Tuesday, 13 April 2021

ಭಕ್ತಜನ ಸಂರಕ್ಷಣಾ ankita vijaya vittala ಶ್ರೀವೇಂಕಟೇಶ ಸುಪ್ರಭಾತ venkatesha suprabhata

 ಶ್ರೀವೇಂಕಟೇಶ ಸುಪ್ರಭಾತ 


 ರಾಗ ಭೌಳಿ                      ವಾರ್ಧಿಕ ಷಟ್ಟದಿ 


ಭಕ್ತಜನ ಸಂರಕ್ಷಣಾ ॥ ಪ ॥


ಭಕ್ತಜನ ಸಂರಕ್ಷ ಭವದುರಿತ ಸಂಹಾರಿ

ಭಕ್ತರಾ ಸುರಧೇನು ತರುವೆ ಚಿಂತಾಮಣಿಯೆ

ಭಕ್ತರಾಧೀನವೆಂಬೊ ಬಿರದು ಅನುಗಾಲ

ಪೊತ್ತು ಮೆರೆವ ತಿರುಪತಿ ತಿಮ್ಮ ಯೇಳೋ ॥ ಅ.ಪ ॥


ಅಂಬರವು ತಾಂಬ್ರಮಯವಾಗೆ ಗರುಡಾಗ್ರಜನು

ಇಂಬಿನಲಿ ತಲೆದೋರಿ ಕಿರಣಗಳ ಹರಹಿದನು

ಅಂಬುಜ ವಿರೋಧಿಗಳೆಗುಂದಿದನು ತಾರ ನಿಕ -

ರಂಬುಗಳರುಹ ಮಾಸೆ ॥

ಕುಂಭಿಣಿಯ ಮುಸುಕಿದ ಕತ್ತಲೆ ಪರಿದು ಪೋಗಿ

ಅಂಬುಜದಳಕೆ ಮರಿದುಂಬಿಗಳು ಎರಗಿದವು

ತಾಂಬ್ರಚೂಡವು ಧ್ವನಿಮಾಡಿ ಕೂಗಿತು ಸರಸಿ -

ಜಾಂಬಕನೆ ಮಂಚದಿಂದೇಳೊ ॥ 1 ॥


ಉದಯ ಪರ್ವತಕೆ ರಥ ನೂಕಿದನು ಮಾರ್ತಾಂಡ

ಉದಧಿ ಅಲೆ ತಗ್ಗಿದುವು ಉರಗ ಪೆಡೆಯೆತ್ತಿದನು

ಗದಗದನೆ ನಡುಗಿ ಭಯದಲ್ಲಿ ದಾನವರು ಅಡ -

ಗಿದರು ದಶದಿಕ್ಕಿನೊಳಗೆ ॥

ತ್ರಿದಶರಬ್ಬರಿಸಿ ಆನಕ ದುಂದುಭೀ ಶಂಖ

ದದ್ಧಳ ಸರಿಗಮಪದನಿಸೆಂದೆನುತಲೀ

ವದರುತ್ತ ಕುಸುಮವರುಷ ವುದರಿಸಿ ತುತಿಸಿದರು 

ಸದಮಲಾನಂದ ತಿಮ್ಮಾ ॥ 2 ॥


ನಾರಿಯರು ಬಂದು ಅಂಗಳ ಬಳಿದು ಗಂಧದಾ

ಸಾರಣಿಯು ದಳಿದು ಮುತ್ತಿನ ರಂಗವಲ್ಲಿ ವಿ -

ಸ್ತಾರದಲಿ ಪಂಚವಣ್ಣಿಗೆಯಿಟ್ಟು ನಲಿದು ಹೊಸ

ದೋರಣ ಮಕರ ಕನ್ನಡಿ ॥

ದ್ವಾರದಲಿ ಬಿಗಿದರ್ಥಿಯಲಿ ಗೊಲ್ಲರು 

ಪರಿ ಕಟ್ಟಿಗೆಕಾರರೆಲ್ಲ ವೊಪ್ಪುತಿರೆ ದಾರಕರು 

ಸಾರಿದರು ಭಟ್ಟರು ಹೊಗಳಿದರು ಕಂ -

ಸಾರಿ ಕೋನೇರಿವಾಸ ॥ 3 ॥


ನೃತ್ಯದವರು ಬಂದು ತತ್ಥಿಗಿಣಿ ತತ್ಥೈಯಾ

ತಿತ್ತಿರಿ ಮೃದಂಗ ಜತೆ ತಪ್ಪದಂತೆ ತಾಳ

ಬತ್ತೀಸರಾಗದಲಿ ಎತ್ತಿ ಧ್ವನಿ ತೋರುತ್ತ 

ನರ್ತನದಿಂದಲಿ ಕುಣಿಯಲೂ ॥

ಮಿತ್ರೆಯರು ಕೆಲಬರು ಮುತ್ತಿನಾರುತಿ ಪಿಡಿದು

ಮಿತ್ರಭಾವದಲಿ ನಿಮ್ಮಡಿಗಳಿಗೆ ಹರಿವಣಾ

ಎತ್ತುವೆವು ಎನುತತಿ ಹಾರೈಸಿ ನಿಂದು ನೋ -

ಡುತ್ತಾರೆ ಸರ್ವೇಶನೇ ॥ 4 ॥


ದಂಡಿಗೆ ತಾಳ ಶಂಖ ತಂಬೂರಿ ಜಾಕಟೆ

ಕೊಂಡು ನಿನ್ನ ಪರಮ ಪ್ರೀತಿಸ್ಥ ದಾಸರು

ಹಿಂಡು ಹಿಂಡಾಗಿ ಸಮ್ಮುಖದಲ್ಲಿ ನಿಂದು ಬೊ -

ಮ್ಮಾಂಡ ಕಟಹ ಬಿಚ್ಚುವಂತೆ ॥

ತಂಡ ತಂಡದ ಗೆಜ್ಜೆಕಟ್ಟಿ ಅಭಿನವ ತಿರುಹಿ

ಕೊಂಡಾಡಿದರು ಶಬ್ದ ಪ್ರತಿಶಬ್ದವಾಗುತಿರೆ ಭೂ -

ಮಂಡಲದೊಳಗೆ ಈ ಸೊಬಗು ಬಲ್ಲವರಾರು 

ಕುಂಡಲೀ ಗಿರಿ ತಿರ್ಮಲಾ ॥ 5 ॥


ಕಾದೋದಕ ವಿಮಲ ಕಸ್ತೂರಿ ಕಮ್ಮೆಣ್ಣೆ 

ಸಾದು ಜವ್ವಾದಿ ಚಂದನ ಗಂಧ ದ್ರವ್ಯದಿ

ಆದರಿಸಿ ಪಿಡಿದ ದರ್ಪಣ ಹೇಮ ಗದ್ದುಗೆ

ಪಾದುಗೆ ಪಟ್ಟಿ ವಸನಾ ॥

ಈ ಧರೆಯೊಳಗೆ ಯಿದ್ದ ಉಡಿಗೆ ತೊಡಿಗೆ ಕರ್ಪೂ -

ರಾದಿ ತಾಂಬೂಲ ನಿರ್ಮಳ ದಾದಿಯರು ಹಿಡಿದು

ಕಾದು ನಿಂದೈಧಾರೆ ಹೊನ್ನ ಬಾಗಿಲ ಮುಂದೆ 

ಆದಿಹರಿ ಪರಮಪುರುಷಾ ॥ 6 ॥


ಗೋತ್ರಾರಿ ಹವಿಧರ್ಮ ಪುಣ್ಯಜನ ವರುಣ ವೀತಿ -

ಹೋತ್ರ ಸಖ ಋಷೇಶ ಕೈಲಾಸಪತಿ ಸೂರ್ಯ 

ಮಿತ್ರ ನಂದ ಸಹಿತರಾಗಿ ವಾಹನ ವೈದಿ

ಚಿತ್ರದಲಿ ಮುಖ್ಯರಾದ ॥

ಮೈತ್ರಾವರುಣ ಜಾಮದಗ್ನಿ ಕಶ್ಯಪ ವಿಶ್ವಾ -

ಮಿತ್ರ ಭಾರದ್ವಾಜ ಸನಕಾದಿಗಳು ನಾರದ ಮೊದಲಾಗಿ

ಸ್ತೋತ್ರವನು ಮಾಡುತ್ತ ಸ್ವಾಮಿ ಗತಿಯೆಂದರು

ಧಾತ್ರೀಕಳತ್ರ ದೇವಾ ॥ 7 ॥


ನಿಚ್ಚ ಏಳುವ ಸಮಯ ಮೀರಿತು ಇಂದೀಗ

ಎಚ್ಚರಿಕಿ ಪುಟ್ಟದೊ ಎಲೋ ದೇವಾ ಶ್ರೀದೇವಿ

ಮೆಚ್ಚುಗೊಳಿಸಿ ಬಿಗಿದು ರತಿಕೇಳಿ ಕ್ರೀಡಿಯಲಿ

ಮೆಚ್ಚಿಸಿದ ಮಹ ಸರಸವೊ ॥

ನಿಚ್ಚಟ ಯಿದನು ನಿದ್ರೆ ತಿಳಿಯಲೊಲ್ಲದು

ಕುತ್ಸಿತನ ಸೊಲ್ಲು ಕರ್ನಕೆ ಬೀಳದಾಯಿತೊ

ಹೆಚ್ಚಿನಾ ಪದವಿ ಮತ್ತೇನು ಬಂದದು ಕಾಣೆ 

ಸಚ್ಚಿದಾನಂದಾತ್ಮಕಾ ॥ 8 ॥


ನಿದ್ರೆಗೆವೆ ಹಾಕದಿರು ನೀರೊಳಗೆ ನೀ ನಿರು -

ಪದ್ರ ಭೂಮಿಗೆ ಕಳಿ ಕಶ್ಯಪನ ಸುತನಳಿ ಸ -

ಮುದ್ರ ರಾಣಿಯ ಪಡಿ ರಾಯರಾಯರ ಕಡಿ

ಮುದ್ರೆ ಭೂಮಿಜೆಗೆ ಕಳಹೊ ॥

ಅದ್ರಿಯನುದ್ಧರಿಸು ಮುಪ್ಪುರವ ಸಂಹರಿಸು ಕಲಿ -

ಛಿದ್ರವನು ಬಿಡಿಸು ಶ್ರುತಿ ಪೇಳುತಿದೆ

ಭದ್ರಮೂರುತಿ ವೆಂಕಟ ವಿಜಯವಿಟ್ಠಲ 

ಕದ್ರುವೇಯನ ಹಾಸಿಕಿಂದೇಳೊ ॥ 9 ॥

***


No comments:

Post a Comment