Showing posts with label ಶ್ರೀಹರಿ ಪಾದಾಬ್ಜರತ ಶ್ರೀ ವಿಷ್ಣು ತೀರ್ಥ vishnu teertha vijaya prasannashreenivasa. Show all posts
Showing posts with label ಶ್ರೀಹರಿ ಪಾದಾಬ್ಜರತ ಶ್ರೀ ವಿಷ್ಣು ತೀರ್ಥ vishnu teertha vijaya prasannashreenivasa. Show all posts

Thursday 5 August 2021

ಶ್ರೀಹರಿ ಪಾದಾಬ್ಜರತ ಶ್ರೀ ವಿಷ್ಣು ತೀರ್ಥ vishnu teertha vijaya ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀ ವಿಷ್ಣು ತೀರ್ಥ ವಿಜಯ


ಪ್ರಥಮ ಕೀರ್ತನೆ

ಶ್ರೀ ಹರಿಪಾದಾಬ್ಜರತ ಶ್ರೀ ವಿಷ್ಣು ತೀರ್ಥ ವನ -

ರುಹ ಅಂಘ್ರಿಯುಗ್ಮದಲಿ, ಶರಣಾದೆ ಸತತ ಪ


ಮಹಾಕರುಣಿಯು ಪರಮಹಂಸ ಕುಲತಿಲಕರು

ಅಹರ್ನಿಶಿ ಒದಗುವರು ಶರಣು ಸುಜನರಿಗೆ ಅ ಪ


ನಿರ್ದೋಷ ಗುಣಪೂರ್ಣ ಶ್ರೀ ರಮಣ ಹಂಸನಿಗೆ

ವಿಧಿಸನಕ ಮೊದಲಾದ ಗುರುಪರಂಪರೆಗೆ,

ಯತಿವರ್ಯ ಅಚ್ಚುತ ಪ್ರೇಕ್ಷರಿಗೆ ಆನಂದ

ತೀರ್ಥರ ಪದಾಂಬುಜಗಳಿಗೆ ಆನಮಿಪೆ 1

ಪಂಕೇರುಹನಾಭ ನರಹರಿ ಮಾಧವ

ಅಕ್ಷೋಭ್ಯ ಜಯತೀರ್ಥ ವಿದ್ಯಾಧಿರಾಜ

ವಾಗ್ವಜ್ರ ರಾಜೇಂದ್ರ ಕವಿವರ ಕವೀಂದ್ರ

ವಾಗೀಶರಿಗೆ ನಮೋ ರಾಮಚಂದ್ರರಿಗೆ 2

ಶ್ರೀರಾಮ ಪ್ರಿಯ ರಾಮಚಂದ್ರರ ಕರಜರು

ಸೂರಿಗಳು ವಿಭುದೇಂದ್ರ ವಿದ್ಯಾನಿಧಿಗೆ

ಎರಗಿ ವಿದ್ಯಾನಿಧಿಯ ಸುತ ರಘುನಾಥರಿಗು

ಕರುಣಾಳು ರಘುವರ್ಯರಿಗು ಆನಮಿಪೆ 3

ವೇದಾಂತ ಕೋವಿದ ರಘೂತ್ತಮ ತೀರ್ಥರಿಗೆ

ವೇದವ್ಯಾಸಾಭಿದ ಯತಿಗಳಿಗೆ ನಮಿಪೆ

ವೇದವ್ಯಾಸ ತೀರ್ಥರ ಕರಕಮಲ ಸಂಜಾತ

ವಿದ್ಯಾಧೀಶರ ಚರಣಕಾ ನಮಿಪೆ 4

ವೇದನಿಧಿ ಸತ್ಯವ್ರತ ಸತ್ಯನಿಧಿ ಸತ್ಯ -

ನಾಥ ಸತ್ಯಾಭಿನವ ಸತ್ಯಪೂರ್ಣರಿಗೆ

ಸತ್ಯವಿಜಯ ಸತ್ಯಪ್ರಿಯ ಸತ್ಯಬೋಧರಿಗೆ

ಸತ್ಯಸಂಧ ಈ ಸರ್ವ ಗುರುಗಳಿಗೆ ನಮಿಪೆ 5

ಸತ್ಯವರ ತೀರ್ಥರ ಚರಣಕಾ ನಮಿಸುವೆ

ಸತ್ಯವರ ಕರಕಂಜ ಸಂಜಾತರಾದ

ಸತ್ಯರಮಣ ಪ್ರಿಯ ಶ್ರೀ ವಿಷ್ಣುತೀರ್ಥರ

ವೃತತಿಜಾಂಘ್ರಿಗಳಲ್ಲಿ ಶರಣಾದೆ ಸತತ 6

ಶ್ರೀ ತ್ರಿವಿಕ್ರಮ ಪಾದ ಅಬ್ಜಜಾಸರಿತವ

ಶಿರದ ಮೇಲ್ ಧರಿಸಿದ ಗಿರಿಜೇಶನಂತೆ

ಹರಿಭಕ್ತಾಗ್ರಣಿ ವೈರಾಗ್ಯ ನಿಧಿಯು ಈ

ಸೂರಿ ಕುಲತಿಲಕ ಶ್ರೀ ವಿಷ್ಣು ತೀರ್ಥಾರ್ಯ 7

ಸವಣೂರು ಪ್ರಾಂತದ ಸಿದ್ಧಾಪುರದವರು

ಮಾಧ್ವದಂಪತಿ ಭಾಗೀರಥಿ ಬಾಳಾಚಾರ್ಯ

ಸೇವಿಸಿದರು ಟೀಕಾಚಾರ್ಯರ ಭಕ್ತಿಯಿಂ

ದೇವಸ್ವಭಾವ ಮಗ ಪುಟ್ಟಬೇಕೆಂದು 8

ರಾಘವಾನಂದ ಮುನಿ ಅಕ್ಷೋಭ್ಯ ತೀರ್ಥರಾ -

ನುಗ್ರಹ ಸದಾಪೂರ್ಣ ಜಯತೀರ್ಥ ಮುನಿಯು

ಬಾಗಿ ಬೇಡಿದ ಈ ಸಾಧುದಂಪತಿಗೊಲಿದು

ಯುಕ್ತ ಕಾಲದಿ ದೊರೆಯಿತು ಪುತ್ರ ಭಾಗ್ಯ 9

ಸ್ಪಟಿಕನಿಭ ಅಕಳಂಕ ಕಾಂತಿಯುಕ್ ಮಗನಿಗೆ

ಇಟ್ಟು ಜಯತೀರ್ಥನಾಮವ ಮುಂಜಿ ಮಾಡಿ

ಪಾಠ ಓದುವುದಕ್ಕೆ ಐಜಿ ಆಚಾರ್ಯರಲಿ

ವಟುವ ಕಳುಹಿಸಿದರು ಕೃತಕೃತ್ಯ ತಂದೆ 10

ಜಯತೀರ್ಥರನುಗ್ರಹದಿ ಜಯತೀರ್ಥ ವಟುವು

ವಿದ್ಯಾಭ್ಯಾಸ ಐಜಿ ಆರ್ಯರಲ್ಲಿ

ಗೈಯುವಾಗ ಇತರ ವಿದ್ಯಾರ್ಥಿಗಳಿಗಧಿಕ

ದಿವ್ಯ ಪ್ರತಿಭಾವನ್ನ ತೋರಿಸುತ್ತಿದ್ದ 11

ಶ್ರೀದ ಒಲಿದಿಹ ಇವನ ಯೋಗ್ಯತೆ ದೊಡ್ಡದು,

ವೈದಿಕ ಸುಪೂರ್ಣ ಬೋಧರ ಶಾಸ್ತ್ರವೆಲ್ಲ,

ಓದಿ ಶ್ರೀ ಐಜಿ ವೇಂಕಟರಾಮಾರ್ಯರಲ್ಲಿ

ಉತ್ತಮ ಜ್ಞಾನಿಯು ಆದ ಜಯತೀರ್ಥ 12

ಸುರವೃಂದದಲಿ ದೊಡ್ಡ ಸ್ಥಾನದವ ಇವನೆಂದು

ಹರಿಯೇ ಈ ಜಯತೀರ್ಥನಲಿ ತೋರಿಹನು

ಗುರು ಐಜಿಯರ ಸುತನ ಅಪಮೃತ್ಯು ತರಿದಿಹನು

ಭಾರಿತರ ಆಶ್ಚರ್ಯ ಇನ್ನೂ ತೋರಿಹನು 13

ಬೃಹತಿ ಸಹಸ್ರಪ್ರಿಯ ಮಹಿದಾಸ ಜಗದೀಶ

ಬ್ರಹ್ಮಪಿತ ಭಕ್ತಪಾಲಕ ಪರಮಹಂಸ

ಮಹಿಶಿರಿಕಾಂತ `ಶ್ರೀ ಪ್ರಸನ್ನ ಶ್ರೀನಿವಾಸ'

ಮಹಾಭಕ್ತ ಶ್ರೀ ವಿಷ್ಣು ತೀರ್ಥಾಯಶರಣು 14 

***

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ದ್ವಿತೀಯ ಕೀರ್ತನೆ

ಶ್ರೀ ಹರಿಪಾದಾಬ್ಜರತ ಶ್ರೀ ವಿಷ್ಣು ತೀರ್ಥ ವನ -

ರುಹ ಅಂಘ್ರಿಯುಗ್ಮದಲಿ ಶರಣಾದೆ ಸತತ ಪ


ಮಹಾಕರುಣಿಯು ಪರಮಹಂಸ ಕುಲತಿಲಕರು

ಅಹರ್ನಿಶಿ ಒದಗುವರು ಶರಣು ಸುಜನರಿಗೆ ಅ ಪ


ದ್ವಿತೀಯಾಶ್ರಮವನ್ನು ಯುಕ್ತ ಕಾಲದಿ ಕೊಂಡು

ಸದ್ಧರ್ಮ ಆಚರಿಸಿ ಗೃಹಕೃತ್ಯದಲ್ಲಿ

ಇದ್ದರು ಜಯತೀರ್ಥ ಆಚಾರ್ಯ ಆದರು

ಸದಾ ಹರಿಯಲ್ಲೇ ಧಾವಿಸಿತು ಮನಸ್ಸು 1

ಕ್ಷೀರ ಫೇಣವೊಲ್ ತೂಲಿಕ ಹಂಸ ತಲ್ಪವು

ಶುಭ್ರ ಕನ್ನಡಿ ಚಿತ್ರಾಲಂಕಾರಗಳು

ಕೊರತೆ ಏನೂ ಇಲ್ಲ ಐಹಿಕ ಸಂಪತ್ತಿಗೆ

ಸ್ಪುರದ್ರೂಪಿಣಿ ಸತಿ ಸುಶೀಲೆ ಸುಗುಣೆ 2

ಪ್ರಾರಬ್ಧ ಕರ್ಮನಿಮಿತ್ತ ಶ್ರೀಹರಿಯೇವೆ

ಪರಿಪರಿಭೋಗಗಳ ಒದಗಿಸಿದ್ದೆಲ್ಲ

ಹರಿಗೆ ಅರ್ಪಿಸುತ ಅನುಭವಿಸುತಿರಲಾಗ

ಹೊರಗಿಂದ ಓರ್ವನು ಹಾಡಿದನು ನುಡಿಯ 3

ಮಂಚಬಾರದು ಮಡದಿಬಾರಳು ಕುಂಚುಕನ್ನಡಿ ಬಾರದು

ಸಂಚಿತಾರ್ಥವು ಮತ್ತೆ ಬಾರದು ಮುಂಚೆ ಮಾಡಿರಿ ಧರ್ಮವ

ಕಂಚಿನ ಗಂಟೆ ಧ್ವನಿ ಅಂದದಿ ಈ ನುಡಿ ಕೇಳಿ

ಮಂಚದಿಂದಿಳಿದರು ಕುಳಿತರು ಚಿಂತೆಯಲಿ 4

ಅಕಳಂಕ ಗುಣನಿಧಿ ನಾರಾಯಣ ಮಾಯೇಶ

ಸಂಕರುಷಣ ಪ್ರದ್ಯುಮ್ನ ಅನಿರುದ್ಧ

ಶ್ರೀಕರಾರ್ಚಿತ ಪಂಚರೂಪನ ಪ್ರೇರಣೆಯೆಂದು

ಮಾಕಳತ್ರನ ಸ್ಮರಿಸಿ ಹೊರಟರು ಹೊರಗೆ 5

ಲೌಕಿಕ ವಿಷಯ ವಿಜೃಂಭಣಾಡಂಬರವ

ಲೆಕ್ಕಿಸದೆ ವೈರಾಗ್ಯ ಮನಪಕ್ವದಿ

ಭಕುತಿ ಉನ್ನಾಹದಿ ಅವಧೂತಚರ್ಯದಿ

ಶ್ರೀಕರ ನಾರಾಯಣನ ಸೇವಿಸಿದರು 6

ತೀರ್ಥಕ್ಷೇತ್ರಾಟನ ಮಾಡಲಿಕೆ ಹೊರಟರು

ಹಾದಿಯಲಿ ಸರ್ಪವು ಅಡ್ಡ ಬರಲು

ವೇದ್ಯವಾಯಿತು ಜಯತೀರ್ಥ ಮುನಿಗಳು ತಾವೇ

ಬಂದು ತಡೆದರು ಸರ್ಪರೂಪದಲಿಯೆಂದು 7

ಈ ಪುಣ್ಯ ಶ್ಲೋಕರು ಜಯತೀರ್ಥ ವಿಪ್ರ

ಸರ್ಪರೂಪಶೇಷದೇವರ ಜಯಮುನಿಗಳ

ಅಭಿಪ್ರಾಯವನ್ನರಿತು ಶಾಸ್ತ್ರಪ್ರವಚನ

ಶಿಷ್ಯೋಪದೇಶದಿ ಹರಿಯ ಸೇವಿಸಿದರು 8

ಮಲಾಪಹಾರಿಣಿ ತೀರಸ್ಥ ಮುನವಳ್ಳಿ

ಶೀಲತಮ ಅಡವಿ ಪ್ರದೇಶ ಗ್ರಾಮದಲಿ

ಕುಳಿತು ಶಿಷ್ಯರಿಗೆ ಸುಧಾದಿಗಳ ಪೇಳಿದರು

ಪೊಗಳ ಬಲ್ಲೆನೆ ಇವರ ಮಹಿಮೆ ಸಾಕಲ್ಯ 9

ಸುಮಧ್ವವಿಜಯ ಪಾರಾಯಣ ಮಾಡುತ್ತ

ಕಲ್ಮಷ ಕಿಲುಬು ಹತ್ತಿದ ಪಾತ್ರೆಯನ್ನ

ಕಲ್ಮಷ ಕಿಲಬನ್ನ ತ್ವರಿತದಿ ನೀಗಿಸಿ

ಹೇಮಮಯ ಮಾಡಿದರು ಜನರು ಕಂಡಿಹರು 10

ಹನ್ನೆರಡು ಬಾರಿ ಸುಧಾದಿಗಳ ಪ್ರವಚನ ಮಾಡಿ

ವಿನಯ ಸಂಪನ್ನಶ್ರದ್ಧಾಳು ಶಿಷ್ಯರಿಗೆ

ಹನ್ನೆರಡಾವರ್ತಿ ಸುಧಾ ತತ್ವ ಪ್ರಕಾಶಿಕ ಪೇಳಿ

ಘನ ಮಹಿಮ ಟಿಪ್ಪಣಿ ಮಾಡಿಹರು ಎರಡಕ್ಕೂ 11

ಭುಜಗಶಾಯಿ ಕ್ಷೀರಾಬ್ಧಿವಾಸನ ಪ್ರೀತಿಗೂ

ಸುಜನ ಅಧಿಕಾರಿಗಳ ಉದ್ಧಾರಕ್ಕು

ರಚಿಸಿ ಗ್ರಂಥಗಳನ್ನ ಕೃತಕೃತ್ಯ ಮನದಲ್ಲಿ

ರಾಜರಾಜೇಶ್ವರಿ ಶ್ರೀ ಹರಿಗರ್ಪಿಸಿದರು 12

ಸತ್ಯಸಂಧಾರ್ಯರ ಹಸ್ತಪದ್ಮೋತ್ಪನ್ನ

ಸತ್ಯವರ ತೀರ್ಥರ ಕರಕಂಜದಿಂದ

ಜಯತೀರ್ಥಾಚಾರ್ಯರು ಕೊಂಡರು ತುರ್ಯಾಶ್ರಮ

ತೋಯಜಾಕ್ಷ ಶ್ರೀ ವಿಷ್ಣುತೀರ್ಥ ನಾಮದಲಿ 13

ಬೃಹತಿ ಸಹಸ್ರಪ್ರಿಯ ಮಹಿದಾಸ ಜಗದೀಶ

ಬ್ರಹ್ಮಪಿತ ಭಕ್ತಪಾಲಕ ಪರಮಹಂಸ

ಮಹಿಶಿರಿಕಾಂತ `ಶ್ರೀ ಪ್ರಸನ್ನ ಶ್ರೀನಿವಾಸ'ನ

ಮಹಾಭಕ್ತ ಶ್ರೀ ವಿಷ್ಣು ತೀರ್ಥಾರ್ಯಶರಣು 14 

***

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ತೃತೀಯ ಕೀರ್ತನೆ


ಶ್ರೀ ಹರಿಪಾದಾಬ್ಜರತ ಶ್ರೀ ವಿಷ್ಣು ತೀರ್ಥ ವನ -

ರುಹ ಅಂಘ್ರಿಯುಗ್ಮದಲಿ ಶರಣಾದೆ ಸತತ ಪ


ಮಹಾಕರುಣಿಯು ಪರಮಹಂಸ ಕುಲತಿಲಕರು

ಅಹರ್ನಿಶಿ ಒದಗುವರು ಶರಣು ಸುಜನರಿಗೆ ಅ ಪ


ಸ್ಥೂಲ ಪ್ರವಿವಿಕ್ತ ಆನಂದ ಭುಕ್ ಅವ್ಯಯನ

ಶೀಲತಮ ಮಂತ್ರ ಶ್ರೀ ಸತ್ಯವರವದನ

ಸಲಿಲೋರುಹದಿಂದ ಶ್ರೀ ವಿಷ್ಣು ತೀರ್ಥರು

ಬಲುಭಕ್ತಿಯಿಂದಲಿ ಕೊಂಡರುಪದೇಶ 1

ಪೂರ್ವಾಶ್ರಮದಲ್ಲಾಚರಿಸಿದ ರೀತಿಯಲಿ

ತತ್ವಪ್ರಕಾಶಿಕಾ ಸುಧಾಭಾಗವತ

ಸರ್ವಸಚ್ಛಾಸ್ತ್ರ ಬೋಧಿಸುತ ಕುಶಾವತಿಯ

ಪವಿತ್ರ ತೀರದಿ ಮಾದನೂರು ಸೇರಿದರು 2

ಸುಧಾವನ್ನು ತತ್ವಪ್ರಕಾಶಿಕವನ್ನು

ಒಂದು ನೂರೆಂಟು ಅವರ್ತಿ ಪಠಿಸುತ

ಮಧ್ವಹೃತ್ಪದ್ಮಸ್ತ ಮಾಧವನ ಅರ್ಚಿಸುತ

ಮಾದನೂರಲ್ಲೇವೆ ವಾಸಮಾಡಿದರು 3

ಪೂರ್ವಾಶ್ರಮ ನಾಮ ಜಯತೀರ್ಥಾಂಕದಲ್ಲಿ

ತತ್ವಪ್ರಕಾಶಿಕಾ ಸುಧಾ ಟಿಪ್ಪಣಿಯು

ಮೂವತ್ತು ಪ್ರಕರಣ ಶ್ರೀ ಭಾಗವತ ಸಾರೋ -

ದ್ಧಾರವ ಚತುರ್ದಶಿ ಷೋಡಶಿ ಬರೆದಿಹರು 4

ತತ್ವಬೋಧÀಕ ಸುಸ್ತೋತ್ರ ಬಿನ್ನಹ ರೂಪ

ಆಧ್ಯಾತ್ಮ ರಸರಂಜಿನಿ ಅಮೃತ ಫೇಣ

ಭಕ್ತಿಯಲಿ ಪಠಿಸಲು ಅಪರೋಕ್ಷ ಪುರುಷಾರ್ಥ

ಸಾಧನವಾಗಿಹುದನ್ನ ರಚಿಸಿಹರು ಇವರು 5

ಹದಿನಾರು ನೂರೆಪ್ಪತೆಂಟು ಶಾಲಿಶಕ

ಯದುಪತಿ ಅಷ್ಟಮಿ ಈಶ್ವರ ಶ್ರಾವಣದಿ

ಜಾತರಾಗಿ ಶ್ರೀ ಹರಿ ಪಾದಾಂಬುಜದಲ್ಲಿ

ಸದಾರತರಾದರು ಐವತ್ತು ವರುಷ 6

ಕೃತಕೃತ್ಯ ಧನ್ಯ ಮನದಿಂದಲಿ ಈ ಮಹಾನ್

ಐದೆ ಹರಿಪುರ ಲಯವ ಚಿಂತನೆ ಮಾಡಿ

ಹದಿನೇಳ್ ನೂರಿಪ್ಪತ್ತು ಎಂಟು ಶಕ ಮಾಘ ತ್ರ -

ಯೋದಶಿ ಕೃಷ್ಣದಲ್ಲಿ ಕೃಷ್ಣನ ಸೇರಿದರು 7

ಮತ್ತೊಂದು ಅಂಶದಿ ವೃಂದಾವನದಲ್ಲಿಹರು

ಭಕ್ತಿಯಿಂ ಸ್ಮರಿಸಿದರೆ ಬಂದು ಸಲಹುವರು

ಬಹುದೂರ ಧಾರವಾಡ ಕುಶನೂರು ಮತ್ತೆಲ್ಲ

ಬಹುದೂರದವರ ಸಹ ಸೇವಿಪರು ಇವರ 8

ಬೃಹತಿ ಸಹಸ್ರಪ್ರಿಯ ಮಹಿದಾಸ ಜಗದೀಶ

ಬ್ರಹ್ಮಪಿತ ಭಕ್ತಪಾಲಕ ಪರಮಹಂಸ

ಮಹಿಶಿರಿಕಾಂತ `ಶ್ರೀ ಪ್ರಸನ್ನ ಶ್ರೀನಿವಾಸ'

ಮಹಾಭಕ್ತ ಶ್ರೀ ವಿಷ್ಣು ತೀರ್ಥಾರ್ಯಶರಣು 9 

***