Friday 27 December 2019

ಕರುಣಿಸೈ ಗುರುರಾಯ ಚರಣತೀರ್ಥವನು ankita varaha timmappa

by ನೆಕ್ಕರ ಕೃಷ್ಣದಾಸ
ರಾಗ ಮುಖಾರಿ ತ್ರಿವಿಡೆ ತಾಳ

ಕರುಣಿಸೈ ಗುರುರಾಯ ಚರಣತೀರ್ಥವನು
ಹರಣ ಭಯದೊಳು ಲಕುಮೀರಮಣನೊಲಿವಂದದಲಿ ||ಪ||

ದೇಶ ದೇಶವ ತಿರುಗಿ ಬೇಸರದು ಈ ಚರಣ
ಭೂಸುರವ ಪೂಜಿಸುವದು ಈ ದಿವ್ಯ ಚರಣ
ಕ್ಲೇಶವೆನಿಸದೆ ತೀರ್ಥದಾಸೆಯ ಬಿಡದ ಈ ಚರಣ
ಕಾಶಿ ರಾಮೇಶ್ವರಕೆ ನಡೆದ ಚರಣ ||೧||

ಹಾವಿಗೆಯನೊಲ್ಲದೆ ಹಾದಿ ನಡೆದ ಈ ಚರಣ
ದೇವಿ ಭಾಗೀರಥಿಗೆ ಇಳಿದ ಚರಣ
ಕಾವಿ ವಸ್ತ್ರವನುಟ್ಟ ಕಾಶಿವಾಸಿಯ ಚರಣ
ಕೋವಿದರು ವಂದಿಸುವ ದಿವ್ಯ ಚರಣ ||೨||

ಗಟ್ಟಿ ಬೆಟ್ಟವ ತಿರುಗಿ ಕಷ್ಟಬಟ್ಟಿಹ ಚರಣ
ಸೃಷ್ಟಿಗುತ್ತಮ ನದಿಯ ಮಿಂದ ಚರಣ
ಇಷ್ಟಗಳನೆಲ್ಲ ತಾ ಪಡೆದುಕೊಂಡಿಹ ಚರಣ
ಕೃಷ್ಣಮೂರ್ತಿಯ ಬಳಿಗೆ ಬಂದ ಚರಣ ||೩||

ಶುದ್ಧ ವೈಷ್ಣವರೆಲ್ಲ ಉಜ್ಜಿತೊಳೆವ ಚರಣ
ಬದ್ಧ ಮುಕ್ತರಿಗೆಲ್ಲ ಸಿದ್ಧಿಯಹ ಚರಣ
ಮಧ್ವರಾಯನ ಮತದಿ ಎದ್ದು ತಿರುಗುವ ಚರಣ
ವಿದ್ಯೆ ನಿಧಿ ಗುರುರಾಯ ಬಾಳ್ದ ಚರಣ ||೪||

ಧರಣಿಯನು ಬಲವಂದು ದಣಿದು ಬಂದಿಹ ಚರಣ
ಉರುತರದ ಕೈವಲ್ಯ ಪಡೆದ ಚರಣ
ವರಾಹ ತಿಮ್ಮಪ್ಪನಿಹ ಗಿರಿಯನೇರಿದ ಚರಣ
ಸ್ಥಿರವಾಗಿ ಉಡುಪಿಯೊಳು ನಿಂದ ಚರಣ ||೫||
*******

No comments:

Post a Comment