Friday 27 December 2019

ನಿನಗೇನು ಘನವೇನು ವನಜಾಕ್ಷ ವೇಂಕಟೇಶ ankita varaha timmappa

by ನೆಕ್ಕರ ಕೃಷ್ಣದಾಸ
ಸಾರಂಗ ರಾಗ , ಆದಿತಾಳ

ನಿನಗೇನು ಘನವೇನು ವನಜಾಕ್ಷ ವೇಂಕಟೇಶ
ಮನಕೆ ಬೇಕಾದುದ ಇತ್ತು ರಕ್ಷಿಸುವರೆ ||ಪ||

ದೇಶ ನಿನ್ನದು ಬಹುಕೋಶ ನಿನ್ನದು ಜಗ-
ದೀಶ ನಿನ್ನನು ಭಾಗ್ಯ ಲಕುಮಿ ಸೇವಿಸುವಳು
ಆಸೆಯಿಂದಲಿ ನಿನ್ನ ಚರಣವ ಮೊರೆಹೊಕ್ಕೆ
ದೋಷವ ಕಳೆದು ಎನ್ನ ಲೇಸಿತ್ತು ಸಲಹಯ್ಯ ||೧||

ಅಣುವಾಗಲೂ ಬಲ್ಲೆ ಮಹತ್ತಾಗಲೂ ಬಲ್ಲೆ
ಅಣುಮಹತ್ತಿನೊಳಗೆ ಗುಣವ ತೋರಲೂ ಬಲ್ಲೆ
ಕ್ಷಣಕೆ ಮುನಿಯಬಲ್ಲೆ ಆ ಕ್ಷಣಕೆ ರಕ್ಷಿಸಬಲ್ಲೆ
ಗುಣಗಳವಂಗುಣವ ನೋಡದೆ ಸಲಹಯ್ಯ್ ||೨||

ಹುಟ್ಟಿದೆ ನರಜನ್ಮದಿ ಬಹಳ ಬಳಲಿಯೆ ಕಷ್ಟ-
ಬಟ್ಟೆನು ಕೈಯ ಮುಟ್ಟಿ ರಕ್ಷಿಪರಿಲ್ಲ
ಬೆಟ್ಟದೊಡೆಯ ಮನದಭೀಷ್ಟವೆಲ್ಲವನಿತ್ತು
ದೃಷ್ಟಿಯಿಂದಲೆ ನೋಡಿ ಒಟ್ಟೈಸಿ ಸಲಹಯ್ಯ ||೩||

ತಂದೆತಾಯಿಗಳಿಲ್ಲ ಬಂಧುಬಾಂಧವರಿಲ್ಲ
ಕುಂದು ಹೆಚ್ಚಿಯೆ ನಿರ್ಬಂಧಬಡಿಸುತಿದೆ
ಮಂದರಾದ್ರಿಯ ಗೋವಿಂದ ನಿನ್ನಯ ಪಾದ-
ದ್ವಂದವ ತೋರಿಸಿ ಚಂದದಿ ಸಲಹಯ್ಯ ||೪||

ಮನದ ಸಂಕಲ್ಪಕೆ ಅನುಗುಣವಾಗಿಯೆ
ಘನವಿತ್ತು ಕರೆದೊಯ್ದು ವಿನಯದಿ ಮನ್ನಿಸಿ
ಮನೆಗೆ ಕಳುಹು ನಮ್ಮ ವರಾಹತಿಮ್ಮಪ್ಪನೆ
ತನುಮನದೊಳಗನು ದಿನದಿನ ಸಲಹಯ್ಯ ||೫||
********

No comments:

Post a Comment