Showing posts with label ಆವ ಜನುಮದಲ್ಲಿ vijaya vittala ankita suladi ಪುರಂದರದಾಸ ಸ್ತೋತ್ರ ಸುಳಾದಿ AVA JANUMADALLI PURNDARA DASA STOTRA SULADI. Show all posts
Showing posts with label ಆವ ಜನುಮದಲ್ಲಿ vijaya vittala ankita suladi ಪುರಂದರದಾಸ ಸ್ತೋತ್ರ ಸುಳಾದಿ AVA JANUMADALLI PURNDARA DASA STOTRA SULADI. Show all posts

Saturday 13 February 2021

ಆವ ಜನುಮದಲ್ಲಿ vijaya vittala ankita suladi ಪುರಂದರದಾಸ ಸ್ತೋತ್ರ ಸುಳಾದಿ AVA JANUMADALLI PURNDARA DASA STOTRA SULADI

Audio by Mrs. Nandini Sripad




 ಶ್ರೀವಿಜಯದಾಸಾರ್ಯ ವಿರಚಿತ  ಶ್ರೀಪುರಂದರದಾಸರ ಸ್ತೋತ್ರ ಸುಳಾದಿ 


 ರಾಗ ಪಂತುವರಾಳಿ 


 ಧ್ರುವತಾಳ 


ಆವ ಜನುಮದಲ್ಲಿ ಸ್ನಾನ ಮಾಡಿದಿನೊ

ಆವ ಜನುಮದಲ್ಲಿ ದಾನವ ಮಾಡಿದಿನೊ

ಆವ ಜನುಮದಲ್ಲಿ ಮೌನ ಮಾಡಿದಿನೊ

ಆವ ಜನುಮದಲ್ಲಿ ಗಾನ ಮಾಡಿದಿನೊ

ಆವ ಜನುಮದಲ್ಲಿ ದ್ಯುಸರಿತು ಮಿಂದಿನೊ

ಆವ ಜನುಮದಲ್ಲಿ ಯಾತ್ರೆ ಚರಿಸಿದೆನೊ

ಆವ ಜನುಮದಲ್ಲಿ ವೇದ ಓದಿದಿನೊ

ಆವ ಜನುಮದಲ್ಲಿ ಧರ್ಮದಿ ನಡೆದಿನೊ

ಆವ ಜನುಮದಲಿ ಗುರು ಸೇವೆ ಮಾಡಿದಿನೊ

ಆವ ಜನುಮದಲಿ ಸಂತರಲ್ಲಿದ್ದಿನೊ

ಆವ ಜನುಮದಲ್ಲಿ ಯಾಗವ ರಚಿಸಿದೆನೊ

ಆವ ಜನುಮದಲ್ಲಿ ಸತ್ಕರ್ಮ ಚರಿಸಿದಿನೊ

ಆವ ಜನುಮದಲಿ ವಾಯುಮತ ಪೊಂದಿದಿನೊ

ಆವ ಜನುಮದಲಿ ಶ್ರವಣವ ಕೇಳಿದಿನೊ

ಆವ ಜನುಮಗಳಲಿ ಧ್ಯಾನಂಗಳೈದಿದೆನೊ

ಆವ ಜನುಮದಲ್ಲಿ ಆವಾವದರ್ಚಿಸಿದಿನೊ

ನಾ ವಂದದರೊಳಗೆ ಗೆರೆಗೊಯ್ಯಲರಿಯೆ

ಆವ ಕರ್ಮವೊ ಮತ್ತಾವಾವ ನಡತಿಯೊ

ಆವದಾವದೊ ಎನಗೆ ಈ ಪುಣ್ಯ ಫಲಿಸಿತು

ಪಾವನ ನಾನಾದೆ ದಾಸರಿಂದ

ಕೈವಲ್ಯನಾಥ ಸಿರಿ ವಿಜಯವಿಟ್ಠಲರೇಯ 

ಭಾವ ಬಲ್ಲನೊ ಮಹಿಮ ಕಾವನು ಪ್ರತಿದಿನ ॥ 1 ॥ 


 ಮಟ್ಟತಾಳ 


ನರಸಿಂಹ ವೈಕುಂಠ ನರಹರಿ ಯೋಗೇಂದ್ರ

ಸಿರಿ ಸುಲಭ ಸೊಬಗುವರದ ಅಚಲಾನಂದ

ಅರವಿಂದನಾಭ ಹರಿವ್ಯಾಸ ಕೃಷ್ಣ ವರದಾನಿ ಚನ್ನ

ಸಿರಿಪತಿ ಚಲುವ ಶ್ರೀಕರ ಶೃಂಗಾರ ಸುಂ -

ದರ ಬೋಧಪತೆ ಗುರು ಅಚ್ಯುತ ಚ -

ತುರ ಮಧ್ವಪತಿ ಗರುಡವಾಹನ ಮುದ್ದು

ಪರಿಪೂರ್ಣಾನಂತ ದಾರಿಪನ ಶ್ರೀ -

ಧರ ಪಾಂಡುರಂಗ ಚರಿತಾನಂದಾ ವಿ -

ಸ್ತರವಾದ ಬಲು ಪರಿ

ಪರಿಯಲಿ ಪೇಳಿ ಅಂಕಿತವ ಸರಸದಲಿ ಪೇಳಿ

ಪರಮ ಭಕುತಿಯಲ್ಲಿ ವಿಜಯವಿಟ್ಠಲ ನಿನ್ನ

ಸ್ಮರಣೆ ಮಾಡಿದರು ಆದ್ಯರು ನಿರ್ಮಳರಾಗಿ ॥ 2 ॥ 


 ತ್ರಿವಿಡಿತಾಳ 


ಇವರು ಈ ಪರಿಯಲ್ಲಿ ಅಂಕಿತವನು ಹಾಕಿ

ಅವನಿಯೊಳಗೆ ಸಂಚರಿಸುತ್ತಲಿರುತ್ತಿರಲು

ಭವದೂರರಾಗಿ ದಾಸರು ತಮ್ಮ ಸುತರೊಡ -

ನೆ ವಿರಚಿಸಿದರು ಪುರಂದರ ವರದ ಗುರು ಅಭಿ -

ನವ ಗುರುಮಧ್ವಪತಿ ಎಂಬಾಂಕಿತದಿಂದ

ವಿವರಣೆ ಮಾಡಿ ಲೋಕವನು ಉದ್ಧರಿಸೆ

ಅವರವರು ಎಲ್ಲಾ ಅತಿ ದಯಾಪರರಾಗಿ

ಭವಿಷ್ಯೋತ್ತರ ತಿಳಿದು ಎನಗೆ ಒಂದು

ಕವನಕ್ಕೆ ನೆಲೆಮಾಡಿ ಪೋಗಿದ್ದರದರಿಂದ

ಹವಣ ತಿಳಿದಿನೊ ಗುರುಗಳ ಕರುಣದಿಂದ

ಜವನ ಬಾಧೆಯ ಕಳೆವ ವಿಜಯವಿಟ್ಠಲನ್ನ 

ಅವಸರದಲಿ ನಾ ಚರಣವ ನಂಬಿದೆನೊ ॥ 3 ॥ 


 ಅಟ್ಟತಾಳ 


ಕಳಸಜನರು ಪೋಗುತಲೊಂದು ಮನದೊಳು

ತಿಳಿದು ವಂದಾಲದೆಲೆಯನ್ನು ನಿಜ ಶಿಷ್ಯ

ಫಲುಗುಣಗಿಟ್ಟ ತೆರದಂತೆ ಎನಗೊಂದು

ಉಳಹಿ ಪೋದರು ಅಂಕಿತಕ್ಕೆ ವಿಜಯವಿ -

 ಟ್ಠಲನೆಂಬೊ ನಾಮ ಶ್ರೀಹರಿ ದಯದಿಂದ

ನೆಲೆವಂತ ನಾನಾದೆ ದುರುಳರ ಜರಿದು

ಹಲವು ಬಗೆ ದೈವ ವಿಜಯವಿಟ್ಠಲನ್ನ 

ಸಲೆ ಸ್ತೋತ್ರವನು ಪೇಳಲದರಿಂದ ಬಲು ಧನ್ಯ ॥ 4 ॥ 


 ಆದಿತಾಳ 


ದಾಸರು ಮೊದಲಾದ ಜ್ಞಾನಿಗಳ ಕವಿತಾ

ದೇಶದೊಳಗೆ ರವಿ ಭಾಸದಂತೊಪ್ಪುತಿರೆ

ಲೇಶ ಬುದ್ಧಿಗನು ಹರಿ ಪ್ರೇರಣೆಯಿಂದ

ದಾಸರ ದಯದಿಂದ ಕವನ ಪೇಳಿದರಿದು

ದೋಷದೊಳಗೆ ದೀಪ ಹಚ್ಚಿದೋಪಾದಿಯಲ್ಲಿ

ಭಾಸವಲ್ಲದೆ ಇದಕೆ ಕಾಣಬಾರದಧಿಕ

ಕೋಶರತ್ನವ ಘಳಿಸಿ ಅವರು ಸುಖಿಸಿದರು

ಕಾಸು ಸಂಪಾದಿಸೆ ಹರುಷವಾಯಿತೆನಗೆ

ಮೋಸ ಎನಗೆ ಯಿಲ್ಲ ವಿಜಯವಿಟ್ಟಲರೇಯ 

ತಾ ಸಲಹುವೆನೆಂದಾ ದಾಸರ ಕೂಡಿಸಿ ॥ 5 ॥ 


 ಜತೆ 


ಆವಾವದೊ ಪುಣ್ಯ ಎನಗೊಂದು ತಿಳಿಯದು

ಈ ವಿಜಯವಿಟ್ಠಲನು ಒಲಿದಾ ಕಾರುಣ್ಯದಲಿ ॥

******* 


 ಲಘುಟಿಪ್ಪಣಿ : 

 ಹರಿದಾಸರತ್ನಂ ಶ್ರೀಗೋಪಾಲದಾಸರು 


 ಧ್ರುವತಾಳದ ನುಡಿ : 


 ದ್ಯುಸರಿತು = ದೇವಗಂಗಾ ;

 ಗೆರೆಗೊಯ್ಯಲರಿಯೆ = ಇಂತಹ ಜನುಮದಲ್ಲಿ ಇಂತಹುದೇ ಸಾಧನ ಸಂಪೂರ್ತಿಯಾಯಿತೆಂದು ಗೆರೆಯನ್ನು ಎಳೆದು ನಿಗದಿಪಡಿಸಲಾರೆ ;

 ಭಾವ = (ನನ್ನ ಸಾಧನಗಳ) ಗುಟ್ಟು - ಸಾರ ;

 ಮಹಿಮೆ = ಕೀರ್ತಿ ; 


 ಮಟ್ಟತಾಳದ ನುಡಿ : 


ಶ್ರೀಪುರಂದರದಾಸರಿಗಿಂತಲೂ ಮುಂಚೆ ಶ್ರೀಹರಿಯನ್ನು ಕೊಂಡಾಡಿದ - ಅಂಕಿತವನ್ನಿಟ್ಟು ಪ್ರಾಕೃತಭಾಷೆಯಲ್ಲಿ ಕವನದಿಂದ ಸ್ತೋತ್ರಗೈದ - ಆದ್ಯರು ಎಂದು ಹೆಸರಾದ ಹರಿದಾಸರ ಹೆಸರುಗಳನ್ನು ಈ ನುಡಿಯಲ್ಲಿ ತಿಳಿಸಿದ್ದಾರೆ. 


 ತ್ರಿವಿಡಿತಾಳದ ನುಡಿ : 


 ಪುರಂದರ ವರದ ಗುರು ಅಭಿನವ ಗುರುಮಧ್ವಪತಿ = ಪುರಂದರವಿಠಲ, ವರದಪುರಂದರವಿಠಲ, ಗುರುಪುರಂದರವಿಠಲ, ಅಭಿನವ ಪುರಂದರವಿಠಲ, ಗುರುಮಧ್ವಪತಿ ;

 ಹವಣ = ಅರ್ಹತೆ ;

 ಜವನ = ಯಮನ ;

 ಅವಸರದಲಿ = ಸರಿಯಾದ ಸಂದರ್ಭದಲ್ಲಿ ; 


 ಅಟ್ಟತಾಳದ ನುಡಿ : 


 ಹಲವು ಬಗೆದೈವ = ನಮ್ಮಿಂದ ಇಷ್ಟೆಂದು ತಿಳಿಯಲಾಗದಂಥ ಭಾಗ್ಯಭರಿತ ; 


 ಆದಿತಾಳದ ನುಡಿ : 


 ದಾಸರು = ಶ್ರೀಪುರಂದರದಾಸರು ;

 ದೋಷದೊಳಗೆ = ರಾತ್ರಿಕಾಲದಲ್ಲಿ - ಕತ್ತಲೆಯೊಳಗೆ ;

 ಕೋಶರತ್ನವ ಘಳಿಸಿ = ರತ್ನಭಂಡಾರವನ್ನು ಸಂಪಾದಿಸಿ (ಶ್ರೇಷ್ಠವಾದ ಶಬ್ದರತ್ನಕೋಶದಿಂದ ರಚಿಸಲ್ಪಟ್ಟ ಕವಿತೆ ಶ್ರೀಪುರಂದರದಾಸಾರ್ಯರದೆಂಬ ಅಭಿಪ್ರಾಯ) ;

ಶ್ರೀಕೃಷ್ಣಾರ್ಪಣಮಸ್ತು

******