ವರ್ಣಿಸಲಸದಳವು
ದಾಸರ ಅನುಪಮ ಮಹಿಮೆಯನು
ಪುರಂದರ ದಾಸರ ಪ್ರತಿಭೆಯನು // ಪ//
ಸಾಸಿರ ಸಾಸಿರ ಪದಗಳ ನಾಯಕ
ಕವಿ ಮಹೋನ್ನತ ಸಂಗೀತ ಗಾಯಕ
ಕಲಿಯುಗ ಶ್ರೇಷ್ಠ ಶ್ರೀಹರಿಭಕುತನು
ಶ್ರೀನಿವಾಸನು ದೇವರ್ಷಿ ನಾರದನು //೧//
ಕರುಮ ಭಕುತಿ ಜ್ಞಾನದ ಸಾಗರ
ಕೃತಿಗಳು ತತ್ವಜ್ಞಾನದ ಭಂಡಾರ
ಗಂಗೆಯ ತೆರದಲಿ ಹರಿಯುವ ಸುಸ್ವರ
ಸಿರಿವಂತ ವೇದ ವೇದಾಂತದಾಗರನು //೨//
ಲಂಬೋದರನಾ ಪಿಳ್ಳಾರಿಗೀತೆ
ಮಾಡನು ಹುಡುಕುವ ಸಂಕೇತ ಗಾಥೆ
ಆದದ್ದೆಲ್ಲ ಒಳಿತೆಂಬನುಭವ ಮಾತೆ
ಅದ್ವಿತೀಯ ಒಲುಮೆಯ ದಾಸ ಪುರಂದರನು //೩//
ಅನುಭವದಡುಗೆಯನೂಡಿಸಿದವನು
ಬಿಂದಿಗೆ ಹಾಡಲಿ ಗೋವಿಂದನ ಕಂಡವನು
ದುರ್ಜನರಿಗಿಂದು ಸುಭಿಕ್ಷವೆಂದು ನೊಂದವನು
ಅನನ್ಯ ದಾರ್ಶನಿಕ ಎಮ್ಮ ಪುರಂದರನು //೪//
ವರ್ಣಿಸಲಸದಳವು
ದಾಸರ ಅನುಪಮ ಹಿರಿಮೆಯನು
ಪುರಂದರರನುಪಮ ಗರಿಮೆಯನು
ಶರಣೆಂಬೆ ಚರಣಕಮಲಗಳಿಗೆ
ಪುರಂದರ ಪಾದಾರವಿಂದಕೆ //
***