ಕಂದನ್ಯಾಕೆ ಮಲಗನೆ - ಕೇಳೆಲೆ ಸಖಿ ।
ಕಾಯಜಜನಕಗೇನಾಯಿತು ಇವಗೆ ಯಾವಳ ದೃಷ್ಟಿ ತಾಗಿತೇ॥...
ಕಂದನ್ಯಾಕೆ ಕಣ್ಣಮುಚ್ಚನೆ
ಇಂದು ನೀರದಡದಲ್ಲಿರುವನೆ ಏ-
-ನೆಂದರು ಮುಖವೆತ್ತಿ ನೋಡನೆ- ಗೋ-
-ವಿಂದ ಬಾ ಯೆಂದರೆ ಬಾಯ ತೆರವನೆ ॥
ತನಯನಾಗಿ ಧರೆ ಆಳಿದನೆ ತನ್ನ
ಜನನಿಯ ಕಂಡರೆ ಸೇರನೆ
ಮುನಿಗಳಂತೆ ಮೌನ ಪಿಡಿದನೆ
ಘನಗೋವು ಕಾಯ್ವಾಗ ಘಾಳಿ ಸೋಕಿತೇನೇ?
ಸುಮ್ಮನ್ಯಾತಕೆ ವ್ರತ ಕೆಡಿಸಿದನೆ
ಹಮ್ಮಿನಿಂದಲಿ ಖಡ್ಗ ಪಿಡಿದನೆ
ಜನ್ಮಜನ್ಮಗಳಲ್ಲಿ ಬಿಡದಲಿರುವ ನೀ ಬಾರೋ
ಬೊಮ್ಮ ಶ್ರೀಪುರಂದರವಿಠಲಾ
***
ಸಂಕ್ಷಿಪ್ತ -
ಯಶೋದಾದೇವಿಯರು ಕೃಷ್ಣನಿಗೆ ದೃಷ್ಟಿ ತಾಕಿದೆಯೇನೋ ಎಂದು ತಿಳಿದು ಬಾಧೆಪಡುವ ಸಂದರ್ಭವನ್ನು ವಿವರಿಸುತ್ತ, ದಶಾವತಾರದ ಚಿಂತನೆಯನ್ನು ಮಾಡಿದ ಶ್ರೀಮತ್ಪುರಂದರದಾಸಾರ್ಯರ ಅದ್ಭುತವಾದ ಪದವಿದು...
ಕಣ್ಣಮುಚ್ಚನೆ - ಮತ್ಸ್ಯಾವತಾರ
ನೀರದಡದಲ್ಲಿರುವನೆ - ಕೂರ್ಮ
ಮುಖವೆತ್ತಿನೋಡನೆ - ವರಾಹ
ಬಾಯಿತೆರೆದನೆ -ನಾರಸಿಂಹ
ಧರೆ ಆಳಿದನೆ - ತ್ರಿವಿಕ್ರಮನಾದ ಶ್ರೀ ವಾಮನ
ಜನನಿಯ ಕಂಡರೆ ಸೇರನೆ - ಪರಶುರಾಮ
ಮುನಿಗಳಂತೆ ಮೌನ ಪಿಡಿದನೆ - ನಾರುಮಡಿಯನ್ನುಟ್ಟ ಶ್ರೀರಾಮಚಂದ್ರ
ಗೋವುಕಾಯ್ದ - ಶ್ರೀಕೃಷ್ಣಪರಮಾತ್ಮ
ವ್ರತ ಕೆಡಿಸಿದನೆ - ಬುದ್ಧ
ಖಡ್ಗಪಿಡಿದನೆ - ಕಲ್ಕಿ
ಹೀಗೆ ಪರಮಾತ್ಮನನ್ನು ಜಗದೊಡೆಯ ಎಂದು ತಿಳಿದ ಯಶೋದಾದೇವಿಯರು ಕಂದನನ್ನಾಗಿ ಮುದ್ದುಮಾಡಿ ದೃಷ್ಟಿತಾಗಿತೋ ಏನೋ ಎಂದು ಬಾಧೆಪಡುವಂತಿದ್ದು, ಹತ್ತವತಾರದ ಪರಮಾತ್ಮನಿಗೆ ಯಾವ ದೃಷ್ಟಿಯೂ ತಾಗುವುದಿಲ್ಲ, ಜನ್ಮಜನ್ಮಗಳಲ್ಲಿ ಬಿಡದಲಿರುವ ನೀ ಬಾರೋ ಬೊಮ್ಮ - ಎಲ್ಲರ ಬಿಂಬನಾಗಿದ್ದ ಪರಬೊಮ್ಮನಾದ ಶ್ರೀಪುರಂದರವಿಠಲಾಭಿನ್ನ ಶ್ರೀಹರಿಯೇ ಬಿಂಬನಾಗಿ ಹೃದಯಮಂಟಪಕ್ಕೆ ಬಾರೋ ಎಂಬುದನ್ನು ತಿಳಿಸುತ್ತಾರೆ..
ಇಂತಹ ಅಪುರೂಪ ಕೃತಿಗಳನ್ನು ನೋಡಿದಾಗ , ಓದಿದಾಗ, ಹಾಡಿದಾಗ ಮನಸ್ಸು ಕುಣಿಯುತ್ತದಲ್ಲವೆ? ಪರಮಾತ್ಮನ ಎಲ್ಲ ಅವತಾರಗಳೂ ಸಹ ಕಣ್ಮುಂದೆ ಬಂದು ನಿಲ್ಲುತ್ತವೆ ಎಂಬುದರಲ್ಲಿ ಸಂಶಯವೂ ಇಲ್ಲ.
ಇಂತಹ ಅದ್ಭುತವಾದ ಸುಖವನ್ನು ಮನಸ್ಸಿಗೆ ನೀಡಿದ ಶ್ರೀಮತ್ಪುರಂದರದಾಸಾರ್ಯರಲ್ಲಿ , ಅವರ ಅಂತರ್ಗತನಾದ ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀ ಭೈಷ್ಮೀಸತ್ಯಾಸಮೇತ ಶ್ರೀಕೃಷ್ಣಪರಮಾತ್ಮನಲ್ಲಿ ಶರಣಾಗುತ್ತಾ....
-smt. padma sirish
ಜೈ ವಿಜಯರಾಯ
ನಾದನೀರಾಜನದಿಂ ದಾಸಸುರಭಿ 🙏🏽
***
No comments:
Post a Comment