Showing posts with label ಪಾಲಿಸಯ್ಯ ಪವನನಯ್ಯ ಪಾಲವಾರಿಧಿಶಯ್ಯ gopala vittala PAALISAYYA PAVANAYYA PAALAVAAREEDHSHAYYA. Show all posts
Showing posts with label ಪಾಲಿಸಯ್ಯ ಪವನನಯ್ಯ ಪಾಲವಾರಿಧಿಶಯ್ಯ gopala vittala PAALISAYYA PAVANAYYA PAALAVAAREEDHSHAYYA. Show all posts

Friday 13 December 2019

ಪಾಲಿಸಯ್ಯ ಪವನನಯ್ಯ ಪಾಲವಾರಿಧಿಶಯ್ಯ ankita gopala vittala PAALISAYYA PAVANAYYA PAALAVAAREEDHSHAYYA


 ರಾಗ ಬಿಲಹರಿ     ಆದಿತಾಳ 
1st Audio by Mrs. Nandini Sripad





ಶ್ರೀ ಗೋಪಾಲದಾಸರ ಕೃತಿ 


ಪಾಲಿಸಯ್ಯ ಪವನನಯ್ಯ ಪಾಲವಾರಿಧಿಶಯ್ಯ, ವೇಂಕಟರಾಯಾ ॥ ಪ॥

ಕಾಲಕಾಲಕೆ ಹೃದಯಾಲಯದೊಳು ನಿನ್ನ
ಶೀಲಮೂರುತಿ ತೋರೋ ಮೇಲು ಕರುಣದಿ ॥ ಅ. ಪ ॥

ಶ್ರೀಶ ಸಂಸಾರವೆಂಬ ಸೂಸುವ ಶರಧಿಯೊಳು
ಈಸಲಾರೆನೊ ಹರಿಯೇ ಎನ್ನಯ ಧೊರೆಯೇ
ದಾಸನೆಂತೆಂದಮ್ಯಾಲೆ ಘಾಸಿಗೊಳಿಸುವುದು
ಲೇಸು ನಿನಗಲ್ಲವಯ್ಯ, ಹೇ ಜೀಯ್ಯ
ದೋಷರಾಶಿಗಳೆಲ್ಲ ನಾಶಮಾಡಿ ವಿ -
ಶೇಷಜ್ಞಾನಭಕ್ತಿವೈರಾಗ್ಯವನಿತ್ತು
ಆಶೆಯ ಬಿಡಿಸೆನ್ನ ಮೀಸಲಮನಮಾಡಿ
ನೀ ಸುಳಿವುದು ಶ್ರೀನಿವಾಸ ಕೃಪಾಳೋ ॥ 1 ॥

ಮೂರು ಗುಣಗಳಿಂದ ಮೂರು ತಾಪಗಳಿಂದ
ಮೂರು ಅವಸ್ಥೆಯಿಂದ, ಮುಕುಂದ
ಮೂರು ಐದರಿಂದ ಮೂರು ಏಳರಿಂದ
ಮೂರಾರು ದಾರಿಕಾಣದೆ, ಮೂರಾದೆ
ಮೂರು ಹಿಡಿಸಿ ಮ್ಯಾಲೆ ಮೂರೆರಡೋಡಿಸಿ
ಮೂರು ಮೂರು ಭಕ್ತಿ ಮೂರು ಕಾಲಕೆ ಇತ್ತು
ಮೂರು ರೂಪನಾಗಿ ಮೂರು ಲೋಕವನೆಲ್ಲ
ಮೂರು ಮಾಡಿದ ಬಿಂಬಮೂರುತಿ ವಿಶ್ವ ॥ 2 ॥

ಕರುಣಾಸಾಗರ ನಿನ್ನ ಸ್ಮರಣೆಮಾತ್ರದಿ ಸಕಲ -
ದುರಿತ ಪರಿಹಾರವೆಂದು ನಾ ಬಂದು
ಮೊರೆಹೊಕ್ಕಮ್ಯಾಲಿನ್ನು ಪೊರೆಯಬೇಕಲ್ಲದೆ
ಜರಿದು ಬಿಸಾಡುವರೆ, ಮುರಾರೇ
ಮರುತಾಂತರ್ಗತ ಗೋಪಾಲವಿಠಲ ಈ
ಶರೀರ ನಿನ್ನ ಚರಣಕೊಪ್ಪಿಸಿದೆನೊ
ಸರಿಬಂದದ್ದು ಮಾಡೋ ಬಿರುದು ನಿನ್ನದು ದೇವ
ಪರಮದಯಾನಿಧೆ ಉರಗಾದ್ರಿವಾಸ ॥ 3 ॥
***

pallavi

pAlisayya pAvananayya pAlavAridhishayya vEnkaTarEya

anupallavi

kAlakAlake hrudayAlayadoLu ninna shIlamUruti tOro mElukaruNadi

caraNam 1

shrIsha samsAravembo sUsuva sharadhiyoLIsalAreno hariye E doreye
dAsanentendamyAle ghAsigoLisuvudu lEsuninagallavayya hE jIyA
dOSarAshigaLella nAshana mADisu vishEshavAda jnAna lEsubhakutinittu
Aseya biDisenna mIsalamana mADi nI suLivudu shrInivAsa krupALo

caraNam 2

mUruguNagaLinda mUrutApagaLinda mUru avastheyinda mukunda
mUru aidarinda mUru ELarinda mUrara dArigaaNade mUrAde
mUru hiDisi myAle mUreraDODisi mUrumUru bhaktiya mUrukAlake ittu
mUrurUpavAgi mUrulOkavanella mUrumADuva bimbamUruti vishva

caraNam 3

karuNAsAgara ninna smaraNemAtradi sakala durita parihAravendu nA bandu
morehokkamyAlenna poreyabEkellade jaridu dUra nUkuvaremurAre
marutAntargata gOpaalaviThala I sharIrave ninna caraNakar pisideno
saribandaddu mADo birudu ninnadu dEva paramadayAnidhe uragAdrivaasa
***

ಪಾಲಿಸಯ್ಯ ಪವನನಯ್ಯ ಪಾಲವಾರಿಧಿಶಯ್ಯ, ವೇಂಕಟರಾಯಾ ॥ ಪ॥ 
 ಕಾಲಕಾಲಕೆ ಹೃದಯಾಲಯದೊಳು ನಿನ್ನ 
 ಶೀಲಮೂರುತಿ ತೋರೋ ಮೇಲು ಕರುಣದಿ ॥ ಅ. ಪ ॥ 

 ಪವನನಯ್ಯ = ಶ್ರೀವಾಯುದೇವರ ತಂದೆ, (ಹೇ ವಿಷ್ಣೋ !); ಪಾಲವಾರಿಧಿಶಯ್ಯ = ಕ್ಷೀರಸಾಗರಶಯನ; ವೇಂಕಟರಾಯಾ = ಭಕ್ತರ ಸಕಲದುರಿತಗಳನ್ನು ದಹಿಸುವ ಮಹರಾಯ ! (ವೇಂಕಟರೇಯ ! )

 ಶೀಲಮೂರುತಿ = ಶುದ್ಧ (ಅಪ್ರಾಕೃತ - ಚಿದಾನಂದಾತ್ಮಕ) ಸ್ವರೂಪವನ್ನು; ಮೇಲುಕರುಣದಿ = ಅತಿಶಯ ದಯದಿಂದ; ( ನನ್ನ ಸಾಧನೆಯು ಅಪ್ರಯೋಜಕವಾದ್ದರಿಂದ, ನೀನೇ ಪ್ರಸನ್ನನಾಗಿ ). 

 ಶ್ರೀಶ ಸಂಸಾರವೆಂಬ ಸೂಸುವ ಶರಧಿಯೊಳು 
 ಈಸಲಾರೆನೊ ಹರಿಯೇ ಎನ್ನಯ ಧೊರೆಯೇ 
 ದಾಸನೆಂತೆಂದಮ್ಯಾಲೆ ಘಾಸಿಗೊಳಿಸುವುದು 
 ಲೇಸು ನಿನಗಲ್ಲವಯ್ಯ, ಹೇ ಜೀಯ್ಯ 
 ದೋಷರಾಶಿಗಳೆಲ್ಲ ನಾಶಮಾಡಿ ವಿ - 
 ಶೇಷಜ್ಞಾನಭಕ್ತಿವೈರಾಗ್ಯವನಿತ್ತು 
 ಆಶೆಯ ಬಿಡಿಸೆನ್ನ ಮೀಸಲಮನಮಾಡಿ 
 ನೀ ಸುಳಿವುದು ಶ್ರೀನಿವಾಸ ಕೃಪಾಳೋ ॥ 1 ॥ 

 ಸೂಸುವ = ತುಂಬಿ ಪ್ರವಹಿಸುವ; ಶರಧಿಯೊಳು = ಸಮುದ್ರದಲ್ಲಿ (ಸಂಸಾರವೆಂಬ ಪ್ರವಾಹದಲ್ಲಿ - ಸಾಗರಪ್ರವಾಹಗಳು ಅತಿಪ್ರಬಲಗಳೆಂದು ವೈಜ್ಞಾನಿಕ ಪ್ರಸಿದ್ಧಪ್ರಮೇಯವೂ ಆಗಿದೆ); ಈಸಲಾರೆನೊ = ಈಜುವ ಶಕ್ತಿಯಿಲ್ಲ; ದಾಸನೆಂತೆಂದ ಮ್ಯಾಲೆ = ನಿನ್ನ ಭಕ್ತನಾಗಿರುತ್ತಿರಲು; ಘಾಸಿಗೊಳಿಸುವುದು = ದುಃಖಪಡಿಸುವುದು; ಲೇಸು = ಒಳ್ಳೆಯದು (ಯೋಗ್ಯವಾದುದು); ನಿನಗಲ್ಲವಯ್ಯ = (ನಿನ್ನಂಥ ಕೃಪಾಮೂರ್ತಿಗೆ) ನಿನಗೆ ಸರಿಯಾದುದು ಅಲ್ಲ; ಮೀಸಲಮನ ಮಾಡಿ = (ನನ್ನ ಮನಸ್ಸನ್ನು) ನಿನಗಾಗಿಯೇ ಮಾಡಿ (ಅನ್ಯತ್ರ ಹೋಗದಂತೆ ನಿನ್ನ ಸೇವೆಯೊಳಿರುವಂತೆ ಮಾಡಿ).

 ಮೂರು ಗುಣಗಳಿಂದ ಮೂರು ತಾಪಗಳಿಂದ 
 ಮೂರು ಅವಸ್ಥೆಯಿಂದ, ಮುಕುಂದ 
 ಮೂರು ಐದರಿಂದ ಮೂರು ಏಳರಿಂದ 
 ಮೂರಾರು ದಾರಿಕಾಣದೆ, ಮೂರಾದೆ 
 ಮೂರು ಹಿಡಿಸಿ ಮ್ಯಾಲೆ ಮೂರೆರಡೋಡಿಸಿ 
 ಮೂರು ಮೂರು ಭಕ್ತಿ ಮೂರು ಕಾಲಕೆ ಇತ್ತು 
 ಮೂರು ರೂಪನಾಗಿ ಮೂರು ಲೋಕವನೆಲ್ಲ 
 ಮೂರು ಮಾಡಿದ ಬಿಂಬಮೂರುತಿ ವಿಶ್ವ ॥ 2 ॥ 

 ಮೂರು ಗುಣಗಳಿಂದ = ಸತ್ವ, ರಜ, ತಮೋಗುಣಗಳ ಪ್ರಭಾವಕ್ಕೊಳಗಾಗಿ; ಮೂರು ತಾಪಗಳಿಂದ = ಅಧಿಭೂತ, ಅಧ್ಯಾತ್ಮ, ಅಧಿದೈವಗಳೆಂಬ ದುಃಖಗಳಿಂದ; ಮೂರು ಅವಸ್ಥೆಯಿಂದ = (ಸಂಸಾರಿಜೀವರಿಗೆ ನಿನ್ನಿಂದಲೇ ಪ್ರಾಪ್ತವಾಗುವ, ತುರೀಯ - ನಾಲ್ಕನೆಯದಾದ ಮುಕ್ತ್ಯವಸ್ಥೆಯಿಂದ ಭಿನ್ನವಾದ) ಜಾಗ್ರತ, ಸ್ವಪ್ನ, ಸುಷುಪ್ತಿಗಳೆಂಬ ಅವಸ್ಥೆಗಳಲ್ಲಿ ತಿರುಗುತ್ತ; ಮೂರು ಐದರಿಂದ = ಅಷ್ಟ (ಎಂಟು) ಮದಗಳಿಂದ (ಅಥವಾ ಅಷ್ಟವಿಧಪ್ರಕೃತಿಯಿಂದ - ' ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ ' ಎಂಬಂತೆ - ಪೃಥಿವ್ಯಾದಿಪಂಚಭೂತಗಳು, ಮನಸ್ಸು, ಬುದ್ಧಿ, ಅಹಂಕಾರಗಳೆಂಬವು, ಶ್ರೀಹರಿಯ ಅಧೀನಗಳಾದ ಪ್ರಕೃತಿವಿಕಾರಗಳು); ಮೂರು ಏಳರಿಂದ = ದಶೇಂದ್ರಿಯಗಳ ಉಪಟಳದಿಂದ; ಮೂರಾರು ದಾರಿ = (ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನೆ, ದಾಸ್ಯ, ಸಖ್ಯ, ಆತ್ಮಸಮರ್ಪಣೆಗಳೆಂಬ ) ಒಂಭತ್ತು ಭಕ್ತಿಮಾರ್ಗಗಳನ್ನು ; ಕಾಣದೆ = ತಿಳಿಯದೆ; ಮೂರಾದೆ = ಭೂಸ್ವರ್ಗನರಕಗಳಲ್ಲಿ ಸುತ್ತುತ್ತಿರುವೆನು; ಮೂರು ಹಿಡಿಸಿ = ಮೂರಾದ ಯೋಗಗಳಲ್ಲಿ - ಜ್ಞಾನ, ಭಕ್ತಿ, ವೈರಾಗ್ಯಗಳಲ್ಲಿ ಹೊಂದಿಸಿ (ನನ್ನ ಯೋಗ್ಯತೆಯನ್ನರಿತ ನೀನು, ನನ್ನ ಮನಸ್ಸನ್ನು ಆ ಸನ್ಮಾರ್ಗದಲ್ಲಿ ಯೋಜನೆಮಾಡಿ); ಮೂರೆರಡೋಡಿಸಿ = ಆರು ಶತ್ರುಗಳನ್ನು ಓಡಿಸಿ (ನನ್ನನ್ನು ಪೀಡಿಸದಂತೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಆರು ಶತ್ರುಗಳನ್ನು ದೂರದಲ್ಲಿಟ್ಟು); ಮೂರು ಮೂರು ಭಕ್ತಿ ಮೂರು ಕಾಲಕೆ ಇತ್ತು = ನವವಿಧ ಭಕ್ತಿಭಾವಗಳನ್ನು ತ್ರಿಕಾಲಗಳಲ್ಲಿ (ಭೂತ, ವರ್ತಮಾನ, ಭವಿಷ್ಯತ್ಕಾಲಗಳಲ್ಲಿ - ಸದಾ; ಅಥವಾ ಪ್ರತಿದಿನದ ತ್ರಿಸಂಧ್ಯಾಕಾಲಗಳಲ್ಲಿ); ಮೂರು ರೂಪನಾಗಿ = ವಿಶ್ವ, ತೈಜಸ, ಪ್ರಾಜ್ಞಗಳೆಂಬ ಮೂರು ರೂಪಗಳಿಂದ; ಮೂರುಲೋಕವನ್ನೆಲ್ಲ = ತ್ರೈಲೋಕ್ಯವನ್ನು (ಜಗತ್ತಿನ ಸರ್ವಜೀವರನ್ನು) ; ಮೂರು ಮಾಡಿದ = ಮೂರು ಅವಸ್ಥೆ(ಸ್ವಪ್ನ, ಜಾಗ್ರತ್, ಸುಷುಪ್ತಿ )ಗಳಲ್ಲಿ ಸುತ್ತಿಸಿ (ವಿವಿಧಸುಖದುಃಖಾದಿ ಅನುಭವಗಳನ್ನೀವ) ; ಬಿಂಬಮೂರುತಿ = ಜೀವಾಂತರ್ಯಾಮಿಯಾದ ಬಿಂಬರೂಪೀಶ್ರೀಹರೇ ! ; ವಿಶ್ವ = ಹೇ ವಿಶ್ವ ! ಸರ್ವ ! ಸರ್ವಾಂತರ್ಯಾಮಿ ! ಸರ್ವತ್ರ ವ್ಯಾಪ್ತ !

 ಕರುಣಾಸಾಗರ ನಿನ್ನ ಸ್ಮರಣೆಮಾತ್ರದಿ ಸಕಲ - 
 ದುರಿತ ಪರಿಹಾರವೆಂದು ನಾ ಬಂದು 
 ಮೊರೆಹೊಕ್ಕಮ್ಯಾಲಿನ್ನು ಪೊರೆಯಬೇಕಲ್ಲದೆ 
 ಜರಿದು ಬಿಸಾಡುವರೆ, ಮುರಾರೇ 
 ಮರುತಾಂತರ್ಗತ ಗೋಪಾಲವಿಠಲ ಈ 
 ಶರೀರ ನಿನ್ನ ಚರಣಕೊಪ್ಪಿಸಿದೆನೊ 
 ಸರಿಬಂದದ್ದು ಮಾಡೋ ಬಿರುದು ನಿನ್ನದು ದೇವ 
 ಪರಮದಯಾನಿಧೆ ಉರಗಾದ್ರಿವಾಸ ॥ 3 ॥ 

 ಜರಿದು ಬಿಸಾಡುವರೆ = ಸ್ವೀಕರಿಸದೆ ತಳ್ಳುವರೇ ? (ತಿರಸ್ಕರಿಸುವುದು ಉಚಿತವಲ್ಲ); ಮುರಾರೇ = ಶ್ರೀಹರೇ ! (ಮುರನಾಮಕ ದೈತ್ಯನನ್ನು ಸಂಹರಿಸಿದ ಶ್ರೀಕೃಷ್ಣ !); ಮರುತಾಂತರ್ಗತ = ಶ್ರೀವಾಯುದೇವನ ಅಂತರ್ಯಾಮಿ; ಸರಿ ಬಂದದ್ದು = ನಿನಗೆ ಯೋಗ್ಯವೆನಿಸಿದ್ದು; ಮಾಡೋ ಬಿರುದು = ಮಾಡುವವನೆಂಬ (ಜೀವರ ಯೋಗ್ಯತೆಯನ್ನು ಬಲ್ಲವನಾದ್ದರಿಂದ) ಪ್ರಸಿದ್ಧಿಯುಳ್ಳವ (ಶಾಸ್ತ್ರದಲ್ಲಿ ಪ್ರಸಿದ್ಧನಾದ); ಉರಗಾದ್ರಿವಾಸ = ಶೇಷಾಚಲವಾಸಿ, ಶ್ರೀ ಶ್ರೀನಿವಾಸ !

 ವ್ಯಾಖ್ಯಾನ : 

 ಹರಿದಾಸರತ್ನಂ ಶ್ರೀಗೋಪಾಲದಾಸರು
***********