Showing posts with label ತಮೋ ಯೋಗ್ಯ vijaya vittala ankita suladi ತಾರತಮ್ಯ ಪ್ರಕರಣ ಸುಳಾದಿ TAMO YOGYA TARATAMY PRAKARANA SULADI. Show all posts
Showing posts with label ತಮೋ ಯೋಗ್ಯ vijaya vittala ankita suladi ತಾರತಮ್ಯ ಪ್ರಕರಣ ಸುಳಾದಿ TAMO YOGYA TARATAMY PRAKARANA SULADI. Show all posts

Wednesday 7 July 2021

ತಮೋ ಯೋಗ್ಯ vijaya vittala ankita suladi ತಾರತಮ್ಯ ಪ್ರಕರಣ ಸುಳಾದಿ TAMO YOGYA TARATAMY PRAKARANA SULADI

Audio by Vidwan Sumukh Moudgalya

ಶ್ರೀ ವಿಜಯದಾಸಾರ್ಯ ವಿರಚಿತ 

ತಮೋಯೋಗ್ಯರ ತಾರತಮ್ಯ ಪ್ರಕರಣ ಸುಳಾದಿ 


 ರಾಗ : ಪೂರ್ವಿಕಲ್ಯಾಣಿ 


ತಮೋ ಯೋಗ್ಯ ಜೀವರಾಶಿ ಅದರೊಳು ಗಣಸ್ಥರು

ಅಮಿತವಾಗಿಪ್ಪರು ಲಿಂಗಸಹಿತ

ಶಮ ದಮೆಗಳು ಇಲ್ಲ ನಿಜರೂಪ ಬಲುಕಪ್ಪು

ಕ್ರಮದಿಂದ ದುಃಖಾತ್ಮರು ಕೇಳಿ ಜನರೂ

ತಮೋ ಯೋಗ್ಯರೊಳು ಕೇವಲ ಶ್ರೇಷ್ಠ ಕಲಿಯೆನ್ನಿ

ಸಮನಿಲ್ಲ ಇವನ ದುಃಖಕ್ಕೆ ಎಂದಿಗೆ

ತಮ ತಾಮಸರು ಕಲಿ ಸ್ವಲ್ಪತರ ಸ್ವಲ್ಪ ಕ-

ಡಿಮೆಯಾಗಿ ತತ್ವದಲ್ಲಿ ಇಪ್ಪಖಳರೂ

ತಮ ರಾಜಸರೂ ದೈತ್ಯ ಭೃತ್ಯಾನಾಖ್ಯಾತ ದೈತ್ಯರು

ತಮ ಸತ್ವದವರು ಮಾನವ ನೀಚರು

ವಮನ ಮೂತ್ರ ಶೌಚ ನಾನಾ ಹೇಸಿಕಿಗೆ ಈ

ಸಮುದಾಯದವರು ಅಭಿಮಾನಿಗಳು

ಉಮೆಯರಸನ್ನ ತನಕ ಕಲಿವ್ಯಾಪ್ತನಾಗಿ ವಿ-

ಭ್ರಮಣ ಗೊಳಿಸುವನು ಅಧಿಕಾಧಿಕ

ಸುಮನಸ ಗಣಕೆ ಸ್ವಲ್ಪ ಇತ್ತ ಮುಂತಾದ ಮನುಜೋ-

ತ್ತುಮ ತೃಣ ಜೀವಿಗಳಿಗೆ ಬಲು ಉಪದ್ರ

ಕ್ರಮಗೆಡಿಸುವನಯ್ಯಾ ಸಾಧನ ಮಾಡಗೊಡ

ಚಮತ್ಕಾರದಿಂದ ತನ್ನ ಬಳಗದೊಡನೆ

ಅಮರೇಂದ್ರನಲ್ಲಿ ಕಲಿ ದ್ವಾಪರನಿಪ್ಪನು

ಕ್ರಮದಿಂದಲೊಬ್ಬರೊಬ್ಬರಧೀಕವೆನ್ನೂ

ಸಮರಲ್ಲ ಇವರೊಳು ತರತಮ್ಯವೆ ಉಂಟು

ಕುಮತಿ ಬುದ್ಧಿಗಳುಳ್ಳ ಸತಿಗಳಿಹರು

ಪ್ರಮೇಯನ್ನು ಕೇಳುವದು ಖಳರೊಳು ಅಂಶಿ ಅಂಶ

ಸಮ ವಿಷಮವಾಗಿಪ್ಪವು ನೀಚೋಚ್ಚದಿ

ಸುಮನೋಹರ ಜನವಲ್ಲ ಇವರಿಗೆ ನಾನಾ ಯೋಗ

ಗಮನಾಗಮನೈಶ್ವರ್ಯಗಳು ಸಿದ್ಧಿಯಹುದು

ಶ್ರಮವಲ್ಲದಿವರಿಗೆ ಪ್ರಾಂತಕ್ಕೆ ತೋಷ ಕೊಡವು

ತಿಮಿರದಮೇಲೆ ತಿಮಿರ ಮುಸುಕಿದಂತೆ

ತಮ ಪ್ರಾಚುರ್ಯ ಲಿಂಗ ಸಾಂಶ ನಿರಂಶರುಂಟು

ಕ್ರಿಮಿ ಮೊದಲಾದ ಕಾಯ ಧರಿಸುವರೂ

ಅಮರಗಂಗೆ ಮಿಕ್ಕಾದ ತೀರ್ಥ ಕ್ಷೇತ್ರಂಗಳಿಗೆ

ನಮಿಸಿ ಸ್ನಾನಾದಿ ಕರ್ಮ ಮಾಡಲಾಗಿ

ಸುಮತಿ ಕೊಡದು ಕಾಣೋ ಉನ್ಮತ್ತ ಭಾಗ್ಯನಾಗಿ

ಪ್ರಮಥ ಪಾಪಗಳೆಸಗೆ ಅದರಿಂದಲಿ

ರಮೆಯರಸನ್ನ ತದ್ಭಕ್ತ ದ್ವೇಷಕುಪ-

ಕ್ರಮ ವಾಗುವದು ಸಿದ್ಧ ದಿನದಿನಕೆ

ಕಮಲಸಂಭವನಿಂದ ಪುಟ್ಟಿದವರು ಪರಾ-

ಕ್ರಮ ಶಾಲಿಗಳು ನೀಚವೃತ್ತಿಯಲ್ಲಿ

ಸಮರ ನಿರ್ಭೀತ ನಮ್ಮ ವಿಜಯವಿಠಲರೇಯ 

ಯಮನಾಗಿ ತೋರುವ ತಾಮಸ ಜೀವಿಗಳಿಗೆ॥೧॥


 ಮಟ್ಟತಾಳ 


ಅನಾದಿ ಬದ್ಧ ಲಿಂಗಶರೀರವು 

ಜ್ಞಾನ ರಹಿತರಿಗಾವರಣವಾಗಿಪ್ಪದು

ನಾನಾ ಕರ್ಮಗಳು ಉಣಿಸಿ ಕೊಳುತಲಿದ್ದು

ಏನೆಂಬೆನೋ ಇದರ ಚಿತ್ರ ವಿಚಿತ್ರತರ

ಜ್ಞಾನಿಗಳು ತಿಳಿದು ಎಣಿಸಿ ಗುಣಿಸಿನೋಡಿ

ಕಾಣರು ಕ್ಷಣಮಾತ್ರ ಸ್ವರೂಪ ಸುಖವನ್ನು

ದಾನವ ಕುಲವೈರಿ ವಿಜಯವಿಠಲರೇಯನ 

ಕಾಣುವರು ನವವಿಧ ದ್ವೇಶವನು ಬಳಸಿ॥೨॥


 ತ್ರಿವಿಡಿತಾಳ 


ಇವರ ಸ್ವರೂಪ ನೋಡಿದರೆ ಕೇವಲ ಕಪ್ಪು

ದಿವ ರಾತ್ರಿಯಲಿ ಬಿಡದೆ ದುಃಖಾತ್ಮರು

ಹವಣವನ್ನೇ ಕೇಳು ತಮಚಿತು ಕಾಯಕ್ಕೆ

ತ್ರಿವಿಧ ಕಾರಣ ಪ್ರಕೃತಿ ಆವರ್ಕವು

ಧವಳ ವರ್ಣವೆ ಕೊನಿಗೆ ರಕ್ತವರ್ಣವೆ ಮಧ್ಯ

ರವಿಯಿಲ್ಲದ ವರ್ಣ ಪ್ರಥಮದಲ್ಲಿ

ನವಸಪ್ತಕಳೆ ಉಳ್ಳ ದೇಹ ತ್ರಿ ಪರಿಚ್ಛೇದ

ನಿವಹ ಪರಮಾಣು ಅತಿಸೂಕ್ಷ್ಮ

ತವಕದಿಂದಲಿ ಅಲ್ಲಿ ಸಿರಿ ಮೂರು ರೂಪದಲ್ಲಿ

ಭವದೂರಳಾಗಿ ಶ್ರೀ ಭೂ ದುರ್ಗಾಖ್ಯಾ

ಪವಮಾನ ಬ್ರಹ್ಮದೇವರು ವಾಣಿ ಭಾರತಿ

ಇವರು ನಾಲ್ವರಲ್ಲಿ ತ್ರಿ ರೂಪದಿ

ನವನವಸಂಖ್ಯದಿಂದ ಅಭಿಮಾನಿಗಳಾಗಿ

ಭವದೊಳಗವರಿಗೆ ವೃತ್ತಿ ಜ್ಞಾನರೂಪ

ವಿವಿಧ ಬೆಗೆಯನ್ನು ಮಾಡಿಸುವರು

ಲವಲವಿಕೆಯಿಂದಲಿ ಭೇದಾಭೇದ ಸಂತೋ-

ಷವನು ಕ್ಲೇಶವನು ತಜ್ಜೀವಕ್ಕನು

ಭವಕೆ ತಂದುಕೊಟ್ಟು

ಸಾಧನ ಮಾಡಿಸಿ

ಭವಣೆಯೊಳಗೆ ಹಾಕಿ ಬಿಡುವರಯ್ಯಾ

ಇವರಿಗೆ ಪ್ರೇರಕ ಸರ್ವ ಸ್ವತಂತ್ರನು

ತ್ರಿವಿಧ ರೂಪದಿ ಆ ಲಿಂಗದಲಿ

ಶಿವ ಬ್ರಹ್ಮ ವಿಷ್ಣುವೆಂಬೊ ನಾಮಗಳಿಂದ

ಜವದಲ್ಲಿ ಬಾಲರೂಪನಂತೆ ಆಡುತ್ತ

ದಿವಿಜ ವೈರಿಗಳನ್ನು ಕುಣಿದಾಡಿಸುವ ಕೇ-

ಶವ ರಂಗ ತಮರಂತೆ ರೂಪದವನೋ

ಅವಿದ್ಯಾತ್ಮಕ ದೇಹ ತಾಮಸ ಜನಕೆನ್ನಿ

ವಿವರ ವಿದರೊಳಗುಂಟು ಹೆಚ್ಚು ಕಡೆಮೆ

ಭುವನದೊಳಗೆ ಖಳರು ಅಂಶದಿಂದಲಿಜನಿಸಿ

ಅವನಿ ಪತಿಗಳಾಗಿ ನಾನಾ ಭೋಗ 

ಸವಿಯಾಗಿ ಸವಿದುಂಡು ಸುಖಿಸುವರಿದಕೆಲ್ಲ

ದಿವಿಜರಾವೇಶ ಉಂಟಾದುದರಿಂದ

ಅವಗುಣದವರಿಗೆ ಸುಖವಾಗದೆನದಿರಿ

ಇವರಿಗುಂಟು ಭೇದಾ ಭೇದ ಬಗೆಯು

ಪವಮಾನ ಮಿಕ್ಕಾದಾ ಜನಕೆ ಸುಖ ಉಂಟು ಮಾ-

ಧವನ ಇಚ್ಚೆ ಇಂಥದೆನ್ನಿ ಸ್ತುತಿಸಿ

ಶಿವ ವಂದಿತ ನಮ್ಮ ವಿಜಯವಿಠಲರೇಯ 

ಸುವಿರುದ್ಧ ಕರ್ಮವ ಮಾಡಿಸುವ ಖಳರಿಂದ॥೩॥


 ಅಟ್ಟತಾಳ 


ಪ್ರಾರಬ್ಧ ಸುಖ ದುಃಖ ಇಷ್ಟಾನಿಷ್ಟ ಕರ್ಮ

ಕ್ರೂರಿಗೆ ಉಂಟು ವೃತ್ತಿಜ್ಞಾನವನ್ನು

ಹಾರುವ ಪರಿಯಂತ ಮಿಶ್ರಭಾವವೆನ್ನಿ

ಸಾರಿಸಾರಿಗಿದೆ ಕಲ್ಯಾದಿಗನುಭವ

ಸಾರುವೆನು ಇಷ್ಟ ಪುಣ್ಯ ನಿರ್ಜರರಿಗೆ

ಸೇರುವದನಿಷ್ಟ ಪಾಪ ತದ್ಗಣಕೆ

ಧಾರುಣಿಯೊಳು ಪುಟ್ಟಿ ದುಷ್ಟ ಸಾಧನದಿಂದ

ಬ್ಯಾರೆ ಒಂದೊಂದು ಅಂಶಗಳು ತಮ್ಮ ಮೂಲ

ಶರೀರ ಕೂಡದೆ ಮೂರು ವಿಧ ಮಹಾ

ಘೋರ ನರಕದಲ್ಲಿ ಬಿದ್ದು ಸಲಿಂಗದಿ 

ಮೇರೆಯಿಲ್ಲದೆ ದುಃಖಬಡುವರು ತುದಿಯಲ್ಲಿ

ವಾರಿಜ ಭವನನ್ನ ದಿನ ಕಲ್ಪಕ್ಕೆ ಇಂತು

ಏರುವ ಬಗೆಯಿಂದ ಉತ್ತರೋತ್ತರ ಅಧಿ-

ಕಾರಿಗಳಾದ ದೈತ್ಯರಿಗೆ ಕೇವಲ ಮೂಲ

ಸ್ವರೂಪ ಸರ್ವ ಅಂಶಗಳು ಏಕವಾಗಿ

ಶಾರದಾ ಪತಿಯ ಕಲ್ಪಕೆ ನಿತ್ಯ ತಮದಲ್ಲಿ

ಮಾರುತನಿಂದಲಿ ಲಿಂಗರಹಿತರಾಗಿ

ದಾರುಣದಲಿ ಬಳಲುವ ಸ್ವಾಭಾವರು

ಕಾರಣ ಕರ್ತ ನಮ್ಮ ವಿಜಯವಿಠಲರೇಯ 

ಚಾರು ವಿಲಾಸದಿ ದುರುಳರ ಕೆಡಿಸುತಿಪ್ಪ॥೪॥


 ಆದಿತಾಳ 


ಅಸಂಸೃಷ್ಟ ತತ್ವದಲಿದ್ದ ದೇವತಿಗಳೀಗೆ

ಅಸುರಾವೇಶವೆ ಇಲ್ಲ ಕರ್ಮದ ತೊಡಕು ಇಲ್ಲ

ಬಿಸಜಜಾಂಡದೊಳಗೆ ಇದ್ದ ಅಂಶಿ ಅಂಶಕ್ಕೆ

ಪಶುಪತಿವಿಡಿದು ತೃಣಾದ್ಯ ಜೀವ ಪರಿಯಂತ

ಘಸಣೆಗೊಳಿಸುವರು ಖಳರು ಮತ್ತೆ ಪ್ರಬಲ

ಮುಸುಕುತಿಪ್ಪ ಪ್ರಾರಬ್ಧ ಸೂತಕದಿಂದಲಿ

ಹಸನಾಗಿ ಕೇಳು ಇತ್ತ ಅಧಮ ದೈತ್ಯಾವಳಿಯು

ಬೆಸನ ತಮ್ಮ ತಮ್ಮ ಸಾಧನ ಪೂರ್ಣವಾಗೆ

ಮಸಗಿ ಮತ್ಸರಿಸಿ ಅಲ್ಪದ್ವೇಶಯುಕ್ತರಾಗಿ 

ಕುಶಲಕಾಣದೆಲೆ ತಮಸಿನ ಪ್ರದೇಶದಲ್ಲಿ

ವಸತಿಯಾಗಿಪ್ಪರು ಕಲಿಬಾಹೋ ಪರಿಯಂತ

ಪುಶಿಯಲ್ಲ ಸರ್ವರಿಗೆ ಆಮ್ಯಾಲೆ ನಿತ್ಯ ದುಃಖ

ಪ್ರಸರ ಕ್ರಮನುಸಾರ ದುರ್ಲಕ್ಷಣಂಗಳುಂಟು

ಪಶ್ವಾದಿ ಯೋನಿ ಭೇದ ಎಂಭತ್ತು ನಾಲ್ಕು ಲಕ್ಷ

ಅಸುರರೊಳಗೆ ಉಂಟು ಇವರ ಕ್ರೀಡೆಗೋಸುಗ

ಎಸವ ಶುದ್ಧ ತಮೋರಾಶಿ ಪ್ರತ್ಯೇಕವದೆ ತಾ-

ಮಸ ಮುಕ್ತರೆಲ್ಲ ಕೂಡಿ ಕ್ಲೇಶದಿಂದಾಡುವರು

ಅಸುರಾರಿ ಮಹಿಮೆ ಎಂತೊ ಪೊಗಳಲು ಬೊಮ್ಮಾದ್ಯರಿಗೆ

ವಶವಲ್ಲ ಇಚ್ಛಾಶಕ್ತಿಗೆ ನಮೋ

ಶ್ವಸನ ದೂತರೆ ಇವರಿಗೆ ಶೀಕ್ಷಾಕರ್ತರು ಬಾ-

ಧಿಸುವರು ನಾನಾ ಪ್ರಕಾರ ತಡವಿಲ್ಲದಲೆ

ಅಸುರ ತೃಣ ಜೀವರಿಗೆ ಒಂದು ದಿವಸ ನೀರು

ಅಶನ ಹಾಕದೆ ಭಾರ ಹೊರಿಸಿಕೊಂಡು ವೈದು

ಬಿಸಲೊಳಗೆ ಕುಳ್ಳಿರಿಸಿ ಸುತ್ತ ಉರಿಯ ಹಾಕಿ

ಹಸಿಯ ಬರಿಗೆಯಿಂದ ಕೊಲ್ಲಲಿನಿತು ದುಃಖ

ಮಿಸುಕದಲೆಯಾಗುವುದು ವೆಗ್ಗಳವಾಗಿ ಗು-

ಣಿಸುವುದು ಕಲಿಗೆ ಅಪ್ರತಿಯಾದ ಅಮಿತ ದುಃಖ

ವೃಷಭವಾಹನ ಇಂತ ಅಯೋಗ್ಯರಿಗೆ ಉಪದೇ-

ಶಿಸಿದ ಕಾಣಿರೋ ಬಹು ಮೋಹಕ ಶಾಸ್ತ್ರದಿಂದ

ಬಿಸಜಸಂಭವನಯ್ಯ ವಿಜಯವಿಠಲರೇಯ 

ದ್ವೇಶಿಗಳ ನೋಡಿ ನಗುವ ನಿರ್ದೋಷ ಗುಣಸಾಂದ್ರ॥೫॥


 ಜತೆ 


ಅಂಧನ್ನ ತಮಸಿಗೆ ಸಾಧನ ಸರ್ವದಲಿ

ಕುಂದದೆ ವಿಜಯವಿಠಲ ಬಲ್ಲ॥೬॥

****