Showing posts with label ಸುಜನರಾವನ ಮನೆ prasannavenkata ankita suladi ಸತ್ಸಂಗ ಸುಳಾದಿ SUJANARAVANA MANE SATSANGA SULADI. Show all posts
Showing posts with label ಸುಜನರಾವನ ಮನೆ prasannavenkata ankita suladi ಸತ್ಸಂಗ ಸುಳಾದಿ SUJANARAVANA MANE SATSANGA SULADI. Show all posts

Sunday 29 November 2020

ಸುಜನರಾವನ ಮನೆ prasannavenkata ankita suladi ಸತ್ಸಂಗ ಸುಳಾದಿ SUJANARAVANA MANE SATSANGA SULADI

Audio by Mrs. Nandini Sripad

 ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತ  ಸತ್ಸಂಗ ಸುಳಾದಿ 

( ದಾಸರು ಸಜ್ಜನರ ಸಂಗವನ್ನು , ಅದರಿಂದುಂಟಾಗುವ ಆಧ್ಯಾತ್ಮಿಕ ಲಾಭಾತಿಶಯಗಳನ್ನು ಎಳೆಎಳೆಯಾಗಿ ಈ ಸುಳಾದಿಯಲ್ಲಿ ಬಿಡಿಸಿ ಹೇಳಿದ್ದಾರೆ. ಪರಮಭಾಗವತರು , ಸಾಧುಸಂತರು , ಭಗವದ್ಭಕ್ತರು ಭೋಜನ ಸ್ವೀಕರಿಸಿದರೆ ಅದರಿಂದುಂಟಾಗುವ ಪ್ರಯೋಜನವನ್ನು ಹೇಳುತ್ತಾ , ಸಜ್ಜನ ಸಂಗವು ಜನರ ವಿಷಯ ನಿವೃತ್ತಿಯನ್ನು ಮಾಡುವುದಲ್ಲದೆ , ಭವಸಾಗರವನ್ನು ದಾಟಿಸುವ ತೆಪ್ಪವಾಗಬಲ್ಲದು , ಭಗವದ್ಭಕ್ತರ ಸಹವಾಸವೇ ಮೋಕ್ಷಕ್ಕೆ ಸಾಧನ ಎಂದು ಭಾಗವತದ ಆಶಯವನ್ನೆಲ್ಲಾ ಇಲ್ಲಿ ವ್ಯಕ್ತಪಡಿಸಿದ್ದಾರೆ. ) 


 ರಾಗ ಅಠಾಣ 


 ಧ್ರುವತಾಳ 


ಸುಜನರಾವನ ಮನೆಯಲ್ಲುಂಡು ದಣಿದರೆ

ಅಜನಜನಕನೇವೆ ತೃಪುತನಾದನು ಗಡ

ಅಜನಜನಕ ತೃಪುತನಾದಡೆ ತಡಿಯದೆ

ತ್ರಿಜಗಜ್ಜೀವರುಂಡಂತಾಯಿತು ನೋಡಿರೊ

ಸುಜನರಿಂದುರು ವಿಷಯದ ನಿವೃತ್ತಿ

ಸುಜನ ಸಂಗವೆ ಭವಾಂಬುಧಿಗೆ ಪ್ಲವ

 ಪ್ರಸನ್ನವೆಂಕಟ ಕೃಷ್ಣನೆ ಕರ್ಣಾಧಾರ ॥ 1 ॥ 


 ಮಠ್ಯತಾಳ 


ಎಲ್ಲಿ ಹರಿಯ ಪೂಜಕರಿದ್ದ ದೇಶ

ಅಲ್ಲಿ ಗಂಗಾದಿ ನದಿಗಳ ನಿವಾಸ

ಅಲ್ಲಿ ಸರ್ವಸಂಪದ ಶ್ರೇಯಸಕ್ಕು

ಸಲ್ಲಲಿತ ಪಾತ್ರ ಲಾಭವೆಲ್ಲಕ್ಕು

ಫುಲ್ಲಲೋಚನ ಪ್ರಸನ್ನವೆಂಕಟ ಕೃಷ್ಣನ 

ಬಲ್ಲ ಭಾಗ್ಯನಿಧಿಗಳ ಬರವೆಲ್ಲಿ

ಅಲ್ಲಿ ಸರ್ವಸಂಪದ ಶ್ರೇಯಸಕ್ಕು ॥ 2 ॥ 


 ರೂಪಕತಾಳ 


ಬ್ರಹ್ಮವಿದ್ಯಾ ತಪೋಪೂರ್ಣ ಹೃದಯರಾದ

ಬ್ರಾಹ್ಮರಿದ್ದಲ್ಲಿ ಪರಬ್ರಹ್ಮನಿಪ್ಪನಾಗಿ

ಬೊಮ್ಮನಲ್ಲಿ ವಿಶ್ವವಿಪ್ಪದು ತಪ್ಪುದ

ಬ್ರಹ್ಮವಿದ್ಯಾ ತಪೋಪೂರ್ಣ ಹೃದಯರಾದ

ಬೊಮ್ಮನ ಪ್ರತಿಮರು ಬ್ರಹ್ಮಜ್ಞ ಬ್ರಾಹ್ಮರು

ಬ್ರಾಹ್ಮರ ದೈವ ಪ್ರಸನ್ವೆಂಕಟ ಕೃಷ್ಣ 

ಬ್ರಹ್ಮವಿದ್ಯಾ ತಪೋಪೂರ್ಣ ಹೃದಯರಾದ ॥ 3 ॥ 


 ಅಟ್ಟತಾಳ 


ಪುಷ್ಕರತ್ರಯ ಕುರುಕ್ಷೇತ್ರ ಪುಲ -

ಹಾಶ್ರಮ ಗಯಾ ಪ್ರಯಾಗ ಶ್ರೀ -

ಪುಷ್ಕರಾಕ್ಷನ ದಾಸರಲ್ಲಿ ನೈ -

ಮಿಷಾರಣ್ಯ ಫಲ್ಗುಶೇತು ಕು -

ಶಸ್ಥಳ ಮಧುರಾಪುರವು ಪ್ರಭಾ -

ಸಕ್ಷೇತ್ರವು ವಾರಣಾಸಿ ಬಿಂದುಸರ ಪಂ -

ಪಾಕ್ಷೇತ್ರವು ಶ್ರೀಪ್ರಸನ್ನವೆಂಕಟ ಕೃಷ್ಣ ತೀರ್ಥಚರಣ ಶ್ರೀ -

ಪುಷ್ಕರಾಕ್ಷನ ದಾಸರಲ್ಲಿ ॥ 5 ॥ 


 ಏಕತಾಳ 


ನಾರಾಯಣಾಶ್ರಮ ನಂದಾಶ್ರಮ ಸೀ -

ತಾರಾಮಾಶ್ರಮ ಸರ್ವಾಶ್ರಮದಲಿ

ನೈರಂತರವಾಸಕೆ ಸಹಸ್ರಾಧಿಕವು

ಶ್ರೀರಮಣನ ಶರಣರು ಕೊಂಡರೆ

ಮೇರು ಮಹೇಂದ್ರವು ಮಲಯಾದಿ ಕುಲಗಿರಿ

ಭೂರಿಪುಣ್ಯದ ಧರ್ಮಾದಿ ಫಲಸ್ಥಳ

ಕಾರುಣ್ಯನಿಧಿ ಪ್ರಸನ್ನವೆಂಕಟ ಕೃಷ್ಣ 

ಚಾರು ಚರಣ ಚಾರಕರೆ ಪಾವನರು ॥ 6 ॥ 


 ಜತೆ 


ಸುಜ್ಞಜನರ ಪ್ರಿಯ ಪ್ರಸನ್ವೆಂಕಟಕೃಷ್ಣ 

ಸುಜ್ಞರೆ ಹರಿಪ್ರಿಯರಹರೆಂದೆಂದು ॥ 7 ॥

*******