Sunday 1 August 2021

ತಂದೆ ಮುದ್ದುಮೋಹನ ದಾಸರಾಯರ ಪದವ ankita gopalakrishna vittala tandemuddumohana dasa stutih

ತಂದೆ ಮುದ್ದುಮೋಹನ ದಾಸರಾಯರ ಪದವ

ಪೊಂದಿದವರಿಗೆ ಕಷ್ಟವೆ ಪ.


ಬಂಧನವ ಪರಿಹರಿಸಿ ಸಿಂಧುಶಯನನ ಮೂರ್ತಿ

ತಂದು ತೋರುವರು ಮನದಿ | ಮುದದಿ ಅ.ಪ.


ಅತಿಶಯದ ತಪದಿಂದ ಪತಿತ ಪಾವನನಂಘ್ರಿ

ಮತಿವಂತರಾಗಿ ಭಜಿಸಿ

ಪೃಥುವಿಯೊಳಗವತರಿಸಿ ಯತನವಿಲ್ಲದೆ ಕರ್ಮ

ಪಥವನ್ನೆ ಕೊನೆಗಾಣಿಸಿ

ಪತಿತರಿಗೆ ಅಂಕಿತವ ಹಿತದಿಂದ ಬೋಧಿಸಿ

ಅತಿ ಅದ್ಭುತವ ತೋರಿಸಿ

ಸುತರಂತೆ ಶಿಷ್ಯರನು ಹಿತದಿಂದನುಗ್ರಹಿಸಿ

ಗತಿಯ ಮಾರ್ಗವ ತೋರ್ವರು | ಇವರು 1

ದೇವತೆಗಳೊಡೆಯರು ಪಾವಮಾನಿಗೆ ಪ್ರಿಯರು

ಭೂವಲಯದೊಳು ಮೆರೆವರು

ಆವಕಾಲದಲಿ ಸುಖಾನಂದಭೋಗಿಗಳು

ಪಾವನ ಸುಚರಿತ್ರರು

ದೇವ ನರಹರಿ ಕರುಣ ಪೂರ್ಣವಾಗಿ ಪಡೆದು

ಭಾವಶುದ್ಧಿಯಲಿಪ್ಪರು

ಈ ವಿಧದ ಇವರ ಚರ್ಯೆಯನರಿಯುವರನರಿಯೆ

ಕಾವ ಭಕ್ತರ ಕರುಣಿಯ | ದೊರೆಯ 2

`ತ' ಎನಲು ತಪಸಿಯಹ `ದೇ' ಎನಲು ದೇಹ ಶುದ್ಧಿ

`ಮು' ಎನಲು ಮುಕ್ತನಾಗ್ವ

`ದು' ಎನ್ನಲು ದುರ್ಜನರು ದೂರವಾಗಿರುತಿಹರು

`ಮೋ' ಎನಲು ಮೋಕ್ಷದಾರಿ

`ಹ' ಎನಲು ಹರಿಬಂದು `ನ' ಎನಲು ನರ್ತಿಸುವ

`ದಾ' ಎನಲು ದಾರಿದ್ರನಾಶ

`ಸ' ಎನಲು ಸತ್ವಗುಣಿ `ರಾಯ' ಎನೆ ಪದವಾಳ್ವ

`ರು' ಎನಲು ಋಜುಮಾರ್ಗಿಯು | ಸುಖಿಯು 3

ಈ ರೀತಿಯಿಂ ತಂದೆ ಮುದ್ದುಮೋಹನದಾಸ ರಾ -

ಯರೆಂತೆಂದು ಜಪಿಸೆ

ಪಾರುಗಾಣಿಸಿ ಭವದ ಬಂಧನವ ಬಿಡಿಸುವರು

ದೇವಾಂಶ ಸಂಭೂತರು

ಕಾರುಣ್ಯ ನಿಧಿಗಳು ತೋರುವರು ಹರಿಮಾರ್ಗ

ಸಾರಿ ಭಜಿಪರಿಗೆ ಸತತ

ನಾರಸಿಂಹನ ಚರಣ ಸೇರಿಸಿ ಹೃದಯದಲಿ

ಸೂರೆಗೊಂಡಿಹರು ಮುಕ್ತಿ | ಸುಕೀರ್ತಿ 4

ಅಪಾರ ಅದ್ಭುತದ ಕರ್ಮಗಳ ನಡೆಸಿಹರು

ಪಾಪಿ ಜನಗಳ ಪೊರೆವರು

ರೂಪ ರೂಪಾಂತರದಿ ತೋರ್ಪರು ಸುಜನರಿಗೆ

ಶ್ರೀಪತಿಯ ವರ ಭಕ್ತರು

ಕೋಪತಾಪಗಳಿಂದ ನಿರ್ಲೇಪರಾಗಿಹರು

ತಾಪತ್ರಯಗಳ ಕಡಿವರು

ಗೋಪಾಲಕೃಷ್ಣವಿಠ್ಠಲನ ಪದಧ್ಯಾನವನು

ಗೋಪ್ಯದಿಂದಲಿ ಇತ್ತರು | ಇವರು5

****


No comments:

Post a Comment