Showing posts with label ಗುರುನಿನ್ನ ಪಾದಾಶ್ರಯವೊಂದೆ ಗತಿಯೋ krishnavittala. Show all posts
Showing posts with label ಗುರುನಿನ್ನ ಪಾದಾಶ್ರಯವೊಂದೆ ಗತಿಯೋ krishnavittala. Show all posts

Monday 6 September 2021

ಗುರುನಿನ್ನ ಪಾದಾಶ್ರಯವೊಂದೆ ಗತಿಯೋ ankita krishnavittala

 ರಾಗ: ಶುದ್ಧ ಸಾವೇರಿ ತಾಳ: ಆದಿ


ಗುರು ನಿನ್ನ ಪಾದಾಶ್ರಯವೊಂದೆ ಗತಿಯೋ

ಬೇರೆ ಗತಿಯನು ಕಾಣೆವೋ ರಾಘವೇಂದ್ರ


ಪರರಸೇವೆಯ ಮಾಡಿ ದಣಿದುಹೋದೆನೋ ಸ್ವಾಮಿ

ಪರರಸೊತ್ತಿಗೆ ಆಸೆಪಟ್ಟು ಕೆಟ್ಟೆನಯ್ಯ

ಕ್ರೂರತನದಿ ನಾನು ಧಾರುಣಿಯೊಳು ಮೆರೆದೆ

ಉರುತರದ ಅಜ್ಞಾನವಾವರಿಸಿಹುದೆನ್ನ 1

ಒಣಗಿದ ಮರದಂತೆ ಕ್ಷೀಣವಾಯಿತು ಕಾಯ

ಕಾಣೆನು ಕಾಯ್ವರ ನಿನ್ನ ಬಿಟ್ಟನ್ಯರ

ಗಣನೆಗತೀತನೆ ಗುಣಗಣಶಾಲಿಯೆ

ಕ್ಷಣಿಕ ಐಹಿಕಭೋಗದಾಸೆಯ ನೀಗಿಸೋ 2

ಮಡದಿ ಮಕ್ಕಳು ಎಲ್ಲ ಸಿರಿಯಿರುವ ತನಕ

ಕಡೆಗೆ ಹೋಗುವಾಗ ಬರುವರಾರಿಲ್ಲ

ಹಡೆದ ತಾಯ್ತಂದೆಗಳು ಕೂಡಿ ಬರುವುದಿಲ್ಲ

ಪುಡಿಮಣ್ಣೊಳು ದೇಹ ಬಿದ್ದು ಹೋಗುವದಲ್ಲಿ 3

ದುಡಿದು ಗಳಿಸಿದ ಧನವು ಹಿಂದೆ ಬರುವುದಿಲ್ಲ

ಬಿಡದೆ ನೆಚ್ಚಿದ ಭೃತ್ಯ ತಾ ಕಾಯ್ವುದಿಲ್ಲ

ದುಡಿದ ಪುಣ್ಯವು ಮಾತ್ರ ಬಿಡದೆ ಕಾಯುವುದಿಲ್ಲಿ

ಒಡೆಯ ಗುರುರಾಜರ ನಾಮವೆ ಗತಿಯಿಲ್ಲಿ 4

ಗೋವರ್ಧನೋದ್ಧಾರ ಸಿರಿಕೃಷ್ಣವಿಠಲನ

ಪಾವನಮೂರ್ತಿಯ ಬಿಡದೆ ಕೊಂಡಾಡುತ

ಭವಬಂಧ ಹರಿಸುತ ಭಕ್ತರ ಕಾಯುವ

ಗುರು ರಾಘವೇಂದ್ರರ ನಾಮವೆ ಗತಿಯಿಲ್ಲಿ 5

***