ಗುರು ಮುಖ್ಯ ಪ್ರಾಣನ ಮಾನವರೆಲ್ಲ ಭಜಿಸಿರೋ ll ಪ ll
ಪರಮ ಪದವೀಯುವ ಗುರು ಮುಖ್ಯ ಪ್ರಾಣನ
ಧರೆಯೊಳಗುಳ್ಳ ಮಾನವರೆಲ್ಲ ಭಜಿಸಿರೋ ll ಅ ಪ ll
ಅಂದು ತ್ರೇತೆಯಲಿ ಹನುಮನಾಗಿ ಅವತರಿಸಿ
ಬಂದು ದಾಶರಥಿಯ ಪಾದಕೆರಗಿ
ಸಿಂಧುವನೆ ದಾಟಿ ಮುದ್ರಿಕೆಯಿತ್ತು ದಾನವರ
ವೃಂದ ಪಾರ ದಹಿಸಿ ಚೂಡಾಮಣಿಯ ತಂದವನ ll 1 ll
ದ್ವಾಪರಯುಗದಿ ಭೀಮಸೇನನೆನಿಸಿ
ಶ್ರೀಪತಿಯ ಪಾದ ಕಡು ಭಜಕನಾಗಿ
ಕೋಪಾವೇಶದಿ ದುಃಶಾಸನನು ಸೀಳಿ
ಭೂಪರ ಬಲದೊಳಗೆ ಜರೆಜರೆದು ಕರೆದವನ ll 2 ll
ಕಲಿಯುಗದಲಿ ತುರೀಯಾಶ್ರಮವನೆ ಧರಿಸಿ
ಕಲುಷದ ಮಾಯಿಗಳನು ಸೋಲಿಸಿ
ಖಿಲವಾದ ಮಧ್ವಮತವನೆ ನಿಲಿಸಿ ಕಾಗಿ-
ನೆಲೆಯಾದಿಕೇಶವ ಪರದೈವನೆಂದೆನಿಸುವನ ll - ಶ್ರೀಕನಕದಾಸರು
***