Showing posts with label ವಂದಿಸುವೆನು ನಿತ್ಯ ವಂದಿಸುವೆನು varaha timmappa. Show all posts
Showing posts with label ವಂದಿಸುವೆನು ನಿತ್ಯ ವಂದಿಸುವೆನು varaha timmappa. Show all posts

Friday 27 December 2019

ವಂದಿಸುವೆನು ನಿತ್ಯ ವಂದಿಸುವೆನು ankita varaha timmappa

by ನೆಕ್ಕರ ಕೃಷ್ಣದಾಸ
ಮುಖಾರಿ ರಾಗ ಝಂಪೆ ತಾಳ

ವಂದಿಸುವೆನು ನಿತ್ಯ ವಂದಿಸುವೆನು ||ಪ||
ವಂದಿಸುವೆ ಗುರುಮಧ್ವರಾಯನಷ್ಟಾಂಗದೊಳು
ನಿಂದಿರ್ದ ವೈಷ್ಣವಮತಚಂದ್ರವಾರಿಧಿಗೆ ||ಅ.ಪ||

ಕ್ರೋಧವರ್ಜಿತನಾಗಿ ವೈರಾಗ್ಯವನು ತೊಟ್ಟು
ಬಾಧಿಸುವ ಇಂದ್ರಿಯಂಗಳನೆಲ್ಲ ಬಲಿದು
ಆಧರಿಸಿ ಕ್ಷಮೆ ದಮೆ ಶಾಂತ ಸದ್ಗುಣದಿಂದ
ಮಾಧುರ್ಯದೊಳು ಜನರ ಪ್ರೀತಿಕರನಾದವಗೆ ||೧||

ಭಯವಿವರ್ಜಿತನಾಗಿ ಬಹುಲೋಭವನು ತೊರೆದು
ಕ್ಷಯಮಾಡಿ ಮೋಹವನು ಹಿಂದುಗಳೆದು
ನಯವಿಧದ ಜ್ಞಾನವನು ದಶಲಕ್ಷಣಗಳಿಂದ
ನಿಯತವತಿ ಕೈಕೊಂಡನಕ್ಷರತ್ರಯದೊಳು ||೨||

ಏಳು ಕೋಟಿಯ ಮಹಾಮಂತ್ರಬಾಹ್ಯದ ಕೋಟೆ
ನಾಲಿಗೆ ವಶಮಾಡಿ ನವದ್ವಾರಗಳನು
ಮೂಲಾಗ್ನಿಯಿಂ ಸುಟ್ಟು ದಶವಾಯುಗಳ ಕದವ
ಸಾಲುನಾದಗಳೆಂಬ ಕಹಳೆವಿಡಿದವಗೆ ||೩||

ದಶವಿಧದ ಘೋಷಗಳ ಬಿಂದು ಪ್ರತಾಪದಿಂ
ದಶಮನಾಗಿಯೆ ಮುಂದೆ ಡೆಂಕಣಿಯ ಹಾರಿ
ಗಸಣಿಯನು ಬಿಟ್ಟು ಕಳೆಯಿಂದೇಳು ಧಾತುಗಳ
ಎಸುವ ದುರ್ಗಾಂತರಕೆ ತಾಗಲಿಟ್ಟವಗೆ ||೪||

ಒಂದು ಮುಹೂರ್ತದಲಿ ವ್ಯಸನಗಳನು ಹೂಳಿ
ಬಂಧಿಸಿಯೆ ಚಂದ್ರಾರ್ಕ ವೀಧಿಗಳ ಪ್ರಣವದೊಳು
ಮುಂದೆ ಮೂಲಾಧಾರವೆಂಬ ಅರಮನೆ ಪೊಕ್ಕು
ನಿಂದು ನಿಯಮದಿ ಸುಲಿದನದಿಷ್ಠಾನದರಮನೆಯ ||೫||

ಪ್ರತ್ಯಾಹಾರದಿಂ ಮಣಿಹರಕದ ಮನೆಯ
ಕಿತ್ತು ಕಿಚ್ಚಂ ಹಾಕಿ ಧ್ಯಾನಯೋಗದಿ ಬಂದ
ಮತ್ತೆ ಸಂಶುದ್ಧವೆಂಬರಮನೆಯ ಕೋಲಾಹಲದಿ
ಉತ್ತಮದ ಅಂಬಿಕಾ ಯೋಗದಿಚ್ಛೆಯೊಳು ||೬||

ಜ್ಞಾನಮಂಟಪವೆಂಬ ರಾಜಮನೆಯೊಳು ನಿಂತು
ಮಾನದೊಳು ಮೂಲಬಂಧದಿ ಆರುಶಕ್ತಿಗಳ
ಹೀನವಾಗಿಹ ಗುಣತ್ರಯವೆಂಬ ಗೊಲ್ಲರನು ವ-
ಡ್ಯಾಣ ಬಂಧದಿ ಇರಿವುತಲಿ ಕ್ಷಿಪ್ರದಲಿ ||೭||

ಖೇಚರಿಯ ಯೋಗದಿಂ ಕರಣ ಚತುಷ್ಟಯದ
ನೀಚ ಪ್ರಧಾನಿಗಳ ನೆಗಳವನಿಕ್ಕಿ
ಸೂಚನೆಯ ಕಾಲ ಕರ್ಮದ ಕಣ್ಣುಗಳ ಕಿತ್ತು
ಯೋಚನೆಯ ಮಾಡಿದನು ವೀರಾಸನದೊಳು ||೮||

ಮಾಯಾ ಪ್ರಪಂಚವೆಂಬ ನ್ಯಾಯ ನಾಯಕರ
ಕಾಯ ಉಳಿಸದೆ ಸವರಿ ವಾಸ್ತಿಯಿಂದನುಗೈದು
ಪಾಯದಿಂದಾರು ವಿಕಾರಗಳ ಕೈಗಟ್ಟಿ
ಬಾಯ ಹೊಯ (/ಹೊಯ್ದ?) ಗುರುವಿಗೆರಗುವೆನು ನಾನು ||೯||

ಇಪ್ಪತ್ತೊಂದು ಸಾವಿರವಾರು ನೂರಾದ
ಉತ್ಪವನ ಉಶ್ವಸ ನಿಶ್ವಾಸಗಳನೆಲ್ಲ
ತಪ್ಪಿಸದೆ ಕುಂಭಕದಿಂದ ಬಂಧಿಸಿಕೊಂಡು
ಒಪ್ಪುವನು ಅರೆನೇತ್ರದಿಂದ ಬೆಳಗುವನು ||೧೦||

ಮುನ್ನೂರ ಅರುವತ್ತು ವ್ಯಾಧಿಗಳ ಲವಳಿಯಿಂ
ಬೆನ್ನ ಬೆಳೆಸಿ ಕಪಾಲ ಭೌತಿಯಿಂದಷ್ಟಮದ
ವರ್ಣಾಶ್ರಮಂಗಳನು ಏಕವನು ಮಾಡಿಯೆ
ನಿರ್ಣಯಿಸಿಕೊಂಡು ತಾ ನೋಡುವವಗೆ ||೧೧||

ನುತಿಕರ್ಮದಿಂದಷ್ಟ ಆತ್ಮಕರ ಆಸನವ
ಜೊತೆಗೂಡಿ ಜಾತ ಮಧ್ಯದ ದೃಷ್ಟಿಯಿಂದ
ಅತಿವೇಗದೊಳು ನಡೆವ ಅವಸ್ಥಾತ್ರಯವೆಂಬ
ಕೃತಿಕುದುರೆಗಳ ಯುಕುತಿಯಲ್ಲಿ ಪಿಡಿದವಗೆ ||೧೨||

ನಾದದಿಂ ಪಂಚಕ್ಲೇಶ ಪ್ರಭುಗಳನು ಹೊಯ್ದು
ಕಾದು ಇರುತಿಹ ಹರಿಗಳಾರಬಿಂದುವಿನಿಂ
ಸಾಧಿಸುತ ಮಂತ್ರಭ್ರಮಣದಿಂದ ಮಲತ್ರಯದ
ಆದಿಕರಣಿಕನನ್ನು ಹಿಡಿದವನಿಗೆ ||೧೩||

ದಾತೃತ್ವದಿಂ ಸತ್ಯಲೋಕವನು ತಾ ಕಂಡು
ಕಾತುರದಿ ಆಕಾರದುರ್ಗವನು ಹತ್ತಿ
ಓತಿರುವ ತಿರಿಕೂಟವೆಂಬ ಬಾಗಿಲ ದಾಟಿ
ಈ ತೆರೆದ ಮಹಾದುರ್ಗವನು ಕಂಡವಗೆ ||೧೪||

ಅಣುಮಾತ್ರ ಸೂಕ್ಷ್ಮದೊಳು ನೋಡಿ ತಾ ಜ್ಞಾನದೊಳು
ಕುಣಿಯೊಳಗೆ ಆ ಪರಂಜ್ಯೋತಿ ಆಗಿರುತಿಪ್ಪ
ಗುಣನಿಧಿಯು ವರಾಹ ತಿಮ್ಮಪ್ಪರಾಯನನು
ಕಣ್ಣು ಮನದಿ ದೃಢವಾಗಿ ನೋಡಿ ಸುಖಿಯಾದವಗೆ ||೧೫||
*******