ ಪ್ರಯೋಜನವೇನು ಎಂದು ನಮ್ಮನ್ನು ಪದೇ ಪದೇ ಎಚ್ಚರಿಸುತ್ತಾರೆ.


‘ಮಾಡು’ ಎಂಬುದು ಕರ್ಮ ಮೋಕ್ಷಸಾಧನೆಗೆ ಕಾರಣವಾದ ಕರ್ಮ ಜ್ಞಾನಗಳ ಭಕ್ತಿಮಾರ್ಗ. ‘ಮಾಡಿನ ಗೂಡು’ ನಿಶ್ಚಲ ಭಕ್ತಿಗೆ ನಿಲುಕುವ ಭಗವಂತ. ಆದರೆ ಆ ಮಾಡನ್ನು ಹಿಡಿದು, ಮಾಡಿನ ಗೂಡನ್ನು(ಪರಮಾತ್ಮನನ್ನು) ಸೇರುವುದು ಅಷ್ಟು ಸುಲಭವಲ್ಲ. ಆ ಸಾಧನೆ ಇನ್ನೂ ತನ್ನಿಂದ ಸಾಧ್ಯವಾಗಿಲ್ಲವೆಂಬ ಕೊರಗು ಇದೆ. ‘ಜೋಡು ಹೆಂಡಿರು’ ಎಂದರೆ ಅನ್ಯಥಾಜ್ಞಾನ (ಭಗವದ್ ಸ್ವರೂಪವನ್ನು ಅರಿಯಲು ಬೇಕಾದ ಜ್ಞಾನದ ಕಡೆ ಮನಸ್ಸನ್ನು ಹರಿಸದೆ, ಬರೀ ಪ್ರಾಪಂಚಿಕ ಜ್ಞಾನ ಸಂಪಾದನೆಗಾಗಿ ಹಪಹಪಿಸುವುದು) ಮತ್ತು ಭಗವಂತನ ಬಗೆಗಿನ ಮರೆವು, ವಿಸ್ಮೃತಿ. ನಮ್ಮ ಜೀವನದಲ್ಲಿ ಈ ಅನವಶ್ಯಕವಾದ ಜ್ಞಾನ ಮತ್ತು ಅವಶ್ಯಕ ವಿಷಯಗಳ ಬಗ್ಗೆ ಮರೆವು ಹೇರಳವಾಗಿ, ಈ ನೆನಪು-ಮರೆವುಗಳ ವಿಷ ಚಕ್ರದಲ್ಲಿ ಸುತ್ತುತ್ತಿರುತ್ತೇವೆ. ಈ ಮೂಲಕ ಭಗವಂತನಿಂದ ದೂರವಾಗುತ್ತಿರುವ ಅರಿವೂ ಇಲ್ಲದೆ, ಅನ್ಯಥಾಜ್ಞಾನ ವಿಸ್ಮೃತಿಗಳೆಂಬ ಹೆಂಡಿರೊಂದಿಗೆ ನಮ್ಮ ಸಂಸಾರ ನಡೆಯುತ್ತಿರುತ್ತದೆ. ಯಾವಾಗ ನಾವು ಇಟ್ಟಿರುವ ತಪ್ಪು ಹೆಜ್ಜೆಯ ಅರಿವಾಗುತ್ತದೋ ಆಗ ಬಹಳವಾಗಿ ಪರಿತಪಿಸುತ್ತೇವೆ. ಕ್ಲೇಶಪಡುತ್ತೇವೆ. ಆಗ ಇವೆರಡರ ಬಗೆಗಿನ ಭ್ರಮೆ ಅಳಿದು, ಸತ್ಯದ ಸಾಕ್ಷತ್ಕಾರವಾಗುವುದೇ ಜೋಡುಹೆಂಡಿರಂಜಿ ಓಡಿ ಹೋಗುವುದು. ಅಲ್ಲಿಗೆ ಅದುವರೆಗೂ ಇದ್ದ ಈ ಸಂಸಾರವೇ ಶಾಶ್ವತವೆಂಬ ಭ್ರಮೆ ಹರಿದು ಹೋಗುವುದೇ ‘ಗೋಡೆಬಿದ್ದು ಹೋಗುವ’ ಪ್ರತಿಮೆ. ನಂತರದ ಸತ್ಯದರ್ಶನವೇ ‘ಬಯಲಾಗುವುದು’. ಒಳಗಿನ ಬಯಲು ಅನಂತವಾದ ಹೊರಗಿನ ಬಯಲನ್ನು(ಜೀವನು ದೇವನನ್ನು ಸೇರುವ), ಆಲಯವು ಬಯಲಾಗಿ ಬಿಡುವ ಪಾರಮಾರ್ಥಿಕ ಜ್ಞಾನ.

ಹೀಗೆ ಅಪರೋಕ್ಷಜ್ಞಾನಿಗಳಾದ ಈ ಮಹಾನ್ ದಾಸರುಗಳ ಮುಂಡಿಗೆಗಳು ಮೊಗೆದಷ್ಟೂ ಅಧ್ಯಾತ್ಮದ ಸಿಹಿನೀರನ್ನುಕ್ಕಿಸುವ ಪರಮಾತ್ಮನ ಜ್ಞಾನದ ಅಕ್ಷಯ ಚಿಲುಮೆ.

- ರತ್ನಾ ಮೂರ್ತಿ
***
ಪುರಂದರ ದಾಸವರೇಣ್ಯರ  ಮುತ್ತಿನ
 ಮಾತಿನ ಜಾಲ.
 ಮಾಡು ಸಿಕ್ಕದಲ್ಲ ಮಾಡಿನ ಗೂಡು ಸಿಕ್ಕದಲ್ಲ -
 ಜೀವರು ಸಂಸಾರಕ್ಕೆ ಬಂದಿದ್ದಾರೆ. 
 ಭರದಿ  ಸಂಸಾರ ಓಡುತ್ತಿದೆ.
 ಮೋಹಜಾಲದಿ ಸಿಲುಕಿದ್ದಾರೆ. ಹೆಜ್ಜೆ ಹೆಜ್ಜೆಗೆ
 ಜಾರಿ ಬೀಳುತ್ತಿದ್ದಾರೆ. ಏಕೆ ಬಂದೆವು, ಏನು ಮಾಡಬೇಕು ಮರೆತಿದ್ದಾರೆ. ಎಂತಿದೆ ಇವರ ಪರಿಸ್ಥಿತಿ ದಾಸರು ಹೇಳುತ್ತಿದ್ದಾರೆ.
 ಬಂದಿದ್ದು ಸಾಧನೆಗಾಗಿ.
  ಭಕ್ತಿ ಮಾಡಿ ಮುಕ್ತಿ ಪಡಿಯಲಿಕ್ಕಾಗಿ.
 ಭಕ್ತ ವತ್ಸಲನ ಅನುಗ್ರಹ ಹೊಂದಲಿಕ್ಕಾಗಿ.
 ಸಂಸಾರದ ಭರಾಟೆಯಲ್ಲಿ 
 ಮಾಡು, ಗೂಡು, ಮಾಡಿನ ಗೂಡು, ಮತ್ತೆ ಗೂಡಿನ ಗೂಡು ಒಂದು ಸಿಗುವಲ್ಲದು.
  ಏನಿದು ಮಾತಿನ ಮೋಡಿ?
 ಮಾಡು ಎಂದರೆ ಭಕ್ತಿ. 
 ಗೂಡು ಎಂದರೆ ಅದಕ್ಕೆ ಆಶ್ರಯ.
 ಮಾಡಿನ ಗೂಡು ಎಂದರೆ ಭಕ್ತಿಗೆ ಆಶ್ರಯ
 ನಾದ, ಭಕ್ತಿ ಗಮ್ಯನಾದ ಪರಮಾತ್ಮ.
 ಗೂಡು ಅಂದರೆ ರಹಸ್ಯ.
 ಮತ್ತೆ ಗೂಡಿನ ಗೂಡು ಅಂದರೆ
 ಪರಮಾತ್ಮನನ್ನು ಪಡೆಯುವ ಸಾಧನೆಯ ರಹಸ್ಯ.
 ಮಾಡಿನ ಗೂಡು ಯಾಕೆ ಸಿಗುವಲ್ಲದು?  -
 ಇಲ್ಲಿದೆ ನೋಡಿ ರಹಸ್ಯ.
 ಜೋಡು ಹೆಂಡರಿಗಂಜಿ ಓಡಿ ಹೋಗುವಾಗ ಗೋಡೆ ಬಿದ್ದು ಬಯಲಾಯಿತಲ್ಲ -

 ಬುದ್ಧಿ, ಮನಸ್ಸು ಇವರು ಇಬ್ಬರು  ಹೆಂಡಂದಿರು. 
 ಮನಸು ಚಂಚಲ ವಿಕಲ್ಪಾತ್ಮಕ. 
 ಬುದ್ಧಿ ವಿವೇಕವುಳ್ಳದ್ದು  ಸಂಕಲ್ಪಾತ್ಮಕ.
 ಮನಸು ಇಂದ್ರಿಯಗಳಿಗೆ ಮಣಿಯಿತು. ಇಂದ್ರಿಯಗಳು ವಿಷಯ ಸುಖಕ್ಕೆ
 ಮಣಿದವು. ಬುದ್ಧಿ ವಿವೇಕ ಹೇಳಿತು. ಮನಸು ಕೇಳಲಿಲ್ಲ. ಮನಸು ಬುದ್ಧಿಯ ನಡುವೆ ಯುದ್ಧ. ಮನಸು ಇಂದ್ರಿಯದತ್ತ.
 ಬುದ್ಧಿ ಇಂದಿರೇಶನತ್ತ.
 ಮನಸು ಗೆದ್ದಿತು ಬುದ್ಧಿ ಸೋತಿತು.
 ಇಬ್ಬರ  ಹೆಂಡಂದಿರ ಜಗಳ.   ‌
ಕೂಸು ಬಡವಾಯಿತು.
 ಜೀವ ತೊಳಲಿದ. ಬಳಲಿದ.
 ಮಾಡು, ಗೂಡು, ಮಾಡಿನ ಗೂಡು ಸಿಗಲಿಲ್ಲ.  ಇದು ಗುಟ್ಟು. ಇದೆ ಅಡ್ಡಗೋಡೆ.
ಮರೆ ಮಾಡಿದ್ದು. ಜೀವ ಹೆಂಡರ ಜಗಳಕ್ಕೆ ಅಂಜಿದ. ಓಡಿ ಹೊರಟ. ಅದೇ ಅಡ್ಡಗೋಡೆ ಬಿದ್ದದ್ದು. ಗುಟ್ಟು ರಟ್ಟಾದದ್ದು.
 ಮಾಡದ ಗೂಡು ಸಿಗಲಿಲ್ಲವೆಂಬ ಸಂಗತಿ ಬಯಲಾಯಿತಲ್ಲ
 ಮತ್ತೊಂದು ಅರ್ಥ ದೇಹವೆಂಬ ಮನೆಗೆ ಗೋಡೆ ರಕ್ಷಣೆ. ಗೋಡೆ ಬಿದ್ದಿತು. ಮನೆ ಬಯಲಾಯಿತು. ಮನ ಬಯಲಾಯಿತು ಕಳ್ಳ ಕಾಕರಿಗೆ ಪ್ರವೇಶ. ಮದ ಮತ್ಸರ ಕ್ರೋಧ ಕಾಮ ಮೊದಲಾದ ಅರಿಷಡ್ ವೈರಿಗಳಿಗೆ ಸುಸ್ವಾಗತ.
 ಇವುಗಳ ಮಧ್ಯೆ ಭಕ್ತಿಗೆ,  ಭಕ್ತಿಗಮ್ಯನಿಗೆ  ಎಲ್ಲಿಯ ಸ್ಥಾನ?
ನಮ್ಮಲ್ಲಿಸ್ಥಳವಿಲ್ಲವೈ ಭಾಗವತರ ಅರಸನಿಗೆ!
 
 ಎಚ್ಚರಗೊಳ್ಳಲಿಲ್ಲ ಮನವೇ
 ಹುಚ್ಚನಾದೆನಲ್ಲ. --
 ಸಂಸಾರದ ಕಹಿ ಅನುಭವದಿಂದ ಕಲಿಯಬೇಕಾಗಿತ್ತು. ಕಲಿಯಲಿಲ್ಲ.
  ಎಚ್ಚೆತ್ತು ನಡೆಯಲಿಲ್ಲ.
ಅಚ್ಚುತನ ಮೆಚ್ಚುನಾಮದ ಹುಚ್ಚು ಹಿಡಿಯಲಿಲ್ಲ.
 ಮಡದಿ ಮನೆ ಮಕ್ಕಳು ಧನ ಕನಕ ಇವುಗಳ ಹುಚ್ಚಿನಲ್ಲೇ ಆಯುಷ್ಯ ಜಾರಿ ಹೋಯಿತು.

 ಅಚ್ಚಿನೊಳಗೆ ಮೆಚ್ಚು ಮೆಚ್ಚಿನೊಳಗೆ ಅಚ್ಚು.
  ಕಿಚ್ಚೆದ್ದು ಹೋಯಿತಲ್ಲ. |೧|

 ಸಕ್ಕರೆ ಬೊಂಬೆಯ ಅಚ್ಚು ಈ ಸಂಸಾರ ಸುಖ. ಆರಂಭದಲ್ಲಿ ಬಲು ಮಧುರ. ಈ ಅಚ್ಚನ್ನು ಮೆಚ್ಚಿ ಕೂತೆವು. ಮೆಚ್ಚಿನಲ್ಲೂ ಯಾವಾಗಲೂ ಆಕರ್ಷಕ ಅಚ್ಚೆ. ಇದು ಶಾಶ್ವತ ಎಂಬ ಭ್ರಾಂತಿ.
 ಸಂಸಾರದ ಕಷ್ಟ ಸಂಕಷ್ಟ, ದುಃಖ ಇವುಗಳ ಕಿಚ್ಚಿನಲ್ಲಿ ಮೆಚ್ಚಿದ  ಅಚ್ಚು ಕರಗಿ ಹೋಯಿತು.  

ಮುಪ್ಪುಬಂದಿತ್ತಲ್ಲ ಪಾಯಸ ತಪ್ಪದೆ
 ಉಣಲಿಲ್ಲ.-
  
 ಈ ಸಕ್ಕರೆಯ ಅಚ್ಚನ್ನು  ಮೆಚ್ಚುವುದರಲ್ಲಿ  ಹರಿನಾಮ ಸ್ಮರಣೆ ಎಂಬ ಸಾಧನೆಯ ಪಾಯಸದ ಸವಿಯನ್ನೇ ಮರೆತವು. ಕಾಲ ಕೇಳುತ್ತದೆಯೇ?  ಹೇಳದೆ ಕೇಳದೆ ಜಾರಿ ಹೋಯಿತು! ಯೌವ್ವನ ಅಡಗಿತು.
 ಮುಪ್ಪು ಅಡರಿತು.
 ರಾಮನಾಮ ಪಾಯಸ  ಉಣಲಿಲ್ಲ. ಕೃಷ್ಣನಾಮ ಸಕ್ಕರೆ ಬೆರಸಲಿಲ್ಲ. 
 ಹರಿ ನಾಮ, ಏನ್ ಸವಿ ಏನ್ ಸವಿ ಎಂದು ಬಾಯಿ ಚಪ್ಪರಿಸಲಿಲ್ಲ.
 ಆಯುಷ್ಯ ವ್ಯರ್ಥವಾಯಿತಲ್ಲ.

  ತುಪ್ಪದ ಬಿಂದಿಗೆ ತಿಪ್ಪೆ ಮೇಲೆ ದೊಪ್ಪನೆ
 ಬಿತ್ತಲ್ಲ.  |೨|

 ಬಿಂದಿಗೆ ಅಂದರೆ ಈ ಶರೀರ.
 ಸಾಧನದ ಶರೀರವಿದು, ನೀ ದಯದಿ ಕೊಟ್ಟಿದ್ದು.
 ತುಪ್ಪ ಎಂದರೆ ದಟ್ಟ ಜ್ಞಾನ ಭಕ್ತಿಯ 
 ಸಂಕೇತ. ಈ ಬಿಂದಿಗೆಯಲ್ಲಿ ತುಪ್ಪ ತುಂಬಬೇಕಾಗಿತ್ತು. ಅಂದರೆ ಜ್ಞಾನಭಕ್ತಿ ತುಂಬಿ ಹರಿಯ ಅನುಗ್ರಹ ಪಡೆದು  ವೈಕುಂಠದ ದಾರಿ ಹಿಡಿಯಬೇಕಾಗಿತ್ತು. ಆದದ್ದೇನು?
 ಏನೂ ಸಾಧಿಸಲಿಲ್ಲ. ಒಂದು ದಿನ ಈ ಶರೀರ ಭೂಮಿಗೆ ಬಿತ್ತು.
 ಸಾಧನೆ ಇಲ್ಲದೆ ಧೊಪ್ಪನೆ ಬಿತ್ತು, 
ತುಪ್ಪ ಅಮೂಲ್ಯ. ಸುಮ್ಮನೆ ತಿಪ್ಪೆಗೆ ಎಸೆದರೆ ವ್ಯರ್ಥವಲ್ಲವೇ.  ಅಂತೆ ಆಯಿತು ಈ ದೇಹದ ಗತಿ.

 ಯೋಗವು ಬಂದಿತಲ್ಲ ಬದುಕು ವಿಭಾಗವಾಯಿತಲ್ಲ.
 ಭೋಗಿಶಯನ ಶ್ರೀ ಪುರಂದರ ವಿಠಲನ 
 ಆಗ ನೆನೆಯಲಿಲ್ಲ  |೩|

 ಯೋಗ ಬಂತಲ್ಲ. 84 ಲಕ್ಷ ಯೋನಿ ದಾಟಿ ಸುಯೋಗ ಬಂತಲ್ಲ. ಸಾಧನೆಗೆ ಬಹು ಉಪಯೋಗಕರವಾದ ಈ ಶರೀರ ಕೊಟ್ಟನಲ್ಲ ಹರಿ. ಹಾನಿ ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ ಎಂದರಲ್ಲ.
ಸಂಸಾರದಲ್ಲಿ ಮುಳುಗಿ ಕಂಸಾರಿಯ ಮರೆತು, ಸುಖ ದುಃಖವೆಂದು  ಬಾಳು ಹೋಳು ಮಾಡಿಕೊಂಡೆವೆಲ್ಲ.
 ಹಾಳು ಮಾಡಿಕೊಂಡೆವಲ್ಲ. 
 ಆಗ ಶೇಷಶಯನ ಪುರಂದರ ವಿಠಲನ ನೆನೆಯಲಿಲ್ಲವಲ್ಲ.
 ಹೀಗೆ ದಾಸವರೇಣ್ಯರು  ನಾವು ಬಾಳನ್ನು ವ್ಯರ್ಥ ಹಾಳು ಮಾಡಿಕೊಂಬೋದು ನೋಡಿ ಮರಗುತ್ತಾರೆ. ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಯಿತು ಅಲ್ಲ ಎಂದುಕೊಳ್ಳುತ್ತಾರೆ ಮತ್ತೆ ಹೀಗೆಲ್ಲ ಮಾಡಬೇಡಿ ಎಂದು ಎಚ್ಚರಿಸುತ್ತಾರೆ ಆದದ್ದಾಯಿತು ಇನ್ನಾದರೂ ಸರಿ ದಾರಿ  ಹಿಡಿಯೋ ಪ್ರಾಣಿ ಎಂದು ಸದುಪದೇಶ ಕೊಡುತ್ತಾರೆ.
ದಾಸರ ಅಂತರ್ಗತ ಮುಖ್ಯಪ್ರಾಣರ ಅಂತರ್ಗತ ಪುರಂದರ ವಿಠ್ಠಲನಿಗೆ ಸಾಸಿರ ನಮನಗಳು.
 ಡಾ ವಿಜಯೇಂದ್ರ ದೇಸಾಯಿ.
***