Friday 27 August 2021

ಎಲೆ ಎಲೆ ಶಿಡಿಲು purandara vittala ankita suladi ಕೃಷ್ಣ ಬಾಲಲೀಲಾ ಸುಳಾದಿ ELE ELE SHIDILU KRISHNA BALALEELA SULADI


 Audio by Vidwan Sumukh Moudgalya


.ಶ್ರೀ ಪುರಂದರದಾಸಾರ್ಯ ವಿರಚಿತ 


 ಶ್ರೀಕೃಷ್ಣ ಬಾಲಲೀಲಾ ಸುಳಾದಿ - ೧ 


 ರಾಗ : ಬೃಂದಾವನಸಾರಂಗ 


 ಧೃವತಾಳ 


ಎಲೆ ಎಲೆ ಶಿಡಿಲು ಮಿಂಚೆ ಗರ್ಜಿಸದಿರಿ ನೀವು

ಎಲೆ ಎಲೆ ಮೇಘರಾಜ ಮಳಿಗರಿಯದಿರು

ಎಲೆ ಎಲೆ ಭೂದೇವಿ ನವರತುನಗಳಿಂದ

ನೆಲೆ ಕಟ್ಟಿ ಕಟ್ಟಿಕೊಂಡು ಥಳಿ ಥಳಿಸುತಲಿರು

ಹುಲಿ ಉಗುರು ಅರಳೆಲೆ ಮಾಗಾಯಿ ಕಂಕಣ

ಘಲು ಘಲು ಘಲುಕೆಂಬೊ ಕಾಲ ಪೆಂಡಿಯನಿಟ್ಟು

ಬಲರಾಮ ಪುರಂದರವಿಠ್ಠಲ ಗೋಪಾಲಕೃಷ್ಣ

ನೆಲವು ತುಂಬೆಗಾಲನಿಕ್ಕುತ ಬರುತಾರೆ

ಎಲೆ ಎಲೆ ಮೇಘರಾಜ ಮಳೆಗರಿಯದಿರು ॥೧॥


 ಮಟ್ಟತಾಳ 


ಬೆಣ್ಣೆ ಬಚ್ಚಲ ತೊಡಿಯಾ ಮೇಲಿಟ್ಟು

ಕೊಂಡು ಅಣ್ಣ ಬಲರಾಮನ ಕೂಡಿಕೊಂಡು

ಚನ್ನಾಗಿ ಡೊಗ್ಗಾಲೂರಿ ಮೆಲುವ ಕೃಷ್ಣ

ಲಿನ್ನಿಕ್ಕುತ ಬರುತಾನೆ ಅಣ್ಣನ ಒಡಗೂಡಿ ಹಸುಮಗನಂದದಲಿ

ನಿನ್ನ ಮಗನೆ ಇವನು ಕೇಳೆಲೆ ಗೋಪಿದೇವಿ

ಸಣ್ಣವನಿವನೇನೆ ಕಣ್ಣು ಬಿಡುವನೆ ಪುರಂದರವಿಠ್ಠಲ 

ನಿನ್ನ ಮಗನೆ ಇವನು ಕೇಳೆ ಗೋಪಿದೇವಿ ॥೨॥


 ತ್ರಿವಿಡಿತಾಳ 


ಇದೆ ಇದೇ ಕೈ ಬೆಣ್ಣೆ ಇದೆ ಅಂಗಾಲಿಸಿಕಿತು

ಇದೆ ಇದೇ ಕಟಬಾಯಿ ಯಿಕ್ಕಿಸುರವ ಬೆಣ್ಣೆ

ಇದೆ ಇದೇ ಗೋಪಿದೇವಿ ನಿನ್ನ ಮಗನು ಕಳ್ಳನು

ಇದೆ ಇದೇ ಹಿಡಿದು ತಂದಿವೆ ನೋಡೆ ನೋಡೆ

ಹದುಳದಿಂದಿಡೆ ಲೇಸು ಇಲ್ಲದಿದ್ದರೆ ನಿನ್ನ

ತದುವೆ ತದುವೆನಯ್ಯಾ ಪುರಂದರವಿಠ್ಠಲ 

ಹದುಳು ಇದ್ದರೆ ಲೇಸು ॥೩॥


 ಆದಿತಾಳ 


ನೀಲಮೇಘಶ್ಯಾಮ ಕೋಮಲನೇ

ಹಾಲು ಕುಡಿಯ ಬಾರೋ ಹಸಿದ್ಯೋ ರಂಗಯ್ಯಾ

ಹಾಲು ಮೊಸರು ಬೆಣ್ಣೆ ಹಾವಳಿಗಾರೇನೋ ಶ್ರೀ-

ಲೋಲ ಪುರಂದರವಿಠ್ಠಲ ಗೋಪಾಲಕೃಷ್ಣ

ನೀಲಮೇಘಶ್ಯಾಮ ಕೋಮಲನೆ ॥೪॥


 ಅಟ್ಟತಾಳ 


ಮಲ್ಲಿಗೆ ಮಗ್ಗಿಗಳಂತೆ ಹಲ್ಲು ಬಂದಿದೆ ರಂಗಯ್ಯಾಗೆ

ಹಲ್ಲು ಬಂದಿದೆ ಕೃಷ್ಣಯ್ಯಗೆ

ಎಲ್ಯೊ ಎಲ್ಯೊ ಬಾಯಿದೆರಿಯನೆ

ಎಲ್ಲ ಬೊಮ್ಮಾಂಡಗಳನೇ ತೋರಿದಾ

ಎಲ್ಲರಂತ ಕಂದನಲ್ಲಿವ

ಬಲ್ಲವರಿಗೆ ಪುರಂದರವಿಠ್ಠಲನು 

ಹಲ್ಲು ಬಂದಿವೆ ರಂಗಯ್ಯಗೆ ॥೫॥


 ಜತೆ 


ಅನವರತ ಭಕುತಿಯಲಿ ನಿನ್ನ ಬಾಲಲೀಲೆ

ನೆನೆವಂತೆ ಮಾಡೋ ಶ್ರೀಪುರಂದರವಿಠ್ಠಲ ॥೬॥

***



No comments:

Post a Comment