Showing posts with label ಯಾರೂ ಸಂಗಡ ಬಾಹೋರಿಲ್ಲ ನಾರಾಯಣ neleyadikeshava YAARU SANGADA BAAHORILLA NARAYANA. Show all posts
Showing posts with label ಯಾರೂ ಸಂಗಡ ಬಾಹೋರಿಲ್ಲ ನಾರಾಯಣ neleyadikeshava YAARU SANGADA BAAHORILLA NARAYANA. Show all posts

Friday, 19 November 2021

ಯಾರೂ ಸಂಗಡ ಬಾಹೋರಿಲ್ಲ ನಾರಾಯಣ ankita neleyadikeshava YAARU SANGADA BAAHORILLA NARAYANA


also ankita in purandara vittala
ankita neleyadikeshava

ankita neleyadikeshava




ಯಾರೂ ಸಂಗಡ ಬಾಹೋರಿಲ್ಲ ll ಪ ll 

ನಾರಾಯಣ ನಾಮ ನೆರೆ ಬಾಹೋದಲ್ಲದೆ ll ಅ ಪ ll

ಹೊತ್ತು ನವಮಾಸ ಪರ್ಯಂತರವು ಗರ್ಭದಲಿ
 ಅತ್ಯಂತ ನೋವು ಬೇನೆಗಳಿಂದಲಿ 
ತುತ್ತು ವಸ್ತ್ರವನಿಕ್ಕಿ ಸಲಹಿದ ತಾಯ್ತಂದೆ 
ಅತ್ತುಕರೆದೊಯ್ದವರಲ್ಲದೆ ಬೆನ್ಹತ್ತಿ ಬರುವರೆ ll 1 ll

ಗುರು ಬಂಧು ಬುಧ ಜನರು ನಿಂತಗ್ನಿ ಸಾಕ್ಷಿಯಾಗಿ 
ಕರವಿಡಿದು ಧಾರೆಯನೆರೆಸಿಕೊಂಡ
ತರುಣಿ ಇನಿಯನ ಹರಣ ಹೋಗಲು ತಾ ಕಂಡು
ಬರುವುದಕಂಜಿ ಮುಂದೆ ಯಾರು ಗತಿಯೆಂಬುವಳು ll 2 ll

ಮಡದಿ ಮಕ್ಕಳು ತಮ್ಮ ಧನಕೆ ಬಡಿದಾಡುವರು
ಧನಕಾಗಿ ನಿನ್ನನ್ನೆ ನಂಬಿದವರು
ಅನುಮಾನವೇಕೆ ಈ ಜೀವ ತೊಲಗಿದಾಕ್ಷಣದಿ 
ಮುಂದೊಂದು ಅರಗಳಿಗೆ ನಿಲ್ಲಗೊಡವರು ll 3 ll 

ಸುತ್ತಲು ಕುಳ್ಳಿರ್ದ ಮಿತ್ರ ಬಾಂಧವರೆಲ್ಲ
ಹೊತ್ತು ಹೋಯಿತು ಹೊರಗೆ ಹಾಕೆನುವರೋ
ಹಿತ್ತಲ ಕಸಕಿಂತ ಕಡೆಯಾಯಿತ ಈ ದೇಹ 
ಹೊತ್ತುಕೊಂಡೊಯ್ದು ಅಗ್ನಿಯೊಳು ಬಿಸುಡುವರು ll 4 ll

ಹರಣ ಹಿಂಗದ ಮುನ್ನ 
ಹರಿಯ ಸೇವೆಯ ಮಾಡಿ
ಪರಗತಿಗೆ ಸಾಧನವನ್ನು ಮಾಡಿಕೊಳ್ಳೊ 
ಕರುಣಾನಿಧಿ ಕಾಗಿನೆಲೆಯಾದಿ ಕೇಶವ ನಿನ್ನ 
ಚರಣವನು ನೆನೆನೆನೆದು ಸುಖಿಯಾಗೊ ಮರುಳೇ ll 5 ll
***

ankita purandara vittala 👇👇
ಯಾರೂ ಸಂಗಡ ಬಾಹೋರಿಲ್ಲ
ನಾರಾಯಣನ ನಾಮ ನೆರೆಬಾಹೋದಲ್ಲದೆ ||

ಹೊತ್ತು ನವಮಾಸ ಪರ್ಯಂತವು ಗರ್ಭದಲಿ
ಹೆತ್ತು ಬಲು ನೋವು ಬೇನೆಗಳಿಂದಲಿ
ತುತ್ತು ಬುತ್ತಿಯ ಕೊಟ್ಟು ಸಲಹಿದಂಥಾ ತಾಯಿ
ಅತ್ತು ಕಳಹುವಳಲ್ಲದೆ ನೆರೆ ಬಹಳೆ ||

ದೇವವಿಪ್ರರು ಅಗ್ನಿಸಾಕ್ಷಿಯಿಂದಲಿ ತನ್ನ
ಭಾವಶುದ್ಧದಿ ಧಾರೆಯೆರೆಸಿಕೊಂಡ
ದೇವಿ ತನ್ಸತಿ ತಲೆಗೆ ಕೈಯಿಟ್ಟುಕೊಂಡು ಇ-
ನ್ನಾವ ಗತಿಯೋ ಎಂದು ಅಳುತುಳಿವಳಲ್ಲದೆ ||

ಮತ್ತೆ ಪ್ರಾಣರು ತನುವ ಬಿಟ್ಟು ಹೋಗುವಾಗ
ಎತ್ತಿವನ ಹೊರಗೊಯ್ದು ಹಾಕೆಂಬರು
ಎತ್ತಿದ ಕಸಕಿಂತ ಕಡೆಯಾಯಿತೀ ದೇಹ
ವಿತ್ತವೆಷ್ಟಿದ್ದರು ಫಲವಿಲ್ಲ ಪ್ರಾಣಿ ||

ಪುತ್ರಮಿತ್ರರು ಸಕಲಬಂಧುಗಳು ಸತಿಯರು
ಹತ್ತಿರದೊಳ್ ನಿಂತು ನೋಡುವರಲ್ಲದೆ
ಮೃತ್ಯುದೇವಿಯು ಬಂದು ಪ್ರಾಣವನು ಸೆಳೆವಾಗ
ಜಾತ್ರೆ ಜನರಷ್ಟಿದ್ದು ಏನು ಮಾಡುವರು ||

ಯಮನ ದೂತರು ಬಂದು ಪಾಶವನು ತಗಲ್ಹಾಕಿ
ಮಮತೆಯಿಲ್ಲದೆ ಪ್ರಾಣ ಎಳೆಯುತಿರಲು
ವಿಮುಖನಾಗಿ ತಾನು ವ್ಯಥೆಯಿಂದ ಪೋಪಾಗ
ಕಮಲಾಕ್ಷ ಪುರಂದರವಿಠಲ ನೀನಲ್ಲದೆ ||
***