Showing posts with label ಆರಿಗೆ ಉಸರಲಿ vasudeva vittala ankita suladi ಕೃಷ್ಣ ಪ್ರಾರ್ಥನಾ ಸುಳಾದಿ AARIGE USARALI KRISHNA PRARTHANA SULADI. Show all posts
Showing posts with label ಆರಿಗೆ ಉಸರಲಿ vasudeva vittala ankita suladi ಕೃಷ್ಣ ಪ್ರಾರ್ಥನಾ ಸುಳಾದಿ AARIGE USARALI KRISHNA PRARTHANA SULADI. Show all posts

Monday 30 August 2021

ಆರಿಗೆ ಉಸರಲಿ vasudeva vittala ankita suladi ಕೃಷ್ಣ ಪ್ರಾರ್ಥನಾ ಸುಳಾದಿ AARIGE USARALI KRISHNA PRARTHANA SULADI


 Audio by Mrs. Nandini Sripad


ಶ್ರೀವ್ಯಾಸತತ್ವಜ್ಞತೀರ್ಥಾರ್ಯ ವಿರಚಿತ 


 ಶ್ರೀಕೃಷ್ಣ ಪ್ರಾರ್ಥನಾ ಸುಳಾದಿ 


 ರಾಗ ಪಂತುವರಾಳಿ 


 ಧ್ರುವತಾಳ 


ಆರಿಗೆ ಉಸರಲಿ ಆರಿಗೆ ಮೊರೆ ಇಡಲಿ

ಆರೆನ್ನ ಮನದಳಲು ನಿವಾರಿಸುವರ ಕಾಣೆ

ಮೇರೆ ಇಲ್ಲದೆ ಪೋದ ವಿಷಯ ಶಳವುತಿದೆ

ಭಾರೊಮ್ಮೆ ಮುಂದಣಾಶಾ ತೋರಿ ಎಳವುತಿದೆ

ತೋರಿ ನೀ ತೋರಿಸು ತೋರದೆ ಪೋದರೆ ಎನ್ನ ಎದೆ ಮನ

ಹಾರಿ ಬೀಳುತಲಿದೆ ಗತಿ ಏನೊ ಎಲೊ ಕೃಷ್ಣ

ಸಾರಿ ಸಾರಿಗೆ ಇದನೆ ಬೇಡುವೆನೇ ಅನ್ಯನ್ನ

ದಾರಿ ತಪ್ಪಿಸಿ ನಿನ್ನ ದಾರಿಯ ಪಿಡಿಸೆನ್ನ

ಕಾರುಣಿಕ ರಂಗ ಮೊರೆಯೊಕ್ಕ ಭಕತನ್ನ

ಮಾರಿಗೆ ಒಪ್ಪಿಸದೆ ಸಾರೆ ಗರಿಯೊ ದೇವ

ವಾರಿಜಾಕ್ಷ ವಾಸುದೇವವಿಟ್ಠಲರೇಯ 

ದೂರ ನೋಡದೆ ದಯವಾರಿಧೆ ಪೊರೆಯೆನ್ನ ಪೊರೆಯೊ ॥ 1 ॥ 


 ಮಟ್ಟತಾಳ 


ಧನದಲ್ಲಿ ಬಡತನ ಸಹಿಸಲಿ ಬಹುದೈಯ್ಯಾ

ಜನಪತಿ ಕೋಪವ ತಡೆಯಲಿ ಬಹುದೈಯ್ಯಾ

ವನಿತೆಯರ ಕಟಾಕ್ಷವ ಕ್ಷಮಿಸಲಿ ಬಹುದಯ್ಯಾ

ಮನೆಯೊಳು ಕಲಹವ ತಾವರಿಸ ಬಹುದೈಯ್ಯಾ

ಜನಗಳ ದೂರನ್ನ ಸೈರಿಸ ಬಹುದೈಯ್ಯಾ

ವನಜನಯನ ವಾಸುದೇವವಿಟ್ಠಲ ನಿನ್ನ

ಮನದಲಿ ಯೋಚಿಸಿನ್ನು ಸಹಿಸಲಿ ವಶವಲ್ಲ ॥ 2 ॥ 


 ತ್ರಿವಿಡಿತಾಳ 


ಏನು ಬಿಟ್ಟರೆ ಬಿಡೊ ಏನು ಕೊಟ್ಟರೆ ಕೊಡೊ

ಆನೇ ನಂಬುವುದಿಲ್ಲ ಮನದೊಳು ಇನಿತನ್ನ

ನೀನೇವೆ ಕೇಳ್ ಕಾಂತಾ ಮನಸಿನ ಬಯಕಿದೆ

ಮಾನದೊಡೆಯ ವಾಸುದೇವವಿಟ್ಠಲರೇಯಾ 

ದೀನ ವತ್ಸಲದೇವ ಮುನಿಸಿನ್ನು ಬಿಡೊ ಕೃಷ್ಣ ॥ 3 ॥ 


 ಅಟ್ಟತಾಳ 


ಒಲಿಸಿ ವನಿತೆ ಎನ್ನ ತಿಳಿಸಿ ಸೌಖ್ಯಗಳೆಲ್ಲ

ಛಲಿಸಿ ಅವಳ ಕೂಡ ವೊಳಿತಲ್ಲ ಮುನಿಸೀಗ

ಬಲುದೋಷ ಇದರಿಂದ ತಿಳಿದಾತ ನೀನಲ್ಲೆ

ಸುಳಿಯೊ ವಾಸುದೇವವಿಟ್ಠಲ ದಯಾನಿಧೆ ॥ 4 ॥ 


 ಆದಿತಾಳ 


ಮುನಿಗಳು ಬಹು ವ್ಯಾಪ್ತಿ ನಿನಗೆ ಪೇಳುವದೆಲ್ಲ

ಎನಗೊಂದಾದರು ಅದು ಮನಕೆ ಬಾಹುದಲ್ಲೊ

ಘನ್ನ ವ್ಯಾಪ್ತಿಯು ನಿನಗಿದೆ ಅಣುವಾದ ಎನ್ನ

ಮನವನು ಪೋಗದೆಲಿಹ್ಯದಿನೆ ಲೇಶ ನಿನಗಿದೆ

ಬಿನಗು ವಿಷಯಗಳು ದಣಿಸೊವೆ ಅದರನ್ನ

ಘನಮಹಿಮನೆ ವಾಸುದೇವವಿಟ್ಠಲರೇಯಾ 

ಅನುಭವ ಕೊಡು ಕಂಡ್ಯಾ ದನುಜಮರ್ದನ ಕೃಷ್ಣ ॥ 5 ॥ 


 ಜತೆ 


ಭಕತರ ದೂರಿಗಂಜ್ವ ವಾಸುದೇವವಿಟ್ಠಲ 

ಶಕತಾಳೆ ಮಿಗಿಲಾಗಿ ಬಿನ್ನೈಸುವದಕೆ ॥

***