Showing posts with label ಕರೆದಲ್ಲಿ ಬರುವ ಸುರತರು ಕರುಣಾಸಾಂದ್ರ ankita ramakanta vittala. Show all posts
Showing posts with label ಕರೆದಲ್ಲಿ ಬರುವ ಸುರತರು ಕರುಣಾಸಾಂದ್ರ ankita ramakanta vittala. Show all posts

Thursday 1 July 2021

ಕರೆದಲ್ಲಿ ಬರುವ ಸುರತರು ಕರುಣಾಸಾಂದ್ರ ankita ramakanta vittala

 ರಾಗ: ಕಾಂಬೋಜಿ ತಾಳ: ಝಂಪೆ

ಕರೆದಲ್ಲಿ ಬರುವ ಸುರತರು ಕರುಣಾಸಾಂದ್ರ

ಗುರು ಸಾರ್ವಭೌಮ ಯತಿವರ ರಾಘವೇಂದ್ರ

ಹಿಂದೆ ನರಹರಿಯನಲವಿಂದ ಅರ್ಚಿಸಿದ ಕ-

ರ್ಮಂದಿಗಳಿಗೊಡೆಯ ವರ ಪ್ರಹ್ಲಾದನಾ

ಸುಂದರಾಂಶದಿ ಜನಿಸಿ ವಸುಂಧರೆಯ ಮೇಲಿನ್ನು

ಗಂಧವಾಹನ ಮತವ ಛಂದದಲಿ ಬೀರಿದೆಯೊ 1

ಮೂರನೆಯ ರೂಪದಲಿ ಯತಿಯಾಗಿ ಅವತರಿಸಿ 

ಚಾರುತರ ಮಧ್ವಮತ ಸಾರ ತತ್ತ್ವಗಳ

ಮೂರು ಮೇಲೊಂದು ದಶದಾರು ಗ್ರಂಥಗಳಿಂದ

ಧಾರುಣಿಯ ಸುರನಿಕರಕರುಹಿದೆಯೊ ದೇವಾಂಶ 2

ರಾಮ ನರಹರಿ ಕೃಷ್ಣ ವೇದವ್ಯಾಸರ ನಿತ್ಯ-

ಧಾಮರೆನಿಸುತಲವರ ಕರುಣದಿಂದ1

ಕಾಮಿತಾರ್ಥವ ಸಲಿಸಿ ಕೀರುತಿಯನೆ ಪೊಂದಿ

ಭೂಮಿಯಲಿ ಮೆರೆಯುತಿಹ ಮಂತ್ರಾಲಯ ಪ್ರಭುವೆ 3

ಗಳದಲ್ಲಿ ಪದ್ಮಾಕ್ಷಿ ತುಳಸಿ ಮಾಲೆಯ ಧರಿಸಿ

ಪೊಳೆವ ದ್ವಾದಶನಾಮ ಅಕ್ಷತೆಗಳಿಂದ

ಚೆಲುವ ಗೋಪಾಲನ್ನ ಹೃದಯದೊಳು ನೆಲಗೊಳಿಸಿ

ಇಳೆಯೊಳಗೆ ಅಳವಡದ ಮಹಿಮೆಯಿಂದಲಿ ಮೆರೆದೆ 4

ಮಾಸ ಐದರಲಿ ಪರ ಮೂರನೆಯ ದಿನದಲ್ಲಿ

ಆಶಿಸಲು ತವ ಪಾದ ಸೇವೆಯೆನೆ ಇತ್ತು

ದಾಸನಾದೆನ್ನ ಮನದಾಸೆಯೆನೆ ನೀ ಸಲಿಸಿ

ಪೋಷಿಸಿದೆ ಶ್ರೀ ರಮಾಕಾಂತವಿಠಲನ ಪ್ರಿಯ 5

****