Showing posts with label ಓಹೋ ಎನ ಜೀವ ಮೈಯೆಲ್ಲ ನವಗಾಯ neleyadikeshava OHO ENA JEEVA MAIYELLA NAVAGAYA mundige ಮುಂಡಿಗೆ. Show all posts
Showing posts with label ಓಹೋ ಎನ ಜೀವ ಮೈಯೆಲ್ಲ ನವಗಾಯ neleyadikeshava OHO ENA JEEVA MAIYELLA NAVAGAYA mundige ಮುಂಡಿಗೆ. Show all posts

Tuesday 15 October 2019

ಓಹೋ ಎನ ಜೀವ ಮೈಯೆಲ್ಲ ನವಗಾಯ ankita neleyadikeshava OHO ENA JEEVA MAIYELLA NAVAGAYA mundige ಮುಂಡಿಗೆ



ಮುಂಡಿಗೆ by ಕನಕದಾಸರು

ಓಹೋ ಎನ ಜೀವ ಮೈಯೆಲ್ಲ ನವಗಾಯ ||ಪ||

ಗಾಯ ಕಟ್ಟುವರಿಲ್ಲ ಗಾಳಿ ಹಾಕುವರಿಲ್ಲ. ||ಅ.ಪ.||

ಮಾಡಿಲ್ಲ ಮಳೆಯಿಲ್ಲ ಮರದ ಮೇಲೆ ನೀರ ಕಂಡೆ
ಕಾಡು ಸುಡುವುದ ಕಂಡೆ ಬೂದಿಯ ಕಾಣಲಿಲ್ಲ. ||೧||

ಬಿತ್ತಲಿಲ್ಲ ಬೆಳೆಯಲಿಲ್ಲ ನೆಟ್ಟು ನೀರ ತೋರಲಿಲ್ಲ
ಹೊತ್ತುಕೊಂಡು ತಿರುಗಿದೆ ರೊಕ್ಕದಾ ಪ್ರಾಣಿಯನು. ||೨||

ಅಡಿಕೆಯಷ್ಟು ಆಕಳಣ್ಣ ಹಿಡಿಕೆಯಷ್ಟು ಕೆಚ್ಚಲಣ್ಣ
ಒಡನೆ ಕರೆದಾರ ಕರಿತೈತಿ ರಂಜಣಿಗಿ ಹಾಲಣ್ಣ. ||೩||

ಮೂರು ಮೊಳದಾ ಬಳ್ಳಿಗೆ ಆರು ಮೊಳದ ಕಾಯಣ್ಣ
ಆರು ಹತ್ತರ ಮೊಳದ, ಕಾಯಿಕೊಯ್ಯುವ ಕುಡುಗೋಲಣ್ಣ. ||೪||

ಊರ ಮುಂದೆ ಹಿರಣ್ಯಕನ ಕೊರಳ ಕೊಯ್ವದ ಕಂಡೆ
ಕೊರಳಕೊಯ್ವದ ಕಂಡೆ ರಕುತವ ಕಾಣಲಿಲ್ಲ. ||೫||

ಕಾಗಿನೆಲೆಯ ಕನಕದಾಸ ಹೇಳಿದಂಥ ಮುಂಡಿಗೆಯ
ಮಿಗೆ ಒಳ ಹೊರಗೆಲ್ಲ ಬಲ್ಲ ಬಾಡದಾದಿ ಕೇಶವರಾಯ. ||೬||
*********


ಭಾವ:- ಸ್ಥೂಲ, ಸೂಕ್ಷ್ಮ, ಕಾರಣ ದೇಹಗಳನ್ನೊಳಗೊಂಡ ಈ ಮನುಷ್ಯ ದೇಹದ ವೈಚಿತ್ರ್ಯಗಳನ್ನು ಕನಕದಾಸರು ಈ ಮುಂಡಿಗೆಯಲ್ಲಿ ತಿಳಿಸಿದ್ದಾರೆ. ಜನಸಾಮಾನ್ಯರನ್ನು ಭೌತಸ್ಥರದಿಂದ ಆಧ್ಯಾತ್ಮ ಸ್ತರದತ್ತ ಎತ್ತುವಂಥ, ಪ್ರಜ್ಞಾವಂತರನ್ನಾಗಿ ಮಾಡುವಂಥ ಪ್ರಯೋಗವನ್ನು ಇಲ್ಲಿ ಕನಕದಾಸರು ಮಾಡಿದ್ದಾರೆ ಎನ್ನಬಹುದು.
ಅರ್ಥ ೧. ಮಾಡಿಲ್ಲ....ನೀರನ್ನು ಕಂಡೆ
ಭೌತಾರ್ಥ : ಎಳನೀರು, ಆಧ್ಯಾತ್ಮದ ಅರ್ಥ : ಬೆವರು, ಕಣ್ಣೀರು.
ಕಾಡು.......ಬೂದಿಯ ಕಾಣಲಿಲ್ಲ
ಭೌತಾರ್ಥ : ಕರ್ಪೂರ, ಆಧ್ಯಾತ್ಮದ ಅರ್ಥ : ಜ್ಞಾನಾಗ್ನಿಯಿಂದ ಅರಿಷಡ್ವರ್ಗಗಳ, ಕರ್ಮಗಳ ದಹನ
೨. ಬಿತ್ತಲಿಲ್ಲ.... ಪ್ರಾಣಿಯನು
ಭೌತಾರ್ಥ ; ತಲೆಗೂದಲು, ಆಧ್ಯಾತ್ಮದ ಅರ್ಥ : ಆತ್ಮ
೩. ಅಡಿಕೆ.........ಹಾಲಣ್ಣ
ಭೌತಾರ್ಥ : ಜೇನುಹುಳು, ಜೇಂಗೊಡ, ಜೇನುತುಪ್ಪ, ಆಧ್ಯಾತ್ಮದ ಅರ್ಥ : ಗುರುಬೋಧೆ
ಸೂಕ್ಷ್ಮವಾಗಿದ್ದರೂ, ಅದನ್ನು ಗ್ರಹಿಸುವ ಶಿಷ್ಯನ ಸಾಮರ್ಥ್ಯಕ್ಕನುಗುಣವಾಗಿ ಅದರ ಗಾತ್ರ ಹಿಗ್ಗುತ್ತದೆ.
ಕರೆಯುವವರ ಶಕ್ತಿಯನುಸಾರ ಜೇನನ್ನು ನೀಡುತ್ತದೆ.
ರಂಜಣಿಗಿ = ಮಣ್ಣಿನ ಪಾತ್ರೆ
೪. ಮೂರು ಮೊಳ......ಕುಡುಗೋಲಣ್ಣ
ಭೌತಾರ್ಥ : ಸೋರೆಕಾಯಿ, ಜವಳಿಕಾಯಿ ಮುಂತಾದವು, ಆಧ್ಯಾತ್ಮದ ಅರ್ಥ : ಮೂರು
ಗುಣಗಳಿಂದ ಕೂಡಿದ ಈ ದೇಹವೆಂಬ ಬಳ್ಳಿಗೆ ಷಡ್‍ವೈರಿಗಳೆಂಬ ಆರು ಮೊಳದ ಕಾಯುಂಟು.
ಅದನ್ನು ಕೊಯ್ಯುವ ಕುಡುಗೋಲು ಹದಿನಾರು ಮೊಳ (ಜ್ಞಾನೇಂದ್ರಿಯಗಳು, ಕರ್ಮೇಂದ್ರಿಯಗಳು
ಹಾಗೂ ಮನಸ್ಸು)
೫. ಊರ ಮುಂದೆ.......ರಕುತವ ಕಾಣಲಿಲ್ಲ
ಭೌತಾರ್ಥ : ಹೇನು, ಇರುವೆ ಮುಂತಾದ ಕ್ರಿಮಿಗಳು, ಆಧ್ಯಾತ್ಮದ ಅರ್ಥ : ಪ್ರತಿಯೊಬ್ಬನ ಸೂಕ್ಷ್ಮ
ದೇಹದಲ್ಲೂ ಅಭಿಮಾನಿ ದೇವತೆಯಾದ ಹಿರಣ್ಯಗರ್ಭನಿಗೆ ಅಹಂಕಾರವೇ ಶಿರಸ್ಸಾಗಿದೆ. ಅದನ್ನು
ವಿಚಾರ ಖಡ್ಗದಿಂದ ಕತ್ತರಿಸಿದುದನ್ನು ಕಂಡೆನಾದರೂ ರಕ್ತ ಕಾಣಲಿಲ್ಲ.
*********