Showing posts with label ನೆರೆ ನಂಬಿದೆ ಗುರು ಮನ ಮಂದಿರದೊಳು raghupati vittala. Show all posts
Showing posts with label ನೆರೆ ನಂಬಿದೆ ಗುರು ಮನ ಮಂದಿರದೊಳು raghupati vittala. Show all posts

Saturday 1 May 2021

ನೆರೆ ನಂಬಿದೆ ಗುರು ಮನ ಮಂದಿರದೊಳು ankita raghupati vittala

ರಾಗ : ಹಂಸಾನಂದೀ         ತಾಳ : ಆದಿ


ನೆರೆ ನಂಬಿದೆ ಗುರು ಮನ ಮಂದಿರದೊಳು ।

ಪರಿತೋಷಿಸು ಗುರು ರಾಘವೇಂದ್ರ ।। ಪಲ್ಲವಿ ।।


ವರ ತುಂಗಾ ತೀರದಿ ಮಂತ್ರಾಲಯದಿ ।

ನಿರುತ ನೆಲೆಸಿದ ಮಂಗಳ ಮಹಿಮನೆ ರಾಘವೇಂದ್ರ ।। ಅ ಪ ।।


ಮುದವಾದರು ಬಲು ಖೇದವಾದರೂ ।

ಭೇದವ ಮಾಡದಿರು ರಾಘವೇಂದ್ರ ।

ಮುದಮುನಿ ಶಾಸ್ತ್ರಾರ್ಥ ಸದಮಲ ಹೃದಯದಿ ।

ಭೋಧಿಸುತಿರು ನೀ ರಾಘವೇಂದ್ರ ।। ಚರಣ ।।


ಶರಣೆಂದವರಘ ತ್ವರಿತದಿ ನೀಗುವ ।

ಶರಣರ ಸುರಧೇನು ರಾಘವೇಂದ್ರ ।

ಪರಿಪರಿ ಮೋದವ ಭರದಲಿ ಬೀರುತ ।

ಪರಮ ಕರುಣಿ ಜಯ ರಾಘವೇಂದ್ರ ।। ಚರಣ ।।


ಭವ ರೋಗಂಗಳ ಜವದಲಿ ನೀಗುವ ।

ಭವರೋಗ ವೈದ್ಯನೇ ರಾಘವೇಂದ್ರ ।

ರವಿ ಶತ ತೇಜ ಶ್ರೀ ರಾಮನ ಪೂಜಿಪ ।

ಕವಿಯಗ್ರೇಸರ ರಾಘವೇಂದ್ರ ।। ಚರಣ ।।


ಕುಷ್ಠ ಕುಬ್ಜ ಬದಿರಾದಿ ವ್ಯಾಧಿಗಳ ।

ನಷ್ಟವ ಗೊಳಿಸುವ ರಾಘವೇಂದ್ರ ।

ನಿಷ್ಠೆಯಿಂದ ಅಷ್ಟೋತ್ತರ ಪಠಿಸಲು ।

ಇಷ್ಟವ ಗರೆಯುವ ರಾಘವೇಂದ್ರ ।। ಚರಣ ।।


ವರ ಸುಧಾ ಗ್ರಂಥಕೆ ಪರಿಮಳ ಟೀಕೆಯ ।

ಸರಸದಿ ರಚಿಸಿದ ರಾಘವೇಂದ್ರ ।

ಹರಿಮತ ಶರಧಿಗೆ ಚೆಂದಿರ ನೆನೆಪನೆ ।

ಹರಿ ಗುಣ ನಾಯಕ ರಾಘವೇಂದ್ರ ।। ಚರಣ ।।


ಪ್ರತಿ ಗುರುವಾರದಿ ಅಂದಣವೇರುವ ।

ಯತಿ ಕುಲ ತಿಲಕನೆ ರಾಘವೇಂದ್ರ ।

ಅತಿಶಯ ಭಕುತಿಲಿ ಸ್ತುತಿಸುವ ಜನರಿಗೆ ।

ಮತಿ ಶುಭವೀಯುವ ರಾಘವೇಂದ್ರ ।। ಚರಣ ।।


ಭಕುತರ ಮೊರೆ ಕೇಳಿ ಯುಕುತಿಯಿಂದಲಿ ।

ಮುಕುತಿ ಪಥವ ತೋರೋ ರಾಘವೇಂದ್ರ ।

ಅಕಳಂಕ ಮಹಿಮ  ಶ್ರೀ ರಘುಪತಿ ವಿಠ್ಠನ ।

ಸುಖ ಸಂತಸ ನೀಡೋ ರಾಘವೇಂದ್ರ ।। ಚರಣ ।।

*****