Tuesday, 13 April 2021

ವರ್ಣಿಸಲಸದಳವು ದಾಸರ ಅನುಪಮ purandara vittala

ವರ್ಣಿಸಲಸದಳವು 

ದಾಸರ ಅನುಪಮ ಮಹಿಮೆಯನು

ಪುರಂದರ ದಾಸರ ಪ್ರತಿಭೆಯನು // ಪ//


ಸಾಸಿರ ಸಾಸಿರ ಪದಗಳ ನಾಯಕ

ಕವಿ ಮಹೋನ್ನತ ಸಂಗೀತ ಗಾಯಕ

ಕಲಿಯುಗ ಶ್ರೇಷ್ಠ  ಶ್ರೀಹರಿಭಕುತನು

ಶ್ರೀನಿವಾಸನು ದೇವರ್ಷಿ ನಾರದನು //೧//


ಕರುಮ ಭಕುತಿ ಜ್ಞಾನದ ಸಾಗರ

ಕೃತಿಗಳು ತತ್ವಜ್ಞಾನದ ಭಂಡಾರ

ಗಂಗೆಯ ತೆರದಲಿ ಹರಿಯುವ ಸುಸ್ವರ

ಸಿರಿವಂತ ವೇದ ವೇದಾಂತದಾಗರನು //೨//


ಲಂಬೋದರನಾ ಪಿಳ್ಳಾರಿಗೀತೆ 

ಮಾಡನು ಹುಡುಕುವ ಸಂಕೇತ ಗಾಥೆ 

ಆದದ್ದೆಲ್ಲ ಒಳಿತೆಂಬನುಭವ ಮಾತೆ 

ಅದ್ವಿತೀಯ ಒಲುಮೆಯ ದಾಸ ಪುರಂದರನು //೩//


ಅನುಭವದಡುಗೆಯನೂಡಿಸಿದವನು

ಬಿಂದಿಗೆ ಹಾಡಲಿ ಗೋವಿಂದನ ಕಂಡವನು

ದುರ್ಜನರಿಗಿಂದು ಸುಭಿಕ್ಷವೆಂದು ನೊಂದವನು

ಅನನ್ಯ ದಾರ್ಶನಿಕ ಎಮ್ಮ ಪುರಂದರನು //೪//


ವರ್ಣಿಸಲಸದಳವು 

ದಾಸರ ಅನುಪಮ ಹಿರಿಮೆಯನು

ಪುರಂದರರನುಪಮ ಗರಿಮೆಯನು 

ಶರಣೆಂಬೆ ಚರಣಕಮಲಗಳಿಗೆ

ಪುರಂದರ ಪಾದಾರವಿಂದಕೆ //

***


No comments:

Post a Comment