Sunday 1 August 2021

ಎಷ್ಟು ಕೂಗಲು ದಯ ಪುಟ್ಟಲಿಲ್ಲವೊ ನಿನಗೆ ಬೆಟ್ಟದೊಡೆಯ ಹರಿಯೆ ankita gopalakrishna vittala

ಎಷ್ಟು ಕೂಗಲು ದಯ | ಪುಟ್ಟಲಿಲ್ಲವೊ ನಿನಗೆ

ಬೆಟ್ಟದೊಡೆಯ ಹರಿಯೆ ಪ.


ಸಿಟ್ಟೇಕೆ ಎನ್ನೊಳು ಕೃಷ್ಣಮೂರುತಿ ನಿನಗೆ

ಬಿಟ್ಟರೆ ನೀ ಎನ್ನ ಸೃಷ್ಟಿಯೊಳಾರುಂಟೊ ಅ.ಪ.


ಪರಮ ಪಾತಕಿಯೆಂದು | ತೊರೆದರೆ ನೀ ಎನ್ನ

ಮೊರೆಬೀಳಲಿನ್ನಾರಿಗೆ

ಕರೆಕರೆಗೊಳಿಪುದು ತರವಲ್ಲ ಕೇಳಿನ್ನು

ಕರುಣಾಮೂರುತಿ ಎಂಬೊ ಬಿರುದು ಪೊತ್ತಿಲ್ಲವೆ

ಸರಿಯೆ ನಿನಗಿದು ಕೊರಗಿಸುವುದು

ಜರಿದು ಬಳಲುವೆ ಧರೆಯೊಳೀಗ ನಾ

ಸುರರ ರಕ್ಷಕ ಪರಮಪಾವನ

ಕರವ ಮುಗಿವೆ ದರುಶನವ ನೀಡೊ 1

ನೀನಲ್ಲದೆ ಇನ್ನು | ನಾನಾರ ಭಜಿಸಲೊ

ಗಾನವಿಲೋಲ ಹರಿ

ಕಾನನದೊಳು ಕಣ್ಣು ಕಾಣದಂತಾಗಿದೆ

ಧ್ಯಾನಕೆ ಸಿಲುಕದೆ ನೀನೆನ್ನ ಕಾಡುವೆ

ಮಾನ ಪ್ರಾಣ ಶರೀರ ನಿನ್ನದೊ

ನಾನು ಅನ್ಯರ ಭಜಿಸಲಾರೆನೊ

ಹೀನಬುದ್ಧಿಯ ಬಿಡಿಸಿ ಗುರುಗಳ

ಧ್ಯಾನವೆನಗಿತ್ತು ನೀನು ಕಾಯೊ 2

ಅನ್ನಪಾನವ ಬಿಟ್ಟು | ನಿನ್ನನು ಸ್ತುತಿಸಲು

ಇನ್ನು ಕರುಣವಿಲ್ಲವೆ

ಇನ್ನು ಸೈರಿಸಲಾರೆ ಘನ್ನ ಮಹಿಮನೆ ದುಃಖ

ನಿನ್ನ ಮನಸು ಕರಗಲಿನ್ನೇನಗೈಯ್ಯಲೊ

ಎನ್ನ ಯತ್ನವು ವ್ಯರ್ಥವಾಯಿತು

ಇನ್ನು ನೀ ದಯೆಗೆಯ್ಯಬೇಕೊ

ಮುನ್ನ ಮಾಡಿದ ತಪ್ಪನೆಣಿಸದೆ

ಎನ್ನ ದೃಷ್ಟಿಗೆ ನಿನ್ನ ತೋರೊ 3

ಸುತನ ಮೊರೆಯನೆ ಕೇಳಿ | ಹಿತದಿ ವೇದವನಿತ್ತೆ

ಮಥಿಸಿ ಶರಧಿ ಅಮೃತ ಸುರರಿಗಿತ್ತೆ

ಕ್ಷಿತಿಯ ಬಾಧೆಯ ಬಿಡಿಸಿ ಸುತನ ಬಾಧಿಸೊವೊನ

ಹತಮಾಡಿ ಇಂದ್ರಗೆ ಗತಿಸಿದ ಪದವಿತ್ತೆ

ಕ್ಷಿತಿಯನಾಳ್ವರ ಹತವಗೈಸಿದೆ

ಕ್ಷಿತಿಸುತೆಯ ಪ್ರೇಮದಲಿ ತಂದೆ

ಹಿತದಿ ಪಾಂಡವ ಸುತರ ಕಾಯ್ದೆ

ವ್ರತವ ಕೆಡಿಸಿ ಕಲಿಹತವಗೈದೆ 4

ಇಂತು ಎಲ್ಲರ ಕಾಯ್ದ | ಕಂತು ಜನಕನೆ ನಿನಗೆ

ನ್ನಂತರ ತಿಳಿಯದೇನೋ

ಸಂತತ ಗೋಪಾಲಕೃಷ್ಣವಿಠ್ಠಲ ನಿನ್ನ

ಶಾಂತರೂಪವ ಎನ್ನ ಅಂತರಂಗದಿ ತೋರೊ

ಚಿಂತಿತಾರ್ಥ ಪಂಥಗಾರನೆ

ಎಂತು ದಿನಗಳು ಸಂದು ಹೋದುವೊ

ಇಂತು ನಿರ್ದಯವೇಕೊ ಇನ್ನು

ಸಂತತಾನಂದನಂತಶಯನ 5

****


No comments:

Post a Comment