Showing posts with label ನೀಲಗುದುರಿಯನೇರಿ ಶಾಲು gopala vittala suladi ಪಂಢರಿನಾಥನ ಸ್ತೋತ್ರ ಸುಳಾದಿ NEELAGUDUREERI SHAALU PANDHARINATHA STOTRA SULADI. Show all posts
Showing posts with label ನೀಲಗುದುರಿಯನೇರಿ ಶಾಲು gopala vittala suladi ಪಂಢರಿನಾಥನ ಸ್ತೋತ್ರ ಸುಳಾದಿ NEELAGUDUREERI SHAALU PANDHARINATHA STOTRA SULADI. Show all posts

Monday 9 December 2019

ನೀಲಗುದುರಿಯನೇರಿ ಶಾಲು gopala vittala suladi ಪಂಢರಿನಾಥನ ಸ್ತೋತ್ರ ಸುಳಾದಿ NEELAGUDUREERI SHAALU PANDHARINATHA STOTRA SULADI


1st Audio by Mrs. Nandini Sripad




ಶ್ರೀ ಗೋಪಾಲದಾಸಾರ್ಯ ವಿರಚಿತ  ಶ್ರೀಪಂಢರಿನಾಥನ ಸ್ತೋತ್ರ ಸುಳಾದಿ 

 ರಾಗ ಮಧುವಂತಿ 

 ಧ್ರುವತಾಳ 

ನೀಲಗುದುರಿಯನೇರಿ ಶಾಲು ಸೊಂಟಕೆ ಸುತ್ತಿ
ಕಾಲು ಕುಪ್ಪಸ ತೊಟ್ಟು ಮೇಲೆ ಮೋಹನ್ನ ಹಾಕಿ
ಓಲ್ಯಾಡಿಸುತ್ತಾ ಒಂಟಿ ಢಾಳಾಗಿ ಶೋಭಿಸಲು
ಸಾಲು ಬೆರಳುಂಗರ ಕೈಯಲಿ ಖಡ್ಗವ ಪಿಡಿದು
ತೋಳು ತಾಯಿತ ಶಿರಕೆ ಮೇಲಾದ ವಸ್ತ್ರ ಸುತ್ತಿ
ಫಾಲ ಕಸ್ತೂರಿನಿಟ್ಟು ಮೈಲಿ ಗಂಧವು ಪೂಸಿ
ಪಾಲಾಯನಾದಿ ಅಶ್ವವೇರಿ ಓಲ್ಯಾಡಿಸುತ್ತ
ಆಲೆನಾಹಿ ಎಂದು ಕೇಳಿದವನಾರವ್ವ
ವೇಳೆ ಸಾಲಧೋಯಿತೋ ಕೇಳುವದಕೆನಗೆ
ಹೇಳುವದಕೆ ವಚನಾ ಗದ್ಗದದಿ
ಏಳದು ವಚನ ಉಚ್ಚರಿಸುವೆನೆನಲು
ಆಲೋಚನೆಗೆ ಅತಿ ವಿಚಿತ್ರವು
ಕೇಳಿಲ್ಲ ಕಂಡಿಲ್ಲ ಇಂಥ ಪುರುಷನ್ನ ಎಂದು
ಕಾಳಗತ್ತಲು ಅಲ್ಲ ಅತ್ತ ನೋಡು ಹಗಲು
ಕೇಳು ತಗ್ಗು ಮಿಟ್ಟಿ ಮೇಲೆ ಮಂಜರವಲ್ಲ
ಹೇಳಲೇ ನಾ ನಿಂದು ಸೋಜಿಗವೆ
ಕಾಲು ಏಳವು ಮುಂದೆ ನಡಿಯಲಿ ಎನಗಿನ್ನು
ಆಲೋಚನೆ ಎಲ್ಲ ಅತ್ತಲಾಗಿ ಎನ್ನ
ಕೇಳಿದನಲ್ಲೆ ಅರೆಮಾತಿನಿಂದಲಿ ಇನ್ನು
ಹೇಳುವ ಪುರುಷ ಆವನಾಗುವನು
ಆಲೋಚನೆಗೆ ಎನಗೆ ತೋರುತಲಿದೆ ತುಲಸಿ -
ಮಾಲೆ ಪರಿಮಳ ಗಂಧ ಕುರುಹದಿಂದ
ಶೀಲಾಮೂರುತಿ ಪಂಢರಿರಾಯ ಗೋಪಾಲವಿಟ್ಠಲ 
ಓಲ್ಯಾಡಿ ಕುದುರೆ ಓಡ್ಯಾಡಿಸುತ್ತಾ ಪೋದನಲ್ಲೆ ॥ 1 ॥ 

 ಮಠ್ಯತಾಳ 

ಕಂಡಿರ್ಯಾ ಕಂಡಿರ್ಯಾ ಖಂಡ ವ್ಯಾಪುತನಿವ
ಕಂಡಿರ್ಯಾ ಕಂಡಿರ್ಯಾ ಬೊಮ್ಮಾಂಡದೊಡಿಯನ
ಕಂಡಿರ್ಯಾ ಕಂಡಿರ್ಯಾ ಅಜ ಭವಾದಿಗಳು
ತೋಂಡರ ಮಾಡಿ ಬಿಡದ್ಯೆಖಂಡ ಪೊರೆವುವನ
ಕಂಡಿರ್ಯಾ ಕಂಡಿರ್ಯಾ ಸರ್ವಜೀವರ ಪಶು -
ಹಿಂಡು ಮಾಡಿ ಬಿಡದೆ ಕಾಯುವ ಗೋಪಾಲನ
ಕಂಡಿರ್ಯಾ ಕಂಡಿರ್ಯಾ ಮಣಿಮೌಳಿ ಮಲ್ಲಿಗೆ ದಂಡೆಯು
ಮಂಡಿಯು ಶೋಭಿಸೆ ಮುದ್ದು ಮೊಗದ ಚೆಲುವ
ಪುಂಡರೀಕ ದಳ ನಯನ ಕಸ್ತೂರಿ ತಿಲಕ
ಕುಂಡಲಕರ್ನ ಕಪೋಲ ತತ್ಥಳಿಸುತ್ತ
ಪುಂಡರೀಕ ತುಲಸಿ ದಂಡೆಯು ಕೊರಳೊಲಿಯೆ
ಚಂಡು ಬೊಗುರಿ ಚಿಣಿ ಗೋಲುಗಳಾಡುತ
ಪುಂಡರೀಕನ ಭಕುತಿಗೊಲಿದು ಬಂದು ನಿಂದಾ
ಪಂಢರಿಪುರಿರೇಯಾ ಗೋಪಾಲವಿಟ್ಠಲನ್ನ 
ಕಂಡಿರ್ಯಾ ಕಂಡಿರ್ಯಾ ಕಪಟ ನಾಟಕ ಹರಿಯ ॥ 2 ॥ 

 ರೂಪಕತಾಳ 

ಆವ ರೂಪದಲ್ಲೆ ಗೋವು ಕಾಯಿದ ರೂಪ
ಆವ ಈ ರೂಪವೆ ಮತ್ಸ್ಯಾದಿ ರೂಪವು
ಆವ ಈ ರೂಪವೆ ಅಜಾದಿ ರೂಪವು
ಆವ ಈ ರೂಪವೆ ಆತ್ಮಾದಿ ರೂಪವು
ಆವ ಈ ರೂಪವೆ ಅನಂತಾತ್ಮಕ
ಶ್ರೀವಿಷ್ಣು ರೂಪವು ಮತ್ತಿವನೆ ಸಾಕ್ಷಾತ ನೋಡಾ
ಈ ವಿಧ ರೂಪವು ಅನಂತಾನಂತವಿರಲು
ಆವ ರಾಹುತನಂತೆ ಅಶ್ವವೇರಿ ಎನ್ನ
ಈ ವಿಧದಲಿ ಎನ್ನ ಕಾವಳಗೊಳಿಸಿದುದು ಏನು
ನಾ ಒಂದರಿತವನಲ್ಲ ನಿನ್ನ ಲೀಲೆ
ಆವ ಬಗೆಯೋ ನಾನರಿಯೆ ಈ ವಿಧ ತೋರಿದ್ದು
ಸೇವಕ ಜನ ಸ್ಥಿತಿ ನೀನೆ ಬಲ್ಲೆ
ಗೋವರ್ಧನೋದ್ಧಾರ ಗೋಪಾಲವಿಟ್ಠಲ 
ದೇವ ಪಂಢರಿರಾಯ ಶ್ರೀವಿಜಯದಾಸರ ಪ್ರೀಯಾ ॥ 3 ॥ 

 ಝಂಪೆತಾಳ 

ನೋಡಿದಂತೆನಗೆ ನೋಡದಿದ್ದರೆನಗೆ
ಮಾಡಿಕೊಂಬೆ ಮನಕೆ ಆವನಾದಾನೆಂದು
ನೋಡಿದ ಕ್ಷಣದಲ್ಲಿ ಕಾಣದ್ಹೋದರಿಂದ
ನೋಡಬೇಕಾಯಿತು ಆವವನೊ ಎಂದು
ನೋಡ ನೋಡಾ ಅದೃಶ್ಯನಾದ ಕಾರಣ ಮನಕೆ
ನೋಡು ಎಂತಿಪ್ಪುವದು ನೋಡುವರಿಗೆ
ಆಡುವ ಮಾತಿಲ್ಲ ಕಂಡ ಕಂಡಂತಿನ್ನು
ನೋಡಬಾರದೆ ಒಂದು ಘಳಿಗೆ ನಿಂದು
ನೋಡಿದಕ್ಷಣ ನಿಂದು ಬೇಡುವದಿನ್ನೇನು
ನೋಡೊ ಯೋಗ್ಯತೆ ಇನಿತೆ ಇತ್ತೋ ಏನು ಧೊರಿಯೆ
ಆಡಿದ್ದೆಲ್ಲ ಬರಲಿ ಇಲ್ಲವೆಂದು ಎನ್ನ
ನೋಡು ಆವ ಸ್ಥಳಕೆ ಬರಲಿ ಆನು
ನೋಡು ತಿಳಿಯದು ಸ್ವಾಮಿ ಗೋಪಾಲವಿಟ್ಠಲ 
ನೋಡು ಪಂಢರಿರಾಯ ಮಾಡು ದಯವ ॥ 4 ॥ 

 ತ್ರಿಪುಟತಾಳ 

ಆವ ದೇಶಕೆ ಬರಲಿ ಆವ ಕ್ಷೇತ್ರವು ನೋಡಲಿ
ಆವ ಸಂಗವ ಬಿಡಲಿ ಆವ ಪಿಡಿಯಲಿ ಸಂಗ
ಆವ ವ್ರತಗಳು ಮಾಡಲಿ ಆವ ಶ್ರವಣವು ಕೇಳಲಿ
ಆವ ಧೈರ್ಯವು ಇರಲಿ ಆವದಾವದು ತಿಳಿಯಲಿ
ಆವ ಸಾಧನ ಮಾಡಲಿ ಆವದಾವದು ಕೊಡಲಿ
ಆವದಾವದು ಉಣಲಿ ಆವದಾವದು ಹೊದಿಯಲಿ
ಆವದಾವದು ನೋಡಲಿ ಆವದಾವದು ಬಿಡಲಿ
ಆವದಾವದು ತಡಿಯಲಿ ಆವದಾವದು ಜಡಿಯಲಿ
ಆವದಾವ ಅರ್ಚಿಸಲಿ ಆವದಾವದು ಕೇಳಲಿ
ಆವದಾವದು ನುಡಿಯಲಿ ಆವದಾವದು ಜಪಿಸಲಿ
ದೇವ ನೀನಲ್ಲದಿಲ್ಲ ಇದರೊಳಗೊಂದು
ಆವಲ್ಲಿಗೊ ನಾನರಿಯೆ ಬರ ಹೇಳಿದ್ದು ಎನ್ನ
ಪಾವನ್ನ ಮಾಳ್ಪ ಶಕ್ತ ನೀನೇ ಎನ್ನ
ಆವಲ್ಲಿದ್ದರು ಎನಗೆ ಅನುಭವ ಈಗಲೆ
ಕಾವಲಿ ಬಹು ಇರಲಿ ಕಾಕುಜನರಿಂದ ಬಂದ ಸೊಲ್ಲಿಗೆ ಮ -
ನ ವೈದು ವಶವು ಮಾಡಲಿ ಬೇಡ
ನಾ ಒಬ್ಬನೇವೆ ಅಲ್ಲ ನಿನ್ನ ಪೊಂದಿ ನಡೆವ ಸಿ -
ರಿ ವಿಜಯದಾಸರ ಸಹವಾಸದಲ್ಲಿಪ್ಪ
ಜೀವರುಗಳಿಗೆಲ್ಲ ನೋವು ಎಂಬದು ಬೇಡ
ದೇವ ಪಂಢರಿರಾಯ ಗೋಪಾಲವಿಟ್ಠಲ 
ನೀ ವೊಲಿದದಕಿಂದು ಈ ವರವ ನೀಡು ॥ 5 ॥ 

 ಅಟ್ಟತಾಳ 

ಶರಣು ಗೋವಳರಾಯ ಶರಣು ನಿರ್ಜಿತ ಮಾಯಾ
ಶರಣು ಮುಕ್ತಾಶ್ರಯಾ ಶರಣಾನಂದಮಯಾ
ಶರಣು ದೋಷವಿದೂರ ಶರಣು ನಿರ್ವಿಕಾರ
ಶರಣು ಭಕ್ತರಪಾಲ ಶರಣು ಲೀಲಾವತಾರ
ಶರಣು ಅವ್ಯಕ್ತ ಕಾಯಾ ಶರಣು ಪ್ರಾಕೃತಕಾಯಾ
ಶರಣು ಜ್ಞಾನಪೂರ್ಣ ಶರಣು ಮೂಲಕಾರಣ
ಶರಣು ಅಖಂಡೇಶ ಶರಣು ಅನಾದಿ ದೇವಾ
ಶರಣು ನಿತ್ಯ ತೃಪ್ತಾ ಶರಣು ನಿರಂಜನಾ
ಶರಣು ಘಟಿತಾಘಟಿತಾನಂತ ಐಶ್ವರ್ಯ
ಶರಣು ಅಗಮ್ಯ ಅಲೌಕಿಕ ಐಶ್ವರ್ಯ
ಶರಣು ಮಹಾ ಪ್ರಭೊ ಹೇ ರಾಜಾಧಿರಾಜಾ
ಶರಣು ಅಯ್ಯಾ ಅಯ್ಯಾ ಪೂತುರೆ ಪೂತುರೆ
ಶರಣು ಶರಣು ಸಿರಿ ಅಜಭವಾದಿಗಳೀಶಾ
ಶರಣು ಪಂಢರಿರಾಯ ಗೋಪಾಲವಿಟ್ಠಲ 
ಶರಣು ಶರಣು ನಿನ್ನ ಪರಿವಾರ ಸಹ ನಿತ್ಯ ॥ 6 ॥ 

 ಆದಿತಾಳ 

ಮಾನಿಸ ರೂಪದಿ ಮಹಿಮೆಯ ತೋರ್ಪನೆ
ಮಾನಿಸ ರೂಪದಿ ಮನೆ ಮನೆ ಪೊಕ್ಕನೆ
ಮಾನಿಸ ರೂಪದಿ ಮಣ್ಣನೆ ಮೆದ್ದನೆ
ಮಾನಿಸ ರೂಪದಿ ಮುನಿಮನ ಶೆಳೆವನೆ
ಮಾನಿಸ ರೂಪಾಗಿ ಮಾನಿನಿಗೊಲಿದನೆ
ಮಾನಿಸ ರೂಪದಿ ದನುಜರ ಕೊಂದನೆ
ಮಾನಿಸ ರೂಪಾಗಿ ಧನುವನ್ನು ಮುರಿದನೆ
ಮಾನಿಸ ದೃಷ್ಟಿಗೆ ಮಾನುಷ್ಯನಂತೆ ಅ -
ಮಾನುಷ್ಯ ಮಹಿಮನೆ ಮರೆ ಮೋಸ ಮಾಡೋದು
ಮಾನಿತವೇನಯ್ಯ ಮಾನವಂತನೆ ಹೀಗೆ
ಮಾನಿಸನ್ನವನುಂಬ ಮನುಜನಾದದರಿಂದ
ಮಾನುಷ್ಯನಂತೆ ನಿನ್ನ ಮನದಿ ನಿಶ್ಚೈಸಿದೆ
ಮಾನಗುಣಾಂಬುಧಿ ಗೋಪಾಲವಿಟ್ಠಲ 
ಮನಸಾ ವಾಚಾ ಕಾಯಾ ಮೊರೆಹೊಕ್ಕೆ ಮನ ನೀಡು ॥ 7 ॥ 

 ಜತೆ 

ಎಲ್ಲ ನೋಡಿದರು ಒಳಿತೆಲ್ಲವಿರಲು  ಬರ -
ಲಿಲ್ಲವೆಂದನು ಗೋಪಾಲವಿಟ್ಠಲ ತಿಳಿಸೋ ॥ 

 ಈ ಸುಳಾದಿ ರಚಿಸಿದ ಸಂದರ್ಭ : 

ಒಂದು ದಿನ ಮಾಮೂಲಿನಂತೆ , ಶ್ರೀಭಾಗಣ್ಣದಾಸರು  ಉತ್ತನೂರಿನಲ್ಲಿ ಪ್ರಾತಃಕಾಲದ ಸ್ನಾನಸಂಧ್ಯಾದಿಗಳನ್ನು ಮುಗಿಸಿ , ನಿರ್ಮಾಲ್ಯತೀರ್ಥಸ್ವೀಕರಿಸಿ , ಶ್ರೀಹರಿಪೂಜೆಗೆ ಹೂ ತುಳಸಿಗಳನ್ನು ಸಂಗ್ರಹಿಸಲು ತೆರಳುತ್ತಿದ್ದಾರೆ. ಇದ್ದಕ್ಕಿದ್ದಂತೆ ಓರ್ವ ರಾವುತ ಕುದುರೆಯ ಮೇಲೆ ಕೂತು ಇವರ ಹಿಂದೆಯೇ ಬರಹತ್ತಿದನು. ದೂರದಲ್ಲಿ ಬರುತ್ತಿರುವ ಕುದುರೆಯ ಓಟದ ಸದ್ದು ಕೇಳಿ , ಶ್ರೀದಾಸರು ನಿಂತು ತಿರುಗಿ ನೋಡಿದರು. ಕುದುರೆಯನ್ನು ವೇಗದಿಂದ ತರಹತ್ತಿದ ಆ ರಾವುತ , ಹತ್ತಿರ ಬಂದವನೇ ' ಆಲೇ ನಾಹಿ ' ಎಂದು ಗಂಭೀರವಾಗಿ ಹೇಳಿ , ಕುದುರೆಯನ್ನು ಮುಂದೆ ಓಡಿಸುತ್ತಿದ್ದಂತೆಯೇ ಅದೃಶ್ಯನಾದ.
ಇದೇ ಗುಂಗಿನಲ್ಲಿದ್ದ ಶ್ರೀದಾಸರು ಶ್ರೀತುಳಸೀ ಪುಷ್ಫಗಳನ್ನು ಸಂಗ್ರಹಿಸಿಕೊಂಡು ಬಂದು , ಶ್ರೀಹರಿಗೆ ನಮಿಸಿ , ಗುಡಿಗೆ ಬಂದರು. ಆ ಕುದುರೆಯ ತೇಜಸ್ಸು , ಆ ನಡೆ , ಆ ಗಾಂಭೀರ್ಯ ಮನುಷ್ಯಲೋಕದ ಕುದುರೆಯದಲ್ಲವೆಂಬುದನ್ನು ಅರಿತರು ಶ್ರೀದಾಸರು. ಅಂತೆಯೇ , ಆ ರಾವುತನ ಉಡಿಗೆ ತೊಡಿಗೆಗಳು ಆ ದೇಹದ ತೇಜಃಪುಂಜತೆ ಕುದುರೆಯನ್ನು ಬೆನ್ನಟ್ಟಿ ಓಡಿಸಿಕೊಂಡು ಬಂದು ವಾತ್ಸಲ್ಯವಿಶಿಷ್ಟನಾಗಿ ' ಆಲೇ ನಾಹಿ ' ಎಂದು ಅರೆ ಮಾತು (ಮರಾಠಿ ಮಾತು) ಆಡಿದಾಗಿನ ಗಂಭೀರ ಧ್ವನಿ - ಇವುಗಳ ಸ್ಮರಣೆ ಬಂತು. ಪಂಢರಿನಾಥ ಪಾಂಡರಂಗನೆಂದೇ ಹೊಳೆಯಿತು . ಆಗಲೇ ಈ ಸುಳಾದಿಯನ್ನು ರಚಿಸಿದರು. 

 ವಿವರಣೆ : 
 ಹರಿದಾಸರತ್ನಂ ಶ್ರೀಗೋಪಾಲದಾಸರು
*************