Showing posts with label ಇವನಾ ಕಂಡಿರ್ಯಾ ನಮ್ಮ ನವನೀತ mahipati mundige. Show all posts
Showing posts with label ಇವನಾ ಕಂಡಿರ್ಯಾ ನಮ್ಮ ನವನೀತ mahipati mundige. Show all posts

Monday, 12 April 2021

ಇವನಾ ಕಂಡಿರ್ಯಾ ನಮ್ಮ ನವನೀತ ankita mahipati mundige


ರಾಗ - : ತಾಳ - 


ಇವನಾ ಕಂಡಿರ್ಯಾ ನಮ್ಮ ನವನೀತ ಚೋರನ

ಅವನ ಕಂಡರದ್ಹೇಳಿ ಹವಣಿಸಿ ಹಿಡಿದುಕೊಂಬಾ ll ಧ್ರುವ ll


ನಾಕು ಬೀದಿಯೊಳಗ ಸಾಕು ಸಾಕು ಮಾಡಿದ

ಸೋಂಕದೆ ಕೈಯ್ಯಗೂಡಾ ಬೇಕೆಂದಾರುಮಂದಿಗೆ ll 1 ll


ಹದಿನೆಂಟು ಸಂಧಿಯೊಳು ಶೋಧಿಸಿನೋಡಿದರೆ

ಸಾಧಿಸಿ ಬಾರನಿವ ಮದನ ಮೋಹನ ನೋಡಿ ll 2 ll


ತಾನೆ ಸಿಕ್ಕುವ್ಹಾಗೊಂದು ಮನಗೂಡಬೇಕು ತಂದು

ದೀನ ಮಹಿಪತಿ ಸ್ವಾಮಿ ಅನಕಾ ದೊರೆತ ಬಂದು ll 3 ll

***

ಭಾವ :

"ಚೋರ" ಏನಾದರೂ ಇದ್ದಲ್ಲಿ ಬರುವ, ಇರದಿದ್ದರೆ ಅವನೇಕೆ ಬಂದಾನು ?  ಆದರೆ ಅವನು ಅಪರಿಚಿತನಾದವನಲ್ಲ.  ಅದಕ್ಕೆಂತಲೇ ಅವನು "ನಮ್ಮ ಚೋರ" !


ನಮ್ಮ ಚೋರ - ನವನೀತ ಚೋರ.  ನವನೀತ ಎಂದರೆ ಬೆಣ್ಣೆ .  ಕರೆದರೆ ಹಾಲು, ಹೆಪ್ಪಾಕಿದರೆ ಮೊಸರು.  ಆದರೆ ಬೆಣ್ಣೆ ಸುಲಭವಾಗಿ ದಕ್ಕದು.  ಅದಕ್ಕಾಗಿ ದಣಿಯಬೇಕು.  


ಕಡೆಯಬೇಕು, ಅದಕ್ಕೊಂದು ಕಡಗೋಲು ಬೇಕು.  ಎರಡೂ ಅವನದ್ದೇ !  ಕಡೆಯುವುದೆಂದರೆ ಮಥಿಸುವುದು.  ಮಥನ ಮಸ್ತಕದಲ್ಲಾಗಬೇಕು.  ಅಜ್ಞಾನ, ಜ್ಞಾನಗಳ ಮಥನವದು.  ಕೊನೆಗೆ ಸುಜ್ಞಾನವೆಂಬ ನವನೀತ ತೇಲುತ್ತದೆ !


ಅದು ಹೊಸದು.  'ನವ'ವೆಂದರೇನೇ ಹೊಸತು.  ಅದನ್ನು ಅವನಿಂದಲೇ ಪಡೆಯಬೇಕು.  ಶರಣಾಗತನಾಗಿ ಬೇಡಬೇಕು.


ನವ ನೀ ತಾ !!


ಹೊಳೆಸುವವನೂ ಅವನೇ.  ಏಕೆಂದರೆ ಅವನು ನಮ್ಮ ನವನೀತ ಚೋರ.  ನಮ್ಮ ಎಂದು ಕರೆಯಲು ಕಾರಣ ಭಗವಂತನಲ್ಲಿ ಸಖ್ಯಭಾವ.  ನವನೀತ ಹುಡುಕುತ್ತಾ ಬರುವ ಚೋರನವನು.


ಎಲ್ಲರಿಗೂ ದಕ್ಕಾನೆಯೆ ?  ಕಾಣಲು ಹೊರಟವರಿಗೆ ಕಂಡಾನು.  ಇವನಾ ಕಂಡಿರ್ಯಾ ???  ಕೋಟಿಗೊಬ್ಬರು ಕಂಡಾರು.  ಕಂಡದ್ದನ್ನು ಹೇಳಿಕೊಂಡವರು ಇನ್ನೂ ವಿರಳ.


ಅವನ ಕಂಡರದ್ಹೇಳಿ ಹವಣಿಸಿ ಹಿಡಿದುಕೊಂಬಾ.


ಹವಣಿಸು ಎಂದರೆ ಸಾಧನೆಯ ಪ್ರಯತ್ನದಲ್ಲಿರುವವರು.  ಕಂಡವರು ಹಿಡಿಯುವ ಹಾದಿ ತೋರಿಸಬೇಕು.  ಹಿಡಿಯುವವರು ಹಾಗೇ ಕುಳಿತರೆ ಸಿಕ್ಕಾನೆಯೇ ?  ಹಿಡಿಯಲು ಹವಣಿಸಬೇಕು.  ಸಾಧನೆಯ ಮೆಟ್ಟಿಲು ತುಳಿದವನು ಬೆಟ್ಟ ಏರಿಯಾನು.  ಉಸ್ಸಪ್ಪ ಎಂದು ಕುಳಿತವನು ತುದಿ ಎರಬಲ್ಲನೇ ?


ನಾಕು ಬೀದಿಯೊಳಗೆ ಸಾಕು ಸಾಕು ಮಾಡಿದ

ಸೋಂಕದೆ ಕೈಯ್ಯಗೂಡಾ ಬೇಕೆಂದಾರುಮಂದಿಗೆ ll 1 ll


ವೇದಗಳಿಂದಾಗಿ, ಆಯು ದರ್ಶನಗಳ ಬರೀ ಓದಿನಿಂದಾಗಲಿ ಅವನು ದಕ್ಕನು ....


ಹದಿನೆಂಟು ಸಂಧಿಯೊಳು ಶೋಧಿಸಿ ನೋಡಿದರೆ

*ಸಾಧಿಸಿ ಬಾರನಿವ ಮದನ ಮೋಹನ ನೋಡಿ ll 2 ll


ಹದಿನೆಂಟು ಪುರಾಣಗಳಲ್ಲಿ ಸಿಕ್ಕಾನೆಯೇ ?


ಉಹುಂ .....


ಸಿಗುವವನೇ ಹೇಳುತ್ತಾನೆ . . .


ನಾಹಂ ವೇದೈರ್ನ ತಪಸಾ ನಾ ದಾನೇನ ನ ಚೇಜ್ಯಯಾ l

ಶಕ್ಯಂ ಏವಂವಿಧೋ ದ್ರಷ್ಟುಮ್ ದೃಷ್ಟವಾನಸಿ ಮಾಂ ಯಥಾ (ಭಗವದ್ಗೀತೆ-11-53)


ನೀನು ನೋಡಿದ ರೂಪದಲ್ಲಿ ನನ್ನನ್ನು ನೋಡಲು ವೇದಗಳಿಂದಲೂ ಶಕ್ಯವಿಲ್ಲ.  ತಪಸ್ಸಿನಿಂದಲೂ ಶಕ್ಯವಿಲ್ಲ.  ದಾನದಿಂದಲೂ ಶಕ್ಯವಿಲ್ಲ.  ಯಜ್ಞಗಳಿಂದಲೂ ಶಕ್ಯವಿಲ್ಲ.


ತಾನೆ ಸಿಕ್ಕುವ್ಹಾಗೊಂದು ಮನಗೂಡಬೇಕು ತಂದು l

*ದೀನ ಮಹಿಪತಿ ಸ್ವಾಮಿ ಅನಕಾ ದೊರೆತ ಬಂದು ll 3 ll


ತಾನೇ ಸಿಕ್ಕುವ . . ಹಾಗೊಂದು ಮನಗೂಡಬೇಕು . . .


ಹೇಗೆ ಸಿಕ್ಕಾನು ?


ಭಕ್ತ್ಯಾ ತ್ವನನ್ಯಯಾ ಶಕ್ಯ ಆಹಮೇವಂವಿಧೋsರ್ಜುನ l

ಜ್ಞಾತುಂ ದ್ರಷ್ಟುಮ್ ಚ ತತ್ತ್ವೇನ ಪ್ರವೇಷ್ಟುಮ್ ಚ ಪರಂತಪ (ಭಗವದ್ಗೀತೆ 11-54)


ಅರ್ಜುನ, ಅನನ್ಯ ಭಕ್ತಿಯಿಂದ ಮಾತ್ರ ನನ್ನನ್ನು ಈ ರೂಪದಲ್ಲಿ ಯಥಾರ್ಥವಾಗಿ ತಿಳಿಯುವುದಕ್ಕೂ, ಪ್ರತ್ಯಕ್ಷ ಕಾಣುವುದಕ್ಕೂ, ಸಾಯುಜ್ಯ ಹೊಂದುವುದಕ್ಕೂ ಶಕ್ಯವಿದೆ.


ಇತ್ಯಾದಿನಾ ವಿಷ್ಣುಭಕ್ತೇರೇವ ಸರ್ವಸಾಧನೋತ್ತಮತ್ವಂ ಪರೋಕ್ಷಾ l

ಪರೋಕ್ಷಜ್ಞಾನಯೋಹೋಜ್ಞಾನಿನೋಪಿ ಮೋಕ್ಷಸ್ಯ ತದಧೀನತ್ವಂ ಚ l


ವಿಷ್ಣುಭಕ್ತಿಯೇ ಸರ್ವಸಾಧನಗಳಲ್ಲಿ ಉತ್ತಮವಾದುದೆಂಬುದೂ ಪರೋಕ್ಷಜ್ಞಾನ.  ಅಪರೋಕ್ಷಜ್ಞಾನ, ಜ್ಞಾನಿಗಳಿಗೆ ಮೋಕ್ಷ ದೊರೆಯುವುದು ಭಗವದಧೀನ.


ದೀನ ಮಹಿಪತಿಯ ಸ್ವಾಮಿ ದೊರೆತ .... !


ಕಾಖಂಡಕಿ ಶ್ರೀಮಹಿಪತಿರಾಯರ ಮುಂಡಿಗೆಗಳು

ಪುಸ್ತಕದಿಂದ

ಲೇಖಕರು - ಶ್ರೀ ನಾರಾಯಣ ಬಾಬಾನಗರ

ಪ್ರಕಾಶಕರು - ದಾಸಸಾಹಿತ್ಯ ಸುಧೆ ಸಮೂಹ

ವಿಜಯಪುರ

ಇನ್ನೂ ಹೆಚ್ಚಿನ ಮಾಹಿತಿಗಾಗಿ ನೋಡಿ - ಸಂಗ್ರಹಯೋಗ್ಯ ಪುಸ್ತಕ

***