Showing posts with label ವೈರಾಗ್ಯ ಮಾರ್ಗ gopala vittala ankita suladi ವೈರಾಗ್ಯ ಸುಳಾದಿ VAIRAGYA MAARGA VAIRAGYA SULADI. Show all posts
Showing posts with label ವೈರಾಗ್ಯ ಮಾರ್ಗ gopala vittala ankita suladi ವೈರಾಗ್ಯ ಸುಳಾದಿ VAIRAGYA MAARGA VAIRAGYA SULADI. Show all posts

Sunday 8 December 2019

ವೈರಾಗ್ಯ ಮಾರ್ಗ gopala vittala ankita suladi ವೈರಾಗ್ಯ ಸುಳಾದಿ VAIRAGYA MAARGA VAIRAGYA SULADI


Audio by Mrs. Nandini Sripad

ಶ್ರೀ ಗೋಪಾಲದಾಸಾರ್ಯ ವಿರಚಿತ  ಸಾಧನ ಸುಳಾದಿ 

 ರಾಗ ಕಾಂಬೋಧಿ 

 ಧ್ರುವತಾಳ 

ವೈರಾಗ್ಯ ಮಾರ್ಗ ಕೇಳು ದಾರಿದ್ರ ಮಾರ್ಗ ಕೀಳು
ಶ್ರೀರಾಮನ ಪಾದ ಆರಾಧಿಸುವದಕ್ಕೆ
ನಾರಿಯು ಧಾರುಣಿಯು ಧನವ ಬಿಟ್ಟರಾಯಿತೆ
ವೈರಾಗ್ಯವಲ್ಲ ಕಂಡ್ಯಾ ಧೀರರಿಗೆ
ಶಾರೀರಕೆ ಭಸುಮ ಪಾರವಾಗಿ ಧರಿಸಿ
ಚೀರ ವಸ್ತ್ರವನುಟ್ಟು ತಿರುಗಿದರೆ
ಆರಾದರೂ ಅವನ ಅವಧೂತನೆಂತೆಂದು
ಸಾರಿಸಾರಿಗೆ ಇನ್ನು ಕರೆವರಯ್ಯಾ
ವೈರಾಗ್ಯ ವೆಂಬುವಂಥ ವಾರುತಿ ವಂದಲ್ಲದೆ
ನಾರಾಯಣಗೆ ಇದು ಪ್ರೀಯವಲ್ಲ
ನಾರಿ ಸುತರುಗಳ ಶಾರೀರ ಸಂಬಂಧಿ
ಗಾರು ಎಂತೆಂದು ಅರಿದಿರಲಿ ಬೇಕು
ನೀರು ಒಳಗೆ ಇನ್ನು ಕಮಲವಿದ್ದಂತೆ
ಕಾರಣನಾಗಿ ಕಾರ್ಯ ವಿಲ್ಲದಿರಲಿರಬೇಕು
ಮಾರಜನಕ ನಮ್ಮ ಗೋಪಾಲವಿಟ್ಠಲನು 
ತೋರಿ ಕೊಟ್ಟ ವೈರಾಗ್ಯವನೆ ತೋರುವೆ ॥ 1 ॥ 

 ಮಟ್ಟತಾಳ 

ಸ್ವಾಯೋಗ್ಯತೆಯೊಳಗೆ ಆಯಿತವಾದದ್ದು
ನೋಯದಲೆ ಉಣುತಲೆ ಈವದೆ ವೈರಾಗ್ಯ
ಸ್ನೇಹದಿ ಹರಿ ಕೊಟ್ಟ ಕರ್ತೃತ್ವವು ತನಗೆ
ನೀ ಇಲ್ಲದೆನ್ನಿಂದಾಗದು ಎನುತಲಿ
ತಾ ಇಪ್ಪುವದೆ ನ್ಯಾಯದ ವೈರಾಗ್ಯ
ಆಯಾಸವು ಬಡದೆ ಪರರ ಶ್ರೇಯಸ್ಸು ನೋಡಿ
ಶ್ರೀಯರಸ ನಿತ್ತನೆಂಬದೆ ವೈರಾಗ್ಯ
ಮಾಯಾರಹಿತ ದೇವ ಗೋಪಾಲವಿಟ್ಠಲನ್ನ 
ಪ್ರೀಯದಿ ನೆಚ್ಚಿ ಅನ್ಯಕ್ಕೆರಗದ್ದೆ ವೈರಾಗ್ಯ ॥ 2 ॥ 

 ತ್ರಿವಿಡಿತಾಳ 

ಧನವ ಪರಿತ್ಯಾಗವನು ಮಾಡಿದಡಾಯಿತೆ
ಘನವಾದ ವೈರಾಗ್ಯವಲ್ಲ ನೋಡಿ
ಧನವ ಬಿಟ್ಟಿರವೆ ದನಗಳು ಅನುದಿನ
ಘನವೇನು ಇವಕೆ ಅವಗೆ ನೋಡಲು
ಜನರ ಬಿಟ್ಟೇಕಾಂತವನು ಕುಳಿತಡಾಯಿತೆ
ಘನವಾದ ವೈರಾಗ್ಯವಲ್ಲ ನೋಡಿ
ಜನರ ಬಿಟ್ಟಿರದೇನು ಅನುಗಾಲ ಗೂಗಿಯ
ಘನವೆಂದು ಕರೆವರೆ ಜ್ಞಾನಿಗಳು
ತನುಮನದಭಿಮಾನವನು ಬಿಟ್ಟರಾಯಿತೆ
ಘನವಾದ ವೈರಾಗ್ಯವಲ್ಲ ನೋಡಿ
ತನುಮನದಭಿಮಾನವನು ಬಿಟ್ಟು ಕುನ್ನಿ ತಾ
ಮನೆ ಮನೆ ತಿರುಗದೆ ಅನುಗಾಲವೋ
ಘನಮಹಿಮ ಚಲುವ ಗೋಪಾಲವಿಟ್ಠಲನ್ನ 
ನೆನೆದು ಸಕಲ ಸುಖದಿ ನಾ ವುಣವದೆ ವೈರಾಗ್ಯ ॥ 3 ॥ 

 ಅಟ್ಟತಾಳ 

ರೋಗ ಭೋಗಂಗಳು ಆಗಲಿ ಈ ದೇಹಕ್ಕೆ
ಯಾಗಂಗಳು ಮಾಡಿ ಹರಿಗೆ ಅರ್ಪಿಸಿ ಪರಿ -
ತ್ಯಾಗವೆ ಮಾಡದೆ ಸುಖ ದುಃಖವು ಸಮ
ಭಾಗವೆರಡು ಹರಿಯಿಂದ ಆದುದು ಎಂದು
ಭೋಗಿಸುತಿಪ್ಪುದೆ ವೈರಾಗ್ಯ ವೈರಾಗ್ಯ
ಕಾಗಿಯಂತೆ ಮೈಯ ಕರ್ರಗೆ ಮಾಡಿನ್ನು
ರೋಗ ಬಂದೆಮ್ಮೆಯಂತೆ ನಾಮವ ಬರಕೊಂಡು
ಭೋಗದ ವಸ್ತುವು ಪರಿತ್ಯಾಗವು ಮಾಡಿನ್ನು
ಆಗುವ ಕಾರ್ಯವು ಆಗುತಲಿರೆ ಆಂತ್ರಿ
ಹಾಗೆ ಜನರು ಕಾಂಬ ಹಾಗೇವೆ ಬಾಹಿರ ವೈ -
ರಾಗ್ಯವನು ಮಾಡೆ ವೈರಾಗ್ಯವಲ್ಲವು
ನಾಗಶಯನ ಗೋಪಾಲವಿಟ್ಠಲ ಸಮ್ಮ -
ತಾಗೆ ಉಣಿಸೋದುಂಡು ಈಹದೆ ವೈರಾಗ್ಯ ॥ 4 ॥ 

 ಆದಿತಾಳ 

ಧನವ ಕಟ್ಟಿದ ಚೀಲ ಧಾನ್ಯ ತುಂಬಿದ ಗೋಣಿ
ಪುನಗಿ ಬೆಕ್ಕಿನಂತೆ ಪುಣ್ಯಾತ್ಮರಘದಂತೆ
ನುಣ್ಣಗಿದ್ದ ಗೋಡಿಗೆ ಹರಳು ಹಚ್ಚಿದಂತೆ
ಉಣುವ ಜಿಹ್ವೆಗೆ ಕೈ ಅನುಕೂಲವಾದಂತೆ
ಮನಸಿಗೆ ಹರುಷವು ಮಾಧವ ಮಾಡಿದ್ದು
ತನುವಿಗೆ ಸುಖವೆಂದು ತಿಳಿದು ಕೆಡದಲೇವೆ
ಗುಣಿಸುತ್ತ ಅಲ್ಲಲ್ಲಿ ಗುಣಗಳು ಹರಿಯ
ನೆನಿಸಿ ನೆನಿಸಿ ಅನುಭೋಗಿಸಿ ಆದದ್ದು
ದಿನಗಳ ಕಳೆವದೆ ಘನ ವೈರಾಗ್ಯವೊ
ಸನಕಾದಿಗಳೊಡಿಯಾ ಗೋಪಾಲವಿಟ್ಠಲನು 
ಇನಿತು ಪರಿಯಾಗಿದ್ದು ಪೊರೆವನೊ ॥ 5 ॥ 

 ಜತೆ 

ಅರಿಯದೆ ವೈರಾಗ್ಯ ಹರಹಿಕೊಂಬದಕ್ಕಿಂತ
ಅರಿತು ಮೊರೆಯ ಹೋಗಿರೊ ಗೋಪಾಲವಿಟ್ಠಲನ್ನ ॥
********


ವೈರಾಗ್ಯ ಮಾರ್ಗ ಕೇಳು ದಾರಿದ್ರ್ಯ ಮಾರ್ಗ ಕೀಳು...
ವೈರಾಗ್ಯ ಸುಳಾದಿ , 
ಶ್ರೀ ಗೋಪಾಲದಾಸರ ರಚನೆ , ರಾಗ ಕಾಂಬೋಧಿ

 click 
          VAIRAGYA MAARGA  

**********