Saturday, 22 May 2021

ಬಿಟ್ಟು ಬನ್ನಿರೊ ಸಂಸಾರದ್ಹಂಬಲ ankita hayavadana

ಬಿಟ್ಟು ಬನ್ನಿರೊ ಸಂಸಾರದ್ಹಂಬಲ ll ಪ ll


ಸೃಷ್ಟಿ ಪತಿಯ ಸೇರಿ ನೀವು ಸುಖಿಸಬನ್ನಿರೊ ll ಅ ಪ ll


ಹೆಂಡರು ಮಕ್ಕಳು ಎಂಬೋ ಹಂಬಲ ಬೇಡಿರೊ

ಕೊಂಡವರಲ್ಲ ಕೊಡುವರಲ್ಲ ಮುಂದಿನ ಗತಿಯ ll 1 ll


ಎಷ್ಟು ಮಾಡಿ ಗಳಿಸಿ ತಂದರು ಸಾಲದೆಂಬರೊ

ನಷ್ಟಮಾಡಿ ಇವನ ಬದುಕು ಎಲ್ಲ ತಿಂಬರು ll 2 ll


ನಡು ಬೀದಿಯಲಿ ಇವನ ಎಳೆದು ಸೆಳೆವರೊ

ಕಡೆಗಣ್ಣು ಕುಡಿಹುಬ್ಬು ನೋಟದಿಂದಲಿ ll 3 ll


ಉಂಡು ಉಟ್ಟು ಗುಂಡಿನಂತೆ ಮನೆಯಲಿರುವರೊ

ಚಂಡ ಯಮನ ದೂತರು ಬಂದು ಎಳೆದು ಒಯ್ವರೊ ll 4 ll


ಮುಟ್ಟಿ ಭಜಿಸಿರೊ ಹಯವದನನಂಘ್ರಿಯ

ನೆಟ್ಟನೆ ಮುಕ್ತಿಮಾರ್ಗ ತೋರಿಕೊಡುವನೊ ll 5 ll 

***

- ಶ್ರೀವಾದಿರಾಜರು

ರಾಮಾಯಣದಲ್ಲಿ ಶ್ರೀರಾಮಚಂದ್ರ ಪರಂಧಾಮಕ್ಕೆ ತೆರಳುವ ಮುನ್ನ ಮುಕ್ತಿ ಯೋಗ್ಯರನ್ನು 'ಸಮಾಯಾತ ಸಮಾಯಾತ....' ಎಂದು ಕರೆದ.  ಅದರಂತೆ ಇಲ್ಲಿ ಶ್ರೀವಾದಿರಾಜರು 'ಬನ್ನಿರೊ - ಬನ್ನಿರೊ' ಎಂದು ಕರೆದಂತಿದೆ.  ನಶ್ವರವಾದ ಸುಖ ದುಃಖ ಮಿಶ್ರಿತವಾದ, ಹುಟ್ಟು ಸಾವುಗಳ ಪ್ರವಾಹದಲ್ಲಿ ಮುಳುಗಿಸುವ ಈ ಸಂಸಾರದಿಂದ ನಿತ್ಯ ಸುಖದ ತಾಣಕ್ಕೆ ಬನ್ನಿರಿ ಎಂದು ಕರೆದದ್ದು ಎಲ್ಲರಿಗೂ ನವಚೇತನವನ್ನು ತುಂಬಿಸಿದಂತಿದೆ.


ಇಲ್ಲಿ ರಾಜರು ಬಹು ಸುಂದರವಾಗಿ ಈ ಸಂಸಾರ ಜಂಜಾಟದ, ಸುಖಾಭಾಸಗಳ, ನೋವು ನಲಿವುಗಳ ಚಿತ್ರಣವನ್ನು ಕೊಡುವರು.  ಇದು ಎಲ್ಲರ ಅನುಭವವಾದರೂ ಸಂಸಾರದಲ್ಲಿ ಮುಳುಗಿದ್ದರಿಂದ ಇದರ ಪರಿವು ಆಗದಾಗಿದೆ.  ಪುರಂದರರು ಒಂದು ಕಡೆ ಸಂಸಾರವನ್ನು 'ಸುಳ್ಳು ಸಂಸಾರ ಸುಳಿಗೆ ಸಿಲುಕಬೇಡಿ' ಎಂದು ಎಚ್ಚರಿಸಿದರು.  


ಈ ಸಂಸಾರದ ಸುಳಿಯಿಂದ ಹೊರಬರಲು ರಾಜರು ಒಂದು ಉಪಾಯವನ್ನೂ ಹೇಳಿದರು.  'ಮುಟ್ಟಿ ಭಜಿಸಿರೊ ಹಯವದನಂಘ್ರಿಯ' l  ಏಕೆಂದರೆ ಅವನೇ ಅನಿಮಿತ್ತ ಬಂಧುವಾಗಿ ಮುಕ್ತಿಮಾರ್ಗವನ್ನು ತೋರಿಸಿ ಮುಕ್ತಿಯನ್ನು ಕೊಡುವವನಾಗಿದ್ದಾನೆ.  ವಿಜಯದಾಸರೂ ಅವರ ಕೃತಿಯಲ್ಲಿ 'ಸಂಸಾರಾಂಬುಧಿಗೆ ನಿನ್ನ ನಾಮವೆ ನಾವೆ' ಎಂದಿರುವರು.


ಜೀವನದುದ್ದಕ್ಕೂ ಏನು ಮಾಡಿದರೂ , ಎಂತು ಗಳಿಸಿದರೂ, ಏನೇ ಪ್ರಶಸ್ತಿಗಳ ಪಡೆದರೂ ಯಾವದೂ ಹಿಂದೆ ಬಾರವು.  ಚಂಡಯಮ ಎಳೆಯದೆ ಬಿಡನು.  'ಮೆಲ್ಲನೆ  ಮಾಧವನ ಮನವ ಮೆಚ್ಚಿಸಬೇಕು' ಎಂದಂತೆ ಅವನ ಒಲಿಮೆಗೆ ಒದ್ದಾಡುವದು ಅನಿವಾರ್ಯ. 

* * * 

ಹರಿದಾಸ ಹೃದಯ ಗ್ರಂಥದಿಂದ

No comments:

Post a Comment