Showing posts with label ಯಾರಿಗಾಗಿ ಈ ಪರಿ ವೈರಾಗ್ಯವು ವೀರ ವೈಷ್ಣವ ಭಕ್ತಾಗ್ರಣಿಯೆ kamalanabha vittala. Show all posts
Showing posts with label ಯಾರಿಗಾಗಿ ಈ ಪರಿ ವೈರಾಗ್ಯವು ವೀರ ವೈಷ್ಣವ ಭಕ್ತಾಗ್ರಣಿಯೆ kamalanabha vittala. Show all posts

Thursday 5 August 2021

ಯಾರಿಗಾಗಿ ಈ ಪರಿ ವೈರಾಗ್ಯವು ವೀರ ವೈಷ್ಣವ ಭಕ್ತಾಗ್ರಣಿಯೆ ankita kamalanabha vittala

..

ರುದ್ರದೇವರು

kruti by Nidaguruki Jeevubai


ಯಾರಿಗಾಗಿ ಈ ಪರಿ ವೈರಾಗ್ಯವು

ವೀರ ವೈಷ್ಣವ ಭಕ್ತಾಗ್ರಣಿಯೆ ಪ

ಮಾರಹರನೆ ಮನ್ಮಥನ ವೈರಿಯೆ ಮನ-

ಸಾರ ಶ್ರೀರಾಮ ನಾಮವ ಜಪಿಸುವದಿದು ಅ,ಪ

ಮುತ್ತು ಮಾಣಿಕ್ಯದ ಕಿರೀಟವು ಧರಿಸದೆ

ನೆತ್ತಿಲಿ ಕೆಂಜೆಡೆ ಸುತ್ತಿಹುದು

ಹಸ್ತದಿ ಶಂಖು ಚಕ್ರಗದೆ ಪದುಮವು ಬಿಟ್ಟು

ಉತ್ತಮ ಡಮರು ತ್ರಿಶೂಲ ಪಿಡಿವುದಿದು 1

ನೊಸಲಲಿ ಕಸ್ತೂರಿ ತಿಲಕವನಿಡದಲೆ

ಭಸುಮವ ಲೇಪಿಸುವುದು ತರವೆ

ಕುಸುಮಲೋಚನೆ ಪ್ರಿಯ ಸಖನಾಗಿರುತಿರೆ

ಎಸೆವ ಕಪಾಲ ಪಿಡಿದು ಬೇಡುವದಿದು 2

ದುಂಡು ಮುತ್ತಿನ ಹಾರ ಪದಕಗಳಿರುತಿರೆ

ರುಂಡಮಾಲೆಯ ಕೊರಳೊಳು ತರವೆ

ತಂಡ ತಂಡ ಪರಮಾನ್ನ ಭಕ್ಷಗಳಿರೆ

ಉಂಡು ತೇಗದೇ ವಿಷಪಾನ ಮಾಡುವದಿದು3

ಭರ್ಜರಿ ಪೀತಾಂಬರ ಉಡುವುದು ಬಿಟ್ಟು

ಕರಿಯ ಚರ್ಮನುಡುವುದು ತರವೆ

ಪರಿ ಪರಿ ರತ್ನಾಭರಣಗಳಿರುತಿರೆ

ಉರಗಗಳಿಂದಲಂಕೃತನಾಗಿರುವದು 4

ಭೃತ್ಯರು ಸೇವೆಗೆ ಬೇಕಾದವರಿರೆ

ಮತ್ತೆ ಪಿಶಾಚ ಗಣಗಳೇತಕೆ

ಹಸ್ತಿ ತುರಗ ಪಲ್ಲಕ್ಕಿ ಪುಷ್ಪಕವಿರೆ

ಎತ್ತನೇರಿ ಚರಿಸುವುದುಚಿತವೆ ಶಂಭೊ 5

ಸಿರದಲಿ ಗಂಗೆಯು ಸ್ಥಿರವಾಗಿರುತಿರೆ

ಪರ್ವತರಾಜಕುವರಿಯೇತಕೆ

ಅರಮನೆ ವಾಸಕೆ ಯೋಗ್ಯವಾಗಿರುತಿರೆ

ಗಿರಿ ಕೈಲಾಸ ಪರ್ವತದಿ ವಾಸಿಸುವದು 6


ಭಕ್ತರು ಭಕುತಿಲಿ ಪಾಡಿ ಕೊಂಡಾಡಲು

ನೃತ್ಯವ ಮಾಡುತ ಹರುಷದಲಿ

ಕರ್ತೃ ಶ್ರೀ ಕಮಲನಾಭ ವಿಠ್ಠಲನೆಂದು

ಪತ್ನಿಗೆ ಉಪದೇಶ ಮಾಡುವದಿದು 7

***