ಎಂದಿಗೂ ಕೃಷ್ಣ ನಿನ್ನ ನಾ ಪೊಂದುವ ಬಗೆ l
ವಂದು ಸಾಧನವನ್ನ ಯನ್ನಿಂದಾದದ್ದು ಗಾಣೆ ll ಪ ll
ಸತ್ಕರ್ಮ ಅನುಷ್ಠಾನ ಸಮೀಚೀನ ವಚನಗಳು
ತತ್ಕಾಲಕ್ಕೇವೆ ತರುವಾಯಾವಿಲ್ಲ l
ಹೃತ್ಕಮಲದಿ ನಿನ್ನ ಹಿತದಿ ತಿಳಿದು ನೋಡಿ
ಯತ್ಕಿಂಚಿತವು ಅನ್ಯ ಯಾಚಿಸಿದವನಲ್ಲ ll 1 ll
ಮಾಡುವೆ ಕರ್ಮಗಳ ಮಾಡಿಸೊರರಿಯದೆ
ಬೇಡುವೆ ಫಲ ಬೇಡ ಬಾರದ್ದೆಲ್ಲ l
ಕಾಡುವರಾ ಅಂಜಿಸೊ ಕಾರ್ಯವಾ ತಿಳಿಯದೆ
ನಾಡ ವಿಷಯಂಗಳಿಗೋಡ್ಯಾಡಿದೆನೊ ದೇವ ll 2 ll
ಶ್ರವಣ ಮೊದಲಾದ ನವವಿಧ ಭಕುತಿಯೊಳು
ವಿವರಿಸಿದರೆನ್ನಲ್ಲೆ ವಂದೂಗಾಣೆ
ಪವನ ಮತವನು ಪೊಂದದೆನಲ್ಲದೆ
ಪವನವರಿತು ಪಥಕೆರಗೊದರಿಯದಾದೆ ll 3 ll
ಅನ್ನಂತ ಅನ್ನಂತ ಜನುಮಗಳು ಪೋದವು
ಇನ್ನು ನಿತ್ಯಾನಿತ್ಯ ಜ್ಞಾನವಿಲ್ಲಾ l
ನನ್ನದು ನಾ ಕರ್ತುನೆಂಬುದು ಬಿಡದಿನ್ನು
ಕುನ್ನಿ ಮನವು ಯನ್ನಾ ತನ್ನತ್ತಲೆಳೊವೋದು ll 4 ll
ಯೇಸು ಪರಿ ಉಪಾಯ ಯೋಚಿಸಿದರೂ ಇದಕೆ
ಮಾಸದೆ ಪೋಗುವ ದೊಂದು ಗಾಣೆ l
ಈಶ ನೀ ಯನಗಿನ್ನು ದಾಸ ನಿನ್ನವನೆನಿಸಿ
ಪೋಷಿಸಿಕೋ ಯನ್ನ ಗೋಪಾಲವಿಟ್ಠಲ ll - ಶ್ರೀಗೋಪಾಲದಾಸರು
***