Thursday 2 December 2021

ರಕ್ಷಿಸೆ ಏಕನಾಥೆ ತಾಯೆ ದಯದಿಂದ ಎನ್ನನು ankita helavana katte RAKSHISE EKANAATHAE TAAYE DAYADINDA ENNANU


 

ರಕ್ಷಿಸೆ ಏಕನಾಥೆ ತಾಯೆ ದಯದಿಂದ ಎನ್ನನು

ಸೊಕ್ಕಿದ ದೈತ್ಯ ಸಂಹಾರೆ ಶರಣ ಜನೋದ್ಧಾರೆ ಪ.

ಶ್ರೀ ಶರ್ವಾಣಿ ಶಂಕರಿ ದುರಿತ ದುಃಖ ನಿವಾರಿ
ಶರಣರ ಸಲಹುವ ದಾತೆ ಖಳರೆದೆಗಂತೆ ನಿಡಿ
ಗುರುಳ ಬಾಲೆ ಪಲ್ಲವಪಾಣಿ
ಸುರರ ನಾಯಕಿ ಅಖಿಲದೇವಮಾತೆ ವಿಖ್ಯಾತೆ 1

ಅಳುವಾಡುವ ರಂಗನ ಅದೇನರಿತು ಭಂಗ
ಬಾಳ ಬಡಿಸಿದೆಯವ್ವ ಭಕ್ತರುದ್ಧಾರಿ
ಕಾಳಗದೊಳು ಕಂಠೀರವೆ ಕರೆದಭಯವನೀವೆ
ಪೇಳಲೆನ್ನಳವೆ ಸುಕೃತ ಪಂಥಗಾರ್ತಿ 2

ಹಿಂಡು ಭೂತಂಗಳಿಗೆಲ್ಲ ಹೆಚ್ಚಿನ ಬಿರುದನೆ ತಾಳ್ದೆ
ಚಂಡಿ ಚಾಮುಂಡಿ ತ್ರೈಲೋಕ್ಯನಾಥೇ
ಅಂಡಪವಿತ್ರೆ ಶುಭಗಾತ್ರೆ ನಂಬಿದ ಭಕ್ತರ ಸಂಪ್ರೀತೆ
ಕಂಡು ನಮಿಸುವರ ಕಾಯ್ವೆ ಕಾಮಿತದಾತೆ 3

ಇಂದ್ರಾದಿ ದಿಕ್ಪಾಲಕರು ವಂದಿಸಿ ಸ್ತುತಿಮಾಡಲವರ
ಬಂಧನವ ಪರಿಹರಿಸಿದೆಯೆ ಚಂದ್ರಮುಖಿಯೆ
ಇಂದು ಬಂದ ಬಂಧನವ ಬಿಡಿಸಿ
ಎಂದೂ ಎನ್ನ ನೀ ಕಾಯೆ ತಾಯೆ 4

ಮಲೆತ ಮಹಿಷಾಸುರನ ಕೊಂದೆ ಮಲೆಬೆನ್ನೂರಿನಲಿ ನಿಂದೆ
ಬಲುನೇಮವಂತೆ ಸಂತೆಹರವಿಲೆ ನಿಂತೆ
ಪುಲ್ಲಲೋಚನೆ ಪ್ರಖ್ಯಾತೆ ಪರಶುರಾಮನ ಮಾತೆ
ಹೆಳವನಕಟ್ಟೆ ರಂಗನ ಸಹೋದರಿ5
****

No comments:

Post a Comment