Showing posts with label ಎಂತು ನೀ ವಶವಾದಿಯೇ ಭಾರತೀದೇವಿ shyamasundara. Show all posts
Showing posts with label ಎಂತು ನೀ ವಶವಾದಿಯೇ ಭಾರತೀದೇವಿ shyamasundara. Show all posts

Saturday 1 May 2021

ಎಂತು ನೀ ವಶವಾದಿಯೇ ಭಾರತೀದೇವಿ ankita shyamasundara

 ಶ್ರೀ ಭಾರತೀದೇವಿ ಸ್ತೋತ್ರ ಪದ "

ರಾಗ : ಆನಂದಭೈರವಿ    ತಾಳ : ಆದಿ 


ಎಂತು ನೀ ವಶವಾದಿಯೇ 

ಭಾರತೀದೇವಿ ।

ಎಂತು ನೀ ಮರುಳಾದಿಯೇ ।। ಪಲ್ಲವಿ ।।


ಎಂಟು ನೀ ವಶವಾದಿ ।

ಕಂತುಹರನ ತಾಯಿ ।

ದಂತಿಗಮನೆ । ದಮ ।

ಯಂತಿ ಕಾಂತ ಸುತೆ ।। ಅ ಪ ।।


ಧರೆಯಲಿ ಪುಟ್ಟುತಲಿ ಆಕಾಶಕೆ ।

ಭರದಿಂದ ಜಿಗಿಯುತಲಿ ।

ಸರಿಸಿಜ ಸಖನಾದ ।।

ತರಣಿಯ ಫಲವೆಂದು ।

ಅರಿತು ಭಕ್ಷಿಸಲ್ಹೋದ ।

ತರುಚರ ರೂಪಿಗೆ ।। ಚರಣ ।।


ಪುಂಡರೀಕಾಕ್ಷೆ ಕೇಳಿ -

ದ್ವಾಪರದಿ । ಪ್ರ ।

ಚಂಡಗೆ ಒಲಿಯುತಲಿ ।

ಭಂಡ ಬಕನ ಶಿರ - ।। 

ದಂಡುಗೆಡಹಿ ಅವನ ।

ಭಂಡಿ ಓದನ  । 

ಉಂಡ ಪುಂಡಗೆ 

ಮಾತೆ ।। ಚರಣ ।।


 ಶ್ರೀ ಶ್ಯಾಮಸುಂದರನನೇ 

ತ್ರೈಲೋಕಕ್ಕೆ ।

ಈಶನೆಂಬುದು ತಾನು ।

ಲೇಸಾಗಿ ಪೇಳಲು ।।

ಲೇಶವಾದರು ನಿನ್ನ ।

ಆಶೆ ಇಲ್ಲದ ತಾ ।

ಸಂನ್ಯಾಸಿ ಆದವನಿಗೆ ।। ಚರಣ ।। 

***

ವಿವರಣೆ-ಆಚಾರ್ಯ ನಾಗರಾಜು ಹಾವೇರಿ,ಗುರು ವಿಜಯ ಪ್ರತಿಷ್ಠಾನ

ಕಂತುಹರನ ತಾಯಿ = ಮನ್ಮಥನ ಸುಟ್ಟ ಶ್ರೀ ಮಹಾರುದ್ರದೇವರ ತಾಯಿ. 

ದಂತಿಗಮನೆ = ಗಜಗಮನೆ 

" ದಮಯಂತಿ ಕಾಂತ ಸುತೆ "

ದಮಯಂತಿಯಿಂದ ಜನಿಸಿದ ನಳನಂದಿನಿ ಇಂದ್ರಸೇನಾ ನಾಮಕಳಾದ ಶ್ರೀ ಭಾರತೀದೇವಿ 

ಸರಸಿಜ ಸಖ = ಕಮಲ ಮಿತ್ರನಾದ ಸೂರ್ಯ 

ತರುಚರ ರೂಪಿ = ವೃಕ್ಷ ಚರನಾದ ವಾನರ ರೂಪಿ ಶ್ರೀ ಹನೂಮಂತದೇವರು

ಓದನ = ಅನ್ನ

" ವಿಶೇಷ ವಿಚಾರ "

ಶ್ರೀ ಶ್ಯಾಮಸುಂದರದಾಸರು ತಮ್ಮಿಂದ ರಚಿತವಾದ ಈ ಕೃತಿಯಲ್ಲಿ.... 

ಮೊದಲನೆಯ ನುಡಿಯಲ್ಲಿ " ಶ್ರೀ ಹನೂಮಂತದೇವರು "

ಎರಡನೆಯ ನುಡಿಯಲ್ಲಿ " ಶ್ರೀ ಭೀಮಸೇನದೇವರು "

ಮೂರನೆಯ ನುಡಿಯಲ್ಲಿ " ಶ್ರೀ ಸರ್ವಜ್ಞಾಚಾರ್ಯರು "

ಶ್ರೀ ವಾಯುದೇವರ ಅವತಾರತ್ರಯಗಳಿಗೆ ನೀನು ಹೇಗೆ ವಶವಾದಿ ಮತ್ತು ಮರುಳಾದೆಯಮ್ಮಾ ಎಂದು ಶ್ರೀ ಭಾರತೀದೇನ್ನು ಕೇಳಿದ್ದಾರೆ.

****