Showing posts with label ಏನು ಮಾಡಿದರೇನು ಹಾನಿಯಾಗದು ಪಾಪ kamalanabha vittala. Show all posts
Showing posts with label ಏನು ಮಾಡಿದರೇನು ಹಾನಿಯಾಗದು ಪಾಪ kamalanabha vittala. Show all posts

Thursday 5 August 2021

ಏನು ಮಾಡಿದರೇನು ಹಾನಿಯಾಗದು ಪಾಪ ankita kamalanabha vittala

 ..

kruti by Nidaguruki Jeevubai

ಏನು ಮಾಡಿದರೇನು ಹಾನಿಯಾಗದು ಪಾಪ
ಶ್ರೀನಿಕೇತನನ ದಿವ್ಯನಾಮ ನೆನೆಮನವೆ ಪ

ಕ್ಷಣ ಪದಕಮಲಗಳ ಸ್ಮರಿಸಿ ಮನದೊಳಗೆ ಪ್ರತಿ
ಕ್ಷಣಕ್ಷಣದಿ ಹರಿ ಮಹಿಮೆ ಭಜಿಸಿ ಭಕ್ತಿಯಲಿ
ತೃಣ ಘನದೊಳಿಹನು ಹರಿ ಎನುತ ಚಿಂತಿಸಿ ಮನದಿ
ಪ್ರಣವ ಪ್ರತಿಪಾದ್ಯನಂಘ್ರಿಯ ಭಜಿಸದನಕ 1

ಕಪಟನಾಟಕ ಸೂತ್ರಧಾರಿ ಶ್ರೀ ಹರಿಯ ಗುಣ
ಅಪರಿಮಿತ ಮಹಿಮೆಗಳ ಭಜಿಸಿ ಹಿಗ್ಗುತಲಿ
ಚಪಲ ಬುದ್ಧಿಗಳಿಂದ ತಪಿಸಿ ಕಂಗೆಡದೆ ಮನ
ಅಪರೂಪ ಹರಿನಾಮ ಜಪ ಮಾಡದನಕ 2

ದಾನಧರ್ಮಗಳಿಂದ ಧನ್ಯನಾದೆನು ಎನಲು
ಹಾನಿಯಾಗೋದು ಆಯು ಪ್ರತಿ ನಿಮಿಷದಿ
ಸ್ನಾನ ಜಪತಪದೊಳಗೆ ಯಾರೆನಗೆ ಸರಿ ಎನದÉ
ಮೌನದಿಂದ್ಹರಿ ನಾಮ ಧ್ಯಾನಿಸುವತನಕ 3
ಕ್ಲೇಶ ಆನಂದಗಳು ಈಶನಾಜ್ಞೆ ಇದೆಂದು
ವಾಸುದೇವನೆ ಜಗತ್ಪ್ರೇರಕನು ಎಂದು
ಶ್ವಾಸ ಬಿಡುವ ಶಕ್ತಿ ಲೇಸು ತನಗಿಲ್ಲ ಸ-
ರ್ವೇಶ ನಿನ್ನಧೀನವೆಂದರಿವ ತನಕ4

ತೀರ್ಥಯಾತ್ರೆಗಳಿಂದ ಗಾತ್ರ ಶೋಷಣೆಯಾಕೆ
ಪಾರ್ಥಸಖನಂಘ್ರಿಗಳ ಕೀರ್ತಿಸುತ ಮನದಿ
ರಾತ್ರಿ ಹಗಲು ಕಮಲನಾಭ ವಿಠ್ಠಲನ ಶ್ರೀಮೂರ್ತಿಯನೆ ನೆನೆನೆನೆದು ಸುಖಿಯಾಗೊ ಮನವೆ5
***