Sunday, 23 May 2021

ಕಂದನ್ಯಾಕೆ ಮಲಗನೆ ಕೇಳೆಲೆ ಸಖಿ purandara vittala


ಕಂದನ್ಯಾಕೆ ಮಲಗನೆ - ಕೇಳೆಲೆ ಸಖಿ ।

ಕಾಯಜಜನಕಗೇನಾಯಿತು ಇವಗೆ ಯಾವಳ ದೃಷ್ಟಿ ತಾಗಿತೇ॥...


ಕಂದನ್ಯಾಕೆ ಕಣ್ಣಮುಚ್ಚನೆ 

ಇಂದು ನೀರದಡದಲ್ಲಿರುವನೆ ಏ-

-ನೆಂದರು ಮುಖವೆತ್ತಿ ನೋಡನೆ- ಗೋ-

-ವಿಂದ ಬಾ ಯೆಂದರೆ ಬಾಯ ತೆರವನೆ ॥ 


ತನಯನಾಗಿ ಧರೆ ಆಳಿದನೆ ತನ್ನ 

ಜನನಿಯ ಕಂಡರೆ ಸೇರನೆ 

ಮುನಿಗಳಂತೆ ಮೌನ ಪಿಡಿದನೆ 

ಘನಗೋವು ಕಾಯ್ವಾಗ ಘಾಳಿ ಸೋಕಿತೇನೇ?


ಸುಮ್ಮನ್ಯಾತಕೆ ವ್ರತ ಕೆಡಿಸಿದನೆ 

ಹಮ್ಮಿನಿಂದಲಿ ಖಡ್ಗ ಪಿಡಿದನೆ 

ಜನ್ಮಜನ್ಮಗಳಲ್ಲಿ ಬಿಡದಲಿರುವ ನೀ ಬಾರೋ 

ಬೊಮ್ಮ ಶ್ರೀಪುರಂದರವಿಠಲಾ

***



ಸಂಕ್ಷಿಪ್ತ -

ಯಶೋದಾದೇವಿಯರು ಕೃಷ್ಣನಿಗೆ ದೃಷ್ಟಿ ತಾಕಿದೆಯೇನೋ ಎಂದು ತಿಳಿದು ಬಾಧೆಪಡುವ ಸಂದರ್ಭವನ್ನು ವಿವರಿಸುತ್ತ,  ದಶಾವತಾರದ ಚಿಂತನೆಯನ್ನು ಮಾಡಿದ ಶ್ರೀಮತ್ಪುರಂದರದಾಸಾರ್ಯರ ಅದ್ಭುತವಾದ ಪದವಿದು...

ಕಣ್ಣಮುಚ್ಚನೆ - ಮತ್ಸ್ಯಾವತಾರ

ನೀರದಡದಲ್ಲಿರುವನೆ - ಕೂರ್ಮ

ಮುಖವೆತ್ತಿನೋಡನೆ - ವರಾಹ

ಬಾಯಿತೆರೆದನೆ -ನಾರಸಿಂಹ


ಧರೆ ಆಳಿದನೆ - ತ್ರಿವಿಕ್ರಮನಾದ ಶ್ರೀ ವಾಮನ

ಜನನಿಯ ಕಂಡರೆ ಸೇರನೆ - ಪರಶುರಾಮ

ಮುನಿಗಳಂತೆ ಮೌನ ಪಿಡಿದನೆ - ನಾರುಮಡಿಯನ್ನುಟ್ಟ ಶ್ರೀರಾಮಚಂದ್ರ

ಗೋವುಕಾಯ್ದ - ಶ್ರೀಕೃಷ್ಣಪರಮಾತ್ಮ


ವ್ರತ ಕೆಡಿಸಿದನೆ - ಬುದ್ಧ

ಖಡ್ಗಪಿಡಿದನೆ - ಕಲ್ಕಿ


ಹೀಗೆ ಪರಮಾತ್ಮನನ್ನು ಜಗದೊಡೆಯ ಎಂದು ತಿಳಿದ ಯಶೋದಾದೇವಿಯರು ಕಂದನನ್ನಾಗಿ ಮುದ್ದುಮಾಡಿ ದೃಷ್ಟಿತಾಗಿತೋ ಏನೋ ಎಂದು ಬಾಧೆಪಡುವಂತಿದ್ದು, ಹತ್ತವತಾರದ ಪರಮಾತ್ಮನಿಗೆ ಯಾವ ದೃಷ್ಟಿಯೂ ತಾಗುವುದಿಲ್ಲ, ಜನ್ಮಜನ್ಮಗಳಲ್ಲಿ ಬಿಡದಲಿರುವ ನೀ ಬಾರೋ ಬೊಮ್ಮ - ಎಲ್ಲರ ಬಿಂಬನಾಗಿದ್ದ ಪರಬೊಮ್ಮನಾದ ಶ್ರೀಪುರಂದರವಿಠಲಾಭಿನ್ನ ಶ್ರೀಹರಿಯೇ ಬಿಂಬನಾಗಿ ಹೃದಯಮಂಟಪಕ್ಕೆ ಬಾರೋ ಎಂಬುದನ್ನು ತಿಳಿಸುತ್ತಾರೆ..


ಇಂತಹ ಅಪುರೂಪ ಕೃತಿಗಳನ್ನು ನೋಡಿದಾಗ , ಓದಿದಾಗ, ಹಾಡಿದಾಗ ಮನಸ್ಸು ಕುಣಿಯುತ್ತದಲ್ಲವೆ? ಪರಮಾತ್ಮನ ಎಲ್ಲ ಅವತಾರಗಳೂ ಸಹ ಕಣ್ಮುಂದೆ ಬಂದು ನಿಲ್ಲುತ್ತವೆ ಎಂಬುದರಲ್ಲಿ ಸಂಶಯವೂ ಇಲ್ಲ. 


          ಇಂತಹ ಅದ್ಭುತವಾದ ಸುಖವನ್ನು ಮನಸ್ಸಿಗೆ ನೀಡಿದ ಶ್ರೀಮತ್ಪುರಂದರದಾಸಾರ್ಯರಲ್ಲಿ , ಅವರ ಅಂತರ್ಗತನಾದ ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀ ಭೈಷ್ಮೀಸತ್ಯಾಸಮೇತ ಶ್ರೀಕೃಷ್ಣಪರಮಾತ್ಮನಲ್ಲಿ ಶರಣಾಗುತ್ತಾ....

-smt. padma sirish

ಜೈ ವಿಜಯರಾಯ

ನಾದನೀರಾಜನದಿಂ ದಾಸಸುರಭಿ 🙏🏽

***


No comments:

Post a Comment