Showing posts with label ಹರಿತನ್ನ ಏಕಾಂತಿಗಳಿಗೆ prasannavenkata ankita suladi ಉಪದೇಶದ ಸುಳಾದಿ HARI TANNA EKAANTIGALIGE UPADESHA SULADI. Show all posts
Showing posts with label ಹರಿತನ್ನ ಏಕಾಂತಿಗಳಿಗೆ prasannavenkata ankita suladi ಉಪದೇಶದ ಸುಳಾದಿ HARI TANNA EKAANTIGALIGE UPADESHA SULADI. Show all posts

Sunday 8 December 2019

ಹರಿತನ್ನ ಏಕಾಂತಿಗಳಿಗೆ prasannavenkata ankita suladi ಉಪದೇಶದ ಸುಳಾದಿ HARI TANNA EKAANTIGALIGE UPADESHA SULADI

1st Audio by Mrs. Nandini Sripad

Audio by Vidwan Sumukh Moudgalya

ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತ 

 ಉಪದೇಶದ ಸುಳಾದಿ 

( ಪ್ರಪಂಚದಲ್ಲಿ ಹುಟ್ಟಿ ಬಂದ ಮಾನವನಿಗೆ , ಸಂಸಾರ ಬಂಧನದಿಂದ ಪಾರಾಗಿ ಶ್ರೀ ಹರಿಯ ಚರಣವನ್ನು ಹೊಂದುವುದೇ ಪರಮೋಚ್ಛ ಗುರಿ. ಮೋಕ್ಷೋಪಯೋಗಿ ಉಪಾಯಗಳನ್ನು ಬಹು ಮಾರ್ಮಿಕವಾಗಿ ಸಿದ್ಧಾಂತದ ಬೆಳಕಿನಲ್ಲಿ ಈ ಉಪದೇಶದ ಸುಳಾದಿಯಲ್ಲಿ ತಿಳಿಸಿ ಹೇಳಿದ್ದಾರೆ.)

 ರಾಗ ಪಂತುವರಾಳಿ 

 ಧ್ರುವತಾಳ 

ಹರಿ ತನ್ನ ಏಕಾಂತಿಗಳಿಗೆ ಕೊಡ ವೈಭವವ
ಸಿರಿ ಸಂಪದದೆ ಸೌಖ್ಯದ ಲಂಪಟವ
ಹರಿ ತನ್ನೇಕಾಂತಿಗಳಿಗೆ ಕೊಡ ಅಖಿಳದ
ಅರಸುತನದ ಸೌಭಾಗ್ಯದ ಬಯಕೆಯ
ಕರುಣಾಂಬುಧಿ ತನ್ನ ಶರಣ ಜನರ ಭವ -
ಭಾರಕನೆಂಬೊ ಬಲು ಬಿರುದು ರಕ್ಷಕನಾಗಿ
ಅರಿಭಯದ ಬೆದರಿಕೆ ಮನೋವ್ಯಥಾ ವ್ಯಸನವು
ಬರುವುವೆಂದರಿದು ಶ್ರೀಪ್ರಸನ್ನವೆಂಕಟ ಕೃಷ್ಣ ॥ 1 ॥

 ಮಠ್ಯತಾಳ 

ಮರೆಯೆ ಹರಿಗಭಿಮುಖರ ಭಾಗ್ಯವೆ ಭಾಗ್ಯ
ಹರಿಗೆ ವಿಮುಖರ ಭಾಗ್ಯ ದೌರ್ಭಾಗ್ಯ
ಹರಿಪ್ರಿಯಜನರ ವೃತ್ತಿ ನಿವೃತ್ತಿ
ಹರಿಪರವಲದ ಯಜ್ಞ ಅವಜ್ಞ
ಹರಿಮುಖ್ಯನೆಂಬೊ ನಿಗಮ ಸುಗಮ
ಹರಿಯಾದರಿಸದ ಆಗಮ ದುರಾಗಮ
ಸಿರಿ ಪ್ರಸನ್ವೆಂಕಟ ಕೃಷ್ಣ ಜೀವರಿಗೆ
ಸರಿಯೆಂದವನು ಇಹಪರಕೆ ಬಾಹಿರನು ॥ 2 ॥

 ತ್ರಿಪುಟತಾಳ 

ಹರಿಯಂಘ್ರಿಯ ಮೂಲದಾಸತ್ವವ ಹೊಂದಿ
ಪರಮಮಂಗಳ ನಾಮಸ್ಮರಣೆಯನು ಬಿಡದೆ
ಇರಲೆನ್ನ ಮನವು ಇರಲೆನ್ನ ತನುವು
ತರುಣಿ ಪುತ್ರ ಮಿತ್ರಾ ಸರ್ವರಿಂ ಪ್ರಿಯನೆಂದು
ಹರಿಚರಣಾಂಬುದಮೃತಾನುಂಬೊ ಸ್ನೇಹ -
ದಿರಲೆನ್ನ ಮನವು ಇರಲೆನ್ನ ತನುವು
ನಿರುಪಾಧಿಕ ಪ್ರಿಯ ನಿರ್ಮಳ ಶ್ರುತಿಗೇಯ
ನಿರುತ ಪ್ರಸನ್ವೆಂಕಟ ಕೃಷ್ಣ ಸೇವೆಯಲಿರಲಿ ॥ 3 ॥

 ಅಟ್ಟತಾಳ 

ನಿಷ್ಠರಿನ್ನೊಲ್ಲರು ನಾಕವಾಸದ ಸುಖ
ಕೊಟ್ಟರಿನ್ನೊಲ್ಲರು ಸಕಲ ಸಂಪದವನು
ಅಷ್ಟಾಂಗ ಯೋಗದ ಪಥಸಿದ್ಧಿಯೊಲ್ಲರು
ಕೃಷ್ಣಪ ಪಾದಬ್ಜ ಮಕರಂದ ಭಕುತರು
ತುಷ್ಠಿಯನೊಲ್ಲರು ಸ್ವರೂಪದ ಅನುಭವಾ -
ನಿಷ್ಟ ಕೋಟಿಗಳನು ದೃಷ್ಟಿಗೆ ತಾರದ
ಶಿಷ್ಟರಿಗಿಷ್ಟಮೂರುತಿ ಪ್ರಸನ್ವೆಂಕಟ 
ಕೃಷ್ಣನ ಭಕುತಿಗೆ ಮೋಹಿತ ಮರುಳರು ॥ 4 ॥

 ಏಕತಾಳ 

ಗರಿ ಉದುಭವಿಸದ ಮರಿ ತಾಯಗರೆದಂತೆ ಕಣ್
ದೆರೆಯದ ಶಿಶು ಜನನಿಯ ಬಯಸುವ ಪರಿ
ಪಿರಿಯನ ಕಾಣದ ರಮಣಿಯ ಮನದಂತೆ
ಸಿರಿರಮಣನ ಆಗಮವನೆ ಬಯಸುತಿಹೆ 
ಕರಿವರದ ಪ್ರಸನ್ವೆಂಕಟ ಕೃಷ್ಣನ
ಕರುಣಾಮೃತವನುಂಡು ಸುಖಿಪೆನನುದಿನ ॥ 5 ॥

 ಜತೆ 

ಸಂಸಾರ ಚಕ್ರದಿಂದ ನಿಜರ ದಾಟಿಪ ಪರಮ
ಹಂಸೇಶ ಪ್ರಸನ್ನವೆಂಕಟ ಕೃಷ್ಣ ನಮೊ ನಮೊ ॥
**********