ರಾಗ - : ತಾಳ -
ಇಂದಿರೇಶನೆ ನಿನ್ನದೊಂದೆ ಕ್ರಿಯಾ ದ್ವಂದ್ವವಾಯಿತೋ
ಕುಂದು ತೋರಿತು ಖಳರಿಗೆ ಪರಮಾನಂದವಾಯಿತು ವೃಂದಾರಕರಿಗೆ ll ಪ ll
ಜನನ ಕ್ರಿಯವೆ ದೇವಕಿ ಮನೋಜಯವಾಯಿತೊ
ಜನನ ಕ್ರಿಯವೆ ಜೈನನ ಮನೆತನವಳಿಯಿತೊ
ಸ್ತನ್ಯಪಾನದಿಂದ ಗೋಪಿಗೆ ಘನ ಮೋದವಾಯಿತೋ
ಸ್ತನ್ಯಪಾನದಿಂದ ಪೂತನಿ ಪ್ರಾಣ ನಾಶವಾಯಿತೊ ll 1 ll
ಬಾಲಕ್ರೀಡೆ ಯಮಳಾರ್ಜುನರ ಪಾಲಿಸಿತೊ ಕರುಣದಿ
ಬಾಲಕ್ರೀಡೆ ಶಕಟಾದ್ಯರನು ಮೂಲನಾಶನ ಮಾಡಿತೊ
ಪಲಾಯನವೆ ಮುಚಕುಂದನಿಗೆ ಪರಮಗತಿ ಗೈದಿಸಿತೊ
ಪಲಾಯನವೆ ಕಾಲಯವನನ ಪ್ರಾಣವಪಹರಿಸಿತೊ ll 2 ll
ಒಂದು ವಚನವೆ ಇಂದ್ರಾದ್ಯರಿಗಾನಂದಕರವಾಯಿತೊ
ಒಂದೆ ವಚನವೆ ವಿರೋಚನಗೆ ಬಂಧವ ತಂದಿಟ್ಟಿತೊ
ಬಂಧುತನವೆ ಧರ್ಮಾದ್ಯರನು ವೃಂದದೊಳು ಸಲಹಿತೊ
ಬಂಧುತನವೆ ಪೌಂಡ್ರಕರಸನ ಮಂದಭಾಗ್ಯನ ಮಾಡಿತೊ ll 3 ll
ನರ ವಿಶ್ವರೂಪ ನೋಡೆ ಹರುಷೋದ್ರೇಕವಾಯಿತೊ
ದುರ್ಯೋಧನ ನೋಡಲವಗೆ ದುಃಖವೆ ಬಂದೊದಗಿತೊ
ಕರ ಸ್ಪರ್ಶವಾಗೆ ತರುಗಳ ಮರಣ ಪರಿಹರಿಸಿತೋ
ಕರ ಸ್ಪರ್ಶವಾಗೆ ಕೇಶಿಗೆ ಮರಣವೆ ಒದಗಿತೊ ll 4 ll
ನಿನ್ನ ಗುಣರೂಪಕ್ರಿಯಾ ಬಲದ ಕೊನೆಯಾವನು ಬಲ್ಲನೊ
ನಿನಗೆ ವೈಷಮ್ಯ ಲೇಶವನ್ನು ಕಾಣೆ ಶ್ರೀಶನೆ
ದನುಜ ದಿವಿಜರ ಮನದನುಸಾರದಾತನೆ
ಮಣಿದು ನಮಿಸುವೆ ಕಾಯೋ ಗೋಪಾಲವಿಟ್ಠಲ ll 5 ll
***
Meaning by ಡಾ. ವೇದಗರ್ಭ ಶೇಷಗಿರಿ ಆಚಾರ್ಯ
ಇಂದಿರೇಶನೆ ನಿನ್ನದೊಂದೆ ಕ್ರಿಯಾ ದ್ವಂದ್ವವಾಯಿತೋ
ಕುಂದು ತೋರಿತು ಖಳರಿಗೆ ಪರಮಾನಂದವಾಯಿತು ವೃಂದಾರಕರಿಗೆ ll ಪ ll
ಹೇ ಲಕ್ಷ್ಮೀಪತಿ ! ನಿನ್ನ ಒಂದೇ ಕೃತಿ ಅಸುರರಿಗೆ ದುಃಖ ದೇವತೆಗಳಿಗೆ ಸಂತೋಷತರುತ್ತದೆ. ಇದೆಂತಹ ನಿನ್ನ ನಡೆ ! ಇದು ಆಶ್ಚರ್ಯ ಆದರೂ ಸತ್ಯ. (ಏಕಕ್ರಿಯಾದ್ಸ್ಯರ್ಥಕರೀ ಬಭೂವ)
ಜನನ ಕ್ರಿಯವೆ ದೇವಕಿ ಮನೋಜಯವಾಯಿತೊ
ಜನನ ಕ್ರಿಯವೆ ಜೈನನ ಮನೆತನವಳಿಯಿತೊ
ಸ್ತನ್ಯಪಾನದಿಂದ ಗೋಪಿಗೆ ಘನ ಮೋದವಾಯಿತೋ
ಸ್ತನ್ಯಪಾನದಿಂದ ಪೂತನಿ ಪ್ರಾಣ ನಾಶವಾಯಿತೊ ll 1 ll
(ಭಾಗ 10-4-23 ರಿಂದ 31;) ದೇವಕಿಯಲ್ಲಿ ನಿನ್ನ ಪ್ರಾದುರ್ಭಾವವು ಆಕೆಯ ಮನಸ್ಸಿಗೆ ಧೈರ್ಯ ತಂದಿತು. ಇನ್ನೂ ಕಂಸನ ಉಪಟಳ ನಿಂತಿತೆಂದು ಭಾವಿಸಿದಳು.... ಅದೇ ನೀನು ಬುದ್ಧನಾಗಿ ಅವತರಿಸಿದುದು (ಮ.ಭಾ.ತಾ.ನಿ 32-154-152) ಜೈನನ ಮನೆತನ ಹಾಳಾಯಿತು ಬುದ್ಧನ ಉಪದೇಶದಿಂದ ಅವರೆಲ್ಲ ಮುಂದೆ ತಮಸ್ಸಿಗೆ ಹೋದರು.
(ಭಾಗ 10-7-11 ರಿಂದ 14, 31; 10-8-13, 36.) ನೀನು ಯಶೋದೆಯ ಸ್ತನ್ಯಪಾನ ಮಾಡಿದ್ದರಿಂದ ಆಕೆಗೆ ಸಂತೋಷವಾಯಿತು. ಮುಂದೆ ಮುಕ್ತಿಯಲ್ಲಿ ಶಾಶ್ವತ ಆನಂದ ಸಿಕ್ಕಿತು ದೇವ ! ಆದರೆ ಅದೇ ಸ್ತನ್ಯಪಾನ ಪೂತನಿಗೆ (ಕಂಸನ ಸಾಕು ತಾಯಿಗೆ) ಪ್ರಾಣಹರಣಕ್ಕೆ ಕಾರಣವಾಯಿತು. ಕಾರಣ ಆಕೆ ಸ್ತನ್ಯದ ಮೂಲಕ ವಿಷವಿಕ್ಕಿದಳು - ಅದೇ ಆಕೆಯ ಪ್ರಾಣಕ್ಕೆ ಮುಳುವಾಯಿತು.
ಬಾಲಕ್ರೀಡೆ ಯಮಳಾರ್ಜುನರ ಪಾಲಿಸಿತೊ ಕರುಣದಿ
ಬಾಲಕ್ರೀಡೆ ಶಕಟಾದ್ಯರನು ಮೂಲನಾಶನ ಮಾಡಿತೊ
ಪಲಾಯನವೆ ಮುಚಕುಂದನಿಗೆ ಪರಮಗತಿ ಗೈದಿಸಿತೊ
ಪಲಾಯನವೆ ಕಾಲಯವನನ ಪ್ರಾಣವಪಹರಿಸಿತೊ ll 2 ll
(ಭಾಗ 10-8-9-1) ಕೃಷ್ಣ ! ನಿನ್ನ ಬಾಲಕ್ರೀಡೆ - ಒರಳು ಕಲ್ಲನ್ನು ಎಳೆಯುತ್ತಾ ನಡೆದುದು ನಳಕೂಬರರ ಅವತಾರಿಗಳಾದ ಯಮಳಾರ್ಜುನ ವೃಕ್ಷಗಳನ್ನು ವೃಕ್ಷ ಜನ್ಮದಿಂದ ಪಾರುಮಾಡಿತು.
(ಭಾಗ 10-11-23 ರಿಂದ 28) ಅದೇ ಬಂಡೆಯ ಕೆಳಗೆ ಆಡುತ್ತಿದ್ದ ಕೃಷ್ಣನನ್ನು ಕೊಳ್ಳಲು ಪ್ರಯತ್ನಿಸಿದ ಶಕಟಾಸುರ ತಾನೇ ಮೃತನಾದ.
(ಭಾಗ 10-54) ಕಾಲಯವನನನ್ನು ವಂಚಿಸಲು ಕೃಷ್ಣನು ಮಾಡಿದ ಬದರಿಯೆಡೆಗೆ ಪಲಾಯನ. ಕಾಲಯವನನ ಪ್ರಾಣಾಪಹಾರಕ್ಕೆ ಕಾರಣವಾದರೆ ಅದೇ ಪಲಾಯನ ಮುಚಕುಂದನ ಕೃಷ್ಣನ ದರ್ಶನದೊಂದಿಗೆ ಭಾಗ್ಯೋದಯವಾಗಿ ಮೋಕ್ಷಕ್ಕೆ ಸಾಧನವಾಯಿತು.
ಒಂದು ವಚನವೆ ಇಂದ್ರಾದ್ಯರಿಗಾನಂದಕರವಾಯಿತೊ
ಒಂದೆ ವಚನವೆ ವಿರೋಚನಗೆ ಬಂಧವ ತಂದಿಟ್ಟಿತೊ
ಬಂಧುತನವೆ ಧರ್ಮಾದ್ಯರನು ವೃಂದದೊಳು ಸಲಹಿತೊ
ಬಂಧುತನವೆ ಪೌಂಡ್ರಕರಸನ ಮಂದಭಾಗ್ಯನ ಮಾಡಿತೊ ll 3 ll
ಚತುರ್ಮುಖ ಬ್ರಹ್ಮದೇವರಲ್ಲಿಗೆ ಇಂದ್ರ ಹಾಗೂ (ಬೃಹದಾರಣ್ಯಕ ಉಪ. ಅ - 8 ಖಂಡ 7-12;) ಅಸುರ ರಾಜ ವಿರೋಚನ ಬ್ರಹ್ಮಜ್ಞಾನೋಪದೇಶ ಮಾಡಿಸಿಕೊಳ್ಳಲು ಹೇಗೆ ಬ್ರಹ್ಮದೇವರು ಇಬ್ಬರಿಗೂ ಒಂದೇ ವಚನದಿಂದ (ಒಂದೇ ರೀತಿಯ ಶಬ್ದಗಳಿಂದ) ಉಪದೇಶಿಸಿದರೂ ಇಂದ್ರನು ಸರಿಯಾಗಿ ಅರ್ಥೈಸಿಕೊಂಡ (ಜೀವ ಬ್ರಹ್ಮರಿಗೆ ಭೇದವನ್ನು ತಳೆದ). ಅದೇ ವಿರೋಚನ ಅಭೇದ ಪರವಾಗಿ ತಪ್ಪಾಗಿ - ಭಾವಿಸಿ ತಮಸ್ಸಿಗೆ ಹೋದ.
(ಭಾಗ 7-1-32) ಅದರಂತೆಯೇ ಪಾಂಡವರು ಕೃಷ್ಣನನ್ನು ತಮ್ಮ ಸೋದರತ್ತೆಯ ಮಗ ಬಂಧು ಹಾಗೂ ಭಗವಂತನೆಂದು ಭಾವಿಸಿದ್ದರಿಂದ ಅವರು ಕೃಷ್ಣನಿಂದ ರಕ್ಷಿತರಾದರು. ಆದರೆ ಕೃಷ್ಣನ ದೊಡ್ಡಮ್ಮನ ಮಗ (ವಸುದೇವನ ಮೊದಲ ಪತ್ನಿ - ಕಾಶಿರಾಜನ ಮಗಳಲ್ಲಿ ಜನಿಸಿದ) ಪೌಂಡ್ರಕ (ಭಾ 10-69-15 ರಿಂದ 38) ವಾಸುದೇವನು ಸಹೋದರನಾದರೂ ಹಾಗೇ ಭಾವಿಸದೆ - ತಾನೇ ವಾಸುದೇವ ಬ್ರಹ್ಮನೆಂದು ಭಾವಿಸಿ ಹಾಳಾದ.
ನರ ವಿಶ್ವರೂಪ ನೋಡೆ ಹರುಷೋದ್ರೇಕವಾಯಿತೊ
ದುರ್ಯೋಧನ ನೋಡಲವಗೆ ದುಃಖವೆ ಬಂದೊದಗಿತೊ
ಕರ ಸ್ಪರ್ಶವಾಗೆ ತರುಗಳ ಮರಣ ಪರಿಹರಿಸಿತೋ
ಕರ ಸ್ಪರ್ಶವಾಗೆ ಕೇಶಿಗೆ ಮರಣವೆ ಒದಗಿತೊ ll 4 ll
(ಭಗೀ. ಆ ll) ಕೃಷ್ಣನ ವಿಶ್ವರೂಪ ನೋಡಿದ ಅರ್ಜುನ ಪುಳಕಿತನಾಗಿ ಕೃಷ್ಣನು ಭಗವಂತನೆಂದು ತಿಳಿದು ಉದ್ಧಾರನಾದ (ಮ ಭಾ ಉ ಪ) ಅದೇ ದುರ್ಯೋಧನ ಕೃಷ್ಣನನ್ನು ತೋರಿಸಿ ವಿಶ್ವರೂಪವನ್ನು ನೋಡಿದರೂ ಕೃಷ್ಣನನ್ನು ಮಾಯಾವಿ ಎಂದು ಭಾವಿಸಿ ದುಃಖ ತಂದುಕೊಂಡು ಮರಣ ಹೊಂದಿದ.
(ಭಾಗ 10 - 13) ಕೃಷ್ಣನ ಕರಸ್ಪರ್ಶದಿಂದ ಕಾಳಿಂಗನ ವಿಷಪೂರಿತ ನೀರು ಕುಡಿದರೂ ಗೋವುಗಳು ಬದುಕಿದವು. ಆದರೆ ಅದೇ (ಭಾ 10 - 35) ಕೃಷ್ಣನ ಸ್ಪರ್ಶದಿಂದ ಕುದುರೆ ವೇಷದಲ್ಲಿ ಬಂದ ಕೇಶಿ ದೈತ್ಯನ ಮುಖದಲ್ಲಿ ಕೈ ಹಾಕಿ ಅದನ್ನು ಬೆಳೆಯಿಸಿ ಕೊಂದನು.
ನಿನ್ನ ಗುಣರೂಪಕ್ರಿಯಾ ಬಲದ ಕೊನೆಯಾವನು ಬಲ್ಲನೊ
ನಿನಗೆ ವೈಷಮ್ಯ ಲೇಶವನ್ನು ಕಾಣೆ ಶ್ರೀಶನೆ
ದನುಜ ದಿವಿಜರ ಮನದನುಸಾರದಾತನೆ
ಮಣಿದು ನಮಿಸುವೆ ಕಾಯೋ ಗೋಪಾಲವಿಟ್ಠಲ ll 5 ll
ಹೇ ಶ್ರೀಶ - ಲಕ್ಷ್ಮೀಶ ನಿನ್ನ ಗುಣಗಳ ರೂಪಗಳ ಕ್ರಿಯೆಗಳ (ಭಾಗ 2-6-36-37, 2-7-41, 42, 10-54-37) (ಆದಿತ್ಯ ಪುರಾಣ ವೆಂಕಟೇಶ ಮಹಾತ್ಮೆ ಅಧ್ಯಾಯ ಕ್, 2) ಬಲದ ಕೊನೆ ಅಂತ್ಯ ಪಾರ ಯಾರು ತಾನೇ ಬಲ್ಲರು ? ಬಲ್ಲವರು ಯಾರೂ ಇಲ್ಲ. ನಿನ್ನ ಕ್ರಿಯೆಯಲ್ಲಿ ದ್ವಂದ್ವಗಳಿದ್ದ ಮಟ್ಟಿಗೆ ನಿನ್ನಲ್ಲಿ (ಬ್ರಸೂ 2-1-10, ಓಂ ವೈಷಮ್ಯ ನೈರ್ಘ್ರುಣ್ಯೇ ನ ಸಾಪೇಕ್ಷಾತ್ ತಥಾ ಹಿ ದರ್ಶಯತಿ ಓಂ - ಭಾಗತಾ 7-1 ದೇಶಕಾಲಾ ಗುಣಾಂಶ್ಚೈವ ಭಕ್ತಸಾದೀನ ಶ್ರೀಕ್ಷ್ಸತು l ಯೋಗ್ಯತಾಂ ಚ ತಥಾ ಕರ್ಮ ಸಮ ಇತ್ಯಭಿಧೀಯತೇ ll
(ಮತ್ಸ್ಯಾನಿ ಅ - 22 - 84 ರಿಂದ 85) ಸ್ವಭಾವಾಖ್ಯಾ ಯೋಗ್ಯತಾ ಹಠಾಖ್ಯಾಯಾsನಾದಿಸಿದ್ಧಾ ಸರ್ವಜೀವೇಷು ನೀತ್ಯಾ ಸಾಕಾರಣಂ ತತ್ ಪ್ರಥಮಂ ತು ದ್ವಿತೀಯಂ ಅನಾದಿಕರ್ಮೈವ ತಥಾ ತೃತೀಯಃ l ಜೀವ ಪ್ರಯತ್ನಃ ಪೌರುಷಾಖ್ಯ ಸ್ತದೇತತ್ ತ್ರಯಂ ವಿಷ್ಣೋರ್ವಶಗಂ ಸರ್ವದೈವ ll ಇತ್ಯಾದಿ.
ನಿನ್ನ ಕಣ್ಣ ಮುಂದೆ ಪೋಪ ಜೀವರ ಕಂಡು
ಇನ್ನು ನಿನಗೆ ನಾಚಿಕೆ ಬಾರದೆ
ನ್ನು ಮುನ್ನೆ ನಾಳಿಗೆಂಬೊ ಘನ್ನ ಆಶೆ
ಚನ್ನಾಗಿ ಬಿಡು ಕಂಡ್ಯ ಖೂಳ ಮನವೆ ll
ಶ್ರೀಗೋಪಾಲದಾಸರು
ತನ್ನನರಿಯದೆ ಅನ್ಯರ ಬಲ್ಲೆನೆಂಬುದಕಿಂತ
ಕಣ್ಣು ಇಲ್ಲದ ಈ ಪರಿ ಮಾನ ಉಳಿಸಯ್ಯ ಅ -
ಜ್ಞಾನಿಗಳ ಮುಂದೆನ್ನ ಮಾನ ಕಳೆಯಯ್ಯ
ಸುಜ್ಞಾನಿಗಳ ಮುಂದೆ ನಾನು ಎಂಬುದು ಬಿಡಿಸು
ಸಕಲ ಕರ್ತೃತ್ವದೊಳು ನೀನು ಎಂಬೋದು ತಿಳಿಸು
ಅಲ್ಲಲ್ಲಿ ಶ್ವಾನ ಸೂಕರ ನಾನಾ ಯೋನಿಗಳು ಬರಲಿ
ಜ್ಞಾನವಿದು ಒಂದೀಯೊ ದೀನ ಕೊಡೆಯ
ಜ್ಞಾನ ಮಯ ಗೋಪಾಲವಿಟ್ಠಲ
ಮೌನಿಗಳರಸ ನಮೋ ಎಂಬೆನೊ ll
***
ಶ್ರೀಗೋಪಾಲದಾಸರು
ಉರಿವ ಮಾರಿಗೆ ತೃಣವು ಅಣಕವಾಡದೆ
ವರಕವಿಗಳ ಮುಂದೆ ನರಕವಿಗಳ ವಿದ್ಯೆ ತೋರಬಾರದು l - ಶ್ರೀವಿ.
ಹರಿದಾಸ ತರಂಗ
ಹರಿದಾಸರ ಸಾವಿರ ಪದಗಳ ಅನುವಾದ ಮಾಲಿಕೆ ಸಂಪುಟ 2
ಪುಸ್ತಕದಿಂದ
ಸಂಪಾದಕರು
ಎ. ಬಿ. ಶ್ಯಾಮಾಚಾರ್ಯ
ಪರಶುರಾಂ ಬೆಟಗೇರಿ
ಪ್ರಕಾಶಕರು
ವ್ಯಾಸಾನಂದದಾಸ ಪ್ರತಿಷ್ಠಾನ (ರಿ.)
ಭಾರತೀಯ ಹರಿದಾಸಸಾಹಿತ್ಯ ವಿದ್ಯಾಲಯ
ಬೆಂಗಳೂರು
***