Friday 27 December 2019

ಸ್ವಾಮಿ ವೇಂಕಟರಮಣ ಭೂಮಿಪಾಲಕ ದೇವ ankita varaha timmappa

by ನೆಕ್ಕರ ಕೃಷ್ಣದಾಸರು
ಶಂಕರಾಭರಣ ರಾಗ ಆದಿತಾಳ

ಸ್ವಾಮಿ ವೇಂಕಟರಮಣ ಭೂಮಿಪಾಲಕ ದೇವ
ಕಾಮಿತಾರ್ಥವನೀವ ಕರುಣ ಸಂಜೀವ ||ಪ||

ಸುರರು ಅಸುರರೆಲ್ಲ ಶರಧಿಯ ಮಥಿಸಲು
ಸಿರಿಯು ಜನಿಸಿ ಬಂದು ಹರಿಯ ಸೇರಿದಳು ||೧||

ಪತಿ ನೀನೆ ಗತಿಯೆಂದು ಸತಿ ಕುಸುಮಮಾಲೆಯನು
ಅತಿ ಹರುಷದಿ ಜಗತ್ಪತಿಗೆ ಇಕ್ಕಿದಳು ||೨||

ವಾರಿಧಿಯಾಕ್ಷಣ ಧಾರೆಯನೆರೆಯಲು
ವಾರಿಜಾಂಬಕಲಕ್ಷ್ಮಿ ಒಡನೆ ನಿಂದಿರಲು ||೩||

ಫಣ್ಫಿಹ್ತ್ರಸೆಮೆಣೆಯೊಳು ರಮಣಿಯನೊಡಗೊಂಡು
ಗುಣನಿಧಿಯ ಒಪ್ಪಿರಲು ತರುಣಿಯರೆಲ್ಲ ||೪||

ಪಚ್ಚವ ಧರಿಸಿ ನವ ಸ್ವಚ್ಛವಾಗಿಯೆ ತುಳಿದು
ಅಚ್ಯುತ ಮಹಾಲಕ್ಷ್ಮಿಗ್ಹಚ್ಚಬೇಕೆನುತ ||೫||

ಸಣ್ಣ ಮಲ್ಲಿಗೆ ಎಣ್ಣೆ ಬಣ್ಣವಾದರಿಸಿನವ
ಪುಣ್ಯವಂತೆಗೆ ಕೈಗರ್ಣವ ಕೊದಲು ||೬||

ಮೊದಲು ಪಾದವ ತೊಳೆದು ಜಲವನ್ನು ಸಿರಿ ತನ್ನ
ತಲೆಗೆ ಪ್ರೋಕ್ಷಿಸಿಕೊಳಲು ಹರಿಯು ಮೆಚ್ಚಿದನು ||೭||

ಗಟ್ಟಿಯಾದರಿಸಿನವ ಬಟ್ಟಲೆಣ್ಣೆಯಗೂಡಿ
ಮುಟ್ಟಲಂಜಿಯೆ ನಿಲಲು ಸೃಷ್ಟಿಪಾಲಕನ ||೮||

ಅಂಗೈಯ ಅರಿಸಿಣವ ಮುಂಗೈಗೆ ಒರೆಸುತ್ತ
ರಂಗನ ಸಿರಿಮೊಗವ ಕಂಗಳಿಂದೀಕ್ಷಿಸುತ ||೯||

ಅಭಯ ಹಸ್ತವನಿತ್ತ ತ್ರಿಭುವನದೊಡೆಯನು
ಅಬುಜಲೋಚನೆ ಮುಖಾಂಬುಜಕೆ ತಿಮುರಿದಳು ||೧೦||

ಅತಿಹರುಷವ ತಾಳಿ ಸತಿ ಕೈಯ ಅರಿಷಿಣವ
ಪತಿ ಆದಿಕೇಶವನ ನುತಿಸಿ ಊರಿದಳು ||೧೧||

ಸಿರಿಯನೆತ್ತಿದ ಕೈಯ ಹರಿ ತಾನು ತೋರಿಸಲು
ಸಿರಿ ನಾರಾಯಣ ಎಂದು ಅರಿಷಿಣವ ತಿಮುರೆ ||೧೨||

ಶಂಖವ ಧರಿಸಿದ ಪಂಕಜಾಕ್ಷನೆ ವಿಷ್ಣು
ವೇಂಕಟೇಶನ ಕರಪಂಕಜಕೆ ತಿಮುರೆ ||೧೩||

ಕದನದೊಳ್ ಖಳರನು ಸದೆದು ಮರ್ದಿಸಿ ಗೆಲಿದು
ಮಧುಸೂಧನ ಶ್ರೀ ವತ್ಸದೆದೆಯ ತೋರೆನುತ ||೧೪||

ಚಕ್ರವ ಪಿಡಿದು ಪರಾಕ್ರಮಿಯೆನಿಸಿಯೇ
ಅಕ್ರೂರಗೊಲಿದ ತ್ರಿವಿಕ್ರಮಗೆ ತಿಮುರೆ ||೧೫||

ವಾಮನನಾಗೆ ಶ್ರಮವನು ಪಟ್ಟೆ(ಎ)ನುತ
ಭೂಮಿಯ ಅಳೆದ ಪಾದವಿತ್ತನು ತಾರೆನುತ ||೧೬||

ಕಾದಲನು ಕಾಣುತ್ತ ಪಾದವನಿತ್ತನು
ಶ್ರೀಧರನೆನುತಲಿ ಅರಸಿನವ ತಿಮುರೆ ||೧೭||

ವಾಮಪಾದವ ಕಂಡು ಭಾಮಿನಿ ತಾರೆನಲು
ಸೋಮಸನ್ನಿಭ ಹೃಷಿಕೇಶ ತಾನಿತ್ತ ||೧೮||

ಪದ್ಮ ಬಾಂಧವ ತೇಜ ಸಂಭವ ಪೂಜ
ಪದ್ಮನಾಭಗೆ ಪದ್ಮಗಂಧಿ ತಾ ತಿಮುರೆ ||೧೯||

ಆ ಮಹಾನಾಮದ ದಾಮೋದರನ ಕಂಡು
ಭಾವೆ ಲಕ್ಷುಮಿ ವೀಳ್ಯವ ಕೊಡಲು ||೨೦||

ವಾಸುದೇವನು ತನ್ನ ಅರಸಿ ಮಾಲಕ್ಷ್ಮಿಗೆ
ಪೂಸಿದನರಿಸಿನವ ಎಣ್ಣೆಯ ಮೊಗಕೆ ||೨೧||

ಪಂಕಜಾಕ್ಷನ ಕಂಡು ಕಂಕಣದ ಹಸ್ತವ ನೋಡಿ
ಕುಂಕುಮದೆಣ್ಣೆಯ ಸಂಕರ್ಷಣ ತಿಮುರೆ||೨೨||

ಬುದ್ಧಿವಂತೆಯ ಎಡದ ಮುದ್ದು ಹಸ್ತವ ನೋಡಿ
ಉದ್ಧರಿಸಿ ನವ ಪ್ರದ್ಯುಮ್ನ ನಗುತ ||೨೩||

ಮುನಿಜನ ವಂದ್ಯನು ಅನಿರುದ್ಧ ನಗುತಲೆ
ಘನಕುಚಮಂಡಲಕೆ ಅರಿಸಿನವ ತಿಮುರೆ ||೨೪||

ಪುರುಷರೊಳು ಉತ್ತಮನು ಹರುಷವನು ತಾಳಿಯೆ
ಅರಸಿ ಮಹಾಲಕ್ಷುಮಿಗೆ ಅರಿಸಿನವ ತಿಮುರೆ ||೨೫||

ಅಧೋಕ್ಷಜನು ತನ್ನ ತುದಿವೆರಳ ಅರಿಸಿನವ
ಪದುಮನೇತ್ರೆಯ ಪದದೊಳಗೆ ಮಿಡಿದಿರ್ದ ||೨೬||

ನಾರಸಿಂಹನು ಸತಿಯ ಮೋರೆಯಿಂದಾರಭ್ಯ
ಓರಣವಾಗಿಯೆ ಅರಿಸಿನವ ತಿಮುರೆ ||೨೭||

ನೆಚ್ಚಿಯೆ ಹರಿ ತಾನು ಅಚ್ಚಕರ್ಪುರದೆಲೆಯ
ಆಶ್ಚರ್ಯವಾಗಿಯೆ ಅಚ್ಯುತ ಕೊಡಲು ||೨೮||

ಮನದಿ ಲಜ್ಜಿತೆಯಾಗಿ ಘನಮಹಿಮ ಮುನಿವಂದ್ಯ
ತನಗೆ ವಲ್ಲಭ ನಿಜನಾದನೆನುತ ||೨೯||

ಆ ಪರಮಹಿಮನು ರೂಪಸಂಪನ್ನ ದ-
ಯಾಪರನಾಗಿಯೆ ಉಪೇಂದ್ರ ತಾನೊಲಿದು ||೩೦||

ಹರ ಎಂಬ ನಾಮದಿ ಹರದಿ ಮಾಲಕ್ಷ್ಮಿಯ
ವರಿಸಿದ ಶ್ರೀಹರಿಯು ಹರದಿಯರ್ಪೊಗಳೆ ||೩೧||

ಬೆಟ್ಟದೊಡೆಯನೆನಿಸಿ ದೃಷ್ಟಿಗೋಚರವಾದ
ಶ್ರೀಕೃಷ್ಣ ಮಾಲಕ್ಷುಮಿಗೆ ಆರತಿಯ ತಿಮುರೆ ||೩೨||

ವರಮಹಾಲಕ್ಷುಮಿಗೆ ವರಾಹ ತಿಮ್ಮಪ್ಪಗೆ
ಅರಸಿನದೆಣ್ಣೆಯ ರಚಿಸಿದ ಪರಿಯು ||೩೩||
******



No comments:

Post a Comment