Friday 27 December 2019

ಸ್ವಾಮಿ ರಕ್ಷಿಸೋ ಶ್ರೀನಿವಾಸ others

ರಾಗ : ಯರಕಲ ಕಾಂಬೋಧಿ ತ್ರಿವಿಡೆ ತಾಳ

ಸ್ವಾಮಿ ರಕ್ಷಿಸೋ ಶ್ರೀನಿವಾಸ
ಕಾಮಿತಾರ್ಥವನೀವ ಕಾಕೋದರಾದ್ರೀಶ ||ಪ||

ನಾನಾ ಜನ್ಮದಿ ಬಂದು ನಾನಾವ್ಯಾಧಿಗಳಿಂದ
ದೀನನಾದೆನೊ ದೊರೆಯೇ ನಿನ್ನ ನಂಬದಲೆ
ಮುನ್ನ್ಯಾರು ಗತಿ ಎನಗೆ ಮನ್ನಿಸೈ ನೀ ಬೇಗ
ಸನ್ನಾಹವೇಕಯ್ಯ ಸಣ್ಣವನ ಪೊರೆಯಲು ||೧||

ತಂದೆತಾಯಿಯು ನೀನೆ ಬಂಧುಬಳಗವು ನೀನೆ
ಕಂದನು ಕಾಂತೆಯು ನೀನೆನಗೆ ಹರಿಯೇ
ಅಂದಗಳು ಚಂದಗಳು ಮಂದಿರವು ಮಾಣಿಕವು
ಸಂದೇಹವೇನಯ್ಯ ಸರ್ವವೂ ನೀ ಎನಗೆ ||೨||

ಅಂದು ದ್ರೌಪತಿಯು ಮತ್ತಂದು ದಂತಾವಳನು
ಕಂದ ಪ್ರಹ್ಲಾದನು ಅಂದು ತಾ ಧ್ರುವನು
ಚಂದದೊಳು ನಿನ್ನನ್ನು ಮಂದಮತಿಯನು ಬಿಟ್ಟು
ಪೊಂದಿ ಆನಂದವ ಪಡೆಯಲಿಲ್ಲವೆ ದೇವಾ ||೩||

ಕೊಬ್ಬಿನಾ ಕಣ್ಣು ಕಾಣದೆ ನಿನ್ನ ಮರೆತೆನಯ್ಯ
ಅಬ್ಬರಿಸುತಲಿರ್ಪ ಎನ್ನ ಪಾಪಗಳೀಗ
ಹೆಬ್ಬುಲಿಯಂತಿರ್ಪ ಈ ವಿಷಯಾಸೆ ಕೊಲ್ಲುವುದು
ಗುಬ್ಬಿಗೆ ಬೊಮ್ಮಾಸ್ತ್ರ ತೊಡದೆ ಎನ್ನ ಸಲಹಯ್ಯ ||೪||

ವೈಕುಂಠಪಟ್ಟಣವೆಂಬ ಆ ದಿವ್ಯಾಲಯದೊಳಗೆ
ಸಾಕಾರದಿಂದಲಿ ರಂಜಿಸುವ ನರಹರಿಯೆ
ಏಕಾಂತ ಭಕ್ತನಾದೆನೊ ನಿನ್ನ ಪಾದಕ್ಕೆ
ಸಾಕಲಾರದೆ ಬಿಟ್ಟರೆ ಆರು ಮೆಚ್ಚುವರಯ್ಯ ||೫||
*******

No comments:

Post a Comment