Showing posts with label ಶೋಭಾನವೆನ್ನಿರೆ ಸುರರೊಳು hayavadana SHOBHANAVENNIRE SURAROLU LAKSHMI SHOBHANA. Show all posts
Showing posts with label ಶೋಭಾನವೆನ್ನಿರೆ ಸುರರೊಳು hayavadana SHOBHANAVENNIRE SURAROLU LAKSHMI SHOBHANA. Show all posts

Wednesday 15 December 2021

ಲಕ್ಷ್ಮೀಶೋಭನ ಹಾಡು ಶೋಭಾನವೆನ್ನಿರೆ ಸುರರೊಳು ಶುಭಗನಿಗೆ ankita hayavadana SHOBHANAVENNIRE SURAROLU LAKSHMI SHOBHANA










ಶ್ರೀಮದ್ವಾದಿರಾಜತೀರ್ಥ (1480-1600 CE) ಪೂಜ್ಯಚರಣ ವಿರಚಿತ  
ಲಕ್ಷ್ಮೀಶೋಭನ ಹಾಡು


kannada verson PDF
click

english version PDF
click

ಶೋಭಾನವೆನ್ನಿರೆ ಸುರರೊಳು ಶುಭಗನಿಗೆ
ಶೋಭಾನವೆನ್ನಿ ಸುಗುಣನಿಗೆ
ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ
ಶೋಭಾನವೆನ್ನಿ ಸುರಪ್ರಿಯಗೆ ಶೋಭಾನೆ ||ಪಲ್ಲವಿ||

ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆ
ಪಕ್ಷಿವಾಹನ್ನಗೆರಗುವೆ
ಪಕ್ಷಿವಾಹನ್ನಗೆರಗುವೆ ಅನುದಿನ
ರಕ್ಷಿಸಲಿ ನಮ್ಮ ವಧೂವರರ ||೧||

ಪಾಲಸಾಗರವನ್ನು ಲೀಲೆಯಲಿ ಕಡೆಯಲು
ಬಾಲೆ ಮಹಾಲಕ್ಷುಮಿ ಉದಿಸಿದಳು
ಬಾಲೆ ಮಹಾಲಕ್ಷುಮಿ ಉದಿಸಿದಳಾ ದೇವಿ
ಪಾಲಿಸಲಿ ನಮ್ಮ ವಧೂವರರ ||೨||

ಬೊಮ್ಮನ ಪ್ರಳಯದಲಿ ತನ್ನರಸಿಯೊಡಗೂಡಿ
ಸುಮ್ಮನೆಯಾಗಿ ಮಲಗಿಪ್ಪ
ನಮ್ಮ ನಾರಾಯಣಗು ಈ ರಮ್ಮೆಗಡಿಗಡಿಗು
ಜನ್ಮವೆಂಬುದು ಅವತಾರ ||೩||

ಕಂಬುಕಂಠದ ಸುತ್ತ ಕಟ್ಟಿದ ಮಂಗಳಸೂತ್ರ
ಅಂಬುಜವೆರಡು ಕರಯುಗದಿ
ಅಂಬುಜವೆರಡು ಕರಯುಗದಿ ಧರಿಸಿ
ಪೀತಾಂಬರವನುಟ್ಟು ಮೆರೆದಳೆ ||೪||

ಒಂದು ಕರದಿಂದ ಅಭಯವನೀವಳೆ
ಮತ್ತೊಂದು ಕೈಯಿಂದ ವರಗಳ
ಕುಂದಿಲ್ಲಲದಾನಂದಸಂದೋಹ ಉಣಿಸುವ
ಇಂದಿರೆ ನಮ್ಮ ಸಲಹಲಿ ||೫||

ಪೊಳೆವ ಕಾಂಚಿಯ ದಾಮ ಉಲಿವ ಕಿಂಕಿಣಿಗಳು
ನಲಿವ ಕಾಲಂದುಗೆ ಘಲಕೆನಲು
ನಳನಳಿಸುವ ಮುದ್ದುಮುಖದ ಚೆಲುವೆ ಲಕ್ಷುಮಿ
ಸಲಹಲಿ ನಮ್ಮ ವಧೂವರರ ||೬||

ರನ್ನದ ಮೊಲೆಗಟ್ಟು ಚಿನ್ನದಾಭರಣಗಳ
ಚೆನ್ನೆ ಮಹಲಕ್ಷುಮಿ ಧರಿಸಿದಳೆ
ಚೆನ್ನೆ ಮಹಲಕ್ಷುಮಿ ಧರಿಸಿದಳಾದೇವಿ
ತನ್ನ ಮನೆಯ ವಧೂ-ವರರ ಸಲಹಲಿ ||೭||

ಕುಂಭಕುಂಚದ ಮೇಲೆ ಇಂಬಿಟ್ಟ ಹಾರಗಳು
ತುಂಬಿಗುರುಳ ಮುಖಕಮಲ
ತುಂಬಿಗುರುಳ ಮುಖಕಮಲದ ಮಹಲಕ್ಷುಮಿ ಜಗ
ದಂಬೆ ವಧೂವರರ ಸಲಹಲಿ ||೮||

ಮುತ್ತಿನ ಓಲೆಯನ್ನಿಟ್ಟಳೆ ಮಹಲಕ್ಷುಮಿ
ಕಸ್ತೂರಿ ತಿಲಕ ಧರಿಸಿದಳೆ
ಕಸ್ತೂರಿ ತಿಲಕ ಧರಿಸಿದಳಾ ದೇವಿ
ಸರ್ವತ್ರ ವಧೂವರರ ಸಲಹಲಿ ||೯||

ಅಂಬುಜನಯನಗಳ ಬಿಂಬಾಧರದ ಶಶಿ-
ಬಿಂಬದಂತೆಸೆವ ಮೂಗುತಿಮಣಿಯ ಶಶಿ-
ಬಿಂಬದಂತೆಸೆವಮೂಗುತಿ ಮಣಿ ಮಹಲಕ್ಷುಮಿ
ಉಂಬುದಕೀಯಲಿ ವಧುವರರ್ಗೆ ||೧೦||

ಮುತ್ತಿನಕ್ಷತೆಯಿಟ್ಟು ನವರತ್ನದ ಮುಕುಟವ
ನೆತ್ತಿಯ ಮೇಲೆ ಧರಿಸಿದೆಳೆ
ನೆತ್ತಿಯ ಮೇಲೆ ಧರಿಸಿದಳಾ ದೆವಿ ತನ್ನ
ಭಕ್ತಿಯ ಜನರ ಸಲಹಲಿ ||೧೧||

ಕುಂದ-ಮಂದರ-ಜಾಜೀ-ಕುಸುಮಗಳ ವೃಂದವ
ಚೆಂದದ ತುರುಬಿಗೆ ತುರುಬಿದಳೆ
ಕುಂದಣವರ್ಣದ ಕೋಮಲೆ ಮಹಲಕ್ಷುಮಿ ಕೃಪೆ-
ಯಿಂದ ವಧೂವರರ ಸಲಹಲಿ ||೧೨||

ಎಂದೆಂದಿಗು ಬಾಡದ ಅರವಿಂದದ ಮಾಲೆಯ
ಇಂದಿರೆ ಪೊಳೆವ ಕೊರಳಲ್ಲಿ
ಇಂದಿರೆ ಪೊಳೆವ ಕೊರಳಲ್ಲಿ ಧರಿಸಿದಳೆ ಅವ-
ಳಿಂದು ವಧೂವರರ ಸಲಹಲಿ ||೧೩||

ದೇವಾಂಗ ಪಟ್ಟೆಯ ಮೆಲು ಹೊದ್ದಿಕೆಯ
ಭಾಮೆ ಮಹಲಕ್ಷುಮಿ ಧರಿಸಿದಳೆ
ಭಾಮೆ ಮಹಲಕ್ಷುಮಿ ಧರಿಸಿದಳಾ ದೆವಿ ತನ್ನ
ಸೇವಕ ಜನರ ಸಲಹಲಿ ||೧೪||

ಈ ಲಕ್ಷುಮಿ ದೇವಿಯ ಕಾಲುಂಗರ ಘಲಕೆನಲು
ಲೋಲಾಕ್ಷಿ ಮೆಲ್ಲನೆ ನಡೆತಂದಳು
ಸಾಲಾಗಿ ಕುಳ್ಳಿರ್ದ ಸುರರಸಭೆಯ ಕಂಡು
ಆಲೋಚಿಸಿದಳು ಮನದಲ್ಲಿ ||೧೫||

ತನ್ನ ಮಕ್ಕಳ ಕುಂದ ತಾನೆ ಪೇಳುವದಕ್ಕೆ
ಮನ್ನದಿ ನಾಚಿ ಮಹಲಕ್ಷುಮಿ
ತನ್ನಾಮದಿಂದಲಿ ಕರೆಯದೆ ಒಬ್ಬೊಬ್ಬರ
ಉನ್ನತ ದೋಷಗಳನೆಣಿಸಿದಳು ||೧೬||

ಕೆಲವರು ತಲೆಯೂರಿ ತಪಗೈದು ಪುಣ್ಯವ
ಗಳಿಸಿದ್ದರೇನೂ ಫಲವಿಲ್ಲ
ಜ್ವಲಿಸುವ ಕೋಪದಿ ಶಾಪವ ಕೊಡುವರು
ಲಲನೆಯನಿವರು ಒಲಿಸುವರೆ ||೧೭||

ಎಲ್ಲ ಶಾಸ್ತ್ರಗಳೋದಿ ದುರ್ಲಭ ಜ್ಞಾನವ
ಕಲ್ಲಿಸಿ ಕೊಡುವ ಗುರುಗಳು
ಬಲ್ಲಿದ ಧನಕ್ಕೆ ಮರುಳಾಗಿವರಿಬ್ಬರು
ಸಲ್ಲದ ಪುರೋಹಿತಕ್ಕೊಳಗಾದರು ||೧೮||

ಕಾಮನಿರ್ಜಿತನೊಬ್ಬ ಕಾಮಿನಿಗೆ ಸೋತೊಬ್ಬ
ಭಾಮಿನಿಯ ಹಿಂದೆ ಹಾರಿದವ
ಕಾಮಾಂಧನಾಗಿ ಮುನಿಯ ಕಾಮಿನಿಗೈದನೊಬ್ಬ
ಕಾಮದಿ ಗುರುತಲ್ಪಗಾಮಿಯೊಬ್ಬ ||೧೯||

ನಶ್ವರೈಶ್ವರ್ಯವ ಬಯಸುವನೊಬ್ಬ ಪರ-
ರಾಶ್ರಯಿಸಿ ಬಾಳುವ ಈಶ್ವರನೊಬ್ಬ
ಹಾಸ್ಯವ ಮಾಡಿ ಹಲ್ಲುದುರಿಸಿಕೊಂಡವನೊಬ್ಬ
ಅದೃಶ್ಯಾಂಘ್ರಿಯೊಬ್ಬ ಒಕ್ಕಣನೊಬ್ಬ ||೨೦||

ಮಾವನ ಕೊಂದೊಬ್ಬ ಮರುಳಾಗಿಹನು
ಗಾಢ ಹಾರ್ವನ ಕೊಂದೊಬ್ಬ ಬಳಲಿದ
ಜೀವರ ಕೊಂದೊಬ್ಬ ಕುಲಗೇಡೆಂದೆನಿಸಿದ
ಶಿವನಿಂದೊಬ್ಬ ಬಯಲಾದ ||೨೧||

ಧರ್ಮವುಂಟೊಬ್ಬನಲಿ ಹೆಮ್ಮೆಯ ಹೆಸರಿಗೆ
ಅಮ್ಮಮ್ಮ ತಕ್ಕ ಗುಣವಿಲ್ಲ
ಕ್ಷಮ್ಮೆಯ ಬಿಟ್ಟೊಬ್ಬ ನರಕದಲ್ಲಿ ಜೀವರ
ಮರ್ಮವ ಮೆಟ್ಟಿ ಕೊಲಿಸುವ ||೨೨||

ಖಳನಂತೆ ಒಬ್ಬ ತನಗೆ ಸಲ್ಲದ ಭಾಗ್ಯವ
ಬಲ್ಲಿದಗಂಜಿ ಬರಿಗೈದ
ದುರ್ಲಭ ಮುಕ್ತಿಗೆ ದೂರವೆಂದೆನಿಸುವ ಪಾ-
ತಾಳಕ್ಕೆ ಇಳಿದ ಗಡ ||೨೩||

ಎಲ್ಲರಾಯುಷ್ಯವ ಶಿಂಶುಮಾರದೇವ
ಸಲ್ಲೀಲೆಯಿಂದಲಿ ತೊಲಗಿಸುವ
ಒಲ್ಲೆ ನಾನಿವರ ನಿತ್ಯಮುತ್ತೈದೆಯೆಂದು
ಬಲ್ಲವರೆನ್ನ ಭಜಿಸುವರು ||೨೪||

ಪ್ರಕೃತಿಯ ಗುಣದಿಂದ ಕಟ್ಟುವಡೆದು ನಾನಾ
ವಿಕೃತಿಗೊಳಾಗಿ ಭವದಲ್ಲಿ
ಸುಖದುಃಖವೆಂಬ ಬೊಮ್ಮಾದಿ ಜೀವರು
ದುಃಖಕ್ಕೆ ದೂರೆನಿಪ ಎನಗೆಣೆಯ ||೨೫||

ಒಬ್ಬನಾವನ ಮಗ ಮತ್ತೊಬ್ಬನಾವನ ಮೊಮ್ಮಗ
ಒಬ್ಬನಾವನಿಗೆ ಶಯನಾಹ
ಒಬ್ಬನಾವನ ಪೊರುವ ಮತ್ತಿಬ್ಬರಾವನಿಗಂಜಿ
ಅಬ್ಬರದಲಾವಾಗ ಸುಳಿವರು ||೨೬||

ಒಬ್ಬನಾವನ ನಾಮಕಂಜಿ ಬೆಚ್ಚುವ ಗಾಢ
ಸರ್ವರಿಗಾವ ಅಮೃತವ
ಸರ್ವರಿಗಾವ ಅಮೃತವನುಣಿಸುವ ಅವ-
ನೊಬ್ಬನೆ ನಿರನಿಷ್ಟ ನಿರವದ್ಯ ||೨೭||

ನಿರನಿಷ್ಟ ನಿರವದ್ಯ ಎಂಬ ಶ್ರುತ್ಯರ್ಥವ
ಒರೆದು ನೋಡಲು ನರಹರಿಗೆ
ನರಕಯಾತನೆ ಸಲ್ಲ ದುರಿತಾತಿದೂರನಿಗೆ
ಮರುಳ ಮನಬಂದಂತೆ ನುಡಿಯದಿರು ||೨೮||

ಒಂದೊಂದು ಗುಣಗಳು ಇದ್ದಾವು ಇವರಲ್ಲಿ
ಸಂದಣಿಸಿವೆ ಬಹು ದೋಷ
ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು
ಇಂದಿರೆ ಪತಿಯ ನೆನೆದಳು ||೨೯||

ದೇವರ್ಷಿ ವಿಪ್ರರ ಕೊಂದು ತನ್ನುದರದೊಳಿಟ್ಟು
ತೀವಿದ್ದ ಹರಿಗೆ ದುರಿತವ
ಭಾವಜ್ನರೆಂಬರೆ ಆಲದೆಲೆಯ ಮೆಲೆ
ಶಿವನ ಲಿಂಗವ ನಿಲಿಸುವರೆ ||೩೦||

ಹಸಿ-ತೃಷೆ-ಜರೆ-ಮರಣ-ರೋಗ-ರುಜೆಗಳೆಂಬ
ಅಸುರ-ಪಿಶಾಚಿಗಳೆಂಬ ಭಯವೆಂಬ
ವ್ಯಸನ ಬರಬಾರದು ಎಂಬ ನಾರಾಯಣಗೆ
ಪಶು ಮೊದಲಾಗಿ ನೆನೆಯದು ||೩೧||

ತಾ ದುಃಖಿಯಾದರೆ ಸುರರಾರ್ತಿಯ ಕಳೆದು
ಮೋದವೀವುದಕ್ಕೆ ಧರೆಗಾಗಿ
ಮಾಧವ ಬಾಹನೆ ಕೆಸರೊಳು ಮುಳುಗಿದವ ಪರರ
ಭಾಧಿಪ ಕೆಸರ ಬಿಡಿಸುವನೆ ||೩೨||

ಬೊಮ್ಮನಾಲಯದಲ್ಲಿ ಇದ್ದವಗೆ ಲಯವುಂಟೆ
ಜನ್ಮಲಯವಿದವನಿಗೆ
ಅಮ್ಮಿಯನುಣಿಸಿದ್ದ ಯಶೋದೆಯಾಗಿದ್ದಳೆ
ಅಮ್ಮ ಇವಗೆ ಹಸಿ-ತೃಷೆಯುಂಟೆ ||೩೩||

ಆಗ ಭಕ್ಷ್ಯಭೋಜ್ಯವಿತ್ತು ಪೂಜಿಸುವ
ಯೋಗಿಗೆ ಉಂಟೆ ಧನಧಾನ್ಯ
ಆಗ ದೊರಕೊಂಬುದೆ ಪಾಕ ಮಾಡುವ ವಹ್ನಿ
ಮತ್ತಾಗಲೆಲ್ಲಿಹುದು ವಿಚಾರಿಸಿರೊ ||೩೪||

ರೋಗವನೀವ ವಾತ ಪಿತ್ತ ಶ್ಲೇಷ್ಮ
ಆಗ ಕೂಡುವುದೆ ರಮೆಯೊಡನೆ
ಭೋಗಿಸುವವಗೆ ದುರಿತವ ನೆನೆವರೆ
ಈ ಗುಣನಿಧಿಗೆ ಎಣೆಯುಂಟೆ ||೩೫||

ರಮ್ಮೆದೇವಿಯರನಪ್ಪಿಕೊಂಡಿಪ್ಪುದು
ರಮ್ಮೆಯರಸಗೆ ರತಿ ಕಾಣಿರೊ
ಅಮ್ಮೋಘವೀರ್ಯವು ಚಲಿಸಿದರೆ ಪ್ರಳಯದಲಿ
ಕುಮ್ಮಾರರ್ ಯಾಕೆ ಜನಿಸರು ||೩೬||

ಏಕತ್ರ ನಿರ್ಣೀತ ಶಾಸ್ತ್ರಾರ್ಥ ಪರತ್ರಾಪಿ
ಬೇಕೆಂಬ ನ್ಯಾಯವ ತಿಳಿದುಕೊ
ಶ್ರೀಕೃಷ್ಣನೊಬ್ಬನೆ ಸರ್ವ ದೋಷಕ್ಕೆ ಸಿ
ಲುಕನೆಂಬುದು ಸಲಹಲಿಕೆ ||೩೭||

ಎಲ್ಲ ಜಗವ ನುಂಗಿ ದಕ್ಕಿಸಿಕೊಂಡವಗೆ
ಸಲ್ಲದು ರೋಗ ರುಜಿನವು
ಬಲ್ಲ ವೈದ್ಯರ ಕೆಳಿ ಅಜೀರ್ತಿಮೂಲವೆಲ್ಲ
ಸಲ್ಲದು ರೋಗ ರುಜಿನವು ||೩೮||

ಇಂಥಾ ಮೂರುತಿಯ ಒಳಗೊಂಬ ನರಕ ಬಹು
ಭ್ರಾಂತ ನೀನೆಲ್ಲಿಂದ ತೋರಿಸುವೆಲೊ
ಸಂತೆಯ ಮರುಳ ಹೋಗೆಲೊ ನಿನ್ನ ಮಾತ
ಸಂತರು ಕೇಳಿ ಸೊಗಸರು ||೩೯||

ಶ್ರೀನಾರಾಯಣರ ಜನನೀ ಜನಕರ
ನಾನೆಂಬ ವಾದೀ ನುಡಿಯಲೊ
ಜಾಣರಿಂದರಿಯ ಮೂಲ ರೂಪವ ತೊರಿ
ಶ್ರೀ ನರಸಿಂಹನ ಅವತಾರ ||೪೦||

ಅಂಬುಧಿಯ ಉದಕದಲಿ ಒಡೆದು ಮೂಡಿದ ಕೂರ್ಮ
ನೆಂಬ ಶ್ರೀ ಹರಿಯ ಪಿತನಾರು?
ಎಂಬ ಶ್ರೀ ಹರಿಯ ಪಿತನಾರು ಅದರಿಂದ ಸ್ವಾ
ಯಂಭುಗಳೆಲ್ಲ ಅವತಾರ ||೪೧||

ದೇವಕಿಯ ಗರ್ಭದಲಿ ದೇವನವತರಿಸಿದ
ಭಾವವನ್ನು ಬಲ್ಲ ವಿವೇಕಿಗಳು
ಈ ವಸುಧೆಯೊಳಗೆ ಕೃಷ್ಣಗೆ ಜನ್ಮವ-
ಆವ ಪರಿಯಲ್ಲಿ ನುಡಿಯುವಿಯೊ ||೪೨||

ಆಕಳಿಸುವಾಗ ಯಶೋದಾದೇವಿಗ
ದೇವ ತನ್ನೊಳಗೆ ಹುದುಗಿದ್ದ
ತ್ರಿಭುವನವೆಲ್ಲವ ತೋರಿದುದಿಲ್ಲವೆ
ಆ ವಿಷ್ಣು ಗರ್ಭದೊಳಡಗುವನೆ ||೪೩||

ಆನೆಯ ಮಾನದಲ್ಲಿ ಅಡಗಿಸಿದವರುಂಟೆ
ಅನೇಕ ಕೋಟಿ ಅಜಾಂಡವ
ಅಣುರೇಣು ಕೂಪದಲಿ ಆಳ್ದ ಶ್ರೀ ಹರಿಯ
ಜನನಿ ಜಠರವು ಒಳಗೊಂಬುದೆ ||೪೪||

ಅದರಿಂದ ಕೃಷ್ಣನಿಗೆ ಜನ್ಮವೆಂಬುದು ಸಲ್ಲ
ಮದನನಿವನ ಕುಮಾರನು
ಕದನದಿ ಕಣೆಗಳ ಇವನೆದೆಗೆಸೆವನೆ
ಸುದತೇರಿವನಿಂತು ನಿಂತು ಸಿಲುಕುವನೆ ||೪೫||

ಅದರಿಂದ ಕೃಷ್ಣನಿಗೆ ಪರನಾರೀ ಸಂಗವ ಕೋ-
ವಿದರಾದ ಬುಧರು ನುಡಿವರೆ
ಸದರವೆ ಈ ಮಾತು ಸರ್ವ ವೇದಂಗಳು
ಮುದದಿಂದ ತಾವು ಸ್ತುತಿಸುವವು ||೪೬||

ಎಂದ ಭಾಗವತದ ಚೆಂದದ ಮಾತನು
ಮಂದ ಮಾನವ ಮನಸಿಗೆ
ತಂದುಕೊ ಜಗಕ್ಕೆ ಕೈವಲ್ಯವೀವ ಮು-
ಕುಂದಗೆ ಕುಂದು ಕೊರತೆ ಸಲ್ಲದು ||೪೭||

ಹತ್ತು ವರ್ಷದ ಕೆಳಗೆ ಮಕ್ಕಳಾಟಿಕೆಯಲ್ಲಿ
ಚಿತ್ತ ಸ್ತ್ರೀಯರಿಗೆ ಎರಗುವದೆ
ಅರ್ತಿಯಿಂದರ್ಚಿಸಿದ ಗೋಕುಲದ ಕನ್ಯೆಯರ
ಸತ್ಯಸಂಕಲ್ಪ ಬೆರಸಿದ್ದ ||೪೮||

ಹತ್ತು ಮತ್ತಾರು ಸಾಸಿರ ಸ್ತ್ರೀಯರಲ್ಲಿ
ಹತ್ತು ಹತ್ತೆನಿಪ ಕ್ರಮದಿಂದ
ಪುತ್ರರ ವೀರ್ಯದಲಿ ಸೃಷ್ಟಿಸಿದವರುಂಟೆ
ಅರ್ತಿಯ ಸೃಷ್ಟಿ ಹರಿಗಿದು ||೪೯||

ರೋಮ-ರೋಮಕೂಪ ಕೋಟಿವೃಕಂಗಳ
ನಿರ್ಮಿಸಿ ಗೋಪಾಲರ ತೆರಳಿಸಿದ
ನಮ್ಮ ಶ್ರೀಕೃಷ್ಣನು ಮಕ್ಕಳ ಸೃಜಿಸುವ
ಮಹಿಮೆ ಬಲ್ಲವರಿಗೆ ಸಲಹಲಿಕೆ ||೫೦||

ಮಣ್ಣನೇಕೆ ಮೆದ್ದೆಯೆಂಬ ಯಶೋದೆಗೆ
ಸಣ್ಣ ಬಾಯೊಳಗೆ ಜಗಂಗಳ
ಕಣ್ಣಾರೆ ತೋರಿದ ನಮ್ಮ ಶ್ರೀಕೃಷ್ಣನ
ಘನತೆ ಬಲ್ಲವರಿಗೆ ಸಲಹಲಿಕೆ ||೫೧||

ನಾರದ ಸನಕಾದಿಮೊದಲಾದ ಯೋಗಿಗಳು
ನಾರಿಯರಿಗೆ ಮರುಳಾಹರೆ
ಓರಂತೆ ಶ್ರೀಕೃಷ್ಣನಡಿಗೆರಗುವರೆ
ಆರಾಧಿಸುತ್ತ ಭಜಿಸುವರೆ ||೫೨||

ಅಂಬುಜಸಂಭವ ತ್ರಿಯಂಬಕ ಮೊದಲಾದ
ನಂಬಿದವರಿಗೆ ವರವಿತ್ತ
ಸಂಭ್ರಮದ ಸುರರು ಎಳ್ಳಷ್ಟು ಕೋಪಕ್ಕೆ
ಇಂಬಿದ್ದರಿವನ ಭಜಿಸುವರೆ ||೫೩||

ಅವನಂಗುಷ್ಠವ ತೊಳೆದ ಗಂಗಾದೇವಿ
ಪಾವನಳೆನಿಸಿ ಮೆರೆಯಳೆ
ಜೀವನ ಸೇರುವ ಪಾಪವ ಕಳೆವಳು
ಈ ವಾಸುದೇವಗೆ ಎಣೆಯುಂಟೆ ||೫೪||

ಕಿಲ್ಬಿಷವಿದ್ದರೆ ಅಗ್ರ ಪೂಜೆಯನು
ಸರ್ವರಾಯರ ಸಭೆಯೊಳಗೆ
ಉಬ್ಬಿದ ಮನದಿಂದ ಧರ್ಮಜ ಮಾಡುವನೆಲೆ
ಕೊಬ್ಬದಿರೆಲೊ ಪರವಾದಿ ||೫೫||

ಸಾವಿಲ್ಲದ ಹರಿಗೆ ನರಕಯಾತನೆ ಸಲ್ಲ
ಜೀವಂತರಿಗೆ ನರಕದಲ್ಲಿ
ನೋವನೀವನು ನಿಮ್ಮ ಯಮದೇವನು
ನೋವ ನೀ ಹರಿಯ ಗುಣವರಿಯ ||೫೬||
***

 ಶೋಭನವೆನ್ನಿರೆ ಸುರರೊಳು ಸುಭಗನಿಗೆ 
 ಶೋಭನವೆನ್ನೀ ಸುಗುಣನಿಗೆ । 
 ಶೋಭನವೆನ್ನಿರೆ ತ್ರಿವಿಕ್ರಮರಾಯನಿಗೆ 
 ಶೋಭನವೆನ್ನೀ ಸುರಪ್ರಿಯಗೆ ॥ ಶೋಭಾನೆ ॥  ॥ಪಲ್ಲವಿ॥ 

ಆರತಿ ಹಾಡು - ಲಕ್ಷ್ಮೀ ಶೋಭನ ಹೇಳಿದನಂತರ ಹೇಳುವುದು.
ಹಡಗಿನೊಳಗಿಂದ ಬಂದ ಕಡುಮುದ್ದು


Aarati ಆರತಿ ಹಾಡು  ಲಕ್ಷೀ ಶೋಭನ ಹೇಳಿದನಂತರ ಹೇಳುವುದು 

ಹಡಗಿನೋಳಗಿಂದ ಬಂದ ಕಡುಮುದ್ದು
ಶ್ರೀಕೃಷ್ಣ ಕಡಗೋಲಾಣೆ ನಾ ಪಿಡಿದಾಣೆ
ಕಡಗೋಲಾಣೆ ನಾ ಪಿಡಿಯುತ್ತ ದೇವಕಿಗೆ
ಒಡಯಗಾರತಿಯ ಬೆಳಗೀರೇ ಶೋಭಾನೆ

ಮಧ್ವಸರೋವರದಲ್ಲಿ ಶುದ್ಧ ಪೂಜೆಯಗೊಂಬೆ
ಮುದ್ದು ರುಕ್ಮಿಣಿಯ ಅರಸನೇ
ಮುದ್ದು ರುಕ್ಮಿಣಿಯ ಅರಸ ಶ್ರೀಕೃಷ್ಣಗೆ
ಮುತ್ತಿನಾರುತಿಯ ಬೆಳಗಿರೆ ೧

ಆಚಾರ್ಯರ ಕೈಯಿಂದ ಅಧಿಕ ಪೂಜೆಯಗೊಂಬ
ಕಾ೦ತೆರುಕ್ಮಿಣಿಯಾ ಅರಸನೇ ಕಾ೦ತೆ ರುಕ್ಮಿಣಿಯ
ಅರಸ ಶ್ರೀಕೃಷ್ಣಗೆ ಕಾ೦ಚನದಾರುತಿಯ ಬೆಳಗಿರೇ ೨

ಎಳೆ ತುಳಸಿಯ ಮಾಲೆ ಕೊರಳೊಳು ಧರಿಸಿಹ
ವರಮದ್ವಮುನಿಗೆ ಒಲುಮೆಯ
ವರಮದ್ವಮುನಿಗೆ ಒಲುಮೆಯ ಶ್ರೀಕೃಷ್ಣ
ಮಂಗಳಾರುತಿಯ ಬೆಳಗಿರೇ ೩

ಹೊತ್ತಾರಿನ ಪೂಜೆಗೆ ಸಜ್ಜಿಗೆ ಬಾಳೆಹಣ್ಣು
ಮುತ್ತಿನಬಟ್ಟು ಹೋಳೆಯುತ್ತಾ ಮುತ್ತಿನ ಬಟ್ಟೂ
ಹೋಳೆಯುತ್ತ ಶ್ರೀ ಕೃಷ್ಣ ಮೂರ್ತಿಗಾರುತಿಯ
ಬೆಳಗಿರೇ ೪

ಸೋದರ ಮಾವನ್ನು ಮಧುರೇಲಿ ಮಡುಹಿದ
ಸತ್ಯಭಾಮೆಯರ ಅರಸನೇ ಸತ್ಯಭಾಮೆಯರ
ಅರಸ ಶ್ರೀಕೃಷ್ಣಗೆ ಚಿನ್ನದಾರುತಿಯ ಬೆಳಗಿರೇ ೫

ಕಲ್ಲು ಕಡಿದವ ಬ೦ದ ಬಿಲ್ಲು ಮುರಿದವ
ಬ೦ದ ನಿಲ್ಲದೆದು ಪೂಜೆಗೆ ಪತೀಬ೦ದ
ಪತಿಬ೦ದ ಶ್ರೀಕೃಷ್ಣ ಹೂವಿನಾರತಿಯ ಬೆಳಗೀರೆ ೬

ಪಾಂಡವ ಪ್ರಿಯಗೆ ಚಾರಣರ
ಮಧ೯ನಗೆ ತಾಯಿಯ ಸೆರೆಯ ಬಿಡಿಸಿದಗೆ
ತಾಯಿಯ ಸೆರೆಯ ಬಿಡಿಸಿದ ಹಯವದನ
ದೇವಗಾರುತಿಯ ಬೆಳಗಿರೇ ೭
**********


part two

ನರಕವಾಳುವ ಯಮಧರ್ಮರಾಯ
ತನ್ನ ನರಜನ್ಮದೊಳಗೆ ಪೊರಳಿಸಿ
ಮರಳೀ ತನ್ನರಕದಲಿ ಪೊರಳಿಸಿ ಕೊಲುವನು
ಕುರು ನಿನ್ನ ಕುಹಕ ಕೊಳದಲ್ಲ ||೫೭||

ಬೊಮ್ಮನ ನೂರು ವರ್ಷ ಪರಿಯಂತ ಪ್ರಳಯದಲಿ
ಸುಮ್ಮನೆಯಾಗಿ ಮಲಗಿಪ್ಪ
ನಮ್ಮ ನಾರಾಯಣಗೆ ಹಸಿ-ತೃಷೆ -ಜರ-ಮರಣ-ದು-
ಷ್ಕರ್ಮ-ದುಃಖಂಗಳು ತೊಡಸುವರೆ ||೫೮||

ರಕ್ಕಸರಸ್ತ್ರಗಳಿಂದ ಗಾಯವಡೆಯದ
ಅಕ್ಷಯಕಾಯದ ಶ್ರೀಕೃಷ್ಣ
ತುಚ್ಛ ಯಮಭಟರ ಶಸ್ತ್ರಕಳಕುವನಲ್ಲ
ಹುಚ್ಚ ನೀ ಹರಿಯ ಗುಣವರಿಯ ||೫೯||

ಕಿಚ್ಚ ನುಂಗಿದನು ನಮ್ಮ ಶ್ರೀಕೃಷ್ಣನು
ತುಚ್ಛ ನರಕದೊಳು ಅನಲನಿಗೆ
ಬೆಚ್ಚುವನಲ್ಲ ಅದರಿಂದವಗೆ ನರಕ
ಮೆಚ್ಚುವರಲ್ಲ ಬುಧರೆಲ್ಲ ||೬೦||

ಮನೆಯಲ್ಲಿ ಕ್ಷಮೆಯ ತಾಳ್ದ ವೀರಭಟ
ರಣರಂಗದಲಿ ಕ್ಷಮಿಸುವನೆ
ಅಣುವಾಗಿ ನಮ್ಮ ಹಿತಕೆ ಮನದೊಳಗಿನ ಕೃಷ್ಣ
ಮುನಿವ ಕಾಲಕ್ಕೆ ಮಹತ್ತಾಹ ||೬೧||

ತಾಯ ಪೊಟ್ಟೆಯಿಂದ ಮೂಲರೂಪವ ತೋರಿ
ಆಯುಧ ಸಹಿತ ಪೊರವಂಟ
ನ್ಯಾಯಕೋವಿದರು ಪುಟ್ಟಿದನೆಂಬರೆ
ಬಾಯಿಗೆ ಬಂದಂತೆ ಬೊಗಳದಿರು ||೬೨||

ಉಟ್ಟ ಪೀತಾಂಬರ ತೊಟ್ಟ ಭೂಷಣಂಗಳು
ಇಟ್ಟ ನವರತ್ನದ ಕಿರೀಟವು
ಮೆಟ್ಟಿದ ಕುರುಹು ಎದೆಯಲ್ಲಿ ತೊರಿದ ಶ್ರೀ-
ವಿಠ್ಠಲ ಪುಟ್ಟಿದನೆನಬಹುದೆ ||೬೩||

ವೃಷಭಹಂಸಮೂಷಕವಾಹನವೇರಿ ಮಾ-
ನಿಸರಂತೆ ಸುಳಿವ ಸುರರೆಲ್ಲ
ಎಸೆವ ದೇವೇಶಾನರ ಸಾಹಸಕ್ಕೆ ಮಡಿದರು
ಕುಸುಮನಾಭನಿಗೆ ಸರಿಯುಂಟೆ ||೬೪||

ಒಂದೊಂದು ಗುಣಗಳು ಇದ್ದಾವು ಇವರಲ್ಲಿ
ಸಂದೆಣಿಸಿವೆ ಬಹು ದೋಷ
ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು
ಇಂದಿರೆ ಪತಿಯ ನೆನೆದಳು ||೬೫||

ಇಂತು ಚಿಂತಿಸಿ ರಮೆ ಸಂತ ರಾಮನ ಪದವ
ಸಂತೋಷ ಮನದಿ ನೆನೆವುತ್ತ
ಸಂತೋಷ ಮನದಿ ನೆನೆವುತ್ತ ತನ್ನ ಶ್ರೀ
ಕಾಂತನಿದ್ದೆಡೆಗೆ ನಡೆದಳು ||೬೬||

ಕಂದರ್ಪ ಕೋಟಿಗಳ ಗೆಲುವ ಸೌಂದರ್ಯದ
ಚೆಂದವಾಗಿದ್ದ ಚೆಲುವನ
ಇಂದಿರೆ ಕಂಡು ಇವನೆ ತನಗೆ ಪತಿ-
ಯೆಂದವನ ಬಳಿಗೆ ನಡೆದಳು ||೬೭||

ಈ ತೆರದ ಸುರರ ಸುತ್ತ ನೋಡುತ ಲಕ್ಷ್ಮೀ
ಚಿತ್ತವ ಕೊಡದೆ ನಸುನಗುತ
ಚಿತ್ತವಕೊಡದೆ ನಸುನಗುತ ಬಂದು ಪುರು-
ಷೋತ್ತಮನ ಕಂಡು ನಮಿಸಿದಳು ||೬೮||

ನಾನಾಕುಸುಮಗಳಿಂದ ಮಾಡಿದ ಮಾಲೆಯ
ಶ್ರೀ ನಾರಿ ತನ್ನ ಕರದಲ್ಲಿ
ಪೀನಕಂಧರದ ತ್ರಿವಿಕ್ರಮರಾಯನ
ಕೊರಳಿನ ಮೇಲಿಟ್ಟು ನಮಿಸಿದಳು ||೬೯||

ಉಟ್ಟಪೊಂಬಟ್ಟೆಯ ತೊಟ್ಟಾಂಭರಣಂಗಳು
ಇಟ್ಟ ನವರತ್ನದ ಮುಕುಟವು
ದುಷ್ಟಮರ್ದನನೆಂಬ ಕಡೆಯ ಪಂಡೆಗಳು
ವಟ್ಟಿದ್ದ ಹರಿಗೆ ವಧುವಾದಳು ||೭೦||

ಕೊಂಬು ಚೆಂಗಹಳೆಗಳು ತಾಳಮದ್ದಳೆಗಳು
ತಂಬಟೆ ಭೇರಿ ಪಟಹಗಳು
ಭೊಂ ಭೊಂ ಎಂಬ ಶಂಖ ಡೊಳ್ಳು ಮೌರಿಗಳು
ಅಂಬುಧಿಯ ಮನೆಯಲ್ಲೆಸೆದವು ||೭೧||

ಅರ್ಘ್ಯಪಾದ್ಯಾಚಮನ ಮೊದಲಾದ ಷೋಡಶಾ-
ನರ್ಘ್ಯ ಪೂಜೆಯಿತ್ತನಳಿಯಗೆ
ಒಗ್ಗಿದ ಮನದಿಂದ ಧಾರೆಯೆರೆದನೆ ಸಿಂಧು
ಸದ್ಗತಿಯಿತ್ತು ಸಲಹೆಂದ ||೭೨||

ವೇದೋಕ್ತ ಮಂತ್ರ ಪೇಳಿ ವಸಿಷ್ಠ ನಾರದ ಮೊದ-
ಲಾದ ಮುನೀಂದ್ರರು ಮುದದಿಂದ
ವಧೂವರರ ಮೆಲೆ ಶೋಭನದಕ್ಷತೆಯನು
ಮೊದವೀವುತ್ತ ತಳೆದರು ||೭೩||

ಸಂಭ್ರಮದಿಂದಂಬರದಿ ದುಂದುಭಿ ಮೊಳಗಲು
ತುಂಬುರು ನಾರದರು ತುತಿಸುತ್ತ
ತುಂಬುರು ನಾರದರು ತುತಿಸುತ್ತ ಪಾಡಿದರು ಪೀ-
ತಾಂಬರಧರನ ಮಹಿಮೆಯ ||೭೪||

ದೇವನಾರಿಯರೆಲ್ಲ ಬಂದೊದಗಿ ಪಾಠಕರು
ಓವಿ ಪಾಡುತ್ತ ಕುಣಿದರು
ದೇವತರುವಿನ ಹೂವಿನ ಮಳೆಗಳ
ಶ್ರೀವರನ ಮೆಲೆ ಕರೆದರು ||೭೫||

ಮುತ್ತು-ರತ್ನಗಳಿಂದ ಕೆತ್ತಿಸಿದ ಹಸೆಯ ನವ-
ರತ್ನ ಮಂಟಪದಿ ಪಸರಿಸಿ
ರತ್ನಮಂಟಪದಿ ಪಸರಿಸಿ ಕೃಷ್ಣನ
ಮುತ್ತೈದೆಯರೆಲ್ಲ ಕರೆದರು ||೭೬||

ಶೇಷಶಯನನೆ ಬಾ ದೋಷದೂರನೆ ಬಾ
ಭಾಸುರಕಾಯ ಹರಿಯೆ ಬಾ
ಭಾಸುರಕಾಯ ಹರಿಯೆ ಬಾ ಶ್ರೀಕೃಷ್ಣ ವಿ-
ಲಾಸದಿಂದೆಮ್ಮ ಹಸೆಗೆ ಬಾ ||೭೭||

ಕಂಜಲೋಚನನೆ ಬಾ ಮಂಜುಳಮೂರ್ತಿ ಬಾ
ಕುಂಜರವರದಾಯಕನೆ ಬಾ
ಕುಂಜರವರದಾಯಕನೆ ಬಾ ಶ್ರೀಕೃಷ್ಣ ನಿ-
ರಂಜನ ನಮ್ಮ ಹಸೆಗೆ ಬಾ ||೭೮||

ಆದಿಕಾಲದಲಿ ಆಲದೆಲೆಯ ಮೇಲೆ
ಶ್ರೀದೇವಿಯರೊಡನೆ ಪವಡಿಸಿದ
ಶ್ರೀದೇವಿಯರೊಡನೆ ಪವಡಿಸಿದ ಶ್ರೀಕೃಷ್ಣ
ಮೋದದಿಂದೆಮ್ಮ ಹಸೆಗೆ ಬಾ ||೭೯||

ಆದಿಕಾರಣನಾಗಿ ಆಗ ಮಲಗಿದ್ದು
ಮೋದ ಜೀವರ ತನ್ನ ಉದರದಲಿ
ಮೋದ ಜೀವರ ತನ್ನುದರದಲಿ ಇಂಬಿತ್ತ ಅ-
ನಾದಿ ಮೂರುತಿಯೆ ಹಸೆಗೆ ಬಾ ||೮೦||

ಚಿನ್ಮಯವೆನಿಪ ನಿಮ್ಮ ಮನೆಗಳಲ್ಲಿ ಜ್ಯೋ
ತಿರ್ಮಯವಾದ ಪದ್ಮದಲ್ಲಿ
ರಮ್ಮೆಯರೊಡಗೂಡಿ ರಮಿಸುವ ಶ್ರೀಕೃಷ್ಣ
ನಮ್ಮ ಮನೆಯ ಹಸೆಗೆ ಬಾ ||೮೧||

ನಾನಾವತಾರದಲಿ ನಂಬಿದ ಸುರರಿಗೆ
ಆನಂದವೀವ ಕರುಣಿ ಬಾ
ಆನಂದವೀವ ಕರುಣಿ ಬಾ ಶ್ರೀಕೃಷ್ಣ
ಶ್ರೀನಾರಿಯೊಡನೆ ಹಸೆಗೆಳು ||೮೨||

ಬೊಮ್ಮನ ಮನೆಯಲ್ಲಿ ರನ್ನದಪೀಠದಿ ಕುಳಿತು
ಒಮ್ಮನದಿ ನೇಹವ ಮಾಡುವ
ನಿರ್ಮಲ ಪೂಜೆಯ ಕೈಗೊಂಬ ಶ್ರೀಕೃಷ್ಣ ಪ-
ರಮ್ಮ ಮೂರುತಿಯೆ ಹಸೆಗೆ ಬಾ ||೮೩||

ಮುಖ್ಯಪ್ರಾಣನ ಮನೆಯಲ್ಲಿ ಭಾರತಿಯಾಗಲಿ-
ಕ್ಕೆ ಬಡಿಸಿದ ರಸಾಯನವ
ಸಕ್ಕರೆಗೂಡಿದ ಪಾಯಸ ಸವಿಯುವ
ರಕ್ಕಸವೈರಿಯೆ ಹಸೆಗೆ ಬಾ ||೮೪||

ರುದ್ರನ ಮನೆಯಲ್ಲಿ ರುದ್ರಾಣಿದೇವಿಯರು
ಭದ್ರಮಂಟಪದಿ ಕುಳ್ಳಿರಿಸಿ
ಸ್ವಾದ್ವನ್ನಗಳನು ಬಡಿಸಲು ಕೈಗೊಂಡ
ಮುದ್ದು ನರಸಿಂಹ ಹಸೆಗೆ ಬಾ ||೮೫||

ಗರುಡನ ಮೇಲೇರಿ ಗಗನಮಾರ್ಗದಲ್ಲಿ
ತರತರದಿ ಸ್ತುತಿಪ ಸುರಸ್ತ್ರೀಯರ
ಮೆರೆವ ಗಂಧರ್ವರ ಗಾನವ ಸವಿಯುವ
ನರಹರಿ ನಮ್ಮ ಹಸೆಗೆ ಬಾ ||೮೬||

ನಿಮ್ಮಣ್ಣನ ಮನೆಯ ಸುಧರ್ಮ ಸಭೆಯಲ್ಲಿ
ಉಮ್ಮೆಯರಸ ನಮಿಸಿದ
ಧರ್ಮರಕ್ಷಕನೆನಿಪ ಕೃಷ್ಣ ಕೃಪೆಯಿಂದ ಪ-
ರಮ್ಮ ಮೂರುತಿಯೆ ಹಸೆಗೆ ಬಾ ||೮೭||

ಇಂದ್ರನ ಮನೆಘೋಗಿ ಅದಿತಿಗೆ ಕುಂಡಲವಿತ್ತು
ಅಂದದ ಪೂಜೆಯ ಕೈಗೊಂಡು
ಅಂದದ ಪೂಜೆಯ ಕೈಗೊಂಡು ಸುರತರುವ
ಇಂದಿರೆಗಿತ್ತ ಹರಿಯೆ ಬಾ ||೮೮||

ನಿಮ್ಮ ನೆನೆವ ಮುನಿಹೃದಯದಲಿ ನೆಲೆಸಿದ
ಧರ್ಮರಕ್ಷಕನೆನಿಸುವ
ಸಮ್ಮತವಾಗಿದ್ದ ಪೂಜೆಯ ಕೈಗೊಂಡ ನಿ-
ಸ್ಸೀಮ ಮಹಿಮ ಹಸೆಗೆ ಬಾ ||೮೯||

ಮುತ್ತಿನ ಸತ್ತಿಗೆಯ ನವರತ್ನದ ಚಾಮರ
ಸುತ್ತನಲಿವ ಸುರಸ್ತ್ರೀಯರ
ನೃತ್ಯವ ನೋಡುತ ಚಿತ್ರ ವಾದ್ಯಂಗಳ ಸಂ
ಪತ್ತಿನ ಹರಿಯೆ ಹಸೆಗೆ ಬಾ ||೯೦||

ಎನಲು ನಗುತ ಬಂದು ಹಸೆಯ ಮೇಲೆ
ವನಿತೆ ಲಕ್ಷ್ಮಿಯೊಡಗೂಡಿ
ಅನಂತ ವೈಭವದಿ ಕುಳಿತ ಕೃಷ್ಣನ ನಾಲ್ಕು
ದಿನದುತ್ಸವವ ನಡೆಸಿದರು ||೯೧||

ಅತ್ತೆರೆನಿಪ ಗಂಗೆ ಯಮುನೆ ಸರಸ್ವತಿ ಭಾ-
ರತಿ ಮೊದಲಾದ ಸುರಸ್ತ್ರೀಯರು
ಮುತ್ತಿನಾಕ್ಷತೆಯನು ಶೋಭಾನವೆನುತಲಿ ತಮ್ಮ
ಅರ್ತಿಯಳಿಯಗೆ ತಳಿದರು ||೯೨||

ರತ್ನದಾರತಿಗೆ ಸುತ್ತ ಮುತ್ತನೆ ತುಂಬಿ
ಮುತ್ತೈದೆಯರೆಲ್ಲ ಧವಳದ
ಮುತ್ತೆದೆರೆಲ್ಲ ಧವಳದ ಪದವ ಪಾ-
ಡುತ್ತಲೆತ್ತಿದರೆ ಸಿರಿವರಗೆ ||೯೩||

ಬೊಮ್ಮ ತನ್ನರಸಿ ಕೂಡೆ ಬಂದರೆಗಿದ
ಉಮ್ಮೆಯರಸ ನಮಿಸಿದ
ಅಮ್ಮರರೆಲ್ಲರು ಬಗೆಬಗೆ ಉಡುಗೊರೆಗಳ
ರಮ್ಮೆಯರಸಗೆ ಸಲಿಸಿದರು ||೯೪||

ಸತ್ಯಲೋಕದ ಬೊಮ್ಮ ಕೌಸ್ತುಭರತ್ನವನಿತ್ತ
ಮುಕ್ತಾಸುರರು ಮುದದಿಂದ
ಮುತ್ತಿನ ಕಂಠೀಸರವ ಮುಖ್ಯಪ್ರಾಣನಿತ್ತ
ಮಸ್ತಕದ ಮಣಿಯ ಶಿವನಿತ್ತ ||೯೫||

ತನ್ನರಸಿ ಕೂಡೆ ಸವಿನುಡಿ ನುಡಿವಾಗ
ವದನದಲ್ಲಿದ್ದಗ್ನಿ ಕೆಡದಂತೆ
ವಹ್ನಿ ಪ್ರತಿಷ್ಠೆಯ ಮಾಡಿ ಅವನೊಳಗಿದ್ದ
ತನ್ನಾಹುತಿ ದಿಬ್ಬಣ ಸುರರಿಗೆ ||೯೬||

ಕೊಬ್ಬಿದ ಖಳರೋಡಿಸಿ ಅಮೃತಾನ್ನ ಊಟಕ್ಕೆ
ಉಬ್ಬಿದ ಹರುಷದಿ ಉಣಿಸಲು
ಉಬ್ಬಿದ ಹುರುಷದಿ ಉಣಿಸಬೇಕೆಂದು ಸಿಂಧು
ಸರ್ವರಿಗಡಿಗೆಯ ಮಾಡಿಸಿದ ||೯೭||

ಮಾವನ ಮನೆಯಲ್ಲಿ ದೇವರಿಗೌತಣವ
ದಾನವರು ಕೆಡಿಸದೆ ಬಿಡರೆಂದು
ದಾನವರು ಕೆಡಿಸದೆ ಬಿಡರೆಂದು ಶ್ರೀಕೃಷ್ಣ
ದೇವಸ್ತ್ರೀವೇಷವ ಧರಿಸಿದ ||೯೮||

ತನ್ನ ಸೌಂದರ್ಯದಿಂದುನ್ನತಮಯವಾದ
ಲಾವಣ್ಯದಿಂದ ಮೆರೆವ ನಿಜಪತಿಯ
ಹೆಣ್ಣು ರೂಪವ ಕಂಡು ಕನ್ಯೆ ಮಹಲಕ್ಷುಮಿ ಇವ-
ಗನ್ಯರೇಕೆಂದು ಬೆರಗಾದಳು ||೯೯||

ಲಾವಣ್ಯಮಯವಾದ ಹರಿಯ ಸ್ತ್ರೀವೇಷಕ್ಕೆ
ಭಾವಕಿಯರೆಲ್ಲ ಮರುಳಾಗೆ
ಮಾವರ ಸುಧೆಯ ಕ್ರಮದಿಂದ ಬಡಿಸಿ ತನ್ನ
ಸೇವಕ ಸುರರಿಗುಣಿಸಿದ ||೧೦೦||

ನಾಗನ ಮೆಲೆ ತಾ ಮಲಗಿದ್ದಾಗ
ಆಗಲೆ ಜಗವ ಜತನದಿ
ಆಗಲೆ ಜಗವ ಜತನದಿ ಧರಿಸೆಂದು
ನಾಗಬಲಿಯ ನಡೆಸಿದ ||೧೦೧||

ಕ್ಷುಧೆಯ ಕಳೆವ ನವರತ್ನದ ಮಾಲೆಯ
ಮುದದಿಂದ ವಾರಿಧಿ ವಿಧಿಗಿತ್ತ
ಚದುರ ಹಾರವ ವಾಯುದೇವರಿಗಿತ್ತ
ವಿಧುವಿನ ಕಲೆಯ ಶಿವಗಿತ್ತ ||೧೦೨||

ಶಕ್ರ ಮೊದಲಾದ ದಿಕ್ಪಾಲಕರಿಗೆ
ಸೊಕ್ಕಿದ ಚೌದಂತ ಗಜಂಗಳ
ಉಕ್ಕಿದ ಮನದಿಂದ ಕೊಟ್ಟ ವರುಣ ಮದು-
ಮಕ್ಕಳಾಯುಷ್ಯವ ಬೆಳೆಸೆಂದ ||೧೦೩||

ಮತ್ತೆ ದೇವೆಂದ್ರಗೆ ಪಾರಿಜಾತವನಿತ್ತ
ಚಿತ್ತವ ಸೆಳೆವಪ್ಸರಸ್ತ್ರೀಯರ
ಹತ್ತುಸಾವಿರ ಕೊಟ್ಟ ವರುಣದೇವ ಹರಿ-
ಭಕ್ತಿಯ ಮನದಲ್ಲಿ ಬೆಳೆಸೆಂದ ||೧೦೪||

ಪೊಳೆವ ನವರತ್ನದ ರಾಶಿಯ ತೆಗೆತೆಗೆದು
ಉಳಿದ ಅಮರರಿಗೆ ಸಲ್ಲಿಸಿದ
ಉಳಿದ ಅಮರರಿಗೆ ಸಲ್ಲಿಸಿದ ಸಮುದ್ರ
ಕಳುಹಿದನವರ ಮನೆಗಳಿಗೆ ||೧೦೫||

ಉನ್ನತ ನವರತ್ನಮಯವಾದ ಅರಮನೆಯ
ಚೆನ್ನೆ ಮಗಳಿಗೆ ವಿರಚಿಸಿ
ತನ್ನ ಅಳಿಯನಿಗೆ ಸ್ಥಿರಮಾಡಿ ಕೊಟ್ಟ
ಇನ್ನೊಂದು ಕಡೆಯಡಿ ಇಡದಂತೆ ||೧೦೬||

ಹಯವದನ ತನ್ನ ಪ್ರಿಯಳಾದ ಲಕ್ಷುಮಿಗೆ
ಜಯವಿತ್ತ ಕ್ಷೀರಾಂಬುಧಿಯಲ್ಲಿ
ಜಯವಿತ್ತ ಕ್ಷೀರಾಂಬುಧಿಯಲ್ಲಿ ಶ್ರೀಕೃಷ್ಣ
ದಯದಿ ನಮ್ಮೆಲ್ಲರ ಸಲಹಲಿ ||೧೦೭||

ಈ ಪದವ ಮಾಡಿದ ವಾದಿರಾಜ ಮುನಿಗೆ
ಶ್ರೀಪತಿಯಾದ ಹಯವದನ
ತಾಪವ ಕಳೆದು ತನ್ನ ಶ್ರೀಚರಣವ ಸ
ಮೀಪದಲ್ಲಿಟ್ಟು ಸಲಹಲಿ ||೧೦೮||

ಇಂತು ಸ್ವಪ್ನದಲ್ಲಿ ಕೊಂಡಾಡಿಸಿಕೊಂಡ ಲಕ್ಷ್ಮೀ
ಕಾಂತನ ಕಂದನೆನಿಸುವ
ಸಂತರ ಮೆಚ್ಚಿನ ವಾದಿರಾಜೇಂದ್ರಮುನಿ
ಪಂಥದಿ ಪೇಳಿದ ಪದವಿದು ||೧೦೯||

ಶ್ರೀಯರಸ ಹಯವದನಪ್ರಿಯ ವಾದಿರಾಜ-
ರಾಯ ರಚಿಸಿದ ಪದವಿದು
ಆಯುಷ್ಯ ಭವಿಷ್ಯ ದಿನದಿನಕೆ ಹೆಚ್ಚಾಗುವದು ನಿ-
ರಾಯಾಸದಿಂದ ಸುಖಿಪರು ||೧೧೦||

ಬೊಮ್ಮನ ದಿನದಲ್ಲಿ ಒಮ್ಮೊಮ್ಮೆ ಈ ಮದುವೆ
ಕ್ರಮ್ಮದಿ ಮಾಡಿ ವಿನೊದಿಸುವ
ನಮ್ಮ ನಾರಾಯಣಗೂ ಈ ರಮ್ಮೆಗಡಿಗಡಿಗು
ಅಸುರ ಮೋಹನವೆ ನರನಟನೆ ||೧೧೧||

ಮದುವೆಯ ಮನೆಯಲ್ಲಿ ಈ ಪದವ ಪಾಡಿದರೆ
ಮದುಮಕ್ಕಳಿಗೆ ಮುದವಹುದು
ವಧುಗಳಿಗೆ ಓಲೆ ಭಾಗ್ಯ ದಿನದಿನಕೆ ಹೆಚ್ಚುವದು
ಮದನನಯ್ಯನ ಕೃಪೆಯಿಂದ ||೧೧೨||

ಶೋಭಾನವೆನ್ನಿರೆ ಸುರರೊಳು ಶುಭಗನಿಗೆ
ಶೋಭಾನವೆನ್ನಿ ಸುಗುಣನಿಗೆ
ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ
ಶೋಭಾನವೆನ್ನಿ ಸುರಪ್ರಿಯಗೆ ||ಶೋಭಾನೆ||
***.
click for english version

ಲಕ್ಷ್ಮೀ ಶೋಭಾನೆದಲ್ಲಿ ಅರ್ಥಗಳು
1) ನಶ್ವರ= ಶಾಶ್ವತವಲ್ಲದು 
2)ಅದೃಶ್ಯಾಂಘ್ರಿ= ಕಾಲು ಇಲ್ಲದವನು 
3) ನಿರನಿಷ್ಟ= ಅನಿಷ್ಟ ಇಲ್ಲದವನು 
4)ನಿರವದ್ಯ= *ದೋಷವಿಲ್ಲದವನು*
5)ಕಂದರ್ಪ= ಮನ್ಮಥ 
6) ಅಂಬುಧಿ= ಸಮುದ್ರ 
7)ಕಂಜಲೋಚನ=  ಕಮಲದಂತೆ ಕಣ್ಣುಗಳು ಉಳ್ಳವನು 
8) ದೇವನಾರಿಯರು= ಅಪ್ಸರಾ ಸ್ತ್ರೀಯರು 
9) ಸ್ತುತಿಪಾಠಕರು= ಗಂಧರ್ವರು 
10) ಮಂಜುಳಮೂರ್ತಿ= ಸುಂದರವಾದ ಶರೀರ ಉಳ್ಳವನು
11) ಕುಂಜರ= ಆನೆ
12) ಕುಂಜರವರದಾಯಕ= ಗಜೇಂದ್ರನಿಗೆ ವರ ನೀಡಿದವನು 
13)ನೇಹ= ಸ್ನೇಹ
14) ಕ್ಷುದೆ= ಹಸಿವು , ನೀರಡಿಕೆ 
15) ವಿಧಿ= ಬ್ರಹ್ಮದೇವರು 
16) ಶಕ್ರ= ಇಂದ್ರದೇವರು 
17)ಚೌದಂತ ಗಜಂಗಳು= ನಾಲ್ಕು ದಂತಗಳುಳ್ಳ ಮದಭರಿತವಾದ ಆನೆಗಳು 
18) ಬಲ್ಲವರು= ತಿಳಿದವರು 
19)ಕಂಬುಕಂಠ= ಶಂಖದಂತೆ ಸುಂದರವಾದ  ಕಂಠ 
20)ಗುಣ= ಹಗ್ಗ
21) ಅಂಬುಜನಯನ= ತಾವರೆದಂತೆ ಕಣ್ಣುಗಳು 
22) ಬಿಂಬಾಧರದ= ತೊಂಡೆಹಣ್ಣಿನಂತೆ ತುಟೆಗಳು
23) ಶಶಿಬಿಂಬ= ಚಂದ್ರಬಿಂಬ 
24) ವಹ್ನಿ= ಅಗ್ನಿ
25) ಸಂತರು = ಸಜ್ಜನರು 
26) ಭಾಸುರಕಾಯ= ಉಜ್ವಲವಾದ ಶರೀರ 
27) ರುದ್ರಾಣಿ= ಪಾರ್ವತೀ ದೇವಿ 
28) ಅಂಬುಜಸಂಭವ= ಬ್ರಹ್ಮದೇವರು
29) ತ್ರಯಂಬಕ= ರುದ್ರದೆವರು
30) ವೃಕಂಗಳು= ತೋಳಗಳು
31) ತೃಷೆ= ಬಾಯಾರಿಕೆ
32) ಕಿಲ್ಪಿಷ= ಹಿಂಸೆ , ಪಾಪ 
33)ಬೊಮ್ಮ= ಬ್ರಹ್ಮದೇವರು 
34)ಕಿಚ್ಛ= ಅಗ್ನಿ 
35) ಸಿಂಧು= ಸಮುದ್ರ
36) ದೇವತರುವು= ಕಲ್ಪವೃಕ್ಷ 
37) ರಕ್ಕಸರು= ರಾಕ್ಷಸರು 
38)ಗಗನ= ಆಕಾಶ
39) ಸತ್ಯಲೋಕ= ಬ್ರಹ್ಮಲೋಕ
40)ಕ್ಷೀರಾಂಬುಧಿ= ಹಾಲಿನಸಮುದ್ರ
******** 



ಶೋಭನವೆನ್ನಿರೆ ಸುರರೊಳು ಸುಭಗನಿಗೆ 
 ಶೋಭನವೆನ್ನೀ ಸುಗುಣನಿಗೆ । 
 ಶೋಭನವೆನ್ನಿರೆ ತ್ರಿವಿಕ್ರಮರಾಯನಿಗೆ 
 ಶೋಭನವೆನ್ನೀ ಸುರಪ್ರಿಯಗೆ ॥ ಶೋಭಾನೆ ॥  ॥ಪಲ್ಲವಿ॥ 

ಸರ್ವಮಂಗಳದಾಯಕಳಾದ ಶ್ರೀಮಹಾಲಕ್ಷ್ಮೀದೇವಿಯ ಮತ್ತು ಶ್ರೀನಾರಾಯಣನ ಮಂಗಳಮಹಿಮೆಯನ್ನು ನಿರೂಪಿಸಲು ಪ್ರವೃತ್ತವಾಗುವ ಈ ಮಂಗಳಸ್ವರೂಪದ ಗ್ರಂಥಕ್ಕೆ , ಶಿಷ್ಟಾಚಾರದಂತೆ ಆರಂಭದಲ್ಲಿ ಶ್ರೀಹರಿಸ್ತುತಿರೂಪದ ಮಂಗಳವನ್ನು ಶ್ರೀಮದ್ವಾದಿರಾಜರು ಹಾಡುತ್ತಾರೆ.

" ವಿಶ್ವಸ್ಥಿತಿಪ್ರಲಯಸರ್ಗಮಹಾವಿಭೂತಿವೃತ್ತಿಪ್ರಕಾಶನಿಯಮಾವೃತಿಬಂಧಮೋಕ್ಷಾಃ । ಯಸ್ಯಾ ಅಪಾಂಗಲವಮಾತ್ರತ ಊರ್ಜಿತಾ ಸಾ ಶ್ರೀರ್ಯತ್ಕಟಾಕ್ಷ ಬಲವತ್ಯಜಿತಂ ನಮಾಮಿ ॥" ( ದ್ವಾದಶಸ್ತೋತ್ರ ) ಎಂಬಲ್ಲಿ - ಯಾವಾಕೆಯು ತನ್ನ ಕುಡಿಗಣ್ಣ ನೋಟದಿಂದ ಸಕಲ ಜಗತ್ತಿನ ಸೃಷ್ಟಿ , ಸ್ಥಿತಿ , ಲಯಾದಿ ಸರ್ವವನ್ನೂ ನಿರ್ವಹಿಸಲು ಸಮರ್ಥಳೋ, ಆ ಮಹಾಲಕ್ಷ್ಮಿಯು ಅಜಿತನಾಮಕ ಶ್ರೀಹರಿಯ ಕೃಪಾಕಟಾಕ್ಷಲೇಶದಿಂದ ಈ ವಿಧ ಅಚಿಂತ್ಯಶಕ್ತಿಯುಳ್ಳವಳಾಗಿರುವಳೆಂದು ಹೇಳಲಾಗಿದೆ. ಈ " ಅಜಿತ "ನ ಸ್ತೋತ್ರವಲ್ಲದೆ ಬೇರಾವುದು ಮಂಗಳವೆನಿಸೀತು !

" ಗೃಹಲಕ್ಷ್ಮಿ "ಯರೆನಿಸಿರುವ ಸ್ತ್ರೀಯರು, ತಮ್ಮ ಈ ಲಕ್ಷ್ಮೀಶೋಭನಪದವನ್ನು ವಿಶೇಷವಾಗಿ ಹಾಡಿಕೊಂಡು ಶ್ರೀಮಹಾಲಕ್ಷ್ಮೀಸನ್ನಿಧಾನದಿಂದ ಸುಮಂಗಳೆಯರೆನಿಸಿ, ದಂಪತಿಗಳ ಹಾಗೂ ಕುಟುಂಬವರ್ಗದವರ ಸೌಭಾಗ್ಯವನ್ನು ಸಾಧಿಸಲೆಂಬ ಕಾರಣದಿಂದ, ಸ್ತ್ರೀಯರನ್ನು ಸಂಭೋಧಿಸಿ, ಶ್ರೀವಾದಿರಾಜತೀರ್ಥರವರು ಈ ಹಾಡನ್ನು ರಚಿಸಿರುವರು. ಪುರುಷರಿಗೆ ಹೇಳಿದ್ದಲ್ಲವೆಂದು ಮಾತ್ರ ಸರ್ವಥಾ ಭಾವಿಸಲಾಗದು. ಬ್ರಹ್ಮಾದಿ ಸಕಲ ಮುಕ್ತಿಯೋಗ್ಯ ಜೀವರಿಗೂ ಶ್ರೀಮಹಾಲಕ್ಷ್ಮೀದೇವಿಯ ಅನುಗ್ರಹವು ಅತ್ಯವಶ್ಯಕವು. ನಿತ್ಯಾವಿಯೋಗಿನಿಯಾದ ಲಕ್ಷ್ಮೀದೇವಿಯನ್ನು ತೊರೆದು ಭಗವದುಪಾಸನೆಯೆಂಬುದಿಲ್ಲ.

ಅರ್ಥ :- ಸುರರೊಳು = ಬ್ರಹ್ಮಾದಿ ಸಕಲದೇವತೆಗಳಲ್ಲಿ, ಸುಭಗನಿಗೆ = ಐಶ್ವರ್ಯಾದಿ ಗುಣಗಳಿಂದ ಉತ್ಕೃಷ್ಟನಾದ ( ಪೂರ್ಣನಾದ ), ಅಥವಾ ಸುರರೊಳು = ದೇವತೆಗಳಲ್ಲಿದ್ದು, ಸುಭಗನಿಗೆ = ಮೋಕ್ಷಾದಿ ಸರ್ವಸಂಪತ್ ಪ್ರದನಾದ ಶ್ರೀಹರಿಗೆ, ಶೋಭನವೆನ್ನಿರೆ = ಹೇ ಸ್ತ್ರೀಯರೇ ! (ಕನ್ನಿಕೆಯರೇ! ಗೃಹಿಣಿಯರೇ! ಸಕಲರೂ ) ಮಂಗಳವನ್ನು ಹಾಡಿರಿ. ಸುಗುಣನಿಗೆ = ಸಮಸ್ತ ಕಲ್ಯಾಣಗುಣಪೂರ್ಣನಿಗೆ ( ಆನಂದಾದಿ ಗುಣಸ್ವರೂಪನಿಗೆ ) ಶೋಭನವೆನ್ನೀ = ಮಂಗಳವೆನ್ನಿರಿ ; ತ್ರಿವಿಕ್ರಮರಾಯನಿಗೆ = ಅದ್ಭುತವಾದ ಮೂರು ಹೆಜ್ಜೆಗಳಿಂದ ಬಲಿಚಕ್ರವರ್ತಿಯ ತ್ರೈಲೋಕ್ಯರಾಜ್ಯವನ್ನೇ ಅಪಹರಿಸಿ ಅನುಗ್ರಹಿಸಿದ ವಾಮನಮೂರ್ತಿಗೆ ( ಸೌಂದರ್ಯಸಾರನಿಗೆ ) ಶೋಭನವೆನ್ನಿರೆ = ಮಂಗಳವೆನ್ನಿ ; ಸುರಪ್ರಿಯಗೆ = ದೇವತೆಗಳಿಗೆ ಅತ್ಯಂತಪ್ರಿಯನಾದ ( ದೇವತೆಗಳನ್ನು ಅತಿಶಯವಾಗಿ  ಪ್ರೀತಿಸುವ ) ಶ್ರೀಹರಿಗೆ, ಶೋಭನವೆನ್ನಿ = ಮಂಗಳವೆನ್ನಿ; ಶೋಭಾನೆ = ಮಂಗಳವು, ( ಹೀಗೆ ಮಂಗಳವೆನ್ನುವುದರಿಂದ ನಿಮಗೆ ಮಂಗಳವಾಗುವುದು ).

 ವಿಶೇಷಾಂಶ :- (೧) " ಐಶ್ವರ್ಯಸ್ಯ ಸಮಗ್ರಸ್ಯ ವೀರ್ಯಸ್ಯ ಯಶಸಃ ಶ್ರೀಯಃ । ಜ್ಞಾನವಿಜ್ಞಾನಯೋಶ್ಚೈವ ಷಣ್ಣಾಂ ಭಗ ಇತೀರಣಾ ॥ " ಎಂದರೆ ಪೂರ್ಣೈಶ್ವರ್ಯ , ವೀರ್ಯ, ಯಶಸ್ಸು, ಕಾಂತಿ, ಜ್ಞಾನ ಮತ್ತು ವಿಜ್ಞಾನಗಳೆಂಬ ಪ್ರಧಾನಗುಣಗಳು ' ಭಗ ' ಶಬ್ದದಿಂದ ಹೇಳಲ್ಪಡುತ್ತವೆ. ಇವುಗಳಿಂದ ಸದಾ ಪೂರ್ಣನಾದವನು ' ಸುಭಗನು ' .

(೨) ದೋಷಲೇಶವೂ ಸ್ಪರ್ಶವಿಲ್ಲದ ಪರಮ ಪರಿಶುದ್ಧವಾದ ( ಅಪ್ರಾಕೃತ ) ಸ್ವರೂಪವುಳ್ಳವನಾದ್ದರಿಂದ ಶ್ರೀಹರಿಯು ಮಂಗಳಸ್ವರೂಪನು. ಶ್ರೀಹರಿಗೆ ಮಂಗಳವನ್ನು ಹೇಳುವುದೆಂದರೆ, ಮಂಗಳಸ್ವರೂಪನಾದ ನೀನು ನಿನ್ನ ಭಕ್ತರಿಗೆ ಸದಾ ಮಂಗಳಪ್ರದನಾಗಿ ವಿರಾಜಿಸುತ್ತಿರು ಎಂಬ ಪ್ರಾರ್ಥನೆಯು. ನಿತ್ಯದಲ್ಲಿ ಬರುವ ದುಃಖಾದಿ ಅಶುಭಗಳನ್ನು ಪರಿಹರಿಸಿ ನಿತ್ಯಮಂಗಳವಾದ ಮೋಕ್ಷವನ್ನು ಕರುಣಿಸು ಎಂದರ್ಥ.

(೩) " ವಾಮನ " ಎಂದರೆ ಸಕಲ ಸುಂದರವಸ್ತುಗಳ ಸೌಂದರ್ಯ ನಿಯಾಮಕನು ( ವಾಮ = ಸುಂದರ ). ಶ್ರೀಹರಿಯು ಸ್ವಯಂ ಅಖಂಡಸೌಂದರ್ಯಸಾರ ಮೂರ್ತಿಯೆಂದು ಹೇಳಬೇಕಾದ್ದೇನಿದೆ !


 ವ್ಯಾಖ್ಯಾನ : ಕೀರ್ತಿಶೇಷ ಮಾಧ್ವಭೂಷಣ ದಿ॥ ಶ್ರೀ ಬಿ. ಭೀಮರಾವ್ , ದಾವಣಗೆರೆ..
********

ಸರ್ವಮಂಗಳದಾಯಕಳಾದ ಶ್ರೀಮಹಾಲಕ್ಷ್ಮೀದೇವಿಯ ಮತ್ತು ಶ್ರೀನಾರಾಯಣನ ಮಂಗಳಮಹಿಮೆಯನ್ನು ನಿರೂಪಿಸಲು ಪ್ರವೃತ್ತವಾಗುವ ಈ ಮಂಗಳಸ್ವರೂಪದ ಗ್ರಂಥಕ್ಕೆ , ಶಿಷ್ಟಾಚಾರದಂತೆ ಆರಂಭದಲ್ಲಿ ಶ್ರೀಹರಿಸ್ತುತಿರೂಪದ ಮಂಗಳವನ್ನು ಶ್ರೀಮದ್ವಾದಿರಾಜರು ಹಾಡುತ್ತಾರೆ.

" ವಿಶ್ವಸ್ಥಿತಿಪ್ರಲಯಸರ್ಗಮಹಾವಿಭೂತಿವೃತ್ತಿಪ್ರಕಾಶನಿಯಮಾವೃತಿಬಂಧಮೋಕ್ಷಾಃ । ಯಸ್ಯಾ ಅಪಾಂಗಲವಮಾತ್ರತ ಊರ್ಜಿತಾ ಸಾ ಶ್ರೀರ್ಯತ್ಕಟಾಕ್ಷ ಬಲವತ್ಯಜಿತಂ ನಮಾಮಿ ॥" ( ದ್ವಾದಶಸ್ತೋತ್ರ ) ಎಂಬಲ್ಲಿ - ಯಾವಾಕೆಯು ತನ್ನ ಕುಡಿಗಣ್ಣ ನೋಟದಿಂದ ಸಕಲ ಜಗತ್ತಿನ ಸೃಷ್ಟಿ , ಸ್ಥಿತಿ , ಲಯಾದಿ ಸರ್ವವನ್ನೂ ನಿರ್ವಹಿಸಲು ಸಮರ್ಥಳೋ, ಆ ಮಹಾಲಕ್ಷ್ಮಿಯು ಅಜಿತನಾಮಕ ಶ್ರೀಹರಿಯ ಕೃಪಾಕಟಾಕ್ಷಲೇಶದಿಂದ ಈ ವಿಧ ಅಚಿಂತ್ಯಶಕ್ತಿಯುಳ್ಳವಳಾಗಿರುವಳೆಂದು ಹೇಳಲಾಗಿದೆ. ಈ " ಅಜಿತ "ನ ಸ್ತೋತ್ರವಲ್ಲದೆ ಬೇರಾವುದು ಮಂಗಳವೆನಿಸೀತು !

" ಗೃಹಲಕ್ಷ್ಮಿ "ಯರೆನಿಸಿರುವ ಸ್ತ್ರೀಯರು, ತಮ್ಮ ಈ ಲಕ್ಷ್ಮೀಶೋಭನಪದವನ್ನು ವಿಶೇಷವಾಗಿ ಹಾಡಿಕೊಂಡು ಶ್ರೀಮಹಾಲಕ್ಷ್ಮೀಸನ್ನಿಧಾನದಿಂದ ಸುಮಂಗಳೆಯರೆನಿಸಿ, ದಂಪತಿಗಳ ಹಾಗೂ ಕುಟುಂಬವರ್ಗದವರ ಸೌಭಾಗ್ಯವನ್ನು ಸಾಧಿಸಲೆಂಬ ಕಾರಣದಿಂದ, ಸ್ತ್ರೀಯರನ್ನು ಸಂಭೋಧಿಸಿ, ಶ್ರೀವಾದಿರಾಜತೀರ್ಥರವರು ಈ ಹಾಡನ್ನು ರಚಿಸಿರುವರು. ಪುರುಷರಿಗೆ ಹೇಳಿದ್ದಲ್ಲವೆಂದು ಮಾತ್ರ ಸರ್ವಥಾ ಭಾವಿಸಲಾಗದು. ಬ್ರಹ್ಮಾದಿ ಸಕಲ ಮುಕ್ತಿಯೋಗ್ಯ ಜೀವರಿಗೂ ಶ್ರೀಮಹಾಲಕ್ಷ್ಮೀದೇವಿಯ ಅನುಗ್ರಹವು ಅತ್ಯವಶ್ಯಕವು. ನಿತ್ಯಾವಿಯೋಗಿನಿಯಾದ ಲಕ್ಷ್ಮೀದೇವಿಯನ್ನು ತೊರೆದು ಭಗವದುಪಾಸನೆಯೆಂಬುದಿಲ್ಲ.

ಅರ್ಥ :- ಸುರರೊಳು = ಬ್ರಹ್ಮಾದಿ ಸಕಲದೇವತೆಗಳಲ್ಲಿ, ಸುಭಗನಿಗೆ = ಐಶ್ವರ್ಯಾದಿ ಗುಣಗಳಿಂದ ಉತ್ಕೃಷ್ಟನಾದ ( ಪೂರ್ಣನಾದ ), ಅಥವಾ ಸುರರೊಳು = ದೇವತೆಗಳಲ್ಲಿದ್ದು, ಸುಭಗನಿಗೆ = ಮೋಕ್ಷಾದಿ ಸರ್ವಸಂಪತ್ ಪ್ರದನಾದ ಶ್ರೀಹರಿಗೆ, ಶೋಭನವೆನ್ನಿರೆ = ಹೇ ಸ್ತ್ರೀಯರೇ ! (ಕನ್ನಿಕೆಯರೇ! ಗೃಹಿಣಿಯರೇ! ಸಕಲರೂ ) ಮಂಗಳವನ್ನು ಹಾಡಿರಿ. ಸುಗುಣನಿಗೆ = ಸಮಸ್ತ ಕಲ್ಯಾಣಗುಣಪೂರ್ಣನಿಗೆ ( ಆನಂದಾದಿ ಗುಣಸ್ವರೂಪನಿಗೆ ) ಶೋಭನವೆನ್ನೀ = ಮಂಗಳವೆನ್ನಿರಿ ; ತ್ರಿವಿಕ್ರಮರಾಯನಿಗೆ = ಅದ್ಭುತವಾದ ಮೂರು ಹೆಜ್ಜೆಗಳಿಂದ ಬಲಿಚಕ್ರವರ್ತಿಯ ತ್ರೈಲೋಕ್ಯರಾಜ್ಯವನ್ನೇ ಅಪಹರಿಸಿ ಅನುಗ್ರಹಿಸಿದ ವಾಮನಮೂರ್ತಿಗೆ ( ಸೌಂದರ್ಯಸಾರನಿಗೆ ) ಶೋಭನವೆನ್ನಿರೆ = ಮಂಗಳವೆನ್ನಿ ; ಸುರಪ್ರಿಯಗೆ = ದೇವತೆಗಳಿಗೆ ಅತ್ಯಂತಪ್ರಿಯನಾದ ( ದೇವತೆಗಳನ್ನು ಅತಿಶಯವಾಗಿ  ಪ್ರೀತಿಸುವ ) ಶ್ರೀಹರಿಗೆ, ಶೋಭನವೆನ್ನಿ = ಮಂಗಳವೆನ್ನಿ; ಶೋಭಾನೆ = ಮಂಗಳವು, ( ಹೀಗೆ ಮಂಗಳವೆನ್ನುವುದರಿಂದ ನಿಮಗೆ ಮಂಗಳವಾಗುವುದು ).

 ವಿಶೇಷಾಂಶ :- (೧) " ಐಶ್ವರ್ಯಸ್ಯ ಸಮಗ್ರಸ್ಯ ವೀರ್ಯಸ್ಯ ಯಶಸಃ ಶ್ರೀಯಃ । ಜ್ಞಾನವಿಜ್ಞಾನಯೋಶ್ಚೈವ ಷಣ್ಣಾಂ ಭಗ ಇತೀರಣಾ ॥ " ಎಂದರೆ ಪೂರ್ಣೈಶ್ವರ್ಯ , ವೀರ್ಯ, ಯಶಸ್ಸು, ಕಾಂತಿ, ಜ್ಞಾನ ಮತ್ತು ವಿಜ್ಞಾನಗಳೆಂಬ ಪ್ರಧಾನಗುಣಗಳು ' ಭಗ ' ಶಬ್ದದಿಂದ ಹೇಳಲ್ಪಡುತ್ತವೆ. ಇವುಗಳಿಂದ ಸದಾ ಪೂರ್ಣನಾದವನು ' ಸುಭಗನು ' .

(೨) ದೋಷಲೇಶವೂ ಸ್ಪರ್ಶವಿಲ್ಲದ ಪರಮ ಪರಿಶುದ್ಧವಾದ ( ಅಪ್ರಾಕೃತ ) ಸ್ವರೂಪವುಳ್ಳವನಾದ್ದರಿಂದ ಶ್ರೀಹರಿಯು ಮಂಗಳಸ್ವರೂಪನು. ಶ್ರೀಹರಿಗೆ ಮಂಗಳವನ್ನು ಹೇಳುವುದೆಂದರೆ, ಮಂಗಳಸ್ವರೂಪನಾದ ನೀನು ನಿನ್ನ ಭಕ್ತರಿಗೆ ಸದಾ ಮಂಗಳಪ್ರದನಾಗಿ ವಿರಾಜಿಸುತ್ತಿರು ಎಂಬ ಪ್ರಾರ್ಥನೆಯು. ನಿತ್ಯದಲ್ಲಿ ಬರುವ ದುಃಖಾದಿ ಅಶುಭಗಳನ್ನು ಪರಿಹರಿಸಿ ನಿತ್ಯಮಂಗಳವಾದ ಮೋಕ್ಷವನ್ನು ಕರುಣಿಸು ಎಂದರ್ಥ.

(೩) " ವಾಮನ " ಎಂದರೆ ಸಕಲ ಸುಂದರವಸ್ತುಗಳ ಸೌಂದರ್ಯ ನಿಯಾಮಕನು ( ವಾಮ = ಸುಂದರ ). ಶ್ರೀಹರಿಯು ಸ್ವಯಂ ಅಖಂಡಸೌಂದರ್ಯಸಾರ ಮೂರ್ತಿಯೆಂದು ಹೇಳಬೇಕಾದ್ದೇನಿದೆ !

 ವ್ಯಾಖ್ಯಾನ : ಕೀರ್ತಿಶೇಷ ಮಾಧ್ವಭೂಷಣ ದಿ॥ ಶ್ರೀ ಬಿ. ಭೀಮರಾವ್ , ದಾವಣಗೆರೆ..
*****

||ಲಕ್ಷ್ಮೀಶೋಭಾನೆ ಮತ್ತು ಮಾತೆಯರು||.

ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆ|
ಪಕ್ಷಿವಾಹನ್ನಗೆರಗುವೆ |
ಪಕ್ಷಿವಾಹನ್ನಗೆರಗುವೆ ಅನುದಿನ
 ರಕ್ಷಿಸಲಿ ನಮ್ಮ ವಧುವರರ ||(೧)

ಧನ ಮತ್ತು ಧಾನ್ಯ ಜೊತೆಯಾಗಿ ಬಳಸುವ ಪದಗಳು. ಹಾಗೆಯೇ
ಭಗ ಮತ್ತು ಭಾಗ್ಯ ಪದಗಳೂ ಕೂಡ. ಧಾನ್ಯವು ಧನಪ್ರದವಾದರೆ ಭಾಗ್ಯವು ಭಗಪ್ರದವೆಂದೇ ಅರ್ಥ.

ಐಶ್ವರ್ಯಸ್ಯ ಸಮಗ್ರ್ಯಸ್ಯ 
ವೀರ್ಯಸ್ಯ ಯಶಸಃ ಶ್ರಿಯಃ |
ಜ್ಞಾನವಿಜ್ಞಾನಯೋಶ್ಚೈವ 
ಷಣ್ಣಾಂ ಭಗ ಇತೀರಿತಃ ||

ಅದಕೆಂದೆ 
ದೇವರು ಭಗವಂತ.ಆತನೇ ಸುಭಗ.  
ಆ ಸುಭಗನಿಗೆ ಶೋಭನ ಬಯಸಿದರೆ ನಮ್ಮ ಮಾತೆಯರೆಲ್ಲ ಭಾಗ್ಯವಂತರೆನಿಸುವುದರಲ್ಲಿ ಸಂದೇಹವಿಲ್ಲ.

ಇಷ್ಟಂ ದೈವಂ ಹರಿಃ ಸಾಕ್ಷಾತ್ 
ಲಕ್ಷ್ಮೀರ್ಭಾಗ್ಯಸ್ಯ ದೇವತಾ |

ಅಂಥಹ ಲಕ್ಷ್ಮೀನಾರಾಯಣರ ಪಾದಗಳೇ ನಮಗೆ ರಕ್ಷಾಸ್ಥಾನಗಳು. ಊರಿದ ಹೆಜ್ಜೆ ಅಲುಗಾಡದಂತೆ ಅವರ ಪಾದಗಳನ್ನು ಹಿಡಿದರೆ ನಮಗೆ ಭಗವದನುಗ್ರಹ ಖಂಡಿತ. ಅಡಿಪಾಯ ಗಟ್ಟಿ ಇದ್ದರೆ ಬಾಳೆಂಬ ಭವನ ಮುಗಿಲೆತ್ತರ ಏರಿದರೂ ಸುಭದ್ರ, ಸುಮಂಗಳ.

ಮಂಗಳಾಚರಣೆ ಮಾಡಿ ವಿಘ್ನ ಪರಿಹರಿಸಿಕೊಳ್ಳುವತ್ತ ಶೋಭನಪದದ ಮುಂದಿನ ನಡೆ ಸುಂದರ. 

ಪಕ್ಷಿವಾಹನ್ನಗೆರಗುವೆ. ಗರುಡಗಮನನಾದ ಹರಿಗೆರಗುವ ಪರಿ. ವಿಷಾಯುಧಗಳಾದ ಸರ್ಪಸಂತತಿಗೆ ವೈರಿ ಗರುಡ. ಹಾಗಾಗಿ ಪಕ್ಷಿವಾಹನನ ಸ್ಮರಣೆಯಿಂದ ವಿಷಬಾಧೆ ಪರಿಹಾರ. ವಿಷವೆಂದರೆ ನಂಜು. ಅತಿ ಹೆಚ್ಚು ನಂಜು ಮತ್ಸರಗಳ ಕಾಟದಿಂದ ತೊಂದರೆಗೀಡಾಗುವ ಮಹಿಳೆಯರು ಈ ಶೋಭನ ಪದವನ್ನು ಭಕ್ತಿಯಿಂದ ಪಠಿಸಿದರೆ ಆ ದುಷ್ಪರಿಣಾಮಗಳಿಂದ ಹೊರ ಬರುವ ಸಾಧ್ಯತೆಯಿದೆ.

ರಕ್ಷಿಸಲಿ ನಮ್ಮ ವಧುವರರ.  ಶ್ರೀವಾದಿರಾಜತೀರ್ಥರು ಈ ಶೋಭನಪದವನ್ನು ರಚಿಸಿ  ವಿಷಬಾಧೆಯಿಂದ ಬಳಲಿದ ಮದುಮಗನನ್ನು ಬದುಕಿಸಿದ ಐತಿಹ್ಯವಿದೆ. ಅಲ್ಲಿ ಮದುಮಗ ಮದುಮಗಳು ಎಂದರೆ ಲಕ್ಷ್ಮೀನಾರಾಯಣರ ಸಾನ್ನಿಧ್ಯವುಳ್ಳವರೆಂದರ್ಥ. ವಾದಿರಾಜರು ಮಹಾತ್ಮರು. ಅವರಿಗೆ ವಧೂವರರಲ್ಲಿ ಆ ರೂಪವೇ ಕಂಡದ್ದಿರಬೇಕು. ಹಾಗಾಗಿ ಈ ಪದಗಳಿಂದ ಲಕ್ಷ್ಮೀನಾರಾಯಣರ ಸ್ತುತಿ ಮಾಡಿ ಲೋಕಕಲ್ಯಾಣವುಂಟು ಮಾಡಿದರೆಂದೇ ತಿಳಿಯುವುದಕ್ಕೆ ಅಡ್ಡಿಯಿಲ್ಲ. 

ಮದುವೆಯ ಪ್ರಯೋಗಮಂತ್ರಗಳೂ ಹೇಳುವುದು ಅದನ್ನೇ ಅಲ್ಲವೇ.?! 

ಶ್ರೀಧರರೂಪಾಯ ವರಾಯ ಶ್ರೀರೂಪಿಣೀಂ ಇಮಾಂ ಕನ್ಯಾಂ ಪ್ರದಾಸ್ಯಾಮಿ...."

ಮದುವೆಯ ಮಂಟಪಗಳಲ್ಲಿ ಸುಮಂಗಲೆಯರು ಶೋಭನ ಪದಗಳನ್ನು ಹೇಳುತ್ತಾ ಮಾಂಗಲ್ಯಸರವನ್ನು ಮುತ್ತೈದೆಯರ ಕೊರಳಿಗೆ ಮುಟ್ಟಿಸಿ ಮತ್ತೆ ವರನಿಂದ ಕಟ್ಟಿಸುತ್ತಾರೆ.  

ಮನೆಯಲ್ಲಿ ಹಿರಿಯ ಮುತ್ತೈದೆಯರು ದಿನನಿತ್ಯ ಈ ಶೋಭನಪದವನ್ನು ಹೇಳಿದರೆ ಮಗ ಮಗಳು  ಮಕ್ಕಳು ಸೊಸೆ ನಾದಿನಿಯರು ದೇವರಕೃಪೆಗೆ ಪಾತ್ರರಾಗುತ್ತಾರೆ. 

ಈ ಶೋಭನಪದದಿಂದ ದಾಂಪತ್ಯವು ಅನ್ಯೋನ್ಯವಾಗಿರುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ಮನೆಯ ಹಿರಿಯ ಮುತ್ತೈದೆಯರು ಈ ಪದವನ್ನು ೮-೧೦ ಬಾರಿ ಪಠಿಸಿ ಮಕ್ಕಳಿಗೆ ದೇವರ ಗಂಧಪ್ರಸಾದ ತೀರ್ಥಕ್ಕೆ ಅಭಿಮಂತ್ರಿಸಿ ಕೊಟ್ಟರೆ ಫುಡ್‌ಪಾಯಿಸನ್‌  ಹೊಟ್ಟೆನೋವು ಇತ್ಯಾದಿ ಸಣ್ಣಪುಟ್ಟ ಅನಾರೋಗ್ಯಗಳು ತತ್‌ಕ್ಷಣ ಗುಣಮುಖವಾಗುತ್ತವೆ. 
ಸಂಸಾರವನ್ನು ನಿಭಾಯಿಸುವ ಮಾತೆಯರಿಗೆ ಈ ಒಂದು ಪದ ಅನೇಕ ಬಯಕೆಗಳನ್ನೀವ ದಿವ್ಯವರ. ಸಂಘ ಕಟ್ಟಿಕೊಂಡು ಶೋಭಾನೆ ಪದಗಳನ್ನು ಆಂದೋಲನವೆಂಬಂತೆ ಪಠಿಸುತ್ತಾ ಸಮಾಜದ ಒಳಿತಿಗಾಗಿ ತೊಡಗಿಸಿಕೊಂಡ ಇಂಥಹ ಮಹಿಳೆಯರಿಗೆ ದೀರ್ಘದಂಡಪ್ರಣಾಮಗಳು. 
✍️ ಅನಂತಮೂರ್ತಿ ಬೆಳ್ಳರ್ಪಾಡಿ.
****

ಲಕ್ಷ್ಮೀಶೋಭಾನೆ ಮತ್ತು ಮಾತೆಯರು.
Day#2
ಪಾಲಸಾಗರವನ್ನು ಲೀಲೆಯಲಿ ಕಡೆಯಲು|
ಬಾಲೆ ಮಹಲಕ್ಷುಮಿ ಉದಿಸಿದಳು |
ಬಾಲೆ ಮಹಲಕ್ಷುಮಿ ಉದಿಸದಳಾ ದೇವಿ
ಪಾಲಿಸಲಿ ನಮ್ಮ ವಧುವರರ|| |೨)
✍️
ಜಗದ ಜನನಿ ಮಹಾಲಕ್ಷ್ಮಿಗೆ ಉದಯ. ಜನನ ಮರಣವಿಲ್ಲದ ಅಜ ನಾಮಕನಾದ ಭಗವಂತನಿಗೆ ಸರಿಯಾದ ಜತೆ ಅಂದ ಮೇಲೆ ಆಕೆಗೂ ಜನನವೆಂಬುವುದಿಲ್ಲ. ಅಂತಲೇ ಹಾಲ್ಗಡಲಲ್ಲಿ ಆಕೆಯ ಉದಯ. ನಾರಾಯಣ ದೇವರು ನಾಟಕದಂತೆ ಮಾಡಿ ಲೀಲೆಯನ್ನು ತೋರುವ ನೀಲಮೇಘಶ್ಯಾಮ. ದೇವಾಧಿದೇವತೆಗಳು ಹರಿಯ ಲೀಲೆಗೆ ಒಳಪಟ್ಟು ಕ್ಷೀರಸಾಗರ ಕಡೆದಾಗ ಮಹಾಲಕ್ಷ್ಮೀ ಉದಯವಾಗಿ ಲೋಕಕಲ್ಯಾಣವುಂಟಾಯಿತು. 
ಅಂಥಹ ಉದಯೋನ್ಮುಖ ಮಹಾಲಕ್ಷ್ಮಿ ವಧೂವರರನ್ನು ಕಾಪಾಡಲಿ.

ಮನೆಯಲ್ಲಿ ಹಾಲು-ಮೊಸರು ಬೆಣ್ಣೆ ಗಿಣ್ಣು ತುಪ್ಪ ಹೆಪ್ಪು ಮಜ್ಜಿಗೆ ಹೀಗೆ ಹಾಲಿನ ಉತ್ಪನ್ನಗಳ ಹೊಣೆ ಹೆಂಗಸರದ್ದೇ... ಗಮನಿಸಿ...

 ಹಾಲು ಕೆಟ್ಟರೆ ಅದರಷ್ಟು ದುರ್ವಾಸನೆ ಇನ್ನೊಂದಿಲ್ಲ. ಅಷ್ಟೇ ಅಲ್ಲದೆ ಒಂದು ಹಂತದ ಹಾಲಿನ ಕುದಿತದ ಹದ ತಿಳಿದರೆ ಮಾತ್ರ ಮೊಸರು ಬೆಣ್ಣೆ ತುಪ್ಪ ಮುಂತಾದ ಗವ್ಯಗಳನ್ನು ಪಡೆಯಲು ಸಾಧ್ಯ. ಅಷ್ಟರ ಮಟ್ಟಿನ ಲೆಕ್ಕಾಚಾರದ ಎಚ್ಚರವಿದ್ದವರ ಕೈಗುಣ ಮಾತ್ರ ಹಾಲಿನ ನಿಷ್ಪನ್ನಗಳ ಯಶಸ್ಸಿಗೆ ಕಾರಣವಾದೀತು. ಇಲ್ಲವಾದರೆ ಮೊಸರು ಮುಖ ಸಿಂಡರಿಸುವಷ್ಟೂ ಹುಳಿಯಾದೀತು. ಮಜ್ಜಿಗೆ ಅಡ್ಡವಾಸನೆ ಬಡಿಯುತ್ತದೆ. ಮೊಸರು ನೂಲುನೂಲಿನಂತಾದೀತು. ಬೆಣ್ಣೆ ಕೆಟ್ಟರೆ ತುಪ್ಪವೂ ಮೂಗಿಗೆ ಬಡಿಯುತ್ತದೆ. ಈ ಎಲ್ಲದರ ಚೊಕ್ಕತನ ನಿಭಾಯಿಸುವುದೇ ದೊಡ್ಡ ಸವಾಲು. ಅದೊಂದು ಸುಲಭದ ಸಾಹಸವೇನಲ್ಲ.! ಅಂಥಹ ಮಾತೃರೂಪಿಣಿಯರನ್ನು ಹಾಲ್ಗಡಲ ಬಾಲೆ ಸಲಹಲಿ.

ಹಾಲಿನಂಥಹ ಸಂಸಾರದಲ್ಲಿ ಹುಳಿ ಹಿಂಡುವ ಮಂದಿಗೇನೂ ಕಮ್ಮಿಯಿಲ್ಲ. ಅದರ ಪರಿಣಾಮ ಮೊದಲಾಗಿ ಬಡಿಯುವುದು ಮನೆಯ ಸುಮಂಗಲಿಯರಿಗೇ.. ಅಂಥಹ ದುಷ್ಪರಿಣಾಮದಿಂದಲೂ ಮಹಿಳೆಯರು ಪಾರಾಗಲು ಈ ಪದದ ಪಠಣ ಸಹಾಯವಾಗಲಿದೆ.

ಪ್ರತಿಯೊಂದು ಪದಗಳೂ ಪ್ರತ್ಯೇಕಪ್ರತ್ಯೇಕ ಫಲವುಳ್ಳದ್ದು. ಕಾಮನಾಪರತ್ವೇನ ಆಯಾಯಾ ಪದಗಳನ್ನು ೧೦-೨೮-೪೮-೧೦೮ ಸಂಖ್ಯೆಯ ಆಧಾರದಲ್ಲಿ ಪಠಿಸಿ ಅಭೀಷ್ಟ ಹೊಂದ ಬಹುದು.

ಮಹಾಲಕ್ಷ್ಮೀ ಉದಯವಾಗುವ ಸಂಗತಿ ಹೇಳಿದ್ದರಿಂದ ಕನ್ಯಾಲಾಭ ಫಲಶ್ರುತಿವುಳ್ಳ ಪದವಿದು. ಕೀರ್ತಿಪ್ರದ, ಸುಕನ್ಯಾ ಜನನ ಮುಂತಾದ ಅಭೀಷ್ಟಗಳು ಇದರಿಂದ ದೊರೆಯಲಿದೆ. 

ಇತ್ತೀಚೆಗಂತೂ ಮನೆಗೊಬ್ಬಳು ಸೊಸೆಯನ್ನು ತಂದುಕೊಳ್ಳುವುದೇ ಬಹು ಪ್ರಯಾಸದ ಸಂಗತಿ. ಅದರಿಂದಾಗುವ ತಲೆಬಿಸಿ ಅರಿತ ಮಂದಿಗಷ್ಟೇ ಆ ಕಷ್ಟ ಎಂಥಾದ್ದು ಎನ್ನುವುದು ತಿಳಿದೀತು. ಮನೆಯ ಮಗನಿಗೆ ಯೋಗ್ಯ ವಧು ಪ್ರಾಪ್ತಿಯಾಗಲು ತಾಯಿ ಅಥವಾ ಮನೆಯ ಹಿರಿಯ ಸುಮಂಗಲೆಯರು ತುಳಸೀ ಗೆ ತುಪ್ಪದ ದೀಪವಿಟ್ಟು ಈ ಪದವನ್ನು ಯಥಾಸಂಖ್ಯೆಯಷ್ಟು ಜಪಿಸುವುದರಿಂದ ಫಲಪ್ರಾಪ್ತಿಯಾಗಲಿದೆ. ಸುಗುಣೆಯಾದ ಮಗಳೊಬ್ಬಳನ್ನು ಪಡೆಯಲು ಬಯಸುವ ಮಂದಿಯೂ ಈ ಪದದ ಅನುಸಂಧಾನದಿಂದ ಅಭೀಷ್ಟವನ್ನು ಪಡೆಯಬಹುದು.

ಹಾಲಿನಂಥಹ ಸಂಸಾರವನ್ನು ಕೆಡದಂತೆ ಚೊಕ್ಕತನದಿಂದ ನಿಭಾಯಿಸುವ ಗೃಹಲಕ್ಷ್ಮಿಯರನ್ನು ಹಾಲಸಾಗರದ ಬಾಲೆ ಮಹಲಕ್ಷುಮಿ ಸಲಹಲಿ. 

✍️ ಅನಂತಮೂರ್ತಿ ಬೆಳ್ಳರ್ಪಾಡಿ.
****
||ಲಕ್ಷ್ಮೀಶೋಭಾನೆ ಮತ್ತು ಮಾತೆಯರು||.day#3

ಬೊಮ್ಮನ ಪ್ರಳಯದಲಿ ತನ್ನರಸಿಯೊಡಗೂಡಿ 
ಸುಮ್ಮನೆಯಾಗಿ ಮಲಗಿಪ್ಪ |
ನಮ್ಮ ನಾರಾಯಣಗೂ ಈ ರಮ್ಮೆಗಡಿಗಡಿಗೂ|
ಜನ್ಮವೆಂಬುದು ಅವತಾರ ||೩||

ಸೃಷ್ಟಿ ಸ್ಥಿತಿ ಲಯ ಈ ಮೂರೂ ಎಲ್ಲದಕ್ಕೂ ಎಲ್ಲರಿಗೂ  ಇವೆ.  ಆದರೆ ಲಕ್ಷ್ಮೀನಾರಾಯಣರಿಗಿಲ್ಲ. ಚತುರ್ಮುಖನ ತನಕ ಪ್ರಳಯವಿದೆ. ನಾರಾಯಣನು ಲಕ್ಷ್ಮೀಯೊಡನೆ ಆಲದೆಲೆಯಲ್ಲಿ ಸುಖನಿದ್ದೆ ಮಾಡುತ್ತಾನೆ. ಇದುವೆ ಯೋಗನಿದ್ರೆ. 

ಅದೆಷ್ಟೋ ಕಾಲ ಸಂಸಾರದ ತಿರುಗಣೆಯಲ್ಲಿ ಸಿಲುಕಿ ಬಳಲಿದ ಜೀವರನ್ನು ಕೆಲಕಾಲ ತನ್ನುದರದಲಿಟ್ಟುಕೊಂಡು ಸಲಹುತ್ತಾನೆ. ಆ ವೇಳೆಯಲ್ಲೂ ಆತನ ಕರುಣೆಯಿಂದಲೇ ಮಹಾತಾಯಿ ಲಕ್ಷ್ಮೀದೇವಿಯೂ ಅಪರಂಪಾರ ಜಲಧಿಯಲ್ಲಿ ಆಲದೆಲೆಯಾಗಿ ಆತನ ಮೈಸೋಂಕಿನ ಕಣ್ಗಾಪಿನಲ್ಲಿ ಬೆಚ್ಚಗಿರುತ್ತಾಳೆ. ಮತ್ತೆಲ್ಲ ಜೀವರಿಗೆ ಜನ್ಮ ಇದೆ.  ಲಕ್ಷ್ಮೀನಾರಾಯಣರು ತಮ್ಮ ವಿಕಸನವನ್ನು ಅವತಾರ ರೂಪದಲ್ಲಿ ಜಗತ್ತಿಗೆ ತೋರುತ್ತಾರೆ. ಅವರಿಗೆ ಜನ್ಮಬಂಧನವಿಲ್ಲ. ಅವರು ಅವತಾರ ಲೀಲೆಯನ್ನೇ ತೋರುವುದು. ಹೀಗೆ ಎಂದೆಂದೂ ಬಿಟ್ಟಿರದ ಲಕ್ಷ್ಮೀದೇವಿಯು ಮತ್ತೆ ಉದಯಿಸಿದ ಕತೆ ಜಗನ್ನಾಥನ ಲೀಲಾವಿನೋದದ ಅಂಗ. ಹಾಗಾಗಿ ಅವತಾರವೇ ಅವರ ಜನ್ಮ.

ಇವರೀರ್ವರೂ ಮತ್ತೆಮತ್ತೆ ಮನ್ವಂತರಗಳೆಡೆಯಲ್ಲಿ ಸಮುದ್ರಮಥನದಂಥಹ ಸಂದರ್ಭಗಳನ್ನು ಬಳಸಿ ಕಲ್ಯಾಣೋತ್ಸವವನ್ನು ಆಚರಿಸಿಕೊಳ್ಳುತ್ತಲೇ ಇರುತ್ತಾರೆ. ಇದರ ಮರ್ಮವನ್ನರಿತ ಮಂದಿ ಒಳಿತನ್ನು ಕಾಣುತ್ತಾರೆ.

ಈ ಪದ ಪಠಣದಿಂದ ದಂಪತಿಗಳು ಜೊತೆಯಾಗಿ ಬದುಕುವ ಯೋಗ ಕೂಡಿ ಬರುತ್ತದೆ. ಅರ್ಥಾನುಸಂಧಾನದ ಅನುಷ್ಠಾನದಿಂದ ಅಗಲುವಿಕೆಯ ಸಂದರ್ಭ ತಪ್ಪಿ ಕೂಡಿ ಬಾಳುವ ಸುಖ ಲಭಿಸುತ್ತದೆ.

ಈಗಿನ ಆಧುನಿಕ ಮಹಿಳೆ ದುಡಿಯುವ ಅನಿವಾರ್ಯತೆಗೆ ದೂರದೂರಿಗೆ ವರ್ಗವಾಗಿ ಪಡಬಾರದ ಪಾಡು ಅನುಭವಿಸುವುದನ್ನು ಕಾಣುತ್ತೇವೆ. ಗಂಡನೂ ವರ್ಗವಾಗಿ ದೂರವಿದ್ದು ಮಕ್ಕಳನ್ನು ಓದಿನ ಸಲುವಾಗಿ ಹಾಸ್ಟೆಲ್‌ನಂಥಹ  ವಸತಿಯಲ್ಲಿರಿಸಿ ಚಡಪಡಿಸುವ ಮಂದಿಗೇನೂ ಕಮ್ಮಿಯಿಲ್ಲ. ಹಾಗಿದ್ದೂ ಕೂಡಿ ಬಾಳುವ ಹಂಬಲವುಳ್ಳ ಮಂದಿ ಈ ಪದವೊಂದನ್ನೇ ಶುಕ್ರವಾರ ದಿನ ೧೦೮ ಬಾರಿ ಪಠಿಸಿ ಲಕ್ಷ್ಮೀನಾರಾಯಣರನ್ನು ನೆನೆದು ಪ್ರಾರ್ಥಿಸಿಕೊಂಡರೆ ಅಭೀಷ್ಟ ಕೈಗೂಡಿದ ಉದಾಹರಣೆಗಳಿವೆ.

ಶ್ರೀಕೃಷ್ಣನ ನುಡಿಯೊಂದು ಗೀತೆಯಲ್ಲಿ ಈ ತೆರನಾಗಿದೆ.

ಯೋ ಯೋ ಯಾಂ ಯಾಂ ತನುಂ ಭಕ್ತಃ|
ಶ್ರದ್ಧಯಾರ್ಚಿತುಮಿಷ್ಯತಿ |
ತಸ್ಯ ತಸ್ಯಾಚಲಾಂ ಶ್ರದ್ಧಾಂ 
ತಾಮೇವ ವಿದಧಾಮ್ಯಹಮ್ ||(೭-೨೦)

ಯಾರ್ಯಾರು ಭಗವಂತನ  ಯಾವ್ಯಾವ ರೂಪವನ್ನು ಭಕ್ತಿ ಮಾಡುವರೋ ಅವರವರ ಅಂತಹ ಕುಸಿಯದ  ನಂಬಿಕೆಯನ್ನೇ ಗಟ್ಟಿಗೊಳಿಸುತ್ತೇನೆ.

ಆತನು ಲಕ್ಷ್ಮೀಯ ಜತೆಗೇ ಇರುವಾತ. ಲಕ್ಷ್ಮೀದೇವಿಯು ನಾರಾಯಣನನ್ನು ಬಿಟ್ಟಿರುವುದಿಲ್ಲ. ಯಾವ್ದಾದರೊಂದು ರೂಪಿನಿಂದ ಅವನ ಬಳಿಯೇ ಇರುತ್ತಾಳೆ ಎಂಬ ಬಲವಾದ ನಂಬಿಕೆಯಿಟ್ಟು ಭಕ್ತಿ ಮಾಡಿದರೆ ಅಂಥಹ ಭಕ್ತರಿಗೂ ಅಂಥಾದ್ದೇ ಅನುಗ್ರಹವನ್ನುಂಟು ಮಾಡುವ ಕರುಣಾಳು ಭಗವಂತ.

ಅವಿಭಕ್ತ ಕುಟುಂಬವೆಂತೂ ಅರ್ಥ ಕಳೆದುಕೊಂಡು ಅದೆಷ್ಟು ಕಾಲವಾಯಿತೋ... ಈಗ ಇದ್ದೊಂದು ಸಂಸಾರವಾದರೂ ನೆಟ್ಟಗೆ ನೆಮ್ಮದಿಯಿಂದ ಬದುಕಬೇಕಾದರೆ ಇಂಥಹ ಪದಗಳ ಅನುಸಂಧಾನ ಸಹಿತ  ಅನುಷ್ಠಾನ ಬಲು ಮುಖ್ಯ. 

ಈ ನಿಟ್ಟಿನಲ್ಲಿ ಶೋಭಾನೆ ಪಠಿಸುವ ಸುಮಂಗಲಿಯರ ಅಭೀಷ್ಟಗಳು ಈಡೇರುವಂತಾಗಲಿ. ಆ ಲಕ್ಷ್ಮೀನಾರಾಯಣರ ಅನುಗ್ರಹ ಸದಾ ಲಭಿಸಲಿ.
✍️ ಅನಂತಮೂರ್ತಿ ಬೆಳ್ಳರ್ಪಾಡಿ.
***

ಲಕ್ಷ್ಮೀಶೋಭಾನೆ ಮತ್ತು ಮಾತೆಯರು|. Day#4


ಕಂಬುಕಂಠದ ಸುತ್ತ ಕಟ್ಟಿದ ಮಂಗಳಸೂತ್ರ 

ಅಂಬುಜವೆರಡು ಕರಯುಗದಿ |

ಅಂಬುಜವೆರಡು ಕರಯುಗದಿ ಧರಿಸಿ ಪೀ-

ತಾಂಬರವುಟ್ಟು ಮೆರೆದಳೆ|| ||೪||


ತಾಯಿ ಲಕ್ಷ್ಮೀದೇವಿಯ ಕೊರಳು ಶಂಖದಂತೆ ಶುಭ್ರ ಮತ್ತು ಸುಂದರ. ಅಂಥಹ ಕೊರಳಿಗಾತುಕೊಂಡ ಮಂಗಳಸೂತ್ರವೂ ಬಲು ಚೆಲುವುಳ್ಳದ್ದು.  ಎರಡೂ ಕರಗಳಲ್ಲಿ ಕಮಲಗಳನ್ನು ಹಿಡಿದುಕೊಂಡವಳು. ಮೈಯಿಡೀ ಬಂಗಾರದ ಬಟ್ಟೆ ತೊಟ್ಟವಳು. ಅದರಿಂದ ಹೊಳೆವವಳು ಕೂಡ.


ಜನ್ಮವೆಂಬುವುದು ಲಕ್ಷ್ಮೀನಾರಾಯಣರಿಗಿಲ್ಲ ಎನ್ನುವುದನ್ನೇ ನಿರೂಪಿಸುತ್ತಾರೆ. ಈಗ ತಾನೆ ಉದಿಸಿದ ಮಹಾಲಕ್ಷ್ಮಿಯ ಕೊರಳಲ್ಲಾಗಲೇ ಮಂಗಳಸೂತ್ರ ಕಾಣುತ್ತಿದೆ.! ಹುಟ್ಟಿದುದಾದರೆ ಬರಿ ಮೈ ಇರಬೇಕಿತ್ತು. ಆಭರಣಸಹಿತ ಮೂಡಿಬಂದುದು ಅವತಾರ ಎನ್ನುವ ಸಂಗತಿಯನ್ನೆ ದೃಢೀಕರಿಸುತ್ತದೆ. 


ನಾರಾಯಣದೇವರನ್ನು ಬಿಟ್ಟಿರದ ತಾಯಿ ಲಕ್ಷ್ಮೀಯ ಕಂಠವನ್ನು  ನಿತ್ಯ ಮುತ್ತೈದೆತನದ ಮಂಗಳಸೂತ್ರವೂ ಬಿಟ್ಟಿರುವುದಿಲ್ಲ.


ಈ ಪದವು ಸುಮಂಗಲಿಯರ ಮುತ್ತೈದೆಭಾಗ್ಯವನ್ನು ಕಾಪಾಡುತ್ತದೆ. ಮುತ್ತೈದೆತನದ ಸಕಲಾಭರಣವನ್ನು ಮಂಗಳಸೂತ್ರವನ್ನೂ ಸಂರಕ್ಷಿಸಿಕೊಡುತ್ತದೆ ಈ ಪದ. 


ಹರಿದ್ರಾ ಕುಂಕುಮಂ ಚೈವ 

ಸಿಂಧೂರಂ ಕಜ್ಜಲಂ ತಥಾ |*

ಕೂರ್ಪಾಸಕಂ ಚ ತಾಂಬೂಲಂ 

ಮಾಂಗಲ್ಯಾಭರಣಂ ಶುಭಮ್ ||

ಕೇಶಸಂಸ್ಕಾರಕಂ ಚೈವ 

ಕರ-ಕರ್ಣಾದಿ ಭೂಷಣಮ್ |

ಭರ್ತುರಾಯುಷ್ಯಮಿಚ್ಛಂತೀ 

ದೂರಯೇನ್ನ ಪತಿವ್ರತಾ ||(ಸ್ಕಾಂದಪುರಾಣ)


ಪಾದಾಂಗುಲೀಯಕಂ ಚೈವ 

ನಾರೀಮುದ್ರಾಃ ಪ್ರಕೀರ್ತಿತಾಃ ||


ಹೀಗೆ ಸುಮಂಗಲಿಯರ ಈ ಎಲ್ಲ ಮುತ್ತೈದೆ ಲಕ್ಷಣಗಳ ಅಧಿದೇವತೆ ಲಕ್ಷ್ಮೀದೇವಿ. ಬಹುಕಾಲ ಮುತ್ತೈದೆಯಾಗಿರಲು ಈ ಪದದ ಪುರಶ್ಚರಣೆ ಸಹಾಯಕವಾಗುತ್ತದೆ.


ಅಷ್ಟೇ ಅಲ್ಲದೆ ಪದ್ಮ ನಿಧಿಯ ಸಂಕೇತ. ಎರಡೂ ಕೈಗಳಲ್ಲಿ ಧರಿಸಿದ ಕಮಲಗಳಿಂದ ನಿತ್ಯ ಮುತ್ತೈದೆತನದ ಜತೆಗೆ ಸಂಪತ್ತನ್ನೂ ತಾಯಿ ಹರಸುತ್ತಾಳೆ. ಈ ಶೋಭಾನೆ ಪಠಣ ಮಾಡುವ ಸುಮಂಗಲಿಯರು ಮುತ್ತೈದೆತನವನ್ನು ಕಾಪಾಡಿಕೊಳ್ಳುವ ಅಭೀಷ್ಟವನ್ನು ಪಡೆಯುತ್ತಾರೆ ಹಾಗೆಯೇ ಸಂಪತ್ತುಗಳಿಗೆ ಭಾಗೀದಾರರೂ ಆಗುತ್ತಾರೆ.


ಮನೆಗೆ ಬಂದ ಸುಮಂಗಲಿಯರಲ್ಲಿ ಮಹಾಲಕ್ಷ್ಮೀ ಸನ್ನಿಧಾನವನ್ನು ಕಂಡುಕೊಳ್ಳುತ್ತಾ ಅವರಿಗೆ ಅರಿಶಿನ-ಕುಂಕುಮ ಹಚ್ಚಿ ಹೂ-ಹಣ್ಣು ನೀಡಿ ಸತ್ಕರಿಸುವುದರಿಂದ ಮನೆ ಮತ್ತು ಮಹಿಳೆಯರ ಏಳಿಗೆ ಖಂಡಿತ ಸಾಧ್ಯವಿದೆ. ಗೌರವಾನ್ವಿತ ಘನಪರಂಪರೆಯ ಮನೆತನದಲ್ಲಿ ಈ ಸಂಪ್ರದಾಯ ತಲೆತಲಾಂತರದಿಂದ ನಡೆದು ಬರುತ್ತಿದೆ. ಇಂಥಹ ಆಚಾರಗಳನ್ನು ಉಳಿಸಿ ಬೆಳೆಸಿಕೊಂಡು ಬಂದು ಮನೆ ಮನಗಳನ್ನು ಬೆಳಗಿದ ಸುಮಂಗಲೀ ಮಹಿಳೆಯರನ್ನು ಮಹಾಲಕ್ಷ್ಮೀಯು ಪೊರೆಯಲಿ.

✍️ ಅನಂತಮೂರ್ತಿ ಬೆಳ್ಳರ್ಪಾಡಿ.

***


|ಲಕ್ಷ್ಮೀಶೋಭಾನೆ ಮತ್ತು ಮಾತೆಯರು.||day#5


ಒಂದು ಕರದಿಂದ ಅಭಯವನೀವಳೆ ಮ-

ತ್ತೊಂದು ಕೈಯಿಂದ ವರಗಳ |

ಕುಂದಿಲ್ಲದಾನಂದ ಸಂದೋಹವುಣಿಸುವ 

ಇಂದಿರೆ ನಮ್ಮ ಸಲಹಲಿ ||೫||


ಅಭಯ ವರ ಈ ಎರಡೂ ಮುದ್ರೆಗಳನ್ನು ಮೂಡಿಬರುವ ವೇಳೆಗಾಗಲೇ ತೋರುತ್ತಿದ್ದಳು ಲಕ್ಷ್ಮೀ. ಮಕ್ಕಳಿಗೆ ಧೈರ್ಯ ತುಂಬುವ ತಾಯಿಯಂತೆ. ಮಕ್ಕಳನ್ನು ವಹಿಸಿಕೊಳ್ಳುವ ಮಮತಾಮಯಿಯಂತೆ.  ಹಾಗಿದ್ದ ಮೇಲೆ ಉಳಿದೆಲ್ಲ ದೇವರ್ಕಳೂ ಮಕ್ಕಳಂತಾಗಲಿಲ್ಲವೇ.. ಹಾಗಾಗಿ ಲಕ್ಷ್ಮೀ ಸ್ವಯಂವರ ಮಾಲೆ ಹಾಕುವುದು ನಾರಾಯಣನಿಗೇ ಅಂತ ಮೊದಲೇ ಸಾರಿದಂತಾಗಲಿಲ್ಲವೇ... ಹೀಗಿದೆ ಜಗಜನನಿಯ ಗಟ್ಟಿ ನಿರ್ಧಾರ.


ಹಣದ ಹಿಂದೆ ಬಿದ್ದು ಹಲುಬುವ ಮಂದಿ ಹೇಳಿದರು ಲಕ್ಷ್ಮಿ ಚಂಚಲೆ. ಆದರೆ ಅವಳು ನಿಂತಲ್ಲಿ ನಿಲ್ಲುವುದು ನಾರಾಯಣನಿದ್ದಲ್ಲಿ ಮಾತ್ರ ಎಂದು ಸೂಚಿಸಿದಳು. ಅದುವೇ ದೈವೀಸಂಪತ್ತುಳ್ಳ ಸ್ಥಳ. ಭಗವಂತ ಗೀತೆಯಲ್ಲಿ ನುಡಿದ..


ಅಭಯಂ ಸತ್ವಸಂಶುದ್ಧಿಃ 

ಜ್ಞಾನಯೋಗವ್ಯವಸ್ಥಿತಿಃ |

ದಾನಂ ದಮಶ್ಚ ಯಜ್ಞಶ್ಚ 

ಸ್ವಾಧ್ಯಾಯಸ್ತಪ ಆರ್ಜವಮ್ ||

ಅಹಿಂಸಾ ಸತ್ಯಮಕ್ರೋಧಃ 

ತ್ಯಾಗಃ ಶಾಂತಿರಪೈಶುನಮ್ |

ದಯಾ ಭೂತೇಷ್ವಲೋಲುಪ್ತ್ವಂ 

ಮಾರ್ದವಂ ಹ್ರೀರಚಾಪಲಮ್ ||

ತೇಜಃ ಕ್ಷಮಾ ಧೃತಿಃ ಶೌಚಂ 

ಅದ್ರೋಹೋ ನಾತಿಮಾನಿತಾ |

ಭವಂತಿ ಸಂಪದಂ ದೈವೀಂ

ಅಭಿಜಾತಸ್ಯ ಭಾರತ ||(೧೬-೧,೨,೩)


ಅಭಯವನೀವ ಮಹಾಲಕ್ಷ್ಮಿ ಜೊತೆಜೊತೆಗೆ ದೈವೀಸಂಪತ್ತನ್ನೂ ನೀಡುತ್ತಾಳೆ. ದೈವೀ ಸಂಪತ್ತಿರುವ ಮಂದಿಗೆಲ್ಲಿದೆ ಭಯ..?!!


'ವರ'ದ ಕತೆಯೂ ಹಾಗೆಯೇ.. ವರನೀಡುವಳೆಂದರೆ ನಮ್ಮನ್ನು ತನ್ನ ಮಗುವಿನಂತೆ ಪೊರೆಯುವಳೆಂದರ್ಥ.. ವರಿಸುವುದೆಂದರೆ ವಹಿಸಿಕೊಳ್ಳುವುದು  ತನ್ನವರನ್ನಾಗಿಸಿಕೊಳ್ಳುವುದು. ವರ ಕೊಟ್ಟಳೆಂದರೆ ನಮ್ಮನ್ನು ಅವಳ ಬಳಗವನ್ನಾಗಿಸಿಕೊಂಡು ನಮ್ಮ ಹೊಣೆ ಹೊತ್ತಳೆಂದೇ ಅರ್ಥ.. ಇದಕ್ಕಿಂತ ಮಿಗಿಲಾದ ಅನುಗ್ರಹ ಬೇಕೇ..?!! ಉಪನಿಷತ್ತೂ ಹೀಗೇ ಹೇಳಿದೆಯಲ್ಲವೇ...


ನಾಯಮಾತ್ಮಾ ಪ್ರವಚನೇನ ಲಭ್ಯಃ 

ನ ಮೇಧಯಾ ನ ಬಹುನಾ ಶ್ರುತೇನ |

ಯಮೇವೈಷ ವೃಣುತೇ ತೇನ ಲಭ್ಯಃ 

ತಸ್ಯೈಷ ಆತ್ಮಾ ವಿವೃಣುತೇ ತನೂಂ ಸ್ವಾಮ್ ||


ಹೀಗೆ ಶಾಸ್ತ್ರದ ತಿರುಳುಗಳುಳ್ಳ ಲಕ್ಷ್ಮೀಶೋಭಾನೆ ಪಠಣದಿಂದ ಸುಮಂಗಲಿಯರಿಗೆ ಭಯ ಪರಿಹಾರವಾಗುವುದು. ಧೈರ್ಯ ತುಂಬುವುದು. ಇವೆಲ್ಲ ಈ ಪದದ ಅನುಷ್ಠಾನದ ಫಲಶ್ರುತಿಗಳು..


ಸುಖಪ್ರಾಪ್ತಿಯೂ ಇದರ ಶುಭಫಲ. ಸಾತ್ವಿಕ ರಾಜಸ ತಾಮಸ ಸುಖಗಳನ್ನೆಲ್ಲ ಮೀರಿದ ಶಾಶ್ವತ ಸುಖವನ್ನೀಯುವ ಲಕ್ಷ್ಮೀದೇವಿಯು ಸುಮಂಗಲಿಯರ ಸೌಭಾಗ್ಯ ಸುಖವನ್ನು ಅನುಗ್ರಹಿಸಲಿ. 


ಈ ಪದವನ್ನು ಯಥಾ ಸಂಖ್ಯೆ ಜಪಿಸಿ ಮುಸ್ಸಂಜೆಯ ವೇಳೆ ಎಳ್ಳೆಣ್ಣೆಯ ದೀಪ ಮತ್ತು ತುಪ್ಪದ ದೀಪ ಜೊತೆಯಾಗಿ ಹಚ್ಚಿ ದೇವರನ್ನು ಪ್ರಾರ್ಥಿಸಬೇಕು. ಹೀಗೆ ಸುಮಂಗಲಿಯರು ೧೮ ದಿನ ನಿರಂತರ ಮಾಡಿದರೆ ಅದೆಷ್ಟೋ ಕಾಲದಿಂದ ಬಗೆಹರಿಯದ ಸಮಸ್ಯೆಗಳು ಸುಲಭವಾಗಿ ಮುಕ್ತಾಯಗೊಂಡು ಸಂತೋಷ ಲಭಿಸಲಿದೆ. ಇಲ್ಲಿ...


 ಕುಂದಿಲ್ಲದಾನಂದ ಸಂದೋಹವುಣಿಸುವ

ಇಂದಿರೆ ನಮ್ಮ ಸಲಹಲಿ 


ಎನ್ನುವ ಪದಗಳ ಅನುಸಂಧಾನ ಫಲ ಕೊಡುತ್ತದೆ... 


ಸಂಸಾರದಲ್ಲಿ ಎಂದೂ ಬತ್ತದ ನಿರಂತರ  ಆನಂದವನ್ನು ಕಾಯ್ದುಕೊಂಡು ಬರುವ ಕರುಣಾಸಂಪನ್ನ ಮಾತೆಯರನ್ನು ಇಂದಿರಾ ನಾಮಕ ಲಕ್ಷ್ಮಿಯು ಸಲಹಲಿ..

✍️ ಅನಂತಮೂರ್ತಿ ಬೆಳ್ಳರ್ಪಾಡಿ.

***


||ಲಕ್ಷ್ಮೀಶೋಭಾನೆ ಮತ್ತು ಮಾತೆಯರು.|day#6


ಪೊಳೆವ ಕಾಂಚಿಯ ದಾಮ ಉಲಿವ ಕಿಂಕಿಣಿಗಳು 

ನಲಿವ ಕಾಲಂದುಗೆ ಘಲುಕೆನಲು|

ನಳನಳಿಸುವ ಮುದ್ದುಮೊಗದ ಚೆಲುವೆ ಲಕ್ಷ್ಮಿ

ಸಲಹಲಿ ನಮ್ಮ ವಧುವರರ ||೬||


ಲಕ್ಷ್ಮೀದೇವಿಯ ಡಾಬು ಹೊಳೆಯುತ್ತಿದೆ. ಅದರಲ್ಲಿ ಸದ್ದು ಮಾಡುವ ಕಿರುಮಣಿಗಳಿವೆ. ಹೆಜ್ಜೆಯ ಸಪ್ಪಳಕ್ಕೆ ಕುಲುಕುವ ಕಾಲ್ಗೆಜ್ಜೆಗಳಿವೆ. ಸದಾ ಚೆಂದುಳ್ಳಿ  ಚೆಲುಮೊಗದ ಮಹಲಕ್ಷ್ಮಿ ನವ ವಧುವರರ ಕಾಪಾಡಲಿ.


ದ್ರವ್ಯಲಾಭ. ಇದರ ಫಲಶ್ರುತಿ. 


ಒಡವೆಗಳೆಲ್ಲ ಚೆಲುವನ್ನು ಇಮ್ಮಡಿಗೊಳಿಸುತ್ತವೆ. ಹುಟ್ಟಿದ ಮಗುವಿಗೆ ಕಿರಿಕಿರಿಯಾಗುವುದೆಂದು ನಾವು ಸುಮ್ಮಗಿರುವುದಿಲ್ಲ. ಕಿವಿ ಚುಚ್ಚಿ ಓಲೆ ಜೋತುಬಿಡುತ್ತೇವೆ. ಆ ಪುಟ್ಟ ಬೆರಳುಗಳಿಗೆ ಉಂಗುರ ತುರುಕಿಸುತ್ತೇವೆ. ಕತ್ತಿಗೊಂದು ಸರ, ಸೊಂಟಕ್ಕೊಂದು ಚಿನ್ನದ ದಾರ, ಕಾಲುಗಳಿಗೆ ಕಿಂಕಿಣಿದನಿಯ ಕಿರುಗೆಜ್ಜೆ. ಹೀಗೆ ಎಲ್ಲ ಬಗೆಯ ಆಭರಣ ಸಿಕ್ಕಿಸಿ ಮಗುವಿನ ಮೇಲಿನ  ಪ್ರೀತಿಯಲ್ಲಿ ಸಿಲುಕಿ ಖುಷಿ ಪಡುತ್ತೇವೆ. ಅಷ್ಟೇ ಏಕೆ.. ಮಣಗಟ್ಟಲೆ ಬಂಗಾರ ಪೇರಿಸಿ ಮಗಳನ್ನು ಸಾಲ ಮಾಡಿಯಾದರೂ ಸಾಲಂಕೃತ ಕನ್ಯಾದಾನ ಅಂತ ಮಾಡುತ್ತೇವೆ.


ಸಾಕುಪ್ರಾಣಿಗಳಿಗೂ ಆಭರಣ ಮಾಡಿಸಿ ಖುಷಿ ಪಡುವುದೂ ಇದೆ. ಗೋದಾನ ನೀಡುವಾಗಲೂ ಕಾಲಿಗಿಷ್ಟು ಕೊಂಬಿಗಿಷ್ಟು ಬೆನ್ನಿಗಿಷ್ಟು ಅಂತ ಇಟ್ಟು ದಾನ ಮಾಡುವುದಿದೆ.


ನಾವು ಪೂಜಿಸುವ ದೇವರಿಗೂ ಯಥಾಶಕ್ತಿ ಆಭರಣದಿಂದ ಅಲಂಕಾರ ಮಾಡುವುದಿದೆ. ಹೊಸ ಮದುಮಕ್ಕಳು ಕೂತು ಸತ್ಯನಾರಾಯಣ ಪೂಜೆ ಮಾಡುವಾಗ ಮದುಮಗಳು ತನ್ನೆಲ್ಲಾ ಆಭರಣಗಳನ್ನು ದೇವರ ಅಲಂಕಾರಕ್ಕೆ ಕೊಟ್ಟು ಬಳಿಕ ಪ್ರಸಾದ ಅಂತ ಸ್ವೀಕರಿಸುವುದಿದೆ.


ಇಲ್ಲಿ ಆಭರಣಗಳ ಗೊಡವೆ ಮಗುವಿಗೂ ಇಲ್ಲ ಗೋವಿಗೂ ಇಲ್ಲ. ದೇವರಿಗಂತೂ ಖಂಡಿತ ಬೇಕಿಲ್ಲ. ಹಾಗಿದ್ದರೂ ನಾವು ಅಲಂಕರಿಸುತ್ತೇವೆ ಏಕೆ.?! ಉತ್ತರ ಇಷ್ಟೇ.. ದೇವರ ಕೃಪೆಯನ್ನು ಕೃತಜ್ಞತೆಯಿಂದ ನೆನೆದುಕೊಳ್ಳುವ ಬಗೆಯಿದು. ಗೋವನ್ನು ದಾನ ಮಾಡುವಾಗ ಸಾಲಂಕೃತ ಕನ್ಯಾದಾನ ಮಾಡಿದಂತೆ, ಮಗಳು ಗಂಡನ ಮನೆಯಲ್ಲಿ ಸುಖದಿಂದಿರುವಂತೆ ದಾನ ಪಡೆದವನಲ್ಲಿ ಹಸುವೂ ಚೆನ್ನಾಗಿರಲಿ ಅಂತ ಬಯಕೆ.


ಆಭರಣಗಳು ರಾಷ್ಟ್ರೀಯ ಸಂಪತ್ತು. ಭಾರತದ ಬಹುಮಂದಿ ಆಭರಣಪ್ರಿಯರೇ.. ಜಗತ್ತಿನ ಯಾವುದೇ ರಾಷ್ಟ್ರ ಆರ್ಥಿಕಕುಸಿತ ಕಂಡರೂ ಭಾರತದಷ್ಟು ಬೇಗ ಚೇತರಿಸಿಕೊಳ್ಳುವುದಿಲ್ಲ. ಯಾಕೆ ಗೊತ್ತಾ..?!! ಭಾರತೀಯ  ಎದೆಗುಂದುವುದಿಲ್ಲ. ಕಡು ಬಡತನದಲ್ಲೂ ಮಡದಿಗೋ ಮಗಳಿಗೋ ಒಂದಿಷ್ಟು ಬಂಗಾರ ಅಂತ ಮಾಡಿ ಹಾಕ್ತೇವೆ. ಎಷ್ಟೇ ಕಷ್ಟಾದರೂ ಬಂಗಾರವನ್ನು ಗಿರವಿ ಕೊಡದೆ  ಉಳಿಸಿಕೊಳ್ತೇವೆ. ಏಕೆಂದರೆ ಅದುವೇ ಸಂಪತ್ತು. ಸಂಪತ್ತು ಅಂದರೆ ಲಕ್ಷ್ಮೀ. ಮನೆಯಲ್ಲಿ ಚೂರುಪಾರು ಬಂಗಾರಿದ್ದರೇನೇ ಲಕ್ಷ್ಮೀಪೂಜೆ ಮಾಡುವ ಮನಸ್ಸು ಬರುತ್ತದೆ. ಪೂಜೆಯ ನೆಪದಲ್ಲಾದರೂ ಮನೆಯೊಳಗೊಂದಿಷ್ಟು ಚಿನ್ನವೋ ಬೆಳ್ಳಿಯೋ ಇರಲಿ ಅಂತ ಬಯಸ್ತೇವೆ. ಅಂಥಲ್ಲಿ ಲಕ್ಷ್ಮೀ ನೆಲೆ ನಿಲ್ತಾಳೆ ಅಂತ ನಂಬಿಕೆ ನಮ್ಮದು. ಲಕ್ಷ್ಮೀ ಪೂಜೆಗೊಳ್ಳುವಲ್ಲಿ ನಾರಾಯಣ ದೇವರು ನೆಲೆಸ್ತಾರೆ.


ಅವರಿಬ್ಬರೂ ವಧುವರರನ್ನು ಸಲಹಲಿ.


ಸುಮಂಗಲಿಯರು ಲಕ್ಷ್ಮೀ ಸನ್ನಿಧಾನವುಳ್ಳ ಬಗೆಬಗೆಯ ಆಭರಣಗಳನ್ನು ಖರೀದಿಸಿ ಪೂಜೆಯಲ್ಲಿ ಬಳಸುವ ರೂಢಿಯಿದೆ.  ಅಂಥಹವರು ಈ ಪದವನ್ನು ೧೮, ೪೮, ೧೦೮ ಸಂಖ್ಯಾ ನಿಯಮದಂತೆ ಅನುಷ್ಠಾನ ಮಾಡುತ್ತಾ ಬರಬೇಕು. ಆವಾಗ ತಮ್ಮ ನೆಚ್ಚಿನ ಆಭರಣಗಳನ್ನು ಮಾಡಿಸಿಕೊಳ್ಳುವ ಆರ್ಥಿಕ ಸಬಲತೆಯನ್ನು ಲಕ್ಷ್ಮೀನಾರಾಯಣರು ದಯಪಾಲಿಸುತ್ತಾರೆ.

✍️ ಅನಂತಮೂರ್ತಿ ಬೆಳ್ಳರ್ಪಾಡಿ.

***

7

|ಲಕ್ಷ್ಮೀಶೋಭಾನೆ ಮತ್ತು ಮಾತೆಯರು.||day#7


ರನ್ನದ ಮೊಲೆಗಟ್ಟು ಚಿನ್ನದಾಭರಣಗಳ

ಚೆನ್ನೆ ಮಹಲಕ್ಷುಮಿ ಧರಿಸಿದಳೆ |

ಚೆನ್ನೆ ಮಹಲಕ್ಷುಮಿ ಧರಿಸಿದಳಾ ದೇವಿ ತನ್ನ

ಮನ್ನೆಯ ವಧುವರರ ಸಲಹಲಿ ||೭||


ಮುತ್ತುರತ್ನಾದಿಗಳಿಂದ ಮುದ್ದಾದ ಎದೆಗವಚ,  ಬಂಗಾರದ ಒನಪಿನ ಒಡವೆಗಳನ್ನು ಒಟ್ಟೈಸಿಕೊಂಡು ಓಜಸ್ಸಿನಿಂದ ಹೊಳೆವವಳು ಲಕ್ಷ್ಮೀದೇವಿ. ಚಿನ್ಮಯನ ಚೆನ್ನಿ ಆಕೆ. ನಮ್ಮ ಮದುಮಕ್ಕಳ ಪೊರೆಯಲಿ.


ಈ ಪದದ ಪಠಣೆಯ ಫಲಶ್ರುತಿ ಸೌಂದರ್ಯವರ್ಧನೆ.


ಚೆಂದ ಚೆಲುವು ಬಯಸದ ಮಂದಿ ವಿರಳ. ಹದಿನಾರು ವತ್ಸರದ ಹೆಣ್ಣಾದಳವಳು.. ಮಾಯಾ ಶೂರ್ಪನಖಿಯನ್ನು ಕವಿಗಳು ಬಿಂಬಿಸಿದ ರೀತಿಯಿದು. ಕೆಡುಕನ್ನೇ ಬದುಕಾಗಿಸಿಕೊಂಡ ಮಂದಿಗೂ ಜನರನ್ನು ನಂಬಿಸಿ ಮೋಸ ಮಾಡಲು ಇದುವೆ ಅಸ್ತ್ರ. ಪ್ರಾಪ್ತೇಷು ಷೋಡಶೇ ವರ್ಷೇ ಗಾರ್ದಭೀ ಚಾಪ್ಸರಾಯತೇ ಅಂತ ಸುಭಾಷಿತ  ಹೇಳುವುದೂ ಇದನ್ನೇ..


ಆದರೆ 

ಸಜ್ಜನರು ಬಯಸುವುದು ದೈವೀ ಸೌಂದರ್ಯವನ್ನು. ಪ್ರತಿಮೋಕ್ತ ಲಕ್ಷಣಗಳಿಂದ ಕಂಗೊಳಿಸುವ ಸಾಧು ಸಂತರನ್ನು ನೆನಪಿಸಿಕೊಳ್ಳಿ. ಅಂಥಹ ಮಂದಿಯ ಮುಖಲಕ್ಷಣ ಚೆಲುವಿನಲ್ಲಿ ದೈವೀಗುಣಗಳ ಮಹಿಮೆ ಕಾಣುತ್ತದೆ.


ಧರ್ಮಮಾರ್ಗದಲ್ಲಿ ಸಾಧನೆ ಮಾಡುವ ಸಜ್ಜನರ ಕಣ್ಣಿನ ಬೆಳಕು ಕೋರೈಸುವುದನ್ನು ಗಮನಿಸಿ. ಯಾವ ಸೌಂದರ್ಯ ರಾಸಾಯನಿಕಗಳ ಬಳಕೆ ಅಲ್ಲಿರುತ್ತದೆ.?! ಯಾವ ಕೃತಕ ಶಸ್ತ್ರಚಿಕಿತ್ಸೆಯ ಪರಿಣಾಮವಿದೆಯಲ್ಲಿ.?! ಕೂದಲು ಕಪ್ಪಾಗಿಸುವ ಬಣ್ಣ ಬಳಿಯದೆ ವಯಸ್ಸಾದರೂ ಬಿಳಿಕೂದಲು ಕಾಣದ ಮಂದಿ ಯಾವ ಲೇಪನವನ್ನು ಬಳಸುತ್ತಾರೆ..?!


ಆದರೆ 

ನಾವೆಲ್ಲ ಹದಿಹರೆಯದಲ್ಲೇ ಮುಪ್ಪಿನ ಬಳಿಯಿದ್ದೇವೆ. ಮಕ್ಕಳ ಜತೆ ಹೊರ ಹೋದಾಗ ತಂದೆಯೋ ಅಜ್ಜನೋ ಅಂತ ಊರವರಿಗೆ ಅನುಮಾನ.! ಆಧುನಿಕತೆಯ ನೆಪದಲ್ಲಿ, ನಾಗರೀಕತೆಯ ಸೋಗಿನಲ್ಲಿ ಸಾವಯವ ಕೃಷಿಯನ್ನು ಕಡೆಗಣಿಸಿದ ಪರಿಣಾಮವೇ ಅಲ್ಲವೇ ಇದೆಲ್ಲಾ..! ನಮ್ಮ ಹಿರಿಯರ ಪೈಕಿ ಯಾರಿಗೆ ಮೂವತ್ತನೇ ವಯಸ್ಸಿಗೆ ತಲೆ ನೆರೆದಿದೆ ಹೇಳಿ..?! ಯಾರು ಯೌವನದಲ್ಲೇ ಕೂರಲೂ ನಿಲ್ಲಲೂ ಆಗದೆ ಪರದಾಡುತ್ತಿದ್ದರು.?! ಯಾರಿಗಿಲ್ಲ ಇವತ್ತು ಬೆನ್ನುನೋವು..?! ಬರಿದೆ ಹಣವೇ ಮುಖ್ಯವೆಂದು ತಿಳಿದು ಬದುಕಿದ ಪರಿಣಾಮವಲ್ಲವೆ ಇದು.?! ಹಣವಿದ್ದರೆ ಏನನ್ನೂ ಕೊಂಡು ತಿನ್ನಬಹುದು ಎಂಬ ಧೋರಣೆಯಿಂದಲೇ ನಾವೀ ದಿನ ದುಡ್ಡುಕೊಟ್ಟು ವಿಷ ಖರೀದಿಸಿ ಚಪ್ಪರಿಸುತ್ತೇವಲ್ಲವೇ..?! ನಮಗೆಲ್ಲಿಯ ತಾರುಣ್ಯ.? ನಮಗೆಲ್ಲಿದೆ ಆಯುಸ್ಸು.? ನಮಗೆಲ್ಲಿದೆ ಅಂದ ಚೆಂದ.? ನಾವೇತರ ಚೆಲುವಾಂತ ಚೆನ್ನಿಗರು.?!


ಶುದ್ಧ ಆಹಾರ ಸೇವನೆ ನಮ್ಮನ್ನು ಗಟ್ಟಿಮುಟ್ಟಾಗಿರಿಸುತ್ತದೆ. ಶಾಸ್ತ್ರದ ವಿಧಿನಿಷೇಧಗಳನ್ನರಿತು ಉಂಡರೆ ತಿಂದರೆ ಕೃತಕ ಸೌಂದರ್ಯಸಾಧಕಗಳ ಮೊರೆ ಹೋಗಬೇಕಾಗಿ ಬರುವುದಿಲ್ಲ. ಆ ನಿಟ್ಟಿನಲ್ಲಿ ಮನೆಯ ಸುಮಂಗಲಿಯರು ಪ್ರವೃತ್ತರಾಗುವಂತೆ ಮಹಲಕ್ಷ್ಮಿ ಅನುಗ್ರಹಿಸಲಿ.


 ಹಾಗೆ ನಡೆವ ಗೃಹಿಣಿಯರು ಅವರೂ ಸುಂದರಿಯರಾಗಿ ಮನೆಮಂದಿಯನ್ನೆಲ್ಲ ಆರೋಗ್ಯವಂತರನ್ನಾಗಿ ಜತನದಿಂದ ಕಾಯುವಂತಾಗಲಿ.. ಅವರು ಬಳಸುವ ಲೇಪನ, ಚೂರ್ಣ ಲೇಹ್ಯ ಕಾಡಿಗೆ ಕಜ್ಜಲ ಅಗರು ಗಂಧ ಚಂದನ ಅರಿಶಿಣ ಕುಂಕುಮ ಮುಂತಾದ ಪರಿಮಳ ದ್ರವ್ಯಗಳೆಲ್ಲ ಭಾರತೀಯ ಸನಾತನ ಪರಂಪರೆಗೆ ತಕ್ಕುದಾಗಿರಲಿ. ಆ ಸೌಂದರ್ಯವರ್ಧಕದ್ರವ್ಯಗಳಲ್ಲೆಲ್ಲ ಮಹಲಕ್ಷ್ಮಿಯು ಸನ್ನಿಹಿತಳಾಗಿ ಭಾರತನಾರಿಯರ ದೈವೀಲಕ್ಷಣಗಳನ್ನು ಇಮ್ಮಡಿಗೊಳಿಸುವ ಕೃಪೆದೋರಲಿ.

✍️ ಅನಂತಮೂರ್ತಿ ಬೆಳ್ಳರ್ಪಾಡಿ.

***

8

||ಲಕ್ಷ್ಮೀಶೋಭಾನೆ ಮತ್ತು ಮಾತೆಯರು.||

day#8


ಕುಂಭಕುಚದ ಮೇಲೆ ಇಂಬಿಟ್ಟ ಹಾರಗಳು  

ತುಂಬಿಗುರುಳ ಮುಖಕಮಲ |

ತುಂಬಿಗುರುಳ ಮುಖಕಮಲದ ಮಹಲಕ್ಷ್ಮಿ ಜಗ-

ದಂಬೆ ವಧುವರರ ಸಲಹಲಿ ||೮||


ತುಂಬಿದೆದೆಯ ಮೇಲೆ ಇಳಿಬಿಟ್ಟ ಚಿನ್ನದ ಸರಗಳು. ದುಂಬಿಗಳಂತೆ ಹಾರಾಡುವ ಮುಂಗುರುಳು. ದುಂಬಿಗಳಿಂದ ಸುತ್ತುವರಿದಿರುವಂಥ ತಾವರೆಯಂಥ ಮುದ್ದು ಮೊಗ. ಜಗಜನನಿಯಾದ ಲಕ್ಷಣಸಂಪನ್ನೆ ಲಕ್ಷ್ಮೀದೇವಿ ಮದುಮಕ್ಕಳನ್ನು ಕಾಪಾಡಲಿ. 


ಈ ಪದದ ಪಠಣದಿಂದ ನವಯೌವನಲಾಭ ಫಲಶ್ರುತಿ.


ವಯಸ್ಸಾದರೂ ವಯಸ್ಸಾಯ್ತೆಂದು ಹೇಳಿದರೆ ನಮಗೇನೋ ಇರಿಸು ಮುರಿಸು. ಅಕ್ಕ, ಅಣ್ಣ ಅಂತ ಕರೆಸಿಕೊಳ್ಳಬೇಕೆಂಬುದೇ ನಿರಂತರದ ಆಸೆ. ಯಾರಾದರೂ ಅತ್ತೆ ಮಾವ ಅಂತ ಕರೆದರೆ ಸ್ವಲ್ಪ ಸಿಡಿಮಿಡಿ ಸುರುವಾಗ್ತದೆ. ಅಜ್ಜಿ ಅಜ್ಜ ಅಂತ ಕರೆಸಿಕೊಳ್ಳಲು ಮಾತ್ರ ಸುತರಾಂ ಇಷ್ಟವಿಲ್ಲ. 


ನೃ_ಣಾಮಾಯುಃ ಸಹಸ್ರಂ ಕೃತಯುಗಸಮಯೇ ತದ್ದಲಂ ತಸ್ಯ ಚಾರ್ಧಂ

 ತ್ರೇತಾಯಾಂ ದ್ವಾಪರೇ ವಾ ಕಲಿಯುಗ ಉದಿತಃ ಸ್ಯಾತ್ಸಹಸ್ರಾಷ್ಟಭಾಗಃ ||


ಕೃತಯುಗದಲ್ಲಿ ಒಂದುಸಾವಿರ ವರ್ಷ ಮನುಷ್ಯನ ಆಯುಸ್ಸು. ಅದರರ್ಧ ತ್ರೇತಾಯುಗದಲ್ಲಿ ಅಂದರೆ ಐನೂರುವರ್ಷ ಮನುಷ್ಯನ ಪರಮಾಯುಸ್ಸು. ದ್ವಾಪರದಲ್ಲಿ ಅದರರ್ಧ ಇನ್ನೂರೈವತ್ತು ವರ್ಷಗಳು. ಕಲಿಯುಗದಲ್ಲಿ ಸಾವಿರದ ಎಂಟನೇ ಒಂದು ಭಾಗ ಅಂದರೆ ದ್ವಾಪರದ ಆಯುಸ್ಸಿನ ಅರ್ಧಭಾಗ. ನೂರಿಪ್ಪತ್ತೈದು ವರ್ಷಗಳು. 


ಹಲವು ಮಂದಿ ಕಾಣಸಿಗುತ್ತಾರೆ. ವಯಸ್ಸು ಕೇಳಿದರೆ ಅಚ್ಚರಿಯಾಗುತ್ತದೆ. ಸುಕ್ಕುಗಟ್ಟದ ಅರಳಿದ ಮುಖ. ಜೋತು ಬೀಳದ ಮಾಂಸಖಂಡಗಳು. ನೆರೆಯದ ಕೂದಲು, ಕೃತಕವಲ್ಲದ ಗಟ್ಟಿಮುಟ್ಟಾದ ದಂತಪಂಕ್ತಿ.  ವರುಷ ಅರುವತ್ತಾದರೂ ಮೂವತ್ತರ ಹರೆಯದಂತೆ ಕಾಣುವವರು.  ಮುಪ್ಪಿನ ಮಾತೇ ಸುಳಿಯದ ನಿತ್ಯಯೌವನದ ಮಂದಿ.


ಹಿಂದೆಲ್ಲ ಬದುಕಿನ ರೀತಿ-ನೀತಿಗಳು ಸುದೃಢವಾಗಿದ್ದ ಕಾಲವದು. ಅಕಾಲಮರಣವೆಂದರೆ ಆಶ್ಚರ್ಯ ಎನ್ನುವಂಥಹ ಕಾಲ. ಆಗೆಲ್ಲ ಎಂಭತ್ತರ ಇಳಿವಯಸ್ಸಲ್ಲೂ ತಮ್ಮ ಕೆಲಸವನ್ನು ಯಾರ ಸಹಾಯವೂ ಇಲ್ಲದೆ ಪೂರೈಸಿಕೊಳ್ಳುತ್ತಿದ್ದರು. ಅವರೆಲ್ಲ ಬೌದ್ಧಿಕವಾಗಿ ವೃದ್ಧರೇ.. ಆದರೆ ಕಾಯ ಮಾತ್ರ ತಾರುಣ್ಯದ್ದು.

 ಒಂದು ಮಾತಿದೆ..


ನ ತೇನ ವೃದ್ಧೋ ಭವತಿ 

ಯೇನಾಸ್ಯ ಪಲಿತಂ ಶಿರಃ |

ಯೋ ವೈ ಯುವಾಪ್ಯಧೀಯಾನಃ 

ತಂ ದೇವಾಃ ಸ್ಥವಿರಂ ವಿದುಃ ||(ಮನುಸ್ಮೃತಿ)


ಜ್ಞಾನ ತಿಳುವಳಿಕೆಯಲ್ಲಿ ಬೆಳೆದವರು. ಅಂತರಂಗದಲ್ಲಿ ಬಲಿತ ಮಂದಿ. ಅವರು ವೃದ್ಧರು. ಮನಸ್ಸಿನಲ್ಲಿ ಮಾಗಿದವರು. ಮೈ ಮಾತ್ರ ಯಾವತ್ತೂ ಎಳಸು.


ಇದುವೆ ನವಯೌವನ. ಇಂಥಹ ಆಯುಸ್ಸೇ ದೇವತಾನುಗ್ರಹ. ಇಂಥಹ ಸುದೃಢ ತಾರುಣ್ಯವನ್ನು ಲಕ್ಷ್ಮೀದೇವಿಯು ಅನುಗ್ರಹಿಸುತ್ತಾಳೆ.


ಈಗಿನ ದಿನಗಳಲ್ಲಿ ಸಂಸಾರ ನಿರ್ವಹಣೆಯ ಜೊತೆಗೆ ಹೊರಗೆ ದುಡಿಯುವ ಅನಿವಾರ್ಯತೆ ಇರುವ ಸುಮಂಗಲೀಯರಿಗೆ ಲಕ್ಷ್ಮೀಶೋಭಾನೆ ಪಠಣವೊಂದು ದಿವ್ಯೌಷಧವಾಗಲಿದೆ. ಮೈ ಮನಸ್ಸುಗಳೆರಡೂ ಈ ರೀತಿಯ ದುಡಿಮೆಯಿಂದ ಜರ್ಝರಿತವಾಗುವ ಸಾಧ್ಯತೆಗಳು ಹೆಚ್ಚು. ಅಂಥಹ ಮಾತೃಸ್ವರೂಪಿಣಿಯರಿಗೆ ದೇಹಬಲ ಮತ್ತು ಮನೋಬಲಗಳು ಈ ಲಕ್ಷ್ಮೀಶೋಭಾನೆ ಪಠಣದಿಂದ ದೊರೆಯಲಿ. ಮೈ ಮನಸ್ಸು ಕುಗ್ಗದಿರುವುದೇ ತಾರುಣ್ಯ. ಅದುವೆ ನವಯೌವನಲಾಭ.

✍️ ಅನಃತಮೂರ್ತಿ ಬೆಳ್ಳರ್ಪಾಡಿ.

***

||ಲಕ್ಷ್ಮೀಶೋಭಾನೆ ಮತ್ತು ಮಾತೆಯರು|| day#9. 


ಮುತ್ತಿನ ಓಲೆಯನಿಟ್ಟಳೆ ಮಹಲಕ್ಷ್ಮಿ

ಕಸ್ತೂರಿತಿಲಕ ಧರಿಸಿದಳೆ |

ಕಸ್ತೂರಿತಿಲಕ ಧರಿಸಿದಳಾ ದೇವಿ|

 ಸ-ರ್ವತ್ರ ವಧುವರರ ಸಲಹಲಿ ||೯||


ಮುದ್ದಾದ ಮುತ್ತಿನೋಲೆ ಧರಿಸಿರುವವಳು ಮಹಲಕ್ಷ್ಮಿ. ಪರಿಮಳದ ಕಸ್ತೂರಿಯ ಬಿಂದಿಗೆಯನ್ನು ಹಣೆಯಲ್ಲಿಟ್ಟುಕೊಂಡಿರುವಳು. ಅಂಥಹ ಮಹಲಕ್ಷ್ಮಿ ಮದುಮಕ್ಕಳ ಸಲಹಲಿ.


ಈ ಪದದ ಪಠಣ ಪುರಶ್ಚರಣದಿಂದ ಮುತ್ತೈದೆಭಾಗ್ಯ ಪ್ರಾಪ್ತಿ. ಇದು ಫಲಶ್ರುತಿ.


ಎಲ್ಲ ಸುಮಂಗಲಿಯರು ದೇವರ ಪ್ರಸಾದವನ್ನು ಹಣೆಗೆ ಹಚ್ಚಿ ಸ್ವಲ್ಪ ತಮ್ಮ ಕಂಠದ ಮಂಗಳಸೂತ್ರಕ್ಕೆ ಮೆತ್ತಿಕೊಳ್ಳುವ ಸಂಪ್ರದಾಯವಿದೆ. ದೇವರಲ್ಲಿ ಬೇಡುವಾಗಲೂ ಬಹುಕಾಲ ಓಲೆಭಾಗ್ಯ ಉಳಿಯುವಂತೆ ಕೇಳಿಕೊಳ್ಳುತ್ತಾರೆ.


ಆಹಾ...

ಇವತ್ತಿನ ದಿನಗಳಲ್ಲಿ ಹಣೆಯ ತಿಲಕದ ಹಣೆಬರಹವೇ... ವಿಷದ ಅಂಟಿನ ಬೇಗಡೆ ತುಂಡುಗಳದ್ದೇ ಕಾರುಬಾರು. ಮಾರುಕಟ್ಟೆಗೆ ಬರುವ ಕುಂಕುಮಗಳೇ ರಾಸಾಯನಿಕ ಕಲಬೆರಕೆಗಳು. ಅದಕ್ಕಿಂತ ಒಂದು ಹಂತದಲ್ಲಿ ಬಣ್ಣಬಣ್ಣದ ಬೇಗಡೆಗಳೇ ಆದೀತು ಅಂತನ್ನಿಸ್ತದೆ.


ಚಂದ್ರಕಸ್ತೂರಿಯಂಥಹ ತಿಲಕಗಳು ಮದುವೆ ಮನೆಗೇ ಸೀಮಿತವಾಗಿವೆ. ಆಧುನಿಕಕಾಲದ ಬಿಂದಿಗೆಗಳನ್ನು ಹಚ್ಚಿಕೊಳ್ಳಿ ಅಡ್ಡಿಯಿಲ್ಲ. ಅದಾದರೂ ಕಾಣುವಷ್ಟಾದರೂ ದೊಡ್ಡದಿರಲಿ. ಉದ್ದನೆಯ ಅಥವಾ ಉರುಟಾದವುಗಳಿಗೆ ಪ್ರಾಶಸ್ತ್ಯವಿರಲಿ.


ಮುತ್ತೈದೆತನವನ್ನು ಉಳಿಸಿಕೊಳ್ಳಲು ಎಂಥಹ ಪಂಥಾಹ್ವಾನವನ್ನೂ ಎದುರಿಸಿದ ಎದೆಗಾರಿಕೆ ಸುಮಂಗಲಿಯರದ್ದು. ಉದಾಹರಣೆಗೆ 

ಬೇರಾರೂ ಬೇಕಿಲ್ಲ. ಸತ್ಯವಾನನ ಬದುಕಿಸಿಕೊಂಡ ಸಾವಿತ್ರಿಯೊಬ್ಬಳೇ ಸಾಕು.! ಇಷ್ಟೇ ಅಲ್ಲದೆ ಗಂಡನ ಪ್ರಾಣ ಕಾಪಾಡಿದ ಮಾತ್ರವಲ್ಲ ದೇಶದ ಮಾನವನ್ನೇ ಕಾಪಾಡಿದ ಧೀರ ವನಿತೆಯರ ನಾಡು ನಮ್ಮದು. ಹೆಮ್ಮೆಯ ಭಾರತೀಯ ನಾರಿಯರ ಸಾಹಸದ ಯಶೋಗಾಥೆ ಇಂದಿಗೂ ಜನಜನಿತ. 


ಮಾನಿನಿಯರ ಮುಖಲಕ್ಷಣಗಳಿರುವುದೇ ಮುತ್ತೈದೆ ಸೂಚಕವಾದ ಆಭರಣಗಳಿಂದ.  


ಬೆಂಡೋಲೆ, ಮೂಗುತಿ, ಮಂಗಳಸೂತ್ರ, ಕೈಬಳೆ, ಕಾಲುಂಗುರ. ಈ ಐದು ಮುತ್ತುಗಳನ್ನು ಕಾಪಾಡಿಕೊಂಡು ಬರುವ ಸುಮಂಗಲೆಯರೇ ಮುತ್ತೈದೆಯರು.


ಅದೆಷ್ಟೋ ಮಂದಿ  ವಯಸ್ಸಾದರೂ ಮುತ್ತೈದೆಯರಾಗದ ಮಹಿಳೆಯರಿದ್ದಾರೆ. ಅಂಥಹ ಮಂದಿ ಮುತ್ತೈದೆತನದ ಪ್ರಾಪ್ತಿಗಾಗಿ ಈ ಪದವನ್ನು ಪಠಿಸುವುದು ಉತ್ತಮ.  ಪ್ರತೀ ಶುಕ್ರವಾರ ಲಕ್ಷ್ಮೀನಾರಾಯಣರಿಗೆ ತುಪ್ಪದೀಪವಿಟ್ಟು ಬಿಳಿಯ(ತುಂಬೆ) ಹೂಗಳಿಂದ ೧೦೮ ಸಂಖ್ಯೆಗಿಂತ ಕಡಿಮೆಯಿಲ್ಲದೆ ಅರ್ಚನೆ ಮಾಡಿದರೆ ಕನ್ಯಾಮಣಿಗಳಿಗೆ ಮುತ್ತೈದೆತನ ಒಲಿದು ಬರಲಿದೆ ನಿಶ್ಚಯ...

✍️  ಅನಂತಮೂರ್ತಿ ಬೆಳ್ಳರ್ಪಾಡಿ.

***


||ಲಕ್ಷ್ಮೀಶೋಭಾನೆ ಮತ್ತು ಮಾತೆಯರು.|| day#10


ಅಂಬುಜನಯನಗಳ ಬಿಂಬಾಧರದ ಶಶಿ|

ಬಿಂಬದಂತೆಸೆವ ಮೂಗುತಿಮಣಿಯ ಶಶಿ

ಬಿಂಬದಂತೆಸೆವ ಮೂಗುತಿ ಮಣಿ| 

ಮಹಾಲಕ್ಷ್ಮಿ 

ಉಂಬುದಕೀಯಲಿ ವಧುವರರ್ಗೆ ||೧೦||


ತಾವರೆಯೆಸಳಿನಂಥ ಕಣ್ಗಳ,ಪೊಳೆವ ಕೆಂದುಟಿಯ, ಚಂದಿರನಂದದ ಮೂಗುತಿಮಣಿಯ ಮಹಾಲಕ್ಷ್ಮಿ ಮದುಮಕ್ಕಳಿಗೆ ಬದುಕಿಡೀ ಉಣಲು ಕೊರತೆಯಿಲ್ಲದಂತೆ ಹರಸಲಿ. 


ಈ ಪದದ ಪಠಣ ಪುರಶ್ಚರಣದಿಂದ ಆಹಾರಧಾನ್ಯಲಾಭ. ಹೀಗೆ ಫಲಶ್ರುತಿ.


ಅಂಗೈರ್ಯುತೋ$ನ್ಯೈರಪಿ ಪೂರ್ಣಮೂರ್ತಿಃ 

ಚಕ್ಷುರ್ವಿನಾ ಕಃ ಪುರುಷತ್ವಮೇತಿ..?! 


ಎಲ್ಲ ಅಂಗಾವಯವಗಳಿದ್ದೂ ಕಣ್ಣಿಲ್ಲದ ಪುರುಷಾರ್ಥವೇತಕ್ಕೆ..?! ಹಾಗಾಗಿ ಕಮಲಕಂಗಳ ಚೆಲುವೆಯ ಎಸಳುದಾವರೆ ಕಣ್ಗಳ ನೆನವರಿಕೆ ನಮ್ಮ ದಿವ್ಯದೃಷ್ಟಿಲಾಭಕ್ಕೆ ಕಾರಣವಾದೀತು. ಕಣ್ಣಿಗೆ ಕಾಡಿಗೆ ಹಚ್ಚುವ ವೇಳೆ ತಾವರೆದಳದ ತಾಯಿ ಲಕ್ಷ್ಮಿಯನ್ನು ನೆನೆದರೆ ಸುಮಂಗಲಿಯರ ಸುಲೋಚನಗಳ ಸೊಗಸು ಹೆಚ್ಚೀತು.


ಚೆಲುವ ಕೆಂದುಟಿಯ ಕನ್ಯೆ ಮಹಲಕ್ಷ್ಮಿ ಮಹಿಳೆಯರ ಸೌಂದರ್ಯವರ್ಧನೆಯ ಕಣ್ಗಾಪು ಕೊಟ್ಟು ಕಾಯುವಳು. ಹೀಗೆ ನೆನೆಯುವುದರಿಂದ ಸಹಜವಾಗಿ ತುಟಿಯ ಹೊಳಪು ಬೆಳಗೀತು. ಇಂಚುಗಟ್ಟಲೆ ದಪ್ಪದಲ್ಲಿ ಬಣ್ಣ ಬಳಿದು ಮೂತಿಗೆ ಕೆಂಪು ಉಜ್ಜಿ ಇತ್ತ ಕುಡಿಯಲೂ ಆಗದೆ ಅತ್ತ ಉಣಲೂ ಆಗದೆ ಪರದಾಡುವ ಪರಿಸ್ಥಿತಿ ಪರಮ ನಾಗರೀಕತೆಯ ಅತ್ಯಾಧುನಿಕ ಬೆಳವಣಿಗೆ.! ಒಂದಕ್ಕೊಂದು ತಾಗಿಸಿದ ತುಟಿಯಿಂದ ಅಮ್ಮ ಅಂತಲೂ ಕರೆಯಲಾಗದ ಮಕ್ಕಳೇ ಇಂದಿನ ಹೆತ್ತವರ ಮುದ್ದು ಹೆಗ್ಗಣಗಳು. ಸಹಜ ಸೌಂದರ್ಯದ ಇದಿರು ಇವೆಲ್ಲ ಕ್ಷಣಿಕ. ಅಂಥಹ ಸಹಜ ಸೌಂದರ್ಯಕ್ಕೆ ಪರಮಸುಂದರಿ ಮಹಲಕ್ಷ್ಮಿಯ ಉಪಾಸನೆ ಮಾಡಿ ನಮ್ಮ ಮಾನಿನಿಯರು ಭಗವತ್ಕೃಪೆಗೆ ಭಾಗಿಗಳಾಗಲಿ.


ಮೂಗು ಮಾನ ಮರ್ಯಾದೆಯ ಸಂಕೇತ. ಮೂಗುತಿ  ಸೌಭಾಗ್ಯದ ಚಿಹ್ನೆ. ಸುಮಂಗಲಿಯರ ಮಾನ-ಮರ್ಯಾದೆಗಳನ್ನು ಹೊಳೆವ ಮೂಗುತಿಮಣಿಯ ಮಹಲಕ್ಷ್ಮಿಯು ಜೋಪಾನದಿಂದ ಕಾಯ್ದುಕೊಳ್ಳುವ ದಯೆ ತೋರಲಿ.


ಮದುವಣಗಿತ್ತಿ ಮನೆತುಂಬಿಸಿಕೊಳ್ಳುವ ಹೊತ್ತಿಗೆ ಸೇರಕ್ಕಿಯನ್ನು ಬಲಗಾಲಿನಿಂದ ಮೆಲ್ಲಗೆ ಚೆಲ್ಲಿ ಒಳಹೊಕ್ಕುವ ಪರಿಪಾಠ ರೂಢಿಯಲ್ಲಿದೆ. ಲಕ್ಷ್ಮೀನಾರಾಯಣರ ರೂಪದ ಮದುಮಕ್ಕಳ ಪೈಕಿ ಮದುವಣಗಿತ್ತಿಯೇ ಲಕ್ಷ್ಮೀ. ಬರಿಯ ಧನಲಕ್ಷ್ಮಿಯಲ್ಲ. ಧಾನ್ಯಲಕ್ಷ್ಮಿಯೂ ಹೌದು. ಅದಕ್ಕಾಗಿಯೇ ಆ ಮನೆಲಕ್ಷ್ಮಿ ಕಾಲಿಟ್ಟ ಘಳಿಗೆ ಮನೆಯಲ್ಲಿ ಆಹಾರ ದವಸ ಧಾನ್ಯಗಳ ಕೊರತೆಯಾಗದಿರಲಿ ಅಂತ ಈ ಸಂಪ್ರದಾಯವನ್ನು ಆಚರಿಸುತ್ತಾರೆ. 


ಮನೆಯಲ್ಲಿ ಊಟದ ವ್ಯವಸ್ಥೆ ಮಹಿಳೆಯರದ್ದೇ. ಹಾಗಾಗಿ ಯಾರಿಗೂ ಹೊಟ್ಟೆಗೆ ಕಡಿಮೆಯಾಗದಂತೆ ಮನೆ ನಿಭಾಯಿಸುವ ಅಜ್ಜಿ ಅಮ್ಮ ಚಿಕ್ಕಮ್ಮ ದೊಡ್ಡಮ್ಮ ಅತ್ತೆ ಸೊಸೆ ಅತ್ತಿಗೆ ಅಕ್ಕ ತಂಗಿ ಮಡದಿ ನಾದಿನಿ ಮಗಳು ಮೊಮ್ಮಗಳು ಇವರೆಲ್ಲ ನಿಜಾರ್ಥದಲ್ಲಿ ಅನ್ನಪೂರ್ಣೆಯರೇ.. ತಾವು ಹಸಿದು ಮನೆಮಂದಿಯನ್ನು ಉಣಬಡಿಸುವ ಮನೆದೇವರುಗಳು. ಮಹಲಕ್ಷ್ಮೀ ದೇವಿಯು ಎಲ್ಲರ ಮನೆಯ ಮಮತಾಮಯಿ ಮಾತೆಯರ ಹೊಟ್ಟೆ ತಣ್ಣಗಿಟ್ಟಿರಲಿ...

.✍️ ಅನಂತಮೂರ್ತಿ ಬೆಳ್ಳರ್ಪಾಡಿ.

***

||ಲಕ್ಷ್ಮೀಶೋಭಾನೆ ಮತ್ತು ಮಾತೆಯರು||.

Day#11


ಮುತ್ತಿನಕ್ಷತೆಯಿಟ್ಟು ನವರತ್ನದ ಮುಕುಟವ

ನೆತ್ತಿಯ ಮೇಲೆ ಧರಿಸಿದಳೆ |

ನೆತ್ತಿಯ ಮೇಲೆ ಧರಿಸಿದಳಾ ದೇವಿ ತನ್ನ

ಭಕ್ತಿಯ ಜನರ ಸಲಹಲಿ ||೧೧||


ಮಹಾಲಕ್ಷ್ಮೀ ದೇವಿಯು ಮುತ್ತಿನ ಅಕ್ಷತೆಯನ್ನಿಟ್ಟಿರುತ್ತಾಳೆ. ನವರತ್ನಖಚಿತ ತುರಾಯಿ ತಲೆಯ ಮೇಲೆ ತೊಟ್ಟಿರುತ್ತಾಳೆ. ಅಂಥಹ ತಾಯಿ ಅವಳನ್ನೇ ಭಕ್ತಿಯಿಂದ ಭಜಿಸುವ ಮಂದಿಯನ್ನು ಪೊರೆಯಲಿ.


ಈ ಪದ ಪಠಣ ಪುರಶ್ಚರಣದ ಫಲಶ್ರುತಿ ನೆರೆಹೊರೆಯವರ ಪ್ರೀತಿ ಸಂಪಾದನೆ.


ಬೋಳು ಹಣೆ ಅಮಂಗಳ. ಹೆಣ್ಣಾಗಲೀ ಗಂಡಾಗಲಿ ಮುಖದಲ್ಲೊಂದು ಮುತ್ತಿನಂಥ ತಿಲಕವಿದ್ದರೆ ಆ ಮುಖ ನೋಡಿದ ಮಂದಿಗೆ ಶುಭಶಕುನದ ಸೂಚನೆಗಳೊದಗುತ್ತವೆ.


 ಯೇ ವಾ ಲಲಾಟತಿಲಕೇ ಲಸದೂರ್ಧ್ವಪುಂಡ್ರಾ 

ತೇ ವೈಷ್ಣವಾ ಭುವನಮಾಶು ಪವಿತ್ರಯಂತಿ ||


ಊರ್ಧ್ವಪುಂಡ್ರವಿಹೀನ ಮುಖಾವಲೋಕನ ಅಮಂಗಳದ ಸೂಚನೆಗೆ ದಾರಿ..


ಭಾರತೀಯ ಸಾಂಪ್ರದಾಯಿಕ ನಾರಿಯರು ಪ್ರಪಂಚದ ಅತ್ಯುನ್ನದ ಗೌರವದ ಸ್ಥಾನ ಪಡೆದವರು. ಅದಾವ ಶೃಂಗ ಸಭೆಗಳೇ ಇರಲಿ, ಅದೆಷ್ಟೇ ರಾಷ್ಟ್ರಗಳ ಪ್ರತಿನಿಧಿಗಳಿದ್ದರೂ ಸಾಂಪ್ರದಾಯಿಕ ತೊಡುಗೆಯ ವಿದೇಶಾಂಗ ಸಚಿವೆಯರು ತಮ್ಮ ವಸ್ತ್ರಸಂಹಿತೆಯಿಂದಲೇ ಗುರುತಿಸಲ್ಪಟ್ಟ ಉದಾಹರಣೆಗಳಿವೆ. ಅಂಥಹ ಭಾರತೀಯ ಮರ್ಯಾದಾ ಮಾನಿನಿಯರನ್ನು ಮಹಾಲಕ್ಷ್ಮೀ ದೇವಿಯು ಕಾಪಾಡಲಿ. 


ತಲೆಗೊಂದು ಕಿರೀಟ ದೇವತೆಗಳ ಲಕ್ಷಣ. ಯಾಕೆಂದರೆ ಕಿರೀಟವೆಂದರೆ ಔನ್ನತ್ಯದ ಸಂಕೇತ.  ದೇವರ ತಿಳಿವಿನ ಎತ್ತರೆತ್ತರದ ಮಜಲುಗಳ ಸಿದ್ಧಿಗಾಗಿ ಇಂಥಹ ಕಿರೀಟ ಧಾರಣೆಯ ಆವಶ್ಯಕತೆಯಿರುತ್ತದೆ. ಗರ್ಭಗುಡಿಯ ಶಿಖರತುದಿಯಲ್ಲಿ ಶಿರೋಕಳಸಗಳಿದ್ದಂತೆ. ಅದರಿಂದ ಭಗವಂತನ ಶಕ್ತಿ ಸಂಚಯವಾದಂತೆ ದೇವತೆಗಳೊಳಗೆ ಭಗವತ್ಸನ್ನಿಧಾನಾತಿಶಯದ ಸೂಚನೆ ಈ ಕಿರೀಟ.


ಮನೆಯ ಸಕಲ ಹೊಣೆ ಹೊತ್ತ ಮಹಿಳೆಯರ ಶಿರದ ಮೂಲಕ ಭಗವಂತನ ಅನುಗ್ರಹ ಹಾದು ಬರಲಿ. ಆ ಮೂಲಕ ಸತ್ಸಂತಾನ ಬೆಳೆಯಲು ಅನುಕೂಲವಾಗುವ ಚೈತನ್ಯಗಳು ಸ್ತ್ರೀಯರ ಶಿರೋಮಧ್ಯದಿಂದ ಒಡಲಿಗಿಳಿದು ಸಂಸಾರ ದೇಗುಲದೊಳಗೆ ದೇವರ ಪುಟ್ಟಪುಟ್ಟ ಪ್ರತಿಮೆಗಳಂತೆ ಮಗು ಮಕ್ಕಳು ಜನಿಸಲಿ.


 ನವರತ್ನದ ಪದ ಪ್ರಯೋಗದಿಂದ ರತ್ನಾದಿ ಆಭರಣಗಳ ಅಭೀಷ್ಟವಿರುವ ಮಂದಿ ಈ ಪದದ ಪುರಶ್ಚರಣೆ ಮಾಡಬಹುದು.


ನ ಮೇ ಭಕ್ತಃ ಪ್ರಣಶ್ಯತಿ ಎಂದವನ ಮಡದೀ ಮಣಿಯಾದ ಮಹಾಲಕ್ಷ್ಮೀ ಮಾಧವನ ಮನೋನುಸಾರಿಣಿ.  ಲಕ್ಷ್ಮೀನಾರಾಯಣರನ್ನು ಆರಾಧಿಸಿದ ಮಂದಿಯ ಭಕ್ತಿಗೆ ಒಲಿದು ಅನುಗ್ರಹಿಸುವಳು.


ಈ ರೀತಿಯ ಅನುಷ್ಠಾನವನ್ನು ಮಾಡುವ ಸುಮಂಗಲಿಯರು ನೆರೆಹೊರೆಯವರಿಗೆ ಶುಭವನ್ನು ಬಯಸುತ್ತಾ ದೇವರ ದಯೆಯಿಂದ  ಜನಾನುರಾಗಿಗಳಾಗಿ ಬಾಳಿ ಬದುಕುತ್ತಾರೆ..

✍️ ಅನಂತಮೂರ್ತಿ ಬೆಳ್ಳರ್ಪಾಡಿ.

***

||ಲಕ್ಷ್ಮೀಶೋಭಾನೆ ಮತ್ತು ಮಾತೆಯರು||. day#12


ಕುಂದಮಂದಾರ ಜಾಜಿ ಕುಸುಮಗಳ ವೃಂದವ

ಚೆಂದದ ತುರುಬಿಲಿ ತುರುಬಿದಳೆ |

ಕುಂದಣವರ್ಣದ ಕೋಮಲೆ ಮಹಲಕ್ಷ್ಮಿ ಕೃಪೆ-

ಯಿಂದ ವಧುವರರ ಸಲಹಲಿ ||(೧೨)||


ಸೂಜಿಮಲ್ಲಿಗೆ ಮಂದಾರಹೂ,ಜಾಜೀ ಮೊದಲಾದ ಹೂಗೊಂಚಲುಗಳನ್ನು ತನ್ನ ಚೆಲುಮುಡಿಯಲ್ಲಿ ಒಟ್ಟೈಸಿಕೊಂಡವಳು ತಾಯಿ ಲಕ್ಷ್ಮೀದೇವಿ. ಹೊಳೆವ ಹೊನ್ನ ಹೊಂಬಣ್ಣದ ತನುಕಾಂತಿಯ ಮಹಾಲಕ್ಷ್ಮೀದೇವಿ ಮದುಮಕ್ಕಳನ್ನು ಕರುಣೆಯಿಂದ ಕಾಯಲಿ.


ಈ ಪದದ ಪಠಣ ಪುರಶ್ಚರಣಗಳಿಂದ ಸುಮಂಗಲಿಯರಿಗೆ ಮುತ್ತೈದೆಭಾಗ್ಯಗಳ ರಕ್ಷಣೆ ಎಂಬುದು ಫಲಶ್ರುತಿ.


ಮನಸ್ಸು ಮತ್ತು ದೇವತೆಗಳಿಗೆ ಒಂದೇ ಪದ. ಸುಮನಸರು ಅಂದರೆ ದೇವರುಗಳೂ ಹೌದು, ಒಳ್ಳೆಯ ಮನಸೂ ಹೌದು. ಅದೇ ಪದ ಹೂವುಗಳಿಗೂ ಅನ್ವಯವಾಗುತ್ತದೆ. ಹೂ ಮುಡಿವ ಸುಮಂಗಲಿಯರ ಮನಸುಗಳಿಗೂ ಕೂಡ.!


ದೇವರ ಪ್ರಸಾದರೂಪದ ಹೂವುಗಳನ್ನು ಮುಡಿದ ಸುಮಂಗಲಿಯರು ಇದಿರಾದರೆ ಶುಭಶಕುನ. ಒಂದೆಡೆ ಹೊರಟಾಗ ತಲೆತುಂಬ ಹೂ ಮುಡಿದ ಮುತ್ತೈದೆ ಇದಿರಾದರೆ ಅಭೀಷ್ಟಪ್ರಾಪ್ತಿಯ ಜತೆಗೆ ಕಾರ್ಯಸಿದ್ಧಿಯಾಗಲಿದೆ. ಇದು ಶುಭ ನಿಮಿತ್ತವೆಂದು ಪ್ರಶ್ನಶಾಸ್ತ್ರಗಳ ಉಲ್ಲೇಖವಿದೆ.


ಇಂದು ಅರಳಿದ ಹೂವು ನಾಳೆ ಬಾಡುವುದೆಂದು ತಿಳಿದೂ ಅದೇ ನೆಪಕ್ಕೆ  ಹಾವು-ಮುಂಗುಸಿಗಳಂತಾಡುವ ಮಂದಿಗೇನೂ ಕಮ್ಮಿಯಿಲ್ಲ. ಮನಸು ಒಳ್ಳೆಯದಿದ್ದರೆ ಒಂದು ಗಾದೆಯಿದೆ. ಹಣ್ಣು ಹಂಚಿ ತಿನ್ನಬೇಕು ಹೂವು ಸಿಗಿದು ಮುಡಿಯಬೇಕು. ಗಮನಿಸಿ ಮುತ್ತೈದೆಯರು ತಮಗೊದಗಿದ ಹೂವನ್ನು ಒಂದು ತುಂಡಾದರೂ ಇತರರಿಗೆ ಕೊಟ್ಟು ಮುಡಿಯುವ ಪದ್ಧತಿಯಿದೆ. ಹೂವೆಂದರೆ ಅಷ್ಟು ಅಭಿಮಾನ. ದೇವರಿಗಿಟ್ಟ ಹೂವೆಂದರೆ ಮುಗಿಬೀಳುವ ಮಂದಿಯ ಭಕ್ತಿ ಆದರಣೀಯ.


ಹೂವುಗಳ ವಿಷಯ ಬಂದಾಗ ಮನೆಯ ಹಿರಿಯರು  ಮುತ್ತೈದೆಯರನ್ನು ಎಚ್ಚರಿಸುವುದನ್ನು ಕೇಳಿದ್ದೇನೆ. ದೇವರಿಗಿಡದ ಹೂವನ್ನು ತಲೆಗಿಡ ಕೂಡದು. ಹಾಗೆ ಇಟ್ಟವರು ದುರ್ನಿಮಿತ್ತಗಳನ್ನೆದುರಿಸಿದುದನ್ನು ನೆನೆಸಿಕೊಂಡು ಬುದ್ಧಿವಾದ ಹೇಳುತ್ತಿದ್ದರು. ಹೂವಷ್ಟೇ ಅಲ್ಲ ಹೊಸವಸ್ತ್ರಗಳನ್ನು ಧರಿಸುವ ಮುಂಚೆ ಮನೆದೇವರ ಮುಂಭಾಗ ಮಣೆಯಲ್ಲಿಟ್ಟು ಅರಿಶಿನ ಕುಂಕುಮ ಹಚ್ಚಿ ನಮಸ್ಕರಿಸುವ ಕ್ರಮವಿದೆ. ಹೀಗೆ ಮಾಡಿದ ಬಳಿಕವೇ ಮನೆಯ ಮಂದಿ ಹೊಸವಸ್ತ್ರ ಧರಿಸಿ ಹಿರಿಯರಿಗೆರಗುವುದು ಸಜ್ಜನಿಕೆಯ ನಡತೆ.


ಮನೆಗೆ ಬಂದ ಮುತ್ತೈದೆಯರನ್ನು ಹೂ ಹಣ್ಣು ಕೊಟ್ಟು ಅರಿಶಿನ ಕುಂಕುಮ ಹಚ್ಚಿ ಸತ್ಕರಿಸುವ ಸಂಪ್ರದಾಯ ಮಹಿಳೆಯರ ಸಂಭ್ರಮದಲ್ಲೊಂದು. ಇತ್ತೀಚೆಗೆ ಬಹುತೇಕ ಮನೆಯ ಸಮಾರಂಭಗಳಲ್ಲಿ ಒಬ್ಬರೋ  ಇಬ್ಬರೋ ಸೇರಿ ಬಂದ ಸುಮಂಗಲಿಯರಿಗೆಲ್ಲ ಬಳೆ ಬಟ್ಟೆ ಹೂ ಹಣ್ಣು ಸಹಿತ ಗೌರವ ಸಲ್ಲಿಸುವ ಪದ್ಧತಿ ವ್ಯಾಪಕವಾಗಿ ಬಳಕೆಯಲ್ಲಿದೆ. ಹೀಗೆ ಮಾಡುವುದರಿಂದ ಮುತ್ತೈದೆತನ  ಬಹುಕಾಲ ವರವಾಗಿ ಫಲಿಸುವುದೆಂದು ದೃಢವಾದ ನಂಬಿಕೆ.


ಇಂಥಹ ಕ್ರಮ ರೀತಿ ರಿವಾಜು ಸಂಪ್ರದಾಯಗಳನ್ನು ತಲೆಮಾರಿನಿಂದ ಲಾಗಾಯ್ತು ಉಳಿಸಿಕೊಂಡು ಮುಂದಿನ ತಲೆಮಾರುಗಳಿಗೆ ತಲುಪಿಸಿ ನೈತಿಕ ಶಿಕ್ಷಣ ಕೊಟ್ಟು ಕಾಯುವ ಸುಮಂಗಲಿಯರನ್ನು ಮಹಾಲಕ್ಷ್ಮೀದೇವಿಯು ಕಾಪಾಡಲಿ.

✍️ ಅನಂತಮೂರ್ತಿ ಬೆಳ್ಳರ್ಪಾಡಿ.

***

||ಲಕ್ಷ್ಮೀಶೋಭಾನೆ ಮತ್ತು ಮಾತೆಯರು|| Day#13


ಎಂದೆಂದೂ ಬಾಡದ ಅರವಿಂದ ಮಾಲೆಯ

*ಇಂದಿರೆ ಪೊಳೆವ ಕೊರಳಲಿ |

ಇಂದಿರೆ ಪೊಳೆವ ಕೊರಳಲಿ ಧರಿಸಿದಳೆ ಅವ-

ಳಿಂದು ವಧುವರರ ಸಲಹಲಿ ||೧೩||


ಯಾವತ್ತೂ ಕಮರಿ ಹೋಗದ ಕಮಲಗಳ ಮಾಲೆಯನ್ನು ತೊಟ್ಟುಕೊಂಡವಳು ಲಕ್ಷ್ಮೀದೇವಿ. ಇಂದಿರಾ ದೇವಿಯು ಮುತ್ತಿನಂಥಾ ಕುತ್ತಿಗೆಯಲ್ಲಿ  ಹೊಚ್ಚಹೊಸ ಕಮಲಮಾಲೆಯನ್ನು ಧರಿಸಿರುವಳು. ಹೊಳೆವ ಹೊಳಪಿನ ಲಕ್ಷ್ಮೀದೇವಿ ಸದಾ  ಮದುಮಕ್ಕಳನ್ನು ಪೊರೆಯಲಿ.


ಫಲಶ್ರುತಿ-- 

ಮುತ್ತೈದೆತನದ ರಕ್ಷಣೆ. 


ಮೂಡುವುದು ಮುಳುಗುವುದು ಎಲ್ಲಕ್ಕೂ ಇದ್ದದ್ದೇ.. ಹಾಗೆಯೇ ಅರಳುವುದು ಮರಳುವುದೂ ಕೂಡ.!


ಮನುಷ್ಯ ಹುಟ್ಟಿ ಮಗುವಾಗುತ್ತಾನೆ. ಮುಗ್ಧತೆ ಇರುತ್ತದೆ. ಬೆಳೆದು ದೊಡ್ಡವನಾಗುತ್ತಾನೆ. ಎಳಸು ಕಳೆದು ಎಲ್ಲದರಲ್ಲೂ ಬಲಿತು ಬಲವಂತನಾಗುತ್ತಾನೆ. ಬೆಳೆಯುತ್ತಾ ಬೆಳೆಯುತ್ತಾ ಬಲಹೀನನಾಗುತ್ತಾನೆ. ಮತ್ತೆ ಮಾಗಿದ ಮುಪ್ಪಿನಲ್ಲೂ ಮಗುವಿನಂತಾಗುತ್ತಾನೆ.


*ಮನುಷ್ಯನಂತಲ್ಲ ಎಲ್ಲ ಜೀವಜಾತಗಳಲ್ಲೂ ಇದು ಸಾಧಾರಣಧರ್ಮ. ಮೂಡುವ ಮುಳುಗುವ ರವಿಯನ್ನು ಅನುಸರಿಸಿ ತಾವರೆಗಳೂ ಅರಳುತ್ತವೆ ಮರಳುತ್ತವೆ. ತೊಟ್ಟು ಕಳಚಿಕೊಳ್ಳುತ್ತವೆ. ಮರ ಬಿಟ್ಟು ಬಿಳಿಚಿಕೊಳ್ಳುತ್ತವೆ.


ಯಾವತ್ತೂ ಹುಟ್ಟು ಅಳಿವುಗಳಿರದ ಮಂದಿ ಇಬ್ಬರು ಮಾತ್ರ. ಲಕ್ಷ್ಮೀ ಮತ್ತು ನಾರಾಯಣರು. ಲಕ್ಷ್ಮೀದೇವಿಯೋ ಭಗವಂತನ ದಯೆಯಿಂದಲೇ ಹುಟ್ಟಳಿವುಗಳಿರದ ಭಾಗ್ಯಲಕ್ಷ್ಮೀ.


ಲಕ್ಷ್ಮೀರ್ಭಾಗ್ಯಸ್ಯ ದೇವತಾ...


ಅದಕ್ಕಾಗಿಯೋ ಎಂಬಂತೆ ಆಕೆಯ ಕಳೆಕಟ್ಟಿದ ಕಂಠದಲ್ಲಿ ಎಂದೆಂದೂ ಬಾಡದ ಅರವಿಂದ ಮಾಲೆ. ದೇವರ ಕುತ್ತಿಗೆಯಲ್ಲೂ ವನಮಾಲೆ.


ವನಮಾಲೀ ಗದೀ ಶಾರ್ಙ್ಗೀ...


ಹೀಗೆ ಸದಾ ಹೊಚ್ಚಹೊಸತನದ ಮಾಲೆಗಳನ್ನು ಮೈಮೇಲೆ ಆನಿಸಿಕೊಂಡ ಮಹಾಲಕ್ಷ್ಮೀ ನಾರಾಯಣರು ಮದುಮಕ್ಕಳನ್ನು ಕಾಪಾಡಲಿ. 


ಯಾವತ್ತೂ ಒಂದೇ ತೆರ ಬದುಕುವುದು ಕಡುಕಷ್ಟದ ಸಂಗತಿ.  ಕಾಲಕ್ಕೆ ತಕ್ಕಂತೆ ಕುಣಿಯಬೇಕೇನೋ ನಿಜ... ಆದರೆ ದಿನಕ್ಕೊಂದು ಧೋರಣೆ ಬದಲಿಸುವಂತಾಗ ಕೂಡದು. ಆರಾರು ತಿಂಗಳಿಗೆ ಒಂದೊಂದೂರು ಕಾಣುವಂತಾದರೆ ಅದು ಬಲು ಬವಣೆಯ ಬಾಳು. ಅಂಥಹ ಸಂದರ್ಭದಲ್ಲಿ ಮಾನಸಿಕವಾಗಿ ಕುಗ್ಗುವವರು ಮನೆಯ ಮಹಲಕ್ಷ್ಮಿಯರೇ..


ಒಂದು ದಿನ ಮಾಡಿ ಮರುದಿನ ಮಾಡದಿರುವಂತಿಲ್ಲ. ಮತ್ತೆ ಮೊದಲಿನಿಂದ ಆರಂಭ. ಗಟ್ಟಿ ಮನಸ್ಸಿನಿಂದ ಮೊದಲಿನಂತೆ ಒಂದು ಹಂತಕ್ಕೆ ಬಂದಾಗ ಅಲ್ಲಿ ನಿಲ್ಲಲಾಗುವುದಿಲ್ಲ.


ಆವಾಗ ದೇವರ ನೆನಪು ಕಾಡತೊಡಗುತ್ತದೆ. ಕುಂತಲ್ಲಿ ನಿಂತಲ್ಲಿ ದೇವರ ಹೆಸರನ್ನು ಪಠಿಸುತ್ತೇವೆ. ಹೀಗೆ ಮತ್ತೆಮತ್ತೆ ಪಠಿಸುವುದೇ ಪುರಶ್ಚರಣೆ. ಅದುವೆ ಜಪ. ಅದುವೆ ತಪಸ್ಸು. 


ಈ ರೀತಿ ಕಠಿಣ ಸಂದರ್ಭದಲ್ಲಿ ಈ ಪದದ ಪುರಶ್ಚರಣೆ ಅನುಗ್ರಹದಾಯಕವಾಗುತ್ತದೆಎಂದೆಂದೂ ಬಾಡದ ಅರವಿಂದ ಮಾಲೆಯ ಮಹಾಲಕ್ಷ್ಮೀಯನ್ನು ನೆನೆದರೆ ಒಂದೆಡೆ ಸ್ಥಿರತೆಯನ್ನು ಅನುಗ್ರಹಿಸುತ್ತಾಳೆ.*


ಅದೇ ರೀತಿ ಸುಮಂಗಲಿಯರ ಮುತ್ತೈದೆತನದ ದೀರ್ಘಾವಧಿಯನ್ನೂ ನೀಡಿ ಕಾಪಾಡುತ್ತಾಳೆ...


✍️ ಅನಂತಮೂರ್ತಿ ಬೆಳ್ಳರ್ಪಾಡಿ.

***

|ಲಕ್ಷ್ಮೀಶೋಭಾನೆ ಮತ್ತು ಮಾತೆಯರು||. Day#14


ದೇವಾಂಗಪಟ್ಟೆಯ ಮೇಲು ಹೊದ್ದಿಕೆಯ| 

ಭಾವೆ ಮಹಲಕ್ಷುಮಿ ಧರಿಸಿದಳೆ |

ಭಾವೆ ಮಹಲಕ್ಷುಮಿ ಧರಿಸಿದಳಾ ದೇವಿ ತನ್ನ

ಸೇವಕ ಜನರ ಸಲಹಲಿ ||೧೪||


ಮಹಾಲಕ್ಷ್ಮೀದೇವಿ. ದೇವಲೋಕದಲ್ಲಿಯೇ ಅತಿಸುಂದರವಾದ ಪಟ್ಟೆಸೀರೆಯನ್ನು ಉಟ್ಟಿದ್ದಾಳೆ. ಮೈತುಂಬ ಮೇಲುದ ಹೊದ್ದ  ಸೆರಗು ಹೊಳೆಯುತ್ತದೆ. ಭಾವನೆಗಳ ಮೊತ್ತದಂತಿರುವ ತಾಯಿ ಲಕ್ಷ್ಮೀದೇವಿ ಅವಳ ಸೇವೆಯನ್ನು ಕೈಗೊಳುವ ಮಂದಿಯನ್ನು ಕಾಪಾಡಲಿ. 


ಮುತ್ತೈದೆಭಾಗ್ಯ(ಮಾನ) ರಕ್ಷಣೆ. ಈ ಪದ ಪಠಣದ ಫಲಶ್ರುತಿ.


ಹೊಟ್ಟೆ ಬಟ್ಟೆ ಇವೆರಡು ಮನುಷ್ಯರಾದ ಎಲ್ಲರಿಗೂ ಅನಿವಾರ್ಯ. ಮಗಳನ್ನು ಧಾರೆಯೆರೆದು ಕೊಡುವ ತಂದೆತಾಯಿಗಳು ಹೇಳುವ ಮಾತು ಇದೇ. ಮಗಳ ಹೊಟ್ಟೆ ಬಟ್ಟೆಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಅಂತ.


ಮಹಾಲಕ್ಷ್ಮೀ ದೇವಾಧಿದೇವನ ಮಡದಿಯಾದ್ದರಿಂದ ದೇವಲೋಕದ ಅಂದಚೆಂದಕ್ಕೂ ಮಿಗಿಲಾದ ಪಟ್ಟೆಸೀರೆಯನ್ನು ಉಟ್ಟುಕೊಂಡಿದ್ದಾಳೆ. ಮೈ ಮುಚ್ಚಿಕೊಳ್ಳುವ ಮೇಲುದ ಹೊದ್ದುಕೊಂಡಿದ್ದಾಳೆ. ಆ ಸೆರಗೂ ಕೂಡ ದಿವ್ಯವಾದದ್ದೇ... ಭಾವನಾಸಂಪನ್ನೆಯಾದ ತಾಯಿ ಲಕ್ಷ್ಮೀದೇವಿ ಎಲ್ಲರೂ ಗೌರವದಿಂದ ಕಾಣುವಂತೆ ಬಟ್ಟೆ ಉಟ್ಟಿದ್ದಾಳೆ. ಅಂಥಹ ಮರ್ಯಾದಾಗಣಿಯಂತಿರುವ ಮಹಾಲಕ್ಷ್ಮೀದೇವಿ ದೇವರ ಚಾಕರಿಯ ಮಂದಿಯನ್ನು ಕಾಪಾಡಲಿ.


ಮುಡಿಗೆ ಹೂವು ಮೈಗೊಪ್ಪುವ ಸೀರೆ ಇವೆರಡನ್ನು ತಮ್ಮಲ್ಲೆಷ್ಟೇ ಇದ್ದರೂ ಯಾವ ತಾಯಂದಿರೂ  ಬೇಡವೆನ್ನುವುದಿಲ್ಲ. ಏಕೆಂದರೆ ಅವರ ಸಂಪತ್ತು ಅವೆರಡೇ. 


ನಿತ್ಯಬಳಕೆಯಿಂದಾರಂಭಿಸಿ ಯಾವ್ಯಾವ ಸಮಾರಂಭಕ್ಕೆ ಎಂಥೆಂಥಾ ಸೀರೆ ಬೇಕು ಅಂತ ಸೂಕ್ಷ್ಮದ ತಿಳಿವು ಅವರ ಜಾಣ್ಮೆಯ ಸಂಕೇತಗಳು. ತಮ್ತಮ್ಮ ಪಾತ್ರಾಪಾತ್ರತೆಗನುಗುಣವಾಗಿ, ಬರುವ ಮಂದಿಯ ಮನಸ್ಥಿತಿಗೊಪ್ಪುವಂತೆ, ಕರೆದವರ ಘನತೆ ಕೆಡದಂತೆ, ಮನೆತನದ ಮಾನಕ್ಕೆ ಕುಂದಾಗದಂತೆ ಪಾಲಿಸುವ ವಸ್ತ್ರಸಂಹಿತೆ. ಅದೊಂದು ಮಹಿಳಾಲೋಕದ ಗುಪ್ತಸಂವಿಧಾನ.


ಕೊಂಡು ತಂದ ಸೀರೆಗೆ ಉಡಲು ಅನುವಾಗುವಂತೆ ಕತ್ತರಿಸುವುದೇನು... ಕೆಲವೆಡೆ ಬಟ್ಟೆಯ ತುಂಡುಗಳನ್ನು ಜೋಡಿಸಿ ಹೊಲಿದುಕೊಳ್ಳುತ್ತಾರೆ. ಇಲ್ಲವಾದರೆ ಅವರಿಗೆ ನೆರಿಗೆ ಹಿಡಿಯಲು ಸೀರೆ ಸರಿ ಬರುವುದಿಲ್ಲ. ಸೆರಗಿನ ತುದಿಯಲ್ಲಿ ಜೋಲಾಡುವ ಬಿಡಿಬಿಡಿಯಾದ ನೂಲಿನ ಸಮೂಹವನ್ನು ಗಂಟುಗಂಟಾಗಿಸಿ ಗೊಂಡೆಗಳ ಆಕೃತಿಯಲ್ಲಿ ಅಲಂಕರಿಸುತ್ತಾರೆ. ಅಂಥಹ ಕುಸುರಿ ಕೆಲಸಗಳ ಕಲೆಗಾರಿಕೆಗೆ ಸಹನೆ ಎಷ್ಟಿರಬೇಡ..?!! ಯೋಚಿಸಿ..


ಹೇಳಿಕೇಳಿ ಕ್ಷಮಯಾ ಧರಿತ್ರಿಯರಲ್ಲವೇ..?!!  


ಈ ಪದ ಪುರಶ್ಚರಣೆಯಿಂದ ಮಹಾಲಕ್ಷ್ಮೀಕೃಪೆ ಮತ್ತು  ಬೇಕುಬೇಕಾದ ಬಟ್ಟೆಬರೆಗಳ ಅನುಕೂಲವಾದೀತು. ಬಟ್ಟೆ ಮಾನದ ಕುರುಹು. ಹಾಗಾಗಿ ಈ ಪದ ಪುರಶ್ಚರಣೆಯಿಂದ ಮಹಿಳೆಯರ ಮಾನ ಉಳಿದೀತು.


ದೇವರ ಚಾಕರಿ ಮಾಡುವ ಮಹಿಳೆಯರನ್ನು ಮತ್ತು ದೇವರ ಪೂಜಾದಿಗಳಿಗೆ ಅನುಕೂಲೆಯರಾದ ಗೃಹಿಣಿಯರನ್ನು ತಾಯಿ ಲಕ್ಷ್ಮೀದೇವಿ ಕಾಪಾಡಲಿ.

✍️ ಅನಂತಮೂರ್ತಿ ಬೆಳ್ಳರ್ಪಾಡಿ.

***

not got information from Shloka 15

***


||ಲಕ್ಷ್ಮೀಶೋಭಾನೆ ಮತ್ತು ಮಾತೆಯರು||. 


ಚಿನ್ಮಯವೆನಿಪ ನಿಮ್ಮ ಮನೆಗಳಲ್ಲಿ ಜ್ಯೋ- 

ತಿರ್ಮಯವಾದ ಪದ್ಮದಲ್ಲಿ |

ರಮ್ಮೆಯರೊಡಗೂಡಿ ರಮಿಸುವ ಶ್ರೀಕೃಷ್ಣ 

ನಮ್ಮ ಮನೆಯ ಹಸೆಗೆ ಬಾ ||೮೧||


ಶ್ರೀಕೃಷ್ಣ ದೇವರೇ.... ನಿಮ್ಮ ಮನೆಗಳೆಲ್ಲ ಆನಂದಮಯ. ನೀವು ಕೂಡುವ ಪೀಠಗಳೆಲ್ಲ ಬೆಳಗೋ ಪದ್ಮಮಯ. ಅಲ್ಲಿ ಲಕ್ಷ್ಮೀಸಹಿತರಾಗಿ ವಿಲಾಸಿಸುವ ನೀವು ನಮ್ಮ ಮನೆಗೆ ಬಂದು ಹಸೆಮಣೆಯಲ್ಲಿ ಕೂಡಿರಿ.. ಇದು ದೇವನಾರಿಯರ ಪ್ರಾರ್ಥನೆ. 

ಈ ಪದದ ಪಠಣ-ಪುರಶ್ಚರಣದಿಂದ ಸ್ವಂತಮನೆ ಮತ್ತು ಶಾಂತಿ ನೆಮ್ಮದಿ ಲಾಭ.

ಶ್ರೀಕೃಷ್ಣದೇವರು ದ್ವಾರಕೆಯಲ್ಲಿ ತನ್ನೆಲ್ಲ ರಾಣಿಯರಿಗೂ ಪ್ರತ್ಯೇಕಪ್ರತ್ಯೇಕ ಮನೆಗಳನ್ನು ಮಾಡಿಕೊಟ್ಟು ಎಲ್ಲರೊಂದಿಗೆ ಸುಖೀ ಸಂಸಾರ ನಡೆಸಿದವರು. ಅದು ಹೇಗೆ ಸಾಧ್ಯವಾಯ್ತೆಂದರೆ... 

ಅವೆಲ್ಲ ಆನಂದಮಯ ಮನೆಗಳು. ದುಃಖದುರಿತಗಳನೆಲ್ಲ ದೂರದಲ್ಲಿಡುವ ನಮ್ಮಚ್ಯುತನ ಮನೆಗಳವು. ನಮ್ಮ ಮನೆಯಲ್ಲೂ ದುಃಖದುರಿತಗಳು ಬರಬಾರದೆಂದಾದರೆ ಮನೆ ನನ್ನದಲ್ಲ ದೇವರದೆಂದು ಭಾವಿಸಿರಿ.. ದೇವರ ಮನೆಯಲ್ಲಿ ದೋಷದುರಿತಗಳಿರುವುದಿಲ್ಲ. ದುಷ್ಟಾರಿಷ್ಟಗಳಿರುವುದಿಲ್ಲ. ಸದಾ ಆನಂದಮಯವಾಗಿರುತ್ತದೆ.

ಶ್ವೇತದ್ವೀಪ ಅನಂತಾಸನ ವೈಕುಂಠಗಳೆಂಬುದು ಭಗವಂತನ ಪ್ರಸಿದ್ಧ ಮನೆಗಳು. ಅಲ್ಲಿ ಆತ ಕೂರುವ ಆಸನಗಳೇ ಈ ಪದ್ಮಗಳು. ಸತ್ತ್ವಾಭಿಮಾನಿನೀ ಶ್ರೀದೇವಿ ರಜೋಭಿಮಾನಿನೀ ಭೂದೇವಿ ತಮೋಭಿಮಾನಿನೀ ದುರ್ಗಾದೇವಿ. ಹೀಗೆ ಈ ಮೂವರು ಪೀಠಾಭಿಮಾನಿನಿಗಳು. ಭಗವತ್ಸನ್ನಿಧಾನವಿರುವಲ್ಲಿ ಇವಿಷ್ಟು ತಾನಾಗಿಯೇ ಇರುತ್ತವೆ. ಭಗವಂತ ಈ ಸ್ಥಳಗಳಲ್ಲಿ ಲಕ್ಷ್ಮೀಸಹಿತನಾಗಿ ಅನುಗ್ರಹಿಸುತ್ತಾನೆ.  ಅಂಥಹ ಭಗವಂತ ನಮ್ಮ ಮನೆಯ ಹಸೆಮಣೆಯಲ್ಲಿ ಬಂದು ಕೂಡಲಿ.. 

ಚಿನ್ಮಯವೆಂದರೆ ಜ್ಞಾನಮಯ ಎಂದರ್ಥ. ತಿಳುವಳಿಕೆ ಇಲ್ಲದೆ ಏನೇನೂ ನಡೆಯದು. ಎಲ್ಲಕ್ಕೂ ತಿಳಿವು ಮುಖ್ಯ. ತಿಳಿವೇ ಇಲ್ಲದ ಮಂದಿ  ಅಳಿದಂತೆ. ಉಳಿಯುವುದಂತೂ ದೂರದ ಮಾತು.  

ರಾಜನಿಂದಾರಂಭಿಸಿ ಸಮಾಜದ ಕಟ್ಟಕಡೆಯ ಮಂದಿಯೂ ಒಂದಲ್ಲ‌ಒಂದು ರೀತಿಯ ತಿಳುವಳಿಕೆಯುಳ್ಳವರೇ ಆಗಿರುತ್ತಾರೆ. ಎಲ್ಲ ಕ್ಷೇತ್ರಗಳಲ್ಲೂ ಆಯಾಯ ವೃತ್ತಿಗನುಗುಣವಾಗಿ ಅಳತೆ-ಪ್ರಮಾಣ ಹದ-ಹದ್ದು ಸಾಧ್ಯಾಸಾಧ್ಯತೆಗಳು ಒಳಹೊರಗು ಎತ್ತರಬಿತ್ತರ ಆಯವ್ಯಯ ಲಾಭನಷ್ಟ ಹೀಗೆ ಈ ಎಲ್ಲ ತಿಳುವಳಿಕೆ ಪಡೆದಿರುತ್ತಾರೆ. ಇದೆಲ್ಲ ಜ್ಞಾನಾನಂದಮಯನಾದ ಭಗವಂತನ ಕೃಪೆ. ಈ ರೀತಿಯ ಅನುಸಂಧಾನದಿಂದ ನಮ್ಮ ಮನೆಗಳು ವಿದ್ಯೆ ತಿಳಿವು ಓದು-ಬರಹಗಳ ಆಗರವಾಗಲಿದೆ..

ಮನೆ ಮುಂದೆ ಮತ್ತು ಹೊಸ್ತಿಲು ಪೂಜೆ ಮಾಡುವಾಗ ರಂಗೋಲಿಯಿಂದ ಪದ್ಮಾಕಾರವನ್ನು ಬರೆಯುವುದರಿಂದ ಆ ಮನೆ ಲಕ್ಷ್ಮೀನಾರಾಯಣರ ಸನ್ನಿಧಾನ ಭೂಯಿಷ್ಠವಾಗುತ್ತದೆ. 

ಶ್ರೀಕೃಷ್ಣದೇವರನ್ನೇ  ನಮ್ಮ ಮನೆಯ ಹಸೆಮಣೆಗೆ ಕರೆದೆವಾದರೆ ನಮ್ಮ ಮನೆಯಲ್ಲಿ ನಿತ್ಯನಿರಂತರ ಕಲ್ಯಾಣೋತ್ಸವಗಳಿಗೆ ಕೊರತೆಯಿರದು.

ಜ್ಯೋತಿರ್ಮಯವಾದ ಪದ್ಮದಲ್ಲಿ...... ಈ ಪದ ವಿಶಿಷ್ಟವಾದದ್ದು.  ರಂಗೋಲಿಯಿಂದ ಪದ್ಮ ಬರೆದು ಅಲ್ಲಿ ತುಪ್ಪದೀಪ ಪ್ರಜ್ವಾಲನೆ ಮಾಡಿ ಈ ಲಕ್ಷ್ಮೀಶೋಭಾನೆಯನ್ನು ಪಠಿಸುತ್ತಾ ಸುಮಂಗಳೆಯರು ಸುಗಂಧಪುಷ್ಪಗಳಿಂದ ಅರ್ಚಿಸಿದರೆ ಸ್ವಂತಮನೆ ಆಗುವುದು. ಮತ್ತು ಭಗವಂತನ ದಯೆಯಿಂದ ಅಲ್ಲಿ ಸುಖಶಾಂತಿ ಸಮಾಧಾನಗಳು ನೆಲೆಸುವವು.

ಹೀಗೆ ವಿಶಿಷ್ಟಗುಣಗಳುಳ್ಳ ಈ ಲಕ್ಷ್ಮೀಶೋಭಾನೆ ಪದವನ್ನು ಪಾರಾಯಣ ಮಾಡುವ ಮಂಗಲೆಯರಾದ ಮಾತೆಯರಿಗೆ ಲಕ್ಷ್ಮೀನಾರಾಯಣರ ದಯೆ ಸದಾ ಇರಲಿ.

****