Showing posts with label ರಾಯರ ಭಜಿಸಿರೊ ನೀವೆಲ್ಲಾ ಗುರುರಾಯರ ಭಜಿಸಿರೊ ನೀವೆಲ್ಲಾ tandevenkatesha vittala. Show all posts
Showing posts with label ರಾಯರ ಭಜಿಸಿರೊ ನೀವೆಲ್ಲಾ ಗುರುರಾಯರ ಭಜಿಸಿರೊ ನೀವೆಲ್ಲಾ tandevenkatesha vittala. Show all posts

Monday 6 September 2021

ರಾಯರ ಭಜಿಸಿರೊ ನೀವೆಲ್ಲಾ ಗುರುರಾಯರ ಭಜಿಸಿರೊ ನೀವೆಲ್ಲಾ ankita tandevenkatesha vittala

 ankita ತಂದೆವೆಂಕಟೇಶವಿಠಲ

ರಾಗ: ಆರಭಿ ತಾಳ: ಆದಿ


ರಾಯರ ಭಜಿಸಿರೊ ನೀವೆಲ್ಲಾ ಗುರು

ರಾಯರ ಭಜಿಸಿರೊ ನೀವೆಲ್ಲಾ


ಭೀಯಪರಿಭವ ಭವಾಮಯತೋಯಧಿ

ಹಾಯುವ ಸುಲಭೋಪಾಯವ ತೋರಿದ ಅ.ಪ


ಕಾಕುಮತಿಯ ಖಳಾನೇಕ ಭಯಾನಕ

ವ್ಯಾಕುಲಾನೀಕ ದುರ್ಭೀಕರವಡಗಿಸಿ

ಶ್ರೀಕರನ ಮನೋವಾಕ್ಕಾಯದೊಳೊಲಿ-

ಸ್ಯಾಕಂಭದಲಿ ಮಹಾಕೃತಿ ತೋರಿದ 1

ಅಗ್ರಜ ಹರಿದ್ವೇಷಾಗ್ರಣಿ ದುಷ್ಟ ಮ-

ಹೋಗ್ರ ಕ್ರೋಧಾನಲ ವ್ಯಗ್ರಮಾನಸ ದು-

ರಾಗ್ರಹಿಯಾಗಿರೆ ಸುಗ್ರೀವೇಶನ-

ನುಗ್ರಹದಲಿ ಸಮರಾಗ್ರದಿ ಜೈಸಿದ 2

ದ್ವಾಪರದಲಿ ಕುರುಪಾ ಪಾಂಡವರನು 

ತಾಪಗೊಳಿಸಿ ಯುದ್ಧೋಪಕ್ರಮಿಸಿರೆ

ಆ ಪಕ್ಷದಿ ದ್ವೇಷೋಪಾಯದಿ ಬಕ-

ತಾಪಕನೊಲಿಸಿದ ಶ್ರೀಪ್ರತೀಪಭವ 3

ನಾರದಮುನಿಯ ಪದಾರಾಧನರತ

ನೀರಜಾಕ್ಷನಭಿಸಾರಿಕೆಯೊಳಗೀ-

ಧಾರುಣಿಯೊಳು ಬಂದೀರಸಮಯವಿ-

ಸ್ತಾರ ಮಾಡ್ದ ವ್ಯಾಸಾರ್ಯ ಶುಭಾಭಿಧ 4

ಆಗಮಾಲಯದೊಳೀಗಲು ಭಕುತರ 

ರೋಗ ಭಯಂಗಳನೀಗಿಸಿ ಹರಿಯನು

ರಾಗಸಂಪದವಿಯ ಭೋಗಿಸುತಿಹ ಗುಣ-

ಸಾಗರ ಶ್ರೀ ಗುರು ರಾಘವೇಂದ್ರರೆಂಬ 5

ಅಂಧಮೂಗಾದ್ಯರ ಸಂದೋಹಕೆ ಮುದ

ವಂ ದಯಗೈಯುತ ಬೃಂದಾವನದೊಳು

ನಿಂದು ಮೆರೆವ ಸತ್ಯಸಂಧ ವಾತಾಗಮ 

ಸಿಂಧುಪೂರ್ಣಶರಚ್ಚಂದ್ರರಾಗಿರುವ 6

ಬಿಂಕದಿ ಹರಿಗೃಹವಂ ಕಾಯುವರೊಳು

ಶಂಖುಕರಣನೆಂಬ ಅಂಕದಿ ಮೆರೆಯುತ

ಶಂಕರೇಶ ತಂದೆವೆಂಕಟೇಶವಿಠಲನ

ಕಿಂಕರ ಶ್ರೀಶಪರ್ಯಂಕಾವೇಷಿತ 7

***

ಭೀಯ=ಭಯಂಕರ; ಭವಾಮಯ=ಸಂಸಾರ ದುಃಖ, 

ಯಾತನೆ; ವ್ಯಗ್ರ=ಕಳವಳ-ಗಾಬರಿಗೊಂಡ; 

ದುರಾಗ್ರಹಿ=ಹಠಮಾರಿ; ಮಹೋಗ್ರ=ಮಹಾ ಉಗ್ರ, 

ಭಯಾನಕ; ಕ್ರೋಧಾನಲ=ಬೆಂಕಿಯಂತಹ ಕೋಪ; 

ಅನುರಾಗ ಸಂಪದ=ಅನುಗ್ರಹವೆಂಬ ಸಂಪತ್ತು; 

ಬಿಂಕ=ಠೀವಿ; ಶ್ರೀಶ ಪರ್ಯಂಕಾವೇಷಿತ=ಶ್ರೀಹರಿಯ 

ಹಾಸಿಗೆಯಾದ ಶೇಷಾವೇಷಿತ;