Showing posts with label ಕೋಲು ಮುಕ್ತಿಮಾರ್ಗದ ಕೋಲು ದುಷ್ಟಶಾಸನ ಕೋಲು prasannavenkata. Show all posts
Showing posts with label ಕೋಲು ಮುಕ್ತಿಮಾರ್ಗದ ಕೋಲು ದುಷ್ಟಶಾಸನ ಕೋಲು prasannavenkata. Show all posts

Saturday 2 November 2019

ಕೋಲು ಮುಕ್ತಿಮಾರ್ಗದ ಕೋಲು ದುಷ್ಟಶಾಸನ ಕೋಲು ankita prasannavenkata

ಪ್ರಸನ್ನವೆಂಕಟದಾಸರು
ಭೇದ ಮುಕ್ತಾವಲಿ (ಕೋಲು ಹಾಡು)
ಕೋಲು ಮುಕ್ತಿಮಾರ್ಗದ ಕೋಲು ದುಷ್ಟಶಾಸನಕೋಲು ಸುಖತೀರ್ಥಯತಿರಾಯನ ಕರದಂಡುಕೋಲು ಕೋಲೆನ್ನ ಕೋಲೆ ಪ.

ಶ್ರೀದೇವಹೂತಿಜಾಜನಂಘ್ರಿಗೆ ನಮಿಸುವೆಶ್ರೀದೇವಿ ಪದಕೆ ಎರಗುವೆ ಕೋಲೆಶ್ರೀದೇವಿ ಪದಕೆ ಎರಗುವೆ ಮುಖ್ಯಗುರುವಾದಜವಾಯುರೊಂದಿಪೆ ಕೋಲೆ 1

ವಾಣಿ ಭಾರತಿದೇವಿ ಗರುಡ ಮಹೇಶಾನಂತಜ್ಞಾನದಾತರಿಗೆ ನಮೋ ಎಂಬೆ ಕೋಲೆಜ್ಞಾನದಾತರಿಗೆ ನಮೋ ಎಂಬೆ ಶ್ರೀವಿಷ್ಣುಮಾನುನೆರಾರ್ವರ ಶರಣೆಂಬೆ ಕೋಲೆ 2

ಗರುಡನ ರಂಭೆವಾರುಣಿಗಿರಿಜೇರಿಗೊಮ್ಮೆಕರಗಳ ಮುಗಿದು ಸ್ಮರಿಸುವೆ ಕೋಲೆಕರಗಳ ಮುಗಿದು ಸ್ಮರಿಸುವೆ ಇಂದ್ರ ಕಾಮವರಪ್ರಾಣಾನಿರುದ್ಧರ ಬಲಗೊಂಬೆÉ ಕೋಲೆ3

ಇಂದ್ರಾಣಿರತಿಮುಖ್ಯರಾದ ತಾರತಮ್ಯದವೃಂದಾರಕಋಷಿನೃಪರನು ಕೋಲೆವೃಂದಾರಕಋಷಿನೃಪರಮನುಷ್ಯೋತ್ತಮರಂ ಧ್ಯಾನಿಸುವೆ ಮನದಲಿ ಕೋಲೆ 4

ಏನೂ ಇಲ್ಲೆಂಬನ ಹಾನಿಗೆ ಕಡೆಯಿಲ್ಲತಾನೀಶನೆಂದು ನುಡಿದವ ಕೋಲೆತಾನೀಶನೆಂದು ನುಡಿದವ ತಮಸನುತಾನುಂಬ ತನ್ನ ಬಳಗದಿ ಕೋಲೆ 5

ಹರಿಯ ಗುಣಕೆ ಎಣಿಕೆನಿಟ್ಟವ ಕೆಟ್ಟವಹರಿನಿರ್ಗುಣೆಂಬ ಡಂಬರ ಕೋಲೆಹರಿನಿರ್ಗುಣೆಂಬ ಡಂಬರ ಸಂಗದಿಧರೆಯ ಸಜ್ಜನರು ಮತಿಗೆಡಲಿ ಕೋಲೆ 6

ಕ್ಷೀರಾಂಬುಧಿಮನೆಯ ವಾಸುದೇವನ ಆಜ್ಞಾಧಾರಿಯೆನಿಪ ವಾಯುದೇವನು ಕೋಲೆ ಆಜ್ಞಾಧಾರಿಯೆನಿಪ ವಾಯುದೇವನು ಮೊದಲಿಗೆವೀರ ಹನುಮ ಭೀಮನಾದನು ಕೋಲೆ 7

ಮೂರನೆ ಅವತಾರಿ ಮಧ್ವರಾಯನು ಮುಕ್ತಿದಾರಿಯ ತನ್ನವರಿಗೆಲ್ಲ ಕೋಲೆ ಮುಕ್ತಿದಾರಿಯ ತನ್ನವರಿಗೆಲ್ಲ ತೋರಿದುದಾರಿಯ ಪದವ ಹೊಂದಿದೆ ಕೋಲೆ 8

ಗುರುಮಧ್ವ ಎನ್ನ ಮಾತೆ ಗುರುಮಧ್ವನೆನ್ನತಾತಗುರುಮಧ್ವನಾಥ ಸಖಭ್ರಾತ ಕೋಲೆಗುರುಮಧ್ವನಾಥ ಸಖಭ್ರಾತನೆಂದವರಿಗೊಲಿವನು ಗತಿಯ ಕೊಡುವನು ಕೋಲೆ 9

ಸುಖತೀರ್ಥರಾಯನ ಹಿತವಾಕ್ಯಕೆಣೆಯಿಲ್ಲಶುಕತಾತ ಸಮನ ದೈವಿಲ್ಲ ಕೋಲೆಶುಕತಾತ ಸಮನ ದೈವಿಲ್ಲವೆಂದವರಭಕುತಿಯ ಬೇಡಿ ಬಯಸಿದೆ ಕೋಲೆ 10

ಭಕುತ್ಯೆಂಬ ಮುಯ್ಯವ ಹರಿಪಾದಕರ್ಪಿಸಿದಅಕಳಂಕ ಮಧ್ವ ಮುನಿರಾಯ ಕೋಲೆಅಕಳಂಕ ಮಧ್ವಮುನಿರಾಯನಂಘ್ರಿಗೆಸಕಳ ಭಾರವ ಒಪ್ಪಿಸಿದೆನು ಕೋಲೆ 11

ವಿಶಿಷ್ಠ ಸ್ವರೂಪಾನಂದರ್ಭಾವ ಮೋಕ್ಷ ಸುವಾಸಿನೇರೆಲ್ಲರೊಂದಾಗಿ ಕೋಲೆ ಸುವಾಸಿನೇರೆಲ್ಲರೊಂದಾಗಿ ಹೋಗುವಹೇಸಿ ನಾರೇರ ಗೆಲ್ಲುವ ಕೋಲೆ 12

ನಮ್ಮ ಮುತ್ತಯ್ಯನಾದ ಮರುತರಾಯನ ಕೀರ್ತಿನಿರ್ಮಲ ಬುಧರಿಗಮೃತವು ಕೋಲೆನಿರ್ಮಲ ಬುಧರಿಗಮೃತವು ಧರೆಯೊಳುಹಮ್ಮಿನ ಖಳರಿಗೆದೆಗಿಚ್ಚು ಕೋಲೆ 13

ಮುತ್ತಯ್ನಂಶದ ಒಳಗೊಬ್ಬ ಜನಿಸಿದಹೆತ್ತಯ್ನಮ್ಮ ಜಯರಾಯ ಕೋಲೆಹೆತ್ತಯ್ನಮ್ಮ ಜಯರಾಯ ತನ್ನ ಬಂಧುಮೊತ್ತದಿ ರಾಜ್ಯವಾಳಿದ ಕೋಲೆ 14

ಜಯರಾಯ ಸಂತತಿಯ ಮಕ್ಕಳು ನಾವೀಗಜಯನವಭೇರಿ ಹೊಯಿಸುತ ಕೋಲೆಜಯನವಭೇರಿ ಹೊಯಿಸುತ ರವದ ಜಾಗಟೆಯ ಬಿರುದಲಿ ಬರುತೇವೆ ಕೋಲೆ 15

ಬಯಲು ಮಾತಿನವ ಕಡೆಗಾಗಿ ತತ್ವವಿನಯ ವಾಕ್ಯ ನಿಮಗೆ ಸೊಗಸಲ್ಲ ಕೋಲೆ ವಿನಯವಾಕ್ಯ ನಿಮಗೆ ಸೊಗಸಲ್ಲ ಕೇಳಿದರೆಭಯಬಿಟ್ಟುಕೇಳಿಕವಿಯರು ಕೋಲೆ16

ಲೌಕಿಕ ಮಾತಿನಂತಲ್ಲ ಮುಯ್ಯದ ಹಾಡುವೈಕುಂಠಪತಿಯ ಅರಮನೆಯ ಕೋಲೆವೈಕುಂಠಪತಿಯ ಅರಮನೆಯಾಸ್ಥಾನದಏಕಾಂತ ನಾರೇರೊಪ್ಪಿದ್ದು ಕೋಲೆ 17

ಹಾದಿ ಬೀದಿಯ ಜನರ ಮೆಚ್ಚಿನ ಮುಯ್ಯಲ್ಲಮಾಧವನ ಶ್ವೇತದ್ವೀಪದ ಕೋಲೆಮಾಧವನ ಶ್ವೇತದ್ವೀಪದ ಮಂದಿರದಿಶ್ರೀದೇವಿಯಮ್ಮ ಕೇಳ್ವಳು ಕೋಲೆ 18

ಭ್ರಾಂತಜನರಿಗೆ ವಿಶ್ರಾಂತಿದೋರದು ಮುಯ್ಯಾನಂತಾಸನದ ಅನಂತನ ಕೋಲೆ ಅನಂತಾಸನದ ಅನಂತನ ಮಡದಿ ಶ್ರೀಕಾಂತೆ ನಮ್ಮವ್ವ ಕೇಳ್ವಳು ಕೋಲೆ 19

ಹಾಡುತ ಬರುತೇವೆ ಹರಸುತ ಬರುತೇವೆರೂಢಿಯ ಸಾಧುಜನರನು ಕೋಲೆರೂಢಿಯ ಸಾಧುಜನರ ಗುಣಂಗಳ ಕೊಂಡಾಡುತ ನಾವು ಬರುತೇವೆ ಕೋಲೆ 20

ದರ್ಶನರಾಯರು ಮೂವತ್ತೇಳು ಮಂದಿಅರಸರು ನಮ್ಮ ಹಿರಿಯರು ಕೋಲೆಅರಸರು ನಮ್ಮ ಹಿರಿಯರ ಮಹಿಮೆ ಉಚ್ಚರಿಸುತ ನಾವು ಬರುತೇವೆ ಕೋಲೆ 21

ನಮ್ಮ ತವರಿಗೆ ಕೀರ್ತಿತಂದ ಕನ್ಯೇರು ನಾವುನಮ್ಮ ನೆಳಲಿಗಂಜಿ ನಡೆದೇವು ಕೋಲೆನಮ್ಮ ನೆಳಲಿಗಂಜಿ ನಡೆದೇವು ದುರುಳೇರಉನ್ಮತ್ತನಮಗೆ ಎಣಿಕಿಲ್ಲ ಕೋಲೆ22

ಜ್ಞಾನದೀವಟಿಗೆ ಬೆಳಗಲೆ ಬರುತೇವೆಜ್ಞಾನ ಕತ್ತಲೆಯ ಬೆದರಿಸಿ ಕೋಲೆ ಅಜ್ಞಾನ ಕತ್ತಲೆಯ ಬೆದರಿಸಿ ಬರುವಾಗಹೀನ ಬುಧ್ಯರು ಮೋರೆ ತೆಗೆದಾರು ಕೋಲೆ 23

ನಮ್ಮಯ್ಯನಾಸ್ಥಾನ ಬಣ್ಣಿಸಲಳವಲ್ಲನಿರ್ಮಳಾತ್ಮಕರು ಸಚಿವರು ಕೋಲೆನಿರ್ಮಳಾತ್ಮಕರು ಸಚಿವರು ಪರಿವಾರಧರ್ಮಶೀಲರು ವಿರತರು ಕೋಲೆ 24

ಎತ್ತ ನೋಡಲಿ ನವಭಕ್ತಿರತ್ನದ ಬೆಳಗುಚಿತ್ರ ಮಂಟಪಕೆ ಎಣಿಕಿಲ್ಲ ಕೋಲೆಚಿತ್ರ ಮಂಟಪಕೆ ಎಣಿಕಿಲ್ಲ ಶಂಖಚಕ್ರಒತ್ತಿಡಿದವು ಭಿತ್ತಿಲಿ ಕೋಲೆ 25

ಬ್ರಹ್ಮಸೂತ್ರದ ವಜ್ರಕಂಬದಿ ಕುಳಿತಿಹಬ್ರಹ್ಮಜÕಪರಮ ಹಂಸವು ಕೋಲೆಬ್ರಹ್ಮಜÕ ಪರಮಹಂಸವು ಪುಣ್ಯಶ್ಲೋಕಧರ್ಮಜÕರಾಯ ಗಿಳಿವಿಂಡು ಕೋಲೆ 26

ಮ್ಯಾಗೆ ಮ್ಯಾಗೊಪ್ಪುವ ಸದ್ಗ್ರಂಥದುಪ್ಪರಿಗೇಲಿಕೂಗುವ ಸಾಮಕೋಗಿಲೆ ಕೋಲೆಕೂಗುವ ಸಾಮಕೋಗಿಲೆ ನವಿಲ್ಗಳುನಾಗಪಾಲಕಗೆ ಅತಿಪ್ರೀತಿ ಕೋಲೆ 27

ಕಡುಭಕ್ತಿಪತಾಕೆ ಹರಿನಿಷ್ಠೆ ಕಳಸವುಕೊಡುವಅಭಯಛತ್ರ ಸಾಲ್ಗಳು ಕೋಲೆಕೊಡುವಅಭಯಛತ್ರ ಸಾಲ್ಗಳು ಶ್ರೀ ತುಲಸಿನಡುವೆ ಪ್ರಣತ ತೋರಣಗಳು ಕೋಲೆ 28

ತಪವೆಂಬ ತಪಿತದರ ಮೈಸಿರಿಯನೃಪಜಯರಾಯನೆಸೆದನು ಕೋಲೆನೃಪಜಯರಾಯನೆಸೆದಾ ಸಿಂಹಾಸನದಿಶಶಿತೇಜದಂತೆ ಹೊಳೆದನು ಕೋಲೆ29

ಆನೆಗಳೆಣಿಕಿಲ್ಲ ಕುದುರೆಯ ಗಣನ್ಯಿಲ್ಲಕಾಲಾಳು ರಥಕೆ ಮಿತಿಯಿಲ್ಲ ಕೋಲೆಕಾಲಾಳು ರಥಕೆ ಮಿತಿಯಿಲ್ಲ ಅನ್ಯೋಕ್ತಿಜಾಣೆ ದಾಸೇರಿಗೆ ಕಡೆಯಿಲ್ಲ ಕೋಲೆ 30

ಕುವಿದ್ಯಾರಣ್ಯವ ಸವರಿ ಬೇಟ್ಯಾಡಿದಕೋವಿದನಮ್ಮ ಹಡೆದಪ್ಪ ಕೋಲೆಕೋವಿದನಮ್ಮ ಹಡೆದಪ್ಪ ರಚಿಸಿದದೇವವನಗಳ ವರ್ಣಿಪೆ ಕೋಲೆ 31

ತತ್ವಪ್ರಕಾಶದ್ದಾಳಿಂಬೆ ಸುಧಾರಸಬಿತ್ತಿದ ಕಬ್ಬಮೋಘ ಮಾವು ಕೋಲೆಬಿತ್ತಿದ ಕಬ್ಬಮೋಘ ಮಾವು ಪದ್ಯಮಾಲೆಉತ್ತತ್ತಿ ತೆಂಗು ಹಲಸನ್ನು ಕೋಲೆ 32

ಹತ್ತು ಪ್ರಕರಣ ದಾಟಿತೆಂಬೊ ದ್ರಾಕ್ಷದಸುತ್ತಿದ ಬಳ್ಳಿಮಂಟಪ ಕೋಲೆಸುತ್ತಿದ ಬಳ್ಳಿಮಂಟಪದಿ ಶುದ್ಧಮತ್ಯೌನ ಕೂಡಪ್ಪ ನಲಿದನು ಕೋಲೆ 33

ದೇಶ ದೇಶದೊಳಿದ್ದದುರ್ವಾದಿಪೋಕರಘಾಸಿಸಿ ಜಯಪತ್ರ ದ್ರವ್ಯವ ಕೋಲೆಘಾಸಿಸಿ ಜಯಪತ್ರ ದ್ರವ್ಯವ ತಂದು ಮಧ್ವೇಶಗರ್ಪಿಸಿದ ಮುದದಿಂದ ಕೋಲೆ 34

ಬಂಧು ಸುದರ್ಶನರಾಯರ ಒಡಗೂಡಿಮಂದಿರದೊಳಗಾನಂದಿಪ ಕೋಲೆಮಂದಿರದೊಳಗಾನಂದಿಪ ಶ್ರುತವೇಷತಂದೆಯನೇನ ಹೊಗಳುವೆ ಕೋಲೆ 35

ಇಪ್ಪತ್ತೈದು ತತ್ವ ನಾಣ್ಯದಿ ರಾಮನಾಮಸುಪ್ಪಾಣಿಮುದ್ರೆ ನಡೆಸುವ ಕೋಲೆಸುಪ್ಪಾಣಿಮುದ್ರೆ ನಡೆಸುವ ತನ್ನವರಿಗೆತಪ್ತ ಮುದ್ರೆ ಕುರುಹಿಟ್ಟನು ಕೋಲೆ 36

ಭೇದಿಸಿ ನೋಡಿರೊ ಭೇದವ ತಿಳಿಯಿರೊಮಾಧವಜೀವ ಜಡರೊಳು ಕೋಲೆಮಾಧವಜೀವ ಜಡರೊಳು ಎನುತಲಿಬೋಧಿಸಿದನು ಹಿತಮಾರ್ಗ ಕೋಲೆ 37

ತನ್ನ ಹೊಂದಿದರಿಗೆ ಪ್ರೌಢವೃತ್ತಿಯನು ಶ್ರೀಮನ್ನಾಮಾಮೃತವನುಣಿಸುವ ಕೋಲೆ ಶ್ರೀಮನ್ನಾಮಾಮೃತವನುಣಿಸುವ ಹೊರೆವನುಉನ್ನತ ಮಹಿಮ ಜಯರಾಯ ಕೋಲೆ 38

ಆವಾಗಸೂತ್ರಾರ್ಥ ನಿಸ್ಸಾಳ ವ್ಯಾಖ್ಯಾನತೀವಿದ ಶ್ರುತಿಯ ಕಹಳೆಯು ಕೋಲೆತೀವಿದ ಶ್ರುತಿಯ ಕಹಳೆ ಧ್ವನಿಯುಂಟುಶ್ರೀವ್ಯಾಸ ರಾಮಾರ್ಚನೆಯುಂಟು ಕೋಲೆ 39

ಅಚ್ಚ ಸಾತ್ವಿಕನಾದ ರಾಜಾಧಿರಾಜನಹೆಚ್ಚಿನಸತಿಶುದ್ಧಮತಿಯಮ್ಮ ಕೋಲೆಹೆಚ್ಚಿನಸತಿಶುದ್ಧ ಮತಿಯಮ್ಮ ನಮ್ಮಮ್ಮನಿಚ್ಚನಮ್ಮನು ಹೊರೆವಳು40

ತಾಯಿ ತಂದೇರ ಹಾಡಿ ದಣಿಯದು ನಮ್ಮ ಮನಭಯವು ಅದರಲ್ಲಿರುವುದು ಕೋಲೆಭಯವು ಅದರಲ್ಲಿರುವುದು ಶುಭಗುಣಬಾಯಿ ಮಾತಿಗೆ ತೀರವು ಕೋಲೆ 41

ಬಂದೆವು ಬೀಗರ ಮನೆಗಿಂದೆ ಮುಯ್ಯವತಂದೇವು ಬಾಲೇರೊಡಗೂಡಿ ಕೋಲೆತಂದೇವು ಬಾಲೇರೊಡಗೂಡಿ ಬೀಗರಅಂದವ ಹೇಳಲಳವಲ್ಲ ಕೋಲೆ 42

ಬಹುಕಾಲದ್ಹಿರಿಯರು ಬಾಳಿದ ಮನೆಯಿದುವಿವರಿಸಿ ನೋಡಲರಿಯದೆ ಕೋಲೆವಿವರಿಸಿ ನೋಡಲರಿಯದೆ ಕೆಡಿಸಿದರುಧವಳಾರವೆಲ್ಲ ಮಲಿನವು ಕೋಲೆ 43

ಬೀಗರಿದ್ದ ಮನೆಯನೆತ್ತೆತ್ತ ನೋಡಲುಬಾಗಿಲು ಬಯಲು ಬರೆಹುಯಿಲು ಕೋಲೆಬಾಗಿಲು ಬಯಲು ಬರೆಹುಯಿಲು ನಮ್ಮವರುಹ್ಯಾಗೆಂತು ಹೆಣ್ಣು ಕೇಳುವರು ಕೋಲೆ 44

ಸಂಖ್ಯಾವಿದನೆಂಬಾತ ಮಾವನಾತನ ರಾಣಿಬಿಂಕದ ಬೌದ್ಧದೇವ್ಯತ್ತಿ ಕೋಲೆಬಿಂಕದ ಬೌದ್ಧದೇವ್ಯತ್ತಿ ಭಾಟ್ಟ ನಿ:ಶಂಕ ಚಾರ್ವಾಕಭಾವಮೈದುನರು ಕೋಲೆ45

ಮಿಥ್ಯನಮ್ಮತ್ತಿಗೆಮಾಯೆನಮ್ಮ ನಾದಿನಿಸುತ್ತಿನ ಬಳಗಕೆಣಿಕಿಲ್ಲ ಕೋಲೆಸುತ್ತಿನ ಬಳಗಕೆಣಿಕಿಲ್ಲ ಕೆಣಕಿದರೆಮತ್ತೇನಾದರು ಹುರುಳಿಲ್ಲ ಕೋಲೆ 46

ಇಪ್ಪತ್ತೊಂದು ಮಂದಿ ಹೆಸರಾದವರ ಕೂಡಬಹುಕಾಲ ಕಜ್ಜವು ನಮಗುಂಟು ಕೋಲೆಬಹುಕಾಲ ಕಜ್ಜವು ನಮಗುಂಟು ಹಾಲಿಗೆಹೆಪ್ಪನೆರೆದಂತೆ ಹಿತಮಾತು ಕೋಲೆ 47

ಅಂಗಳದೊಳು ಬಂದು ತಿಳಿದೇವು ಅತ್ತಿಗೇರಶೃಂಗಾರಗರತಿ ಸಿರಿಯನು ಕೋಲೆಶೃಂಗಾರಗರತಿ ಸಿರಿಯನು ಕಾಣುತಹಿಂಗದೆ ನಿಂತು ನುಡಿಬೇಕು ಕೋಲೆ 48

ತಂಗಳೆಂಜಲು ಎಂಬೊ ಅಂಜಿಕೆ ತಮಗಿಲ್ಲಮಂಗಳಧಾತು ಕಾಣೆವು ಕೋಲೆಮಂಗಳಧಾತು ಕಾಣೆವು ಅತ್ತಿಗೇರುತಿಂಗಳಸ್ನಾನ ಅರಿಯರು ಕೋಲೆ 49

ದಾವಮೂಲೆಲಿ ಬೂದಿ ಮನೆಗಸ ನೋಡಿರೆಭಾವಿ ಅತ್ತೆಯಕೆಲಸವ ಕೋಲೆಭಾವಿ ಅತ್ತೆಯ ಕೆಲಸಕೆ ಮೆಚ್ಚಿದೆವುನಾವೇನುಡುಗೊರೆಯ ಕೊಡಬೇಕು ಕೋಲೆ 50

ಮಿಥ್ಯಾವಾದದಲಿ ನಮ್ಮತ್ತಿಗೆ ಬಲುಜಾಣೆಹೆತ್ತವ್ರನೆಲ್ಲ ಹುಸಿಯೆಂದು ಕೋಲೆಹೆತ್ತವ್ರನೆಲ್ಲ ಹುಸಿಯೆಂದು ಶಿವನೊಬ್ಬಸತ್ಯ ತಾನೆಂದು ನುಡಿವಳು ಕೋಲೆ 51

ಕಚ್ಚೆ ಹಾಕಿದವರಿಗೆ ವಿಪ್ರರೆಂದ್ಹೆಸರಿಟ್ಟುನಿಚ್ಚಗೆಳತೇರ ಒಡಗೂಡಿ ಕೋಲೆನಿಚ್ಚಗೆಳತೇರ ಒಡಗೂಡಿ ಗೆಳೆತನಹೆಚ್ಚಾಗಿ ನಡೆಸುತಿಹಳು ಕೋಲೆ 52

ದೊಡ್ಡಾಕಿ ನಾನೆಂದು ಅಡ್ಡಡ್ಡ ನಡೆವಳುದೊಡ್ಡವರ ಕಂಡರೋಡೋಳು ಕೋಲೆದೊಡ್ಡವರ ಕಂಡರೋಡೋಳು ನಡುಮನೆದೊಡ್ಡಿಗೆ ತಾನು ಹಿರಿಯಳೆ ಕೋಲೆ 53

ಮಾಯಿನ ದನಿನೋಡಿ ಮಾವನ ಕಿರಿಮಗಳುಬಾಯಿ ಬಡಕಿಯು ಬಹುಭಾಷಿ ಕೋಲೆಬಾಯಿ ಬಡಕಿಯು ಬಹುಭಾಷಿ ವೆಡ್ಡಗೊಂಡನಾಯಿಯ ತೆರದಿ ಬಲುಕೋಪಿ ಕೋಲೆ 54

ತಾಯಿ ತಂದೆಯರಿಗೆ ಗುಣವಂತೆ ಮಗಳೀಕೆನೋಯಿಯ ನುಡಿವಳುಂಡುಟ್ಟು ಕೋಲೆನೋಯಿಯ ನುಡಿವಳುಂಡುಟ್ಟು ಆ ಕ್ಷಣಬಾಯಾರುವಲ್ಲಿ ಬಲ್ಲಿದಳು ಕೋಲೆ 55

ಮಹಾತ್ತುಮರ ಮಟಾಮಾಯ ಮಾಡುವ ಶಕ್ತಿಮಹಾಢಾಳಿಕಿಯ ಬಲ್ಲಳು ಕೋಲೆಮಹಾಢಾಳಿಕಿಯ ಬಲ್ಲಳು ಆ ಬುಧರಮಾಯಿ ಅಭದ್ರೆಘನಕ್ಷುದ್ರೆ ಕೋಲೆ56

ತನ್ನ ಬದಿಯ ತನ್ನೆರೆಹೊರೆಯವರನುತನ್ನಂತೆ ಮಾಡಿಕೊಂಡಳು ಕೋಲೆತನ್ನಂತೆ ಮಾಡಿಕೊಂಡಳು ಮನದಲಿಉನ್ಮತ್ತವೃತ್ತಿಕಲಿಸೋಳು ಕೋಲೆ57

ಪ್ರಸ್ತವ ಮಾಡುವ ಮನೆಯೊಳು ಹೋಗುವಳುಅಸ್ತವ್ಯಸ್ತದಲಿ ಬಲುಬೇಗ ಕೋಲೆಅಸ್ತವ್ಯಸ್ತದಲಿ ಬಲುಬೇಗ ಷಡ್ರಸನ್ನಹಸ್ತಲಾಘವದಿ ಕೆಡಿಸುವಳು ಕೋಲೆ 58

ಒಳ್ಳೆ ಶಾಲ್ಯೋದನ ಭಕ್ಷ್ಷ್ಯಭೋಜನದೊಳುಕೊಳ್ಳಿಯಿಕ್ಕಿ ಕೆಡಿಸುವಳು ಕೋಲೆಕೊಳ್ಳಿಯಿಕ್ಕಿ ಕೆಡಿಸುವಳು ಪದಾರ್ಥವನೆಲ್ಲ ಏಕಾಕಾರ ಮಾಡುವಳು ಕೋಲೆ 59

ಅತ್ತಿಗೆನಾದಿನೇರ ಗೋಡೆಯ ಮೇಲಿನಚಿತ್ತಾರದ ಗೊಂಬಿ ನೋಡಿರೆ ಕೋಲೆಚಿತ್ತಾರದ ಗೊಂಬಿ ನೋಡಿರೆ ಅಖಂಡಮತ್ತೆ ಭೇದಗಳು ತಿಳಿಯವು ಕೋಲೆ 60

ಕಂಬ ಬೋದುಗಳೊಂದೆ ಕೆಳಮೇಲು ಕಟ್ಟು ಒಂದೆಅಂಬುಜಮದ್ದುಗುಣಿಕೊಂದೆ ಕೋಲೆಅಂಬುಜಮದ್ದುಗುಣಿಕೊಂದೆ ತುಲಸಿ ಕದಂಬವು ಎಕ್ಕೆ ಗಿಡವೊಂದೆ ಕೋಲೆ 61

ಕಾಗೆ ಕೋಗಿಲೆ ಒಂದೆ ಗೂಗೆ ನವಿಲು ಒಂದೆನಾಗನೀರೊಳ್ಳಿಯ ಹಾವು ಒಂದೆ ಕೋಲೆನಾಗನೀರೊಳ್ಳಿಯ ಹಾವು ಒಂದೆ ಚಿತ್ತರದಾ ಗಿಳಿಹಿಂಡು ತಿಳಿಯವು ಕೋಲೆ 62

ಕುದುರೆ ಕತ್ತೆಯ ಬಣ್ಣ ಆನೆ ಹಂದಿಯ ಬಣ್ಣಮದಹುಲಿಗೆ ನಾಯಿ ಬಣ್ಣವು ಕೋಲೆಮದಹುಲಿಗೆ ನಾಯಿ ಬಣ್ಣ ಒರ್ಸಿಟ್ಟಿಹಚದುರೆಯ ಕೈಗೆ ಕಡಗವು ಕೋಲೆ 63

ಅತ್ತಿಗೆನಾದಿನೇರ ಚಿತ್ತಾರ ಬಲುಘನಮತ್ತೆ ತೀರದ ಗುಣಗಳು ಕೋಲೆಮತ್ತೆ ತೀರದ ಗುಣಗಳುಭಾವಮೈದುನರೆತ್ತೋಡಿದರು ಸುಳುಹಿಲ್ಲ ಕೋಲೆ 64

ಗುರುಗಳ ಭಯವಿಲ್ಲ ಹಿರಿಯರ ಸ್ಮರಣಿಲ್ಲಹರಿಯೆ ತಾವೆಂದು ಬೆರೆತರು ಕೋಲೆಹರಿಯೆ ತಾವೆಂದು ಬೆರೆತರು ದಿಂಡೇರಿಗೊರೆವರು ತಮ್ಮ ಬುದ್ಧಿಯ ಕೋಲೆ 65

ಲಗಳಿಯ ಕೋಣಗೆ ಲಘ್ವಾದ ಕೆಲಸೆತ್ತಜಗದೀಶನೆತ್ತ ತಾವೆತ್ತ ಕೋಲೆಜಗದೀಶನೆತ್ತ ತಾವೆತ್ತ ಭಾವರನಗೆಗೇಡು ನೋಡಿ ನಗುತೇವೆ ಕೋಲೆ 66

ಹೆಗಲ ಕಾವಡಿಯವಗೆ ಹಗಲು ದೀವಟಿಗೇಕೆಮಿಗಿಲಾದ ಬಿರುದು ತಮಗೇಕೆ ಕೋಲೆಮಿಗಿಲಾದ ಬಿರುದು ತಮಗೇಕೆ ಮೈದುನರಮೊಗ ನೋಡಿದರೆ ಹೊಗೆಗೆಂಡ ಕೋಲೆ 67

ಪಂಚದೇವನ ಪೂಜೆ ಮಾಡುವರೊಂದಾಗಿಹಿಂಚು ಮುಂಚುಗಳ ಅರಿಯರು ಕೋಲೆಹಿಂಚು ಮುಂಚುಗಳ ಅರಿಯರು ಬರಿದೆ ಪ್ರಪಂಚವ ಬಿಟ್ಟೆವೆನಿಸುವರು ಕೋಲೆ 68

ಹಿಂಡುಬಾಂಧವರು ತಮ್ಮೊಳು ತಾವೆ ಕೊಂಡಾಡಿಮಂಡಿಕೆಸೂತ್ರಹರಕೊಂಡು ಕೋಲೆಮಂಡಿಕೆಸೂತ್ರಹರಕೊಂಡು ಕೊಂಡಾಡಿಮಂಡೆಯ ಬಿಟ್ಟು ತಿರುಗೋರು ಕೋಲೆ 69

ಇವರ ಲೆಕ್ಕದೊಳಗೆ ಹರಿಶಿವನೊಬ್ಬನೆರವಿಗಣನಾಥನೊಬ್ಬನೆ ಕೋಲೆರವಿಗಣನಾಥನೊಬ್ಬನೆ ಎಲ್ಲೆಲ್ಲಿದಿವಿ ದೇವರೊಳಗೆ ಬೇರಿಲ್ಲ ಕೋಲೆ 70

ವಿಧಿನಿಷಿದ್ಧಗಳಿಲ್ಲಪೋಕಮತದೊಳುಉದರ ತುಂಬಿದರೆ ಸಮದೃಷ್ಟಿ ಕೋಲೆಉದರ ತುಂಬಿದರೆ ಸಮದೃಷ್ಟಿ ಹರಿವ್ರತಮೊದಲಿಗಿಂದಿಗೆ ಸೊಗಸವು ಕೋಲೆ 71

ಬದನೆ ನುಗ್ಗೆಯ ಕಾಯಿ ಸಲೆ ತೊಂಡೆ ತುಪ್ಹೀರೆಮೃದು ಮೂಲಂಗಿ ಗಜ್ಜರಿಗಳು ಕೋಲೆಮೃದು ಮೂಲಂಗಿ ಗಜ್ಜರಿಗಳು ಇವರಿಗೆಮುದದೂಟ ಆತ್ಮಾರಾಮನ ತೃಪ್ತಿ ಕೋಲೆ 72

ಬಸಳೆ ಸಬ್ಬಸೆ ಸೊಪ್ಪು ಹುಳಿ ಚುಕ್ಕದ ಗೂಡೆಹಸನಾದ ಪುಂಡಿ ಬಲುಪ್ರೀತಿ ಕೋಲೆಹಸನಾದ ಪುಂಡಿ ಬಲುಪ್ರೀತಿಹಸಿವಿಗೆ ದೊರೆಯ ಪರಲೋಕ ಕೋಲೆ 73

ಮಡಿ ಮೈಲಿಗೆಯು ಒಂದೆ ಸ್ನಾನಪಾನಗಳೊಂದೆಹುಡುಗ ಹಿರಿಯರ ಬಳಿಕೊಂದೆ ಕೋಲೆಹುಡುಗ ಹಿರಿಯರ ಬಳಿಕೊಂದೆನುಡಿಬೇರೆ ಪೋಕರ ನಡೆಬೇರೆ ಕೋಲೆ 74

ನಮ್ಮ ನಗೆಯೊಳಗೆ ಉನ್ನತ ಸುಖವುಂಟುರಮ್ಮೆಯ ರಮಣ ಕರುಣಿಪ ಕೋಲೆರಮ್ಮೆಯ ರಮಣ ಕರುಣಿಪ ಒಡಲ್ಹೊಕ್ಕುನಮ್ಮವರಾಗಿ ಸುಖಿಯಾಗಿ ಕೋಲೆ 75

ನಿಮ್ಮ ಹಿರಿಯರೆಲ್ಲ ನಮ್ಮ ಮನೆಯ ಹೊಕ್ಕುಧರ್ಮಾರ್ಥ ಸೂರೆಗೊಂಡರು ಕೋಲೆಧರ್ಮಾರ್ಥ ಸೂರೆಗೊಂಡರು ಜಗವರಿಯೆನಿರ್ಮಳರಾಗಿ ಸುಖಿಯಾಗಿ 76

ಮಾವನೊಳಗೆ ನಮ್ಮ ನಗೆಯಿಲ್ಲ ಬೌದ್ಧದೇವೀರ ಕೂಡ ಸರಸಿಲ್ಲ ಕೋಲೆದೇವೀರ ಕೂಡ ಸರಸಿಲ್ಲ ಹಿರಿಯರುತಾವವರ ಗೆದ್ದು ನಗುವರು ಕೋಲೆ 77

ನಿಪುಣೆಂದೆನಿಸುವಿರಿ ಚಪಳೆರೆಂದೆನಿಸುವಿರಿಅಪರಾತ್ರೆ ಆಯಿತು ಬಂದೀಗ ಕೋಲೆಅಪರಾತ್ರೆ ಆಯಿತು ಬಂದೀಗ ನಮಗಿನ್ನುಉಪಚಾರವುಂಟೊ ಗತಿಯಿಲ್ಲೊ ಕೋಲೆ 78

ಮೋರೆ ತೋರದಿದ್ದರೆ ಮನೆಯೊಳಗಿರಿ ನೀವುಜಾರುತೇವೆ ನಮ್ಮ ಮನೆಗೀಗೆ ಕೋಲೆಜಾರುತೇವೆ ನಮ್ಮ ಮನೆಗೀಗೆ ಬೀದಿಲಿತೂರುತೇವೆ ನಿಮ್ಮ ಕರುಳನು ಕೋಲೆ 79

ಈಪರಿನಾರೇರ ಹಿತವಾದ ನಗೆಗಳಕೋಪವ ಬಿಟ್ಟು ಕೇಳುತ ಕೋಲೆಕೋಪವ ಬಿಟ್ಟು ಕೇಳುತ ಬಂದು ಸವಿi್ಞಪಕ ಕೈಯವಿಡಿದರು ಕೋಲೆ 80

ರತ್ನಗಂಬಳಿ ಹಾಸಿ ಒಳ್ಳೇರ ಮಕ್ಕಳೆಂದುಉತ್ತಮಗುಣವ ಕೊಂಡಾಡಿ ಕೋಲೆಉತ್ತಮ ಗುಣವ ಕೊಂಡಾಡಿ ಕುಳ್ಳಿರಿಸಿಚಿತ್ತಕೆ ಸುಖವ ಕೊಟ್ಟರು ಕೋಲೆ 81

ಶ್ರೀಕಾಂತನರಮನೆಯ ಹೊಂದಿದವರು ನೀವುಏಕಾಂತ ಭಕ್ತಿ ಬಲ್ಲವರು ಕೋಲೆಏಕಾಂತ ಭಕ್ತಿ ಬಲ್ಲವರು ನಮ್ಮ ನೀವೆ ಕೂಡಿಕೊಳ್ಳಿ ದೂರ್ಯಾಕೆ ಕೋಲೆ 82

ಸುಖದೂಟಸವಿಯನು ಅರಿಯದೆ ಕೆಟ್ಟೆವುಸುಖತೀರ್ಥಗುರುವು ನಮಗಾಗಿ ಕೋಲೆಸುಖತೀರ್ಥಗುರುವು ನಮಗಾಗಿ ಪರಲೋಕಸುಖ ಸೂರೆಗೊಂಡು ಬದುಕೇವು ಕೋಲೆ 83

ಐದು ಭೇದವನರಿತು ನಡೆದೇವು ನಾವಿಪ್ಪತ್ತೈದು ತತ್ವಗಳ ತಿಳಿದೇವು ಕೋಲೆ ಇಪ್ಪತ್ತೈದು ತತ್ವಗಳ ತಿಳಿದೇವು ಮೇಲೆ ಮತ್ತೈದು ಮುಕ್ತಿಯ ಪಡೆದೇವು ಕೋಲೆ 84

ಮುದ್ರೆ ಇಲ್ಲದ ನಾಣ್ಯ ಶುದ್ಧಲ್ಲ ಜಗದೊಳುಮುದ್ರಾಂಕರಾಗಿ ಬದುಕೇವು ಕೋಲೆಮುದ್ರಾಂಕರಾಗಿ ಬದುಕೇವು ಮಲೆತವರಗೆದ್ದೇವು ವಾಕ್ಯ ಬಲದಲ್ಲಿ ಕೋಲೆ 85

ಇಂತೆಂಬ ನುಡಿಗೇಳಿ ಅಪಾರಾನಂದದಲ್ಲಿಕಾಂತೆಯರೆಲ್ಲ ಒಂದಾಗಿ ಕೋಲೆಕಾಂತೆಯರೆಲ್ಲ ಒಂದಾಗಿ ಮನದಿ ವಿಶ್ರಾಂತರಾದರು ತಮತಮಗೆ ಕೋಲೆ 86

ಗುರುಭಕ್ತಿ ಅರಿಷಿಣ ಹರಿಭಕ್ತಿ ಕುಂಕುಮಪರಮಾರ್ಥ ಜ್ಞಾನಾಂಜನವನು ಕೋಲೆಪರಮಾರ್ಥ ಜ್ಞಾನಾಂಜನವನು ಇಟ್ಟರುಹರಿನಿರ್ಮಾಲ್ಯದ ಪುಷ್ಪ ಮುಡಿದರು ಕೋಲೆ 87

ಸಸ್ಯ ಸಾರಾವಳಿಯ ಸೀರೆಯ ತೆಗೆದರುಅತ್ತಿಗೆಯವರ ಮನಮೆಚ್ಚು ಕೋಲೆಅತ್ತಿಗೆಯವರ ಮನಮೆಚ್ಚಿನುಡುಗೊರೆಅರ್ಥಿಲಿ ಕೊಟ್ಟು ನಲಿದರು ಕೋಲೆ 88

ಮಾಧವಪ್ರತಿಷ್ಠಾನ ಪೇಟೆಯೊಳುದಿಸಿದಮಾದಳದ ಹಣ್ಣು ಬಣ್ಣದ ಕೋಲೆಮಾದಳದ ಹಣ್ಣು ಬಣ್ಣದ ಸೀರೆಯನಾದಿನಿ ಜಾಣೆಗಿತ್ತರು ಕೋಲೆ 89

ಅಚ್ಚ ಬಂಗಾರದ ಶಂಖಚಕ್ರಂಗಳಅಚ್ಚನೆತ್ತಿದ ನಯವಾದ ಕೋಲೆಅಚ್ಚನೆತ್ತಿದ ನಯವಾದ ಬೇರೆ ಬೇರೆಹಚ್ಚಡಗಳು ಬಾವರಿಗಿತ್ತು ಕೋಲೆ 90

ಭೇದ ಭೇದದ ಬಣ್ಣ ಬಗೆ ಬಗೆ ಚಿತ್ರದನಾದ ಸಮುದ್ರದ ಪೇಟೆಯ ಕೋಲೆನಾದ ಸಮುದ್ರದ ಪೇಟೆಯ ವಲ್ಲಿಗಳುಮೈದುನ ಜಾಣರುಡುಗೊರೆ ಕೋಲೆ 91

ಹಿರಿಯ ಕಿರಿಯರ ನೋಡಿ ಮಾನ್ಯಾಮಾನ್ಯನ ನೋಡಿತರತಮ ಭಾವದುಪಚಾರ ಕೋಲೆತರತಮ ಭಾವದುಪಚಾರ ಮಾಡಿದರುಹರಿಗುರು ಮೆಚ್ಚಿ ನಲಿವಂತೆ ಕೋಲೆ 92

ಈ ಪರಿಯಲಿವರ ಮನಮುಟ್ಟಿ ಮನ್ನಿಸಿಸುಗಂಧ ಪರಿಮಳ ದ್ರವ್ಯವ ಕೋಲೆಸುಗಂಧ ಪರಿಮಳ ದ್ರವ್ಯವ ಚೆಲ್ಲಾಡಿಶ್ರೀಪತಿಗವರರ್ಪಿಸಿ ಮುದದಿಂದ ಕೋಲೆ 93

ಪರಸ ಮುಟ್ಟಿದ ಮೇಲೆ ಲೋಹ ಚಿನ್ನಾಗದೆಸುರನದಿಮುಟ್ಟಿ ಸಗರರ ಕೋಲೆಸುರನದಿಮುಟ್ಟಿ ಸಗರರುದ್ಧಾರಾದಂತೆಕರಗಿತುಅವರಮನಮೈಲಿಗೆ94

ಶುಭಭರಿತಾದ ತಾಂಬೂಲ ಕೈಕೊಂಡುಶುಭವಾಕ್ಯ ನುಡಿದು ನಡೆವಾಗ ಕೋಲೆಶುಭವಾಕ್ಯ ನುಡಿದು ನಡೆವಾಗ ಬೀಗರುಅಬಲೇರಿಗೆ ಕೈಯ ಮುಗಿದರು ಕೋಲೆ 95

ನಾಳೆ ನಿಮ್ಮಾಜÕ ಬರೆ ಮುಯ್ಯ ತರುವೆಆಳವಾಡದಿರಮ್ಮ ನಮ್ಮನು ಕೋಲೆಆಳವಾಡದಿರಮ್ಮ ನಮ್ಮನು ನೀವೀಗಏಳಿಲ ಮಾಡದಿರಿ ಕಂಡ್ಯಾ ಕೋಲೆ &ಟಿ;, bsಠಿ; 96

ಹೀಗೆಂದ ಮಾತಿಗೆ ನುಡಿದರು ಹರಿಹರಿಭಾಗವತರೆಲ್ಲ ಧರೆಯೊಳು ಕೋಲೆಭಾಗವತರೆಲ್ಲ ಧರೆಯೊಳು ನಮ್ಮವರುಶ್ರೀಗಂಧ ಕರ್ಪೂರಕೆ ಮೈತ್ರವು 97

ಅಪ್ಪ ಜಯತೀರ್ಥಗೆ ಹೆತ್ತವ್ವ ಶುದ್ಧಮತಿಗೆಒಪ್ಪುವ ಬಂಧು ಬಳಗಕೆ ಕೋಲೆಒಪ್ಪುವ ಬಂಧು ಬಳಗಕೆ ನಿಮ್ಮಗುಣಒಪ್ಪಣೆ ಹೇಳೇವು ಕೋಲೆ ಗನೀವು ಬಂದಾಕ್ಷಣ ಶ್ರೀವ್ಯಾಸರಾಯರನೈವೇದ್ಯ ತೀರ್ಥವು ಲಭ್ಯವು ಕೋಲೆನೈವೇದ್ಯ ತೀರ್ಥವು ಲಭ್ಯವು ನಮ್ಮಪ್ಪನಾವ ಪರಿಯಲಿ ಒಲಿಸೇವು ಕೋಲೆ 9

ಮೆಲ್ಲನೆ ಹೊರವಂಟು ಫುಲ್ಲಭವ ಕೀರ್ತಿಸೊಲ್ಲುಸೊಲ್ಲಿಗೆ ಉಗ್ಗಡಿಸುತ ಕೋಲೆಸೊಲ್ಲುಸೊಲ್ಲಿಗೆ ಉಗ್ಗಡಿಸುತ ಹಾರುವಾಗಕ್ಷುಲ್ಲರ ಮನಕೆ ದಣಿವಾಯ್ತು ಕೋಲೆ 100

ಮನೆ ಮುಟ್ಟಿ ಬಂದರು ಗುರುಪಾದ ಕಂಡರುಜನನಿಗೆ ಕೈಯ ಮುಗಿದರು ಕೋಲೆಜನನಿಗೆ ಕೈಯ ಮುಗಿದರುಕೈವಲ್ಯಕ್ಕನುಮಾನವಿಲ್ಲದೆ ನಡೆವರು ಕೋಲೆ 101

ಧರೆಯ ಸಜ್ಜನರಿಗೆ ಸಕ್ಕರೆ ಸವಿಗಿಂತಉರೆ ಕಾಯ್ದ ಹಾಲ ಕೆನೆಗಿಂತ ಕೋಲೆಉರೆ ಕಾಯ್ದ ಹಾಲ ಕೆನೆಗಿಂತ ಸವಿಯುಂಟುಗುರುಭಕ್ತಿ ಉಂಟು ಪರವುಂಟು ಕೋಲೆ 102

ಅಲ್ಪ ಕನ್ನಡದ ನುಡಿಯೆನ್ನಲಾಗದುಫಣಿತಲ್ಪನ ಪ್ರಿಯಗುರುಮಹಿಮೆ ಕೋಲೆಫಣಿತಲ್ಪನ ಪ್ರಿಯಗುರುಮಹಿಮೆ ನೋಡುವುದುತಪ್ಪನಾರಿಸದೆ ಶಿಷ್ಟರು ಕೋಲೆ 103

ಜನ್ಮ ಜನ್ಮ ಬ್ರಹ್ಮ ವಾಯೂರೆ ಗುರುಗಳುರಮ್ಮೆಯ ರಮಣ ಮನೆದೈವ ಕೋಲೆರಮ್ಮೆಯ ರಮಣ ಮನೆದೈವವಾಗಲಿಶ್ರೀಮಧ್ವಾಚಾರ್ಯರು ಕೋಲೆ 104

ಪ್ರಸನ್ನವೆಂಕಟಪತಿ ನಾಮದುಚ್ಚಾರಣೇಲಿಅಶುಭಕೋಟಿಗಳು ಉಳುಹಿಲ್ಲ ಕೋಲೆಅಶುಭ ಕೋಟಿಗಳು ಉಳುಹಿಲ್ಲ ಶುಭಮಸ್ತುಕುಶಲಾಯುರಾರೋಗ್ಯವಾಹುದು ಕೋಲೆ 105
****

explanations

ಬೆಳಗು ಜಾವದಿ ಬಾರೋ ಹರಿಯೇ ನಿನ್ನ ಚರಣಕಮಲ ತೊಳೆದು ಜಲಪಾನ ಮಾಡುವೆ ನಾ....
ಶ್ರೀ ಪ್ರಸನ್ನ ವೆಂಕಟದಾಸರ ಭೇದಮುಕ್ತಾವಳಿ
    ಅರ್ಥಾನುಸಂಧಾನ by ಶ್ರೀ ಆರ್ ಜಿ ಗುಡಿಯವರು

ಕೋಲು ಮುಕ್ತಿಮಾರ್ಗದ ಕೋಲು ದುಷ್ಟ ಶಾಸನ 
ಕೋಲು ಸುಖತೀರ್ಥಯತಿರಾಯನ ಕರದಂಡು 
ಕೋಲು ಕೋಲೆನೆನ್ನಕೋಲೆ 
॥ಪ॥

ವಾಣಿ ಭಾರತಿದೇವಿ ಗರುಡ ಮಹೇಶಾನಂತ ಜ್ಞಾನದಾತರಿಗೆ ನಮೋ ಎಂಬೆ ಕೋಲೆ 
ಜ್ಞಾನದಾತರಿಗೆ ನಮೋ ಎಂಬೆ ಶ್ರೀ ವಿಷ್ಣು ಮಾನುನೆರಾರ್ವರ ಶರಣಂಬೆ ಕೋಲೆ ॥೨॥
  ವಾಣಿ ಭಾರತಿದೇವಿ.... ಎಂಬ ಮುಂದಿನ ನುಡಿಯಲ್ಲಿ ಬ್ರಹ್ಮನ ಪತ್ನಿ ಭಾರತೀದೇವಿ, ಗರುಡ,ರುದ್ರ, ಶೇಷರು ಹಾಗೂ ಶ್ರೀ ಕೃಷ್ಣನ ಷಣ್ ಮಹಿಷಿಯರೆನಿಸಿದ ಜಾಂಬವತಿ, ಲಕ್ಷಣಾ, ಕಾಳಿಂದೀ, ನೀಲಾ, ಭದ್ರಾ,
ಮಿತ್ರವಿಂದಾ ಇವರನ್ನು ನಮಿಸಿ ಸ್ತುತಿಸಲಾಗಿದೆ.
    ತಾರತಮ್ಯದಲ್ಲಿ ವಾಣಿ ಹಾಗೂ ಭಾರತೀದೇವಿಯರ ನಂತರದ ಸ್ಥಾನ ಗರುಡ _ ಶೇಷ _ ರುದ್ರರದು. ಈ ಮೂವರಲ್ಲಿಯ ಪರಸ್ಪರ ಕಿಂಚಿತ್ ವ್ಯತ್ಯಾಸದಿಂದಾಗಿ ಗರುಡ _ ಶೇಷ _ ರುದ್ರ ಎಂದು ಕ್ರಮವಾಗಿ ಗುರುತಿಸಲಾಗಿದೆ. ಆದರೂ ಇವರು ಸಮಾನರೆಂಬುದಕ್ಕೆ ರುದ್ರ, ಗರುಡ,  ಶೇಷ ಹಾಗೂ ಶೇಷ _ ಗರುಡ _ ರುದ್ರ ಎಂಬಂತಹ ಮಧ್ವರ ಮಾತುಗಳು ಸಾಕ್ಷಿಯೊದಗಿಸುತ್ತವೆ. ಅಂತೆಯೇ ಇಲ್ಲಿ ಗರುಡ _ ಶೇಷ _ ರುದ್ರ ಎನ್ನುವ ಬದಲು ಗರುಡ ಮಹೇಶಾನಂತ ಎನ್ನುವದರ ಮೂಲಕ ಮೇಲಿನ ಸಂಗತಿಯನ್ನು ಸೂಚಿಸಲಾಗಿದೆ. ಗರುಡ _ ಶೇಷ _ ರುದ್ರರು ಮನೋಭಿಮಾನಿಗಳು. ಮನಸ್ಸು ಶಾಂತವಾಗಿದ್ದಾಗ ಮಾತ್ರ ಜ್ಞಾನ ಸಂಪಾದನೆ ಸಾಧ್ಯ. ಅಷ್ಟೇ ಅಲ್ಲ ಜ್ಞಾನಂ ಮಹೇಶ್ವರಾದಿಚ್ಛೇತ್ ಅಂದರೆ ರುದ್ರದೇವರನ್ನು ಆರಾಧಿಸಿ ಜ್ಞಾನ ಪಡೆಯಬೇಕು ಎಂದಿರುವದೂ ಈ ಕಾರಣಕ್ಕಾಗಿಯೇ. ಗರುಡ ಮಹೇಶಾನಂತ ಜ್ಞಾನದಾತರಿಗೆ ನಮೋ ಎನ್ನುವ ಮೂಲಕ ಪ್ರಮೇಯದ ಕಡೆಗೆ ಗಮನ ಸೆಳೆಯಲಾಗಿದೆ. 
***

ಕೋಲು ಮುಕ್ತಿಮಾರ್ಗದ ಕೋಲು ದುಷ್ಟ ಶಾಸನ 
ಕೋಲು ಸುಖತೀರ್ಥಯತಿರಾಯನ ಕರದಂಡು 
ಕೋಲು ಕೋಲೆನೆನ್ನಕೋಲೆ 
॥ಪ॥

ಏನೂ ಇಲ್ಲೆಂಬನ ಹಾನಿಗೆ ಕಡೆಯಿಲ್ಲ 
ತಾನೀಶನೆಂದು ನುಡಿದವನ ಕೋಲೆ 
ತಾನೀಶನೆಂದು ನುಡಿದವ ತಮಸನು 
ತಾನುಂಬ ತನ್ನ ಬಳಗದಿ ಕೋಲೆ 
॥೫॥
    ಈ ಜಗತ್ತು ಸುಳ್ಳು ಎನ್ನುವಂತೆ ನಾನೇ ಬ್ರಹ್ಮ ಜೀವ ಬ್ರಹ್ಮರಲ್ಲಿ ಭೇದವಿಲ್ಲ ಎನ್ನುವವರು ಹುಲಿಯೋ, ಸಿಂಹವೋ ಕ್ರಿಮಿಕೀಟಗಳೋ ಆಗಿ ಹುಟ್ಟುವರು ಎಂದೆನ್ನುತ್ತದೆ. ಛಾಂದೋಗ್ಯೋಪನಿಷತ್, ಅದರಂತೆ ಭಗವಂತನ ಜ್ಞಾನ ಪಡೆಯದವರು, ಮತ್ತು ವಿರುದ್ಧ ಜ್ಞಾನ ಪಡೆದವರು, ಇವರೆಲ್ಲರಿಗೂ ಅಂಧಂತಮಸ್ಸು ಎಂದಿದೆ ಈಶಾವಾಸ್ಯೋಪನೀಷತ್. ಇದನ್ನೇ ತಾನೀಶನೆಂದು ನುಡಿದವ ತಮಸನು ತಾನುಂಬ ತನ್ನ ಬಳಗದಿ ಕೋಲೆ ಎನ್ನಲಾಗಿದೆ. ನೈಯಾಯಿಕರು ಭಗವಂತನಲ್ಲಿ ೧೪ ಗುಣಗಳನ್ನು ಒಪ್ಪಿದರೆ, ಅದ್ವೈತ ದರ್ಶನವು ಬ್ರಹ್ಮನನ್ನು ನಿರ್ಗುಣ, ನಿರಾಕಾರನೆಂದಿದೆ. ಇಂತಹ ತಪ್ಪು ತಿಳುವಳಿಕೆಯಿಂದ ಜನರು ದಾರಿತಪ್ಪುವಂತಾಗುತ್ತದೆ, ಎಂಬ ಆತಂಕ ಇಲ್ಲಿ ವ್ಯಕ್ತವಾಗಿದೆ. 
***

   ಕೋಲು ಮುಕ್ತಿಮಾರ್ಗದ ಕೋಲು ದುಷ್ಟ ಶಾಸನ 
ಕೋಲು ಸುಖತೀರ್ಥಯತಿರಾಯನ ಕರದಂಡು 
ಕೋಲು ಕೋಲೆನೆನ್ನಕೋಲೆ  
॥ಪ॥

ಏನೂ ಇಲ್ಲೆಂಬನ ಹಾನಿಗೆ ಕಡೆಯಿಲ್ಲ 
ತಾನೀಶನೆಂದು ನುಡಿದವನ ಕೋಲೆ 
ತಾನೀಶನೆಂದು ನುಡಿದವ ತಮಸನು 
ತಾನುಂಬ ತನ್ನ ಬಳಗದಿ ಕೋಲೆ ॥೫॥

ಹರಿಯ ಗುಣಕೆ ಎಣೆಕೆನಿಟ್ಟವ ಕೆಟ್ಟವ 
ಹರಿನಿರ್ಗುಣೆಂಬ ಡಂಬರ ಕೋಲೆ 
ಹರಿನಿರ್ಗುಣೆಂಬ ಡಂಬರ  ಸಂಗದಿ 
ಧರೆಯ ಸಜ್ಜನರು ಮತಿಗೆಡಲಿ ಕೋಲೆ ॥೬॥

 ವ್ಯಾಸರಾಜರು,ವಾದಿರಾಜರು, ಪುರಂದರದಾಸರಂಥವರಿಂದ ಪ್ರೇರಣೆ ಪಡೆದ ಪ್ರಸನ್ನವೆಂಕಟರಲ್ಲೂ ಇಲ್ಲಿ ೫ ಮತ್ತು ೬ ನೇ ನುಡಿಗಳಲ್ಲಿ ಕಾಣಿಸಿಕೊಳ್ಳುವ ಈ ಪರಮತ ವಿಮರ್ಶೆ ಸಹಜವೆನಿಸಿದೆ. ಏನೂ ಇಲ್ಲೆಂಬನ ಹಾನಿಗೆ ಕಡೆಯಿಲ್ಲ ಎಂಬ ನುಡಿಯಲ್ಲಿ,  ಎಲ್ಲಾ ಇಲ್ಲೆಂಬವವನ ನಾಲಿಗೆ ಇಲ್ಲವಾಯಿ । ತಲ್ಲ ಇನ್ನೆಂತು ನಮ್ಮ ಕೂಡೆ ನುಡಿವ ಎಂಬ ಶ್ರೀ  ವಾದಿರಾಜರ ಪ್ರಭಾವವನ್ನು ಗುರುತಿಸುವುದು ಕಷ್ಟವೇನಲ್ಲ. ಎಲ್ಲವೂ ಸುಳ್ಳು, ಜಗತ್ತು ಸುಳ್ಳು ಎಂದು ಸಾರಹೊರಟವರ ಮಾತೂ ಜಗತ್ತಿನಲ್ಲಿಯೇ ಅಡಕವಾದುದರಿಂದ ಅದೂ ಸಹ ಸುಳ್ಳು ಎಂದು ಹೇಳಿ ವಾದಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಶ್ರೀ ವಾದಿರಾಜರು. ವಾದಿಯ ಮಾತೇ ಸುಳ್ಳಾದಲ್ಲಿ ವಿಶ್ವವು ಸುಳ್ಳೆನ್ನುವ ಅವನ ವಿಚಾರ ಕುಸಿದು ಬೀಳುತ್ತದೆ. 
***

ಭಕುತ್ಯೆಂಬ ಮುಯ್ಯವ ಹರಿಪಾದಕರ್ಪಿಸಿದ ಅಕಳಂಕ ಮಧ್ವ ಮುನಿರಾಯ ಕೋಲೆ ಅಕಳಂಕ ಮಧ್ವ ಮುನಿರಾಯನಂಘ್ರಿಗೆ 
ಸಕಳ ಭಾರವ ಒಪ್ಪಿಸಿದೆನು ಕೋಲೆ ॥೧೧॥

   ದೇವತೆಗಳಲ್ಲೂ ಒಮ್ಮೊಮ್ಮೆ ಅಸುರಾವೇಶವಾಗುವದೆಂದ ಮೇಲೆ ಮನುಷ್ಯರಲ್ಲಿ ಅಸುರಾವೇಶವಿರುವ ಬಗ್ಗೆ ಬೇರೆ ಹೇಳಬೇಕಾಗಿಲ್ಲ. ಭಗವಂತನ ಭಕ್ತಿ ಸಾಧನೆಯ ಸಾಧಕವರ್ಗದಲ್ಲಿ ಅಸುರಾವೆಶವಿಲ್ಲದ ಶ್ರೇಷ್ಠರೆಂದರೆ ವಾಯುದೇವರು ಮಾತ್ರ ಎನ್ನುತ್ತದೆ ಬೃಹದಾರಣ್ಯಕ ಉಪನಿಷತ್. ರಾಮನೇ ಹನುಮಂತನಿಗೆ ಏನನ್ನಾದರೂ ವರ ಕೇಳಿಕೊಳ್ಳುವಂತೆ ಹೇಳಿದಾಗಲೂ, ರಾಮನ ಪಾದಾರವಿಂದಗಳಲ್ಲಿ ಭಕ್ತಿಯನ್ನು ಮಾತ್ರ ಕೇಳಿಕೊಂಡ ಧೀಮಂತ ಹನುಮಂತ. ಅದರಂತೆ ಶುದ್ಧೇಭಾಗವತೇ ಧರ್ಮೇ ನಿರತೋ ಯದ್ ವೃಕೋದರಃ ಎಂದರೆ ಯಾವುದೇ ಸ್ವಾರ್ಥವಿಲ್ಲದ ಶುದ್ಧ ಭಗವದ್ಭಕ್ತಿ ಹೊಂದಿದವನು ಭೀಮನು. ಹಾಗಯೇ ವೇದವ್ಯಾಸರಿಗೆ ಅಭಿಮತವಾದ ಹರಿಸರ್ವೋತ್ತಮತ್ವವನ್ನು ಪ್ರತಿಪಾದಿಸಿ ಪ್ರತಿಷ್ಠಾಪಿಸಿದವರು ಮಧ್ವರು. ವಾಯುದೇವರ ಅವತಾರವೆನಿಸಿದ ಹನುಮ, ಭೀಮರಂತೆ *ಭಕುತೆಂಬ ಮುಯ್ಯವ ಹರಿಪಾದಕರ್ಪಿಸಿದವರು ಅಕಳಂಕ ಮಧ್ವಮುನಿರಾಯರು.
***

ಲೌಕಿಕ ಮಾತಿನಂತಲ್ಲ ಮುಯ್ಯದ ಹಾಡು 

ವೈಕುಂಠಪತಿಯ ಅರಮನೆಯ ಕೋಲೆ 

ವೈಕುಂಠಪತಿಯ  ಅರಮನೆಯಾಸ್ಥಾನದ 

ಏಕಾಂತ ನಾರೇರೊಪ್ಪಿದ್ದು ಕೋಲೆ


ಹಾದಿ ಬೀದಿಯ ಜನರ ಮೆಚ್ಚಿನ ಮುಯ್ಯಲ್ಲ

ಮಾಧವನ ಶೇವತದ್ವೀಪದ ಕೋಲೆ 

ಮಾಧವನ ಶೇವತದ್ವೀಪದ ಮಂದಿರದಿ 

ಶ್ರೀದೇವಿಯರಮ್ಮ ಕೇಳ್ವಳು ಕೋಲೆ ॥೧೮॥

   ನಾನು ನನ್ನ ಮನೆಯಲ್ಲಿ ಮಾವಿನಹಣ್ಣು ತಿಂದೆನು ಇಂತಹ ವೈಯಕ್ತಿಕ ನೆಲೆಯ ತೀರಾ ಸ್ವಾರ್ಥದ ಹಿನ್ನೆಲೆಯ ಲೌಕಿಕ ಮಾತುಗಳಿಂದ ಯಾರಿಗೂ ಪ್ರಯೋಜನವಿಲ್ಲ. ಆದರೆ ಅಧ್ಯಾತ್ಮಿಕ ಚಿಂತನೆಯೇ ಬೇರೆ. ಭಗವಂತನ ಅಭಿಷೇಕದ ತೀರ್ಥ ಅಥವಾ ಅಥವಾ ಭಗವಂತನ ಪಾದೋದ್ಭೂತಳಾದ  ಗಂಗೆಯ ದರ್ಶನ, ಸ್ಪರ್ಶನ, ಪಾನಗಳನ್ನು ಗೈಯುವರನ್ನು ಅವು ಪಾವನಗೊಳಿಸುವಂತೆ, ಭಗವಂತನ ವಿಚಾರವು ಜಿಜ್ಞಾಸು ಹಾಗೂ ಉತ್ತರಿಸುವ ವ್ಯಕ್ತಿಗಳಂತೆ ಇದನ್ನು ಆಲಿಸುವ ಶ್ರೋತೃವರ್ಗವನ್ನೂ ಪವಿತ್ರ ಗೊಳಿಸುತ್ತದೆ ಎಂದಿದೆ ಭಾಗವತ. ಅದರಂತೆ ಇಲ್ಲಿ ಮುಂದೆ ಪ್ರಸ್ತುತಗೊಳ್ಳಲಿರುವ ಹರಿಸರ್ವೋತ್ತಮತ್ವ ಮುಂತಾದ ದ್ವೈತ ಸಿದ್ಧಾಂತದ ಈ ವಿಚಾರ ಹಾಳುಹರಟೆಯಂತಹ ಲೌಕಿಕ ವಿಚಾರವಾಗಿರದೆ ಭಗವನ್ಮಹಿಮಾ ಬೋಧಕವಾಗಿರುವದರಿಂದ ತಾವೆಲ್ಲ ಆಲಿಸಬೇಕೆಂದು ಸಕಾರಣವಾಗಿ ವಿನಂತಿಸಲಾಗಿದೆ. ಮಾತ್ರವಲ್ಲ ವೈಕುಂಠಪತಿ ನಾರಾಯಣನ ಪತ್ನಿಯಾದ ಮಹಾಲಕ್ಷ್ಮೀಗೂ ಇದು ಸಮ್ಮತವಾದ ವಿಚಾರವೆಂದೂ ನೆನಪಿಸಲಾಗಿದೆ. ವೇದಾಭಿಮಾನಿನಿ ಮಹಾಲಕ್ಷ್ಮೀ. ಮಾತ್ರವಲ್ಲ. ಅನಾಲೋಚನೇಪಿ ಸರ್ವವಿಷಯಕಂ ತಜ್ಞಾನಂ ಅಂದರೆ ಯೋಚಿಸದೆ ಅನಾಯಾಸವಾಗಿ ಇಡೀ ಬ್ರಹ್ಮಾಂಡದ ವಿಚಾರಗಳೆಲ್ಲವೂ ನಿರಂತರವಾಗಿ ಸ್ಫುರಣಗೊಳ್ಳುವಂತಹ ಮಹಾಜ್ಞಾನಿಯೂ ಆಗಿದ್ದಾಳೆ. ಮಧ್ವರ ಛಾಂದೋಗ್ಯ ಭಾಷ್ಯದ ಮಾತಿನಂತೆ 'ತಾರತಮ್ಯ ಮತ್ತು ವಿಷ್ಣು ಪಾರಮ್ಯಗಳ ಸರಿಯಾದ ಅರಿವು ಪಡೆದವರು ಏಕಾಂತಿ ಗಳೆನಿಸುತ್ತಾರೆ. ಇಂತಹ ಅತ್ಯುನ್ನತ ಏಕಾಂತಭಕ್ತ ಶಿರೋಮಣಿ ಹಾಗೂ ಸರ್ವಜ್ಞಶಿಖಾಮಣಿ ಎನಿಸಿದ ಮಹಾಲಕ್ಷ್ಮೀಗೆ ಹರಿಸರ್ವೋತ್ತಮತ್ವ, ತಾರತಮ್ಯ ಮುಂತಾದ ದ್ವೈತ ಸಿದ್ಧಾಂತ ಪ್ರಮೇಯಗಳು ಸಮ್ಮತವಾಗಿವೆ. ಅಂತೆಯೇ ವೈಕುಂಠಪತಿಯ ಅರಮನೆಯಾಸ್ಥಾನದ ಏಕಾಂತ ನಾರೇರೊಪ್ಪಿದ್ದೆ ನ್ನುವ ಮೂಲಕ ಇಲ್ಲಿ ಪ್ರಸ್ತುತಗೊಳ್ಳಲಿರುವ ವಿಚಾರ ವಿಶಿಷ್ಟವಾದಂತೆ ಶ್ರೇಷ್ಠವೂ ಅಮೂಲ್ಯವೂ ಆಗಿರುವದರ ಕಡೆಗೆ ಗಮನ ಸೆಳೆದುದಲಾಗಿದೆ. ಒಬ್ಬರೇ ಇದ್ದರೂ ದೊಡ್ಡವರನ್ನು ಬಹುವಚನದಿಂದ ಗೌರವಪೂರ್ವಕ ಗುರುತಿಸುವ ಸಂಪ್ರದಾಯವನ್ನು ನಾರೇರು ಎಂಬುದಾಗಿ ಸೂಚಿಸಲಾಗಿದೆ. ಜೊತೆಗೆ ಇದು ಹಾದಿಬೀದೀಯ ಜನ ಮೆಚ್ಚಿ ಸುವಂತಹ ಕ್ಷುಲ್ಲಕ ಮುಯ್ಯಲ್ಲ ಮಾಧವನ ಶ್ವೇತ ದ್ವೀಪ ಮಂದಿರದಿ ಶ್ರೀದೇವಿಯರಮ್ಮ ಕೇಳ್ವಂತಹ ಉತ್ಕೃಷ್ಟ ವಿಚಾರ ಇದು ಎನ್ನಲಾಗಿದೆ.

***  


ಭ್ರಾಂತಜನರಿಗೆ ವಿಶ್ರಾಂತಿ ದೋರದು ಮುಯ್ಯಾ

ನಂತಾಸನದ ಅನಂತನ ಕೋಲೆ ಅ

ನಂತಾಸನದ ಅನಂತನ ಮಡದಿ ಶ್ರೀ

ಕಾಂತೆ ನಮ್ಮವ್ವ ಕೇಳ್ವಳು ಕೋಲೆ ॥೧೯॥


  ಭಗವಂತನಿಗೆ ಅರ್ಪಿಸುವ ಭಕ್ತಿಯ ಮುಯ್ಯ (ಕಾಣಿಕೆ) ಶುದ್ಧವಾಗಿರಬೇಕು. ಹರಿಪಾರಮ್ಯನೆಲೆಯಿಲ್ಲದ, ತಾರತಮ್ಯ ಹಿನ್ನೆಲೆಯಿಲ್ಲದ ಭಕ್ತಿ ಶುದ್ಧಭಕ್ತಿ ಎನಿಸದು. ಇಂತಹ ಶುದ್ಧ ಭಕ್ತಿ ಇಲ್ಲದವರು ಭ್ರಾಂತ ಜನರೆ ನಿಸಿ ಮೂಢಭಕ್ತಿಯಿಂದ ಅವರಿಗೆ ದುಃಖಮಿಶ್ರಿತವಲ್ಲದ ನಿರಂತರ ಸುಖರೂಪದ ವಿಶ್ರಾಂತಿ ಎನಿಸಿದ ಮುಕ್ತಿದೋರದು ಎನ್ನಲಾಗಿದೆ. ಇಂತಹ ಶ್ರೇಷ್ಠ ಮುಕ್ತ ಸ್ಥಲವೆನಿಸಿದ ಅನಂತಾಸನದ ದೊರೆಯ ಮಡದಿ ಶ್ರೀಕಾಂತೆ ನಮ್ಮವ್ವ ಕೇಳ್ವ ವಿಶಿಷ್ಟ ವಿಚಾರ ಇದಾಗಿದೆ. ಉತ್ಕೃಷ್ಟ ವಿಷಯವನ್ನು ಎತ್ತಿ ಹೇಳುವಂತಹ ಪ್ರಚಲಿತ ರೀತಿಯನ್ನೇ ಇಲ್ಲಿ ಮಹಾಲಕ್ಷ್ಮೀ  ಕೇಳ್ವ ಎಂಬ ಪುನರುಕ್ತಿಯಿಂದ ಸೂಚಿಸಲಾಗಿದೆ. ವೈಕುಂಠ ಶ್ವೇತ ದ್ವೀಪ, ಅನಂತಾಸನಗಳೆಂಬ ಈ ಮೂರು ಮುಕ್ತಸ್ಥಳಗಳಲ್ಲಿ ಪರಮಾತ್ಮನು ನಿತ್ಯ ಸನ್ನಿಹಿತನಾಗಿರುವದರಿಂದ ಅವನಿಗೆ ತ್ರಿಧಾಮಾ ಎಂಬ ಹೆಸರಿದೆ. ಕೃಷ್ಣನು ಮಥುರೆಯಲ್ಲಿ ಅವತರಿಸಿ ಅಲ್ಲಿಂದ ನಂದಗೋಕುಲ ಮತ್ತು ಅಲ್ಲಿಂದ ವೃಂದಾವನಕ್ಕೆ ತೆರಳಿದ್ದರಿಂದ ತಾನು ತ್ರಿಧಾಮಾ ಎಂಬುದನ್ನು ನೆನಪಿಸುವಂತಿದೆ. ಎಂದಿದ್ದಾರೆ ವಾದಿರಾಜರು. ವೈಕುಂಠಪತಿಯ ಅರಮನೆ ಶ್ವೇತದ್ವೀಪದ ಮಂದಿರ ಮತ್ತು ಅನಂತಾಸನದ ಅನಂತನ ಎಂದು ಭಗವಂತನ ನಿತ್ಯ ಸನ್ನಿಧಾನದ ಈ ಮೂರು ಮುಕ್ತಸ್ಥಳಗಳನ್ನು ವಿವರಿಸುವುದಕ್ಕಾಗಿಯೇ ಇಲ್ಲಿ ಪ್ರತ್ಯೇಕವಾಗಿ ಮೂರು ನುಡಿಗಳನ್ನು ಪ್ರಸ್ಥಾಪಿಸಿದ ದಾಸರ ಮೇಲಾದ ಶ್ರೀ ವಾದಿರಾಜರ ರುಕ್ಮಿಣೀಶ ವಿಜಯದ ಪ್ರಭಾವವನ್ನು ಗುರುತಿಸಬಹುದಾಗಿದೆ.

***


ಹಾಡುತ ಬರುತೇವೆ ಹರಸುತ ಬರುತೇವೆ

ರೂಢಿಯ ಸಾಧುಜನರನು ಕೋಲೆ

ರೂಢಿಯ ಸಾಧುಜನರ ಗುಣಂಗಳ ಕೊಂ 

ಡಾಡುತ ನಾವು ಬರುತೇವೆ ಕೋಲೆ....॥೨೦॥


ದರ್ಶನರಾಯರು ಮೂವತ್ತೇಳು ಮಂದಿ

ಅರಸರು ನಮ್ಮ ಹಿರಿಯರು ಕೋಲೆ

ಅರಸರು ನಮ್ಮ ಹಿರಿಯರ ಮಹಿಮೆ ಉ

ಚ್ಚರಿಸುತ ನಾವು ಬರುತೇವೆ ಕೋಲೆ ॥೨೧॥


ನಮ್ಮ ತವರಿಗೆ ಕೀರ್ತಿ ತಂದ ಕನ್ಯೇರು ನಾವು

ನಮ್ಮ ನೆಳಲಿಗಂಜಿ ನಡೆದೇವು ಕೋಲೆ

ನಮ್ಮ ನೆಳಲಿಗಂಜಿ ನಡೆದೇವು ದುರುಳೇರ

ಉನ್ಮತ್ತ ನಮಗೆ ಎಣಿಕಿಲ್ಲ ಕೋಲೆ ॥೨೨॥


   ಸಜ್ಜನರ ಗುಣಗಳನ್ನು ಹಾಡಿ ಹರಸಬೇಕು ಕೊಂಡಾಡಬೇಕು ಇದು ಕೂಡ ಸಾಧಕನ ಸಾಧನೆಯ ಒಂದು ಭಾಗವೆಂಬುದು ಮುಂದಿನ ನುಡಿಯಲ್ಲಿ ಸೂಚಿತವಾಗಿದೆ.

ಮಧ್ವರು ದ್ವೈತಸಿದ್ಧಾಂತ ಸ್ಥಾಪನೆಗೆ ೩೨ ಕೃತಿಗಳನ್ನು ರಚಿಸಿದ್ದಾರೆ. ಇವೇ ಸರ್ವಮೂಲ ಗ್ರಂಥಗಳೆಂದು ಪ್ರಸಿದ್ಧವಾಗಿವೆ. ಜಯತೀರ್ಥರು,  ವ್ಯಾಸರಾಜರುಂತಹ ದ್ವೈತ ಸಿದ್ಧಾಂತದ ಮುಂದಿನ ಎಲ್ಲಾ ಗುರು ಪರಂಪರೆಗೆ ಈ ಸರ್ವಮೂಲ ಗ್ರಂಥಗಳೇ ಮೂಲ ಹಾಗೂ ಪ್ರಮುಖ ಆಧಾರವಾದುದರಿಂದ 'ದರ್ಶನ ರಾಯರು ಮೂವತ್ತೇಳು ಮಂದಿ ಅರಸರು ನಮ್ಮ ಹಿರಿಯರ ಮಹಿಮೆ' ಉಚ್ಚರಿಸುತ ನಾವು ಬರುತೇವೆ ಎನ್ನಲಾಗಿದೆ. ಅದ್ವೈತದರ್ಶನಗಳಂತಹ ಇತರ ಮತಗಳಲ್ಲಿ ಪೂರ್ವಾಚಾರ್ಯರು ತಮ್ಮ ವಿಚಾರಗಳಿಗೆ ಶ್ರುತಿ ಸ್ಮೃತ್ಯಾದಿ ಪ್ರಮಾಣಗಳಂತಹ ಗಟ್ಟಿಯಾದ ನೆಲೆಗಟ್ಟನ್ನು ಒದಗಿಸದಿರುವ ಕಾರಣದಿಂದಲೋ ಏನೋ ಅಲ್ಲಿ ಅರ್ವಾಚೀನರು ತಮ್ಮ ಪೂರ್ವಾಚಾರ್ಯರರ ವಿಚಾರಗಳನ್ನು ಸರಿಯಿಲ್ಲವೆಂದು ವಿಮರ್ಶಿಸಿರುವ ನಿದರ್ಶನಗಳು ದೊರಕುತ್ತವೆ. ಆದರೆ ಶ್ರೀ ಮಧ್ವರು ತಮ್ಮ ಸಿದ್ಧಾಂತದ ವಿಚಾರಗಳಿಗೆ ಶ್ರುತಿ ಸ್ಮೃತ್ಯಾದಿ ವಿವಿಧ ಪ್ರಮಾಣಗಳ ನೆಲೆಗಟ್ಟನ್ನು ಒದಗಿಸದಿರುವುದರಿಂದ ದ್ವೈತ ದರ್ಶನದಲ್ಲಿ ಮಾತ್ರ ಇಂಥ ಸಂದರ್ಭವಿಲ್ಲ. ಅಂತೆಯೇ ದ್ವೈತ ದರ್ಶನದ ಗುರು ಪರಂಪರೆಯವರಾದ ನಾವು ತವರಿಗೆ ಕೀರ್ತಿ ತಂದವರು ನಮ್ಮ ನೆಳಲಿಗಂಜಿ ನಡೆಯುವವರು ಎನ್ನಲಾಗಿದೆ.  ಜೊತೆಗೆ ನಾವು ಪ್ರಮಾಣಸಾದ್ಧ ಹಾಗೂ ಶುದ್ಧ ವಿಚಾರದ ಅನುಯಾಯಿಗಳಾದ್ದರಿಂದ ಸ್ವಾತಂತ್ರ್ಯವಿಲ್ಲದವರು ಎನ್ನುವ ದುರುಳೇರ ಉನ್ಮತ್ತ ನಮಗೆ ಎಣಿಕಿಲ್ಲ ಎಂದು ಆತ್ಮವಿಶ್ವಾಸವನ್ನು ಮರೆಯಲಾಗಿದೆ.

***


ನಮ್ಮಯ್ಯನಾಸ್ಥಾನ ಬಣ್ಣಿಸಲಳವಲ್ಲ

ನಿರ್ಮಳಾತ್ಮಕರು ಸಚಿವರು ಕೋಲೆ

ನಿರ್ಮಳಾತ್ಮಕರು ಸಚಿವರು ಪರಿವಾರ

ಧರ್ಮಶೀಲರು ವಿರತರು ಕೋಲೆ ॥೨೪॥


ಎತ್ತ ನೋಡಲಿ ನವರತ್ನದ ಬೆಳಗು

ಚಿತ್ರ ಮಂಟಪಕೆ ಎಣಿಕಿಲ್ಲ ಕೋಲೆ 

ಚಿತ್ರ ಮಂಟಪಕೆ ಎಣಿಕಿಲ್ಲ ಶಂಖಚಕ್ರ

ಒತ್ತಿಡಿದವು ಭಿತ್ತಿಲಿ ಕೋಲೆ ॥೨೫॥


ಬ್ರಹ್ಮಸೂತ್ರದ ವಜ್ರಕಂಬದಿ ಕುಳಿತಿಹ

ಬ್ರಹ್ಮಜ್ಞ ಪರಮಹಂಸವು ಕೋಲೆ

ಬ್ರಹ್ಮಜ್ಞಪರಮಹಂಸವು ಪುಣ್ಯಶ್ಲೋಕ

ಧರ್ಮಜ್ಞರಾಯ ಗಿಳಿವಿಂಡು ಕೋಲೆ

॥೨೬॥

   ನಮ್ಮಯ್ಯನಾಸ್ಥಾನ ಬಣ್ಣಿಸಲಳವಲ್ಲ ಎಂದು ಮುಂತಾದ ಮುಂದಿನ ನುಡಿಗಳಲ್ಲಿ ಮುಕ್ತಿಗೆ ಅವಶ್ಯವಾದ ಶುದ್ಧ ಭಕ್ತಿ ಮಾರ್ಗ ತಿಳಿಸಿದ ಶ್ರೀ ಮಧ್ವರ ಸ್ಮರಣೆಯೊಂದಿಗೆ ಜಯತೀರ್ಥರು ಹಾಗೂ ಅವರ ಕೃತಿಗಳ ಪರಿಚಯವನ್ನು ರೂಪಕಗಳ ಮೂಲಕ ಮಾಡಿಕೊಡಲಾಗಿದೆ. ಆಗಲೇ ವಾಚಸ್ಪತಿ, ಅಮಲಾನಂದ, ಶ್ರೀ ಹರ್ಷ, ಆನಂದ ಬೋಧ ಮುಂತಾದ ಪ್ರಸಿದ್ಧ ಪಂಡಿತರಿಂದ ಅದ್ವೈತದರ್ಶನ ವು ವೇದಾಂತವೆಂದರೆ ಇದೇ ಎನ್ನುವಷ್ಟರ ಮಟ್ಟಿಗೆ ಪ್ರಸಿದ್ಧಗೊಂಡಿತ್ತು. ಆಗ ತಾನೇ ಶ್ರೀ ಮಧ್ವರು ಕಂಡಿದ್ದ ದ್ವೈತ ಸಿದ್ಧಾಂತದ ವಿಚಾರ, ವೈಶಿಷ್ಟ್ಯಗಳ ವಿವರಣೆಯೊಂದಿಗೆ ಅದನ್ನು ನೆಲೆಗೊಳಿಸುವುದು, ಕ್ರಮವಾಗಿ ಪಂಡಿತ ಪಡೆಯ ನಿರ್ಮಾಣ, ಶಿಷ್ಯ ಸಂಪತ್ತು ಹೆಚ್ಚಿಸುವುದು, ಗ್ರಂಥ ರಚನೆ, ವಾದ_ವಿವಾದ ಮುಂತಾದವು ಅಂದಿನ ದ್ವೈತಪೀಠಾಧಿಪತಿಗಳ ತುರ್ತಾಗಿತ್ತು. ಇದನ್ನು ಸಮರ್ಥವಾಗಿ ನಿಭಾಯಿಸಿ, ದ್ವೈತ ಸಿದ್ಧಾಂತ ಸೌಧವನ್ನು ಭದ್ರಗೊಳಿಸಿದ ಶ್ರೇಯಸ್ಸು ಶ್ರೀ ಜಯತೀರ್ಥರದು. ಅಂತೆಯೇ ಪ್ರಾತಃ ಸ್ಮರಣೀರಾದ ಶ್ರೀ ಜಯತೀರ್ಥರನ್ನು ಇಲ್ಲಿ ವಿಶೇಷವಾಗಿ ಕೊಂಡಾಡಲಾಗಿದೆ. ದ್ವೈತ ವೇದಾಂತ ಸಾಮ್ರಾಜ್ಯದ ಜಯತೀರ್ಥರ ಆಸ್ಥಾನ ವರ್ಣಿಸಲಸಾಧ್ಯ. ಅಲ್ಲಿರುವವರೆಲ್ಲ 

ಶುದ್ಧರು _ ಸಿದ್ಧರು, ಯೋಗಿಗಳು _ ವಿರಾಗಿಗಳು, ತ್ಯಾಗಿಗಳು ಮಾತ್ರವಲ್ಲ ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ, ಆತ್ಮನಿವೇದನ ಈ ನವವಿಧ ಭಕ್ತಿಗಳನ್ನು ಅಳವಡಿಸಿಕೊಂಡ ಜ್ಞಾನಿ ವರೇಣ್ಯರೂ ಹೌದು. ವಿಷ್ಣುವಿನ ಶಂಖ ಚಕ್ರ ಚಿಹ್ನೆಗಳನ್ನು ಧರಿಸಿ ಪರಮ ವಿಷ್ಣು ಭಕ್ತರೆನೆಸಿದ, ಈ ಮೇಧಾವಿಗಳ ಜ್ಞಾನ ರತ್ನಗಳ ಬೆಳಕು ಸುತ್ತಲೂ ಎಲ್ಲೆಡೆ ಹರಡಿದೆ. ವೇದವ್ಯಾಸರ ಬ್ರಹ್ಮಸೂತ್ರಗಳಿಗೆ ಆಚಾರ್ಯ ಮಧ್ವರು ಅಣುಭಾಷ್ಯ, ನ್ಯಾಯವಿವರಣ, ಬ್ರಹ್ಮಸೂತ್ರ ಭಾಷ್ಯ ಹಾಗೂ ಅನುವ್ಯಾಖ್ಯಾನಗಳೆಂಬ ನಾಲ್ಕು ಉದ್ಗ್ರಂಥಗಳನ್ನು ರಚಿಸಿ ವೇದವ್ಯಾಸರ ಅಭಿಪ್ರಾಯಗಳನ್ನು ಸಾಧಾರವಾಗಿ ಪ್ರತಿಪಾದಿಸಿ ಪ್ರತಿಷ್ಠಾಪಿಸಿದ್ದಾರೆ. ಅಂತೆಯೇ ಶ್ರೀ ಆನಂದತೀರ್ಥರು ಭಗವಂತನ ಅವತಾರವಾದ ವೇದವ್ಯಾಸರನ್ನು ಸರಿಯಾಗಿ ಅರಿತ ಹಾಗೂ ಯತಿಗಳೂ ಸೇರಿದಂತೆ ಅಪಾರ ಶಿಷ್ಯ ಪರಂಪರೆಗೆ ಶ್ರೇಷ್ಠ ತತ್ವೋಪದೇಶ ನೀಡಿದ ಪರಮಹಂಸರು.

***


ತತ್ವಪ್ರಕಾಶದ್ದಾಳಿಂಬೆ ಸುಧಾರಸ

ಬಿತ್ತಿದ ಕಬ್ಬಮೋಘ ಮಾವು ಕೋಲೆ

ಬಿತ್ತಿದ ಕಬ್ಬಮೋಘ ಮಾವು ಪದ್ಯಮಾಲೆ 

ಉತ್ತತ್ತಿ ತೆಂಗು ಹಲಸನ್ನು ಕೋಲೆ ॥೩೨॥


ಹತ್ತು ಪ್ರಕರಣ ದಾಟಿತೆಂಬೊ ದ್ರಾಕ್ಷದ

ಸುತ್ತಿದಬಳ್ಳಿಮಂಟಪ ಕೋಲೆ

ಸುತ್ತಿದಬಳ್ಳಿಮಂಟಪದಿ ಶುದ್ಧ

ಮತ್ಯೌನ ಕೂಡಪ್ಪ ನಲಿದನು ಕೋಲೆ ॥೩೩॥


ದೇಶ ದೇಶದೊಳಿದ್ದ ದುರ್ವಾದಿ ಪೋಕರ

ಘಾಸಿಸಿ ಜಯಪತ್ರ ದ್ರವ್ಯವ ತಂದು ಮ

ದ್ವೇಶಗರ್ಪಿಸಿದ ಮುದದಿಂದ ಕೋಲೆ ॥೩೪॥


    


ಆನೆಗಳೆಣಕಿಲ್ಲ ಕುದುರೆಯ ಗಣನ್ಯಿಲ್ಲ

ಕಾಲಾಳು ರಥಕೆ ಮಿತಿಯಿಲ್ಲ ಕೋಲೆ

ಕಾಲಾಳು ರಥಕೆ ಮಿತಿಯಿಲ್ಲ ಅನ್ಯೋಕ್ತಿ

 ಜಾಣೇ ದಾಸೇರಿಗೆ ಕಡೆಯಿಲ್ಲ ಕೋಲೆ ॥೩೦॥


ಕುವಿದಾರಣ್ಯವ ಸವರಿ ಬೇಟ್ಯಾಡಿದ 

ಕೋವಿದ ನಮ್ಮ ಹಡೆದಪ್ಪ ಕೋಲೆ

ಕೋವಿದ ನಮ್ಮ ಹಡೆದಪ್ಪ ರಚಿಸಿದ

ದೇವವನಗಳ ವರ್ಣಿಪೆ ಕೋಲೆ ॥೩೧॥


   ಚಿತ್ರೈಃ ಪದೈಶ್ಚ ಗಂಭೀರೈಃ ವಾಕ್ಯೈಮಾನೈರ ಖಿಂಡಿತೈಃ ।

ಗುರುಭಾವಂ ವ್ಯಂಜಯಂತೀ ಭಾತಿ ಶ್ರೀಜಯತೀರ್ಥ ವಾಕ್ ॥ ಎಂದಂತೆ ಇತರ ಮತೀಯ ವಿಚಾರ ದಿಗ್ವಿಜಯದಲ್ಲಿ ಇವರ ವಾಗ್ವೈಖರಿ ಅತ್ಯದ್ಭುತ, ಇಂತಹ ವಾದಿಗಳ ದಿಗ್ವಿಜಯದಲ್ಲಿ ಇವರ ವಾಗ್ವೈಖರಿ ಅತ್ಯದ್ಭುತ. ಇಂತಹ ವಾದಿಗಳ ದಿಗ್ವಿಜಯದಲ್ಲಿ ಪಾಲ್ಗೊಂಡ ಇವರ ಯುಕ್ತಿಗಳೆಂಬ ಆನೆಗಳೆಣಕಿಲ್ಲ ಪ್ರಮಾಣಗಳೆಂಬ ಕುದುರೆಯ ಗಣನ್ಯಿಲ್ಲ ವೇದೋಪನಿಷತ್ತುಗಳೆಂಬ ಕಾಲಾಳು ರಥಕೆ ಮಿತಿಯಿಲ್ಲ ಉತ್ತಮ ವಾಗ್ಮಿಗಳಾದ ಇವರ ಅನ್ಯೋಕ್ತಿ ಜಾಣೆ ದಾಸೇರಿಗೆ ಕಡೆಯಿಲ್ಲ ಜಯತೀರ್ಥರ ಶ್ರೀ ಮನ್ಯಾಯಸುಧಾ, ತತ್ವಪ್ರಕಾಶಿಕಾ, ಪ್ರಮೇಯ ದೀಪಿಕಾ ಮುಂತಾದ ಕೃತಿಗಳಲ್ಲಿ ಅದುವರೆಗೆ ಪ್ರಚಲಿತವಿದ್ದ ವಿವಿಧ ಮತಗಳ ಸುದೀರ್ಘ ವಿಮರ್ಶೆಯ ಜೊತೆಗೆ ಅವುಗಳಲ್ಲಿರಬಹುದಾದ ಕುಂದುಕೊರತೆಗಳು ಸಾಧಾರವಾಗಿ ವಿವರಣೆ ಗೊಂಡಿರುವುದು ಕಂಡು ಬರುತ್ತದೆ. ಅಂತೆಯೇ ವೇದೋಪನಿಷತ್ತುಗಳಂತಹ ಪ್ರಮಾಣಗಳಿಂದ ದ್ವೈತ ಸಿದ್ಧಾಂತವನ್ನು ಸಮರ್ಥಿಸಿದ ಶ್ರೀ ಜಯತೀರ್ಥರು ಕುವಿದಾರಣ್ಯವ ಸವರಿವಬೇಟ್ಯಾಡಿದ ಕೋವಿದ ರೆನ್ನಲಾಗಿದೆ.

    ಇಂತಹ ಹಡೆದಪ್ಪ ಜಯತೀರ್ಥರು ರಚಿಸಿದ ಅಪಾರಗ್ರಂಥ ಸಮೂಹವು ದೇವವನ ವೆಂಬ ರೂಪಕದಿಂದ ಮುಂದಿನ ಎರಡು ನುಡಿಗಳಲ್ಲಿ ವರ್ಣಿತವಾಗಿವೆ. 

***

ತತ್ವಪ್ರಕಾಶದ್ದಾಳಿಂಬೆ ಸುಧಾರಸ

ಬಿತ್ತಿದ ಕಬ್ಬಮೋಘ ಮಾವು ಕೋಲೆ

ಬಿತ್ತಿದ ಕಬ್ಬಮೋಘ ಮಾವು ಪದ್ಯಮಾಲೆ

ಉತ್ತತ್ತಿ ತೆಂಗು ಹಲಸನ್ನು ಕೋಲೆ ॥೩೨॥


ಹತ್ತು ಪ್ರಕರಣ ದಾಟಿತೆಂಬೊ ದ್ರಾಕ್ಷದ

ಸುತ್ತಿದಬಳ್ಳಿಮಂಟಪ ಕೋಲೆ

ಸುತ್ತಿದಬಳ್ಳಿಮಂಟಪದಿ ಶುದ್ಧ

ಮತ್ಯೌನ ಕೂಡಪ್ಪ ನಲಿದನು ಕೋಲೆ ॥೩೩॥


ದೇಶ ದೇಶದೊಳಿದ್ದ ದುರ್ವಾದಿ ಪೋಕರ

ಘಾಸಿಸಿ ಜಯಪತ್ರ ದ್ರವ್ಯವ ಕೋಲೆ

ಘಾಸಿಸಿ ಜಯಪತ್ರ ದ್ರವ್ಯವ ತಂದು ಮ

ದ್ವೇಶಗರ್ಪಿಸಿದ ಮುದದಿಂದ ಕೋಲೆ ॥೩೪॥


  ದ್ವೈತ ಸಿದ್ಧಾಂತ ಸ್ಥಾಪನೆಗಾಗಿ ಶ್ರೀ ಮಧ್ವರು ರಚಿಸಿದ ಮೂವತ್ತೇಳು ಗ್ರಂಥಗಳೇ ಇಂದು ಸರ್ವಮೂಲ ಹೆಸರಿನಿಂದ ಪ್ರಸಿದ್ಧವಾಗಿವೆ. ಅವುಗಳಲ್ಲಿ ಬ್ರಹ್ಮಸೂತ್ರಭಾಷ್ಯ ಅಣುಭಾಷ್ಯ ನ್ಯಾಯವಿವರಣ ಹಾಗೂ ಅನುವ್ಯಾಖ್ಯಾನ ಗಳೆಂಬ ಈ ನಾಲ್ಕು ಕೃತಿಗಳು ಶ್ರೀ  ವೇದವ್ಯಾಸರ ಬ್ರಹ್ಮಸೂತ್ರಗಳ ಅಂತರ್ಯವನ್ನು ಪ್ರಕಟಿಸುತ್ತವೆ. ಅದರಂತೆ ಗೀತಾ ತಾತ್ಪರ್ಯ ಹಾಗೂ ಗೀತಾಭಾಷ್ಯ ಗಳು ಭಗವದ್ಗೀತೆಯ ರಹಸ್ಯ ಸ್ವಾರಸ್ಯಗಳ ಪ್ರತಿಬಿಂಬಗಳೆನ್ನಬಹುದು. ಇನ್ನು ಈಶಾವಾಸ್ಯಾದಿ ದಶೋಪನಿಷತ್ ಭಾಷ್ಯಗಳು ಅವುಗಳಲ್ಲಿ ಅಡಗಿದ ತತ್ವಗಳ ಮೇಲೆ ಬೆಳಕು ಚಲ್ಲುತ್ತವೆ. ಹೀಗೆ ಪ್ರಸ್ಥಾನತ್ರಯಗಳೆನಿಸಿದ ಬ್ರಹ್ಮಸೂತ್ರ ಭಗವದ್ಗೀತೆ ಹಾಗೂ ಉಪನಿಷತ್ತುಗಳು ಇವುಗಳ ಮೇಲಿನ ಶ್ರೀ  ಮಧ್ವರ  ಭಾಷ್ಯಗಳು ದ್ವೈತ ದರ್ಶನದ ಸಮರ್ಥನೆಯಲ್ಲಿ ಮಹತ್ವಪೂರ್ಣ ಕೃತಿಗಳೆನಿಸಿವೆ. ಹಾಗೆಯೇ ದಶಪ್ರಕರಣ ಗಳೆಂದು ಪ್ರಸಿದ್ಧವಾದ ಪ್ರಮಾಣಲಕ್ಷಣ, ಕಥಾಲಕ್ಷಣ, ಮಾಯಾವಾದ ಖಂಡನ, ಉಪಾಧಿ  ಖಂಡನ, ಪ್ರಪಂಚಮಿಥ್ಯಾತ್ವಾನುಮಾನಖಂಡನ, ತತ್ವೋದ್ಯೋತ, ವಿಷ್ಣು ತತ್ವ ವಿನಿರ್ಣಯ, ತತ್ವ ಸಂಖ್ಯಾನ, ತತ್ವ ವಿವೇಕ, ಕರ್ಮನಿರ್ಣಯ, ಈ ಕೃತಿಗಳಲ್ಲಿ ಪ್ರತ್ಯಕ್ಷ, ಅನುಮಾನ ಆಗಮಗಳೆಂಬ ಪ್ರಮಾಣಗಳ ಲಕ್ಷಣಗಳ ಜೊತೆಗೆ ಇತರ ವಾದಗಳನ್ನು ಸಾಧಾರವಾಗಿ ವಿಮರ್ಶಿಸಿ ವಿಷ್ಣುಸರ್ವೋತ್ತಮತ್ವ ಮುಂತಾದ ತತ್ವಗಳನ್ನು ಸಮರ್ಥಿಸಲಾಗಿದೆ. ಮಹಾಭಾರತ ತಾತ್ಪರ್ಯನಿರ್ಣಯ, ಭಾಗವತಗಳಲ್ಲಿಯ ಕ್ಲಿಷ್ಟ ಹಾಗೂ ಅಸ್ಪಷ್ಟವೆನಿಸುವ ರಹಸ್ಯಾರ್ಥಗಳ ವಿವರಣೆಯ ಜೊತೆಗೆ ದ್ವೈತ ಸಿದ್ಧಾಂತದ ಸಮರ್ಪಕ ಸಮನ್ವಯವನ್ನೂ ಕಾಣುತ್ತೇವೆ. ವೇದಗರ್ಭತತ್ವವನ್ನರಸುವವರಿಗೆ ಋಗ್ಭಾಷ್ಯ ಉತ್ತಮ ದಾರಿದೀಪವಾಗಿದೆ. ಯಮಕ ಭಾರತ ಕೃಷ್ಣ ಹಾಗೂ ಪಾಂಡವರ ಚರಿತ್ರೆಯನ್ನು ವರ್ಣಿಸುವ ಪ್ರೌಢ ಕಾವ್ಯವಾಗಿದೆ. ಭಕ್ತಿಸ್ತೋತ್ರವಾದ ದ್ವಾದಶಸ್ತೋತ್ರ ಸಂಗೀತಕ್ಕೆ ಅಳವಡುವ ಹರಿಗೀತೆ ಎನಿಸಿದೆ. ಜಯಂತೀ ನಿರ್ಣಯ ಕೃಷ್ಣ ಜನ್ಮಾಷ್ಟ ಮಿಯ ಬಗ್ಗೆ ವಿವರಿಸಿದರೆ, ಯತಿಪ್ರಣವಕಲ್ಪ ಕೃಷ್ಣಾಮೃತ ಮಹಾರ್ಣವ ಹಾಗೂ ಸದಾಚಾರ ಸ್ಮೃತಿ ಈ ಮೂರು ಕೃತಿಗಳು ಭಕ್ತಿ ಹಾಗೂ ಸದಾಚಾರ ಸಂಹಿತೆಯ  ಪ್ರತೀಕಗಳಾಗಿವೆ. ವಾಸ್ತುಶಿಲ್ಪ ಪ್ರತಿಮಾ ನಿರ್ಮಾಣ ಇವುಗಳ ಮಾಹಿತಿಯನ್ನು ತಂತ್ರಸಾರ ಸಂಗ್ರಹ ಒದಗಿಸಿದರೆ , ತಿಥಿ ನಿರ್ಣಯ ಜ್ಯೋತಿಷ್ಯ ಶಾಸ್ತ್ರವನ್ನು ಪರಿಚಯಿಸುತ್ತವೆ. ಹೀಗೆ ವಿವಿಧ ಮೂಲದ ಅನೇಕ ಶಾಸ್ತ್ರಗಳ ಮೂಲೆ ಮೂಲೆಗಳನ್ನು ಸ್ಪರ್ಶಿಸಿದ ಶ್ರೀ ಮಧ್ವರ ಪ್ರತಿಭೆ ಅಗಾಧವೆನಿಸುತ್ತದೆ.

***

ಇದರಂತೆ ಶ್ರೀಮಧ್ವರ ಗ್ರಂಥಗಳಿಗೆ ಟೀಕಾ(ವ್ಯಾಖ್ಯಾನ) ರಚಿಸಿ ಟೀಕಾಕೃತ್ಪದರೆನಿಸಿದವರು ಶ್ರೀ ಜಯತೀರ್ಥರು. ೧]ನ್ಯಾಯಸುಧಾ, ೨]ತತ್ವ ಪ್ರಕಾಶಿಕಾ ೩]ನ್ಯಾಯವಿವರಣ ಟೀಕಾ, ೪]ಪ್ರಮೇಯ ದೀಪಿಕಾ, ೫]ನ್ಯಾಯ ದೀಪಿಕಾ, ೬]ಸಂಬಂಧ ದೀಪಿಕಾ, ೭]ಈಶಾವಾಸ್ಯ ಭಾಷ್ಯ ಟೀಕಾ, ೮]ಷಟ್ಪ್ರಶ್ನೋಪನಿಷತ್ ಭಾಷ್ಯಟೀಕಾ ಇದರಂತೆ ೧]ಪ್ರಮಾಣ ಲಕ್ಷಣ, ೨]ಕಥಾ ಲಕ್ಷಣ, ೩]ಮಾಯಾವಾದ ಖಂಡನ, ೪]ಉಪಾಧಿ ಖಂಡನ, ೫]ಪ್ರಪಂಚ ಮಿಥ್ಯಾತ್ವಾನುಮಾನ ಖಂಡನ, ೬]ತತ್ವ ಸಂಖ್ಯಾನ, ೭]ತತ್ವ ವಿವೇಕ, ೮]ತತ್ವೋದ್ಯೇತ, ೯]ವಿಷ್ಣು ತತ್ವ ವಿನಿರ್ಣಯ, ೧೦]ಕರ್ಮ ನಿರ್ಣಯ ಎಂಬುದಾಗಿ ಸರ್ವಮೂಲಗಳಲ್ಲಿ ಅಡಕವಾದ ಇವು ದಶಪ್ರಕರಣ ಳೆಂದು ಪ್ರಸಿದ್ಧ. ಈ ದಶಪ್ರಕರಣಗಳಿಗೆ ಶ್ರೀ ಜಯತೀರ್ಥರು ವ್ಯಾಖ್ಯಾನ ರಚಿಸುವದರ ಜೊತೆಗೆ ಸ್ವತಂತ್ರವಾಗಿ ೧೯]ಪ್ರಮಾಣ ಪದ್ಧತಿ, ೨೦]ವಾದಾವಲಿ, ೨೧]ಪದ್ಯಮಾಲಾ ಎಂಬ ಕೃತಿಗಳನ್ನೂ ರಚಿಸಿದವರೆಂದು ಅವರನ್ನು ಪ್ರಶಂಸಿಸಲಾಗಿದೆ. ಇದರಂತೆ ಶ್ರೀ ಜಯತೀರ್ಥರು ಭಾರತಾದ್ಯಂತ ಸಂಚರಿಸಿ ಇತರ ಮತೀಯರನ್ನು ತಮ್ಮ ವಾಗ್ವೈಖರಿಯಿಂದ ಜಯಿಸಿ ಸಂಪಾದಿಸಿದ ಜಯ ಪತ್ರ ದ್ರವ್ಯವ ತಂದು ಮದ್ವೇಶಗರ್ಪಿಸಿದರು ಎನ್ನುವ ಮೂಲಕ ಶ್ರೀ ಜಯತೀರ್ಥರಲ್ಲಿಯ ಅಗಾಧ ಪಾಂಡಿತ್ಯ, ಶ್ರೇಷ್ಠ ವಾಗ್ವೈಖರಿಗಳಂತೆ ವಿಶಿಷ್ಟ ಕಾರ್ಯವೈಖರಿ ಗುರುಮಧ್ವರ ಬಗೆಗಿನ ಅಚಲ ಶ್ರದ್ಧಾಭಕ್ತಿಗಳ ಕಡೆಗೂ ಗಮನ ಸೆಳೆಯಲಾಗಿದೆ.

***

ಬಂಧು ಸುದರ್ಶನರಾಯರ ಒಡಗೂಡಿ

ಮಂದಿರದೊಳಗಾನಂದಿಪ ಕೋಲೆ

ಮಂದಿರದೊಳಗಾನಂದಿಪ ಶ್ರುತವೇಷ

ತಂದೆಯನೇನ ಹೊಗಳುವೆ ಕೋಲೆ ॥೩೫॥


ಇಪ್ಪತ್ತೈದು ತತ್ವನಾಣ್ಯದಿ ರಾಮನಾಮ

ಸುಪ್ಪಾಣಿ ಮುದ್ರೆ ನಡೆಸುವ ಕೋಲೆ

ಸುಪ್ಪಾಣಿ ಮುದ್ರೆ ನಡೆಸುವ ತನ್ನವರಿಗೆ

ತಪ್ತ ಮುದ್ರೆ ಕುರುಹಿಟ್ಟನು ಕೋಲೆ ॥೩೬॥


   ಆಚಾರ್ಯ ಮಧ್ವರು ದ್ವೈತ ಸಿದ್ಧಾಂತದ ಮೂಲಕ ಸು ಅಂದರೆ ನವೀನ ಹಾಗೂ ಶ್ರೇಷ್ಠ ದರ್ಶನ (ಶಾಸ್ತ್ರ ಮತ್ತು ದೃಷ್ಟಿ) ನೀಡಿದವರಾದ್ದರಿಂದ ಸುದರ್ಶನರಾಯರು ಮಾತ್ರವಲ್ಲ ಶುದ್ಧ ಭಕ್ತಿಯ ಮಾರ್ಗ ದರ್ಶನ ನೀಡಿ ಭಕ್ತರ ಉದ್ಧಾರಗೈದುದರಿಂದ 'ಬಂಧು' ಗಳೂ ಹೌದು. ಇಂತಹ ಬಂಧು ಸುದರ್ಶನರಾಯರ ಒಡಗೂಡಿ ಮಂದಿರದೊಳಗಾನಂದಿಪ ಯತಿವರೇಣ್ಯರಾದ ಶ್ರೀ ಜಯತೀರ್ಥರ ಬಗ್ಗೆ ಅಲ್ಪರಾದವರು ಏನೆಂದು ಪ್ರಶಂಸಿಸಿಯಾರು, ಎನ್ನಲಾಗಿದೆ.  ಭೂಮಿ, ನೀರು, ಬೆಂಕಿ, ಗಾಳಿ, ಆಕಾಶ ಇವು ಪಂಚಮಹಾಭೂತಗಳು. ರೂಪ, ರಸ, ಗಂಧ, ಸ್ಪರ್ಶ, ಶಬ್ದ ಇವು ಪಂಚ ಜ್ಞಾನೇಂದ್ರಿಯಗಳು, ಮಾತು, ಕೈ ಕಾಲು, ಗುದ, ಉಪಸ್ಥ ಇವು ಪಂಚ ಕರ್ಮೇಂದ್ರಿಯಗಳು, ಮನಸ್ಸು, ಬುದ್ಧಿ, ಅಹಂಕಾರ, ತತ್ವ, ಮಹತತ್ವ, ಪ್ರಕೃತಿ ಈ ೨೫ ತತ್ವಗಳ ಒಡೆಯನೆನಿಸಿದವನು ಶ್ರೀ ಜಯತೀರ್ಥರ ಆರಾಧ್ಯದೈವವೃನಿಸಿದ ಶ್ರೀರಾಮ ರೂಪಿ ಪರಮಾತ್ಮ. ಇಂತಹ ಶ್ರೇಷ್ಠ ರಾಮನ ನಾಮಸ್ಮರಣೆ ಹಾಗೂ ಅನುಸಂಧಾನದ ಮೂಲಕ ಸಾಧನಗೈಯುವ ಜಯತೀರ್ಥರು, "ತನ್ನವರಿಗೆ ತಪ್ತಮುದ್ರೆ ಕುರುಹಿಟ್ಟು" ಅವರನ್ನು ಸರಿಯಾದ ಸಾಧನಾ ಮಾರ್ಗದಲ್ಲಿರಿಸಿ ಉದ್ಧರಿಸುವ ಪರಮದಯಾಳು ಎನ್ನಲಾಗಿದೆ. ಆ ಮೂಲಕ ಆನಂದತೀರ್ಥರಲ್ಲಿಯಂತೆ  ಜಯತೀರ್ಥರಲ್ಲೂ ಎದ್ದು ಕಾಣುವ ಈ ಸಾಮಾಜಿಕ ಕಳಕಳಿ _ ಕಾಳಜಿಗಳ ಬಗ್ಗೆ ಗಮನ ಸೆಳೆಯಲಾಗಿದೆ.

*** 


ಭೇದಿಸಿ ನೋಡಿರೊ ಭೇದವ ತಿಳಿಯಿರೊ 

ಮಾಧವ ಜೀವ ಜಡರೊಳು ಕೋಲೆ 

ಮಾಧವ ಜೀವ ಜಡರೊಳು ಎನುತಲಿ 

ಭೋದಿಸಿದನು ಹಿತಮಾರ್ಗ ಕೋಲೆ ॥೩೭॥


ತನ್ನ ಹೊಂದಿದವರಿಗೆ ಪ್ರೌಢವೃತ್ತಿಯನು ಶ್ರೀ 

ಮನ್ನಾಮಾಮೃತವನುಣಿಸುವ ಕೋಲೆ ಶ್ರೀ 

ಮನ್ನಾಮಾಮೃತವನುಣಿಸುವ ಹೊರೆವನು 

ಉನ್ನತ ಮಹಿಮ ಜಯರಾಯ ಕೋಲೆ ॥೩೮॥


ಆವಾಗ ಸೂತ್ರಾರ್ಥ ನಿಸ್ಸಾಳ ವ್ಯಾಖ್ಯಾನ 

ತೀವಿದ ಶ್ರುತಿಯ ಕಹಳೆಯು ಕೋಲೆ 

ತೀವಿದ ಶ್ರುತಿಯ ಕಹಳೆಯು ಧ್ವನಿಯುಂಟು 

ಶ್ರೀವ್ಯಾಸ ರಾಮಾರ್ನೆಯುಂಟು ಕೋಲೆ ॥೩೯॥


ಅಚ್ಚ ಸಾತ್ವಿಕನಾದ ರಾಜಾಧಿರಾಜನ 

ಹೆಚ್ಚಿನ ಸತಿ ಶುದ್ಧ ಮತಿಯಮ್ಮ ಕೋಲೆ

ಹೆಚ್ಚಿನ ಸತಿ ಶುದ್ಧಮತಿಯಮ್ಮ ನಮ್ಮಮ್ಮ

ನಿಚ್ಚ ನಮ್ಮನು ಹೊರೆವಳು ॥೪೦॥


ಶ್ರೀ ಮಧ್ವರು ಪ್ರಸ್ಥಾನತ್ರಯ ದ ಹಿನ್ನೆಲೆಯಲ್ಲಿ ಸಮರ್ಥಿಸಿದ ದ್ವೈತ ದರ್ಶನದ ಪ್ರಮುಖ ತತ್ವಗಳನ್ನು ಹೀಗೆ ಸಂಗ್ರಹಿಸಲಾಗಿದೆ 

    ೧] ಪ್ರತ್ಯಕ್ಷ, ಅನುಮಾನ ಹಾಗೂ ಆಗಮ ಇವು ಮೂರೇ ಪ್ರಮಾಣಗಳು. 

೨]ವಿಶ್ವವು ಸತ್ಯ. 

೩]ಭೇದವು ಯತಾರ್ಥ ೪]ಚೇತನರಾಶಿ ತಾರತಮ್ಯಯುಕ್ತವಾಗಿದೆ. ೫]ಶ್ರೀಹರಿ ಸರ್ವೋತ್ತಮ. ೬]ಜೀವರಾಶಿ ಶ್ರೀಹರಿಯ ಅಧೀನ. 

೭]ಶ್ರೀಹರಿಯು ಸರ್ವವೇದ ಪ್ರತಿಪಾದ್ಯ. 

೮]ನಿಜವಾದ ಸ್ವರೂಪಾನಂದಾನುಭವವೇ ಮುಕ್ತಿ. 

೯]ನಿರ್ಮಲ ಭಕ್ತಿಯೇ ಮುಕ್ತಿಗೆ ಸಾಧನೆ. 

   ಈ ಒಂಬತ್ತು ಪ್ರಮುಖ ತತ್ವಗಳನ್ನು ಶ್ರೀಮಧ್ವಾಚಾರ್ಯರಂತೆ, ಶ್ರೀ  ಜಯತೀರ್ಥರು, ಶ್ರೀವ್ಯಾಸರಾಜರು, ಶ್ರೀ ವಾದಿರಾಜರಂತಹ ಮಹಾಮೇಧಾವಿಗಳು ತಮ್ಮ ವಿವಿಧ ಗ್ರಂಥಗಳಲ್ಲಿ ಪ್ರತಿಪಾದಿಸಿದ್ದಾರೆ. ಇವುಗಳಲ್ಲಿ ಕೆಲವನ್ನು ದ್ವೈತ ದರ್ಶನದ ಕೃತಿಗಳ ಹಿನ್ನೆಲೆಯಲ್ಲಿ ಸಂಕ್ಷೇಪವಾಗಿ ಈ ಮುಂದಿನಂತೆ ತಿಳಿಯಬಹುದು.

***

ವಿಶ್ಶಂ ಸತ್ಯಂ (ಪ್ರಪಂಚವು ಸತ್ಯವಾಗಿದೆ)    

     'ಹರಿಸರ್ವೋತ್ತಮತ್ವ' ವು ಸಿದ್ಧಾಂತದ ಪ್ರಮುಖ ತತ್ವ. ಪ್ರಪಂಚದಲ್ಲಿ ಅಡಕವಾದ ಅನೇಕ ಜೀವ_ಜಡ ಮುಂತಾದವು ಸತ್ಯವಾಗಿದ್ದಲ್ಲಿ ಮಾತ್ರ ಹರಿಸರ್ವೋತ್ತಮತ್ವ ಸಾಧನೆಗೆ *ಸರ್ವರಲ್ಲಿ ಉತ್ತಮನು ಯಾರು? ಏಕೆ? ಮುಂತಾದ ವಿಚಾರ ಸಂಗತವೆನಿಸುತ್ತದೆ. 


       ವೇದ ಉಪನಿಷತ್ ಕಾಲದ ಜನರು ಪ್ರಪಂಚವನ್ನು ಸತ್ಯವೆಂದೇ ಭಾವಿಸಿದ್ದರು. ಮುಂದೆ ಇತಿಹಾಸ ಪುರಾಣ ಕಾಲಗಳಲ್ಲಿಯೂ ಸಹ ಜಗತ್ತು ಸತ್ಯವೆಂಬ ಬಗ್ಗೆ ಸಂದೇಹವಿದ್ದುದು ತೋರುವದಿಲ್ಲ. ಈ ಜಗತ್ತು ಅಸತ್ಯ ಎಂಬ ವಿಚಾರವನ್ನು ಹುಟ್ಟು ಹಾಕಿದವರು ಬೌದ್ಧರು. ನಮಗೆ ಬರುವ ವಿಷಯಗಳ ಅನುಭವವೇ ವಸ್ತುಗಳೆಂದು ತೋರುವವು. ಆದರೆ ವಾಸ್ತವವಾಗಿ ವಸ್ತುಗಳಾಗಲೀ ವಸ್ತುಗಳ ಸಂಪರ್ಕವಾಗಲೀ ಇಲ್ಲ. ಎಲ್ಲ ವಸ್ತುಗಳು ನಾಲ್ಕು ಕ್ಷಣ ಇದ್ದು ನಂತರ ಬದಲಾಗುವವು. ಇದರ ಪರಿಣಾಮ ಸರ್ವವೂ ಶೂನ್ಯ ಎಂಬುದಾಗಿ ಬೌದ್ಧರು ತಮ್ಮ ವಾದವನ್ನು ವಿಸ್ತರಿಸಿದರು. ಮುಂದೆ ಬಂದ ನ್ಯಾಯ_ವೈಶೇಷಿಕರು ಈ ವಾದವನ್ನು ಪ್ರಭಲವಾಗಿ ಅಲ್ಲ ಗಳೆದರು. ವಸ್ತುಗಳಿಲ್ಲದೆ ಅನುಭವ ಸಾಧ್ಯವಿಲ್ಲ. ಹಗ್ಗವನ್ನು ಹಾವೆಂದು ಭ್ರಮಿಸಿದಾಗಲೂ ಹಗ್ಗ ನಿಜ.ಬೇರೆ ಕಡೆ ನೋಡಿದ ಹಾವೂ ಸಹ ಸತ್ಯ. ಹಗ್ಗವನ್ನು ಹಾವೆಂದು ಭ್ರಮಿಸುವಲ್ಲಿ ಹಾವು ಮಾತ್ರ ಭ್ರಮೆ. ಸತ್ಯವಾದ ಹಗ್ಗದಂತೆ ಬೇರೆ ಬೇರೆ ಅನುಭವ ನೀಡುವ ಇತರ ವಸ್ತುಗಳನ್ನು ಸುಳ್ಳೆಂದು ಹೇಳಲಿಕ್ಕಾಗದು. ಎಂದು ಬೌದ್ಧರ ವಾದವನ್ನು ತಳ್ಳಿ ಹಾಕಿದರು. 

***

 ನಿರ್ದುಷ್ಟ ಅನುಭವ ಸಿದ್ಧವಾದುದೆಲ್ಲ ಸತ್ಯವೆಂದು ಘೋಷಿಸಿದ ದ್ವೈತ ಸಿದ್ಧಾಂತ ನಿರ್ದುಷ್ಟವಾದ ಪ್ರತ್ಯಕ್ಷ ಅನುಮಾನ ಮತ್ತು ಆಗಮಗಳಿಗೆ ನಿಲುಕುವ ಬ್ರಹ್ಮ, ಜೀವ,ಜಗತ್ತು ಇವೆಲ್ಲವೂ ಸತ್ಯವೇ ಆಗಿವೆ ಎಂದಿತು. ಮಾತ್ರವಲ್ಲ ಅದ್ವೈತ ದರ್ಶನದಂತೆ ಅಂತಹ ಸತ್ಯತ್ವದಲ್ಲಿ ಹಂತವಾಗಲೀ ಅಥವಾ ಪ್ರಕಾರವಾಗಲೀ ಇರದೆ ಅದು ಸಾರ್ವಕಾಲಿಕ ಸತ್ಯವೆಂದು ಸಾರಿತು. ಮುಂದುವರೆದು ಬ್ರಹ್ಮನು ಬಾಹ್ಯೇಂದ್ರಿಯ ಹಾಗೂ ಅನುಮಾನಗಳಿಂದ ತಿಳಿಯಲಸಕ್ಯನಾದರೂ ಅಪರೋಕ್ಷ ಜ್ಞಾನದಿಂದ ಅವನ ಜ್ಞಾನ ಸಾಧ್ಯವಾದರಿಂದ ಜೀವನು ಭಕ್ತಿಯ ಮೂಲಕ ಬ್ರಹ್ಮ ಸಾಕ್ಷಾತ್ಕಾರ ಪಡೆಯುವನು. ಹೀಗೆ ಬಾಹ್ಯೇಂದ್ರಿಯ ಪ್ರತ್ಯಕ್ಷ, ಸಾಕ್ಷಿ ಹಾಗೂ ಅಪರೋಕ್ಷ ಜ್ಞಾನಿಗಳಿಂದ ಜಗತ್ತು, ಜೀವ, ಬ್ರಹ್ಮ ಇವು ಪ್ರಾಮಾಣಿಕ ಅನುಭವ ಗೋಚರವಾಗುವುದರಿಂದ ಇವೆಲ್ಲವೂ ಸತ್ಯ ಎಂಬುದನ್ನು ದ್ವೈತ ದರ್ಶನ ಸಮರ್ಥಿಸಿಕೊಂಡ ರೀತಿ ತರ್ಕಬದ್ಧವಾಗಿದೆ.

***



ದ್ವೈತ ದರ್ಶನ ತಾನು ಒಪ್ಪಿಕೊಂಡ 'ವಿಶ್ವ ಸತ್ಯತ್ವ ಮುಂತಾದ ಪ್ರಮುಖ ತತ್ವಗಳನ್ನು ಸಮರ್ಥಿಸುವುದರ ಜೊತೆಗೆ ಆ ಬಗ್ಗೆ ಭಿನ್ನ ಧೋರಣೆಯ ಅದ್ವೈತ ದರ್ಶನದವಿಚಾರಗಳನ್ನು ವಿವರವಾಗಿ ಪರಿಶೀಲಿಸಲು ಮರೆತಿಲ್ಲ. ಪ್ರಪಂಚವು ಬ್ರಹ್ಮಜ್ಞಾನ ಬಾಧಿತವಾದ್ದರಿಂದ ಅದು ಸತ್ಯವಲ್ಲ ಎಂಬ ಅದ್ವೈತ ದರ್ಶನದಮಾತು. ಪ್ರಪಂಚವು ಸತ್ಯವಲ್ಲ ಎಂಬುದು ಸಿದ್ಧವಾದರೆ ಅದು ಬ್ರಹ್ಮಜ್ಞಾನ ಬಾಧಿತವೆಂಬುದು ತಿಳಿಯುತ್ತದೆ. ಅದು ಬ್ರಹ್ಮಜ್ಞಾನ ಬಾಧಿತವೆಂಬುದು ಸಿದ್ಧವಾದರೆ ಪ್ರಪಂಚವು ಸತ್ಯವಲ್ಲವೆಂಬುದು ತಿಳಿಯುತ್ತದೆ. ಹೀಗೆ ಅನ್ಯೋನ್ಯಶ್ರಯ ದೋಷಕ್ಕೀಡಾಗಿದೆ. ಪ್ರಪಂಚವು ಯತಾರ್ಥವಲ್ಲವೆನ್ನುವುದು ಪ್ರತ್ಯಕ್ಷಾದಿ ಪ್ರಮಾಣಗಳು ಯತಾರ್ಥ ಬೋಧಕವಲ್ಲ ಎಂಬುದರಿಂದ ತಿಳಿಯುತ್ತದೆ. ಪ್ರತ್ಯಕ್ಷಾದಿ ಪ್ರಮಾಣಗಳು ಬ್ರಹ್ಮಜ್ಞಾನ ಬಾಧಿತವಾದ್ದರಿಂದ ತಿಳಿಯುತ್ತದೆ. ಪ್ರತ್ಯಕ್ಷಾದಿ ಪ್ರಮಾಣಗಳು ಬ್ರಹ್ಮಜ್ಞಾನ ಬಾಧಿತವೆನ್ನವುದು ಪ್ರಪಂಚವು ಯತಾರ್ಥವಲ್ಲ ಎನ್ನುವುದರಿಂದ ತಿಳಿಯುತ್ತದೆ ಎಂದು ಹೇಳಿದರೆ ಚಕ್ರಕ ದೋಷಕ್ಕೆ ಆಹ್ವಾನವಿತ್ತಂತೆ. 

***

ಇದರಂತೆ ಇವೇ ಗ್ರಂಥಗಳಲ್ಲಿ ವಿಶ್ಶಸತ್ಯತ್ವವು ವಿಸ್ತೃತವಾಗಿ ಸ್ಥಾಪಿತವಾಗಿರುವದನ್ನೂ ಸಹ ಕಾಣುತ್ತೇವೆ. 

೧] ಶುಕ್ತಿಯಲ್ಲಿ ಸ್ವಲ್ಪ ಹೊತ್ತಿನ ನಂತರ ಬರುವ 'ಇದು ರಜತವಲ್ಲ' ಎಂಬ ಬಾಧ

ಜ್ಞಾನದಂತೆ ಪ್ರಪಂಚದ ಬಗ್ಗೆ ಆ ರೀತಿ ಬಾಧ ಜ್ಞಾನ ಬಂದ ಅನುಭವವಿಲ್ಲ.

೨] ಪ್ರಪಂಚ ಸತ್ಯ ಎಂಬ ಪ್ರತ್ಯಕ್ಷಕ್ಕೆ ಅನುಮಾನದಿಂದ ಬಾಧ ಎಂಬುದೂ ಸರಿಯಲ್ಲ, ಪ್ರತ್ಯಕ್ಷೋಪಜೀವಿಯಾದ ಅನುಮಾನಕ್ಕೆ ಪ್ರಬಲ ಪ್ರತ್ಯಕ್ಷದಿಂದಲೇ ಬಾಧವೇ ವಿನಃ ಪ್ರತ್ಯಕ್ಷಕ್ಕೆ ಅನುಮಾನದಿಂದಲ್ಲಿ. 

೩] ಮಧ್ವರು ಉಲ್ಲೇಖಿಸಿದ ವಿಶ್ವಂ ಸತ್ಯಂ ,ಧಾತಯಥಾ ಪೂರ್ವಮಕಲ್ಪಯೇತ್ ಇವೇ ಮುಂತಾದ ಅನೇಕ ಶ್ರುತಿಗಳು ಹಾಗೂ ಆತ್ಮಾ ವಾಸ್ಯಾಮಿದಂ ಸರ್ವಂ ಮುಂತಾದ ಸ್ಮೃತಿಗಳು ವಿಶ್ವವು ಸತ್ಯವೆನ್ನುವದಕ್ಕೆ ಸ್ಪಷ್ಟಸಾಕ್ಷಿಗಳಾಗಿವೆ. ಇದರಂತೆ ವಿಶ್ವವು ಸುಳ್ಳೆಂಬ ವೇದದ ಸ್ಪಷ್ಟೋಕ್ತಿಗಳ ಉಲ್ಲೇಖ ಶಂಕರರಲ್ಲಿ ಕಾಣದಿರುವುದು ಸೋಜಿಗವೆನಿಸದಿರದು.

***

ನೆನ್ನೆಯ ದಿವಸ ತತ್ವೋದ್ಯೋತ  ತತ್ವನಿರ್ಣಯ ಮುಂತಾದ ಮಧ್ವರ ಗ್ರಂಥಗಳಲ್ಲಿ ವಿಶ್ಶಸತ್ಯತ್ವವು ವಿಸ್ತೃತವಾಗಿ ಸ್ಥಾಪಿತವಾಗಿರುವದನ್ನೂ ಮೂರು ಅಂಶಗಳಲ್ಲಿ ಕಂಡೆವು. ಈ ದಿವಸ ೪_೫ ನೆಯ ಅಂಶಗಳನ್ನು ನೋಡುವಾ. 


೪] ಅರ್ಥ ಕ್ರಿಯಾಕಾರಿತ್ವ ಅಂದರೆ ವಸ್ತುವಿನ ಪ್ರಯೋಜನದ ಅನುಭವ ಯುಕ್ತಿ ಯಿಂದಲೂ ವಿಶ್ವಸತ್ಯತ್ವವನ್ನು ದ್ವೈತ ದರ್ಶನ ಸಾಧಿಸಿರುವುದು ಗೋಚರವಾಗುತ್ತದೆ. ಊಟ ಮಾಡಿದಾಗ, ನೀರು ಕುಡಿದಾಗ ತೃಪ್ತಿಯ, ನೀರಡಿಕೆ ನೀಗಿದ ಸಾಕ್ಷಿಯ ಅನುಭವ ಸರ್ವ ಸಮ್ಮತ, ಊಟ, ನೀರು ಇವೆಲ್ಲ ಸುಳ್ಳಾದಲ್ಲಿ ತೃಪ್ತಿಯ ಅನುಭವ ಸಾಧ್ಯವಿಲ್ಲ. ಬಿತ್ತಿದ ಬೀಜ ಸುಳ್ಳಾದಲ್ಲಿ ತುಂಬಿದ ತೆನೆ ಎಲ್ಲಿಂದ? 

೫] ರಜತ ಭ್ರಾಂತಿಯ ಮೊದಲುಸತ್ಯರಜತ, ಅದರ ಅನುಭವ ಹಾಗೂ ಪುರೋವೃತ್ತಿ 

ಶುಕ್ತಿಯು ಸತ್ಯ ಹಾಗೂ ರಜತ ಸದೃಶವಾದುದು ಮುಂತಾದವಂತೆ ಪ್ರಪಂಚದ ಭ್ರಾಂತಿ ಎನ್ನುವಲ್ಲಿಯೂ ಅದಕ್ಕೂ ಪೂರ್ವದಲ್ಲಿ, ಸತ್ಯಪ್ರಪಂಚ, ಅದರ ಅನುಭವ ಮಂತಾದವು ಅವಶ್ಯವಾಗಿದ್ದರಿಂದ ಪ್ರಪಂಚ ಭ್ರಮೆ ಎನ್ನುವ ಮೊದಲು ಪ್ರಪಂಚವು ಸತ್ಯವೆಂದು ಒಪ್ಪಬೇಕಾತ್ತದೆನ್ನುವ ಇವರ ತರ್ಕಿಕ ಸರಣಿ ತಲೆದೂಗಿಸುವಂತಿದೆ.

***

   ಸತ್ಯವೆಂದರೆ ಶಾಶ್ವತ, ಅಸತ್ಯವೆಂದರೆ ಅಶಾಶ್ವತ ಎಂಬ ಭಾವನೆಯಿಂದ ಕೆಲವರು ಪ್ರಪಂಚದ ಅನೇಕ ಜನರ ಹಾಗೂ 'ವಸ್ತುಗಳ ನಾಶವನ್ನು ಕಂಡಾಗ ಈ ಪ್ರಪಂಚ ನಶ್ವರ' ಎಂಬ ಅರ್ಥದಲ್ಲಿ ಪ್ರಪಂಚವು ಮಿಥ್ಯಾ ಎಂದಿರುವರೇ ವಿನಹ ಅದು ಮೂಲದ ಕೋಡಿನಂತೆ ಯಾವಾಗಲೂ ಅಸತ್ಯ ಎಂಬರ್ಥದಲ್ಲಿ ಅಲ್ಲ ಎಂಬುದು, ಪ್ರಪಂಚವು ಮಿಥ್ಯಾ ಎಂದು ಭಾಸವಾಗುವ ವಾಕ್ಯಗಳು ಸಹ ಜಗತ್ತು ಅನಿತ್ಯವೆಂಬುದನ್ನು ತಿಳಿಸುತ್ತವೆ: ಎಂಬ ವ್ಯಾಸರ ಮಾತಿನಿಂದ ಮನದಟ್ಟಾಗುತ್ತದೆ. ಇದರಿಂದ ಜಗತ್ತಿನಲ್ಲಿ ಮಿಥ್ಯಾತ್ವವಲ್ಲ, ಮಿಥ್ಯಾತ್ವ ಸಂಶಯವೂ ಸಹ ಸುಳಿಯಲಾರವೆಂಬುದು ಸ್ಪಷ್ಟವಾಗುತ್ತದೆ. ಹೀಗೆ ದ್ವೈತ ದರ್ಶನ ತಾನು ನಂಬಿದ ವಿಶ್ವ ಸತ್ಯತ್ವ ತತ್ವವನ್ನು ಅನೇಕ ಶೃತಿ ಸ್ಮೃತಿಗಳ ಆಧಾರದ ಮೂಲಕ ಸಮರ್ಥಿಸಿಕೊಂಡದ್ದನ್ನು ಕಾಣುತ್ತೇವೆ.

*** 

ಪ್ರಪಂಚವು ಸತ್ಯವೆಂದು ತಾರ್ಕಿಕವಾಗಿ ಹೇಳಿದೇವು. ಈ ದಿನ ಅದನ್ನು ಇನ್ನಷ್ಟೂ ಸ್ಪಷ್ಟೀಕರಿಸಲಾಗಿದೆ. ಹೇಗೆಂದರೆ, 

ಶಂಕರರೇ ಈ ಜಗತ್ತು ಸತ್ಯವೆಂದು ಒಪ್ಪಿಕೊಂಡ ಉದಾಹರಣೆಗಳೂ ಇಲ್ಲದಿಲ್ಲ..... *ಸ್ತಂಭಾದಿ ಪ್ರಪಂಚಾನುಭವಕ್ಕೆ ಯಾವ ಅವಸ್ಥೆಯಲ್ಲೂ ಬಾಧಕವಿಲ್ಲದ್ದರಿಂದ ಸ್ವಪ್ನ, ಜಗತ್ತುಗಳಿಗೆ ವ್ಯತ್ಯಾಸವಿರುವುದರಿಂದ ಪ್ರಪಂಚವು ಬಾಧ್ಯವಲ್ಲ. ಹಾಗೆಯೇ ಧ್ಯಾನಗೋಚರವಾದುದು ಕದಾಚಿತ್ ಅಸತ್ಯವೆನಿಸಬಹುದಾದರೂ, ಪ್ರತ್ಯಕ್ಷ ಗೋಚರವಾದುದು ಅಸತ್ಯವೆನಿಸದು. ಸ್ಪಷ್ಟ ಗೋಚರವಾಗುವುದು ಸತ್ಯವೇ ಆಗಿರುವುದು. ಅಂತಹ ಬ್ರಹ್ಮನೇ ಇಲ್ಲಿ ಪ್ರತಿಪಾದ್ಯ. ಇವೇ ಮುಂತಾದ ನಿದರ್ಶನಗಳಿಂದ ಶಂಕರರು ಜಗತ್ ಸತ್ಯತ್ವವನ್ನು ತಳ್ಳಿ ಹಾಕಿಲ್ಲವೆನ್ನುವುದು ವೇದ್ಯವಾಗುತ್ತದೆ. 
ಜೀವರೇ ಅಸ್ವತಂತ್ರರೆಂದಾಗ ಜಡವು ಅಸ್ವತಂತ್ರವೆಂಬುದು ಸ್ಪಷ್ಟ. ಚೇತನಾ ಚೇತನಾತ್ಮಕನಾಗಿ ಅಸ್ವತಂತ್ರವೆನಿಸಿದ ಈ ಪ್ರಪಂಚ ಒಂದು ಸ್ವತಂತ್ರ ಶಕ್ತಿಯ ದ್ಯೋತಕವಾಗಿದೆ. ಇಂದ್ರಿಯ, ದೇಹದ ಕಾರ್ಯಗಳು, ಗ್ರಹ, ನಕ್ಷತ್ರಗಳ ಸಂಬಂಧಗಳು ಇವೇ ಮುಂತಾದ ವಿವಿಧ ಪ್ರಾಕೃತಿಕ ವ್ಯವಹಾರಗಳ ಹಿಂದೆ ಉದ್ದೇಶಪೂರ್ವಕ ಸಂಯೋಜನೆ ಇರುವುದು ಗಮನಾರ್ಹವಾಗಿದೆ.ಈ ಜಗತ್ತು ಒಬ್ಬ ಮಹಾಬುದ್ಧಿವಂತನಿಂದ ರಚಿತವಾದಂತೆ ಅತ್ಯಂತ ಸಂಯೋಜಿತವಾಗಿದೆ, ಎಂದು *ಐನ್ ಸ್ಟೀನ್ ಹೇಳಿದ್ದಾನೆ. ಒಂದೆರಡು ಘಟನೆಗಳಂತೆ ಆಕಸ್ಮಿಕವೆನಲು ಸಾಧ್ಯವಾಗದ ಹಾಗೂ ಸುವ್ಯವಸ್ಥಿತವಾದ ಈ ವಿಶಾಲ ವಿಶ್ವದ ಬುದ್ಧಿಪೂರ್ವಕ ರಚನೆಯನ್ನು ಸುಲಭವಾಗಿ ತಳ್ಳಿಹಾಕುವಂತಿಲ್ಲ. ಕೇವಲ ಅಕ್ಷರ ಜೋಡಣೆಯಿಂದ ಸಿದ್ಧವಾಗದ ಕಾವ್ಯದಂತಹ ಒಂದು ಉತ್ಕೃಷ್ಟ ಕಲಾಸೃಷ್ಟಿಯ ಹಿಂದೆ ಕಲಾವಿದನೊಬ್ಬನ ಉಜ್ವಲ ಪ್ರತಿಭೆಯ ರಹಸ್ಯವಡಗಿರುವಂತೆ, ವ್ಯವಸ್ಥಿತ ಹಾಗೂ ವೈವಿಧ್ಯಪೂರ್ಣವಾಗಿ ಎನಿಸಿದ ಪ್ರಪಂಚದ ವ್ಯವಹಾರಗಳ ಹಿಂದೆ ಇದ್ದಿರಬಹುದಾದ ಅದ್ಭುತ ಸತ್ವಶಾಲಿ ಪ್ರತಿಭಾವಂತನೊಬ್ಬನ ಕೈವಾಡವನ್ನು ಮರೆಯಲಾಗದು. 
**
ಇಂತಹ ಅಸ್ವತಂತ್ರವಾದ ಪ್ರಪಂಚವನ್ನು ನಿಯಂತ್ರಿಸುತ್ತಿರುವ ಈ ಶಕ್ತಿಯನ್ನು ವಿವಿಧ ದಾರ್ಶನಿಕರು ಬೇರೆ ಬೇರೆ ಹೆಸರಿನಿಂದ ಗುರುತಿಸಿದಂತ ದ್ವೈತ ದರ್ಶನ ಅದನ್ನು 
ಶ್ರೀಹರಿ ಎಂದು ಕರೆದು ಅವನು ಸಕಲ ದೋಷದೂರ ಹಾಗೂ ಸಮಸ್ತ ಗುಣಪೂರ್ಣ, ಪ್ರಪಂಚವೆಲ್ಲವೂ ಅಸ್ವತಂತ್ರವಾಗಿದ್ದು ಅವನೊಬ್ಬನೇ ಸ್ವತಂತ್ರ ಹಾಗೂ ಸರ್ವೋತ್ತಮ ಎಂದು ವಿವರಿಸಿದೆ. ವಿಶ್ವವನ್ನು ನಿಯಂತ್ರಿಸುವ ಶಕ್ತಿ ಯ ಹೆಸರು, ಅದರ ಸ್ವರೂಪ ಮುಂತಾದವು, ಭಿನ್ನ ಭಿನ್ನವಾಗಿದ್ದರೂ, ವಿಶ್ವದ ನಿಯಂತ್ರಣಕ್ಕೆ ಅದರ ಅವಶ್ಯಕತೆಯನ್ನು ಬಹುತೇಕ ದಾರ್ಶನಿಕರು ಮನಗಂಡಿದ್ದಾರೆ. ದರ್ಶನೇತಿಹಾಸದಲ್ಲಿ ಇಂತಹ ಶಕ್ತಿಯನ್ನು ಒಪ್ಪದಿರುವ ದಾರ್ಶನಿಕರೂ ಇಲ್ಲದಿಲ್ಲ. ಈ ಸ್ವತಂತ್ರ ಶಕ್ತಿಯ ಬಗ್ಗೆ ವಿವಿಧ ದಾರ್ಶನಿಕರ ನಿಲುವುಗಳನ್ನು ಸಮೀಕ್ಷಿಸಿದ ದ್ವೈತ ದರ್ಶನದ ವಿಚಾರಗಳನ್ನು ಹೇಗೆ ಸಂಗ್ರಹಿಸಬಹುದು ಮುಂದಿನ ಸಂಚಿಕೆಯಲ್ಲಿ ನೋಡೋಣ. 
**
ಹರಿಃ ಪರತರಃ (ಶ್ರೀಹರಿ ಸರ್ವೋತ್ತಮ)
 ವಿಶ್ವ ಸತ್ಯತ್ವ, ಪಂಚಬೇಧ ಮುಂತಾದವು ದ್ವೈತ ದರ್ಶನದ ಇಂದ್ರಿಯಗಳಾದರೆ, ಹರಿಸರ್ವೋತ್ತಮವು ಅದರ ಚೇತನವಾಗಿದೆ. 
 ವಿಷ್ಣೋಃ ಸರ್ವೋತ್ತಮತ್ವಂ ಚ ಸರ್ವದಾ ಪ್ರತಿಪಾದಯ।
ತಾರತಮ್ಯಂ ತತೋ ಜ್ಞೇಯಂ ಸರ್ವೋಚ್ಚತ್ವಂ ಹರೇಸ್ತಥಾ।
ಏತದ್ವಿನಾ ನ ಕಸ್ಯಾಪಿ ವಿಮುಕ್ತಿಃ ಸ್ಸಾತ್ ಕಥಂಚನ ಎಂದರೆ 'ಯಾವಾಗಲೂ ವಿಷ್ಣು ಸರ್ವೋತ್ತಮತ್ವವನ್ನು ಪ್ರತಿಪಾದಿಸು' ವಿಷ್ಣು ಸರ್ವೋತ್ತಮತ್ವ ಜ್ಞಾನವಿಲ್ಲದೆ ಮುಕ್ತಿಯಿಲ್ಲ', ಎಂಬಿವೇ ಮುಂತಾದ ಮಾತುಗಳಿಂದ ಇದು ಸ್ಪಷ್ಟವಾಗುತ್ತದೆ. ಹೀಗೆ ದ್ವೈತ ಸಿದ್ಧಾಂತದ ತತ್ವಗಳಲ್ಲಿಯೇ ಪ್ರಮುಖವೆನಿಸಿದ ಹರಿಸರ್ವೋತ್ತಮತ್ವ ದ ವಿವರಣೆಗೆ ದ್ವೈತ ದರ್ಶನ ಸಹಜವಾಗಿಯೇ ಹೆಚ್ಚು ಗಮನ ಹರಿಸಿದೆ. ಅದರ ವಿಚಾರಗಳನ್ನು ಹೀಗೆ ಅವಲೋಕಿಸಬಹುದು.
***

ನೆನ್ನೆಯ ದಿವಸ ಟಿಸಿಲೊಡೆದ ವಿವಿಧ ಶೈವ ಶಾಖೆಗಳು ಅದ್ವೈತ ಹಾಗೂ ವಿಶಿಷ್ಟಾದ್ವೈತ ಬೇರುಗಳಿಂದಲೇ ಬದುಕಿರುವುದು ಗೋಚರವಾಗಿದ್ದನ್ನು ಕಂಡೆವು. 

   ಇವುಗಳಿಗಿಂತ ಭಿನ್ನವಾಗಿ ನಿಲ್ಲುವ "ದ್ವೈತ ದರ್ಶನದ" ವಿಚಾರಗಳು ಯುಕ್ತಿಪೂರ್ಣವೆನಿಸುತ್ತದೆ.  

ಅದರ ವಿಚಾರಗಳನ್ನು ಈ ರೀತಿ ಸಂಗ್ರಹಿಸಬಹುದು. ದೂರದಲ್ಲಿಯ ಮರಗಳು ಒಂದಾಗಿ ಕಾಣುವಂತೆ ಎಲ್ಲವೂ ಒಂದು ಎಂಬುದು ಅಸ್ಪಷ್ಟ ಹಾಗೂ ಸ್ಥೂಲದೃಷ್ಟಿಯ ಒಂದು ನೋಟ, ವೇದೋಪನಿಷತ್ ಕಾಲದಲ್ಲಾಗಲೀ ಅಥವಾ ನಂತರದಲ್ಲಾಗಲೀ ಚೇತನಾ ಚೇತನಾತ್ಮಕವಾದ ಈ ಪ್ರಪಂಚ ಒಂದಾಗಿ ಅಂದರೆ ಅನೇಕ ಸಂಖ್ಯೆಯ ಚೇತನಾಚೇತನಗಳು. ಏಕ ಸಂಖ್ಯೆಯಾಗಿ ಅಭಿನ್ನವಾಗಿ ಕಂಡ ಸ್ಪಷ್ಟ ನಿದರ್ಶನ ದೊರೆಯುವುದಿಲ್ಲ. ವಾಸ್ತವಿಕವಾಗಿ ಈ ಪ್ರಪಂಚವು ೧) ಜೀವ _ ಜಡ ೨)ಜೀವ _ ಜೀವ ೩) ಜಡ _ ಜಡ ೪) ಜೀವ _ ಈಶ ೫) ಜಡ _ ಈಶ ಎಂಬುದಾಗಿ ಪಂಚಭೇದಾತ್ಮಕವಾಗಿದೆ. 

ದೇವ,ಜೀವ,ಜಗತ್ತು ಇವು ಮೂರು ಪಂಚಭೇದಗಳಿಂದ ಹೆಣೆಯಲ್ಪಟ್ಟಿವೆ.

***

   ಮೇಲ್ನೋಟಕ್ಕೆ ಅಬೇದಪರವೆನಿಸಬಹುದಾದ ಉಪನಿಷತ್ತಿನ ಕೆಲ ಮಾತುಗಳಿಂದ ದ್ವೈತಾದ್ವೈತ ಚರ್ಚೆಗೆ ಅನುವು ದೊರೆತಂತೆ ಅದು ಅನೇಕ ದರ್ಶನಗಳ ಉದಯಕ್ಕೂ ನಾಂದಿಯಾಯಿತು. ಈ ದೇಹವೇ ಆತ್ಮ ಎಂದು ಪ್ರಾರಂಭಗೊಂಡ ಚಾರ್ವಾಕದರ್ಶನದಂತೆ, ಸರ್ವವೂ ಶೂನ್ಯ ಎಂಬುದರಲ್ಲಿ ಪರ್ಯವಸಾನ ಹೊಂದಿರುವ ಕೆಲ ನಾಸ್ತಿಕದರ್ಶನಗಳ ಪ್ರೇರಣೆ ಹಾಗೂ ವಿಕಾಸವನ್ನು ಅದ್ವೈತ ದರ್ಶನದಲ್ಲಿ ವಿಮರ್ಶಕರು ಗುರುತಿಸಿದ್ದಾರೆ. ಮಂಡನಮಿಶ್ರರು, ಶಂಕರಾಚಾರ್ಯರು ಮುಂತಾದವರಿಂದ ಈ ಅಭೇದವಾದವು ವ್ಯಾಪಕ ಪ್ರಚಾರ ಪಡೆಯಿತು. ಮುಂದೆ ವೈಷ್ಣವ ಮತ ಸ್ಥಾಪಕರಾಗಿ ಬಂದ ರಾಮಾನುಜರು *ಮೋಕ್ಷ ಪೂರ್ವದಲ್ಲಿ ಜೀವ _ ಬ್ರಹ್ಮ ಭೇದವನ್ನು ಭೋದಿಸಿದರೂ, ಮುಕ್ತಿಯಲ್ಲಿ ಅಭೇದವನ್ನೇ ಸಾರಿದುದು ಅವರ ಮೇಲಾದ ಅದ್ವೈತದ ಪ್ರಭಾವಕ್ಕೆ ನಿದರ್ಶನವೆನ್ನುವಂತಿದೆ. ಹಾಗೆಯೇ ಮುಂದೆ ಟಿಸಿಲೊಡೆದ ವಿವಿಧ ಶೈವ ಶಾಖೆಗಳು ಅದ್ವೈತ ಹಾಗೂ ವಿಶಿಷ್ಟಾದ್ವೈತ ಬೇರುಗಳಿಂದಲೇ ಬದುಕಿರುವುದು ಗೋಚರವಾಗುತ್ತದೆ.

***

 ೧] ನಾನು ಎಂಬ ಎಲ್ಲರ ಸಾಕ್ಷಿಯ ಅನುಭವಕ್ಕೆ ಗೋಚರನಾಗುವವನೇ ಜೀವ. ಇದು ಚೇತನವಾದ್ದರಿಂದ ಅಚೇತನವೆನಿಸಿದ ಕಲ್ಲು, ಮಣ್ಣು, ಮುಂತಾದವುಗಳಿಂದ ಭಿನ್ನವೆಂಬುದು ಸ್ಪಷ್ಟ. 

ಚೇತನ ತಾರತಮ್ಯ ಎಂಬ ಪ್ರಮೇಯ ನಿರೂಪಣೆಯಲ್ಲಿ ಜೀವ _ ಜೀವರ ಭೇದ ಸ್ಪಷ್ಟವಾಗಿರುವದನ್ನು ಕಾಣುತ್ತೇವೆ. 

  ಇದರಂತೆ ೩] ಜಡ _ ಜಡ ಭೇದ ವೂ ಸಹ 

ಸರ್ವಾನುಭವಸಿದ್ಧ. ಅಚೇತನ ಎಂಬ ಕಾರಣದಿಂದ ಎಲ್ಲಾ ಜಡಗಳೂ ಸಮಾನವೆನಿಸಬಹುದಾದರೂ ವಿವಿಧ ಗುಣ, ಲಕ್ಷಣ, ಆಕಾರ ಮುಂತಾದವುಗಳಿಂದ ಅವುಗಳಲ್ಲಿ ಭೇದ ನಿಯತವಾಗಿವೆ. ಬೆಳ್ಳಿ _ ಬಂಗಾರ, ತಾಮ್ರ _ ಕಬ್ಬಿಣ ಮುಂತಾದ ಲೋಹಗಳ ಗುಣವೂ ಬೇರೆ, ಕೆಂಪು _ ಕರಿ, ಸವುಳು _ ಜವುಳು, ಮುಂತಾದ ಮಣ್ಣಿನಲ್ಲಿಯ ಭಿನ್ನತೆ, ಸಕ್ಕರೆ _ ಬೆಲ್ಲ, ಜೇನುತುಪ್ಪಗಳಲ್ಲಿಯ ವ್ಯತ್ಯಾಸ, ವಿವಿಧ ಹಣ್ಣು ಕಾಯಪಲ್ಯಗಳಲ್ಲಿಯ ಆಕಾರ, ಬಣ್ಣ _ ರುಚಿ ಮುಂತಾದವುಗಳ ವಿಚಿತ್ರತೆ ಮುಂತಾದವು ಎಲ್ಲರಿಗೂ ಗೊತ್ತಿದ್ದ ಸಂಗತಿ. ಇಷ್ಟೇ ಅಲ್ಲ ಒಂದೇ ಜಾತಿಯ ವಸ್ತುಗಳಲ್ಲಿಯ ವೈವಿಧ್ಯವೂ ಅಪಾರವಾಗಿದೆ. ಎಲ್ಲವೂ ಒಂದೆ ಆದರೆ ಷಡ್ರಸಗಳು, ಸಪ್ತ ಸ್ವರಗಳು, ಸಪ್ತ ವರ್ಣಗಳು ಮುಂತಾದವುಗಳಿಗೆ ಅವಕಾಶವೆಲ್ಲಿ? ಜಡಗಳಿಗೆ ಭೇದವಿಲ್ಲ ಎನ್ನುವದಾದಲ್ಲಿ ಹಾಲು _ ಹೆಂಡ, ಅನ್ನ _ ಮಾಂಸ, ಬೆಂಕಿ _ ನೀರು, ಖಾದ್ಯ _ ಅಖಾದ್ಯ, ಪೇಯ _ ಅಪೇಯ, ಹಣ್ಣು _ ಮಣ್ಣು, ಎಣ್ಣೆ _ ಬೆಣ್ಣಿ ಮುಂತಾದ ಎಲ್ಲರ ಅನುಭವ ಸಿದ್ಧ ವ್ಯತ್ಯಾಸಗಳಿಗೆ ಯಾವ ಕಾರಣ ಹೇಳಲು ಸಾಧ್ಯ? ಹೀಗೆ ವಿಚಿತ್ರ ಹಾಗೂ ವೈವಿಧ್ಯ ಪೂರ್ಣವಾದ ಜಡಪ್ರಪಂಚದಲ್ಲಿ ಭೇದವಿರುವುದು ಸ್ಪಷ್ಟವಾಗಿದೆ.

***


   (೪) ಜೀವ _ ಈಶ್ವರ ಭೇದವಂತೂ ಇನ್ನೂ ಸುಸ್ಪಷ್ಟ ಜೀವರಿಗಿಂತ ಜ್ಞಾನ, ಬಲ ಮುಂತಾದ ಗುಣಗಳಿಂದ ಉತ್ತಮನಾದ ದೇವನನ್ನು ಒಪ್ಪಬೇಕಾದುದು ಅನಿವಾರ್ಯ. ಜೀವನು ಅಲ್ಪ ಶಕ್ತ, ಅಲ್ಪಜ್ಞ, ಅಪೂರ್ಣ, ಆದ್ದರಿಂದಲೇ ಪರಾಧೀನ, ಈಶ್ವರನು ಸರ್ವಶಕ್ತ, ಸರ್ವಜ್ಞ, ಪರಿಪೂರ್ಣ, ಆತ ಏವ ಸ್ವತಂತ್ರ. ಹೀಗೆ ಇವರಲ್ಲಿ 

ಅಲ್ಪಜ್ಞತ್ವ ಸರ್ವಜ್ಞತ್ವಾದಿ ಅನೇಕ ವಿರುದ್ಧ ಧರ್ಮಗಳಿರುವುದರಿಂದ ಜೀವ ಹಾಗೂ ಪರಮಾತ್ಮ ಇವರು ಭಿನ್ನರೆಂಬುದು ಸ್ವಯಂ ವೇದ್ಯವಾಗುತ್ತದೆ. ಇದಲ್ಲದೆ ಭಿನ್ನಶ್ಚಿಂತೋ ಪರಮೋ ಜೀವಸಂಘಾತ್ ನಿತ್ಯೋ ನಿತ್ಯಾನಾಂ ಚೇತನಶ್ಚೇತನಾನಾಂ ಇವೇ ಮುಂತಾದ ಶೃತಿ ಸ್ಮೃತಿಗಿಂದಲೂ ಸಹ ಜೀವೇಶ್ವರ ಭೇದವು ಸ್ಫುಟವಾಗುತ್ತದೆ. 

೫) ಜ್ಞಾನಾನಂದಾದಿ ಕೆಲವೇ ಗುಣಗಳಿರುವಂಥ ಚೇತನರೇ ಸಕಲಗುಣ ಪರಿಪೂರ್ಣ ಹಾಗೂ ಸಮಸ್ತ ದೋಷದೂರನಾದ ಪರಮಾತ್ಮನಿಂದ ಭಿನ್ನರೆಂದಾಗ ಜಡ ಹಾಗೂ ಪರಮಾತ್ಮನಿಗೆ ಭೇದವಿದೆಯೆಂದು ಹೇಳುವ ಅಗತ್ಯ ಕಂಡು ಬರುವದಿಲ್ಲ. ಶೃತಿ, ಸ್ಮೃತ್ಯಾದಿ ಪ್ರಮಾಣಗಳು, ಯುಕ್ತಿಗಳು, ಅನುಭವ ಇವೇ ಮುಂತಾದವುಗಳಿಂದ, ಪ್ರಪಂಚದ ಪದಾರ್ಥಗಳು ಸೂಕ್ಷ್ಮ ಸಂಶೋದನೆಗೊಳಪಟ್ಟಾಗ ದೊರೆತ ಫಲಿತಾಂಶವೇ ಭಿನ್ನಾಶ್ಚ ಭಿನ್ನ ಧರ್ಮಾಶ್ಚ ಪದಾರ್ಥಾ ನಿಖಿಲಾ ಅಪಿ, ಅಂದರೆ ಬೇರೆ ಬೇರೆ ಗುಣಲಕ್ಷಣಗಳಿರುವ ಪದಾರ್ಥಗಳೆಲ್ಲವೂ ಭಿನ್ನ ಭಿನ್ನವಾಗಿವೆ. ಹೀಗೆ ದೇವ,ಜೀವ,ಜಡ ಇವುಗಳ ಸುತ್ತ ಹೆಣೆದ ಪಂಚ ಭೇದಗಳು ಸತ್ಯವಾದಂತೆ ನಿತ್ಯವೂ ಹೌದೆಂಬುದು ಬ್ರಹ್ಮಸೂತ್ರ ಭಾಷ್ಯ, ಅನುವ್ಯಾಖ್ಯಾನ, ವಿಷ್ಣುತತ್ವನಿರ್ಣಯ ಮುಂತಾದ ದ್ವೈತದರ್ಶನದ ಕೃತಿಗಳಲ್ಲಿ ವಿಶದೀಕೃತವಾಗಿದೆ.

****

ಜೀವಗಣಾಃ ಹರೇ ರನುಚರಾಃ (ಜೀವರಾಶಿ ಶ್ರೀ ಹರಿಯ ಅಧೀನ) ಜೀವರು ಭಿನ್ನ ಭಿನ್ನರಾದರೂ ಅವರ ಅಸ್ವತಂತ್ರರೆಂಬುದು ಸಿದ್ಧವಾಗದ ಹೊರತು ಹರಿಸರ್ವೋತ್ತಮ ಎಂಬುದು ನಿರ್ಣಿತವಾಗಲಾರದು. ಎಲ್ಲಾ ಕಾರ್ಯಗಳು ಜೀವನ ಯೋಚನೆಯಂತೆ ನಡೆಯದಿರುವುದು, ಚಿಂತೆ, ಶೋಕ, ಭಯ, ರೋಗ ಮುಂತಾದವುಗಳ ದಾಳಿಗೆ ಜೀವನು ಒಳಗಾಗಿರುವುದು, ಇವೆಲ್ಲವೂ ಅವನ ಅಸ್ವತಂತ್ರತೆಗೆ ಸಾಕ್ಷಿ. ಜೀವನು ಶೋಕಾದಿಗಳನ್ನು ಶಾಶ್ವತವಾಗಿ ತಡೆಗಟ್ಟುವುದೊತ್ತಟ್ಟಿಗೆ ಇರಲಿ, ತಾತ್ಕಾಲಿಕವಾಗಿ ಅವನ್ನು ಅಟ್ಟಲೂ ಸಹ ಅವನು ಹೆಣಗಬೇಕಾಗುತ್ತದೆ. ಅಲ್ಲದೆ ನಾವು ಸಂಪೂರ್ಣ ಸ್ವತಂತ್ರವಲ್ಲವಾದ್ದರಿಂದಲೇ ನಿತ್ಯ ಸುಖಿಗಳಲ್ಲ ಎಂಬ ಮಾತೂ ಸಹ ಅಷ್ಟೇ ಕಟು ಸತ್ಯವಾಗಿದೆ.

***

ಇದರಂತೆ ಜೀವನು ಈಶ್ವರಾಧೀನ ವೆನ್ನುವ ದ್ವೈತ ದರ್ಶನ ತನ್ನ ವಿಚಾರ ಸಮರ್ಥನೆಗೆ ಒದಗಿಸಿದ ಅನೇಕ ಶೃತಿ ಸ್ಮೃತಿಗಳ ಆಧಾರವನ್ನು ಕಾಣುತ್ತೇವೆ. ಹೀಗೆ ಶೃತಿ ಸ್ಮೃತಿಗಳಂತೆ ಯುಕ್ತಿಗಳಿಂದಲೂ ಜೀವನು ಶ್ರೀಹರಿಯ ಅಧೀನನೆಂಬುದು ಸ್ಪಷ್ಟವಾಗುತ್ತದೆ. ಆದರೆ ಜೀವನು ತಾನು ಗುಲಾಮನಾದಂತೆ ಎಂಬ ನೈಚ್ಯಾನುಸಂಧಾನ (Inferiority complex)ಕ್ಕೆ ಎಡೆಗೊಡುವಂತಿಲ್ಲ, ಮುಕ್ತಿ ನೀಡುವಂಥ ದಯಾಳುವೂ, ಜ್ಞಾನಾನಂದಾದಿ ಸದ್ಗುಣಗಳ ಖಣಿಯೂ ಆದ ಶ್ರೀಹರಿಯ ಅಧೀನನೆಂದರೆ ಅವನು ಒಬ್ಬ ಸದ್ಗುಣಿ ಎಂದೇ ಅರ್ಥ. ಇಂತಹ ದಾಸತನ ಒಂದು ಅಧಿಕಾರ. ದಾಸೋಹಂ ಕೋಸಲೇಂದ್ರಸ್ಯ ಎಂಬ ಹನುಮನ ಅಭಿಮಾನದ ವಾಣಿಯೇ ಇದಕ್ಕೆ ನಿದರ್ಶನ. ಇಡೀ ಹರಿದಾಸ ಪಂಥವೇ ಇಂಥ ಒಂದು ಹೆಮ್ಮೆಯ ಸ್ಥಾನ ಪಡೆದಿದೆ. ಜೀವನು ಶ್ರೀಹರಿಯ ಸದ್ಗುಣಗಳಿಗೆ ಮಣಿದು, ಸಾಧನೆಗೈದು ಉತ್ತಮ ಫಲಕ್ಕೆ ತನ್ನನ್ನು ಅಣಿಗೊಳಿಸಿಕೊಳ್ಳುವುದೇ ಶ್ರೀಹರಿದಾಸ್ಯದ ಮರ್ಮ, ಇದೇ ಹರಿಯ ಅನುಚರತ್ವ ದ ಅಂತರಾರ್ಥ.

***

ಇಂತಹ ಕರ್ತೃತ್ವದಿಂದ ಜೀವನು ಶ್ರುತಿಸ್ಮೃತಿಗಳು ತಿಳಿಸಿದ ವಿಧಿ ನಿಷೇಧಗಳ ಚೌಕಟ್ಟಿನಲ್ಲಿ ಕ್ರಿಯಾಶೀಲನಾಗಿ ಗುತ್ತಿಗೆ ದಾರನ ನೀಲನಕ್ಷೆ (.blueprint) ಮೀರದೆ ನಿರ್ದಿಷ್ಟ ಚೌಕಟ್ಟಿನಲ್ಲಿಯೇ ಕಾರ್ಯಕೌಶಲ ತೋರಿ ಅವನ ಮೆಚ್ಚುಗೆಗೆ ಪಾತ್ರರಾಗುವ ವಾಸ್ತುಶಿಲ್ಪಿಗಳಂತೆ ಜೀವನು ಭಗವಂತನ ಅನುಗ್ರಹಕ್ಕೆ ಪಾತ್ರನಾಗಲು ಅವಕಾಶವಿದೆ. ಅಲ್ಲದೆ ಅನೇಕ ವರ್ಷಗಳ ಶಿಕ್ಷೆಗೊಳಗಾದ ಅಪರಾಧಿ ತನ್ನ ಶೀಕ್ಷಾವಧಿಯಲ್ಲಿ ತೋರಿದ ಪ್ರಾಮಾಣಿಕತೆ, ಸಶ್ರಮಕಾರ್ಯ, ಸದ್ವರ್ತನೆ, ಮುಂತಾದವುಗಳಿಂದ ಅವನಿಗೆ ಶಿಕ್ಷೆಯ ಸ್ವಲ್ಪ ಭಾಗದಿಂದ ವಿನಾಯತಿ ದೊರೆಯುವಂತೆ, ಭಗವಂತನ ಆಜ್ಞಾವರ್ತಿಗಳಾಗಿ ಸ್ವಾಶ್ರಮೋಚಿತ ಕರ್ಮಾನುಷ್ಠಾನಗೈದ ಜೀವನಿಗೂ ಸಹ ಅವನು ಅನುಭವಿಸಬೇಕಾದ ಸಂಚಿತ ಹಾಗೂ ಆಗಾಮಿ ಎಂಬೆರಡು ಕರ್ಮಭೋಗಗಳ ವಿನಾಯತಿ ಭಗವಂತನಿಂದ ದೊರೆಯುತ್ತದೆ. ಹೀಗೆ ಜೀವನು ಪರಮಾತ್ಮನ ಅಧೀನನಾದರೂ ದತ್ತ ಸ್ವಾತಂತ್ರ್ಯ ದಿಂದ ಸಾಧನೆಗೈಯಲು ಅವಕಾಶವಿರುವದರಿಂದ ಕರ್ಮತ್ಯಾಗದ ಸಮಸ್ಯೆ ತಲೆದೋರಲಾರದು, ದೈನಂದಿನ ತನ್ನ ಭೋಜನ, ಮನರಂಜನೆ, ಐಷಾರಾಮಿ ವ್ಯವಸ್ಥೆಗಳನ್ನೆಲ್ಲಾ ಮಾಡಿಕೊಳ್ಳುತ್ತಾ, ಧಾರ್ಮಿಕ ಕಾರ್ಯಗಳಲ್ಲಿ ಮಾತ್ರ ಎಲ್ಲವೂ ಭಗವಂತನಿಂದಲೇ ನಡೆಯುತ್ತದೆ. ನಾವೇನೂ ಮಾಡಬೇಕಿಲ್ಲ, ಎನ್ನುವಂತಹ ಆಲಸಿ ಕರ್ಮತ್ಯಾಗಿ ಉನ್ನತಿ ಹೊಂದಲಾರ ಎನ್ನುವುದೂ ಸಹ ಅಷ್ಟೇ ಸಹಜವಾಗಿದೆ.

****

ಅದ್ವೈತ ದರ್ಶನದಲ್ಲಿ ಬ್ರಹ್ಮನು ನಿರ್ಗುಣ, ಅವನಲ್ಲಿ ಆರೋಪಿತವಾದ ಮಾಯೆಯು ಜಗತ್ಕಾರಣ ಎನ್ನಲಾಗಿದೆ. ಆದರೆ ಬ್ರಹ್ಮನಲ್ಲಿ ಮಾಯಾ ಆರೋಪಿತ ಎನ್ನುವುದೇ ಸರಿಹೊಂದುವುದಿಲ್ಲ. ಬ್ರಹ್ಮ ಹಾಗೂ ಮಾಯಾ ಎರಡನ್ನೂ ಒಪ್ಪಿದರೆ ಅದ್ವೈತ ಹಾನಿ, ಒಪ್ಪದಿರೆ ಮಾಯಾರೋಪ ಇಲ್ಲದಂತಾಗಿ ಜಗತ್ ಸೃಷ್ಟಿ ಇಲ್ಲವಾದೀತು. ಬ್ರಹ್ಮನೇ ಮಾಯಾರೋಪಕ್ಕೆ ಕರ್ತೃವೂ ಹೌದು ಅಧಿಷ್ಠಾನವೂ ಹೌದು ಎನ್ನುವುದು ಸ್ವವ್ಯಾಹತವಾಗುವದರಿಂದ ಹಾಗೆ ಹೇಳಲು ಸಾಧ್ಯವಿಲ್ಲ. ಮಾಯಾರೋಪವೂ ಆರೋಪಿತ ಎಂದರೆ ಮಾಯಾರೋಪವೇ ಇಲ್ಲದಂತಾಗಿ ಜಗತ್ ಸೃಷ್ಟಿ ಅಸಾಧ್ಯವೆನಿಸುತ್ತದೆ. ಸೂಕ್ಷ್ಮ ಚಿದಚಿದ್ ವಿಶಿಷ್ಟನಾಗಿ ಬ್ರಹ್ಮನು ಜಗತ್ಕಾರಣ ಎಂಬುದು ವಿಶಿಷ್ಟಾದ್ವೈತದ ನಿಲುವು, ಇಲ್ಲಿ ಚಿದಚಿತ್ತುಗಳೇ ಬ್ರಹ್ಮನ ಶರೀರವೆಂದಿದ್ದರಿಂದ ಅವುಗಳು ಇಲ್ಲದಿದ್ದರೆ ಬ್ರಹ್ಮನ ಅಸ್ತಿತ್ವಕ್ಕೆ ಧಕ್ಕೆಯೊದಗುವ ಪ್ರಸಂಗ ತಲೆದೋರುತ್ತದೆ.

***

ಅದ್ವೈತ ಹಾಗೂ ವಿಶಿಷ್ಟಾದ್ವೈತ ಸಿದ್ಧಾಂತಗಳಲ್ಲಿ ಕ್ರಮವಾಗಿ ಬ್ರಹ್ಮೇತರವಾದ ಮಾಯೆ ಹಾಗೂ ಚಿದಚಿತ್ತುಗಳಿಗೆ ಬ್ರಹ್ಮನಿಗಿಂತ ಹೆಚ್ಚು ಅಥವಾ ಅಷ್ಟೇ ಪ್ರಾಧಾನ್ಯ ನೀಡಿದ್ದು ಕಂಡುಬರುವದರಿಂದ ಈ ಸಿದ್ಧಾಂತಗಳಲ್ಲಿ ಬ್ರಹ್ಮನ ಪರಮೋಚ್ಚತೆಯನ್ನು ಕಸಿದುಕೊಂಡಂತೆನಿಸುತ್ತದೆ.

ಈ ಉಭಯ ದರ್ಶನಗಳೂ ಬ್ರಹ್ಮನಲ್ಲಿಯ ಸತ್ಯತ್ವವನ್ನು ಕ್ರಮವಾಗಿ ಮಾಯೆ ಹಾಗೂ ಚಿದಚಿತ್ತುಗಳಲ್ಲಿ ಒಪ್ಪಿಲ್ಲವಾದ್ದರಿಂದ ಅವು ಸತ್ ಅಲ್ಲ, ಅಸತ್ ಅಲ್ಲ. ಸದಸತ್ ಅಲ್ಲ. ಆದ್ದರಿಂದ ಅವು ಅನಿರ್ವಚನೀಯ ವೆನಿಸಬೇಕಾಗುತ್ತದೆ. ಈ ಸಮಸ್ಯೆಗಳಿಂದ ಪಾರಾಗಲು ಬ್ರಹ್ಮನಲ್ಲಿಯೇ ಪರಮಸ್ವಾತಂತ್ರ್ಯವನ್ನು ಒಪ್ಪುವುದು ಲೇಸೆಂದೆನ್ನುತ್ತದೆ  ದ್ವೈತದರ್ಶನ .

****

ಸ್ವತಂತ್ರ ಶಕ್ತಿಯೆನಿಸಿದ ಈಶ್ವರನನ್ನು ಒಪ್ಪದಿರುವವರಲ್ಲಿ ಚಾರ್ವಾಕ, ಬೌದ್ಧ, ಜೈನ ಹಾಗೂ ನಿರೀಶ್ವರ ಸಾಂಖ್ಯರು ಪ್ರಮುಖರು. ಪ್ರತ್ಯಕ್ಷ ಮಾತ್ರ ಪ್ರಮಾಣವೆನ್ನುವ ಚಾರ್ವಾಕರು, ಜೀವ, ಈಶ್ವರ, ಧರ್ಮಗಳಂತಹ ಅತೀಂದ್ರಿಯ ವಿಷಯಗಳನ್ನು ಅಂಗೀಕರಿಸುವದಿಲ್ಲ ವೆನ್ನುವದಾದರೂ, ಮರಣ ಪೂರ್ವ ಹಾಗೂ ನಂತರ ದೇಹದಲ್ಲಿಯ ವ್ಯತ್ಯಾಸಗಳಿಂದ ದೇಹಕ್ಕಿಂತ ಬೇರೆಯಾದ ಆತ್ಮವನ್ನು ಅವರು ಒಪ್ಪಲೇಬೇಕಾಗುತ್ತದೆ. ಅಲ್ಲದೆ ದೇಹವೇ ಆತ್ಮ ವೆಂದಾದರೆ ಹೆಣವನ್ನೂ ಗೌರವಿಸಬೇಕಾದೀತು. ಅದು ಅಲ್ಲದೆ ಈ ಮೇಲೆ ವಿವರಿಸಿದಂತೆ ಅಸ್ವತಂತ್ರವಾದ ಪ್ರಪಂಚದ ನಿರ್ವಹಣೆಗೆ ಈಶ್ವರನನ್ನು ಒಪ್ಪುವುದು ಅನಿವಾರ್ಯ. ಪ್ರತ್ಯಕ್ಷ, ಅನುಮಾನ ಎರಡನ್ನೂ ಪ್ರಮಾಣವಾಗಿ ಒಪ್ಪೆದರೂ ವಿಶ್ವವು ಚತುಃಕ್ಷಣ ಸ್ಥಾಯಿ, ಅತಏವ ಶೂನ್ಯ, ಎಂಬ ಬೌದ್ಧವಾದವನ್ನು ನ್ಯಾಯ_ ವೈಶೇಷಿಕರೇ ತಳ್ಳಿಹಾಕಿರುವುದು ಆಗಲೇ ಪ್ರಸ್ತಾಪಿತವಾಗಿದೆ. ಅನಾದಿಯಾದ ಪ್ರಪಂಚಕ್ಕೆ ನಾಶವಿಲ್ಲ ಎನ್ನುವ ಜೈನರ ವಾದವು ಸಮಂಜಸವೆನಿಸುವದಿಲ್ಲ. ಸಂಸಾರ ನೀಗುವ ಈಶ್ವರನಿಲ್ಲದಿದ್ದರೆ ಈ ಸಂಸಾರವು ನೀಗುವಂತಿಲ್ಲ. ಜೀವನಿಗೆ ಮುಕ್ತಿಯೂ ದೊರೆಯುವಂತಿಲ್ಲ. ಹೀಗೆ ಇಲ್ಲಿ ಮುಕ್ತಿ ಪ್ರಯೋಜನವನ್ನು ಹೇಳುವುದು ಸಾಧ್ಯವಾಗುವುದು. ಈಶ್ವರನನ್ನು ಒಪ್ಪದೇ ಕೇವಲ ಪ್ರಪಂಚವನ್ನು ಅನಾದಿ ಎನ್ನುವುದರಿಂದ ಅದರ ವ್ಯವಸ್ಥಿತ ನಿಯಂತ್ರಣ ಹಾಗೂ ನಿರ್ವಹಣೆಗಳು ಸಾಧ್ಯವಿಲ್ಲ. *ಒಬ್ಬೊಬ್ಬರು ಅಸಮರ್ಥರಾದರೂ ಕುರುಡ, ಕುಂಟರಿಬ್ಬರೂ ಸೇರಿ ಪರಸ್ಪರ ಸಹಾಯದಿಂದ ಕಾರ್ಯನಿರ್ವಹಿಸುವ *ಅಂಧ ಪಂಗುನ್ಯಾಯದಂತೆ ಈಶ್ವರನಿಲ್ಲದೆಯೂ ಅಸ್ವತಂತ್ರ ಪ್ರಪಂಚದ ವ್ಯವಹಾರ ಸಾಧ್ಯ ಎನ್ನುತ್ತಾರೆ ಸಾಂಖ್ಯರು, ಆದರೆ ಎಲ್ಲ ವಸ್ತುಗಳೂ ಪರಸ್ಪರ ಮಿಲಿತವಾಗುವ ಸ್ವಭಾವದವುಗಳಾಗಿದ್ದರೆ ಮಾತ್ರ ಈ ನ್ಯಾಯ ಅನ್ವಯಿಸುತ್ತದೆ. ಅಲ್ಲದೆ ಕುರುಡ, ಕುಂಟರಂತೆ ಪರಸ್ಪರ ಸೇರಿದಾಗಲಷ್ಟೇ ಈ ಪ್ರಪಂಚ ವ್ಯವಹಾರ! ಅಸ್ವತಂತ್ರರಾದ ಅವರನ್ನು ಸೇರಿಸಲಿಕ್ಕಾದರೂ ಒಬ್ಬ ಸ್ವತಂತ್ರ ಪುರುಷ ಬೇಕಲ್ಲವೇ?

***

ಈಶ್ವರನು ಪ್ರಕೃತಿಯ ಸಹಾಯದಿಂದ ಜಗತ್ತನ್ನು ಸೃಷ್ಟಿಸುವನು ಎನ್ನುತ್ತದೆ ಯೋಗದರ್ಶನ. ಸೃಷ್ಟಿಕರ್ತನಿಗೆ ತನ್ನಿಂದ ಸೃಜ್ಯವಾಗುವ ಎಲ್ಲ ವಸ್ತುಗಳ ಜ್ಞಾನ ಅವಶ್ಯವಾಗಿದೆ.  ಯೋಗದರ್ಶನದಂತೆ ಈಶ್ವರನಲ್ಲಿ ಸರ್ವಜ್ಞತ್ವ, ಸರ್ವಗುಣ ಪರಿಪೂರ್ಣತ್ವಗಳನ್ನು ಒಪ್ಪದಿದ್ದರೆ ಪರಮಾತ್ಮನು ಸರ್ವಜಗತ್ಕಾರಣ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅಲ್ಲದೆ ಪ್ರಕೃತಿಯ ಸಹಾಯದಿಂದ ಸೃಷ್ಟಿ ಎನ್ನುವದರಿಂದ ಪರಮೇಶ್ವರನ ಪರಮಸ್ವಾತಂತ್ರ್ಯಕ್ಕೆ ಧಕ್ಕೆಯೊದಗದಿರದು. ನ್ಯಾಯ_ ವೈಶೇಷಿಕರು, ಕಾರ್ಯರೂಪಕ್ಕೆ ಬರುವ ಪರಮಾಣುಗಳು ಕಾಲ, ಆಕಾಶ, ಜೀವರು ಮುಂತಾದವರಿದ್ದಾಗ ಈಶ್ವರನಿಂದ ಜಗತ್ತಿನ ಸೃಷ್ಟಿ ಎನ್ನುತ್ತಾರೆ. ಪರಮಾಣು ಕಾರ್ಯಕಾರಿ ಸ್ವಭಾವದವುಗಳು ಎನ್ನುವುದು ಸಾಂಖ್ಯವಾದವೇ, ಕಾಲ ಆಕಾಶಾದಿಗಳನ್ನು ಅಪೇಕ್ಷಿಸಿ ಸೃಷ್ಟಿ ಎನ್ನುವುದರಿಂದ ಪರಮಾತ್ಮನು ಸರ್ವಜಗತ್ಕಾರಣನೆನ್ನಲು ಅವನು ಸಮಸ್ತ ಗುಣಪೂರ್ಣ ಎಂದು ಒಪ್ಪುವುದೂ ಸಹ ಅನಿವಾರ್ಯವಾಗುತ್ತದೆ, ಸುಖವೂ ಇಲ್ಲದ ದುಃಖವೂ ಇಲ್ಲದ ಸ್ಥಿತಿಯೇ  ಮುಕ್ತಿ ಎನ್ನುವ ಈ ದರ್ಶನ ಜೀವನು ಕಲ್ಲುಗುಂಡಿನಂತಾಗಲು ಇವರು ಶಾಸ್ತ್ರವನ್ನು ಬೋಧಿಸಿದರು ಎಂಬ ಶ್ರೀ ಹರ್ಷನ ಕಟುಟೀಕೆಗೆ ಗುರಿಯಾಗಿದೆ. 

***

 ಈ ವಿವಿಧ ದರ್ಶನಗಳ ಸಮೀಕ್ಷೆಯಿಂದ ಈಶ್ವರ, ಧರ್ಮ, ಅಧರ್ಮಗಳಂತಹ ಅತೀಂದ್ರಿಯ ವಿಷಯಗಳ ಸಮರ್ಥನೆಗೆ ಅಪೌರುಷೇಯ ವೇದವನ್ನು ಒಪ್ಪದೇ, ಒಪ್ಪಿದರೂ ಕೆಲವರು ಅದಕ್ಕೆ ಪ್ರಾಧಾನ್ಯ ನೀಡದೇ ಕೇವಲ ಅನುಮಾನವನ್ನು ಆಶ್ರಯಿಸಿರುವುದು ಕಂಡು ಬರುತ್ತದೆ. ಕೇವಲ ಅನುಮಾನದಿಂದ ಅತೀಂದ್ರಿಯ ವಿಷಯಗಳನ್ನು ಸಾಧಿಸಲು ಸಾಧ್ಯವಿಲ್ಲದಿದ್ದರೂ, ಅವು ಅಂತಹ ಅನುಮಾನದಿಂದಲೇ ಈಶ್ವರನ ಸೃಷ್ಟಿಕರ್ತೃತ್ವ, ಸ್ವಾತಂತ್ರ್ಯ ಮುಂತಾದವನ್ನು ಸಾಧಿಸಹೊರಟುದಲ್ಲದೆ, ಪರಮಾತ್ಮನು ಪ್ರಕೃತಿ, ಮಾಯಾ ಚಿದಚಿತ್ತವುಗಳಂಥವುಗಳ ಸಹಾಯದಿಂದ ಸೃಷ್ಟಿಸುತ್ತಾನೆ ಎಂದು ಹೇಳಿದುದರಿಂದ ಈಶ್ವರನು ಪಾರತಂತ್ರ್ಯದಲ್ಲಿ ಸಿಲುಕುವಂತಾಗುತ್ತದೆ. ಆದರೆ ದ್ವೈತ ದರ್ಶನದಲ್ಲಿ ಈಶ್ವರ ಮುಂತಾದ ಅತೀಂದ್ರಿಯ ವಿಷಯಗಳ ಸಮರ್ಥನೆಗೆ ಅದು ಅಪೌರುಷೇಯವಾದ ವೇದದ ಸಹಾಯ ಪಡೆದಿರುವದನ್ನು ಕಾಣುತ್ತೇವೆ. 

****

      ಪರಮಾತ್ಮನು ಸರ್ವಗುಣ ಪರಿಪೂರ್ಣ ಹಾಗೂ ಸಕಲದೋಷದೂರನೂ ಆದುದರಿಂದ ಅವನೇ ಸರ್ವೋತ್ತಮನೆನಿಸಿದ್ದಾನೆ. ಅಂತೆಯೇ ಸರ್ವ ಜಗತ್ಕಾರಣ ನೂ ಅವನೇ. ಆದರೆ ಬ್ರಹ್ಮನು ಸೃಷ್ಟಿಗೈಯುತ್ತಾನೆ. ರುದ್ರನು ಸಂಹಾರಗೈಯುತ್ತಾನೆ. ಎಂದೂ ಸಹ ಪ್ರಸಿದ್ಧವಾದುದರಿಂದ ಬ್ರಹ್ಮ, ವಿಷ್ಣು, ರುದ್ರ ಇವರೆಲ್ಲರೂ ಜಗತ್ಕಾರಣರಾಗಿರಬಹುದೇ? ಎಂಬ ಪ್ರಶ್ನೆ ಕಾಡದೆ ಇರದು. ಈ ಸಮಸ್ಯೆಯನ್ನು ಬ್ರಹ್ಮಸೂತ್ರ ಸರ್ವವೇದಪ್ರತಿಪಾದ್ಯನಾದವನೇ ಸರ್ವ ಜಗತ್ಕಾರಣವಾಗಿರಲು ಸಾಧ್ಯ ಎಂಬ ಯುಕ್ತಿಯಿಂದ ಬಗೆಹರಿಸಲು ಪ್ರಯತ್ನಿಸಿದೆ. ಬ್ರಹ್ಮಾದಿದೇವತೆಗಳೆಲ್ಲರೂ ಇರುವ ಈ ಪ್ರಪಂಚದಲ್ಲಿ ವ್ಯಾಪ್ತನಾಗಿರುವುದರ ಜೊತೆಗೆ ಎಲ್ಲರನ್ನೂ ಪ್ರೇರಿಸುತ್ತಾ ಎಲ್ಲಕ್ಕೂ ಮುಖ್ಯ ಕಾರಣನೆನಿಸಿದವನು ಶ್ರೀಹರಿಯೇ. ಬ್ರಹ್ಮಾದಿ ದೇವತೆಗಳು ನಿಮಿತ್ತ ಮಾತ್ರ ಇಷ್ಟೇ ಅಲ್ಲ ಬ್ರಹ್ಮ, ವಾಯುಗಳಂತಹ ಎಲ್ಲಾ ಶಬ್ಧಗಳು ಸಹ ವಿವಿಧರಿಗೆ ವಿವಿಧ ಶಕ್ತಿ ಪ್ರದನಾಗ ವಿಷ್ಣುವನ್ನೇ ಪರಮಮುಖ್ಯವೃತ್ತಿ ಬೋಧಿಸುವುದರಿಂದ ವಿಷ್ಣುವು ಸಕಲ ಶಬ್ದ ವಾಚ್ಯನೆನಿಸುತ್ತಾನೆ. ಅಂತೆಯೇ ಅವನು ಸರ್ವವೇದ ಪ್ರತಿಪಾದ್ಯನೂ ಆಗುವುದರಿಂದ ಅವನೇ ಸರ್ವಜಗತ್ಕರ್ತೃ ಎಂದು ಬ್ರಹ್ಮಸೂತ್ರಗಳಲ್ಲಿ ಸ್ಪಷ್ಟಪಡಿಸಿರುವದನ್ನು ಕಾಣುತ್ತೇವೆ. 

***

ಇಂತಹ ಆಧಾರಗಳಿಂದ ದ್ವೈತ ದರ್ಶನವು ಲೋಕ ವ್ಯವಹಾರದ ಶಬ್ಧಗಳು ಸೇರಿದಂತೆ ಸಕಲ ಶಬ್ಧಗಳು ಪರಮಾತ್ಮನನ್ನೇ ಬೋಧಿಸುತ್ತವೆ ಎಂದಿದೆ. ದ್ವೈತ ದರ್ಶನದ ಈ ವಿಚಾರ ನವೀನವೆನಿಸುವಂತೆ ಕುತೂಹಲಕಾರಿಯೂ ಆಗಿದೆ. ಜ್ಞಾನಿ _ ಧನಿ, ಸುಖಿ _ ದುಃಖಿ ಮುಂತಾದ ಶಬ್ಧಗಳು ಮುಖ್ಯ ವೃತ್ತಿ ಹಾಗೂ ಅಮುಖ್ಯವೃತ್ತಿ ಎಂಬೆರಡು ರೀತಿಯಿಂದ ವ್ಯವಹಾರಗೊಳ್ಳುತ್ತಲಿವೆ. ಸ್ವಲ್ಪ ಜ್ಞಾನ, ಧನ,ಸುಖ, ಮುಂತಾದವು ಇರುವವರಲ್ಲಿ ಕ್ರಮವಾಗಿ ಜ್ಞಾನಿ, ಧನಿ, ಸುಖಿ ಮುಂತಾದ ಇಂತಹ ವ್ಯವಹಾರವು ಅಮುಖ್ಯವಾಗಿಯೂ ಹಾಗೆಯೇ  ಹೆಚ್ಚು ಜ್ಞಾನ, ಧನ, ಸುಖ ಮುಂತಾದವು ಇದ್ದವರಲ್ಲಿ ಅಂತಹ ವ್ಯವಹಾರ ಮುಖ್ಯವಾಗಿಯೂ ಇರುವುದು ತಿಳಿದ ಸಂಗತಿ. ಈ ಮುಖ್ಯಾಮುಖ್ಯವೃತ್ತಿಗಳಂತೆ ಪರಮಮುಖ್ಯವೃತ್ತಿ ಎಂಬ ಮತ್ತೊಂದು ಪ್ರಕಾರದ ಶಬ್ದ ವ್ಯವಹಾರವೂ ಇದೆ. ಜೀವರಲ್ಲಿ ಜ್ಞಾನಿ, ಧನಿ, ಸುಖಿ ಮುಂತಾದ ಮುಖ್ಯವೃತ್ತಿ ವ್ಯವಹಾರಕ್ಕೆ ಅವರಲ್ಲಿಯ ಹೆಚ್ಚು ಜ್ಞಾನ, ಸುಖ, ಸಂಪತ್ತು ಮುಂತಾದವು ಕಾರಣವಾಗಿದ್ದರೂ ಅವೆಲ್ಲವೂ ಸಾವಧಿಕವಾಗಿವೆ. ಅಂದರೆ ಪರಿಮಿತವಾಗಿವೆ. ನಿರವಧಿಕ ಅಂದರೆ ಅಪರಿಮಿತವಾದ ಜ್ಞಾನಾದಿಗಳನ್ನು ಪಡೆದವನೆಂದರೆ ಶ್ರೀಹರಿಯೊಬ್ಬನೇ. ಹೀಗೆ ಜ್ಞಾನಿ, ಧನಿ ಮುಂತಾದ ಶಬ್ಧಗಳು ಮುಖ್ಯ ವೃತ್ತಿಯಿಂದ ಕೆಲವು ಜೀವರಲ್ಲಿ ವ್ಯವಹರಿಸಲ್ಪಡುವದಾದರೂ, ಪರಮ ಮುಖ್ಯ ವೃತ್ತಿಯಿಂದ ಅವು ಶ್ರೀಹರಿಯನ್ನೇ ಬೋಧಿಸುವುದರಿಂದ ಅವನೇ ಸಕಲವಾಚ್ಯ ನೆಂದು ಹೇಳಿದಂತಾಗುತ್ತದೆ. ಚರಾಚರಾತ್ಮಕವಾದ ಸಮಸ್ತ ಪ್ರಪಂಚ ಈಶ್ವರಾಧೀನ ವಾದ್ದರಿಂದ ಈ ಪ್ರಪಂಚದಲ್ಲಿಯ ಶಬ್ದಜಾಲವೆಲ್ಲವೂ ಪರಮಾತ್ಮಾಧೀನವೇ. ಸೈನ್ಯವು ಜಯಿಸಿದರೂ ಅದು ರಾಜಾಧೀನ ವಾದ್ದರಿಂದ ರಾಜನು ಜಯಿಸಿದನೆಂದು ಹೇಳುವಂತೆ ಪರಮಾತ್ಮಾಧೀನವಾದ ಸಮಸ್ತ ಶಬ್ಧಗಳು ಪರಮಾತ್ಮನನ್ನು ಬೋಧಿಸುವದರಲ್ಲಿ ಆಶ್ಚರ್ಯವಿಲ್ಲ. 

**

ಇದರಂತೆ ಓಂಕಾರ ವಾಚ್ಯನಾದ ಪರಮಾತ್ಮನು ಸರ್ವಶಬ್ದವಾಚ್ಯ ಎನ್ನುವ ಮೂಲಕವೂ ದ್ವೈತ ದರ್ಶನವು ಸರ್ವಶಬ್ದವಾಚ್ಯತ್ವವನ್ನು ಸಮರ್ಥಿಸಿದೆ. ಇದೂ ಸಹ ನೂತನವಾದಂತೆ ತರ್ಕಬದ್ಧವೂ ಆಗಿ ತಲೆದೂಗಿಸುವಂತಿದೆ. "ಗುಣಪೂರ್ಣ" ಅರ್ಥದೊಂದಿಗೆ ಅ.ಉ.ಮ. ಅಕ್ಷರಗಳಿಂದ ಕೂಡಿದ ಓಂ ಶಬ್ದವಾಚ್ಯನು ಪರಮಾತ್ಮನು ಎಂದು ಅನೇಕ ಉಪನಿಷತ್ತುಗಳಲ್ಲಿ ವರ್ಣಿತವಾಗಿದೆ. ಚೂಪಾದ ಶೂಲದಲ್ಲಿ ಅನೇಕ ತರಗೆಲೆಗಳು ಸೇರುವಂತೆ ಓಂಕಾರ ದಲ್ಲಿ ಸಮಸ್ತ ವಾಕ್ ಸಮೂಹ ಸಮಾವೇಶಗೊಂಡಿದೆ, ಎಂಬುದಂತೂ ಸಕಲ ಶಬ್ಧಗಳು (ವೇದಗಳು) ಓಂಕಾರ ವ್ಯಾಖ್ಯಾನವೆಂಬುದನ್ನು ಸುಲಭ ಹಾಗೂ ಸರಳರೀತಿಯಿಂದ ಸ್ಪಷ್ಟ ಪಡಿಸುವ ಮಾತಾಗಿದೆ. ಈ ರೀತಿ ಓಂಕಾರವು ಸಮಸ್ತ ವೇದವನ್ನೇ ತನ್ನಲ್ಲಿ ಹುದುಗಿಸಿಕೊಂಡಿರುವ ವಿಚಾರವೂ ರೋಚಕವಾಗಿದೆ.

***