ನೆಲಮಂಗಲದ ಶ್ರೀ ಸರಸ್ವತಿಬಾಯಿಯವರ ರಚನೆ
ರಾಗ - : ತಾಳ -
ನಾಮ ಧರಿಸಿಹೆಯಾ ಮೂರು
ನಾಮ ಧರಿಸಿಹೆಯಾ ಶ್ರೀನಿವಾಸ ll ಪ ll
ನೀನೆ ಕರ್ತನೆಂದಾ ಮನುಜರಿಗೆಲ್ಲಾ
ನಾನೆ ಸಲಹುವೆನೆಂಬ ಬಿರುದಿನ ಮೂರು ll ಅ ಪ ll
ಅಂಬೆಯ ವಕ್ಷದಿ ಇಂಬಿನೊಳಿಟ್ಟು
ಸಂಭ್ರಮದೊಳು ಕುಡಿ ನೋಟದಿಂದಾ
ಅಂಬುಜಾಕ್ಷ ಬಡವರ ಧನ ಸೆಳೆಯುತ್ತವರ
ಬೆಂಬಿಡದೆ ಕಾವೆನೆಂಬ ಬಿರುದ ll ೧ ll
ಸಿರಿ ಅರಸಾನೆಂಬೊ ಬಿರುದು ಥರವೇ ನಿನಗೆ
ಹೊರವೊಳಗಿದ್ದು ಜನವ ನಂಬಿಸಿ
ಥರಥರದಾಭರಣ ಸುಲಿಗೆಯಗೊಂಬ
ತಿರುಪತಿ ತಿರುಮಲರಾಯ ದೊರೆ ll ೨ ll
ನಿನ್ನ ಧ್ಯಾನ ಮಾಳ್ಪ ಭಕ್ತರು ಬಲೆಗೆ ಸಿಕ್ಕುವರೇನೊ
ನಿನ್ನ ಪಾದಧ್ಯಾನವನ್ನೆ ಬಯಸುತ್ತ
ನಿನ್ನನೆ ಭಕ್ತಿಪಾಶದಿ ಕಟ್ಟಿ ll ೩ ll
ಚಾರು ಚರಿತನೆ ಚಾರು ಮುಖನೆ ವಂದ್ಯ ನಿನ್ನ
ಹಾರೈಸುವ ಭಕ್ತರ ವೃಂದ
ಸಾರಿ ಬಂದು ನಿನ್ನ ನಾಮದ ಸ್ಮರಣೆಯ
ಹಾರ ಹಾಕಿ ಮನ ಸೂರೆ ಕೊಟ್ಟ ll ೪ ll
ಭಕ್ತರ ಕಟ್ಟಿಗೆ ಸಿಕ್ಕಬೇಕಲ್ಲದೆ
ಭಕ್ತವತ್ಸಲನೆಂಬೊ ಬಿರುದಿಟ್ಟ ಕಾರಣವೇಕೊ
ಯುಕ್ತಿಲಿ ನಿನ್ನ ನೆನೆದು ಸಿಕ್ಕಿಸೀ ಭವ
ಕಷ್ಟ ಕಳೆವರೊ ಶ್ರೀ ಶ್ರೀನಿವಾಸ ನಿನ್ನ ಭಕ್ತರಿಷ್ಟಾ ll ೫ ll
***