Showing posts with label ಚಂದ್ರಶೇಖರ ಸುಮನ ಮಹದೇವ ಸ್ತುತಿ ತತ್ತ್ವಸುವ್ವಾಲಿ jagannatha vittala CHANDRASHEKHARA SUMANA MAHADEVA STUTIH TATWA SUVVALI. Show all posts
Showing posts with label ಚಂದ್ರಶೇಖರ ಸುಮನ ಮಹದೇವ ಸ್ತುತಿ ತತ್ತ್ವಸುವ್ವಾಲಿ jagannatha vittala CHANDRASHEKHARA SUMANA MAHADEVA STUTIH TATWA SUVVALI. Show all posts

Saturday 14 December 2019

ಚಂದ್ರಶೇಖರ ಸುಮನ ಮಹದೇವ ಸ್ತುತಿ ತತ್ತ್ವಸುವ್ವಾಲಿ ankita jagannatha vittala CHANDRASHEKHARA SUMANA MAHADEVA STUTIH TATWA SUVVALI


1st Audio by Mrs. Nandini Sripad




ಶ್ರೀಜಗನ್ನಾಥದಾಸಾರ್ಯ ವಿರಚಿತ ತತ್ತ್ವಸುವ್ವಾಲಿ 

 ಶ್ರೀ ಮಹದೇವರ ಸ್ತುತಿ 

ಚಂದ್ರಶೇಖರ ಸುಮನಸೇಂದ್ರಪೂಜಿತ ಚರಣಾ-
ಹೀಂದ್ರ ಪದಯೋಗ್ಯ ವೈರಾಗ್ಯ | ವೈರಾಗ್ಯ ಪಾಲಿಸಮ-
ರೇಂದ್ರ ನಿನ್ನಡಿಗೆ ಶರಣೆಂಬೆ ॥1॥

ನಂದಿವಾಹನ ವಿಮಲ ಮಂದಾಕಿನೀಧರನೆ
ವೃಂದಾರಕೇಂದ್ರ ಗುಣಸಾಂದ್ರ | ಗುಣಸಾಂದ್ರ ಎನ್ನ ಮನ-
ಮಂದಿರದಿ ನೆಲೆಸಿ ಸುಖವೀಯೊ ॥2॥

ಕೃತ್ತಿವಾಸನೆ ನಿನ್ನ ಭೃತ್ಯಾನುಭೃತ್ಯ ಎ-
ನ್ನುತ್ತ ನೋಡಯ್ಯ ಶುಭಕಾಯ । ಶುಭಕಾಯ ಭಕ್ತರಪ-
ಮೃತ್ಯು ಪರಿಹರಿಸಿ ಸಲಹಯ್ಯ ॥3॥

ನೀಲಕಂಧರ ರುಂಡಮಾಲಿ ಮೃಗವರಪಾಣಿ
ಶೈಲಜಾರಮಣ ಶಿವರೂಪಿ | ಶಿವರೂಪಿ ಎನ್ನವರ
ಪಾಲಿಸೊ ನಿತ್ಯ ಪರಮಾಪ್ತ ॥ 4 ॥

ತ್ರಿಪುರಾರಿ ನಿತ್ಯ ಎನ್ನಪರಾಧಗಳ ನೋಡಿ
ಕುಪಿತನಾಗದಲೆ ಸಲಹಯ್ಯ | ಸಲಹಯ್ಯ ಬಿನ್ನೈಪೆ
ಕೃಪಣವತ್ಸಲನೆ ಕೃಪೆಯಿಂದ ॥ 5 ॥

ಪಂಚಾಸ್ಯ ಮನ್ಮನದ ಚಂಚಲವ ಪರಿಹರಿಸಿ
ಸಂಚಿತಾಗಾಮಿಪ್ರಾರಬ್ಧ | ಪ್ರಾರಬ್ಧ ದಾಟಸು ವಿ-
ರಿಂಚಿಸಂಭವನೆ ಕೃತಯೋಗ ॥ 6 ॥

ಮಾನುಷಾನ್ನವನುಂಡು ಜ್ಞಾನ ಶೂನ್ಯನು ಆದೆ
ಏನು ಗತಿ ಎನಗೆ ಅನುದಿನ | ಅನುದಿನದಿ ನಾ ನಿನ್ನ-
ಧೀನದವನಯ್ಯ ಪ್ರಮಥೇಶ ॥ 7 ॥

ಅಷ್ಟಮೂರ್ತ್ಯಾತ್ಮಕನೆ ವೃಷ್ಣಿ ವರ್ಯನ ಹೃದಯ-
ಧಿಷ್ಠಾನದಲ್ಲಿ ಇರದೋರು | ಇರದೋರು ನೀ ದಯಾ-
ದೃಷ್ಟಿಯಲಿ ನೋಡೊ ಮಹದೇವ ॥8॥

ಮೃಡದೇವ ಎನ್ನ ಕೈಪಿಡಿಯೊ ನಿನ್ನವನೆಂದು
ಬಡವ ನಿನ್ನಡಿಗೆ ಬಿನ್ನೈಪೆ | ಬಿನ್ನೈಪೆನೆನ್ನ ಮನ-
ದೃಢವಾಗಿ ಇರಲಿ ಹರಿಯಲ್ಲಿ ॥9॥

ಉಗ್ರತಪ ನಾ ನಿನ್ನನುಗ್ರಹದಿ ಜನಿಸಿದೆ ಪ-
ರಿಗ್ರಹಿಸಿ ಎನ್ನ ಸಂತೈಸು | ಸಂತೈಸು ಇಂದ್ರಿಯವ
ನಿಗ್ರಹಿಪ ಶಕ್ತಿ ಕರುಣೀಸೋ ॥10॥

ಭಾಗೀರಥೀಧರನೆ ಭಾಗವತಜನರ ಹೃ-
ದ್ರೋಗ ಪರಿಹರಿಸಿ ನಿನ್ನಲ್ಲಿ | ನಿನ್ನಲ್ಲಿ ಭಕ್ತಿ ಚೆ-
ನ್ನಾಗಿ ಕೊಡು ಎನಗೆ ಮರೆಯದೆ ॥11॥

ವ್ಯೋಮಕೇಶನೆ ತ್ರಿಗುಣನಾಮ ದೇವೋತ್ತಮ ಉ-
ಮಾಮನೋಹರನೆ ವಿರುಪಾಕ್ಷ | ವಿರುಪಾಕ್ಷ ಮಮ ಗುರು
ಸ್ವಾಮಿ ನೀ ಎನಗೆ ದಯವಾಗೊ ॥12॥

ಲೋಚನತ್ರಯ ನಿನ್ನ ಯಾಚಿಸುವೆ ಸಂತತವು
ಖೇಚರೇಶನ ವಹನ ಗುಣರೂಪ | ಗುಣರೂಪ ಕ್ರಿಯೆಗಳಾ-
ಲೋಚನೆಯ ಕೊಟ್ಟು ಸಲಹಯ್ಯ ॥13॥

ಮಾತಂಗಷಣ್ಮುಖರ ತಾತ ಸಂತತ ಜಗ-
ನ್ನಾಥ ವಿಠ್ಠಲನ ಮಹಿಮೆಯ | ಮಹಿಮೆಯನು ತಿಳಿಸು ಸಂ-
ಪ್ರೀತಿಯಿಂದಲೆಮಗೆ ಅಮರೇಶ ॥14॥

ಭೂತನಾಥನ ಗುಣ ಪ್ರಭಾತಕಾಲದಲೆದ್ದು
ಪ್ರೀತಿಪೂರ್ವಕದಿ ಪಠಿಸುವ | ಪಠಿಸುವರ ಶ್ರೀಜಗ-
ನ್ನಾಥವಿಟ್ಠಲ ನು ಸಲಹುವ ॥15॥
**********

ವ್ಯಾಖ್ಯಾನ : 

ಕೀರ್ತಿಶೇಷ ಮಾಧ್ವಭೂಷಣ ದಿ॥ ಶ್ರೀ ಬಿ. ಭೀಮರಾವ್ , ದಾವಣಗೆರೆ.

ಶ್ರೀಜಗನ್ನಾಥದಾಸಾರ್ಯ ವಿರಚಿತ 

ತತ್ತ್ವಸುವ್ವಾಲಿ

ಶ್ರೀ ಮಹದೇವರ ಸ್ತುತಿ

ಚಂದ್ರಶೇಖರ ಸುಮನಸೇಂದ್ರಪೂಜಿತಚರಣಾ -
ಹೀಂದ್ರ ಪದಯೋಗ್ಯ ವೈರಾಗ್ಯ । ವೈರಾಗ್ಯಪಾಲಿಸಮ -
ರೇಂದ್ರ ನಿನ್ನಡಿಗೆ ಶರಣೆಂಬೆ ॥ 1 ॥ ॥ 37 ॥

ಅರ್ಥ : ಚಂದ್ರಶೇಖರ = ಹೇ ಚಂದ್ರಚೂಡ ! ಸುಮನಸೇಂದ್ರಪೂಜಿತಚರಣ = ದೇವೇಂದ್ರನಿಂದ ಸೇವಿಸಲ್ಪಡುವ ಪಾದವುಳ್ಳವನೂ , ಅಹೀಂದ್ರ ಪದಯೋಗ್ಯ = ಶೇಷಪದಾರ್ಹನೂ ಆದ ನೀನು , ವೈರಾಗ್ಯ = ವೈರಾಗ್ಯವನ್ನು , ಪಾಲಿಸು = ಅನುಗ್ರಹಿಸಿ (ನನ್ನನ್ನು) ರಕ್ಷಿಸು ; ಅಮರೇಂದ್ರ = ಹೇ ದೇವಶ್ರೇಷ್ಠ ! ನಿನ್ನಡಿಗೆ = ನಿನ್ನ ಪಾದಗಳಿಗೆ , ಶರಣೆಂಬೆ = ನಮಸ್ಕರಿಸುವೆನು (ನಿನ್ನ ಪಾದಗಳನ್ನೇ ಆಶ್ರಯಿಸಿರುವೆನೆಂದು ವಿಜ್ಞಾಪಿಸಿಕೊಳ್ಳುತ್ತೇನೆ ).

ವಿಶೇಷಾಂಶ : (1) ' ಅಮರೇಂದ್ರ ' ಎಂಬುದಕ್ಕೆ ಉತ್ತಮವಾದ ಭಾರತೀ-ವಾಯು , ಸರಸ್ವತೀ-ಬ್ರಹ್ಮರನ್ನು ಬಿಟ್ಟು , ತಮಗಿಂತ ಕೆಳಗಿನವರಾದ ಇತರ ದೇವತೆಗಳಿಗಿಂತ ಮಹದೇವರು ಶ್ರೇಷ್ಠರೆಂದು ತಿಳಿಯಬೇಕು. ಹೀಗೆಯೇ ' ಸುಮನಸೇಂದ್ರ ' - ತನಗಿಂತ ' ಅವರ 'ರಾದ ದೇವತೆಗಳಿಗಿಂತ ದೇವೇಂದ್ರನು ಉತ್ತಮನೆಂಬರ್ಥವನ್ನೇ ತಿಳಿಯಬೇಕು.

(2) ತತ್ತ್ವಗಳು ೨೪ . ಅವು ಯಾವುವೆಂದರೆ : ಪೃಥ್ವೀ , ಜಲ , ಅಗ್ನಿ , ವಾಯು , ಆಕಾಶಗಳೆಂಬ ಪಂಚಮಹಾಭೂತಗಳು ; ಗಂಧ , ರಸ , ರೂಪ , ಸ್ಪರ್ಶ , ಶಬ್ದಗಳೆಂಬ ಪಂಚ ತನ್ಮಾತ್ರೆಗಳು ; ಹಸ್ತ , ಪಾದ , ವಾಕ್ , ಪಾಯು (ಗುದ), ಉಪಸ್ಥ (ಗುಹ್ಯ) ಗಳೆಂಬ ಪಂಚ ಕರ್ಮೇಂದ್ರಿಯಗಳು ; ಚಕ್ಷು , ಶ್ರೋತ್ರ , ತ್ವಕ್ , ಘ್ರಾಣ , ರಸನ (ಜಿಹ್ವೆ)ಗಳೆಂಬ ಪಂಚ ಜ್ಞಾನೇಂದ್ರಿಯಗಳು ; ಮನಸ್ಸು , ಅಹಂಕಾರ , ಮಹತ್ , ಮತ್ತು ಅವ್ಯಕ್ತಗಳೆಂಬ ಈ ನಾಲ್ಕು ; ಹೀಗೆ ಒಟ್ಟು ೨೪. ಇವುಗಳಿಂದ ನಿರ್ಮಿತವಾದ ದೇಹಗತರಾದ ಜೀವರು ಮತ್ತು ಪರಮಾತ್ಮನೂ ಸೇರಿ ದೇಹದಲ್ಲಿ ೨೬ ತತ್ತ್ವಗಳಿರುವುವು . ಇವುಗಳಲ್ಲಿ ಪರಮಾತ್ಮನೇ ಸ್ವತಂತ್ರನು ; ಉಳಿದೆಲ್ಲ ತತ್ತ್ವಗಳಿಗೂ ಅಭಿಮಾನಿದೇವತೆಗಳಿರುವರು. ಎಲ್ಲರೂ ಪರಮಾತ್ಮನ ಅಧೀನರಾಗಿಯೇ ತಮ್ಮಿಂದ ಅಭಿಮನ್ಯವಾದ ತತ್ತ್ವಗಳಿಗೆ ನಿಯಾಮಕರಾಗಿರುವರು. ಹಾಗೂ ಉಕ್ತವಾದ ಕ್ರಮದಿಂದ , ಮೇಲೆ ಮೇಲಿನ ತತ್ತ್ವಗಳ ಅಭಿಮಾನಿಗಳೆಲ್ಲರೂ , ಕೆಳಗಿನ (ಮೊದಲಿನ) ಎಲ್ಲ ತತ್ತ್ವಗಳಿಗೂ ನಿಯಾಮಕರೇ ಆಗಿರುವರು - ಆ ತತ್ತ್ವಗಳ ಅಭಿಮಾನಿಗಳೂ ಸಹ ಅವರಿಂದ ನಿಯಮ್ಯರೇ. ಉತ್ತಮರ ದೇಹಗಳಲ್ಲಿ ಕೆಳಗಿನ ತತ್ತ್ವಾಭಿಮಾನಿಗಳು ಆಜ್ಞಾಧಾರಕರಾಗಿರುವರಲ್ಲದೇ ನಿಯಾಮಕರಾಗಿ ಅಲ್ಲ.

ವಿಶೇಷಾಂಶ : (3) ಮಹದೇವ , ರುದ್ರ , ಶಿವ , ಪರಮೇಶ್ವರ ಈ ಮೊದಲಾದ ನಾಮಗಳು ಅಹಂಕಾರತತ್ತ್ವದ ಅಭಿಮಾನಿ ದೇವತೆಯ ನಾಮಗಳು. ಅಹಂಕಾರತತ್ತ್ವವು ವೈಕಾರಿಕ , ತೈಜಸ , ತಾಮಸಗಳೆಂಬ ಮೂರು ಪ್ರಭೇದಗಳುಳ್ಳದ್ದು. ವೈಕಾರಿಕದಿಂದ ಮನಸ್ಸು ಮತ್ತು ತತ್ತ್ವಾಭಿಮಾನಿ ದೇವತೆಗಳೂ (ಇಂದ್ರಾದಿಗಳ ಸೂಕ್ಷ್ಮದೇಹಗಳೂ) , ಭೂತಗಳೂ ಉತ್ಪನ್ನವಾಗಿವೆ. ಹೀಗಿರುವುದರಿಂದ ವೈಕಾರಿಕದಿಂದ ಹುಟ್ಟಿದ ಮನಸ್ತತ್ತ್ವಕ್ಕೂ ರುದ್ರದೇವರು ಅಭಿಮಾನಿಗಳು - ನಿಯಾಮಕರು. ಗರುಡ - ಶೇಷರೂ ಅಹಂಕಾರತತ್ತ್ವದ ಅಭಿಮಾನಿಗಳೇ. ಗರುಡ , ಶೇಷ , ರುದ್ರ ಸಮರು. ಸ್ವರೂಪಯೋಗ್ಯತೆಯಿಂದ ರುದ್ರದೇವರು , ಶೇಷದೇವರಿಂದ ಸಮರಾದರೂ ಪದನಿಮಿತ್ತವಾದ ಅಲ್ಪನ್ಯೂನತೆಯುಳ್ಳವರು. ವಾಯುದೇವರು ಬ್ರಹ್ಮಸಮರಾದರೂ ಪದದಿಂದ (ಅಧಿಕಾರಸ್ಥಾನ) ಕಿಂಚಿನ್ನ್ಯೂನರು. ಬ್ರಹ್ಮಪದವಿಗೆ ಬಂದು ನಂತರ ಮುಕ್ತರಾಗುವರು. ಇದರಂತೆ ರುದ್ರದೇವರು ಶೇಷಪದವಿಯಿಂದಲೇ ಮುಕ್ತರಾಗುವರು. 

(4) ಇಂದ್ರಿಯಗಳಿಂದ ವಿಷಯಗಳನ್ನು ಭೋಗಿಸಬೇಕೆಂಬ ಇಚ್ಛೆಯೂ , ತಜ್ಜನ್ಯ ಸುಖವೇ ಪುರುಷಾರ್ಥವೆಂದು ಭ್ರಮಿಸಿ , ವಿಷಯಭೋಗದಲ್ಲಿ ಆಸಕ್ತರಾಗುವುದೂ ' ರಾಗ ' ವೆನಿಸುತ್ತದೆ . ರಾಗವಿಲ್ಲದಿರುವುದೇ ವೈರಾಗ್ಯವು. ರಾಗಕ್ಕೆ ಮನಸ್ಸೇ ಆಶ್ರಯ ಸ್ಥಾನವು. ಮನೋನಿಯಾಮಕರೇ ರಾಗವನ್ನು ಹೊರಪಡಿಸಿ , ವೈರಾಗ್ಯವನ್ನು ಕೊಡಬೇಕು. ಆದ್ದರಿಂದ , ಮಹದೇವರೇ ವೈರಾಗ್ಯವನ್ನು ಕರುಣಿಸಬೇಕು - ಅದಕ್ಕಾಗಿ ಅವರನ್ನೇ ಪ್ರಾರ್ಥಿಸಬೇಕು.

ನಂದಿವಾಹನ ವಿಮಲಮಂದಾಕಿನೀಧರನೆ
ವೃಂದಾರಕೇಂದ್ರ ಗುಣಸಾಂದ್ರ । ಗುಣಸಾಂದ್ರ ಎನ್ನ ಮನಮಂದಿರದಿ ನೆಲೆಸಿ ಸುಖವೀಯೋ ॥ 2 ॥ ॥ 38 ॥

ಅರ್ಥ : ನಂದಿವಾಹನ = ವೃಷಭವೇ ವಾಹನವಾಗಿ ಉಳ್ಳ , ವಿಮಲ ಮಂದಾಕಿನೀಧರನೆ = ಪಾವನಳಾದ ಗಂಗೆಯನ್ನು (ಶಿರದಲ್ಲಿ) ಧರಿಸಿರುವ , ವೃಂದಾರಕೇಂದ್ರ = ದೇವಶ್ರೇಷ್ಠನಾದ , ಗುಣಸಾಂದ್ರ = ಗುಣನಿಧಿಯಾದ ಹೇ ಮಹದೇವ ! ಎನ್ನ = ನನ್ನ , ಮನಮಂದಿರದಿ = ಮನಸ್ಸೆಂಬ ಗೃಹದಲ್ಲಿ , ನೆಲೆಸಿ = ಇದ್ದು (ಅನುಗ್ರಹ ಮಾಡುತ್ತಲಿದ್ದು) , ಸುಖವೀಯೋ = ಸುಖವನ್ನು ಕೊಡು.

ವಿಶೇಷಾಂಶ : ತತ್ತ್ವಗಳ ಅಭಿಮಾನಿಗಳು , ಅವಾಂತರ ಅಭಿಮಾನಿಗಳು , ಅವರ ನಾಮ ಮತ್ತು ಮಹಾತ್ಮ್ಯೆಗಳನ್ನು ಗುರೂಪದೇಶದಿಂದ ತಿಳಿಯಬೇಕು.ಅಪಾರ ಮಹಿಮರಾದ ತತ್ತ್ವಾಭಿಮಾನಿಗಳ ಮಧ್ಯದಲ್ಲಿ ರುದ್ರದೇವರು ಮೇಲಿನ ಋಜುಗಣದ ಬ್ರಹ್ಮ - ವಾಯು ಮತ್ತು ಅವರ ಭಾರ್ಯೆಯರನ್ನು ಬಿಟ್ಟರೆ , ಎಲ್ಲರಿಗಿಂತ ಶ್ರೇಷ್ಠರು. 

ನಿಸ್ಸೀಮಾಷ್ಟಮಹಾಸಿದ್ಧಿಸಂಪೂರ್ಣಾಃ ಸರ್ವದೈವತು ।
ಅತಃ ಪೂರ್ಣಗುಣಾಃ ಸರ್ವೇ ನಿಸ್ಸೀಮಾನಂದಭೋಜನಃ ।
ಈಶ್ವರಾಚಿಂತ್ಯಶಕ್ತೈವ ವಿಭಕ್ತಾಂಶೈರನಂತಕೈಃ ।
ಪ್ರೇರಕಾಃ ಸರ್ವಜೀವಾನಾಂ ಸ್ವೋತ್ತಮೈಃ ಪ್ರೇರಿತಾಃ ಸದಾ ॥ 
- (ಸತ್ತತ್ತ್ವರತ್ನಮಾಲಾ) ಎಂಬ ವಾಕ್ಯಗಳು ಅಲ್ಪಾಧಿಕಾರಿಗಳ ಕಲ್ಪನೆಗೆ ನಿಲುಕದಷ್ಟು ಅಪರಿಮಿತ ಅಣಿಮಾದಿ ಅಷ್ಟಸಿದ್ಧಿಗಳಿಂದ ತತ್ತ್ವಾಭಿಮಾನಿ ದೇವತೆಗಳು ಪೂರ್ಣರಾಗಿದ್ದಾರೆ. ಇದರಿಂದ ಈ ಎಲ್ಲರೂ ಗುಣಪೂರ್ಣರೆಂದೂ , ಅಪರಿಮಿತವಾದ ಆನಂದಭೋಗವುಳ್ಳವರೆಂದೂ ಹೇಳಲ್ಪಡುವರು. ಶ್ರೀಹರಿಯ ಅಚಿಂತ್ಯ ಶಕ್ತಿಯಿಂದ ಈ ದೇವತೆಗಳು ಅನಂತ ಅಂಶಗಳಿಂದ ವಿಭಕ್ತರಾಗಿ , ಸ್ವೋತ್ತಮರ ಪ್ರೇರಣಾನುಸಾರವಾಗಿ ಸರ್ವಜೀವರ ದೇಹಗಳಲ್ಲಿದ್ದು ಪ್ರೇರಕರಾಗಿರುವರು. 
ಅಕ್ಷೀಣಪೂರ್ಣವಿಜ್ಞಾನಾಃ ಸತ್ಯಕಾಮಾಶ್ಚ ಸರ್ವಶಃ ।
ಸರ್ವಾತ್ತಾರಶ್ಚ ತೇ ದೇವಾಃ............' (ಸತ್ತತ್ತ್ವರತ್ನಮಾಲಾ)
- ಎಂದು , ಇವರು ಸರ್ವಪ್ರಾಣಿಗಳ ದೇಹಗಳಲ್ಲಿದ್ದು ಶುಭ ಸರ್ವಸ್ವಭೋಕ್ತೃಗಳಾದ್ದರಿಂದ ಅಚಿಂತ್ಯಮಹಿಮೋಪೇತರೆಂದು ವರ್ಣಿತರಾಗಿದ್ದಾರೆ.

ಕೃತ್ತಿವಾಸನೆ ನಿನ್ನ ಭೃತ್ಯಾನುಭೃತ್ಯ ಎ -
ನ್ನುತ್ತ ನೋಡಯ್ಯ ಶುಭಕಾಯ । ಶುಭಕಾಯ ಭಕ್ತರಪ -
ಮೃತ್ಯು ಪರಿಹರಿಸಿ ಸಲಹಯ್ಯ ॥ 3 ॥ ॥ 39 ॥

ಅರ್ಥ : ಕೃತ್ತಿವಾಸನೆ = ಗಜಚರ್ಮ , ವ್ಯಾಘ್ರಚರ್ಮಗಳೇ ವಸ್ತ್ರಗಳಾಗುಳ್ಳ , ಹೇ ಮಹದೇವ ! ನಿನ್ನ ಭೃತ್ಯಾನುಭೃತ್ಯ = ನಿನ್ನ ದಾಸಾನುದಾಸ , ಎನ್ನುತ್ತ = ಎಂದು , ನೋಡಯ್ಯ = ಕೃಪೆಯಿಂದ ನೋಡು , ದೇವ! ಶುಭಕಾಯ = ಹೇ ಮಂಗಳಾಂಗ ! ಭಕ್ತರ = ನಿನ್ನ ಭಕ್ತರ , ಅಪಮೃತ್ಯುವನ್ನು , ಪರಿಹರಿಸಿ = ತಪ್ಪಿಸಿ , ಸಲಹಯ್ಯ = ರಕ್ಷಿಸು.

ವಿಶೇಷಾಂಶ :(1) ಉಡಲು , ಹೊದಿಯಲು ಎರಡು ವಸ್ತ್ರಗಳನ್ನು ಉಪಯೋಗಿಸಬೇಕೆಂಬ ನಿಯಮವಿದೆ. ಮಹದೇವರು ಉಟ್ಟಿರುವುದು ವ್ಯಾಘ್ರಚರ್ಮ , ಹೊದ್ದಿರುವುದು ಗಜಚರ್ಮವೆಂದು ಭಾಗವತದಲ್ಲಿ ಹೇಳಿದೆ.

(2) ಅಪಮೃತ್ಯುವೆಂಬುದು ಅಕಾಲಮೃತ್ಯುವು. ಪೂರ್ವಕರ್ಮಪ್ರಭಾವದಿಂದ ಅನುಭವಿಸಲು ಅವಕಾಶವಿರುವ ದೀರ್ಘಕಾಲದ ಆಯುಷ್ಯವನ್ನು ಪೂರ್ಣಗೊಳಿಸಲು ಪ್ರತಿಬಂಧಕವಾಗಿ ಮಧ್ಯದಲ್ಲಿ ಮರಣವನ್ನುಂಟುಮಾಡುವ ಸಾಮರ್ಥ್ಯವುಳ್ಳ ಅದೃಷ್ಟವಿಶೇಷವು ಅಪಮೃತ್ಯುವಿಗೆ ಕಾರಣ. ಅದನ್ನು ಯೋಗ್ಯಸಾಧನೆಗಳಿಂದ ಪರಿಹರಿಸಿಕೊಳ್ಳುವುದು ಶಕ್ಯ. ಅಪಮೃತ್ಯುಪರಿಹಾರಕ ಸಾಧನಗಳು ಐತರೇಯ ಉಪನಿಷತ್ತಿನಲ್ಲಿ ಹೇಳಲ್ಪಟ್ಟಿವೆ. ಅಪಮೃತ್ಯುಸೂಚಕಗಳಾದ ದುರ್ನಿಮಿತ್ತಗಳನ್ನೂ ಅಲ್ಲಿ ವರ್ಣಿಸಲಾಗಿದೆ. ಉಪವಾಸ ಮಾಡಿ , ಸ್ಥಾಲೀಪಾಕಕ್ರಮದಿಂದ ಪಾಯಸವನ್ನು ಮಾಡಿ , ರಾತ್ರೀಸೂಕ್ತದ ಪ್ರತಿಮಂತ್ರದಿಂದ ಅಗ್ನಿಯಲ್ಲಿ ಹೋಮಮಾಡಿ , ಬೇರೆಯಾಗಿ ಸಿದ್ಧಗೊಳಿಸಿದ ಅನ್ನದಿಂದ ಬ್ರಾಹ್ಮಣರಿಗೆ ಭೋಜನ ಮಾಡಿಸಿ , ಆ ಹವಿಶ್ಶೇಷವನ್ನು ತಾನು ಭೋಜನ ಮಾಡಬೇಕು. ರಾತ್ರೀಸೂಕ್ತಕ್ಕೆ ವಿಷ್ಣುಸಹಿತಳಾದ ದುರ್ಗಾರೂಪಳಾದ ಶ್ರೀಲಕ್ಷ್ಮೀದೇವಿಯು , ದೇವತೆ. ಕಾಲಮೃತ್ಯುವೇ (ನಿಯತವಾದ ಮರಣಕಾಲ) ಬಂದಿದ್ದರೆ ತನ್ನ ಅಂತರ್ಗತ ರಾತ್ರೀನಾಮಕ ಭಗವಂತನನ್ನು ತೃಪ್ತಿಗೊಳಿಸಿದ ಭಕ್ತನನ್ನು ಉತ್ತಮಲೋಕಗಳನ್ನು ಮುಟ್ಟಿಸುವಳು.

ನೀಲಕಂಧರ ರುಂಡಮಾಲಿ ಮೃಗವರಪಾಣಿ
ಶೈಲಜಾರಮಣ ಶಿವರೂಪಿ । ಶಿವರೂಪಿ ಎನ್ನವರ
ಪಾಲಿಸೋ ನಿತ್ಯ ಪರಮಾಪ್ತ ॥ 4 ॥ ॥40॥

ಅರ್ಥ : ನೀಲಕಂಧರ = ನೀಲಕಂಠನೂ , ರುಂಡಮಾಲಿ = ರುಂಡಗಳ (ಕಬಂಧ ಅಥವಾ ಮುಂಡದಿಂದ ಬೇರ್ಪಡಿಸಿದ ತಲೆ) ಸರವನ್ನು ಕೊರಳಲ್ಲಿ ಧರಿಸುವವನೂ , ಮೃಗವರಪಾಣಿ = ಉತ್ತಮ ಜಿಂಕೆಯನ್ನು ಕೈಯಲ್ಲುಳ್ಳವನೂ , ಶೈಲಜಾರಮಣ = ಹೇ ಪಾರ್ವತೀರಮಣ! ಶಿವರೂಪಿ = ಮಂಗಳ ಸ್ವರೂಪನೂ , ಪರಮಾಪ್ತ = ಶ್ರೀಹರಿ ಪ್ರಿಯನೂ , ಆದ ನೀನು , ನಿತ್ಯ = ಸದಾ , ಎನ್ನವರ = ನನ್ನ ಬಂಧುವರ್ಗವನ್ನೂ (ಹರಿಭಕ್ತಸಮೂಹವನ್ನು) , ಪಾಲಿಸೋ = ರಕ್ಷಿಸು.

ವಿಶೇಷಾಂಶ : ಕಪಾಲ , ರುಂಡಮಾಲೆಗಳುಳ್ಳವನೂ , ಸ್ಮಶಾನವಾಸಿಯೂ ಆದ್ದರಿಂದ ಅಮಂಗಳನೆಂದು ತಿಳಿಯದಿರಲೂ 'ಶಿವರೂಪಿ ' ಎಂದಿರುವರು. 
' ಈಶ್ವರಾತ್ ಜ್ಞಾನಮನ್ವಿಚ್ಛೇತ್ , ಮೋಕ್ಷಮಿಚ್ಛೇತ್ ಜನಾರ್ದನಾತ್ ' , ಎಂಬ ಪ್ರಮಾಣವಾಕ್ಯದಿಂದ , ಜ್ಞಾನದಾನದಿಂದ ಭಗವದ್ಭಕ್ತರನ್ನುದ್ಧರಿಸುವ ವೈಷ್ಣವಾಗ್ರೇಸರರೆಂದು ತಿಳಿದುಬರುತ್ತದೆ . ಹರಿದ್ವೇಷಿಗಳಿಗೆ ಉಗ್ರರೂಪದಿಂದ ವಿನಾಶಪ್ರದರು (ತ್ರಿಪುರಾಸುರರೇ ಮುಂತಾದ ಅನೇಕರಂತೆ) . ಹರಿಭಕ್ತರಿಗೆ ಸೌಮ್ಯರೂಪದಿಂದ ಮಂಗಳಪ್ರದರು. ಯಮಧರ್ಮರಾಜನು (ಯಮ = ಉಗ್ರ , ಧರ್ಮ = ಸೌಮ್ಯ ) ಉಗ್ರ ಮತ್ತು ಸೌಮ್ಯರೂಪಗಳಿಂದ , ಪಾಪಿಗಳು ಮತ್ತು ಭಗವದ್ಭಕ್ತರೊಂದಿಗೆ ವ್ಯವಹರಿಸುವಂತೆ!

ತ್ರಿಪುರಾರಿ ನಿತ್ಯ ಎನ್ನಪರಾಧಗಳ ನೋಡಿ
ಕುಪಿತನಾಗದಲೆ ಸಲಹಯ್ಯ । ಸಲಹಯ್ಯ ಬಿನ್ನೈಪೆ 
ಕೃಪಣವತ್ಸಲನೆ ಕೃಪೆಯಿಂದ ॥ 5 ॥ ॥ 41 ॥

ಅರ್ಥ : ತ್ರಿಪುರಾರಿ = ತ್ರಿಪುರಾಸುರರ ಶತ್ರುವಾದ ಹೇ ಮಹದೇವ ! ಎನ್ನ = ನನ್ನ , ನಿತ್ಯ = ನಿತ್ಯದ (ನಿತ್ಯವೂ ಸಂಭವಿಸುವ) , ಅಪರಾಧಗಳ = ಅಪರಾಧಗಳನ್ನು , ನೋಡಿ = ಕಂಡು , ಕುಪಿತನಾಗದೆ = ಕೋಪಗೊಳ್ಳದೆ , ಕೃಪೆಯಿಂದ = ದಯದಿಂದ ಸಲಹಯ್ಯ = ರಕ್ಷಿಸು , ಕೃಪಣವತ್ಸಲನೆ = ದೀನಬಂಧುವೆ ! ಬಿನ್ನೈಪೆ = ಬೇಡಿಕೊಳ್ಳುವೆನು.

ವಿಶೇಷಾಂಶ : ' ಕೃಪಣೋ ಯೋऽಜಿತೇಂದ್ರಿಯಃ ' (ಭಾಗವತ) ಎಂದು ಹೇಳಿದಂತೆ ಕೃಪಣರೆಂದರೆ ಇಂದ್ರಿಯನಿಗ್ರಹವಿಲ್ಲದವರು . ಮನಸ್ಸಿನ 'ರಾಗ' ರೂಪದ ಮಲವು ತೊಲಗಿದರೆ ಇಂದ್ರಿಯಗಳು ವಶವಾಗುತ್ತವೆ. ಹಾಗಿಲ್ಲದಿದ್ದರೆ ವಿಷಯಗಳ ಕಡೆಗೆ ಹಾತೊರೆಯುತ್ತವೆ. ವಿಷಯಾಸಕ್ತರೇ ದೀನರು. ಅವರಿಗಾಗಿ ಜ್ಞಾನಿಗಳು ಮರುಗುತ್ತಾರೆ. ಹೀಗೆ ಕನಿಕರ ಪಡುವವರಲ್ಲಿ ಮನೋನಿಯಾಮಕರಾದ ಮಹದೇವರು ಶ್ರೇಷ್ಠರು. ಆದ್ದರಿಂದ ಅವರನ್ನು ಪ್ರಾರ್ಥಿಸಬೇಕೆನ್ನುತ್ತಾರೆ. ಇಂದ್ರಿಯನಿಗ್ರಹವುಳ್ಳವರಿಂದ ಅಪರಾಧಗಳು ಸಂಘಟಿಸುವುದು ಅಸಂಭವ .

ಪಂಚಾಸ್ಯ ಮನ್ಮನದ ಚಂಚಲವ ಪರಿಹರಿಸಿ
ಸಂಚಿತಾಗಾಮಿಪ್ರಾರಬ್ಧ । ಪ್ರಾರಬ್ಧ ದಾಟಿಸು ವಿ -
ರಿಂಚಿಸಂಭವನೆ ಕೃತಯೋಗ ॥ 6 ॥ ॥ 42 ॥

ಅರ್ಥ : ಪಂಚಾಸ್ಯ = ಪಂಚಮುಖನಾದ , ವಿರಿಂಚಿಸಂಭವನೆ = ಹೇ ಬ್ರಹ್ಮಪುತ್ರನಾದ ಮಹದೇವ , ಮನ್ಮನದ = ನನ್ನ ಮನಸ್ಸಿನ , ಚಂಚಲವ = ಚಾಂಚಲ್ಯವನ್ನು , ಪರಿಹರಿಸಿ = ಹೋಖಲಾಡಿಸಿ ( ಸ್ಥಿರಚಿತ್ತನಾಗುವಂತೆ ಅನುಗ್ರಹಿಸಿ ) , ಕೃತಯೋಗ = ಯೋಗಸಿದ್ಧಿಯುಳ್ಳ ನೀನು , ಸಂಚಿತಾಗಾಮಿ ಪ್ರಾರಬ್ಧ = ಸಂಚಿತ , ಆಗಾಮಿ , ಪ್ರಾರಬ್ಧಗಳೆಂಬ ಕರ್ಮಬಂಧದಿಂದ , ದಾಟಿಸು = ಕಡೆಹಾಯಿಸು (ಮುಕ್ತನನ್ನಾಗಿ ಮಾಡು).

ವಿಶೇಷಾಂಶ : (1) ಬ್ರಹ್ಮನು ಮೊದಲಿಗೆ ಐದು ಮುಖವುಳ್ಳವನಾಗಿದ್ದನು. ' ಬ್ರಹ್ಮದ್ವಿಷೇ ಶರವೇ ಹಂತ ವಾ ಉ ' (ಅಂಭ್ರಣೀಸೂಕ್ತ) ಎಂಬಲ್ಲಿ ದುರ್ಗಾರೂಪಳಾದ ಲಕ್ಷ್ಮೀದೇವಿಯು ಪ್ರಳಯಕಾಲದಲ್ಲಿ , ಬ್ರಹ್ಮನ ಐದನೇ ಶಿರಸ್ಸನ್ನು ಕತ್ತರಿಸಿದ ಹಿಂಸಕನಾದ ರುದ್ರನ ಸಂಹಾರಕ್ಕಾಗಿಯೇ ಧನುಸ್ಸನ್ನು ಪ್ರಸರಿಸಿದಳೆಂದು ಹೇಳಿ , ಲಕ್ಷ್ಮೀದೇವಿಯು ಬ್ರಹ್ಮರುದ್ರರ ಸೃಷ್ಟಿಸಂಹಾರಕರ್ತಳೆಂದು ಆಕೆಯ ಮಹಿಮೆಯು ನಿರೂಪಿಸಲ್ಪಟ್ಟಿದೆ. ರುದ್ರನು ಬ್ರಹ್ಮದ್ವೇಷಿಯಲ್ಲ - ಹಿಂಸಕನೂ ಅಲ್ಲ . ಈ ವಿಶೇಷಣಗಳು ದೋಷಸ್ಪರ್ಶವುಳ್ಳವನೆಂಬುದನ್ನು ಮಾತ್ರ ಸೂಚಿಸುತ್ತದೆ - ಅದೂ ಸಹ , ಕಾಲವಿಶೇಷಗಳಲ್ಲಿ ಮಾತ್ರವೆಂದು ತಿಳಿಯಬೇಕು. 

(2) ತನ್ನ ಮಾನಸಪುತ್ರರಾದ ಸನಂದಾದಿಗಳು ತನ್ನ ಅಪ್ಪಣೆಯಂತೆ ಪ್ರಜಾಭಿವೃದ್ಧಿ ಕಾರ್ಯದಲ್ಲಿ ತೊಡಗದೆ ವಿರಕ್ತರಾಗಲು , ಬ್ರಹ್ಮನು ಕೋಪಗೊಂಡನು. ಆಗ ಲಲಾಟ (ಹಣೆ)ದಿಂದ ಮಹದೇವನು ಉತ್ಪನ್ನನಾದನು.

(3) ಮನೋಭಿಮಾನಿಯಾದ್ದರಿಂದ ಮನೋಜಯವನ್ನು ಕರುಣಿಸಲು , ರುದ್ರದೇವನು ಸಮರ್ಥನು . ವೈರಾಗ್ಯದಿಂದ ಮನಸ್ಸು ನಿಶ್ಚಂಚಲವಾಗಿ ಧ್ಯಾನಕ್ಕೆ ಸಿದ್ಧವಾಗುತ್ತದೆ. ಧ್ಯಾನದ ಸಿದ್ಧಿಯೇ ಅಪರೋಕ್ಷವು. 

(4) ವೈರಾಗ್ಯವು ನಿಷ್ಕಾಮಕರ್ಮಾಚರಣೆಗೆ ಅತ್ಯವಶ್ಯಕ. ಕಾಮಸಂಕಲ್ಪವರ್ಜಿತ ಕರ್ಮಗಳು ಲೇಪಿಸುವುದಿಲ್ಲ. ಲೇಪವೆಂದರೆ ಕರ್ಮದಿಂದ ಹುಟ್ಟುವ ಸುಖದುಃಖಪ್ರಾಪಕವಾದ ಅದೃಷ್ಟದ ಸಂಬಂಧವಾಗುವುದು. ಕರ್ಮಗಳು ಮೂರು ವಿಧ - ಸಂಚಿತ , ಪ್ರಾರಬ್ಧ ಮತ್ತು ಆಗಾಮಿಗಳೆಂದು . ಈವರೆಗೆ ಹಿಂದೆ ಆಚರಿಸಲಾದ (ಜನ್ಮಾಂತರಗಳಲ್ಲಿ ಸಹ) ಕರ್ಮಗಳು ಸಂಚಿತವೆಂದೆನಿಸುವುವು. ಇವುಗಳ ಪರ್ವತಾಕಾರದ ರಾಶಿಯೇ ಪ್ರತಿಯೊಬ್ಬನ ಬೆನ್ನ ಹಿಂದೆ ಇದೆ. ಅದರಲ್ಲಿ ಯಾವ ಕರ್ಮದ ಅದೃಷ್ಟಫಲವನ್ನು ಈಗ ಅನುಭವಿಸಲು ಆರಂಭ ಮಾಡಿರುವೆವೋ ಅದು ' ಪ್ರಾರಬ್ಧ ' ವು. ಮುಂದೆ ಸಂಭವಿಸುವ ಕರ್ಮಗಳು ' ಆಗಾಮಿ ' . 
' ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ಕುರುತೇऽರ್ಜುನ ' - (ಗೀತಾ) - ಎಂಬಲ್ಲಿ , ಜ್ಞಾನವೆಂಬ ಅಗ್ನಿಸಹಿತವಾದ ಕರ್ಮಗಳು ಸುಟ್ಟು ಬೂದಿಯಾಗುತ್ತವೆಂದು ಹೇಳಲಾಗಿದೆ. ಫಲಾಪೇಕ್ಷೆಯಿಲ್ಲದೇ , ಸ್ವತಂತ್ರಕರ್ತನೆಂದು ಅಭಿಮಾನವನ್ನು ತೊರೆದು ( ' ನಾನು ಮಾಡುವೆನು ' ಇತ್ಯಾದಿ ತನ್ನಲ್ಲಿ ಕರ್ತೃತ್ವವನ್ನು ತಿಳಿಯುವ ಸಂಕಲ್ಪಾದಿಗಳನ್ನು ಬಿಟ್ಟು ) , ಈಶ್ವರಾರ್ಪಣ ಬುದ್ಧಿಯಿಂದ ಮಾಡುವ ಕರ್ಮವು ಜ್ಞಾನವೆಂಬ ಅಗ್ನಿಸಹಿತವಾದುದು. ಕರ್ಮ ಮಾಡಬೇಕು ; ಆದರೆ ಅದು ಜ್ಞಾನಸಹಕೃತವಾಗಿರಬೇಕು . ಆಗ ಮಾತ್ರ ಅದು ಬಂಧಕವಾಗದೆ (ಲೇಪಿಸದೆ) ವಿಷ್ಣುಪ್ರೀತಿಜನಕವಾಗುತ್ತದೆ . ಈ ವಿಧ ಜ್ಞಾನವನ್ನು (ಬುದ್ಧಿಯನ್ನು - ಮನಃಪ್ರವೃತ್ತಿಯನ್ನು) ಕರುಣಿಸುವವರು ಮಹದೇವರು. ಅದನ್ನೇ ಪ್ರಾರ್ಥಿಸುತ್ತಾರೆ. ' ಜ್ಞಾನ ' ಶಬ್ದದ ಮುಖ್ಯಾರ್ಥವು ಶ್ರೀಹರಿಯ ಸಾಕ್ಷಾತ್ಕಾರವು . ' ಈಶ್ವರಾತ್ ಜ್ಞಾನಮನ್ವಿಚ್ಛೇತ್ ' ಎಂಬಲ್ಲಿ ಹೇಳಿದಂತೆ , ಅದನ್ನು ದಯಪಾಲಿಸುವವರೂ ಅವರೇ - ಅವರ ಅನುಗ್ರಹವೇ . ಅದರಿಂದ ಪ್ರಾರಬ್ಧಕರ್ಮವನ್ನೂ ಸುಲಭವಾಗಿ ದಾಟುವೆವು . ಪ್ರಾರಬ್ಧಭೋಗವು ತೀಕ್ಷ್ಣತೆಯನ್ನು ಕಳೆದುಕೊಳ್ಳುತ್ತದೆ - ಉಪಮರ್ದವನ್ನೂ ಹೊಂದುತ್ತದೆ.

(5) ಪಂಚಾಸ್ಯನೆಂಬುದು ಶಿವನ ನಾಮವೂ ಆಗಿದೆ . ವಿಸ್ತೃತವಾದ ಮುಖ ಉಳ್ಳವನಾದ್ದರಿಂದ 'ಪಂಚಾಸ್ಯ' ನು.

ಮಾನುಷಾನ್ನವನುಂಡು ಜ್ಞಾನಶೂನ್ಯನು ಆದೆ
ಏನು ಗತಿ ಎನಗೆ ಅನುದಿನ । ಅನುದಿನದಿ ನಾ ನಿನ್ನ -
ಧೀನದವನಯ್ಯ ಪ್ರಮಥೇಶ ॥ 7 ॥ ॥ 43 ॥

ಅರ್ಥ : ಪ್ರಮಥೇಶ - ಹೇ ಪ್ರಮಥನಾಥ ! ಮಾನುಷಾನ್ನವನುಂಡು = ಅಜ್ಞಾನಿಗಳಿಂದ ಆಹಾರವನ್ನು ಸೇವಿಸಿ , ಜ್ಞಾನಶೂನ್ಯನು = ಜ್ಞಾನವಿಲ್ಲದವನು , ಆದೆ = ಆದೆನು , ಎನಗೆ = ನನಗೆ , ಏನು ಗತಿ = ಮುಂದಿನ ಸ್ಥಾನವಾವುದು (ಜ್ಞಾನ ದೊರೆಯುವ ಮಾರ್ಗವಾವುದು ) , ಅನುದಿನ = ನಿತ್ಯವೂ , ನಾ = ನಾನು , ನಿನ್ನಧೀನದವನಯ್ಯ = ನಿನ್ನ ಸೇವಕನಯ್ಯ ( ಆದ್ದರಿಂದ ಜ್ಞಾನವಿತ್ತು ಸಲಹು).

ವಿಶೇಷಾಂಶ : (1) ದೇವತೆಗಳು ಭೂಮಿಯಲ್ಲಿ ಅವತರಿಸಿದಾಗ , ಭೂಸ್ಪರ್ಶದಿಂದ ಅವರ ಜ್ಞಾನವು ಕೆಲಮಟ್ಟಿಗೆ ತಿರೋಧಾನಹೊಂದುವುದು. ಮಾನುಷಯೋಗ್ಯವಾದ ಅನ್ನವನ್ನು , ಅಮೃತಾಂಧಸರಾದ ( ಅಮೃತವನ್ನು ಸೇವಿಸುವ ) ತಾವು ಭೋಜನ ಮಾಡುವುದರಿಂದ ಅವರ ಜ್ಞಾನವು ಅಧಿಕವಾಗಿ ತಿರೋಧಾನ ಹೊಂದುವುದೆಂದು ಕೈಮುತ್ಯಜ್ಞಾನದಿಂದ ಸಿದ್ಧವಾಗುತ್ತದೆ. ಮಾನುಷಾನ್ನವನುಂಡು ಜ್ಞಾನಶೂನ್ಯನಾದೆನೆಂದು ಹೇಳಿಕೊಂಡಿರುವ ಶ್ರೀದಾಸಾರ್ಯರು ದೇವಾಂಶರೆಂದು ಸೂಚಿತವಾಗುತ್ತದೆ. ಶ್ರೀ ಜಗನ್ನಾಥದಾಸರು ಪ್ರಹ್ಲಾದಾನುಜ ಸಹ್ಲಾದನ ಅವತಾರರು. ಅಪಾನ(ಪ್ರಾಣ)ನಿಂದ ಆವಿಷ್ಟರು. ಸಹ್ಲಾದನು ಕರ್ಮಜ ದೇವತೆಯು. ದುಷ್ಕರ್ಮಿಗಳ ಪಾಪಗಳು ಅವರ ಅನ್ನಾದಿ ವಸ್ತುಗಳನ್ನು ಆಶ್ರಯಿಸಿರುತ್ತವೆ. ಅವನ್ನು ಸ್ವೀಕರಿಸುವವರಿಗೆ ಪಾಪಗಳೂ ಸೇರುತ್ತವೆ. ಅಂತಹ ಅನ್ನಭೋಜನದಿಂದ ಶೀಘ್ರವಾಗಿ ದುರ್ಬುದ್ಧಿ ಹುಟ್ಟುತ್ತದೆ. ಅನ್ನವು ಮನಸ್ಸಿಗೆ ಉಪಚಾಯಕವಾದುದು.
ಉಂಡನ್ನದ ಸ್ಥೂಲಭಾಗವು ಮಲವಾಗುವುದೆಂದೂ , ಮಧ್ಯಮ ಭಾಗವು ಮಾಂಸವಾಗುವುದೆಂದೂ , ಅತಿಸೂಕ್ಷ್ಮ ಭಾಗವು ಮನಸ್ಸಾಗುವುದೆಂದೂ ಛಾಂದೋಗ್ಯ ಉಪನಿಷತ್ತು ಹೇಳುತ್ತದೆ - ಈ ಪ್ರಮೇಯವನ್ನು ನಿದರ್ಶನದಿಂದ ಸಾಧಿಸಿ ತೋರಿಸುತ್ತದೆ. ಈ ಅರ್ಥದಲ್ಲಿ , ದುಷ್ಟರ (ಅಜ್ಞಾನಿಗಳ - ದುಷ್ಕರ್ಮಿಗಳ ) ಅನ್ನದಿಂದ ಜ್ಞಾನಲೋಪವಾಗಿರುವುದೆಂದು ಶ್ರೀ ದಾಸಾರ್ಯರ ಮಾತನ್ನು ತಿಳಿಯಬಹುದು. ಜ್ಞಾನಸ್ಪಷ್ಟತೆಯಲ್ಲಿ ಅಲ್ಪ ನ್ಯೂನತೆಯನ್ನು ಅನುಭವಿಸಿದರೂ , ಅಲ್ಪಕಾಲ (ಕಾಲವಿಶೇಷಗಳಲ್ಲಿ) ತಿರೋಧಾನವಾದರೂ , ಜ್ಞಾನಿಗಳು ಬಹುವಾಗಿ ನೊಂದು , ಈ ವಿಧದ ಉದ್ಗಾರ ತೆಗೆಯುವರೆಂದು ತಿಳಿಯಬರುತ್ತದೆ.

(2) ' ಪ್ರಮಥ ' ರೆಂದು ಕರೆಯಲ್ಪಡುವ ರುದ್ರಭೃತ್ಯರ ಅನೇಕ ಗಣಗಳಿವೆ.

ಅಷ್ಟಮೂರ್ತ್ಯಾತ್ಮಕನೆ ವೃಷ್ಣಿವರ್ಯನ ಹೃದಯ -
ಧಿಷ್ಠಾನದಲ್ಲಿ ಇರದೋರೋ । ಇರದೋರು ನೀ ದಯಾ -
ದೃಷ್ಟಿಯಲಿ ನೋಡೋ ಮಹದೇವ ॥ 8 ॥ ॥ 44 ॥

ಅರ್ಥ : ಅಷ್ಟಮೂರ್ತ್ಯಾತ್ಮಕನೆ = ಎಂಟು ಪ್ರಸಿದ್ಧ ಅವತಾರರೂಪಗಳಿಂದ ಶೋಭಿಸುವ , ಮಹದೇವ = ಹೇ ರುದ್ರದೇವ ! ನೀ = ನೀನು , ದಯಾದೃಷ್ಟಿಯಲಿ = ಕೃಪಾದೃಷ್ಟಿಯಿಂದ , ನೋಡು = ನನ್ನನ್ನು ನೋಡು ; ವೃಷ್ಣಿವರ್ಯನ = ಯಾದವ ಶ್ರೇಷ್ಠನಾದ ಶ್ರೀಕೃಷ್ಣನನ್ನು , ಹೃದಯ ಅಧಿಷ್ಠಾನದಲ್ಲಿ = ನನ್ನ ಹೃದಯಪೀಠದಲ್ಲಿ (ಹೃದಯಸ್ಥಾನದಲ್ಲಿ) , ಇರದೋರೋ = ಇರುವವನನ್ನಾಗಿ ತೋರಿಸು (ಪರಮಾತ್ಮನ ದರ್ಶನಭಾಗ್ಯವನ್ನು ಕೊಡಿಸು ).

ವಿಶೇಷಾಂಶ : ತಪ , ಶುಕ , ದೂರ್ವಾಸ , ಅಶ್ವತ್ಥಾಮ , ವಾಮದೇವ , ಅಘೋರ , ಸದ್ಯೋಜಾತ , ಔರ್ವ - ಇವು 8 ಪ್ರಸಿದ್ಧ ಅವತಾರಗಳು . ಸದಾಶಿವ , ಊರ್ಧ್ವರೇತ , ಲಂಪಟ , ಜೈಗೀಷವ್ಯಗಳೆಂಬ ರೂಪಗಳೂ ಸೇರಿ 12 ಎಂದೂ ಹೇಳಲಾಗುತ್ತದೆ. ಮಹಿಮೋಪೇತಗಳಾದ ಈ ಅವತಾರಗಳ ವಿಶೇಷ ಮಹಿಮೆಗಳನ್ನು ಬ್ರಹ್ಮಕಾಂಡ ಮೊದಲಾದ ಪುರಾಣಭಾಗಗಳಿಂದ ತಿಳಿಯಬೇಕು. ಎಂಟು ಮುಖಗಳಿಂದ ಕೂಡಿದ ಒಂದೇ ರೂಪವೂ ಸಹ ರುದ್ರದೇವರಿಗೆ ಇರುವುದೆಂದು ತಿಳಿಯಬರುತ್ತದೆ.

ಮೃಡದೇವ ಎನ್ನ ಕೈಪಿಡಿಯೊ ನಿನ್ನವನೆಂದು
ಬಡವ ನಿನ್ನಡಿಗೆ ಬಿನ್ನೈಪೆ । ಬಿನ್ನೈಪೆನೆನ್ನ ಮನ -
ದೃಢವಾಗಿ ಇರಲಿ ಹರಿಯಲ್ಲಿ ॥ 9 ॥ ॥ 45 ॥

ಅರ್ಥ : ಮೃಡದೇವ = ಹೇ ಮಹಾದೇವ ! ಬಡವ = ಬಡವನಾದ ನಾನು (ಜ್ಞಾನಭಕ್ತಿ ವೈರಾಗ್ಯಗಳೆಂಬ ಸಂಪತ್ತಿಲ್ಲದ ನಾನು ) , ನಿನ್ನ ಅಡಿಗೆ = ನಿನ್ನ ಪಾದಗಳಲ್ಲಿ , ಬಿನ್ನೈಪೆ = (ಬಡವನೆಂದು) ವಿಜ್ಞಾಪಿಸಿಕೊಳ್ಳುತ್ತೇನೆ ; ನಿನ್ನವನು ಎಂದು = ನಿನ್ನ ಸೇವಕನೆಂದು , ಎನ್ನ = ನನ್ನ , ಕೈಪಿಡಿಯೊ = ಕೈಹಿಡಿದು ಉದ್ಧರಿಸು ; ಎನ್ನ ಮನ = ನನ್ನ ಮನಸ್ಸು , ಹರಿಯಲ್ಲಿ = ಶ್ರೀಹರಿಯಲ್ಲಿ , ದೃಢವಾಗಿರಲಿ = ನಿಶ್ಚಲವಾಗಿ ನಿಲ್ಲಲಿ.

ವಿಶೇಷಾಂಶ : ' ಮೃಡ ' ಎಂಬ ಧಾತುವಿಗೆ ಪ್ರಸನ್ನನಾಗು , ಉದಾರನಾಗು , ಕ್ಷಮಾವಂತನಾಗು ಎಂಬರ್ಥಗಳಿವೆ. ಈ ಗುಣಗಳು ಮಹದೇವರಲ್ಲಿ ಅಧಿಕವಾಗಿರುವುದರಿಂದ ' ಮೃಡದೇವ ' ನೆಂಬುದು ಅವರ ಅನ್ವರ್ಥನಾಮ.

ಉಗ್ರತಪ ನಾ ನಿನ್ನನುಗ್ರಹದಿ ಜನಿಸಿದೆ ಪ -
ರಿಗ್ರಹಿಸಿ ಎನ್ನ ಸಂತೈಸು । ಇಂದ್ರಿಯವ 
ನಿಗ್ರಹಿಪ ಶಕ್ತಿ ಕರುಣಿಸೋ ॥ 10 ॥ ॥ 46 ॥

ಅರ್ಥ : ಉಗ್ರತಪ = ಹೇ ಉಗ್ರತಪನೇ ! ನಾ = ನಾನು , ನಿನ್ನನುಗ್ರಹದಿ = ನಿನ್ನ ಪ್ರಸಾದದಿಂದ ( ನಿನ್ನ ಧ್ಯಾನಾಸಕ್ತವಾಗುವ ಮನಸ್ಸಿನಿಂದ ಕೂಡಿ - ತಪಃಶಕ್ತಿಯೊಡನೆ ) ಜನಿಸಿದೆ = ಹುಟ್ಟಿದೆನು ; ಎನ್ನ = ನನ್ನನ್ನು , ಪರಿಗ್ರಹಿಸಿ = ಕೈಹಿಡಿದು ಸ್ವೀಕರಿಸಿ , ಸಂತೈಸು = ಸಲಹು ; ಇಂದ್ರಿಯವ = ಪ್ರತಿ ಇಂದ್ರಿಯವನ್ನೂ ( ಇಂದ್ರಿಯಗಳನ್ನೂ ) , ನಿಗ್ರಹಿಪ ಶಕ್ತಿ = ಜಯಿಸಿ ಸ್ವಾಧೀನದಲ್ಲಿಟ್ಟುಕೊಳ್ಳುವ ಸಾಮರ್ಥ್ಯವನ್ನು , ಕರುಣಿಸೋ = ದಯಪಾಲಿಸು. 

ವಿಶೇಷಾಂಶ : (1) ' ದಶಕಲ್ಪಂ ತಪಃ ಕರ್ತುಂ ವಿವೇಶ ಲವಣಾಂಭಸಿ । ಅತೋ ರುದ್ರಸ್ತಪಃ ಸಂಜ್ಞಾಂ ಅವಾಪ ಖಗಸತ್ತಮ ' (ಬ್ರಹ್ಮಕಾಂಡ) . ಹತ್ತು ಕಲ್ಪಗಳವರೆಗೆ ತಪಸ್ಸು ಮಾಡಲು ರುದ್ರನು ಲವಣಸಮುದ್ರವನ್ನು ಪ್ರವೇಶಿಸಿದ ಕಾರಣ , ಆತನಿಗೆ ' ತಪ ' ಎಂಬ ನಾಮವುಂಟಾಯಿತು ಎಂಬುದಾಗಿ , ಶ್ರೀಕೃಷ್ಣನು ಗರುಡನಿಗೆ ಹೇಳಿರುವನು. ಉಗ್ರತಪನೆಂದರೆ ಈ ವಿಧ ಘೋರ ತಪಸ್ಸನ್ನು ಮಾಡಿದವನೆಂದರ್ಥ.

(2) ಮನೋಭಿಮಾನಿಗಳಾದ ಮಹದೇವರ ಅನುಗ್ರಹದಿಂದ ಮನೋಜಯವು ದೊರೆತರೆ , ಇಂದ್ರಿಯಗಳೆಲ್ಲವೂ ಜೀವನ ಅಧೀನದಲ್ಲಿರುವವೆಂಬುದರಲ್ಲೇನು ಆಶ್ಚರ್ಯ ! ನಿನ್ನ ಧ್ಯಾನರೂಪ ತಪಸ್ಸಿನಿಂದ ಪ್ರಸನ್ನನಾಗಿ ಇಂದ್ರಿಯಜಯವನ್ನು ದಯಪಾಲಿಸೆಂದು ಪ್ರಾರ್ಥಿಸುತ್ತಾರೆ.

ಭಾಗೀರಥೀಧರನೆ ಭಾಗವತಜನರ ಹೃ -
ದ್ರೋಗ ಪರಿಹರಿಸಿ ನಿನ್ನಲ್ಲಿ । ನಿನ್ನಲ್ಲಿ ಭಕ್ತಿ ಚೆ -
ನ್ನಾಗಿ ಕೊಡು ಎನಗೆ ಮರೆಯದೆ ॥ 11 ॥ ॥ 47 ॥

ಅರ್ಥ : ಭಾಗೀರಥೀಧರನೆ = ಹೇ ಗಂಗಾಧರ ! ಭಾಗವತಜನರ = ವಿಷ್ಣುಭಕ್ತರ , ಹೃದ್ರೋಗ = ಮನೋವ್ಯಾಧಿಗಳನ್ನು , ಪರಿಹರಿಸಿ = ಹೋಗಲಾಡಿಸಿ , ನಿನ್ನಲ್ಲಿ , ಎನಗೆ = ನನಗೆ , ಮರೆಯದೆ = ಉಪೇಕ್ಷಿಸದೆ , ಭಕ್ತಿ = ಭಕ್ತಿಯನ್ನು , ಚೆನ್ನಾಗಿ ಕೊಡು = ಸ್ಥಿರವಾಗುವಂತೆ ಅನುಗ್ರಹಿಸು.

ವಿಶೇಷಾಂಶ : ವೈರಾಗ್ಯದ ಅಭಾವದಿಂದ ಮನಸ್ಸು ಸದಾ ಅಶಾಂತವಾಗಿರುವುದು. ಇದರಿಂದ ದೇಹಕ್ಕೆ ರೋಗ ಬಂದಂತೆ , ನಾನಾ ಪ್ರಕಾರದ ದುಃಖವಾಗುವುದು . ಮನಃಶಾಂತಿಯೇ ಮನೋರೋಗದ ಪರಿಹಾರವು. 

ವ್ಯೋಮಕೇಶನೆ ತ್ರಿಗುಣನಾಮ ದೇವೋತ್ತಮ ಉ -
ಮಾಮನೋಹರನೆ ವಿರುಪಾಕ್ಷ । ವಿರೂಪಾಕ್ಷ ಮಮ ಗುರು
ಸ್ವಾಮಿ ನೀ ಎನಗೆ ದಯವಾಗೊ ॥ 12 ॥ ॥ 48 ॥

ಅರ್ಥ :- ವ್ಯೋಮಕೇಶನೆ = ಹೇ ಮಹದೇವ ! ತ್ರಿಗುಣನಾಮ = ಗುಣಸೂಚಕವಾದ ಮೂರುನಾಮಗಳುಳ್ಳ , ದೇವೋತ್ತಮ = ದೇವಶ್ರೇಷ್ಠನಾದ , ವಿರುಪಾಕ್ಷ = ಕಪಿಲವರ್ಣವುಳ್ಳ ಮೂರನೇ ಕಣ್ಣುಳ್ಳ , ಉಮಾಮನೋಹರನೆ = ಹೇ ಪಾರ್ವತೀರಮಣ ! ನೀ = ನೀನು , ಮಮ ಗುರು = ನನ್ನ ಗುರುವಾಗಿರುವಿ , (ಆದ್ದರಿಂದ) ಎನಗೆ = ನನಗೆ , ದಯವಾಗೊ = ಕೃಪೆಮಾಡು , ಸ್ವಾಮಿ = ಹೇ ಒಡೆಯಾ !

ವಿಶೇಷಾಂಶ : (1) ತ್ರಿವಿಧವಾದ ಅಹಂಕಾರತತ್ತ್ವಗಳಲ್ಲಿರುವ ರುದ್ರದೇವರು , ಆಯಾ ನಾಮಗಳಿಂದಲೇ ಕರೆಯಲ್ಪಡುವರು.
ವೈಕಾರಿಕೇ ಸ್ಥಿತೋ ರುದ್ರೋ ವೈಕಾರಿಕ ಇತೀರಿತಃ ।
ತಾಮಸೇ ತು ಸ್ಥಿತೋ ರುದ್ರೋ ತಾಮಸೇತ್ಯಭಿಧೀಯತೇ ।
ತೈಜಸೇ ತು ಸ್ಥಿತೋ ರುದ್ರೋ ಲೋಕೇ ವೈ ತೈಜಸಃ ಸ್ಮೃತಃ ।
- (ಬ್ರಹ್ಮಕಾಂಡ) ಮತ್ತು ' ತ್ರಿವಿಧಾಹಂಕೃತೇ ರುದ್ರಂ ತ್ರಿರೂಪಮಸೃಜತ್ತತಃ ' (ವಿಷ್ಣುರಹಸ್ಯ) ಎಂಬೀ ಪ್ರಮಾಣಗಳು , ಮೂರು ವಿಧವಾಗಿರುವ ಅಹಂಕಾರತತ್ತ್ವಗಳಿಗೆ ಅಭಿಮಾನಿಯಾದ ರುದ್ರದೇವರು ವೈಕಾರಿಕ , ತೈಜಸ , ತಾಮಸಗಳೆಂಬ ಹೆಸರುಳ್ಳ ಮೂರು ರೂಪಗಳುಳ್ಳವರೆಂದು ತಿಳಿಸುತ್ತವೆ.

(2) ವ್ಯೋಮ ಶಬ್ದವು ಆಕಾಶ ಮತ್ತು ಜಲ ಎಂಬರ್ಥವುಳ್ಳದ್ದು. ವ್ಯೋಮಕೇಶನೆಂಬುದು ಗಂಗೆಯನ್ನು ಜಟೆಯಲ್ಲಿ ಧರಿಸಿರುವ ಶ್ರೀರುದ್ರದೇವರಿಗೆ ಅನ್ವರ್ಥನಾಮವೂ ಆಗಿದೆ.

ಲೋಚನತ್ರಯ ನಿನ್ನ ಯಾಚಿಸುವೆ ಸಂತತವು
ಖೇಚರೇಶನ ವಹನ ಗುಣರೂಪ । ಗುಣರೂಪ ಕ್ರಿಯೆಗಳಾ -
ಲೋಚನೆಯ ಕೊಟ್ಟು ಸಲಹಯ್ಯ ॥ 13 ॥ ॥ 49 ॥

ಅರ್ಥ : ಲೋಚನತ್ರಯ = ಹೇ ತ್ರಿನೇತ್ರನೇ ! (ಮುಕ್ಕಣ್ಣನೇ) , ನಿನ್ನ = ನಿನ್ನನ್ನು , ಯಾಚಿಸುವೆ = ಬೇಡುತ್ತೇನೆ ; ಸಂತತವು = ನಿರಂತರವೂ , ಖೇಚರೇಶನ ವಹನ = ಗರುಡವಾಹನನಾದ ಶ್ರೀಕೃಷ್ಣನ , ಗುಣರೂಪಕ್ರಿಯೆಗಳಾಲೋಚನೆಯ = ಗುಣರೂಪಕ್ರಿಯೆಗಳ ಧ್ಯಾನವನ್ನು , ಕೊಟ್ಟು = ನೀಡಿ , ಸಲಹಯ್ಯ = ರಕ್ಷಿಸು , ಪ್ರಭೋ !

ವಿಶೇಷಾಂಶ : (1) ಖೇಚರ - ಆಕಾಶದಲ್ಲಿ ಸಂಚರಿಸುವ ಪಕ್ಷಿ ; ಖೇಚರೇಶ - ಪಕ್ಷಿರಾಜನಾದ ಗರುಡ , ಖೇಚರೇಶನ - ಗರುಡನನ್ನು , ವಹನ - ವಾಹನವಾಗುಳ್ಳ ಅಥವಾ ವಹಿಸಿರುವ ಎಂಬ ಎರಡರ್ಥಗಳೂ ಹೊಂದುತ್ತವೆ. ಸುಪರ್ಣನಾಮಕ ಶ್ರೀಹರಿಯು ಸುಪರ್ಣ ( ಗರುಡ ) ನಲ್ಲಿದ್ದು ತನ್ನನ್ನು ತಾನೇ ಹೊತ್ತಿರುವನು. ವಾಹ್ಯ - ವಾಹಕ ಉಭಯವೂ ತಾನೇ ಆಗಿರುವನು .

(2) ಶ್ರೀಹರಿಯ ಗುಣ , ರೂಪ , ಕ್ರಿಯೆಗಳು ಧ್ಯಾನವಿಷಯಗಳು. ಕೇವಲ ರೂಪಚಿಂತನೆಯಿಂದ ಧ್ಯಾನ ಫಲವಿಲ್ಲ. ಶ್ರವಣ , ಮನನ , ಧ್ಯಾನಗಳೆಂಬ ಸಾಧನೆಗಳಲ್ಲಿ ಧ್ಯಾನವು ಗುಣಕ್ರಿಯೆಗಳ ಸಹಿತವಾದ ಭಗವದ್ರೂಪಚಿಂತನವಾಗಿರುವುದು. ಗುಣಗಳು ಸತ್ , ಚಿತ್ , ಆನಂದ , ಆತ್ಮಾ ಇತ್ಯಾದಿಗಳು. ಸೃಷ್ಟಿ , ಸ್ಥಿತಿ , ಲಯ , ನಿಯಮನ ಮೊದಲಾದ ವಿಶ್ವಸಂಬಂಧವುಳ್ಳ ಅಷ್ಟವಿಧ ಭಗವದ್ವ್ಯಾಪಾರಗಳು ಮತ್ತು ನಾನಾ ಅವತಾರಗಳಲ್ಲಿ ಪ್ರಕಟವಾಗುವ ಅದ್ಭುತ ಮಹಿಮಾ ದ್ಯೋತಕ ಕೃತಿಗಳೇ ಕ್ರಿಯೆಗಳು.

ಮಾತಂಗಷಣ್ಮುಖರ ತಾತ ಸಂತತ ಜಗ -
ನ್ನಾಥವಿಟ್ಠಲನ ಮಹಿಮೆಯ । ಮಹಿಮೆಯನು ತಿಳಿಸು ಸಂ -
ಪ್ರೀತಿಂದಲೆಮಗೆ ಅಮರೇಶ ॥ 14 ॥

ಅರ್ಥ : ಮಾತಂಗಷಣ್ಮುಖರ = ಗಜಮುಖ ಮತ್ತು ಆರು ಮುಖವುಳ್ಳ ಸ್ಕಂದನ , ತಾತ = ಜನಕನಾದ , ಅಮರೇಶ = ಹೇ ದೇವಶ್ರೇಷ್ಠ ! ಸಂತತ = ಸದಾ , ಜಗನ್ನಾಥವಿಟ್ಠಲನ = ಜಗದೊಡೆಯನಾದ ವಿಟ್ಠಲನ , ಮಹಿಮೆಯನು = ಮಹಾತ್ಮ್ಯೆಯನ್ನು (ಗುಣೋತ್ಕರ್ಷವನ್ನು) , ಸಂಪ್ರೀತಿಂದಲಿ = ಪ್ರಸನ್ನನಾಗಿ , ಎಮಗೆ = ನಮಗೆ , ತಿಳಿಸು = ತಿಳಿಸಿಕೊಡು (ಉಂಟುಮಾಡು).
( ' ಮಾತಂಗಷಣ್ಮುಖರ ' ಎಂಬಲ್ಲಿನ ಮುಖಶಬ್ದವು ಮಾತಂಗ ಮತ್ತು ಷಟ್ [ಆರು] ಎರಡು ಸ್ಥಳಗಳಲ್ಲಿ ಅನ್ವಯ )

ಭೂತನಾಥನ ಗುಣ ಪ್ರಭಾತಕಾಲದಲೆದ್ದು 
ಪ್ರೀತಿಪೂರ್ವಕದಿ ಪಠಿಸುವ । ಪಠಿಸುವರ ಶ್ರೀಜಗ -
ನ್ನಾಥವಿಟ್ಠಲನು ಸಲಹುವ ॥ 15 ॥ ॥ 51 ॥

ಅರ್ಥ : ಪ್ರಭಾತಕಾಲದಿ = ಪ್ರಾತಃಕಾಲದಲ್ಲಿ , ಎದ್ದು = ( ನಿದ್ರೆಯಿಂದ ) ಎಚ್ಚೆತ್ತು , ಪ್ರೀತಿಪೂರ್ವಕದಿ = ಭಕ್ತಿಯಿಂದ , ಭೂತನಾಥನ ಗುಣ = ಮಹದೇವರ ಮಹಿಮೆಯನ್ನು , ಪಠಿಸುವವರ = ಸ್ತುತಿಸುವವರನ್ನು , ಶ್ರೀಜಗನ್ನಾಥವಿಟ್ಠಲನು = ಜ್ಞಾನಾನಂದಪ್ರದನಾದ ಜಗನ್ನಾಥನು , ಸಲಹುವ = ರಕ್ಷಿಸುವನು.


ವಿಶೇಷಾಂಶ : ಪ್ರಾತಃಕಾಲದಲ್ಲಿ ಮಹದೇವರ ಸ್ತೋತ್ರಪಠನದ ಅವಶ್ಯಕತೆಯನ್ನೂ , ಅದರಿಂದ ಲಭಿಸುವ ಫಲವನ್ನೂ ನಿರೂಪಿಸಿದರು.
ವ್ಯಾಖ್ಯಾನ : 
ಕೀರ್ತಿಶೇಷ ಮಾಧ್ವಭೂಷಣ ದಿ॥ ಶ್ರೀ ಬಿ. ಭೀಮರಾವ್ , ದಾವಣಗೆರೆ.
*********

by ಆಚಾರ್ಯ ನಾಗರಾಜು ಹಾವೇರಿ
ಗ್ರಂಥ " ತತ್ತ್ವಸುವ್ವಾಲಿ 
ಚಂದ್ರಶೇಖರ ಸುಮನಸೇಂದ್ರ -
ಪೂಜಿತ । ಚರಣಾ ।
ಹೀಂದ್ರ ಪದಯೋಗ್ಯ -
ವೈರಾಗ್ಯ । ವೈರಾಗ್ಯ । 
ಪಾಲಿಸಮ ।
ರೇಂದ್ರ ನಿನ್ನಡಿಗೆ 
ಶರಣೆಂಬೆ ।। 1 ।।
" ಅಮರೇಂದ್ರ " ಯೆಂಬುದಕ್ಕೆ...... 
ಉತ್ತಮೋತ್ತಮನೂ - ಅಖಿಲಾಂಡ ಕೋಟಿ ಬ್ರಹ್ಮಾಂಡನಾಯಕನೂ - ಸರ್ವೋತ್ತಮನೂ ಆದ ಶ್ರೀ ಹರಿ ಪರಮಾತ್ಮನು,   
ಉತ್ತಮೋತ್ತಮರೂ - ಸರ್ವಜ್ಞಳೂ - ಜಗನ್ಮಾತೆಯೂ ಆದ ಶ್ರೀ ಮಹಾ ಲಕ್ಷ್ಮೇದೇವಿಯರು,  
ಉತ್ತಮರು ಆದ ಶ್ರೀ ಸರಸ್ವತೀ ದೇವಿಯರು - ಶ್ರೀ ಚತುರ್ಮುಖ ಬ್ರಹ್ಮದೇವರು - ಶ್ರೀ ಭಾರತೀದೇವಿಯರು - ಶ್ರೀ ಜೀವೋತ್ತಮರಾದ ಶ್ರೀ ವಾಯುದೇವರನ್ನು ಬಿಟ್ಟು - ತಮಗಿಂತ [ ಶ್ರೀ ರುದ್ರದೇವರು ] ಕೆಳಗಿನವರಾದ ಇತರ ದೇವತೆಗಳಿಗಿಂತ ಶ್ರೀ " ಮಹಾರುದ್ರದೇವರು " ಶ್ರೇಷ್ಠರೆಂದು ತಿಳಿಯಬೇಕು. 
ಹೀಗೆಯೇ... 
" ಸುಮನಸೇಂದ್ರ " ಅಂದರೆ... 
ತಮಗಿಂತ  - ಅವರರಾದ ದೇವತೆಗಳಿಗಿಂತ " ದೇವೇಂದ್ರ " ನು ಉತ್ತಮನೆಂಬ ಅರ್ಥವನ್ನೇ ತಿಳಿಯಬೇಕು. 
" ತತ್ತ್ವಗಳು "
ತತ್ತ್ವಗಳು = 24
ಅವು ಯಾವುವೆಂದರೆ.... 
" ಪಂಚ ಭೂತಗಳು ( 5 ) "
ಪೃಥ್ವಿ - ಜಲ - ಅಗ್ನಿ - ವಾಯು - ಆಕಾಶಗಳು. 
" ಪಂಚ ಮಹಾ ಭೂತಗಳು ( 5 ) "
ಗಂಧ - ರಸ - ರೂಪ - ಸ್ಪರ್ಶ - ಶಬ್ದಗಳು 
" ಪಂಚ ತನ್ಮಾತ್ರೆಗಳು ( 5 ) "
ಹಸ್ತ - ಪಾದ - ವಾಕ್ - ಪಾಯು [ ಗುದ ] - ಉಪಸ್ಥ [ ಗುಹ್ಯ ] ಗಳು. 
" ಪಂಚ ಕರ್ಮೇಂದ್ರಿಯಗಳು ( 5 ) "
ಚಕ್ಷು - ಶ್ರೋತ್ರ - ತ್ವಕ್ - ಘ್ರಾಣ - ರಸನ [ ಜಿಹ್ವೆ ]
" ಪಂಚ ಜ್ಞಾನೇಂದ್ರಿಯಗಳು ( 4 ) "
ಮನಸ್ಸು - ಅಹಂಕಾರ - ಮಹತ್ - ಅವ್ಯಕ್ತಗಳು. 
ಹೀಗೆ ಒಟ್ಟು 24 ತತ್ತ್ವಗಳು. 
ಈ ತತ್ತ್ವಗಳಿಂದ ನಿರ್ಮಿತವಾದ ದೇಹಗತರಾದ ಜೀವರು ಮತ್ತು ಪರಮಾತ್ಮನೂ ಸೇರಿ ದೇಹದಲ್ಲಿ 26 ತತ್ತ್ವಗಳಿರುವವು. 
ಇವುಗಳಲ್ಲಿ ಶ್ರೀ ಹರಿ ಪರಮಾತ್ಮನೊಬ್ಬನೇ ಸ್ವತಂತ್ರನು - ಉಳಿದೆಲ್ಲ ತತ್ತ್ವಗಳಿಗೂ ಅಭಿಮಾನಿ ದೇವತೆಗಳಿರುವರು. 
ಎಲ್ಲರೂ ಶ್ರೀ ಹರಿ ಪರಮಾತ್ಮನ ಅಧೀನರಾಗಿಯೇ ತಮ್ಮಂದ ಅಭಿಮನ್ಯವಾದ ತತ್ತ್ವಗಳಿಗೆ ನಿಯಾಮಕರಾಗಿರುವರು ಹಾಗೂ ಉಕ್ತವಾದ ಕ್ರಮದಿಂದ - ಮೇಲೆ, ಮೇಲಿನ ತತ್ತ್ವಗಳ ಅಭಿಮಾನಿಗಳೆಲ್ಲರೂ - ಕೆಳಗಿನ [ ಮೊದಲಿನ ] ಎಲ್ಲ ತತ್ತ್ವಗಳಿಗೂ ನಿಯಾಮಕರೇ ಆಗಿರುವರು. 
ಆ ತತ್ತ್ವಗಳ ಅಭಿಮಾನಿಗಳು ಸಹ ಅವರಿಂದ ನಿಯಮ್ಯರೇ. 
ಉತ್ತಮರ ದೇಹದಲ್ಲಿ ಕೆಳಗಿನ ತತ್ತ್ವಾಭಿಮಾನಿಗಳು ಆಜ್ಞಾಧಾರಕರಾಗಿರುವರಲ್ಲದೆ - ನಿಯಾಮಕರಲ್ಲ !
" ಮಹದೇವ - ರುದ್ರ - ಶಿವ - ಪರಮೇಶ್ವರ " - ಈ ಮೊದಲಾದ ನಾಮಗಳು " ಅಹಂಕಾರ ತತ್ತ್ವದ ಅಭಿಮಾನಿ ದೇವತೆ " ಯ ನಾಮಗಳು. 
" ಅಹಂಕಾರ ತತ್ತ್ವ " ವು .... 
" ವೈಕಾರಿಕ - ತೈಜಸ - ತಾಮಸ " ಗಳೆಂಬ 3 ಪ್ರಭೇದಗಳುಳ್ಳದ್ದು. 
" ವೈಕಾರಿಕ " ದಿಂದ... 
ಮನಸ್ಸು ಮತ್ತು ತತ್ತ್ವಾಭಿಮಾನಿ ದೇವತೆಗಳೂ [ ಇಂದ್ರಾದಿಗಳ ಸೂಕ್ಷ್ಮ ದೇಹಗಳೂ ]
" ತೈಜಸ " ದಿಂದ.... 
ಜ್ಞಾನ ಕರ್ಮೇಂದ್ರಿಯಗಳೂ 
" ತಾಮಸ " ದಿಂದ.... 
ಪಂಚ ತನ್ಮಾತ್ರಗಳೂ - ಪಂಚ ಭೂತಗಳೂ ಉತ್ಪನ್ನವಾಗಿವೆ. 
ಹೀಗಿರುವುದರಿಂದ " ವೈಕಾರಿಕ " ದಿಂದ ಹುಟ್ಟಿದ " ಮನಸ್ತತ್ತ್ವ " ಕ್ಕೂ ಶ್ರೀ ರುದ್ರದೇವರು  ಅಭಿಮಾನಿಗಳು  - ನಿಯಾಮಕರು. 
ಶ್ರೀ ಗರುಡ - ಶ್ರೀ ಶೇಷದೇವರೂ ಅಹಂಕಾರ ತತ್ತ್ವದ ಅಭಿಮಾನಿಗಳೇ. 
ಶ್ರೀ ಗರುಡ - ಶ್ರೀ ಶೇಷ - ಶ್ರೀ ರುದ್ರರು ಸಮರು. 
ಸ್ವರೂಪ ಯೋಗ್ಯತೆಯಿಂದ ಶ್ರೀ ರುದ್ರದೇವರು - ಶ್ರೀ ಶೇಷದೇವರಿಂದ ಸಮರಾದರೂ - ಪದ ನಿಮಿತ್ತವಾಗಿ ಅಲ್ಪ ನ್ಯೂನತೆಯುಳ್ಳವರು. 
ಶ್ರೀ ವಾಯುದೇವರು - ಶ್ರೀ ಚತುರ್ಮುಖ ಬ್ರಹದೇವರ ಸಮರಾದರೂ - ಪದದಿಂದ [ ಅಧಿಕಾರ ಸ್ಥಾನ ] ಕಿಂಚನ್ನ್ಯೂನರು. 
ಶ್ರೀ ವಾಯುದೇವರು - ಶ್ರೀ ಚತುರ್ಮುಖ ಬ್ರಹ್ಮದೇವರ ಪದವಿಗೆ ಬಂದು ನಂತರ ಮುಕ್ತರಾಗುವರು. 
ಅದರಂತೆ ಶ್ರೀ ರುದ್ರದೇವರು - ಶ್ರೀ ಶೇಷದೇವರ ಪದವಿಯಿಂದಲೇ ಮುಕ್ತರಾಗುವರು. 
ಇಂದ್ರಿಯಗಳಿಂದ ವಿಷಯಗಳನ್ನು ಭೋಗಿಸಬೇಕೆಂಬ ಇಚ್ಛೆಯು - ತಜ್ಜನ್ಯ ಸುಖವೇ ಪುರುಷಾರ್ಥವೆಂದು ಭ್ರಮಿಸಿ - ವಿಷಯ ಭೋಗದಲ್ಲಿ ಆಸಕ್ತರಾಗುವದೂ " ರಾಗ " ವೆನಿಸುತ್ತದೆ. 
" ರಾಗವಿಲ್ಲದಿರುವುದೇ ವೈರಾಗ್ಯವು "
ರಾಗಕ್ಕೆ ಮನಸ್ಸೇ ಆಶ್ರಯ ಸ್ಥಾನವು !
ಮನೋನಿಯಾಮಕರೇ ರಾಗವನ್ನು ಹೊರ ಹೊರಡಿಸಿ - ವೈರಾಗ್ಯವನ್ನು ಕೊಡಬೇಕು. 
ಆದ್ದರಿಂದ ಶ್ರೀ ಮಹಾರುದ್ರದೇವರೇ ವೈರಾಗ್ಯವನ್ನು ಕರುಣಿಸಬೇಕು - ಅದಕ್ಕೆ ನಾವೆಲ್ಲರೂ ಶ್ರೀ ಮಹಾರುದ್ರದೇವರನ್ನೇ ಪ್ರಾರ್ಥಿಸಬೇಕು. 
ಈ ವಿಷಯವನ್ನು...... 
 " ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮ ವಿರಚಿತ ಪ್ರಮೇಯಸಂಗ್ರಹಃ " ದಲ್ಲಿ - 
।। ತತಃ ಸೂಕ್ಷ್ಮ ಸೃಷ್ಟಿ ಪ್ರಕಾರಃ ।। 
ವಾಸುದೇವಾತ್ ಮಾಯಾಯಾ೦ ಪುರುಷನಾಮ ಜಾತಃ । ಸಂಕರ್ಷಣಾತ್ ಜಯಾಯಾ೦ ಸೂತ್ರ ನಾಮಾ ವಾಯುರ್ಜಾತಃ । ಪ್ರದ್ಯುಮ್ನಾತ್ ಪ್ರಕೃತ್ಯಾಂ ಪ್ರಧಾನಸಂಜ್ಞಾ ಸರಸ್ವತೀ, ಶ್ರದ್ಧಾ, ಸಂಜ್ಞಾ, ಭಾರತೀ ಚ ಜಾತಾ ಇತಿ । ತತಃ ಪುರುಷನಾಮ್ನೋ ಬ್ರಹ್ಮಣಃ ಪ್ರಧಾನಸಂಜ್ಞಾಯಾ೦ ಸರಸ್ವತ್ಯಾಂ ಶೇಷನಾಮಕ ಜೀವೋ ಜಾತಃ । ಸೂತ್ರನಾಮ್ನೋ ವಾಯೋ: ಶ್ರದ್ಧಾಸಂಜ್ಞಾಯಾಂ ಭಾರತ್ಯಾಂ ಕಾಲನಾಮ ಗರುಡ ಉತ್ಪನ್ನ: ।। 
ಶ್ರೀ ವಾಸುದೇವನಿಂದ ಶ್ರೀ ಮಾಯಾದೇವಿಯಲ್ಲಿ " ಪುರುಷ " ನೆಂಬುವನು ಹುಟ್ಟಿದನು.
ಶ್ರೀ ಸಂಕರ್ಷಣನಿಂದ ಶ್ರೀ ಜಯಾದೇವಿಯಲ್ಲಿ " ಸೂತ್ರ " ನಾಮಕರಾದ ಶ್ರೀ ವಾಯುದೇವರು ಹುಟ್ಟಿದರು. 
ಶ್ರೀ ಪ್ರದ್ಯುಮ್ನನಿಂದ ಶ್ರೀ ಕೃತೀದೇವಿಯಲ್ಲಿ " ಪ್ರಧಾನ " ಎಂಬ ಹೆಸರುಳ್ಳ ಶ್ರೀ ಸರಸ್ವತೀದೇವಿಯರೂ, " ಶ್ರೀ ಶ್ರದ್ಧಾ " ಎಂಬ ಹೆಸರುಳ್ಳ ಶ್ರೀ ಭಾರತೀದೇವಿಯರು ಹುಟ್ಟಿದರು. 
ಅನಂತರ ಶ್ರೀ ಪುರುಷ ನಾಮಕರಾದ ಶ್ರೀ ಬ್ರಹ್ಮದೇವರಿಂದ ಶ್ರೀ ಪ್ರಧಾನ ಎಂಬ ಹೆಸರುಳ್ಳ ಶ್ರೀ ಸರಸ್ವತೀದೇವಿಯರಲ್ಲಿ " ಶ್ರೀ ಶೇಷ " ನೆಂಬ ಜೀವನು ( ಜೀವಾಭಿಮಾನಿಯು ) ಹುಟ್ಟಿದರು. 
" ಸೂತ್ರ " ವೆಂದರೆ ಶ್ರೀ ಮುಖ್ಯಪ್ರಾಣದೇವರು. 
ಅವರಿಂದ ಶ್ರೀ ಶ್ರದ್ಧೆ ಯೆಂಬ ಹೆಸರಿನ ಶ್ರೀ ಭಾರತೀದೇವಿಯರಲ್ಲಿ " ಕಾಲ " ನೆಂಬ ಹೆಸರಿನ ಶ್ರೀ ಗರುಡನು ಉತ್ಪನ್ನರಾದರು.
ದೇಹ ಲಕ್ಷಣ : 28 
ಶ್ರೀ ಗರುಡದೇವರ ಪದವಿಗೆ ಬರತಕ್ಕ ಜೀವರ ಗಣ ಬೇರೆ ಉಂಟು. 
ಪ್ರತಿಯೊಂದು ಗಣದಲ್ಲಿ ಅನಂತ ಜೀವರು. 
ಶ್ರೀ ಗರುಡದೇವರ ಪದವಿಗೆ ಬಂದ ಜೀವರು - ಅದೇ ಪದದಿಂದ ಮುಕ್ತರಾಗುತ್ತಾರೆ. 
ಅದರಂತೆ ಶ್ರೀ ಶೇಷದೇವರ ಪದವಿಗೆ ಬಂದ ಜೀವರು - ಅದೇ ಪದದಿಂದ ಮುಕ್ತರಾಗುತ್ತಾರೆ. 
ಆದರೆ ಶ್ರೀ ರುದ್ರದೇವರ ಪದವಿಗೆ ಬಂದವರು ಅದೇ ಪದದಿಂದ ಮುಕ್ತರಾಗುವುದಿಲ್ಲ. 
ಅವರು ಪುನಃ ತಪಸ್ಸು ಮಾಡಿ ಶ್ರೀ ಶೇಷದೇವರ ಪದವಿಗೆ ಹೋಗಿ ಮುಕ್ತರಾಗುತ್ತಾರೆ. 
ಈ ಕಕ್ಷೆಯಲ್ಲಿದ್ದ ಜೀವರು ಸ್ವರೂಪದಿಂದ ಸಮರು - ಆದರೂ ಪದ ಪ್ರಯುಕ್ತ ಶ್ರೀ ಶೇಷದೇವರಿಗಿಂತ ಶ್ರೀ ರುದ್ರದೇವರು ಆ ಪದವಿಯಲ್ಲಿದ್ದಾಗ್ಗೆ ಕಿಂಚಿನ್ನ್ಯೂನರು. 
ಶ್ರೀ ರುದ್ರದೇವರ ಪದವಿಗೆ ಬರುವ ಜೀವರುಗಳ ಸಾಧನಾ ಕಲ್ಪ ಸಂಖ್ಯೆಯ ವಿಷಯದಲ್ಲಿ ಐಕ್ಯಮತ್ಯವಿಲ್ಲ. 
" ವಿಶೇಷ ವಿಚಾರ "
ಶ್ರೀ ರುದ್ರದೇವರ ಅಂಶ ಸಂಭೂತರಾದ ಶ್ರೀ ವರದೇಂದ್ರ ತೀರ್ಥರ ವಿದ್ಯಾ ಶಿಷ್ಯರು ಶ್ರೀ ಜಗನ್ನಾಥ ದಾಸರು. ಇವರು ಶ್ರೀ ಬೃಹಸ್ಪತ್ಯಾಚಾರ್ಯರ ಅವತಾರರು. 
ಶ್ರೀ ಜಗನ್ನಾಥ ದಾಸರು ತತ್ತ್ವ ಪ್ರಮೇಯಗಳ ಆಗರವಾದ " ತತ್ತ್ವ ಸುವ್ವಾಲಿ " ಯೆಂಬ ಕೃತಿಯನ್ನು ರಚಿಸಿದ್ದಾರೆ. 
" ತತ್ತ್ವ ಸುವ್ವಾಲಿ " ಯಲ್ಲಿ 15 ಪದ್ಯಗಳಲ್ಲಿ ಶ್ರೀ ಮಹಾರುದ್ರದೇವರ ಅತ್ಯದ್ಭುತವಾದ ಮಹಿಮಗೆಳನ್ನು ಅತ್ಯಂತ ಮನೋಜ್ಞವಾಗಿ ವರ್ಣಿಸಿದ್ದಾರೆ. 
ಈದಿನ ಶ್ರೀ ಮಹಾ ಶಿವರಾತ್ರಿ ಪ್ರಯುಕ್ತ ಶ್ರೀ ಜಗನ್ನಾಥದಾಸರ ವದನಾರವಿಂದದಲ್ಲಿ ಹೊರಹೊಮ್ಮಿದ ತತ್ತ್ವಸುವ್ವಾಲಿಯ ಶ್ರೀ ರುದ್ರದೇವರ ಸ್ತುತಿಯೊಂದಿಗೆ ಶ್ರೀ ರುದ್ರದೇವರ ಸೇವೆ ಸಲ್ಲಿಸಿ ಅವರ ಪರಮಾನುಗ್ರಹಕ್ಕೆ ಪಾತ್ರರಾಗೋಣ.... 
" ನಾಡಿನ ಸಮಸ್ತ ಆಧ್ಯಾತ್ಮ ಬಂಧುಗಳಿಗೆ ಶ್ರೀ ರುದ್ರದೇವರ ಜಯಂತೀ [ ಮಹಾಶಿವರಾತ್ರಿ ] ಶುಭಾಶಯಗಳು "
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***