Showing posts with label ಭಕ್ತಜನ ಸಂರಕ್ಷಣಾ vijaya vittala ಶ್ರೀವೇಂಕಟೇಶ ಸುಪ್ರಭಾತ venkatesha suprabhata. Show all posts
Showing posts with label ಭಕ್ತಜನ ಸಂರಕ್ಷಣಾ vijaya vittala ಶ್ರೀವೇಂಕಟೇಶ ಸುಪ್ರಭಾತ venkatesha suprabhata. Show all posts

Tuesday, 13 April 2021

ಭಕ್ತಜನ ಸಂರಕ್ಷಣಾ ankita vijaya vittala ಶ್ರೀವೇಂಕಟೇಶ ಸುಪ್ರಭಾತ venkatesha suprabhata

 ಶ್ರೀವೇಂಕಟೇಶ ಸುಪ್ರಭಾತ 


 ರಾಗ ಭೌಳಿ                      ವಾರ್ಧಿಕ ಷಟ್ಟದಿ 


ಭಕ್ತಜನ ಸಂರಕ್ಷಣಾ ॥ ಪ ॥


ಭಕ್ತಜನ ಸಂರಕ್ಷ ಭವದುರಿತ ಸಂಹಾರಿ

ಭಕ್ತರಾ ಸುರಧೇನು ತರುವೆ ಚಿಂತಾಮಣಿಯೆ

ಭಕ್ತರಾಧೀನವೆಂಬೊ ಬಿರದು ಅನುಗಾಲ

ಪೊತ್ತು ಮೆರೆವ ತಿರುಪತಿ ತಿಮ್ಮ ಯೇಳೋ ॥ ಅ.ಪ ॥


ಅಂಬರವು ತಾಂಬ್ರಮಯವಾಗೆ ಗರುಡಾಗ್ರಜನು

ಇಂಬಿನಲಿ ತಲೆದೋರಿ ಕಿರಣಗಳ ಹರಹಿದನು

ಅಂಬುಜ ವಿರೋಧಿಗಳೆಗುಂದಿದನು ತಾರ ನಿಕ -

ರಂಬುಗಳರುಹ ಮಾಸೆ ॥

ಕುಂಭಿಣಿಯ ಮುಸುಕಿದ ಕತ್ತಲೆ ಪರಿದು ಪೋಗಿ

ಅಂಬುಜದಳಕೆ ಮರಿದುಂಬಿಗಳು ಎರಗಿದವು

ತಾಂಬ್ರಚೂಡವು ಧ್ವನಿಮಾಡಿ ಕೂಗಿತು ಸರಸಿ -

ಜಾಂಬಕನೆ ಮಂಚದಿಂದೇಳೊ ॥ 1 ॥


ಉದಯ ಪರ್ವತಕೆ ರಥ ನೂಕಿದನು ಮಾರ್ತಾಂಡ

ಉದಧಿ ಅಲೆ ತಗ್ಗಿದುವು ಉರಗ ಪೆಡೆಯೆತ್ತಿದನು

ಗದಗದನೆ ನಡುಗಿ ಭಯದಲ್ಲಿ ದಾನವರು ಅಡ -

ಗಿದರು ದಶದಿಕ್ಕಿನೊಳಗೆ ॥

ತ್ರಿದಶರಬ್ಬರಿಸಿ ಆನಕ ದುಂದುಭೀ ಶಂಖ

ದದ್ಧಳ ಸರಿಗಮಪದನಿಸೆಂದೆನುತಲೀ

ವದರುತ್ತ ಕುಸುಮವರುಷ ವುದರಿಸಿ ತುತಿಸಿದರು 

ಸದಮಲಾನಂದ ತಿಮ್ಮಾ ॥ 2 ॥


ನಾರಿಯರು ಬಂದು ಅಂಗಳ ಬಳಿದು ಗಂಧದಾ

ಸಾರಣಿಯು ದಳಿದು ಮುತ್ತಿನ ರಂಗವಲ್ಲಿ ವಿ -

ಸ್ತಾರದಲಿ ಪಂಚವಣ್ಣಿಗೆಯಿಟ್ಟು ನಲಿದು ಹೊಸ

ದೋರಣ ಮಕರ ಕನ್ನಡಿ ॥

ದ್ವಾರದಲಿ ಬಿಗಿದರ್ಥಿಯಲಿ ಗೊಲ್ಲರು 

ಪರಿ ಕಟ್ಟಿಗೆಕಾರರೆಲ್ಲ ವೊಪ್ಪುತಿರೆ ದಾರಕರು 

ಸಾರಿದರು ಭಟ್ಟರು ಹೊಗಳಿದರು ಕಂ -

ಸಾರಿ ಕೋನೇರಿವಾಸ ॥ 3 ॥


ನೃತ್ಯದವರು ಬಂದು ತತ್ಥಿಗಿಣಿ ತತ್ಥೈಯಾ

ತಿತ್ತಿರಿ ಮೃದಂಗ ಜತೆ ತಪ್ಪದಂತೆ ತಾಳ

ಬತ್ತೀಸರಾಗದಲಿ ಎತ್ತಿ ಧ್ವನಿ ತೋರುತ್ತ 

ನರ್ತನದಿಂದಲಿ ಕುಣಿಯಲೂ ॥

ಮಿತ್ರೆಯರು ಕೆಲಬರು ಮುತ್ತಿನಾರುತಿ ಪಿಡಿದು

ಮಿತ್ರಭಾವದಲಿ ನಿಮ್ಮಡಿಗಳಿಗೆ ಹರಿವಣಾ

ಎತ್ತುವೆವು ಎನುತತಿ ಹಾರೈಸಿ ನಿಂದು ನೋ -

ಡುತ್ತಾರೆ ಸರ್ವೇಶನೇ ॥ 4 ॥


ದಂಡಿಗೆ ತಾಳ ಶಂಖ ತಂಬೂರಿ ಜಾಕಟೆ

ಕೊಂಡು ನಿನ್ನ ಪರಮ ಪ್ರೀತಿಸ್ಥ ದಾಸರು

ಹಿಂಡು ಹಿಂಡಾಗಿ ಸಮ್ಮುಖದಲ್ಲಿ ನಿಂದು ಬೊ -

ಮ್ಮಾಂಡ ಕಟಹ ಬಿಚ್ಚುವಂತೆ ॥

ತಂಡ ತಂಡದ ಗೆಜ್ಜೆಕಟ್ಟಿ ಅಭಿನವ ತಿರುಹಿ

ಕೊಂಡಾಡಿದರು ಶಬ್ದ ಪ್ರತಿಶಬ್ದವಾಗುತಿರೆ ಭೂ -

ಮಂಡಲದೊಳಗೆ ಈ ಸೊಬಗು ಬಲ್ಲವರಾರು 

ಕುಂಡಲೀ ಗಿರಿ ತಿರ್ಮಲಾ ॥ 5 ॥


ಕಾದೋದಕ ವಿಮಲ ಕಸ್ತೂರಿ ಕಮ್ಮೆಣ್ಣೆ 

ಸಾದು ಜವ್ವಾದಿ ಚಂದನ ಗಂಧ ದ್ರವ್ಯದಿ

ಆದರಿಸಿ ಪಿಡಿದ ದರ್ಪಣ ಹೇಮ ಗದ್ದುಗೆ

ಪಾದುಗೆ ಪಟ್ಟಿ ವಸನಾ ॥

ಈ ಧರೆಯೊಳಗೆ ಯಿದ್ದ ಉಡಿಗೆ ತೊಡಿಗೆ ಕರ್ಪೂ -

ರಾದಿ ತಾಂಬೂಲ ನಿರ್ಮಳ ದಾದಿಯರು ಹಿಡಿದು

ಕಾದು ನಿಂದೈಧಾರೆ ಹೊನ್ನ ಬಾಗಿಲ ಮುಂದೆ 

ಆದಿಹರಿ ಪರಮಪುರುಷಾ ॥ 6 ॥


ಗೋತ್ರಾರಿ ಹವಿಧರ್ಮ ಪುಣ್ಯಜನ ವರುಣ ವೀತಿ -

ಹೋತ್ರ ಸಖ ಋಷೇಶ ಕೈಲಾಸಪತಿ ಸೂರ್ಯ 

ಮಿತ್ರ ನಂದ ಸಹಿತರಾಗಿ ವಾಹನ ವೈದಿ

ಚಿತ್ರದಲಿ ಮುಖ್ಯರಾದ ॥

ಮೈತ್ರಾವರುಣ ಜಾಮದಗ್ನಿ ಕಶ್ಯಪ ವಿಶ್ವಾ -

ಮಿತ್ರ ಭಾರದ್ವಾಜ ಸನಕಾದಿಗಳು ನಾರದ ಮೊದಲಾಗಿ

ಸ್ತೋತ್ರವನು ಮಾಡುತ್ತ ಸ್ವಾಮಿ ಗತಿಯೆಂದರು

ಧಾತ್ರೀಕಳತ್ರ ದೇವಾ ॥ 7 ॥


ನಿಚ್ಚ ಏಳುವ ಸಮಯ ಮೀರಿತು ಇಂದೀಗ

ಎಚ್ಚರಿಕಿ ಪುಟ್ಟದೊ ಎಲೋ ದೇವಾ ಶ್ರೀದೇವಿ

ಮೆಚ್ಚುಗೊಳಿಸಿ ಬಿಗಿದು ರತಿಕೇಳಿ ಕ್ರೀಡಿಯಲಿ

ಮೆಚ್ಚಿಸಿದ ಮಹ ಸರಸವೊ ॥

ನಿಚ್ಚಟ ಯಿದನು ನಿದ್ರೆ ತಿಳಿಯಲೊಲ್ಲದು

ಕುತ್ಸಿತನ ಸೊಲ್ಲು ಕರ್ನಕೆ ಬೀಳದಾಯಿತೊ

ಹೆಚ್ಚಿನಾ ಪದವಿ ಮತ್ತೇನು ಬಂದದು ಕಾಣೆ 

ಸಚ್ಚಿದಾನಂದಾತ್ಮಕಾ ॥ 8 ॥


ನಿದ್ರೆಗೆವೆ ಹಾಕದಿರು ನೀರೊಳಗೆ ನೀ ನಿರು -

ಪದ್ರ ಭೂಮಿಗೆ ಕಳಿ ಕಶ್ಯಪನ ಸುತನಳಿ ಸ -

ಮುದ್ರ ರಾಣಿಯ ಪಡಿ ರಾಯರಾಯರ ಕಡಿ

ಮುದ್ರೆ ಭೂಮಿಜೆಗೆ ಕಳಹೊ ॥

ಅದ್ರಿಯನುದ್ಧರಿಸು ಮುಪ್ಪುರವ ಸಂಹರಿಸು ಕಲಿ -

ಛಿದ್ರವನು ಬಿಡಿಸು ಶ್ರುತಿ ಪೇಳುತಿದೆ

ಭದ್ರಮೂರುತಿ ವೆಂಕಟ ವಿಜಯವಿಟ್ಠಲ 

ಕದ್ರುವೇಯನ ಹಾಸಿಕಿಂದೇಳೊ ॥ 9 ॥

***